ಪ್ರಧಾನ ಮಂತ್ರಿಯವರ ಕಛೇರಿ

ʻವಿಶ್ವ ಯುವ ಕೌಶಲ್ಯ ದಿನಾಚರಣೆʼ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ


ಹೊಸ ಪೀಳಿಗೆಯ ಕೌಶಲ್ಯ ಅಭಿವೃದ್ಧಿಯು ಇಂದಿನ ರಾಷ್ಟ್ರೀಯ ಅಗತ್ಯವಾಗಿದೆ ಮತ್ತು ಅದು ಆತ್ಮನಿರ್ಭರ ಭಾರತದ ಅಡಿಪಾಯವೂ ಹೌದು: ಪ್ರಧಾನ ಮಂತ್ರಿ

ಕೌಶಲ್ಯಗಳ ಆಚರಣೆಯು ನಮ್ಮ ಸಂಸ್ಕೃತಿಯ ಭಾಗವಾಗಿದೆ: ಪ್ರಧಾನಿ

ಸಮಾಜದಲ್ಲಿ ಕುಶಲ ಕಾರ್ಮಿಕರಿಗೆ ಸೂಕ್ತ ಗೌರವ ನೀಡಲು ಪ್ರಧಾನಿ ಕರೆ

'ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್ ಯೋಜನೆ' ಅಡಿಯಲ್ಲಿ 1.25 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ: ಪ್ರಧಾನಿ

ವಿಶ್ವಕ್ಕೆ ಚತುರ ಮತ್ತು ನುರಿತ ಮಾನವ ಶಕ್ತಿ ಪರಿಹಾರಗಳನ್ನು ಭಾರತ ಒದಗಿಸುತ್ತಿದ್ದು, ಇದು ನಮ್ಮ ಕೌಶಲ ತರಬೇತಿ ಕಾರ್ಯತಂತ್ರದ ಮೂಲ ಧ್ಯೇಯವಾಗಬೇಕು

ಭಾರತದ ನುರಿತ ಕಾರ್ಯಪಡೆಯು ಸಂಕ್ರಾಮಿಕದ ವಿರುದ್ಧ ಪರಿಣಾಮಕಾರಿ ಹೋರಾಟದಲ್ಲಿ ನೆರವು ನೀಡಿದೆ: ಪ್ರಧಾನಿ

ಯುವಕರಿಗೆ ಕೌಶಲ್ಯ ತರಬೇತಿ, ಮರುಕೌಶಲ್ಯ ಮತ್ತು ಕೌಶಲ್ಯ ವೃದ್ಧಿಯು ಸತತವಾಗಿ ಮುಂದುವರಿಯಬೇಕು: ಪ್ರಧಾನಿ

ʻಸ್ಕಿಲ್‌ ಇಂಡಿಯಾʼ ಯೋಜನೆಯು, ದುರ್ಬಲ ವರ್ಗದ ಜನರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ದೂರದೃಷ್ಟಿಯ ಕನಸನ್ನು ಸಾಕಾರಗೊಳಿಸುತ್ತಿದೆ

Posted On: 15 JUL 2021 10:55AM by PIB Bengaluru

ಹೊಸ ಪೀಳಿಗೆಯ ಕೌಶಲ್ಯ ಅಭಿವೃದ್ಧಿಯು ಇಂದು ನಮ್ಮ ರಾಷ್ಟ್ರೀಯ ಅಗತ್ಯವಾಗಿದ್ದು, ʻಆತ್ಮನಿರ್ಭರ ಭಾರತʼಕ್ಕೂ ಇದೇ ಅಡಿಪಾಯವಾಗಿದೆ. ಏಕೆಂದರೆ, ಇದೇ ಯುವ ಪೀಳಿಗೆ ನಮ್ಮ ಗಣರಾಜ್ಯವನ್ನು 75 ವರ್ಷಗಳಿಂದ 100 ವರ್ಷಗಳಿಗೆ ಮುನ್ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಕಳೆದ 6 ವರ್ಷಗಳ ಲಾಭವನ್ನು ಬಂಡವಾಳವಾಗಿಸಿಕೊಳ್ಳುವ ಮೂಲಕ ʻಸ್ಕಿಲ್ ಇಂಡಿಯಾʼ ಯೋಜನೆಗೆ ವೇಗ ನೀಡುವಂತೆ ಅವರು ಕರೆ ನೀಡಿದರು.  ವಿಶ್ವ ಯುವ ಕೌಶಲ್ಯ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಮಾತನಾಡಿದರು. 

 


ಭಾರತೀಯ ಸಂಸ್ಕೃತಿಯಲ್ಲಿ ಕೌಶಲ್ಯಗಳ ಮಹತ್ವವನ್ನು ಒತ್ತಿ ಹೇಳಿದ  ಅವರು, ಕೌಶಲ್ಯ ತರಬೇತಿ, ಮತ್ತು ಕೌಶಲ್ಯ ವೃದ್ಧಿ ಮತ್ತು ಸಮಾಜದ ಪ್ರಗತಿಯ ನಡುವಿನ ಸಂಬಂಧವನ್ನು ಒತ್ತಿ ಹೇಳಿದರು. ಶ್ರೀ ಮೋದಿ ಅವರು ʻವಿಜಯದಶಮಿʼ, ʻಅಕ್ಷಯ ತೃತೀಯʼ ಮತ್ತು ʻವಿಶ್ವಕರ್ಮ ಪೂಜೆʼಯಂತಹ ಕೌಶಲ್ಯಗಳನ್ನು ಆಚರಿಸುವ ಹಾಗೂ ವೃತ್ತಿಪರ ಸಲಕರಣೆಗಳನ್ನು ಪೂಜಿಸಲಾಗುವ ಸಂಪ್ರದಾಯಗಳ ಬಗ್ಗೆ ಪ್ರಸ್ತಾಪಿಸಿದರು. ಈ ಸಂಪ್ರದಾಯಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ಬಡಗಿ, ಕುಂಬಾರರು, ಅಕ್ಕಸಾಲಿಗರು, ನೈರ್ಮಲ್ಯ ಕಾರ್ಮಿಕರು, ತೋಟಗಾರಿಕೆ ಕಾರ್ಮಿಕರು ಮತ್ತು ನೇಕಾರರಂತಹ ನುರಿತ ವೃತ್ತಿಪರರಿಗೆ ಸೂಕ್ತ ಗೌರವವನ್ನು ನೀಡಲು ಕರೆ ನೀಡಿದರು. ದೀರ್ಘಕಾಲದ ಗುಲಾಮಗಿರಿಯಿಂದಾಗಿ ನಮ್ಮ ಸಾಮಾಜಿಕ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಗಳು ಪ್ರಾಮುಖ್ಯ ಕಳೆದುಕೊಂಡಿದ್ದವು ಎಂದು ಪ್ರಧಾನಿ ಹೇಳಿದರು. 

 


 ಶಿಕ್ಷಣವು ನಮಗೆ ಏನು ಮಾಡಬೇಕೆಂದು ನಮಗೆ ಹೇಳುತ್ತದೆಯಾದರೂ, ನಿಜವಾದ ಕಾರ್ಯಾನುಷ್ಠಾನದಲ್ಲಿ ನಮಗೆ ಮಾರ್ಗದರ್ಶನ ನೀಡುವುದು ಕೌಶಲ್ಯವೇ. ʻಸ್ಕಿಲ್ ಇಂಡಿಯಾʼ ಯೋಜನೆಯ ಮಾರ್ಗದರ್ಶಿ ತತ್ವವೂ ಇದೇ ಆಗಿದೆ ಎಂದು ಪ್ರಧಾನಿ ಹೇಳಿದರು. 'ಪ್ರಧಾನ ಮಂತ್ರಿ ಕೌಶಲ್‌ ವಿಕಾಸ ಯೋಜನೆ' ಅಡಿಯಲ್ಲಿ 1.25 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು


ದೈನಂದಿನ ಜೀವನದಲ್ಲಿ ಕೌಶಲ್ಯಗಳ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಪಾದನೆ ಶುರುವಾಗುತ್ತಲೇ ಕಲಿಕೆ ನಿಲ್ಲಬಾರದು ಎಂದು ಹೇಳಿದರು. ಇಂದಿನ ಜಗತ್ತಿನಲ್ಲಿ ನುರಿತ ವ್ಯಕ್ತಿ ಮಾತ್ರ ಬೆಳೆಯುತ್ತಾನೆ. ಇದು ಜನರು ಮತ್ತು ದೇಶಗಳೆರಡಕ್ಕೂ ಅನ್ವಯಿಸುತ್ತದೆ. ವಿಶ್ವಕ್ಕೆ ಚತುರ ಮತ್ತು ನುರಿತ ಮಾನವ ಶಕ್ತಿ ಪರಿಹಾರಗಳನ್ನು ಭಾರತವು ಒದಗಿಸುತ್ತಿದ್ದು, ನಮ್ಮ ಯುವಕರ ಕೌಶಲಾಭಿವೃದ್ಧಿ ಕಾರ್ಯತಂತ್ರದ ಮೂಲ ಧ್ಯೇಯ ಇದೇ ಆಗಬೇಕು ಎಂದು ಅವರು ಹೇಳಿದರು. ಜಾಗತಿಕ ಕೌಶಲ್ಯ ಅಂತರ ಗುರುತಿಸುವಿಕೆಯ ಉಪಕ್ರಮವನ್ನು ಶ್ಲಾಘಿಸಿದ ಅವರು, ನಿರಂತರವಾಗಿ ಕೌಶಲ್ಯ ತರಬೇತಿ, ಮರು ಕೌಶಲ್ಯ ಮತ್ತು ಕೌಶಲ್ಯ ವೃದ್ಧಿಯನ್ನು ಮುಂದುವರಿಸುವಂತೆ ಸಂಬಂಧಪಟ್ಟವರಿಗೆ ಸಲಹೆ ನೀಡಿದರು. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಮರು ಕೌಶಲ್ಯಕ್ಕೆ ಭಾರಿ ಬೇಡಿಕೆ ಬರಲಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳಿಗೆ ವೇಗ ನೀಡಬೇಕಾಗಿದೆ ಎಂದರು. ಸಾಂಕ್ರಾಮಿಕದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ನಮ್ಮ ನುರಿತ ಕಾರ್ಯಪಡೆ ಹೇಗೆ ಸಹಾಯ ಮಾಡಿತು ಎಂಬುದನ್ನು ಪ್ರಧಾನಿ ಸ್ಮರಿಸಿದರು. 

 



 ದುರ್ಬಲ ವರ್ಗದ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಪ್ರಧಾನಿ ಉಲ್ಲೇಖಿಸಿದರು. ಬಾಬಾ ಸಾಹೇಬ್ ಅವರ ಈ ದೂರದೃಷ್ಟಿಯ ಕನಸನ್ನು ದೇಶವು ʻಸ್ಕಿಲ್ ಇಂಡಿಯಾʼ ಯೋಜನೆ ಮೂಲಕ ಈಡೇರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಉದಾಹರಣೆಗೆ, 'ಗೋಯಿಂಗ್ ಆನ್‌ಲೈನ್‌ ಆಸ್ ಲೀಡರ್ಸ್ -ಗೋಲ್ʼ ನಂತಹ ಕಾರ್ಯಕ್ರಮಗಳು ಬುಡಕಟ್ಟು ಪ್ರದೇಶಗಳಲ್ಲಿ ಅಲ್ಲಿನ ಜನರಿಗೆ ಕಲೆ ಮತ್ತು ಸಂಸ್ಕೃತಿ, ಕರಕುಶಲತೆ, ಜವಳಿ ಮತ್ತು ಡಿಜಿಟಲ್ ಸಾಕ್ಷರತೆಯಂತಹ ಕ್ಷೇತ್ರಗಳಲ್ಲಿ ಸಹಾಯ ಮಾಡುತ್ತಿವೆ. ಇದು ಬುಡಕಟ್ಟು ಜನರಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೂ ಕಾರಣವಾಗುತ್ತಿದೆ. ಅದೇ ರೀತಿ, ʻವನ್‌ ಧನ್ ಯೋಜನೆʼಯು ಬುಡಕಟ್ಟು ಸಮಾಜಕ್ಕೆ ಹೊಸ ಅವಕಾಶಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಿದೆ. "ಮುಂಬರುವ ದಿನಗಳಲ್ಲಿ, ನಾವು ಅಂತಹ ಅಭಿಯಾನಗಳನ್ನು ಹೆಚ್ಚು ವ್ಯಾಪಕಗೊಳಿಸಬೇಕಾಗಿದೆ ಮತ್ತು ಕೌಶಲ್ಯದ ಮೂಲಕ ನಮ್ಮನ್ನು ಮತ್ತು ದೇಶವನ್ನು ಸ್ವಾವಲಂಬಿ ಮಾಡಬೇಕಾಗಿದೆ" ಎಂದು ಹೇಳಿ ಪ್ರಧಾನಿ ಮಾತು ಮುಗಿಸಿದರು.

 

***
 



(Release ID: 1735811) Visitor Counter : 303