ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ಶಿವಸಾಗರದಲ್ಲಿ ಭೂರಹಿತರಿಗೆ ಭೂ ಹಂಚಿಕೆ ಹಕ್ಕುಪತ್ರಗಳನ್ನು ವಿತರಿಸಿದ ಪ್ರಧಾನಿ ನರೇಂದ್ರ ಮೋದಿ


ಸುಧಾರಿತ ಮೂಲಭೂತ ಸೌಕರ್ಯದಿಂದ ಅಸ್ಸಾಂ ಆತ್ಮನಿರ್ಭರ ಭಾರತದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ

Posted On: 23 JAN 2021 12:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂನ ಶಿವಸಾಗರದಲ್ಲಿ ಸ್ಥಳೀಯ ಭೂರಹಿತರಿಗೆ ಭೂಮಿ ಹಂಚಿಕೆ ಹಕ್ಕು ಪತ್ರಗಳನ್ನು ವಿತರಿಸಿದರು. ಅಸ್ಸಾಂ ಮುಖ್ಯಮಂತ್ರಿ, ಅಸ್ಸಾಂನ ಸಚಿವರು ಹಾಗೂ ಕೇಂದ್ರ ಸಚಿವರಾದ ಶ್ರೀ ರಾಮೇಶ್ವರ ತೆಲಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಸುಮಾರು ಒಂದು ಲಕ್ಷ ಅಸ್ಸಾಂ ಸ್ಥಳೀಯ ಕುಟುಂಬಗಳಿಗೆ ಭೂಮಿಯ ಹಕ್ಕು ನೀಡಲಾಗುತ್ತಿದೆ, ಹಾಗಾಗಿ ಶಿವಸಾಗರದ ಜನರ ಜೀವನದ ಪ್ರಮುಖ ಸಮಸ್ಯೆ ನಿವಾರಣೆಯಾದಂತಾಗಿದೆ ಎಂದರು. ಇಂದಿನ ಕಾರ್ಯಕ್ರಮ ಅಸ್ಸಾಂ ಸ್ಥಳೀಯ ಜನರ ಆತ್ಮಗೌರವ, ಸ್ವಾತಂತ್ರ್ಯ ಮತ್ತು ಸುರಕ್ಷತೆ ಜೊತೆ ಬೆಸೆದುಕೊಂಡಿದೆ ಎಂದು ಅವರು ಹೇಳಿದರು. ಶಿವಸಾಗರದ ಪ್ರಾಮುಖ್ಯತೆ ಎಂದರೆ ಅದು ದೇಶದಲ್ಲಿ ತ್ಯಾಗಕ್ಕೆ ಹೆಸರಾದ ಸ್ಥಳವಾಗಿದೆ. ಅಸ್ಸಾಂನ ಇತಿಹಾಸದಲ್ಲಿ ಶಿವಸಾಗರಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಕೇಂದ್ರ ಸರ್ಕಾರ ಶಿವಸಾಗರವನ್ನು ದೇಶದ ಐದು ಪ್ರಮುಖ ಪ್ರಾಚ್ಯವಸ್ತು ಸ್ಥಳಗಳ ಪಟ್ಟಿಗೆ ಸೇರಿಸಲು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ದೇಶ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪರಾಕ್ರಮ ದಿನದ ಅಂಗವಾಗಿ ದೇಶಾದ್ಯಂತ ಹಲವು ಕಾರ್ಯಕ್ರಮಗಳು ಇಂದು ನಡೆಯುತ್ತಿವೆ ಮತ್ತು ಇದು ನವಭಾರತ ನಿರ್ಮಾಣಕ್ಕೆ ಸ್ಫೂರ್ತಿಯನ್ನು ತುಂಬಲಿವೆ ಎಂದು ಹೇಳಿದರು. ನೇತಾಜಿ ಅವರ ಶೌರ್ಯ ಮತ್ತು ತ್ಯಾಗ ಸದಾ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದು ಅವರು ಹೇಳಿದರು. ಭೂಮಿಯ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಭಾರತರತ್ನ ಭೂಪೇನ್ ಹಜಾರಿಕಾ ಅವರ ಷಪ್ಟದಿಯಲ್ಲಿ ಹೀಗೆ ಪ್ರತಿಪಾದಿಸಿದರು.

 “ मुर धरित्री आई,

चोरोनोटे डिबा थाई,

खेतियोकोर निस्तार नाई,

माटी बिने ओहोहाई।

ಅದರ ಅರ್ಥ, ಭೂಮಿ ತಾಯಿ ನಿನ್ನ ಪಾದ ತಳದಲ್ಲಿ ನನಗೆ ಜಾಗ ನೀಡು, ನೀನಿಲ್ಲದೆ ರೈತ ಏನನ್ನು ಮಾಡಲು ಸಾಧ್ಯ. ಭೂಮಿ ಇಲ್ಲದೆ ಆತ ಅಸಹಾಯಕ.  

ಸ್ವಾತಂತ್ರ್ಯಾ ನಂತರ ಹಲವು ವರ್ಷಗಳೂ ಕಳೆದರೂ ಕೂಡ ಅಸ್ಸಾಂನ ಲಕ್ಷಾಂತರ ಕುಟುಂಬಗಳು ಭೂಮಿಯಿಂದ ವಂಚಿತವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಸೋನೋವಾಲ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರು ಲಕ್ಷಕ್ಕೂ ಅಧಿಕ ಬುಡಕಟ್ಟು ಜನರ ಭೂಮಿಯ ದಾಖಲೆ ಪತ್ರಗಳೇ ಇರಲಿಲ್ಲ ಎಂದು ಅವರು ಹೇಳಿದರು. ಸೋನೋವಾಲ್ ಸರ್ಕಾರದ ಹೊಸ ಭೂ ನೀತಿಯನ್ನು ಮತ್ತು ಅಸ್ಸಾಂನ ಜನರ ಬಗೆಗಿನ ಅದರ ಬದ್ಧತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭೂ ಗುತ್ತಿಗೆಯಿಂದಾಗಿ ಅಸ್ಸಾಂನ ಮೂಲವಾಸಿಗಳ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು. ಇದರಿಂದಾಗಿ ಲಕ್ಷಾಂತರ ಜನರು ಉತ್ತಮ ಜೀವನ ನಡೆಸಲು ಹಾದಿ ಸುಗಮವಾಗಿದೆ. ಇದೀಗ ಫಲಾನುಭವಿಗಳಿಗೆ ಭೂಮಿ ಹಕ್ಕು ನೀಡಿರುವುದರಿಂದ ಅವರು ಇತರೆ ಯೋಜನೆಗಳ ಪ್ರಯೋಜನ ಪಡೆಯುವುದು ಖಾತ್ರಿಯಾಗಿದೆ. ಮೊದಲು ಪಿಎಂ-ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ವಿಮಾ ನೀತಿಗಳಿಂದ ಅವರು ವಂಚಿತರಾಗಿದ್ದರು. ಅಷ್ಟೇ ಅಲ್ಲದೆ ಅವರು ಬ್ಯಾಂಕುಗಳಿಂದ ಸಾಲಗಳನ್ನು ಪಡೆಯಬಹುದಾಗಿದೆ.   

ಅಸ್ಸಾಂನ ಬುಡಕಟ್ಟು ವಾಸಿಗಳ ಸಾಮಾಜಿಕ ರಕ್ಷಣೆ ಮತ್ತು ಕ್ಷಿಪ್ರ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಸ್ಸಾಮಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅಂತೆಯೇ ಪ್ರತಿಯೊಂದು ಸಮುದಾಯದ ಶ್ರೇಷ್ಠ ವ್ಯಕ್ತಿತ್ವಗಳನ್ನು ಗೌರವಿಸಲಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆ ಇರುವ ಸ್ಥಳಗಳ, ವಸ್ತುಗಳ ಇತಿಹಾಸವನ್ನು ಸಂರಕ್ಷಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಹಾಗೂ ಒತ್ತುವರಿ ಮುಕ್ತಗೊಳಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.   

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಈಶಾನ್ಯ ಭಾರತ ಮತ್ತು ಅಸ್ಸಾಂನ ಕ್ಷಿಪ್ರ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸ್ವಾವಲಂಬಿ ಅಸ್ಸಾಂನ ಮಾರ್ಗ ಅಸ್ಸಾಂ ಜನರ ವಿಶ್ವಾಸದೊಂದಿಗೆ ಹಾದು ಹೋಗಬೇಕಿದೆ. ಮೂಲಸೌಕರ್ಯ ಉತ್ತಮಗೊಂಡು ಮೂಲ ಸೌಲಭ್ಯಗಳು ಲಭ್ಯವಾದಾಗ ಮಾತ್ರ ವಿಶ್ವಾಸ ವೃದ್ಧಿಯಾಗುತ್ತದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ವಲಯಗಳಲ್ಲಿ ಅಸ್ಸಾಂನಲ್ಲಿ ಹಿಂದೆಂದೂ ನಿರೀಕ್ಷಿಸದಷ್ಟು ಕೆಲಸ ಕಾರ್ಯಗಳಾಗಿವೆ. ಅಸ್ಸಾಂನಲ್ಲಿ 1.75 ಕೋಟಿ ಬಡವರು ಜನ್-ಧನ್ ಖಾತೆಗಳನ್ನು ತೆರೆದಿದ್ದಾರೆ. ಖಾತೆಗಳಿಂದಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಸಹಸ್ರಾರು ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಅಸ್ಸಾಂನ ಶೇ.40ರಷ್ಟು ಜನಸಂಖ್ಯೆ ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಪೈಕಿ 1.5 ಲಕ್ಷ ಜನರು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಅಸ್ಸಾಂನಲ್ಲಿ ಶೌಚಾಲಯಗಳ ಪ್ರಮಾಣ ಕಳೆದ ಆರು ವರ್ಷಗಳಲ್ಲಿ ಶೇ.38 ರಿಂದ ಶೇ.100ಕ್ಕೆ ಏರಿಕೆಯಾಗಿದೆ. ಐದು ವರ್ಷಗಳ ಹಿಂದೆ ಶೇ.50ಕ್ಕೂ ಕಡಿಮೆ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಿತ್ತು. ಇದೀಗ ಶೇ.100ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ಅಸ್ಸಾಂನಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ 2.5 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕ ಒದಗಿಸಲಾಗಿದೆ.

ಸೌಕರ್ಯಗಳಿಂದಾಗಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉಜ್ವಲ ಯೋಜನೆ ಅಡಿ 35 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದ್ದು, ಪೈಕಿ ನಾಲ್ಕು ಲಕ್ಷ ಎಸ್ ಸಿ/ಎಸ್ ಟಿ ವರ್ಗದವರು ಇದ್ದಾರೆ. 2014ರಲ್ಲಿ ಎಲ್ ಪಿಜಿ ಸಂಪರ್ಕ ಪ್ರಮಾಣ ಶೇ.40ರಷ್ಟಿತ್ತು. ಇದೀಗ ಪ್ರಮಾಣ ಶೇ.99ರಷ್ಟು ತಲುಪಿದೆ. 2014ರಲ್ಲಿ 330 ಇದ್ದ ಎಲ್ ಪಿಜಿ ವಿತರಕರ ಸಂಖ್ಯೆ ಇದೀಗ 576ಕ್ಕೆ ಏರಿಕೆಯಾಗಿದೆ. ಕೊರೊನಾ ಸಮಯದಲ್ಲಿ 50 ಲಕ್ಷಕ್ಕೂ ಅಧಿಕ ಉಚಿತ ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಉಜ್ವಲ ಯೋಜನೆ ಭಾಗದ ಮಹಿಳೆಯರ ಜೀವನ ಸುಲಭಗೊಳಿಸಿದೆ ಮತ್ತು ಹೊಸ ವಿತರಣಾ ಕೇಂದ್ರಗಳಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ.

ತಮ್ಮ ಸರ್ಕಾರದ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ಕಾರ ಅಭಿವೃದ್ಧಿಯ ಪ್ರಯೋಜನಗಳನ್ನು ಸಮಾಜದ ಎಲ್ಲ ವರ್ಗಕ್ಕೂ ತಲುಪಿಸುತ್ತಿದೆ ಎಂದರು. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಚಾಯ್ ಬುಡಕಟ್ಟು ವಾಸಿಗಳ ಸ್ಥಿತಿಗತಿ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಆದಿವಾಸಿಗಳ ಮನೆಗಳಿಗೆ ಶೌಚಾಲಯ ಸೌಕರ್ಯ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯ ಹಾಗೂ ಉದ್ಯೋಗಗಳನ್ನು ಒದಗಿಸಲಾಗುತ್ತಿದೆ. ಚಾಯ್ ಬುಡಕಟ್ಟು ಸದಸ್ಯರನ್ನು ಬ್ಯಾಂಕಿಂಗ್ ಸೌಕರ್ಯಗಳ ಜೊತೆ ಸಂಯೋಜಿಸಲಾಗಿದ್ದು, ಹಲವು ಯೋಜನೆಗಳ ನೇರ ಲಾಭ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ ಎಂದರು. ಬುಡಕಟ್ಟು ಸಮುದಾಯದ ಕೊಡುಗೆಯನ್ನು ಗುರುತಿಸಿ, ಸಮುದಾಯದ ನಾಯಕರಾದ ಕಾರ್ಮಿಕ ನಾಯಕ ಸಂತೋಷ್ ತೊಪ್ನೊ ಮತ್ತಿತರರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.   

ಅಸ್ಸಾಂನ ಪ್ರತಿಯೊಂದು ಪ್ರಾಂತ್ಯ ಶಾಂತಿಯ ಮತ್ತು ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ. ಇದಕ್ಕೆ ಕಾರಣ ಪ್ರತಿಯೊಂದು ಬುಡಕಟ್ಟು ಜನಾಂಗದವರನ್ನು ಒಟ್ಟಾಗಿ ಕೊಂಡೊಯ್ಯುತ್ತಿರುವ ಸರ್ಕಾರದ ನೀತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಐತಿಹಾಸಿಕ ಬೋಡೊ ಒಪ್ಪಂದದಿಂದಾಗಿ ಅಸ್ಸಾಂನ ಬಹುತೇಕ ಭಾಗ ಶಾಂತಿ ಮತ್ತು ಅಭಿವೃದ್ಧಿಯ ಹಾದಿಗೆ ಮರಳಿದೆ. ಪ್ರಧಾನಮಂತ್ರಿ ಅವರು, ಬೋಡೋಲ್ಯಾಂಡ್ ಭೌಗೋಳಿಕ ಮಂಡಳಿಯ ಪ್ರತಿನಿಧಿಗಳ ಇತ್ತೀಚಿನ ಚುನಾವಣೆಯನ್ನು ಉಲ್ಲೇಖಿಸಿ, ಇದರಿಂದಾಗಿ ಅಭಿವೃದ್ಧಿಗೆ ಹೊಸ ಆಯಾಮ ದೊರಕಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.  

ಪ್ರಧಾನಮಂತ್ರಿ ಅವರು, ಕಳೆದ ಆರು ವರ್ಷಗಳಲ್ಲಿ ಸಂಪರ್ಕ ಆಧುನೀಕರಣ ಮತ್ತು ಇತರೆ ಮೂಲಸೌಕರ್ಯ ವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಅಸ್ಸಾಂ ಮತ್ತು ಈಶಾನ್ಯ ಭಾಗ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಸಂಪರ್ಕವನ್ನು ವೃದ್ಧಿಸುವಲ್ಲಿ ಮಹತ್ವದ್ದಾಗಿದೆ. ಅಸ್ಸಾಂನಲ್ಲಿ ಮೂಲಸೌಕರ್ಯ ಸುಧಾರಿಸಿರುವುದರಿಂದ ಅದು ಆತ್ಮನಿರ್ಭರ ಭಾರತದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದರು. ಪ್ರಧಾನಮಂತ್ರಿ ಅವರು, ಅಸ್ಸಾಂನ ಗ್ರಾಮಗಳಲ್ಲಿ ಕೈಗೊಂಡಿರುವ 11 ಸಾವಿರ ಕಿ.ಮೀ. ಉದ್ದದ ರಸ್ತೆಗಳ ಪಟ್ಟಿಯನ್ನು ನೀಡಿದರು. ಡಾ. ಭೂಪೇನ್ ಹಝಾರಿಕಾ ಸೇತು, ಬೋಗಿಬೀಲ್ ಸೇತುವೆ, ಸರಾಯ್ ಘಾಟ್ ಸೇತುವೆ ಮತ್ತು ಇತರೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಹಾಗೂ ಇವುಗಳಿಂದ ಅಸ್ಸಾಂಗೆ ಸಂಪರ್ಕ ಬಲವರ್ಧನೆಗೊಳಿಸಲಾಗುತ್ತಿದೆ ಎಂದರು. ಹೆಚ್ಚುವರಿಯಾಗಿ ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ಗಳಿಗೆ ಜಲಮಾರ್ಗಗಳ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರೈಲು ಮತ್ತು ವಾಯು ಸಂಪರ್ಕ ವೃದ್ಧಿಯಿಂದಾಗಿ ಅಸ್ಸಾಂನಲ್ಲಿ ಕೈಗಾರಿಕಾ ಸ್ಥಿತಿಗತಿಗಳು ಉತ್ತಮಗೊಂಡು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಲೋಕಪ್ರಿಯ ಗೋಪಿನಾಥ್ ಬೋರ್ದೋಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಧುನಿಕ ಟರ್ಮಿನಲ್ ಮತ್ತು ಸುಂಕ ಅನುಮತಿ ಕೇಂದ್ರ ಸ್ಥಾಪಿಸಲಾಗಿದೆ, ಕೋಕ್ರಜಾರ್ ರೂಪ್ಸಿ ವಿಮಾನ ನಿಲ್ದಾಣ ಆಧುನೀಕರಣ, ಬೋನ್ ಗಯಿ ಗೌನ್ ನಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಹಬ್ ನಿರ್ಮಾಣ, ಅಸ್ಸಾಂನಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಶಕ್ತಿ ತುಂಬಿವೆ ಎಂದು ಹೇಳಿದರು.   

ದೇಶವನ್ನು ಅನಿಲ ಆಧಾರಿತ ಆರ್ಥಿಕತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅಸ್ಸಾಂ ಅತ್ಯಂತ ಪ್ರಮುಖ ಪಾಲುದಾರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಸ್ಸಾಂನಲ್ಲಿ ತೈಲ ಮತ್ತು ಅನಿಲ ಮೂಲಸೌಕರ್ಯ ವೃದ್ಧಿಗಾಗಿ 40 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ. ಗುವಾಹತಿ-ಬರೌನಿ ಅನಿಲ ಕೊಳವೆ ಮಾರ್ಗ ಈಶಾನ್ಯ ಮತ್ತು ಪೂರ್ವ ಭಾರತದ ನಡುವೆ ಸಂಪರ್ಕ ಬಲವರ್ಧನೆಗೊಳಿಸಲಿದೆ. ನುಮಾಲಿಗಢ್ ತೈಲ ಸಂಸ್ಕರಣಾಗಾರ ಜೈವಿಕ ಸಂಸ್ಕರಣಾ ಸೌಕರ್ಯವನ್ನು ವೃದ್ಧಿಸಿದೆ. ಇದರಿಂದಾಗಿ ಅಸ್ಸಾಂ ಎಥೆನಾಲ್ ನಂತಹ ಜೈವಿಕ ಇಂಧನ ಉತ್ಪಾದನೆಯಲ್ಲಿ ಪ್ರಮುಖ ರಾಜ್ಯವಾಗಲಿದೆ. ಏಮ್ಸ್ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗಳು ಸ್ಥಾಪನೆಯಾಗುತ್ತಿದ್ದು, ಇವು ಪ್ರದೇಶದಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ ಮತ್ತು ಭಾಗವನ್ನು ಆರೋಗ್ಯ ಮತ್ತು ಶೈಕ್ಷಣಿಕ ತಾಣವಾಗಿ ರೂಪುಗೊಳ್ಳಲಿದೆ ಎಂದು ಹೇಳುತ್ತಾ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1691561) Visitor Counter : 240