ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್ ನಿರ್ವಹಣೆ ಮತ್ತು ಆನ್‌ಲೈನ್ ಶಿಕ್ಷಣ ನೀಡುವಿಕೆ ಸ್ಥಿತಿಗತಿಯನ್ನು ಪರಿಶೀಲಿಸಲು ಐಐಎಸ್ಸಿ, ಐಐಟಿಗಳು, ಐಐಐಟಿಗಳು, ಐಐಎಸ್ಇಆರ್‌ಗಳು ಮತ್ತು ಎನ್‌ಐಐಟಿಗಳ ನಿರ್ದೇಶಕರೊಂದಿಗೆ ಸಭೆ ನಡೆಸಿದ ಕೇಂದ್ರ ಶಿಕ್ಷಣ ಸಚಿವರು

Posted On: 20 MAY 2021 5:26PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್' ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ಮೂಲಕ ಐಐಎಸ್ಸಿ/ಐಐಟಿಗಳು/ಐಐಐಟಿಗಳು/ಐಐಎಸ್ಇಆರ್ಮತ್ತು ಎನ್ಐಟಿಗಳ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಶಿಕ್ಷಣ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಮತ್ತು ಐಐಟಿಗಳ ನಿರ್ದೇಶಕರು, ಐಐಎಸ್ಸಿ, ಐಐಎಸ್ಇಆರ್ಗಳು, ಎನ್ಐಟಿಗಳು, ಐಐಐಟಿಗಳ ನಿರ್ದೇಶಕರು ಉಪಸ್ಥಿತರಿದ್ದರು.

ಕೋವಿಡ್-19 ಪರಿಸ್ಥಿತಿಯನ್ನು ನಿರ್ವಹಿಸಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಸಂಸ್ಥೆಗಳಿಂದ ಆನ್ಲೈನ್ ಶಿಕ್ಷಣ ನೀಡಿಕೆ, ವರ್ಚುವಲ್ ಲ್ಯಾಬೊರೇಟರಿ ಕೋರ್ಸ್ಗಳ ಸ್ಥಿತಿಗತಿಯನ್ನು ಸಚಿವರು ಪರಿಶೀಲಿಸಿದರು.  2020 ಮಾರ್ಚ್ನಲ್ಲಿ ಮೊದಲ ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ ಆನ್ಲೈನ್ ಬೋಧನೆಯನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಗಳ ನಿರ್ದೇಶಕರು ಉಲ್ಲೇಖಿಸಿದರು. ಕೆಲವು ಸಂಸ್ಥೆಗಳು ಆನ್ಲೈನ್ ಬೋಧನೆ ಮತ್ತು ಮೌಲ್ಯಮಾಪನಕ್ಕಾಗಿ ತಮ್ಮದೇ ಆದ ಆ್ಯಪ್ ಅನ್ನು ಅಭಿವೃದ್ಧಿಪಡಿಸಿವೆ. ಸಂಪರ್ಕ ಸಮಸ್ಯೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ, ಉಪನ್ಯಾಸದ ವಿಷಯಗಳನ್ನು ನಂತರದ ಬಳಕೆಗೂ ಲಭ್ಯವಾಗುವಂತೆ ಮಾಡಲಾಗಿದ್ದು, ಇದರಿಂದ ಅವರು ಎಲ್ಲಿಂದ ಬೇಕಾದರೂ ಡೌನ್ಲೋಡ್ ಮಾಡಿಕೊಂಡು ಅಧ್ಯಯನ ಮಾಡಬಹುದು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಆನ್ಲೈನ್ ತರಗತಿಗಳ ಮೂಲಕ ಸಂವಹನ ನಡೆಸಿ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಂಸ್ಥೆಗಳ ಕ್ಯಾಂಪಸ್ನಲ್ಲಿ ಕೋವಿಡ್ ಪ್ರಕರಣಗಳ ಸ್ಥಿತಿಗತಿ ಮತ್ತು ಸಂಸ್ಥೆಗಳಲ್ಲಿ ಉದ್ಭವಿಸುವ ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆಯೂ ಚರ್ಚಿಸಲಾಯಿತು. ಪ್ರಸ್ತುತ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದಲ್ಲಿ ಅನಗತ್ಯ ಆತಂಕವನ್ನು ತಪ್ಪಿಸಬಹುದುಸಮಾಜದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಂಸ್ಥೆಗಳ ಪ್ರಯತ್ನವು ಸಹಾಯಕವಾಗುತ್ತದೆ ಎಂದು ಸಚಿವರು ಹೇಳಿದರು.

ಕೋವಿಡ್ ಅವಧಿಯಲ್ಲಿ ಶೈಕ್ಷಣಿಕ ಅಧಿವೇಶನಗಳು ಮುಂದುವರಿಯುವಂತೆ ಕಾಯ್ದುಕೊಂಡಿರುವುದಕ್ಕಾಗಿ ಎಲ್ಲಾ ಸಂಸ್ಥೆಗಳನ್ನು ಶ್ರೀ ಧೋತ್ರೆ ಅವರು ಶ್ಲಾಘಿಸಿದರು. ಕೋವಿಡ್ನಿಂದಾಗಿ ಎದುರಾಗಿರುವ ಹಿಂದೆಂದೂ ಕಂಡಿರದಂತಹ ಇಂದಿನ ಸವಾಲುಗಳನ್ನು ನಿಭಾಯಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಗಮನ ಹರಿಸಬೇಕು ಹಾಗೂ ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳನ್ನು ಪೂರೈಸಲು ಹೈಬ್ರಿಡ್ ಕಲಿಕೆಗೆ ಒತ್ತು ನೀಡುವುದು ಎಷ್ಟು ಮುಖ್ಯ ಎಂಬ ಬಗ್ಗೆ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸಲು ʻರಾಷ್ಟ್ರೀಯ ಶಿಕ್ಷಣ ನೀತಿʼಯನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಶಿಕ್ಷಣ ಸಂಸ್ಥೆಗಳು ತಮ್ಮ ಕೋವಿಡ್-19 ನಿರ್ವಹಣಾ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಿದವು. ಜೊತೆಗೆ ಆಯಾ ರಾಜ್ಯದ ಪರಿಸ್ಥಿತಿಯ ನಿರ್ವಹಣೆಗಾಗಿ ಅಗತ್ಯ ಅರಿವು ಮೂಡಿಸಲು ಮತ್ತು ಬೆಂಬಲ ನೀಡಲು ಸ್ವಯಂ ಪ್ರೇರಿತವಾಗಿ ಒದಗಿಸುತ್ತಿರುವ ಸೇವೆಯ ಬಗ್ಗೆ ವಿವರಿಸಲಾಯಿತು. ಸ್ಥಳೀಯ ಆಡಳಿತದೊಂದಿಗೆ ಸಮಾಲೋಚಿಸಿ ಮತ್ತು ಮಾರ್ಗಸೂಚಿಗಳ ಪ್ರಕಾರ ಕ್ಯಾಂಪಸ್ ನಿವಾಸಿಗಳಿಗಾಗಿ ಕೈಗೊಂಡ ಲಸಿಕೆ ಅಭಿಯಾನದ ಬಗ್ಗೆಯೂ ಸಂಸ್ಥೆಗಳು ವಿವರಿಸಿದವು.

ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳು ಕೈಗೊಂಡ ಸಂಶೋಧನೆಯ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಸಲಾಯಿತು. ಕಡಿಮೆ ವೆಚ್ಚದ ʻಆರ್ಟಿ-ಪಿಸಿಆರ್ʼ ಯಂತ್ರಗಳು, ಕಿಟ್ಗಳು, ವೆಂಟಿಲೇಟರ್ಗಳು, ಕೋವಿಡ್-19 ಪ್ರವೃತ್ತಿಯನ್ನು ಊಹಿಸುವ ಗಣಿತಶಾಸ್ತ್ರೀಯ ಮಾದರಿಗಳ ಅಭಿವೃದ್ಧಿ ಮತ್ತು ಅವುಗಳನ್ನು ರಾಜ್ಯ ಆರೋಗ್ಯ ಇಲಾಖೆಗಳಿಗೆ ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಕೇಂದ್ರ ಶಿಕ್ಷಣ ಸಚಿವರು ಸಂಸ್ಥೆಗಳನ್ನು ಶ್ಲಾಘಿಸಿದರು. ಇವುಗಳ ಪೈಕಿ ಅನೇಕ ಸಂಶೋಧನಾ ಉತ್ಪನ್ನಗಳನ್ನು ಇನ್ಕ್ಯುಬೇಶನ್ ಘಟಕಗಳು ಮತ್ತು ಸಂಸ್ಥೆಗಳು ಸ್ಥಾಪಿಸಿದ ಸ್ಟಾರ್ಟ್ ಅಪ್ಗಳ ಮೂಲಕ ವಾಣಿಜ್ಯೀಕರಣಗೊಳಿಸಲಾಗಿದೆ.

ಸಂಸ್ಥೆಗಳು ಮಾಡಿದ ಕೆಲವು ಗಮನಾರ್ಹ ಸಂಶೋಧನಾ ಕಾರ್ಯಗಳಲ್ಲಿ ಕೊರೊನಾ ಪರೀಕ್ಷಾ ಕಿಟ್ 'ಕೊರೊಶೂರ್ʼ ಅಭಿವೃದ್ಧಿ, ಕೋಣೆಯ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಲಸಿಕೆಯ ಅಭಿವೃದ್ಧಿಗಾಗಿ ಸಂಶೋಧನೆ, ಕೊರೊನಾ ವೈರಸ್ ರೂಪಾಂತರಗಳನ್ನು ಗುರುತಿಸಲು ಜಿನೋಮ್ ಅನುಕ್ರಮಣಿಕೆ, ರೋಗಕಾರಕ ಸೋಂಕಿನ ತ್ವರಿತ ರೋಗನಿರ್ಣಯಕ್ಕಾಗಿ 'ಕೋವಿರ್ ಆಪ್' ಸಾಧನ, ವೆಂಟಿಲೇಟರ್ಗಳಲ್ಲಿ ಆಮ್ಲಜನಕದ ಬಳಕೆಯನ್ನು ಉತ್ತಮಗೊಳಿಸುವ ವಿಧಾನಗಳು, ಆಕ್ಸಿಜನ್ ಸಾಂದ್ರಕಾರಕಗಳ ಅಭಿವೃದ್ಧಿ, ಕಡಿಮೆ ವೆಚ್ಚದ ಪೋರ್ಟಬಲ್ ವೆಂಟಿಲೇಟರ್ಗಳು ಇತ್ಯಾದಿ ಸೇರಿವೆ.

ʻರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಸಂಬಂಧಿಸಿದಂತೆ, ಅನೇಕ ಸಂಸ್ಥೆಗಳು ಈಗಾಗಲೇ ಹೊಸ ಇಲಾಖೆ/ ಬಹು-ವಿಷಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುವುದನ್ನು ಗಮನಿಸಬಹುದು. ಐಐಎಸ್ಸಿ ಬೆಂಗಳೂರು ಮತ್ತು ಐಐಟಿ ಖರಗ್ಪುರ್ ಶೀಘ್ರದಲ್ಲೇ ವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್ಗಳನ್ನು ಪ್ರಾರಂಭಿಸಲಿವೆ. ಶಿಕ್ಷಕರ ತರಬೇತಿ/ ಮಾರ್ಗದರ್ಶನ ಮತ್ತು ಅಂತಾರಾಷ್ಟ್ರೀಯ ಮತ್ತು ಶೈಕ್ಷಣಿಕ-ಉದ್ಯಮ ಸಂವಹನಕ್ಕೆ ಸಂಸ್ಥೆಗಳು ಒತ್ತು ನೀಡಿವೆ.

***



(Release ID: 1720452) Visitor Counter : 187