ಪ್ರಧಾನ ಮಂತ್ರಿಯವರ ಕಛೇರಿ

ನ್ಯಾಸ್ ಕಾಮ್ ನ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ ಉದ್ದೇಶಿಸಿ ಪ್ರಧಾನಿ ಭಾಷಣ


ಚಿಪ್ ಗಳ ಕಾರ್ಯ ಕುಸಿತವಾಗಿದ್ದಾಗ, ಸಂಕೇತ(ಕೋಡ್ )ಗಳು ಕಾರ್ಯನಿರ್ವಹಿಸುತ್ತವೆ: ಐಟಿ ಉದ್ಯಮಕ್ಕೆ ಪ್ರಧಾನಮಂತ್ರಿ ಹೇಳಿಕೆ

ತಂತ್ರಜ್ಞಾನ ಉದ್ಯಮವನ್ನು ಅನಗತ್ಯ ನಿರ್ಬಂಧಗಳಿಂದ ಮುಕ್ತಗೊಳಿಸಲು ಸರ್ಕಾರ ಕಾರ್ಯೋನ್ಮುಖ: ಪ್ರಧಾನಿ

ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಯುವ ಉದ್ಯಮಿಗಳಿಗೆ ಸ್ವಾತಂತ್ರ್ಯವಿರಬೇಕು: ಪ್ರಧಾನಮಂತ್ರಿ

Posted On: 17 FEB 2021 3:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.

ಇಂದಿನ ಭಾರತ ಪ್ರಗತಿಯಾಗಿ ಕಾಯುತ್ತಿದೆ ಮತ್ತು ಆ ಭಾವನೆಗಳು ಸರ್ಕಾರಕ್ಕೆ ಅರ್ಥವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 130 ಕೋಟಿ ಭಾರತೀಯರ ಆಶೋತ್ತರಗಳು ನಮ್ಮನ್ನು ಮುನ್ನಡೆಯಲು ಮತ್ತು ಕ್ಷಿಪ್ರ ಪ್ರಗತಿ ಸಾಧಿಸಲು ಪ್ರೇರಣೆ ನೀಡುತ್ತಿದೆ ಎಂದರು. ನವ ಭಾರತ ಕುರಿತ ನಿರೀಕ್ಷೆಗಳು ಖಾಸಗಿ ವಲಯದಿಂದಲೂ ಇವೆ, ಅವೂ ಕೂಡ ಸರ್ಕಾರದ ಭಾಗವೇ ಆಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.  ಭವಿಷ್ಯದ ನಾಯಕತ್ವ ಅಭಿವೃದ್ಧಿಗೆ ನಿರ್ಬಂಧಗಳು ಸರಿಯಾದವಲ್ಲ ಎಂಬುದರ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹಾಗಾಗಿ ಸರ್ಕಾರ ತಂತ್ರಜ್ಞಾನ ಉದ್ಯಮವನ್ನು ಅನಗತ್ಯ ನಿರ್ಬಂಧಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.

ರಾಷ್ಟ್ರೀಯ ಸಂವಹನ ನೀತಿ ಜಾರಿ, ಭಾರತವನ್ನು ಜಾಗತಿಕ ಸಾಫ್ಟ್ ವೇರ್ ತಾಣ ಮತ್ತು ಇತರೆ ಸೇವೆಗಳನ್ನು ಒದಗಿಸುವ (ಒಎಸ್ ಪಿ) ತಾಣವನ್ನಾಗಿ ಮಾಡುವ ನೀತಿ ಮತ್ತು ಕೊರೊನಾಗೆ ಸಂಬಂಧಿಸಿದಂತೆ ಹೊರಡಿಸಲಾದ ಮಾರ್ಗಸೂಚಿಗಳು ಸೇರಿ ಇತ್ತೀಚೆಗೆ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. 12 ಚಾಂಪಿಯನ್ ಸೇವಾ ವಯಗಳಲ್ಲಿ ಮಾಹಿತಿ ಸೇವೆಗಳನ್ನು ಸೇರ್ಪಡೆ ಮಾಡಿರುವುದು ಫಲ ನೀಡುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚಿನ ನಕ್ಷೆಗಳ ಸರಳೀಕರಣ ಮತ್ತು ಜಿಯೋ ಸ್ಪೇಷಿಯಲ್ ಡಾಟಾ ನಮ್ಮ ತಂತ್ರಜ್ಞಾನ ಉದ್ಯಮವನ್ನು ಬಲವರ್ಧನೆಗೊಳಿಸುತ್ತದೆ ಮತ್ತು ವಿಸ್ತೃತ ಯೋಜನೆ ಆತ್ಮ ನಿರ್ಭರ್ ಭಾರತ ಸಾಧನೆಗೆ ಸಹಕಾರಿಯಾಗಲಿದೆ ಎಂದರು.

ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸರ್ಕಾರ ನವೋದ್ಯಮಗಳು ಮತ್ತು ಆವಿಷ್ಕಾರಗಳಲ್ಲಿ ಸಂಪೂರ್ಣ ವಿಶ್ವಾಸವಿರಿಸಿದೆ ಎಂದು ಪ್ರಧಾನಿ ಹೇಳಿದರು. ಸ್ವಯಂ ಪ್ರಮಾಣೀಕರಣ, ಆಡಳಿತದಲ್ಲಿ ಐ.ಟಿ ಪರಿಹಾರಗಳ ಬಳಕೆ, ಡೇಟಾ ಡಿಮಾರ್ಕಟೈಷೇಷನ್ ಮೂಲಕ ಡಿಜಿಟಲ್ ಇಂಡಿಯಾ ಪ್ರಕ್ರಿಯೆಯನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.

ಆಡಳಿತದಲ್ಲಿ ಪಾರದರ್ಶಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಜನರಿಗೆ ಸರ್ಕಾರದ ಬಗ್ಗೆ ವಿಶ್ವಾಸ ಬೆಳೆಯುತ್ತಿದೆ ಎಂದರು. ಆಡಳಿತವನ್ನು ಕಡತಗಳಿಂದ ಡ್ಯಾಷ್ ಬೋರ್ಡ್ ವರೆಗೆ ತರಲಾಗಿದ್ದು, ನಾಗರಿಕರೇ ಸೂಕ್ತ ನಿಗಾವಹಿಸುವ ವ್ಯವಸ್ಥೆ ಕಲ್ಪಿಸಾಗಿದೆ. ಜೆಇಎಮ್ ಪೋರ್ಟಲ್ ಮೂಲಕ ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಸುಧಾರಿಸಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಮೂಲ ಸೌಕರ್ಯ ಯೋಜನೆಗೆ ಮತ್ತು ಬಡವರ ವಸತಿ ಯೋಜನೆಗಳಿಗೆ ಜಿಯೋ ಟ್ಯಾಗಿಂಗ್ ಉದಾಹರಣೆಯನ್ನು ನೀಡಿದ ಅವರು, ಇದರಿಂದಾಗಿ ಅಂತಹ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ ಎಂದರು. ತೆರಿಗೆ ಸಂಬಂಧ ವಿಚಾರಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಗ್ರಾಮಗಳಲ್ಲಿನ ಕುಟುಂಬಗಳ ಪತ್ತೆಗೆ ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗುವುದು ಮತ್ತು ಮಾನವರ ಮುಖಾಮುಖಿಯನ್ನು ತಪ್ಪಿಸಲಾಗುವುದು ಎಂದು ಹೇಳಿದರು.

ನವೋದ್ಯಮಗಳ ಸಂಸ್ಥಾಪಕರು ಕೇವಲ ಮೌಲ್ಯಮಾಪನ ಮತ್ತು ನಿರ್ಗಮನ ಕಾರ್ಯತಂತ್ರಗಳಿಗೆ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬಾರದು ಎಂದು ಪ್ರಧಾನಮಂತ್ರಿ ಕರೆ ನೀಡಿದರು. “ನೀವು ಈ ಶತಮಾನದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಸಂಸ್ಥೆಗಳನ್ನು ನಿರ್ಮಾಣ ನಿಟ್ಟಿನಲ್ಲಿ ಯೋಚನೆ ಮಾಡಿ. ನೀವು ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡ ಹುಟ್ಟುಹಾಕುವಂತಹ ವಿಶ್ವ ದರ್ಜೆಯ ಉತ್ಪನ್ನಗಳನ್ನು ಸೃಷ್ಟಿಸುವತ್ತ ಯೋಚನೆ ಮಾಡಿ’’ ಎಂದು ಪ್ರಧಾನಮಂತ್ರಿ ಹೇಳಿದರು. ತಂತ್ರಜ್ಞಾನ ನಾಯಕರು ತಮ್ಮ ಪರಿಹಾರಗಳಲ್ಲಿ ಮೇಕ್ ಇನ್ ಇಂಡಿಯಾ ಕ್ಕೆ ಒತ್ತು ನೀಡುವಂತೆ ಪ್ರಧಾನಮಂತ್ರಿ ಕೋರಿದರು. ಭಾರತೀಯ ತಾಂತ್ರಿಕ ನಾಯಕತ್ವವನ್ನು ಮುಂದುರಿವರಿಸಲು ಮತ್ತು ಆ ವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗಲು ಹೊಸ ಮಾನದಂಡದ ಸ್ಪರ್ಧಾತ್ಮಕತೆಯನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು. ಜೇಷ್ಠತೆಯ ಸಂಸ್ಕೃತಿ ಮತ್ತು ಸಂಸ್ಥೆಗಳನ್ನು ನಿರ್ಮಾಣಕ್ಕೆ ಒತ್ತು ನೀಡಬೇಕೆಂದರು.

ಭಾರತ 2047ಕ್ಕೆ ಸ್ವಾತಂತ್ರ್ಯಗಳಿಸಿ 100 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ವಿಶ್ವ ದರ್ಜೆಯ ಉತ್ಪನ್ನಗಳು ಮತ್ತು ನಾಯಕರನ್ನು ನೀಡಲು ಚಿಂತನೆ ನಡೆಸಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ನಿಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಿ, ದೇಶ ನಿಮ್ಮೊಂದಿಗೆ ಇದೆ ಎಂದು ಪ್ರಧಾನಿ ಹೇಳಿದರು.

ಭಾರತ ಎದುರಿಸುತ್ತಿರುವ 21ನೇ ಶತಮಾನದ ಸವಾಲುಗಳಿಗೆ ಸಕ್ರಿಯ ತಾಂತ್ರಿಕ ಪರಿಹಾರಗಳನ್ನು ನೀಡುವ ಹೊಣೆ ತಂತ್ರಜ್ಞಾನ ಉದ್ಯಮದ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೃಷಿ, ಆರೋಗ್ಯ, ಸ್ವಾಸ್ಥ್ಯ, ಟೆಲಿಮೆಡಿಸಿನ್ ಮತ್ತು ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ನೀರು ಮತ್ತು ಫರ್ಟಿಲೈಜೇಷನ್ ಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಅವರು ಕರೆ ನೀಡಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅಟ್ ಚಿಂತನಾ ಪ್ರಯೋಗಾಲಯ ಹಾಗೂ ಅಟಲ್ ಸಂಪೋಷಣಾ ಕೇಂದ್ರಗಳ ಮೂಲಕ ಕೌಶಲ್ಯ ಮತ್ತು ನಾವೀನ್ಯತೆಗೆ ಒತ್ತು ನೀಡಲಾಗಿದೆ ಮತ್ತು ಅದಕ್ಕೆ ಉದ್ಯಮದ ಬೆಂಬಲ ಅಗತ್ಯವಿದೆ ಎಂದರು. ತಮ್ಮ ಸಿಎಸ್ ಆರ್ ಚಟುವಟಿಕೆಗಳ ಫಲಿತಾಂಶದ ಬಗ್ಗೆ ಗಮನಹರಿಸುವಂತೆ ಕರೆ ನೀಡಿದ ಅವರು, ತಮ್ಮ ಕಾರ್ಯಚಟುವಟಿಕೆಗಳನ್ನು ಹಿಂದುಳಿದ ಪ್ರದೇಶಗಳು ಮತ್ತು ಡಿಜಿಟಲ್ ಶಿಕ್ಷಣಕ್ಕೆ ವಿಸ್ತರಿಸುವಂತೆ ಕೋರಿದರು. ಎರಡನೇ ಮತ್ತು ಮೂರನೇ ದರ್ಜೆ ನಗರಗಳಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಉದ್ಯಮಿಗಳು ಮತ್ತು ನಾವಿನ್ಯಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿದ್ದು, ಅತ್ತ ಗಮನಹರಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

*****



(Release ID: 1698748) Visitor Counter : 194