ಹಣಕಾಸು ಸಚಿವಾಲಯ

ಕೇಂದ್ರ ಆಯವ್ಯಯ 2021-22 ರ ಸಾರಾಂಶ

Posted On: 01 FEB 2021 2:10PM by PIB Bengaluru

ಭಾಗ-

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಆಯವ್ಯಯವನ್ನು ಸಂಸತ್ತಿನಲ್ಲಿ ಮಂಡಿಸಿದರು. ಇದು ಈ ಹೊಸ ದಶಕದ ಮೊದಲ ಬಜೆಟ್ ಮತ್ತು ಕಂಡು ಕೇಳರಿಯದ ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡಿಜಿಟಲ್ ಬಜೆಟ್ ಆಗಿದೆ. ಆತ್ಮನಿರ್ಭರ ಭಾರತದ ಬಗ್ಗೆ ದೃಷ್ಟಿಕೋನ ಹೊಂದಿರುವ ಬಜೆಟ್ 130 ಕೋಟಿ ಭಾರತೀಯರ ಅಭಿವ್ಯಕ್ತಿ ಮತ್ತು ಅವರ ಸಾಮರ್ಥ್ಯ ಮತ್ತು ಕೌಶಲ್ಯದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದರು. ಬಜೆಟ್ ಪ್ರಸ್ತಾಪಗಳು ರಾಷ್ಟ್ರ ಮೊದಲು ಎಂಬ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ, ರೈತರ ಆದಾಯದ ದ್ವಿಗುಣ, ಬಲವಾದ ಮೂಲಸೌಕರ್ಯ, ಆರೋಗ್ಯಕರ ಭಾರತ, ಉತ್ತಮ ಆಡಳಿತ, ಯುವಜನರಿಗೆ ಅವಕಾಶಗಳು, ಎಲ್ಲರಿಗೂ ಶಿಕ್ಷಣ, ಮಹಿಳಾ ಸಬಲೀಕರಣ, ಮತ್ತು ಅಂತರ್ಗತ ಅಭಿವೃದ್ಧಿ ಮುಂತಾದುವುದಗಳನ್ನು ಬಲಪಡಿಸುತ್ತದೆ ಎಂದರು. ಹೆಚ್ಚುವರಿಯಾಗಿ, 2015-16ರ ಬಜೆಟ್‌ನ 13 ಭರವಸೆಗಳನ್ನು ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ 2022 ರ ಅಮೃತ ಮಹೋತ್ಸವದ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲು ತ್ವರಿತ ಅನುಷ್ಠಾನದ ಹಾದಿಯೂ ಆಗಿದೆ ಅವುಗಳೂ ಕೂಡ ಆತ್ಮನಿರ್ಭರತೆಯ ಈ ದೃಷ್ಟಿಗೆ ಅನುಕರಣಿಸುತ್ತವೆ ಎಂದು ಅವರು ಹೇಳಿದರು.

6 ಸ್ತಂಭಗಳ ಮೇಲೆ ನಿಂತಿರುವ 2021-22 ಬಜೆಟ್ ಪ್ರಸ್ತಾಪಗಳು

1. ಆರೋಗ್ಯ ಮತ್ತು ಸ್ವಾಸ್ಥ್ಯ

2. ಭೌತಿಕ ಮತ್ತು ಹಣಕಾಸು ಬಂಡವಾಳ ಮತ್ತು ಮೂಲಸೌಕರ್ಯ

3. ಮಹತ್ವಾಕಾಂಕ್ಷೆಯ ಭಾರತಕ್ಕಾಗಿ ಅಂತರ್ಗತ ಅಭಿವೃದ್ಧಿ

4. ಮಾನವ ಬಂಡವಾಳವನ್ನು ಪುನರುಜ್ಜೀವನಗೊಳಿಸುವುದು

5. ನಾವೀನ್ಯತೆ ಹಾಗೂ ಸಂಶೋಧನೆ & ಅಭಿವೃದ್ಧಿ

6. ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ

 

1. ಆರೋಗ್ಯ ಮತ್ತು ಸ್ವಾಸ್ಥ್ಯ

ಆರೋಗ್ಯ ಮೂಲಸೌಕರ್ಯದಲ್ಲಿ ಹೂಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಬಜೆಟ್ ವಿನಿಯೋಗವು 2021-22ರಲ್ಲಿ 2,23,846 ಕೋಟಿ ರೂ.ಗಳಾಗಿದೆ. ಈ ವರ್ಷದ 94,452 ಕೋಟಿ ರೂ.ಗೆ ಹೋಲಿಸಿದರೆ ಇದು 137 ಶೇಕಡಾ ಹೆಚ್ಚಾಗಿದೆ.

ಸುಮಾರು 64,180 ಕೋಟಿ ರೂ.ಗಳ ವಿನಿಯೋಗದೊಂದಿಗೆ ಕೇಂದ್ರೀಯ ಪ್ರಾಯೋಜಿತ ಹೊಸ ಯೋಜನೆ ಪಿ.ಎಂ. ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆಯನ್ನು ಪ್ರಾರಂಭಿಸಿ 6 ವರ್ಷಗಳಲ್ಲಿ ಕಾಲ ಅನುಷ್ಠಾನಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ಇದು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ, ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸುತ್ತದೆ ಮತ್ತು ಹೊಸ ಸಂಸ್ಥೆಗಳನ್ನು ರಚಿಸುತ್ತದೆ, ಹೊಸ ಮತ್ತು ಉದಯೋನ್ಮುಖ ರೋಗಗಳ ಪತ್ತೆ ಮತ್ತು ಗುಣಪಡಿಸುವಿಕೆಯನ್ನು ಪೂರೈಸುತ್ತದೆ. ಇದು ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಹೆಚ್ಚುವರಿಯಾಗಿರುತ್ತದೆ. ಯೋಜನೆಯಡಿ ಮುಖ್ಯ ಕ್ರಮಗಳು:

ಎ.        17,788 ಗ್ರಾಮೀಣ ಮತ್ತು 11,024 ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ ಬೆಂಬಲ

ಬಿ.        ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು 11 ರಾಜ್ಯಗಳಲ್ಲಿ 3382 ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳ ಸ್ಥಾಪನೆ.

ಸಿ.        602 ಜಿಲ್ಲೆಗಳು ಮತ್ತು 12 ಕೇಂದ್ರ ಸಂಸ್ಥೆಗಳಲ್ಲಿ ನಿರ್ಣಾಯಕ ಆರೈಕೆ ಆಸ್ಪತ್ರೆ ಘಟಕಗಳ ಸ್ಥಾಪನೆ

ಡಿ.        ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ಅದರ 5 ಪ್ರಾದೇಶಿಕ ಶಾಖೆಗಳು ಮತ್ತು 20 ಮಹಾನಗರ ಆರೋಗ್ಯ ಕಣ್ಗಾವಲು ಘಟಕಗಳನ್ನು ಬಲಪಡಿಸುವುದು;

ಇ.        ಎಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸಂಪರ್ಕಿಸಲು ಎಲ್ಲಾ ರಾಜ್ಯಗಳು / ಯುಟಿಗಳಿಗೆ ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್ ವಿಸ್ತರಣೆ.

ಎಫ್.     17 ಹೊಸ ಸಾರ್ವಜನಿಕ ಆರೋಗ್ಯ ಘಟಕಗಳ ಕಾರ್ಯಾಚರಣೆ ಮತ್ತು 32 ವಿಮಾನ ನಿಲ್ದಾಣಗಳು, 11 ಬಂದರುಗಳು ಮತ್ತು 7 ಲ್ಯಾಂಡ್ ಕ್ರಾಸಿಂಗ್‌ ಪ್ರವೇಶದ ಸ್ಥಳಗಳಲ್ಲಿ ಅಸ್ತಿತ್ವದಲ್ಲಿರುವ 33 ಸಾರ್ವಜನಿಕ ಆರೋಗ್ಯ ಘಟಕಗಳನ್ನು ಬಲಪಡಿಸುವುದು.

ಜಿ.        15 ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರಗಳು ಮತ್ತು 2 ಮೊಬೈಲ್ ಆಸ್ಪತ್ರೆಗಳನ್ನು ಸ್ಥಾಪಿಸುವುದು.

ಹೆಚ್.    ಉತ್ತಮ ಆರೋಗ್ಯಕ್ಕೆ ಒನ್ ಹೆಲ್ತ್‌, ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ಪ್ರದೇಶದ ಪ್ರಾದೇಶಿಕ ಸಂಶೋಧನಾ ವೇದಿಕೆ, 9 ಮೂರನೇ ಜೈವಿಕ ಸುರಕ್ಷತಾ ಮಟ್ಟದ ಪ್ರಯೋಗಾಲಯಗಳು ಮತ್ತು 4 ಪ್ರಾದೇಶಿಕ ವೈರಾಣು ರಾಷ್ಟ್ರೀಯ ಸಂಸ್ಥೆಗಳು.

ಲಸಿಕೆಗಳು

2021-22ರಲ್ಲಿ ಕೋವಿಡ್ -19 ಲಸಿಕೆಗಾಗಿ 35 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಪ್ರಸ್ತುತ ಕೇವಲ 5 ರಾಜ್ಯಗಳಿಗೆ ಸೀಮಿತವಾಗಿರುವ ನ್ಯುಮೋಕೊಕಲ್ ಲಸಿಕೆಯನ್ನು ದೇಶಾದ್ಯಂತ ವಾರ್ಷಿಕವಾಗಿ 50 ಸಾವಿರ ಮಕ್ಕಳ ಸಾವುಗಳನ್ನು ತಪ್ಪಿಸಲು ದೇಶಾದ್ಯಂತ ನೀಡಲಾಗುವುದು.

ಪೋಷಕಾಂಶ

ಪೌಷ್ಠಿಕಾಂಶಗಳು, ವಿತರಣೆ, ಔಟ್ ರೀಚ್ ಮತ್ತು ಫಲಿತಾಂಶವನ್ನು ಬಲಪಡಿಸಲು, ಸರ್ಕಾರವು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣಾ ಅಭಿಯಾನವನ್ನು ವಿಲೀನಗೊಳಿಸುತ್ತದೆ ಮತ್ತು ಮಿಷನ್ ಪೋಷಣ್ 2.0 ಅನ್ನು ಪ್ರಾರಂಭಿಸುತ್ತದೆ. 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ಸರ್ಕಾರ ತೀವ್ರವಾದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಿದೆ.

ನೀರು ಸರಬರಾಜು ಮತ್ತು ಸ್ವಚ್ಛ ಭಾರತ ಮಿಷನ್ ಸಾರ್ವತ್ರಿಕ ವ್ಯಾಪ್ತಿ

4,378 ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 2.86 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡಲು ಸಾರ್ವತ್ರಿಕ ನೀರು ಸರಬರಾಜು ಹಾಗೂ 500 ಅಮೃತ್ ನಗರಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗಾಗಿ ಜಲ ಜೀವನ್ ಮಿಷನ್ (ಅರ್ಬನ್) ಅನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ಇದನ್ನು 2,87,000 ಕೋಟಿ ರೂ. ವೆಚ್ಚದಲ್ಲಿ 5 ವರ್ಷಗಳಲ್ಲಿ ಜಾರಿಗೆ ತರಲಾಗುವುದು, ಇದಲ್ಲದೆ, 2021-2026 ರಿಂದ 5 ವರ್ಷಗಳ ಅವಧಿಯಲ್ಲಿ ನಗರ ಸ್ವಚ್ಛ ಭಾರತ ಮಿಷನ್ ಅನ್ನು ಒಟ್ಟು 1,41,678 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಹೆಚ್ಚುತ್ತಿರುವ ವಾಯುಮಾಲಿನ್ಯ ಸಮಸ್ಯೆಯನ್ನು ನಿಭಾಯಿಸಲು, ಸರ್ಕಾರವು ಈ ಬಜೆಟ್‌ನಲ್ಲಿ ಮಿಲಿಯನ್ ಜನಸಂಖ್ಯೆ ಹೊಂದಿರುವ 42 ನಗರ ಕೇಂದ್ರಗಳಿಗೆ 2,217 ಕೋಟಿ ರೂ. ಒದಗಿಸುತ್ತದೆ. ಹಳೆಯ ಮತ್ತು ಅನರ್ಹ ವಾಹನಗಳನ್ನು ಹೊರಹಾಕಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಸಹ ಘೋಷಿಸಲಾಗಿದೆ. ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷಗಳ ನಂತರ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳಲ್ಲಿ ಫಿಟ್‌ನೆಸ್ ಪರೀಕ್ಷೆಗಳನ್ನು ಪ್ರಸ್ತಾಪಿಸಲಾಗಿದೆ.

2. ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲಸೌಕರ್ಯ

ಆತ್ಮನಿರ್ಭರ ಭಾರತ-ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ

ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗಾಗಿ, ನಮ್ಮ ಉತ್ಪಾದನಾ ವಲಯವು ನಿರಂತರವಾಗಿ ಮೇಲೆ ಎರಡು ಅಂಕಿಗಳ ಬೆಳವಣಿಗೆ ಸಾಧಿಸಬೇಕು ಎಂದು ಹಣಕಾಸು ಸಚಿವರು ಹೇಳಿದರು. ನಮ್ಮ ಉತ್ಪಾದನಾ ಕಂಪನಿಗಳು ಜಾಗತಿಕ ಪೂರೈಕೆ ಸರಪಳಿಗಳ ಅವಿಭಾಜ್ಯ ಅಂಗವಾಗಬೇಕು, ಪ್ರಮುಖ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಬೇಕು. ಮೇಲಿನ ಎಲ್ಲವನ್ನು ಸಾಧಿಸಲು, 13 ಕ್ಷೇತ್ರಗಳಿಗೆ ಆತ್ಮನಿರ್ಭರ ಭಾರತ್‌ಗಾಗಿ ಉತ್ಪಾದನಾ ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸಲು ಪಿಎಲ್ಐ ಯೋಜನೆಗಳನ್ನು ಘೋಷಿಸಲಾಗಿದೆ. ಇದಕ್ಕಾಗಿ 2021-22ರ ಆರ್ಥಿಕ ವರ್ಷದಿಂದ ಪ್ರಾರಂಭವಾಗಿ ಮುಂದಿನ 5 ವರ್ಷಗಳಲ್ಲಿ ಸರ್ಕಾರ ಸುಮಾರು 1.97 ಲಕ್ಷ ಕೋಟಿ ರೂ. ಒದಗಿಸಲಿದೆ. ಈ ಉಪಕ್ರಮವು ಪ್ರಮುಖ ಕ್ಷೇತ್ರಗಳಲ್ಲಿ ಪ್ರಮಾಣ ಮತ್ತು ಗಾತ್ರವನ್ನು ಹೆಚ್ಚಿಸಲು, ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸಲು ಮತ್ತು ಪೋಷಿಸಲು ಮತ್ತು ನಮ್ಮ ಯುವಕರಿಗೆ ಉದ್ಯೋಗವನ್ನು ಒದಗಿಸಲು ಸಹಾಯ ಮಾಡುತ್ತದೆ.

ಜವಳಿ

ಜವಳಿ ಉದ್ಯಮವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು, ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು, ಪಿಎಲ್ಐ ಯೋಜನೆಗೆ ಹೆಚ್ಚುವರಿಯಾಗಿ ಬೃಹತ್ ಹೂಡಿಕೆ ಟೆಕ್ಸ್ಟೈಲ್ಸ್ ಪಾರ್ಕ್ (ಮಿತ್ರಾ) ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದು ರಫ್ತುಗಳಲ್ಲಿ ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸಲು ಸಾಧ್ಯವಾಗುವಂತೆ ಪ್ಲಗ್ ಮತ್ತು ಪ್ಲೇ (ಬಳಕೆಗೆ ಸಿದ್ಧವಿರುವ) ಸೌಲಭ್ಯಗಳೊಂದಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುತ್ತದೆ. 3 ವರ್ಷಗಳಲ್ಲಿ 3 ಜವಳಿ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು.

ಮೂಲಸೌಕರ್ಯ

2019 ರ ಡಿಸೆಂಬರ್‌ನಲ್ಲಿ ಹಣಕಾಸು ಸಚಿವರು ಘೋಷಿಸಿದ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ) ಇದುವರೆಗೆ ಸರ್ಕಾರ ಕೈಗೊಂಡ ಮೊದಲ ರೀತಿಯ ಕ್ರಮವಾಗಿದೆ. 6835 ಯೋಜನೆಗಳೊಂದಿಗೆ ಎನ್ಐಪಿ ಪ್ರಾರಂಭಿಸಲಾಯಿತು; ಯೋಜನೆಯನ್ನು ಈಗ 7,400 ಯೋಜನೆಗಳಿಗೆ ವಿಸ್ತರಿಸಲಾಗಿದೆ. ಕೆಲವು ಪ್ರಮುಖ ಮೂಲಸೌಕರ್ಯ ಸಚಿವಾಲಯಗಳ ಅಡಿಯಲ್ಲಿ ಸುಮಾರು 1.10 ಲಕ್ಷ ಕೋಟಿ ಮೌಲ್ಯದ 217 ಯೋಜನೆಗಳು ಪೂರ್ಣಗೊಂಡಿವೆ.

ಮೂಲಸೌಕರ್ಯ ಹಣಕಾಸು - ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್)

ಮೂಲಸೌಕರ್ಯ ಕ್ಷೇತ್ರದ ಬಗ್ಗೆ ಪ್ರಸ್ತಾಪಿಸಿದ ಶ್ರೀಮತಿ ಸೀತಾರಾಮನ್, ಮೂಲಸೌಕರ್ಯಕ್ಕೆ ದೀರ್ಘಾವಧಿಯ ಸಾಲ ಹಣಕಾಸಿನ ಅಗತ್ಯವಿದೆ ಎಂದು ಹೇಳಿದರು. ಮೂಲಸೌಕರ್ಯ ಹಣಕಾಸು ಒದಗಿಸುವವರು, ಸಕ್ರಿಯಗೊಳಿಸುವವರು ಮತ್ತು ವೇಗವರ್ಧಕವಾಗಿ ಕಾರ್ಯನಿರ್ವಹಿಸಲು ವೃತ್ತಿಪರವಾಗಿ ನಿರ್ವಹಿಸಲಾದ ಅಭಿವೃದ್ಧಿ ಹಣಕಾಸು ಸಂಸ್ಥೆಯ ಅಗತ್ಯವಿದೆ. ಅದಕ್ಕಾಗಿ ಡಿಎಫ್‌ಐ ಸ್ಥಾಪನೆ ಸಂಬಂಧ ಮಸೂದೆಯನ್ನು ಮಂಡಿಸಲಾಗುವುದು. ಈ ಸಂಸ್ಥೆಗೆ ಬಂಡವಾಳವಾಗಿ ಸರ್ಕಾರ 20,000 ಕೋಟಿ ರೂ. ಗಳನ್ನು ಒದಗಿಸುತ್ತದೆ ಮತ್ತು ಮೂರು ವರ್ಷಗಳ ಅವಧಿಯಲ್ಲಿ ಈ ಡಿಎಫ್‌ಐಗಾಗಿ ಕನಿಷ್ಠ 5 ಲಕ್ಷ ಕೋಟಿ ರೂ.ಗಳ ಸಾಲ ಬಂಡವಾಳವನ್ನು ಹೊಂದಬೇಕೆಂಬ ಮಹತ್ವಾಕಾಂಕ್ಷೆ ಇದೆ.

ಆಸ್ತಿಗಳಿಂದ ಹಣಗಳಿಕೆ

ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳಿಂದ ಹಣಗಳಿಸುವುದು ಹೊಸ ಮೂಲಸೌಕರ್ಯ ನಿರ್ಮಾಣಕ್ಕೆ ಬಹು ಮುಖ್ಯವಾದ ಹಣಕಾಸು ಆಯ್ಕೆಯಾಗಿದೆ. ಸಂಭಾವ್ಯ ಬ್ರೌನ್‌ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ “ರಾಷ್ಟ್ರೀಯ ಹಣಗಳಿಕೆ ಪೈಪ್‌ಲೈನ್”ಅನ್ನು ಪ್ರಾರಂಭಿಸಲಾಗುವುದು. ಈ ಕುರಿತ ಪ್ರಗತಿಯನ್ನು ತಿಳಿಯಲು ಮತ್ತು ಹೂಡಿಕೆದಾರರಿಗೆ ಗೋಚರತೆಯನ್ನು ಒದಗಿಸಲು ಆಸ್ತಿ ಹಣಗಳಿಕೆ ಡ್ಯಾಶ್‌ಬೋರ್ಡ್ ಅನ್ನು ಸಹ ರಚಿಸಲಾಗುತ್ತದೆ. ಹಣಗಳಿಕೆಯ ದಿಕ್ಕಿನಲ್ಲಿ ಕೆಲವು ಪ್ರಮುಖ ಕ್ರಮಗಳು ಹೀಗಿವೆ:

ಎ.        ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಿಜಿಸಿಐಎಲ್ ತಲಾ ಒಂದು InvIT ಪ್ರಾಯೋಜಿಸಿದ್ದು ಅದು ಅಂತರರಾಷ್ಟ್ರೀಯ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರನ್ನು ಆಕರ್ಷಿಸುತ್ತದೆ. 5,000 ಕೋಟಿ ರೂ.ಗಳ ಅಂದಾಜು ಉದ್ಯಮ ಮೌಲ್ಯವನ್ನು ಹೊಂದಿರುವ ಐದು ಕಾರ್ಯಾಚರಣೆಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ InvIT ಗೆ ವರ್ಗಾಯಿಸಲಾಗುತ್ತಿದೆ. ಅಂತೆಯೇ, 7,000 ಕೋಟಿ ಮೌಲ್ಯದ ಪ್ರಸರಣ ಸ್ವತ್ತುಗಳನ್ನು ಪಿಜಿಸಿಐಎಲ್ InvITಗೆ ವರ್ಗಾಯಿಸಲಾಗುತ್ತದೆ.

ಬಿ.        ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಮೀಸಲಾದ ಸರಕು ಕಾರಿಡಾರ್ ಸ್ವತ್ತುಗಳಿಂದ ರೈಲ್ವೆ ಹಣಗಳಿಸುತ್ತದೆ.

ಸಿ.        ಕಾರ್ಯಾಚರಣೆ ಮತ್ತು ನಿರ್ವಹಣಾ ರಿಯಾಯಿತಿಗಳಿಂದ ಮುಂದಿನ ಹಂತದ ವಿಮಾನ ನಿಲ್ದಾಣಗಳಿಂದ ಹಣಗಳಿಸಲಾಗುವುದು.

ಡಿ.        ಆಸ್ತಿಗಳಿಂದ ಹಣಗಳಿಸುವಿಕೆಯ ಕಾರ್ಯಕ್ರಮದಡಿಯಲ್ಲಿ ಹೊರತರಲಾಗುವ ಇತರ ಪ್ರಮುಖ ಮೂಲಸೌಕರ್ಯ ಸ್ವತ್ತುಗಳು: (i) ಎನ್‌ಎಚ್‌ಎಐ ಕಾರ್ಯಾಚರಣಾ ಟೋಲ್ ರಸ್ತೆಗಳು (ii) ಪಿಜಿಸಿಐಎಲ್‌ನ ಪ್ರಸರಣ ಸ್ವತ್ತುಗಳು (iii) ಗೇಲ್, ಐಒಸಿಎಲ್ ಮತ್ತು ಎಚ್‌ಪಿಸಿಎಲ್ (iv) ಎಐಐ ವಿಮಾನ ನಿಲ್ದಾಣಗಳ ತೈಲ ಮತ್ತು ಅನಿಲ ಪೈಪ್‌ಲೈನ್‌ಗಳು II ಮತ್ತು III ನಗರಗಳು, (v) ಇತರ ರೈಲ್ವೆ ಮೂಲಸೌಕರ್ಯ ಸ್ವತ್ತುಗಳು (vi) ಸಿಪಿಎಸ್‌ಇಗಳ ಉಗ್ರಾಣ ಸ್ವತ್ತುಗಳಾದ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ ಮತ್ತು NAFED ಮತ್ತು (vii) ಕ್ರೀಡಾಂಗಣಗಳು.

ರಸ್ತೆಗಳು ಮತ್ತು ಹೆದ್ದಾರಿಗಳ ಮೂಲಸೌಕರ್ಯ

5.35 ಲಕ್ಷ ಕೋಟಿ ಭಾರತಮಾಲಾ ಪರಿಯೋಜನೆ ಅಡಿಯಲ್ಲಿ ಲ್ಲಿ 3.3 ಲಕ್ಷ ಕೋಟಿ ರೂ.ಗಳ ವೆಚ್ಚದ 13,000 ಕಿ.ಮೀ ಉದ್ದದ ರಸ್ತೆಗಳನ್ನು ಈಗಾಗಲೇ ಟೆಮಡರ್ ನೀಡಲಾಗಿದೆ. ಇದರಲ್ಲಿ. ಮಾರ್ಚ್ 2022 ರ ಹೊತ್ತಿಗೆ 3,800 ಕಿ.ಮೀ. ನಿರ್ಮಾಣ ಪೂರ್ಣಗೊಳಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಸರ್ಕಾರವು ಇನ್ನೂ 8,500 ಕಿ.ಮೀ.ಗಳ ಕಾಮಗಾರಿಗಳನ್ನು ನೀಡಲಿದೆ ಮತ್ತು ಹೆಚ್ಚುವರಿ 11,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು ಪೂರ್ಣಗೊಳಿಸುತ್ತದೆ. ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು, ಹೆಚ್ಚಿನ ಆರ್ಥಿಕ ಕಾರಿಡಾರ್‌ಗಳನ್ನು ಸಹ ಯೋಜಿಸಲಾಗುತ್ತಿದೆ ಎಂದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1,18,101 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದ್ದು, ಇದರಲ್ಲಿ.1,08,230 ಕೋಟಿ ರೂ. ಬಂಡವಾಳಕ್ಕಾಗಿ ಮಾತ್ರ ಆಗಿದೆ. ಇದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ ಎಂದು ಅವರು ತಿಳಿಸಿದರು.

ರೈಲ್ವೆ ಮೂಲಸೌಕರ್ಯ

ಭಾರತೀಯ ರೈಲ್ವೆಯು ಭಾರತ ರಾಷ್ಟ್ರೀಯ ರೈಲ್ವೆ ಯೋಜನ- 2030 ಸಿದ್ಧಪಡಿಸಿದೆ. 2030 ರ ವೇಳೆಗೆ 'ಭವಿಷ್ಯದ ಸಿದ್ಧವಾದ' ರೈಲ್ವೆ ವ್ಯವಸ್ಥೆಯನ್ನು ರಚಿಸುವ ಯೋಜನೆ ಇದಾಗಿದೆ. ನಮ್ಮ ಉದ್ಯಮದ ಲಾಜಿಸ್ಟಿಕ್ ವೆಚ್ಚವನ್ನು ತಗ್ಗಿಸುವುದು 'ಮೇಕ್ ಇನ್ ಇಂಡಿಯಾ' ಅನ್ನು ಸಕ್ರಿಯಗೊಳಿಸುವ ನಮ್ಮ ಕಾರ್ಯತಂತ್ರದ ಮುಖ್ಯ ಭಾಗವಾಗಿದೆ. ಪಶ್ಚಿಮ ಸರಕು ಕಾರಿಡಾರ್ (ಡಿಎಫ್‌ಸಿ) ಮತ್ತು ಪೂರ್ವ ಸರಕು ಕಾರಿಡಾರ್ ಜೂನ್ 2022 ರೊಳಗೆ ಕಾರ್ಯಾರಂಭ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ.

ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಗಾಗಿ ಈ ಕೆಳಗಿನ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ:

ಎ.        ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ನೀಡಲು ಪ್ರವಾಸಿ ಮಾರ್ಗಗಳಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ವಿಸ್ಟಾ ಡೋಮ್ ಎಲ್ ಹೆಚ್ ಬಿ ಬೋಗಿಗಳ ಪರಿಚಯ.

ಬಿ.        ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಫಲಿತಾಂಶಗಳನ್ನು ನೀಡಿವೆ. ಈ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲು, ಭಾರತೀಯ ರೈಲ್ವೆಯ ಹೆಚ್ಚಿನ ಸಾಂದ್ರತೆಯ ಜಾಲ ಮತ್ತು ಹೆಚ್ಚು ಬಳಸಿದ ನೆಟ್‌ವರ್ಕ್ ಮಾರ್ಗಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಒದಗಿಸಲಾಗುವುದು, ಅದು ಮಾನವ ದೋಷದ ರೈಲು ಅಪಘಾತವನ್ನು ನಿವಾರಿಸುತ್ತದೆ.

ಸಿ.        ರೈಲ್ವೆಗೆ ಬಜೆಟ್ ಸಹ ದಾಖಲೆಯ 1,10,055 ಕೋಟಿ ರೂ. ಮೊತ್ತವನ್ನು ಒದಗಿಸಿದೆ. ಇದರಲ್ಲಿ 1,07,100 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ.

ನಗರ ಮೂಲಸೌಕರ್ಯ

ಮೆಟ್ರೋ ರೈಲು ಜಾಲ ವಿಸ್ತರಣೆ ಮತ್ತು ನಗರ ಬಸ್ ಸೇವೆಯನ್ನು ಹೆಚ್ಚಿಸುವ ಮೂಲಕ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಪಾಲನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತದೆ. ಸಾರ್ವಜನಿಕ ಬಸ್ ಸಾರಿಗೆ ಸೇವೆಗಳನ್ನು ಹೆಚ್ಚಿಸಲು 18,000 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು.

ಒಟ್ಟು 702 ಕಿ.ಮೀ ಸಾಂಪ್ರದಾಯಿಕ ಮೆಟ್ರೋ ಕಾರ್ಯನಿರ್ವಹಿಸುತ್ತಿದ್ದು, 27 ನಗರಗಳಲ್ಲಿ ಇನ್ನೂ 1,016 ಕಿ.ಮೀ ಮೆಟ್ರೋ ಮತ್ತು ಆರ್‌ಆರ್‌ಟಿಎಸ್ ನಿರ್ಮಾಣ ಹಂತದಲ್ಲಿದೆ. ‘ಮೆಟ್ರೊಲೈಟ್’ಮತ್ತು ‘ಮೆಟ್ರೊನಿಯೊ’ಎಂಬ ಎರಡು ಹೊಸ ತಂತ್ರಜ್ಞಾನಗಳ ಮೂಲಕ ಶ್ರೇಣಿ -2 ನಗರಗಳಲ್ಲಿ ಮತ್ತು ಶ್ರೇಣಿ -1 ನಗರಗ ಪ್ರದೇಶಗಳಲ್ಲಿ ಒಂದೇ ಅನುಭವ, ಅನುಕೂಲತೆ ಮತ್ತು ಸುರಕ್ಷತೆಯೊಂದಿಗೆ ಕಡಿಮೆ ವೆಚ್ಚದಲ್ಲಿ ಮೆಟ್ರೋ ರೈಲು ವ್ಯವಸ್ಥೆಯನ್ನು ಒದಗಿಸಲಾಗುವುದು.

ವಿದ್ಯುತ್ ಮೂಲಸೌಕರ್ಯ

ಕಳೆದ 6 ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ 139 ಗಿಗಾ ವಾಟ್ಸ್ ಸ್ಥಾಪಿತ ಸಾಮರ್ಥ್ಯದ ಸೇರ್ಪಡೆಯೊಂದಿಗೆ ಹಲವಾರು ಸುಧಾರಣೆಗಳು ಮತ್ತು ಸಾಧನೆಗಳು ಕಂಡುಬಂದಿವೆ, ಹೆಚ್ಚುವರಿ 2.8 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಮತ್ತು 1.41 ಲಕ್ಷ ಸರ್ಕ್ಯೂಟ್ ಕಿ.ಮೀ ಪ್ರಸರಣ ಮಾರ್ಗಗಳನ್ನು ಸೇರಿಸಲಾಗಿದೆ.

ವಿತರಣಾ ಕಂಪನಿಗಳ ಕಾರ್ಯಸಾಧ್ಯತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ವಿತ್ತ ಸಚಿವರು, 3,05,984 ಕೋಟಿ ರೂ. ವೆಚ್ಚದ ಪರಿಷ್ಕರಿಸಿದ ಸುಧಾರಣೆ ಆಧಾರಿತ ಫಲಿತಾಂಶ-ಸಂಬಂಧಿತ ವಿದ್ಯುತ್ ವಿತರಣಾ ವಲಯದ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಇದನ್ನು 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಪೂರ್ವ-ಪಾವತಿಯ ಸ್ಮಾರ್ಟ್ ಮೀಟರಿಂಗ್ ಮತ್ತು ಫೀಡರ್ ಬೇರ್ಪಡಿಕೆ, ವ್ಯವಸ್ಥೆಗಳ ನವೀಕರಣ ಇತ್ಯಾದಿಗಳನ್ನು ಒಳಗೊಂಡಂತೆ ಮೂಲಸೌಕರ್ಯ ಸೃಷ್ಟಿಗೆ ಡಿಸ್ಕಾಮ್‌ಗಳಿಗೆ ಈ ಯೋಜನೆ ನೆರವು ನೀಡುತ್ತದೆ.

ಬಂದರುಗಳು, ಸಾಗಣೆ, ಜಲಮಾರ್ಗಗಳು

ಪ್ರಮುಖ ಬಂದರುಗಳು ತಮ್ಮ ಕಾರ್ಯಾಚರಣೆಯ ಸೇವೆಗಳನ್ನು ತಾವಾಗಿಯೇ ನಿರ್ವಹಿಸುವುದರ ಬದಲು ಖಾಸಗಿ ಪಾಲುದಾರರು ಅದನ್ನು ನಿರ್ವಹಿಸುವ ಮಾದರಿಯನ್ನು ಪರಿಚಯಿಸಲಾಗುವುದು. ಈ ಉದ್ದೇಶಕ್ಕಾಗಿ ಬಜೆಟ್ 21-22ರ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕ್ರಮಕ್ಕಾಗಿ ಪ್ರಮುಖ ಬಂದರುಗಳಿಂದ 2,000 ಕೋಟಿ ರೂ. ಪ್ರಸ್ತಾಪ ಹೊಂದಿದೆ.

ಸಚಿವಾಲಯಗಳು ಮತ್ತು ಸಿಪಿಎಸ್‌ಇಗಳು ನೀಡಿರುವ ಜಾಗತಿಕ ಟೆಂಡರ್‌ಗಳಲ್ಲಿ ಭಾರತೀಯ ಹಡಗು ಕಂಪನಿಗಳಿಗೆ ಸಬ್ಸಿಡಿ ಬೆಂಬಲವನ್ನು ನೀಡುವ ಮೂಲಕ ಭಾರತದಲ್ಲಿ ವ್ಯಾಪಾರಿ ಹಡಗುಗಳನ್ನು ಆರಂಭಿಸುವವುದನ್ನು ಉತ್ತೇಜಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು. 5 ವರ್ಷಗಳಲ್ಲಿ 1624 ಕೋಟಿ ರೂ.ಗಳನ್ನು ಇದಕ್ಕೆ ಒದಗಿಸಲಾಗುವುದು ಈ ಉಪಕ್ರಮವು ಭಾರತೀಯ ನಾವಿಕರಿಗೆ ಹೆಚ್ಚಿನ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ಜಾಗತಿಕ ಸಾಗಣೆಯಲ್ಲಿ ಭಾರತೀಯ ಕಂಪನಿಗಳ ಪಾಲನ್ನು ಹೆಚ್ಚಿಸುತ್ತದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರವು ಇಂಧನ ಸರಬರಾಜನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಿತು ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಜನರ ಜೀವನದಲ್ಲಿ ಈ ಕ್ಷೇತ್ರದ ನಿರ್ಣಾಯಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಈ ಕೆಳಗಿನ ಪ್ರಮುಖ ಉಪಕ್ರಮಗಳನ್ನು ಘೋಷಿಸಲಾಗುತ್ತಿದೆ:

ಎ.        8 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿರುವ ಉಜ್ವಲಾ ಯೋಜನೆಯನ್ನು ಮತ್ತೆ 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸಲಾಗುವುದು.

ಬಿ.        ಮುಂದಿನ 3 ವರ್ಷಗಳಲ್ಲಿ ಸರ್ಕಾರವು ಇನ್ನೂ 100 ಜಿಲ್ಲೆಗಳನ್ನು ನಗರ ಅನಿಲ ವಿತರಣಾ ಜಾಲಕ್ಕೆ ಸೇರಿಸಲಿದೆ.

ಸಿ.        ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಗ್ಯಾಸ್ ಪೈಪ್‌ಲೈನ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.

ಡಿ.        ತಾರತಮ್ಯರಹಿತ ಮುಕ್ತ ಪ್ರವೇಶ ಆಧಾರದ ಮೇಲೆ ಎಲ್ಲಾ ನೈಸರ್ಗಿಕ ಅನಿಲ ಪೈಪ್‌ಲೈನ್‌ಗಳಲ್ಲಿ ಸಾಮಾನ್ಯ ವಾಹಕ ಸಾಮರ್ಥ್ಯವನ್ನು ಕಾಯ್ದಿರಿಸಲು ಅನುಕೂಲ ಮತ್ತು ಸಮನ್ವಯಕ್ಕಾಗಿ ಸ್ವತಂತ್ರ ಅನಿಲ ಸಾರಿಗೆ ವ್ಯವಸ್ಥೆ ಆಪರೇಟರ್ ಅನ್ನು ಸ್ಥಾಪಿಸಲಾಗುವುದು.

ಹಣಕಾಸು ಬಂಡವಾಳ

ಸೆಬಿ ಕಾಯ್ದೆ, 1992, ಡಿಪಾಸಿಟರೀಸ್ ಆಕ್ಟ್, 1996, ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ (ರೆಗ್ಯುಲೇಷನ್) ಆಕ್ಟ್, 1956 ಮತ್ತು ಸರ್ಕಾರಿ ಸೆಕ್ಯುರಿಟೀಸ್ ಆಕ್ಟ್, 2007 ರ ನಿಬಂಧನೆಗಳನ್ನು ತರ್ಕಬದ್ಧಗೊಳಿಸಿ ಒಂದೇ ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್ ಆಗಿ ಕ್ರೋಢೀಕರಿಸುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದರು. GIFT-IFSC ಯಲ್ಲಿ ವಿಶ್ವ ದರ್ಜೆಯ ಫಿನ್-ಟೆಕ್ ಹಬ್ ಅಭಿವೃದ್ಧಿಗೆ ಸರ್ಕಾರ ಬೆಂಬಲ ನೀಡುತ್ತದೆ.

ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಹೆಚ್ಚಳ

ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಶೇ.49 ರಿಂದ ಶೇ.74 ಕ್ಕೆ ಹೆಚ್ಚಿಸಲು ಮತ್ತು ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವ ಮತ್ತು ನಿಯಂತ್ರಣಕ್ಕೆ ಅನುಮತಿ ನೀಡಲು  ವಿಮಾ ಕಾಯ್ದೆ 1938 ಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಿಲಾಗಿದೆ. ಹೊಸ ರಚನೆಯಡಿಯಲ್ಲಿ, ಮಂಡಳಿಯ ಬಹುಪಾಲು ನಿರ್ದೇಶಕರು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ನಿವಾಸಿ ಭಾರತೀಯರಾಗುತ್ತಾರೆ, ಕನಿಷ್ಠ ಶೇ.50 ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿರುತ್ತಾರೆ ಮತ್ತು ನಿರ್ದಿಷ್ಟ ಶೇಕಡಾವಾರು ಲಾಭವನ್ನು ಸಾಮಾನ್ಯ ಮೀಸಲು ರೂಪದಲ್ಲಿ ಉಳಿಸಿಕೊಳ್ಳಲಾಗುತ್ತದೆ.

ಬಂಡವಾಳ ಹಿಂದೆಗೆತ ಮತ್ತು ಕಾರ್ಯತಂತ್ರದ ಮಾರಾಟ

ಕೋವಿಡ್-19 ರ ಹೊರತಾಗಿಯೂ, ಸರ್ಕಾರವು ಕಾರ್ಯತಂತ್ರದ ಬಂಡವಾಳ ಹಿಂದೆಗೆತಕ್ಕಾಗಿ ಲಸ ಮಾಡುತ್ತಿದೆ. 2021-22ರಲ್ಲಿ ಬಿಪಿಸಿಎಲ್, ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬಿಇಎಂಎಲ್, ಪವನ್ ಹನ್ಸ್, ನೀಲಾಚಲ್ ಇಸ್ಪತ್ ನಿಗಮ್ ಗೆ ಸಂಬಂಧಿಸಿದ ವಹಿವಾಟುಗಳನ್ನು 2021-22 ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಐಡಿಬಿಐ ಬ್ಯಾಂಕ್ ಅಲ್ಲದೇ, 2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣವನ್ನು ತೆಗೆದುಕೊಳ್ಳಲು ಸರ್ಕಾರ ಪ್ರಸ್ತಾಪಿಸಿದೆ.

2021-22ರಲ್ಲಿ, ಸರ್ಕಾರವು ಎಲ್‌ಐಸಿಯ ಐಪಿಒ ಅನ್ನು ಸಹ ಬಿಡುಗಡೆ ಮಾಡುತ್ತದೆ, ಇದಕ್ಕಾಗಿ ಈ ಅಧಿವೇಶನದಲ್ಲಿಯೇ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು.

ಆತ್ಮನಿರ್ಭರ್ ಪ್ಯಾಕೇಜ್‌ನಲ್ಲಿ, ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯತಂತ್ರದ ಬಂಡವಾಳ ಹಿಂದೆಗೆತ ನೀತಿಯನ್ನು ಹೊರತರುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಈ ನೀತಿಯನ್ನು ಸರ್ಕಾರ ಅಂನುಮೋದಿಸಿದೆ ಎಂದು ಹೇಳಿದರು. ನೀತಿಯು ಎಲ್ಲಾ ಕಾರ್ಯತಂತ್ರರಹಿತ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಬಂಡವಾಳ ಹಿಂದೆಗೆತಕ್ಕೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಒದಗಿಸುತ್ತದೆ. ಸರ್ಕಾರವು ಕನಿಷ್ಟ ಸಿಪಿಎಸ್‌ಇಗಳನ್ನು ನಿರ್ವಹಿಸುವ ಮತ್ತು ಉಳಿದವುಗಳನ್ನು ಖಾಸಗೀಕರಣಗೊಳಿಸುವ ನಾಲ್ಕು ಕ್ಷೇತ್ರಗಳನ್ನು ಆಯಕಟ್ಟಿನ ರೀತಿಯಲ್ಲಿ ಇರಿಸಿದೆ. ಕಾರ್ಯತಂತ್ರರಹಿತ ಕ್ಷೇತ್ರಗಳಲ್ಲಿ, ಸಿಪಿಎಸ್‌ಇಗಳನ್ನು ಖಾಸಗೀಕರಣಗೊಳಿಸಲಾಗುತ್ತದೆ, ಇಲ್ಲದಿದ್ದರೆ ಮುಚ್ಚಲಾಗುವುದು. ಮುಂದಿನ ಸಾರ್ವಜನಿಕ ವಲಯದ ಕಂಪನಿಗಳ ಬಂಡವಾಳ ಹಿಂದೆಗೆತ ಕುರಿತು ನೀತಿ ಆಯೋಗವು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು. ಸರ್ಕಾರವು 2020-21ರಲ್ಲಿ ಬಂಡವಾಳ ಹಿಂದೆಗೆತದಿಂದ ಅಂದಾಜು 1,75,000 ಕೋಟಿ ರೂ.ನಿರೀಕ್ಷೆ ಮಾಡಿದೆ.

3. ಮಹತ್ವಾಕಾಂಕ್ಷೆಯ ಭಾರತಕ್ಕಾಗಿ ಅಂತರ್ಗತ ಅಭಿವೃದ್ಧಿ

ಮಹತ್ವಾಕಾಂಕ್ಷಿ ಭಾರತಕ್ಕಾಗಿ ಅಂತರ್ಗತ ಅಭಿವೃದ್ಧಿಯ ಆಧಾರಸ್ತಂಭದ ಅಡಿಯಲ್ಲಿ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ರೈತರ ಕಲ್ಯಾಣ ಮತ್ತು ಗ್ರಾಮೀಣ ಭಾರತ, ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು ಮತ್ತು ಆರ್ಥಿಕ ಸೇರ್ಪಡೆಗಳನ್ನು ಒಳಗೊಳ್ಳುವುದಾಗಿ ಹಣಕಾಸು ಸಚಿವರು ಘೋಷಿಸಿದರು.

ಕೃಷಿ

ಕೃಷಿ ಕ್ಷೇತ್ರದ ಬಗ್ಗೆ ಪ್ರಸ್ತಾಪಿಸಿದ ಅವರು, ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಎಲ್ಲಾ ಸರಕುಗಳಾದ್ಯಂತ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಹೆಚ್ಚು ಬೆಲೆಯನ್ನು ಖಚಿತಪಡಿಸಿಕೊಳ್ಳಲು ಎಂಎಸ್ಪಿ ವ್ಯವಸ್ಥೆಯು ಅಪಾರ ಬದಲಾವಣೆ ತಂದಿದೆ. ಖರೀದಿಯು ಸ್ಥಿರವಾದ ವೇಗದಲ್ಲಿ ಹೆಚ್ಚುತ್ತಲೇ ಇದೆ. ಇದರಿಂದ ರೈತರಿಗೆ ಗಣನೀಯವಾಗಿ ಪಾವತಿಯಲ್ಲಿ ಹೆಚ್ಚಾಗಿದೆ ಎಂದರು.

ಗೋಧಿಯ ಖರೀದಿಯಲ್ಲಿ, 2013-2014ರಲ್ಲಿ ರೈತರಿಗೆ ಪಾವತಿಸಿದ ಒಟ್ಟು ಮೊತ್ತ 33,874 ಕೋಟಿ ರೂ. 2019-2020ರಲ್ಲಿ ಅದು 62,802 ಕೋಟಿ ರೂ, ಆಗಿದೆ. 2020-2021 ರಲ್ಲಿ ಅದು ಇನ್ನೂ ಉತ್ತಮವಾಗಿದ್ದು, ರೈತರಿಗೆ ಪಾವತಿಸಿದ ಈ ಮೊತ್ತವು. 75,060 ಕೋಟಿ ರೂ. ಗೋಧಿ ಬೆಳೆಯುವ ರೈತರ ಸಂಖ್ಯೆ 2019-20ರಲ್ಲಿದ್ದ 35.57 ಲಕ್ಷಕ್ಕೆ ಹೋಲಿಸಿದರೆ 2020-21ರಲ್ಲಿ 43.36 ಲಕ್ಷಕ್ಕೆ ಏರಿದೆ.

ಭತ್ತ ಖರೀದಿಗೆ 2013-14ರಲ್ಲಿ ಪಾವತಿಸಿದ ಮೊತ್ತ 63,928 ಕೋಟಿ ರೂ. 2019-2020ರಲ್ಲಿ ಇದು.1,41,930 ಕೋಟಿಗೆ ಏರಿತು. 2020-2021ರಲ್ಲಿ ಇದು ಮತ್ತಷ್ಟು ಉತ್ತಮಗೊಂಡು 172,752 ಕೋಟಿ ರೂ. ಗೆ ಅಂದಾಜಿಸಲಾಗಿದೆ. ರೈತರ ಲಾಭ 2019-20ರಲ್ಲಿ 1.24 ಕೋಟಿಯಿಂದ 2020-21ರಲ್ಲಿ 1.54 ಕೋಟಿಗೆ ಏರಿದೆ.

ಅದೇ ರೀತಿಯಲ್ಲಿ, ದ್ವಿದಳ ಧಾನ್ಯಗಳಿಗೆ, 2013-2014ರಲ್ಲಿ ಪಾವತಿಸಿದ ಮೊತ್ತ 236 ಕೋಟಿ. 2019-20ರಲ್ಲಿ ಇದು 8,285 ಕೋಟಿ ರೂ. ಈಗ, 2020-2021ರಲ್ಲಿ ಇದು 10,530 ಕೋಟಿ ರೂ.ಗಳಾಗಿದ್ದು, 2013-14 ಕ್ಕೆ ಹೋಲಿಸಿದರೆ 40 ಪಟ್ಟು ಹೆಚ್ಚಾಗಿದೆ.

ಹತ್ತಿ ರೈತರಿಗೆ 2013-14ರಲ್ಲಿ 90 ಕೋಟಿ ಪಾವತಿಸಿದ್ದರೆ ಈಗ 25,974 ಕೋಟಿ (2021 ಜನವರಿ 27 ರಂತೆ) ಪಾವತಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಗೌರವಾನ್ವಿತ ಪ್ರಧಾನಿ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿದರು. ಇದರ ಅಡಿಯಲ್ಲಿ ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಹಕ್ಕುಗಳ ದಾಖಲೆಯನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ, 1,241 ಹಳ್ಳಿಗಳಲ್ಲಿ ಸುಮಾರು 1.80 ಲಕ್ಷ ಆಸ್ತಿ-ಮಾಲೀಕರಿಗೆ ಸ್ವಾಮಿತ್ವ ಕಾರ್ಡ್‌ಗಳನ್ನು ಒದಗಿಸಲಾಗಿದೆ ಮತ್ತು 21-22ರ ಹಣಕಾಸು ವರ್ಷದಲ್ಲಿ ಅವಧಿಯಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ವಿಸ್ತರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.

ನಮ್ಮ ರೈತರಿಗೆ ಸಮರ್ಪಕ ಸಾಲ ನೀಡಲು 2022 ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋಟಿ ರೂ. ಗಳಿಗೆ ಹೆಚ್ಚಿಸಿದೆ. ಅಂತೆಯೇ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಹಂಚಿಕೆಯನ್ನು 30,000 ಕೋಟಿಯಿಂದ 40,000 ಕೋಟಿ ರೂ.ಗೆ ಹೆಚ್ಚಿಸಿದೆ. ನಬಾರ್ಡ್ ಅಡಿಯಲ್ಲಿ 5 ಸಾವಿರ ಕೋಟಿ ರೂ.ಗಳ ಮೂಲಧನ ಹೊಂದಿರುವ ಸೂಕ್ಷ್ಮ ನೀರಾವರಿ ನಿಧಿಯನ್ನು ದ್ವಿಗುಣಗೊಳಿಸಲಾಗುವುದು.

ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳು ಮತ್ತು ಅವುಗಳ ರಫ್ತುಗಳಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸಲು, ಪ್ರಸ್ತುತ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗೆ ಅನ್ವಯವಾಗುವ ‘ಆಪರೇಷನ್ ಗ್ರೀನ್ ಸ್ಕೀಮ್’ ವ್ಯಾಪ್ತಿಗೆ 22 ಬೇಗ ಹಾಳಾಗುವ ಉತ್ಪನ್ನಗಳನ್ನು ಸೇರಿಸಲಾಗುವುದು.

ಸುಮಾರು 1.68 ಕೋಟಿ ರೈತರು ಇ-ನ್ಯಾಮ್‌ಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು 1.14 ಲಕ್ಷ ಕೋಟಿ ರೂ. ಮೌಲ್ಯದ ವ್ಯಾಪಾರವನ್ನು ಇ-ನ್ಯಾಮ್‌ಗಳ ಮೂಲಕ ನಡೆಸಲಾಗಿದೆ. ಕೃಷಿ ಮಾರುಕಟ್ಟೆಯಲ್ಲಿ ಇ-ನ್ಯಾಮ್ ತಂದಿರುವ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ 1,000 ಮಂಡಿಗಳನ್ನು ಇ-ನ್ಯಾಮ್‌ನೊಂದಿಗೆ ಸಂಯೋಜಿಸಲಾಗುವುದು. ಕೃಷಿ ಮೂಲಸೌಕರ್ಯ ನಿಧಿಗಳನ್ನು ಎಪಿಎಂಸಿಗಳಿಗೆ ಅವುಗಳ ಮೂಲಸೌಕರ್ಯ ಸೌಲಭ್ಯಗಳನ್ನು ಹೆಚ್ಚಿಸಲು ಲಭ್ಯವಾಗುವಂತೆ ಮಾಡಲಾಗುವುದು.

ಮೀನುಗಾರಿಕೆ

ಆಧುನಿಕ ಮೀನುಗಾರಿಕೆ ಬಂದರುಗಳು ಮತ್ತು ಮೀನು ತಾಣಗಳ ಅಭಿವೃದ್ಧಿಗಾಗಿ ಹಣಕಾಸು ಸಚಿವರು ಸಾಕಷ್ಟು ಹೂಡಿಕೆಗಳನ್ನು ಪ್ರಸ್ತಾಪಿಸಿದರು. 5 ಪ್ರಮುಖ ಮೀನುಗಾರಿಕೆ ಬಂದರುಗಳಾದ ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪ್ಯಾರಾದೀಪ್ ಮತ್ತು ಪೆಟುಘಾಟ್ ಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು.

ವಲಸೆ ಕಾರ್ಮಿಕರು ಮತ್ತು ಕಾರ್ಮಿಕರು

ಸರ್ಕಾರವು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ, ಇದರ ಮೂಲಕ ಫಲಾನುಭವಿಗಳು ದೇಶದಲ್ಲಿ ಎಲ್ಲಿಯಾದರೂ ತಮ್ಮ ಪಡಿತರವನ್ನು ಪಡೆಯಬಹುದು. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸುತ್ತಿದ್ದು, ಸುಮಾರು 69 ಕೋಟಿ ಫಲಾನುಭವಿಗಳನ್ನು ತಲುಪಿದೆ - ಅದು ಒಟ್ಟು ಶೇ.86 ಫಲಾನುಭವಿಗಳನ್ನು ಒಳಗೊಂಡಿದೆ. ಉಳಿದ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಸಂಯೋಜಿಸಲಾಗುವುದು.

ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನದೊಂದಿಗೆ 20 ವರ್ಷಗಳ ಹಿಂದೆ ಪ್ರಾರಂಭವಾದ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಸರ್ಕಾರ ಪ್ರಸ್ತಾಪಿಸಿದೆ. ಜಾಗತಿಕವಾಗಿ ಮೊದಲ ಬಾರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಅಸಾಂಪ್ರದಾಯಿಕ ಮತ್ತು ಮಧ್ಯಸ್ತಿಕೆ ಕೆಲಸಗಾರರಿಗೆ ವಿಸ್ತರಿಸಲಾಗುವುದು. ಕನಿಷ್ಠ ವೇತನವು ಎಲ್ಲಾ ವರ್ಗದ ಕಾರ್ಮಿಕರಿಗೆ ಅನ್ವಯಿಸುತ್ತದೆ, ಮತ್ತು ಅವರೆಲ್ಲರೂ ನೌಕರರ ರಾಜ್ಯ ವಿಮಾ ನಿಗಮದ ವ್ಯಾಪ್ತಿಗೆ ಬರುತ್ತಾರೆ. ಮಹಿಳೆಯರಿಗೆ ಎಲ್ಲಾ ವಿಭಾಗಗಳಲ್ಲಿ ಮತ್ತು ರಾತ್ರಿ ಪಾಳಿಯಲ್ಲಿ ಸಾಕಷ್ಟು ರಕ್ಷಣೆಯೊಂದಿಗೆ ಕೆಲಸ ಮಾಡಲು ಅವಕಾಶವಿರುತ್ತದೆ. ಹಾಗೆಯೇ, ಏಕ ನೋಂದಣಿ ಮತ್ತು ಪರವಾನಗಿ ಮತ್ತು ಆನ್‌ಲೈನ್ ರಿಟರ್ನ್ಸ್ ಸಲ್ಲಿಕೆಯಿಂದ ಉದ್ಯೋಗದಾತರ ಮೇಲಿನ ಅನುಸರಣೆ ಹೊರೆಯೂ ಕಡಿಮೆಯಾಗುತ್ತದೆ.

ಹಣಕಾಸು ಸೇರ್ಪಡೆ

ಎಸ್‌ಸಿಗಳು, ಎಸ್‌ಟಿಗಳು ಮತ್ತು ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಸಾಲದ ಹರಿವನ್ನು ಮತ್ತಷ್ಟು ಸುಲಭಗೊಳಿಸಲು, ಹಣಕಾಸು ಸಚಿವರು ಅಂಚು ಹಣದ ಅಗತ್ಯವನ್ನು ಶೇ.25 ರಿಂದ ಶೇ.15 ಕ್ಕೆ ಇಳಿಸಲು ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲಗಳನ್ನು ಸೇರಿಸಲು ಪ್ರಸ್ತಾಪಿಸಿದ್ದಾರೆ. ಇದಲ್ಲದೆ, ಎಂಎಸ್ಎಂಇ ವಲಯವನ್ನು ಬೆಂಬಲಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಈ ಬಜೆಟ್ನಲ್ಲಿ ಸರ್ಕಾರವು ಈ ವಲಯಕ್ಕೆ ಈ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು 15,700 ಕೋಟಿ ರೂ. ಒದಗಿಸಿದೆ.

4. ಮಾನವ ಬಂಡವಾಳವನ್ನು ಪುನರುಜ್ಜೀವನಗೊಳಿಸುವುದು

ಇತ್ತೀಚೆಗೆ ಘೋಷಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಗೆ ಉತ್ತಮ ಸ್ವಾಗತ ಸಿಕ್ಕಿದೆ ಎಂದು ಹಣಕಾಸು ಸಚಿವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲಾ ಅಂಶಗಳನ್ನು ಸೇರಿಸಲು 15,000 ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತದೆ ಎಂದು ಹೇಳಿದರು. ಎನ್‌ಜಿಒಗಳು / ಖಾಸಗಿ ಶಾಲೆಗಳು / ರಾಜ್ಯಗಳ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಘೋಷಿಸಿದರು. ಗುಣಮಟ್ಟ ನಿಗದಿ, ಮಾನ್ಯತೆ, ನಿಯಂತ್ರಣ ಮತ್ತು ಧನಸಹಾಯಕ್ಕಾಗಿ 4 ಪ್ರತ್ಯೇಕ ವಾಹಕಗಳನ್ನು ಹೊಂದಿರುವ ಒಂದು ಸಂಸ್ಥೆಯಾಗಿ ಭಾರತದ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಲಾಗುವುದು ಎಂದು ಅವರು ಪ್ರಸ್ತಾಪಿಸಿದರು. ಲಡಾಖ್‌ನಲ್ಲಿ ಉನ್ನತ ಶಿಕ್ಷಣದ ಲಭ್ಯತೆಗಾಗಿ, ಸರ್ಕಾರವು ಲೇಹ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ

ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಅಂತಹ ಪ್ರತಿಯೊಂದು ಶಾಲೆಯ ಘಟಕ ವೆಚ್ಚವನ್ನು 20 ಕೋಟಿಯಿಂದ 38 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಗುಡ್ಡಗಾಡು ಮತ್ತು ಕಷ್ಟದ ಪ್ರದೇಶಗಳಿಗೆ 48 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಅಂತೆಯೇ, ಪರಿಶಿಷ್ಟ ಜಾತಿಯ ಕಲ್ಯಾಣಕ್ಕಾಗಿ ಪರಿಷ್ಕರಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರ ಸಹಾಯವನ್ನು ಹೆಚ್ಚಿಸಲಾಗಿದ್ದು, 4 ಕೋಟಿ ಎಸ್‌ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2025-2026ರವರೆಗೆ 6 ವರ್ಷಗಳ ಕಾಲ 35,219 ಕೋಟಿ ರೂ.ಅನುದಾನ ನಿಗದಿಗೊಳಿಸಿದೆ.

ಕೌಶಲ್ಯ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಹಭಾಗಿತ್ವದಲ್ಲಿ, ಕೌಶಲ್ಯ ಅರ್ಹತೆಗಳು, ಮೌಲ್ಯಮಾಪನ ಮತ್ತು ಪ್ರಮಾಣೀಕರಣವನ್ನು ಮಾನದಂಡವಾಗಿರಿಸಲು ಪ್ರಮಾಣೀಕೃತ ಕಾರ್ಯಪಡೆಯ ನಿಯೋಜನೆಯೊಂದಿಗೆ ಒಂದು ಉಪಕ್ರಮ ನಡೆಯುತ್ತಿದೆ. ಜಪಾನಿನ ಕೈಗಾರಿಕಾ ಮತ್ತು ವೃತ್ತಿಪರ ಕೌಶಲ್ಯಗಳು, ತಂತ್ರ ಮತ್ತು ಜ್ಞಾನವನ್ನು ವರ್ಗಾವಣೆ ಮಾಡಲು ಅನುಕೂಲವಾಗುವಂತೆ ಸರ್ಕಾರವು ಭಾರತ ಮತ್ತು ಜಪಾನ್ ನಡುವೆ ಸಹಕಾರಿ ತರಬೇತಿ ಅಂತರ ತರಬೇತಿ ಕಾರ್ಯಕ್ರಮವನ್ನು (ಟಿಐಟಿಪಿ) ಹೊಂದಿದೆ ಮತ್ತು ಇದನ್ನು ಇನ್ನೂ ಅನೇಕ ದೇಶಗಳೊಂದಿಗೆ ನಡೆಸಲಾಗುವುದು.

5. ನಾವೀನ್ಯತೆ ಮತ್ತು ಆರ್ & ಡಿ

2019 ರ ಜುಲೈ ಬಜೆಟ್ ನಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಘೋಷಿಸಲಾಗಿತ್ತು ಮತ್ತು ಎನ್ಆರ್ಎಫ್ ವೆಚ್ಚವು 5 ವರ್ಷಗಳಲ್ಲಿ 50,000 ಕೋಟಿ ರೂ ಆಗಿರಲಿದೆ. ಗುರುತಿಸಲಾದ ರಾಷ್ಟ್ರೀಯ-ಆದ್ಯತೆಯ ಒತ್ತಡದ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ.

ಸರ್ಕಾರವು ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್‌ಟಿಎಲ್‌ಎಂ) ಎಂಬ ಹೊಸ ಉಪಕ್ರಮವನ್ನು ಕೈಗೊಳ್ಳಲಿದೆ. ಇದು ಅಂತರ್ಜಾಲದಲ್ಲಿನ ಆಡಳಿತ ಮತ್ತು ನೀತಿ ಸಂಬಂಧಿತ ಜ್ಞಾನದ ಸಂಪತ್ತನ್ನು ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿರುವ ಪಿಎಸ್‌ಯು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಪಿಎಸ್‌ಎಲ್‌ವಿ-ಸಿಎಸ್ 51 ರ ಉಡಾವಣೆಯನ್ನು ಕಾರ್ಯಗತಗೊಳಿಸಲಿದ್ದು, ಕೆಲವು ಸಣ್ಣ ಭಾರತೀಯ ಉಪಗ್ರಹಗಳೊಂದಿಗೆ ಬ್ರೆಜಿಲ್‌ನ ಅಮೆಜೋನಿಯಾ ಉಪಗ್ರಹವನ್ನು ಕಕ್ಷೆಗೆ ಹೊತ್ತೊಯ್ಯುತ್ತದೆ.

ಗಗನಯಾನ ಮಿಷನ್ ಚಟುವಟಿಕೆಗಳ ಭಾಗವಾಗಿ, ನಾಲ್ವರು ಭಾರತೀಯ ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಜೆನೆರಿಕ್ ಬಾಹ್ಯಾಕಾಶ ಹಾರಾಟದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಮಾನವರಹಿತ ಉಡಾವಣೆಯನ್ನು ಡಿಸೆಂಬರ್ 2021 ಕ್ಕೆ ನಿಗದಿಪಡಿಸಲಾಗಿದೆ.

6. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ

ಬಜೆಟ್ ನ ಆರು ಸ್ತಂಭಗಳಲ್ಲಿ ಕೊನೆಯದರ ಬಗ್ಗೆ ಪ್ರಸ್ತಾಪಿಸಿದ ಹಣಕಾಸು ಸಚಿವರು, ತ್ವರಿತ ನ್ಯಾಯ ವಿಲೇವಾರಿಗಾಗಿ ಕಳೆದ ಕೆಲವು ವರ್ಷಗಳಲ್ಲಿ ನ್ಯಾಯಮಂಡಳಿಗಳಲ್ಲಿ ಸುಧಾರಣೆಗಳನ್ನು ತರಲಾಗಿದೆ ಎಂದರು ಮತ್ತು ನ್ಯಾಯಮಂಡಳಿಗಳ ಕಾರ್ಯವೈಖರಿಯನ್ನು ತರ್ಕಬದ್ಧಗೊಳಿಸಲು ಮುಂದಿನ ಕ್ರಮಗಳನ್ನು ಪ್ರಸ್ತಾಪಿಸಿದರು. 56 ಸಂಬಂಧಿತ ಆರೋಗ್ಯ ವೃತ್ತಿಗಳ ಪಾರದರ್ಶಕ ಮತ್ತು ಪರಿಣಾಮಕಾರಿ ನಿಯಂತ್ರಣವನ್ನು ಖಚಿತಪಡಿಸುವ ಉದ್ದೇಶದಿಂದ 56 ಆರೋಗ್ಯ ವೃತ್ತಿಪರರ ಮಸೂದೆಯನ್ನು ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದೆ. ಮುಂಬರುವ ಜನಗಣತಿಯು ಭಾರತದ ಇತಿಹಾಸದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಿರುತ್ತದೆ ಮತ್ತು ಈ ಪ್ರಮುಖ ಕಾರ್ಯಕ್ಕಾಗಿ 2021-2022ರಲ್ಲಿ 3,768 ಕೋಟಿ ರೂ.ನಿಗದಿಪಡಿಸಲಾಗಿದೆ.

ಹಣಕಾಸಿನ ಪರಿಸ್ಥಿತಿಯಲ್ಲಿ, ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ಪರಿಣಾಮದಿಂದಾಗಿ ಆದಾಯದ ಒಳಹರಿವು ದುರ್ಬಲವಾಗಲು ಕಾರಣವಾಗಿದೆ ಎಂದು ಅವರು ಒತ್ತಿಹೇಳಿದರು. ಒಮ್ಮೆ ಈ ಪರಿಸ್ಥಿತಿ ಸ್ಥಿರವಾದಾಗ ಮತ್ತು ಲಾಕ್‌ಡೌನ್ ಅನ್ನು ನಿಧಾನವಾಗಿ ತೆಗೆದುಹಾಕಿದಾಗ, ದೇಶೀಯ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಸರ್ಕಾರದ ಖರ್ಚುಗಳನ್ನು ಹೆಚ್ಚಿಸಲಾಯಿತು. ಇದರ ಪರಿಣಾಮವಾಗಿ, 2020-2021ರ ಮೂಲ ವೆಚ್ಚವಾದ 30.42 ಲಕ್ಷ ಕೋಟಿ ರೂ, ಬದಲಿಗೆ ಅಂದಾಜು 34.50 ಲಕ್ಷ ಕೋಟಿ ರೂ. ವೆಚ್ಚವಾಗಿದೆ ಮತ್ತು ಖರ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. 2020-2021ರಲ್ಲಿ ಪರಿಷ್ಕೃತ ವೆಚ್ಚದದಲ್ಲಿ ಅಂದಾಜು ಮಾಡಲಾದ ಬಂಡವಾಳ ವೆಚ್ಚ 4.39 ಲಕ್ಷ ಕೋಟಿ ರೂ. 2020-21ರಲ್ಲಿ ಬಜೆಟ್ ಅಂದಾಜು ವೆಚ್ಚ 4.12 ಲಕ್ಷ ಕೋಟಿ ರೂ.ಆಗಿತ್ತು

2020-21ರಲ್ಲಿ ಪರಿಷ್ಕೃತ ಅಂದಾಜು ಹಣಕಾಸಿನ ಕೊರತೆಯು ಜಿಡಿಪಿಯ ಶೇ.9.5 ರಷ್ಟಿದೆ ಮತ್ತು ಇದಕ್ಕೆ ಸರ್ಕಾರದ ಸಾಲಗಳು, ಬಹುಪಕ್ಷೀಯ ಸಾಲಗಳು, ಸಣ್ಣ ಉಳಿತಾಯ ನಿಧಿಗಳು ಮತ್ತು ಅಲ್ಪಾವಧಿಯ ಸಾಲಗಳ ಮೂಲಕ ಹಣವನ್ನು ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ 2 ತಿಂಗಳಲ್ಲಿ ಸರ್ಕಾರಕ್ಕೆ ಇನ್ನೂ 80,000 ಕೋಟಿ ರೂ. ಅಗತ್ಯವಿದೆ ಎಂದು ಅವರು ಹೇಳಿದರು. ಬಿಇ 2021-2022ರ ಬಜೆಟ್ ಅಂದಾಜಿನಲ್ಲಿ ಹಣಕಾಸಿನ ಕೊರತೆ ಜಿಡಿಪಿಯ ಶೇ.6.8 ಎಂದು ಅಂದಾಜಿಸಲಾಗಿದೆ. ಮುಂದಿನ ವರ್ಷ ಮಾರುಕಟ್ಟೆಯಿಂದ ಒಟ್ಟು ಸುಮಾರು 12 ಲಕ್ಷ ಕೋಟಿ ರೂ. ಸಾಲ ಪಡೆಯಲಾಗುವುದು.

ಹಣಕಾಸಿನ ಬಲವರ್ಧನೆಯ ಹಾದಿಯನ್ನು ಮುಂದುವರೆಸಲು ಸರ್ಕಾರ ಯೋಜಿಸುತ್ತಿದೆ ಮತ್ತು 2025-2026ರ ವೇಳೆಗೆ ಜಿಡಿಪಿಯ ಶೇ.4.5 ಕ್ಕಿಂತ ಕಡಿಮೆ ಹಣಕಾಸಿನ ಕೊರತೆಯ ಮಟ್ಟವನ್ನು ತಲುಪಲು ಉದ್ದೇಶಿಸಲಾಗಿದೆ ಎಂದು ಶ್ರೀಮತಿ ಸೀತಾರಾಮನ್ ಘೋಷಿಸಿದರು. "ನಾವು ಮೊದಲನೆಯದಾಗಿ ಬಲವರ್ಧನೆಯನ್ನು ಸಾಧಿಸುತ್ತೇವೆ, ಸುಧಾರಿತ ಅನುಸರಣೆಯ ಮೂಲಕ ತೆರಿಗೆ ಆದಾಯವನ್ನು ಹೆಚ್ಚಿಸುತ್ತೇವೆ ಮತ್ತು ಎರಡನೆಯದಾಗಿ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಭೂಮಿ ಸೇರಿದಂತೆ ಸ್ವತ್ತುಗಳ ಹಣಗಳಿಕೆಯಿಂದ ಹೆಚ್ಚಿ ಹಣ ಗಳಿಸಲಾಗುತ್ತದೆ" ಎಂದು ಅವರು ಹೇಳಿದರು.

15 ನೇ ಹಣಕಾಸು ಆಯೋಗದ ಅಭಿಪ್ರಾಯಗಳಿಗೆ ಅನುಗುಣವಾಗಿ, 2021-2022ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್‌ಡಿಪಿಯ ಶೇ.4 ರಷ್ಟು ನಿವ್ವಳ ಸಾಲದ ಸಾಮಾನ್ಯ ಮಿತಿಗೆ ಸರ್ಕಾರ ಅನುಮತಿ ನೀಡಿದೆ.

2020-2021 ರ ಮಾರ್ಚ್ 31 ರೊಳಗೆ ಜಿಡಿಪಿಯ ಶೇ.3 ರಷ್ಟು ಹಣಕಾಸಿನ ಕೊರತೆಯನ್ನು ಸಾಧಿಸಲು ಎಫ್‌ಆರ್‌ಬಿಎಂ ಕಾಯ್ದೆ ಉದ್ದೇಶಿಸಿದೆ. ಈ ವರ್ಷದ ಅನಿರೀಕ್ಷಿತ ಮತ್ತು ಅಭೂತಪೂರ್ವ ಸನ್ನಿವೇಶಗಳ ಪರಿಣಾಮವಾಗಿ ಎಫ್‌ಆರ್‌ಬಿಎಂ ಕಾಯ್ದೆಯ ಸೆಕ್ಷನ್ 4 (5) ಮತ್ತು 7 (3) (ಬಿ) ಅಡಿಯಲ್ಲಿ ಎಫ್‌ಆರ್‌ಬಿಎಂ ದಾಖಲೆಗಳೊಂದಿಗೆ ವಿಚಲನ ಹೇಳಿಕೆಯನ್ನು ಹಣಕಾಸು ಸಚಿವರು ಸದನದಲ್ಲಿ ಮಂಡಿಸಿದರು.

2020 ರ ಡಿಸೆಂಬರ್ 9 ರಂದು 15 ನೇ ಹಣಕಾಸು ಆಯೋಗವು 2021-2026ರ ಅವಧಿಯನ್ನು ಒಳಗೊಂಡ ಅಂತಿಮ ವರದಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿತು. ಸರ್ಕಾರವು ಆಯೋಗದ ವರದಿಯನ್ನು, ರಾಜ್ಯಗಳ ಶೇ.41 ರಷ್ಟು ಲಂಬ ಷೇರುಗಳನ್ನು ಉಳಿಸಿಕೊಂಡಿರುವ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಮಂಡಿಸಿದೆ.  ಆಯೋಗದ ಶಿಫಾರಸ್ಸಿನ ಮೇರೆಗೆ ಬಜೆಟ್ 2021-22ರಲ್ಲಿ 17 ರಾಜ್ಯಗಳಿಗೆ ಆದಾಯ ಕೊರತೆಯ ಅನುದಾನವಾಗಿ 1,18,452 ಕೋಟಿ ರೂ. ಒದಗಿಸಿದೆ.

ಭಾಗ-ಬಿ

ಬಜೆಟ್ ಭಾಷಣದ ಭಾಗ-ಬಿ ಯಲ್ಲಿ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವ್ಯವಸ್ಥೆ, ದಾವೆ ನಿರ್ವಹಣೆ ಮತ್ತು ಸರಳ ತೆರಿಗೆ ಆಡಳಿತದ ಅನುಸರಣೆಯನ್ನು ಇನ್ನಷ್ಟು ಸರಳಗೊಳಿಸಲು ಪ್ರಯತ್ನಿಸಿದ್ದಾರೆ. ಪರೋಕ್ಷ ಪ್ರಸ್ತಾಪವು ಕಸ್ಟಮ್ ಸುಂಕದ ತರ್ಕಬದ್ಧಗೊಳಿಸುವಿಕೆ ಮತ್ತು ಕಾರ್ಯವಿಧಾನಗಳ ತರ್ಕಬದ್ಧಗೊಳಿಸುವಿಕೆ ಮತ್ತು ಅನುಸರಣೆಯನ್ನು ಸರಳಗೊಳಿಸುವುದರ ಮೇಲೆ ಕೇಂದ್ರೀಕರಿಸಿದೆ.

ನೇರ ತೆರಿಗೆ ಪ್ರಸ್ತಾಪಗಳು

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಹಿರಿಯ ನಾಗರಿಕರಿಗೆ ವಿತ್ತ ಸಚಿವರು ಪರಿಹಾರ ಒದಗಿಸಿದ್ದಾರೆ. ಆದಾಯ ತೆರಿಗೆ ಪ್ರಕ್ರಿಯೆ ಗಡುವು ಮಿತಿ ಕಡಿಮೆಗೊಳಿಸಲು ವಿವಾದ ಪರಿಹಾರ ಸಮಿತಿಯನ್ನು ಸ್ಥಾಪನೆ, ಮುಖಾಮುಖಿ ರಹಿತ ಐಟಿಎಟಿ, ಎನ್‌ಆರ್‌ಐಗಳಿಗೆ ವಿನಾಯ್ತಿ, ಲೆಕ್ಕಪರಿಶೋಧನೆಯ ವಿನಾಯಿತಿ ಮಿತಿ ಹೆಚ್ಚಳ ಮತ್ತು ಲಾಭಾಂಶದ ಆದಾಯಕ್ಕೆ ಪರಿಹಾರ. ಮೂಲಸೌಕರ್ಯಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಘೋಷಿಸಿದರು. ಕೈಗೆಟುಕುವ ವಸತಿ ಮತ್ತು ಬಾಡಿಗೆ ವಸತಿಗಳಿಗೆ ಪರಿಹಾರ, ಐಎಫ್‌ಎಸ್‌ಸಿಗೆ ತೆರಿಗೆ ಪ್ರೋತ್ಸಾಹ, ಸಣ್ಣ ದತ್ತಿ ಟ್ರಸ್ಟ್‌ಗಳಿಗೆ ಪರಿಹಾರ ಮತ್ತು ದೇಶದಲ್ಲಿ ಸ್ಟಾರ್ಟ್ ಅಪ್‌ಗಳನ್ನು ಉತ್ತೇಜಿಸುವ ಕ್ರಮಗಳನ್ನು ಅವರು ಘೋಷಿಸಿದರು.

ಸಾಂಕ್ರಾಮಿಕ ನಂತರದಲ್ಲಿ, ಹೊಸ ವಿಶ್ವ ಕ್ರಮಾಂಕವು ಹೊರಹೊಮ್ಮುತ್ತಿದೆ ಮತ್ತು ಅದರಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಶ್ರೀಮತಿ ನಿರ್ಮಾಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಈ ಸನ್ನಿವೇಶದಲ್ಲಿ, ನಮ್ಮ ತೆರಿಗೆ ವ್ಯವಸ್ಥೆಯು ಪಾರದರ್ಶಕವಾಗಿರಬೇಕು, ಪರಿಣಾಮಕಾರಿಯಾಗಿರಬೇಕು ಮತ್ತು ದೇಶದಲ್ಲಿ ಹೂಡಿಕೆ ಮತ್ತು ಉದ್ಯೋಗವನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು. ಅದೇ ಸಮಯದಲ್ಲಿ ಅದು ನಮ್ಮ ತೆರಿಗೆ ಪಾವತಿದಾರರ ಮೇಲೆ ಕನಿಷ್ಠ ಹೊರೆಯಾಗಬೇಕು ಎಂದು ಸಚಿವರು ಹೇಳಿದರು. ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸುವುದು, ಲಾಭಾಂಶ ವಿತರಣಾ ತೆರಿಗೆಯನ್ನು ರದ್ದುಪಡಿಸುವುದು ಮತ್ತು ಸಣ್ಣ ತೆರಿಗೆ ಪಾವತಿದಾರರಿಗೆ ರಿಯಾಯಿತಿ ಹೆಚ್ಚಿಸುವುದು ಸೇರಿದಂತೆ ತೆರಿಗೆ ಪಾವತಿದಾರರು ಮತ್ತು ಆರ್ಥಿಕತೆಯ ಅನುಕೂಲಕ್ಕಾಗಿ ಸರ್ಕಾರವು ಸರಣಿ ಸುಧಾರಣೆಗಳನ್ನು ಪರಿಚಯಿಸಿದೆ ಎಂದು ಅವರು ಹೇಳಿದರು. 2020 ರಲ್ಲಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದವರ ಸಂಖ್ಯೆ 2014 ರಲ್ಲಿದ್ದ 3.31 ಕೋಟಿಯಿಂದ 6.48 ಕೋಟಿಗೆ ಏರಿಕೆಯಾಗಿದೆ.

75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಮೇಲಿನ ತೆರಿಗೆ ಅನುಸರಣೆ ಹೊರೆ ಕಡಿಮೆ ಮಾಡಲು ಬಜೆಟ್ ಪ್ರಯತ್ನಿಸಿದೆ. ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ ಅಂತಹ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗುತ್ತದೆ. ಪಾವತಿಸುವ ಬ್ಯಾಂಕ್ ಅವರ ಆದಾಯದ ಮೇಲೆ ಅಗತ್ಯವಾದ ತೆರಿಗೆಯನ್ನು ಕಡಿತಗೊಳಿಸುತ್ತದೆ. ತಮ್ಮ ವಿದೇಶಿ ನಿವೃತ್ತಿ ಖಾತೆಯಲ್ಲಿ ತಮ್ಮ ಗಳಿಸಿದ ಆದಾಯದ ವಿಷಯದಲ್ಲಿ ಭಾರತಕ್ಕೆ ಮರಳುವ ಅನಿವಾಸಿ ಭಾರತೀಯರ ಕಷ್ಟಗಳನ್ನು ಪರಿಹರಿಸಲು ನಿಯಮಗಳನ್ನು ಪ್ರಕಟಿಸಲು ಬಜೆಟ್ ಪ್ರಸ್ತಾಪಿಸಿದೆ. REIT/ InvIT ಪಾವತಿ ಮಾಡಿದ ಲಾಭಾಂಶಕ್ಕೆ ಟಿಡಿಎಸ್‌ನಿಂದ ವಿನಾಯಿತಿ ನೀಡಲು ಬಜೆಟ್ ಪ್ರಸ್ತಾಪಿಸಿದೆ. ವಿದೇಶಿ ಬಂಡವಾಳ ಹೂಡಿಕೆದಾರರಿಗೆ, ಕಡಿಮೆ ಒಪ್ಪಂದದ ದರದಲ್ಲಿ ಲಾಭಾಂಶದ ಆದಾಯದ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಬಜೆಟ್ ಪ್ರಸ್ತಾಪಿಸಿದೆ. ಲಾಭಾಂಶದ ಘೋಷಣೆಯ ಅಥವಾ ಪಾವತಿಯ ನಂತರವೇ ಲಾಭಾಂಶದ ಆದಾಯದ ಮೇಲಿನ ಸುಧಾರಿತ ತೆರಿಗೆ ಹೊಣೆಗಾರಿಕೆ ಉಂಟಾಗುತ್ತದೆ ಎಂದು ಬಜೆಟ್ ಹೇಳಿದೆ. ಮುಂಗಡ ತೆರಿಗೆ ಪಾವತಿಸಲು ಷೇರುದಾರರಿಂದ ಲಾಭಾಂಶದ ಆದಾಯದ ಪ್ರಮಾಣವನ್ನು ಸರಿಯಾಗಿ ಅಂದಾಜು ಮಾಡಲಾಗದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕೈಗೆಟುಕುವ ಮನೆ ಖರೀದಿಸಲು ತೆಗೆದುಕೊಂಡ ಸಾಲಕ್ಕೆ 1.5 ಲಕ್ಷ ರೂ.ಬಡ್ಡಿ ಪಾವತಿಯನ್ನು ಮರಳಿ ಪಡೆಯುವ ಅವಧಿಯನ್ನು ಇನ್ನೂ ಒಂದು ವರ್ಷದವರೆಗೆ, ಅಂದರೆ 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗುವುದು. ಕೈಗೆಟುಕುವ ಮನೆಗಳ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ, ಕೈಗೆಟುಕುವ ವಸತಿ ಯೋಜನೆಗಳಿಗೆ ತೆರಿಗೆ ರಜೆಯನ್ನು ಇನ್ನೂ ಒಂದು ವರ್ಷದವರೆಗೆ, ಅಂದರೆ 2022ರ ಮಾರ್ಚ್ 31 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದರು. ವಲಸೆ ಕಾರ್ಮಿಕರಿಗೆ ಕೈಗೆಟುಕುವ ಬಾಡಿಗೆ ವಸತಿ ಪೂರೈಕೆಯನ್ನು ಉತ್ತೇಜಿಸಲು, ಅಧಿಸೂಚಿತ ಕೈಗೆಟುಕುವ ಬಾಡಿಗೆ ವಸತಿ ಯೋಜನೆಗಳಿಗೆ ಸಚಿವರು ಹೊಸ ತೆರಿಗೆ ವಿನಾಯಿತಿ ಘೋಷಿಸಿದರು.

ದೇಶದಲ್ಲಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವ ಸಲುವಾಗಿ, ಸ್ಟಾರ್ಟ್ ಅಪ್‌ಗಳು ತೆರಿಗೆ ರಜೆಯನ್ನು ಇನ್ನೂ ಒಂದು ವರ್ಷದವರೆಗೆ, ಅಂದರೆ 2022 ರ ಮಾರ್ಚ್ 31 ರವರೆಗೆ ವಿಸ್ತರಣೆಯನ್ನು ಶ್ರೀಮತಿ ಸೀತಾರಾಮನ್ ಘೋಷಿಸಿದರು. ಸ್ಟಾರ್ಟ್ ಅಪ್‌ಗಳಿಗೆ ಧನಸಹಾಯವನ್ನು ಉತ್ತೇಜಿಸುವ ಸಲುವಾಗಿ, ಸ್ಟಾರ್ಟ್ ಅಪ್‌ಗಳಲ್ಲಿನ ಹೂಡಿಕೆಗೆ ಬಂಡವಾಳ ಲಾಭ ವಿನಾಯಿತಿಯನ್ನು ಇನ್ನೂ ಒಂದು ವರ್ಷದವರೆಗೆ, ಅಂದರೆ 2022ರ ಮಾರ್ಚ್, 31 ರವರೆಗೆ ವಿಸ್ತರಿಸಲು ಅವರು ಪ್ರಸ್ತಾಪಿಸಿದ್ದಾರೆ.

ವಿವಿಧ ಕಲ್ಯಾಣ ನಿಧಿಗಳಿಗೆ ನೌಕರರ ಕೊಡುಗೆಯನ್ನು ಠೇವಣಿ ಇಡುವುದು ವಿಳಂಬವಾಗುವುದರಿಂದ ನೌಕರರಿಗೆ ಬಡ್ಡಿ / ಆದಾಯ ಶಾಶ್ವತವಾಗಿ ನಷ್ಟವಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಉದ್ಯೋಗದಾತರು ಈ ನಿಧಿಗೆ ನೌಕರರ ಕೊಡುಗೆಯನ್ನು ಸಮಯಕ್ಕೆ ಸರಿಯಾಗಿ ಠೇವಣಿ ಇಡುವುದನ್ನು ಖಚಿತಪಡಿಸಿಕೊಳ್ಳಲು, ಉದ್ಯೋಗಿಗಳ ಕೊಡುಗೆಯನ್ನು ತಡವಾಗಿ ಠೇವಣಿ ಇಡುವ ಉದ್ಯೋಗದಾತರ ಠೇವಣಿಯನ್ನು ಕಡಿತ ಎಂದು ಪರಿಗಣಿಸುವುದಿಲ್ಲ ಎಂದು ಅವರು ಘೋಷಿಸಿದರು.

ಅನುಸರಣೆ ಹೊರೆ ಕಡಿಮೆ ಮಾಡಲು, ಆದಾಯ ತೆರಿಗೆ ಪ್ರಕ್ರಿಯೆಯನ್ನು ಪುನಃ ತೆರೆಯುವ ಸಮಯ ಮಿತಿಯನ್ನು ಪ್ರಸ್ತುತ ಆರು ವರ್ಷದಿಂದ ಮೂರು ವರ್ಷಗಳವರೆಗೆ ಕಡಿಮೆ ಮಾಡಲಾಗಿದೆ. ಗಂಭೀರ ತೆರಿಗೆ ವಂಚನೆ ಪ್ರಕರಣಗಳಲ್ಲಿ, ಒಂದು ವರ್ಷದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು, ಮೌಲ್ಯಮಾಪನ ಇದ್ದರೆ 10 ವರ್ಷಗಳವರೆಗೆ ಮತ್ತೆ ತೆರೆಯಬಹುದು. ಆದರೆ ಅದಕ್ಕೆ ಪ್ರಧಾನ ಮುಖ್ಯ ಆಯುಕ್ತರ ಅನುಮೋದನೆ ಪಡೆಯಬೇಕು.

ತೆರಿಗೆ ವ್ಯವಸ್ಥೆಯಲ್ಲಿ ದಾವೆ ಕಡಿಮೆ ಮಾಡುವ ಸರ್ಕಾರದ ಸಂಕಲ್ಪದ ಬಗ್ಗೆ ವಿವರಿಸಿರುವ ವಿತ್ತ ಸಚಿವರು, ಸರ್ಕಾರ ಘೋಷಿಸಿರುವ ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು. 2021 ರ ಜನವರಿ 30 ರವರೆಗೆ, ಒಂದು ಲಕ್ಷ ಹತ್ತು ಸಾವಿರ ತೆರಿಗೆ ಪಾವತಿದಾರರು 85 ಸಾವಿರ ಕೋಟಿ ರೂ.ಗಳ ವಿವಾದ ಪರಿಹಾರಕ್ಕೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಣ್ಣ ತೆರಿಗೆ ಪಾವತಿದಾರರ ಮೊಕದ್ದಮೆಯನ್ನು ಮತ್ತಷ್ಟು ಕಡಿಮೆ ಮಾಡಲು, ವಿವಾದ ಪರಿಹಾರ ಸಮಿತಿಯನ್ನು ರಚಿಸಲು ಸಚಿವರು ಪ್ರಸ್ತಾಪಿಸಿದರು. 50 ಲಕ್ಷ ರೂ.ವರೆಗಿನ ಆದಾಯ ಮತ್ತು ವಿವಾದಿತ ಆದಾಯ 10 ಲಕ್ಷ ರೂ. ವರೆಗಿನವರು ಸಮಿತಿಯನ್ನು ಸಂಪರ್ಕಿಸಲು ಅರ್ಹರು. ರಾಷ್ಟ್ರೀಯ ಮುಖಾಮುಖಿ ರಹಿತ ಆದಾಯ ತೆರಿಗೆ ಮೇಲ್ಮನವಿ ಟಿಬ್ಯುನಲ್ ಸ್ಥಾಪಿಸುವುದಾಗಿಯೂ ಅವರು ಘೋಷಿಸಿದರು.

ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಮತ್ತು ಬಹುತೇಕ ಎಲ್ಲ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿ ಮಾಡುವ ವ್ಯಕ್ತಿಯ ಅನುಸರಣೆ ಹೊರೆ ಕಡಿಮೆ ಮಾಡಲು, ತಮ್ಮ ವಹಿವಾಟಿನ 95 ಪ್ರತಿಶತವನ್ನು ಡಿಜಿಟಲ್ ರೂಪದಲ್ಲಿ ಕೈಗೊಳ್ಳುವ ವ್ಯಕ್ತಿಗಳಿಗೆ ತೆರಿಗೆ ಲೆಕ್ಕಪರಿಶೋಧನೆಯ ಮಿತಿಯನ್ನು ರೂ. 5 ಕೋಟಿಯಿಂದ ರೂ. 10 ಕೋಟಿಗೆ ಹೆಚ್ಚಿಸಲಾಗಿದೆ.

ಮೂಲಸೌಕರ್ಯ ಕ್ಷೇತ್ರಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು, ಖಾಸಗಿ ನಿಧಿಯ ಮೇಲಿನ ನಿಷೇಧ, ವಾಣಿಜ್ಯ ಚಟುವಟಿಕೆಗಳ ಮೇಲಿನ ನಿರ್ಬಂಧ ಮತ್ತು ಮೂಲಸೌಕರ್ಯದಲ್ಲಿ ನೇರ ಹೂಡಿಕೆಗೆ ಸಂಬಂಧಿಸಿದ ಕೆಲವು ಷರತ್ತುಗಳನ್ನು ಸಡಿಲಿಸಲು ಬಜೆಟ್ ಪ್ರಸ್ತಾಪಿಸಿದೆ. ಶೂನ್ಯ ಕೂಪನ್ ಬಾಂಡ್‌ಗಳ ವಿತರಣೆಯಿಂದ ಮೂಲಸೌಕರ್ಯಗಳಿಗೆ ಧನಸಹಾಯವನ್ನು ಅನುಮತಿಸುವ ಸಲುವಾಗಿ, ತೆರಿಗೆ ದಕ್ಷ ಶೂನ್ಯ ಕೂಪನ್ ಬಾಂಡ್‌ಗಳನ್ನು ನೀಡುವ ಮೂಲಕ ಅಧಿಸೂಚಿತ ಮೂಲಸೌಕರ್ಯ ಸಾಲ ನಿಧಿಗಳು ಹಣವನ್ನು ಸಂಗ್ರಹಿಸಲು ಅರ್ಹರನ್ನಾಗಿ ಮಾಡಲು ಬಜೆಟ್ ಪ್ರಸ್ತಾಪಿಸಿದೆ.

ಗಿಫ್ಟ್ ನಗರದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವನ್ನು (ಐಎಫ್‌ಎಸ್‌ಸಿ) ಉತ್ತೇಜಿಸುವ ಸಲುವಾಗಿ, ಬಜೆಟ್ ಹೆಚ್ಚಿನ ತೆರಿಗೆ ಪ್ರೋತ್ಸಾಹವನ್ನು ಪ್ರಸ್ತಾಪಿಸಿದೆ

ಪಟ್ಟಿಮಾಡಿದ ಸೆಕ್ಯೂರಿಟಿಗಳಿಂದ ಬಂಡವಾಳ ಲಾಭದ ವಿವರಗಳು, ಲಾಭಾಂಶದ ಆದಾಯ ಮತ್ತು ಬ್ಯಾಂಕುಗಳು, ಅಂಚೆ ಕಚೇರಿ ಇತ್ಯಾದಿಗಳಿಂದ ಬರುವ ಬಡ್ಡಿಗಳ ವಿವರಗಳನ್ನು ಸಹ ಆದಾಯ ರಿಟರ್ನ್ಸ್ ನಲ್ಲಿ ಪೂರ್ವ ಭರ್ತಿ ಮಾಡಲು ಬಜೆಟ್ ಪ್ರಸ್ತಾಪಿಸಿದೆ. ವೇತನ ಆದಾಯ, ತೆರಿಗೆ ಪಾವತಿ, ಟಿಡಿಎಸ್ ಇತ್ಯಾದಿಗಳ ವಿವರಗಳು ಈಗಾಗಲೇ ಆದಾಯ ರಿಟರ್ನ್ಸ್ ನಲ್ಲಿ ಪೂರ್ವ ಭರ್ತಿಯಾಗಿವೆ.

ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿರುವ ಸಣ್ಣ ಚಾರಿಟಬಲ್ ಟ್ರಸ್ಟ್‌ನ ಅನುಸರಣೆ ಹೊರೆಯನ್ನು ಕಡಿಮೆ ಮಾಡಲು, ಈ ಟ್ರಸ್ಟ್‌ಗಳಿಗೆ ವಾರ್ಷಿಕ ರಶೀದಿಗಳ ಮಿತಿಯನ್ನು ಪ್ರಸ್ತುತ .1 ಕೋಟಿಯಿಂದ ರೂ. ನಿಂದ 5 ಕೋಟಿ ರೂ.ಗೆ ಹೆಚ್ಚಿಸಲಾಗುವುದು.

ಪರೋಕ್ಷ ತೆರಿಗೆ ಪ್ರಸ್ತಾಪಗಳು

ಪರೋಕ್ಷ ತೆರಿಗೆ ಪ್ರಸ್ತಾಪಗಳ ಕುರಿತು ಪ್ರಸ್ತಾಪಿಸುವಾಗ, ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹಿಸಲಾಗಿದೆ ಎಂದು ಸಚಿವರು ಹೇಳಿದರು. ಜಿಎಸ್‌ಟಿಯನ್ನು ಇನ್ನಷ್ಟು ಸರಳೀಕರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಜಿಎಸ್‌ಟಿಎನ್ ವ್ಯವಸ್ಥೆಯ ಸಾಮರ್ಥ್ಯವನ್ನು ಘೋಷಿಸಲಾಗಿದೆ. ತೆರಿಗೆ ತಪ್ಪಿಸುವವರಿಗೆ ಮತ್ತು ನಕಲಿ ಬಿಲ್ಲರ್‌ಗಳನ್ನು ಪತ್ತೆ ಮಾಡಲು ತೀವ್ರ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯನ್ನು ನಿಯೋಜಿಸಲಾಗಿದ್ದು, ಅವರ ವಿರುದ್ಧ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಜಿಎಸ್‌ಟಿಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ತೆರಿಗೆ ವೈಪರೀತ್ಯಗಳನ್ನು ತೆಗೆದುಹಾಕಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಸದನಕ್ಕೆ ಭರವಸೆ ನೀಡಿದರು.

ಕಸ್ಟಮ್ ಸುಂಕನೀತಿಯು, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಯನ್ನು ಸೇರಲು ಮತ್ತು ರಫ್ತು ಮಾಡಲು ಭಾರತಕ್ಕೆ ಸಹಾಯ ಮಾಡುವ ಅವಳಿ ಉದ್ದೇಶಗಳನ್ನು ಹೊಂದಿದೆ ಎಂದು ಹಣಕಾಸು ಸಚಿವರು ಹೇಳಿದರು. ಕಚ್ಚಾ ಸಾಮಗ್ರಿಗಳ ಸುಲಭ ಲಭ್ಯತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕಾಗಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಈ ವರ್ಷ ಕಸ್ಟಮ್ ಸುಂಕ ರಚನೆಯಲ್ಲಿರುವ 400 ಹಳೆಯ ವಿನಾಯಿತಿಗಳನ್ನು ಪರಿಶೀಲಿಸುವುದಾಗಿ ಅವರು ಪ್ರಸ್ತಾಪಿಸಿದ್ದಾರೆ. ವ್ಯಾಪಕವಾದ ಸಮಾಲೋಚನೆ ನಡೆಸಲಾಗುವುದು ಮತ್ತು 2021 ರ ಅಕ್ಟೋಬರ್ 1 ರಿಂದ ವಿರೂಪಗಳಿಲ್ಲದ ಪರಿಷ್ಕೃತ ಕಸ್ಟಮ್ ಸುಂಕವನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು. ಇನ್ನು ಮುಂದೆ ಯಾವುದೇ ಹೊಸ ಕಸ್ಟಮ್ ಸುಂಕ ವಿನಾಯಿತಿಗಳು ಅದರ ನೀಡಿದ  ದಿನಾಂಕದ 2 ವರ್ಷಗಳ ನಂತರ ಮಾರ್ಚ್ 31 ರವರೆಗೆ ಮಾನ್ಯತೆಯನ್ನು ಹೊಂದಿರುತ್ತವೆ ಎಂದು ಅವರು ಪ್ರಸ್ತಾಪಿಸಿದರು.

ಚಾರ್ಜರ್‌ಗಳ ಬಿಡಿ ಭಾಗಗಳು ಮತ್ತು ಮೊಬೈಲ್‌ಗಳ ಬಿಡಿ ಭಾಗಗಳ ಕೆಲವು ವಿನಾಯಿತಿಗಳನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಇದಲ್ಲದೆ, ಮೊಬೈಲ್‌ಗಳ ಕೆಲವು ಬಿಡಿ ಭಾಗಗಳು “ಶೂನ್ಯ”ದರದಿಂದ ಶೇಕಡಾ 2.5 ಕ್ಕೆ ಹೆಚ್ಚಾಗುತ್ತವೆ. ಮಿಶ್ರಲೋಹ ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನ ಸೆಮಿಸ್, ಫ್ಲಾಟ್ ಮತ್ತು ದೀರ್ಘ ಉತ್ಪನ್ನಗಳ ಮೇಲೆ ಕಸ್ಟಮ್ ಸುಂಕವನ್ನು ಏಕರೂಪವಾಗಿ ಶೇಕಡಾ 7.5 ಕ್ಕೆ ಇಳಿಸುವುದಾಗಿ ಅವರು ಘೋಷಿಸಿದರು. 2022 ರ ಮಾರ್ಚ್ 31 ರವರೆಗೆ ಸ್ಟೀಲ್ ಸ್ಕ್ರ್ಯಾಪ್ ಮೇಲಿನ ಸುಂಕಕ್ಕೆ ವಿನಾಯಿತಿ ನೀಡಲು ಸಚಿವರು ಪ್ರಸ್ತಾಪಿಸಿದರು.

ಮಾನವ ನಿರ್ಮಿತ ಜವಳಿಗಳಿಗೆ ಕಚ್ಚಾ ವಸ್ತುಗಳ ಒಳಹರಿವಿನ ಮೇಲಿನ ಸುಂಕವನ್ನು ತರ್ಕಬದ್ಧಗೊಳಿಸುವ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ ವಿತ್ತ ಸಚಿವರು, ಪಾಲಿಯೆಸ್ಟರ್ ಮತ್ತು ಇತರ ಮಾನವ ನಿರ್ಮಿತ ಬಟ್ಟೆಗಳಿಗೆ ಸಮನಾಗಿ ನೈಲಾನ್ ಅನ್ನೂ ತರುವುದಾಗಿ ಘೋಷಿಸಿದರು. ಕ್ಯಾಪ್ರೊಲ್ಯಾಕ್ಟಮ್, ನೈಲಾನ್ ಚಿಪ್ಸ್ ಮತ್ತು ನೈಲಾನ್ ಫೈಬರ್ ಮತ್ತು ನೂಲಿನ ಮೇಲಿನ ಬಿಸಿಡಿ ದರವನ್ನು ಶೇಕಡಾ 5 ಕ್ಕೆ ಇಳಿಸುವುದಾಗಿ ಪ್ರಕಟಿಸಿದ ಸಚಿವರು, ಇದು ಜವಳಿ ಉದ್ಯಮ, ಎಂಎಸ್‌ಎಂಇ ಮತ್ತು ರಫ್ತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸಲು ರಾಸಾಯನಿಕಗಳ ಮೇಲಿನ ಕಸ್ಟಮ್ಸ್ ಸುಂಕ ದರವನ್ನು ಸೂಕ್ತವಾಗಿ ನಿರ್ಣಯಿಸುವುದಾಗಿಯೂ ಅವರು ಘೋಷಿಸಿದರು. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ತರ್ಕಬದ್ಧಗೊಳಿಸುಚುದಾಗಿ ಸಚಿವರು ಘೋಷಿಸಿದರು.

ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸಲು ಸೌರ ಕೋಶಗಳು ಮತ್ತು ಸೌರ ಫಲಕಗಳ ಹಂತ ಹಂತದ ಉತ್ಪಾದನಾ ಯೋಜನೆಯನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಸೌರ ಇನ್ವರ್ಟರ್‌ಗಳ ಮೇಲಿನ ಸುಂಕವನ್ನು ಶೇಕಡ 5 ರಿಂದ 20 ಕ್ಕೆ ಮತ್ತು ಸೌರ ಲ್ಯಾಂಟರ್ನ್‌ಗಳ ಮೇಲೆ ಶೇ 5 ರಿಂದ 15 ಕ್ಕೆ ಹೆಚ್ಚಿಸುವುದಾಗಿ ಅವರು ಘೋಷಿಸಿದರು.

ದೇಶೀಯವಾಗಿ ಭಾರೀ ಬಂಡವಾಳ ಸಾಧನಗಳನ್ನು ತಯಾರಿಸುವಲ್ಲಿ ಅಪಾರ ಸಾಮರ್ಥ್ಯವಿದೆ ಮತ್ತು ದರ ರಚನೆಯನ್ನು ಸರಿಯಾದ ಸಮಯದಲ್ಲಿ ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು. ಆದಾಗ್ಯೂ, ಸುರಂಗ ಕೊರೆಯುವ ಯಂತ್ರ ಮತ್ತು ಕೆಲವು ವಾಹನ ಬಿಡಿ ಭಾಗಗಳನ್ನು ಒಳಗೊಂಡಂತೆ ಕೆಲವು ವಸ್ತುಗಳ ಮೇಲಿನ ಸುಂಕದ ದರದಲ್ಲಿ ಪರಿಷ್ಕರಣೆ ಮಾಡುವುದಾಗಿ ಅವರು ಘೋಷಿಸಿದರು.

ಎಂಎಸ್‌ಎಂಇಗಳಿಗೆ ಅನುಕೂಲವಾಗುವಂತೆ ಬಜೆಟ್ ನಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಉಕ್ಕಿನ ತಿರುಪುಗಳು, ಪ್ಲಾಸ್ಟಿಕ್ ಬಿಲ್ಡರ್ ಸರಕುಗಳು ಮತ್ತು ಸೀಗಡಿ ಆಹಾರಗಳ ಮೇಲಿನ ಸುಂಕವನ್ನು ಶೇ.15 ಕ್ಕೆ ಹೆಚ್ಚಿಸಲಾಗುತ್ತದೆ. ಉಡುಪುಗಳು, ಚರ್ಮ ಮತ್ತು ಕರಕುಶಲ ವಸ್ತುಗಳ ರಫ್ತುದಾರರಿಗೆ ಪ್ರೋತ್ಸಾಹಕವಾಗಿ ಸುಂಕ ರಹಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ವಿನಾಯಿತಿ ನೀಡುವಿಕೆಯನ್ನು ಇದು ಒದಗಿಸುತ್ತದೆ. ಕೆಲವು ರೀತಿಯ ಚರ್ಮದ ಆಮದಿನ ಮೇಲಿನ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲು ಮತ್ತು ಸಿದ್ಧಪಡಿಸಿದ ಸಂಶ್ಲೇಷಿತ ರತ್ನದ ಕಲ್ಲುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ರೈತರಿಗೆ ಅನುಕೂಲವಾಗುವಂತೆ, ಕಸ್ಟಮ್ ಸುಂಕವನ್ನು ಹತ್ತಿಯ ಮೇಲೆ ಶೇ,10 ಮತ್ತು ಕಚ್ಚಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಮೇಲೆ ಶೇ. 15 ಕ್ಕೆ ಏರಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಡಿನೇಚರ್ಡ್ ಈಥೈಲ್ ಆಲ್ಕೋಹಾಲ್ ಮೇಲಿನ ಅಂತಿಮವಾಗಿ ಬಳಕೆ ಆಧಾರಿತ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವುದಾಗಿಯೂ ಅವರು ಘೋಷಿಸಿದರು.

ಕಡಿಮೆ ಸಂಖ್ಯೆಯ ವಸ್ತುಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಅನ್ನು ಸಚಿವರು ಪ್ರಸ್ತಾಪಿಸಿದರು. "ಸೆಸ್ ಅನ್ನು ಅನ್ವಯಿಸುವಾಗ, ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನಾವು ಕಾಳಜಿ ವಹಿಸಿದ್ದೇವೆ" ಎಂದು ಅವರು ಹೇಳಿದರು.

ಕಾರ್ಯವಿಧಾನಗಳ ತರ್ಕಬದ್ಧಗೊಳಿಸುವಿಕೆ ಮತ್ತು ಅನುಸರಣೆಯನ್ನು ಸರಳಗೊಳಿಸುವ ಬಗ್ಗೆ ಹಣಕಾಸು ಸಚಿವರು, ಎಡಿಡಿ ಮತ್ತು ಸಿವಿಡಿ ಸುಂಕಗಳಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಕಸ್ಟಮ್ಸ್ ತನಿಖೆಯನ್ನು ಪೂರ್ಣಗೊಳಿಸಲು, ನಿರ್ದಿಷ್ಟ ಸಮಯದ ಗಡುವು ಸೂಚಿಸಲಾಗುತ್ತಿದೆ ಎಂದು ಅವರು ಹೇಳಿದರು. ಎಫ್‌ಟಿಎಗಳ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಲು 2020 ರಲ್ಲಿ ಟ್ಯುರಂಟ್ ಸುಂಕ ಉಪಕ್ರಮ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

***



(Release ID: 1694216) Visitor Counter : 2802