ಪ್ರಧಾನ ಮಂತ್ರಿಯವರ ಕಛೇರಿ

ಏಕತಾ ಪ್ರತಿಮೆಗೆ ನಿರಂತರ ರೈಲು ಸಂಪರ್ಕ ಒದಗಿಸುವ 8 ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ


ಗುಜರಾತ್‌ನ ಹಲವು ರೈಲ್ವೆ ವಲಯದ ಯೋಜನೆಗಳ ಉದ್ಘಾಟನೆ

ಎಂಜಿಆರ್ ಜಯಂತಿ ಅಂಗವಾಗಿ ಪ್ರಧಾನಿ ಗೌರವ ನಮನ ಸಲ್ಲಿಕೆ

ಕೆವಾಡಿಯಾ ವಿಶ್ವದಲ್ಲಿಯೇ ಅತಿದೊಡ್ಡ ಪ್ರವಾಸಿ ತಾಣವಾಗಿ ಅಭಿವೃದ್ಧಿ

ಭಾರತೀಯ ರೈಲ್ವೆ ಗುರಿ-ಕೇಂದ್ರೀತ ಪ್ರಯತ್ನದಿಂದ ಪರಿವರ್ತನೆ: ಪ್ರಧಾನಮಂತ್ರಿ

Posted On: 17 JAN 2021 1:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ನಾನಾ ಭಾಗಗಳಿಂದ ಗುಜರಾತ್ ಕೆವಾಡಿಯಾಗೆ ಸಂಪರ್ಕ ಕಲ್ಪಿಸುವ 8 ರೈಲುಗಳ ಸಂಚಾರಕ್ಕೆ ಹಸಿರುನಿಶಾನೆ ತೋರಿದರು. ರೈಲುಗಳೂ ಏಕತಾಮೂರ್ತಿ ಇರುವ ಸ್ಥಳಕ್ಕೆ ನಿರಂತರ ಸಂಪರ್ಕ ಸೌಕರ್ಯವನ್ನು ಒದಗಿಸಲಿವೆ. ಅಲ್ಲದೆ ಪ್ರಧಾನಮಂತ್ರಿ ಅವರು, ದಾಬೋಯ್-ಚಂದೋಡ್ ಬ್ರಾಡ್ ಗೇಜ್ ರೈಲುಮಾರ್ಗ, ಚಂದೋಡ್-ಕೆವಾಡಿಯಾ ಹೊಸ ಬ್ರಾಡ್ ಗೇಜ್ ರೈಲುಮಾರ್ಗ, ಹೊಸದಾಗಿ ವಿದ್ಯುದೀಕರಣ ಮಾಡಿರುವ ಪ್ರತಾಪ್ ನಗರ-ಕೆವಾಡಿಯಾ ವಲಯ ವಿಭಾಗ ಹಾಗೂ ದಾಬೋಯ್, ಚಂದೋಡ್ ಮತ್ತು ಕೆವಾಡಿಯಾದ ಹೊಸ ನಿಲ್ದಾಣಗಳ ಕಟ್ಟಡಗಳನ್ನು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ನಾನಾ ಭಾಗಗಳಿಂದ ಒಂದೇ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಹಲವು ರೈಲುಗಳಿಗೆ ಹಸಿರುನಿಶಾನೆ ತೋರಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಏಕತಾ ಮೂರ್ತಿಯ ಜಾಗವಿರುವ ಕೆವಾಡಿಯಾ ಸ್ಥಳದ ಪ್ರಾಮುಖ್ಯತೆ ಮತ್ತು ಸರ್ದಾರ್ ಸರೋವರ ಇದಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದರು. ಇಂದಿನ ಕಾರ್ಯಕ್ರಮ ರೈಲ್ವೆಯ ದೂರದೃಷ್ಟಿ ಮತ್ತು ಸರ್ದಾರ್ ಪಟೇಲ್ ಅವರ ಮುಂದಾಲೋಚನೆಯ ಪ್ರತೀಕವಾಗಿದೆ ಎಂದು ಹೇಳಿದರು.

ಪುರುಚಿ ತಲೈವಾರ್ ಡಾ. ಎಂ.ಜಿ. ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಕೆವಾಡಿಯಾಗೆ ಹೊರಟಿರುವ ಒಂದು ರೈಲನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತರತ್ನ ಎಂಜಿಆರ್ ಅವರ ಜನ್ಮವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುವುದು ಎಂದರು. ಪ್ರಧಾನಮಂತ್ರಿ ಅವರು, ಎಂಜಿಆರ್ ಸಿನಿಮಾ ಕ್ಷೇತ್ರದಲ್ಲಿ ಮತ್ತು ರಾಜಕೀಯ ವೇದಿಕೆಯಲ್ಲಿ ನೀಡಿರುವ ಕೊಡುಗೆಗಳನ್ನು ಪ್ರಶಂಸಿಸಿದರು. ಎಂಜಿಆರ್ ಅವರ ರಾಜಕೀಯ ಪಯಣ ಬಡವರಿಗಾಗಿ ಮೀಸಲಾಗಿತ್ತು ಮತ್ತು ಶೋಷಿತರು ಗೌರವಯುತ ಬಾಳ್ವೆ ನಡೆಸುವಂತಾಗಬೇಕು ಎಂದು ಅವರಿಗಾಗಿ ಅಹರ್ನಿಶಿ ದುಡಿದಿದ್ದರು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ನಾವೆಲ್ಲರೂ ಅವರ ಆದರ್ಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ, ಚೆನ್ನೈನ ಕೇಂದ್ರ ರೈಲು ನಿಲ್ದಾಣವನ್ನು ಎಂಜಿಆರ್ ನಿಲ್ದಾಣವನ್ನಾಗಿ ಮರು ನಾಮಕರಣ ಮಾಡಿದ್ದನ್ನು ಪ್ರಧಾನಮಂತ್ರಿ ಅವರು ನೆನಪು ಮಾಡಿಕೊಂಡರು.

ಕೆವಾಡಿಯಾದಿಂದ ಚೆನ್ನೈ, ವಾರಾಣಸಿ, ರೆವಾ, ದಾದರ್ ಮತ್ತು ದೆಹಲಿ ನಡುವೆ ಹೊಸದಾಗಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದ ಅವರು, ಅದರ ಜೊತೆಗೆ ಪ್ರತಾಪ್ ನಗರ ಮತ್ತು ಕೆವಾಡಿಯಾ ನಡುವೆ ಮೆಮು ಸೇವೆಗಳು ಹಾಗೂ ಚಂದೋಡ್-ಕೆವಾಡಿಯಾ ನಡುವಿನ ಹೊಸ ಮಾರ್ಗ ಕೆವಾಡಿಯಾದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರಿಂದ ಪ್ರವಾಸಿಗರು ಹಾಗೂ ಸ್ಥಳೀಯ ಆದಿವಾಸಿಗಳಿಗೆ ಪ್ರಯೋಜನವಾಗಲಿದೆ ಮತ್ತು ಸ್ವಯಂ ಉದ್ಯೋಗ ಹಾಗೂ ಉದ್ಯೋಗದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು. ರೈಲ್ವೆ ಮಾರ್ಗ ನರ್ಮದಾ ನದಿ ತಟದ ಕರ್ನಾಲಿ, ಪೊಯಿಚಾ ಮತ್ತು ಗುರುದೇಶ್ವರ್ ಪವಿತ್ರ ಸ್ಥಳಗಳಿಗೆ ಸಂಪರ್ಕ ಒದಗಿಸಲಿದೆ ಎಂದರು.

ಕೆವಾಡಿಯಾದ ಅಭಿವೃದ್ಧಿಗಾಥೆ ಮುಂದುವರಿಯಲಿದೆ ಎಂದು ಪ್ರಧಾನಮಂತ್ರಿ ಅವರು, ಕೆವಾಡಿಯಾ ಒಂದು ಕುಗ್ರಾಮ ಪ್ರದೇಶದ ಒಂದು ಸಣ್ಣ ವಿಭಾಗವಾಗಿ ಉಳಿದಿಲ್ಲ. ಅದು ಇದೀಗ ವಿಶ್ವದ ಅತಿ ದೊಡ್ಡ ಪ್ರವಾಸಿ ತಾಣವಾಗಿ ರೂಪುಗೊಂಡಿದೆ ಎಂದು ಹೇಳಿದರು. ಏಕತಾ ಮೂರ್ತಿ ಅಮೆರಿಕದ ಲಿಬರ್ಟಿ ಸ್ಟ್ಯಾಚೂಗಿಂತ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೂರ್ತಿ ರಾಷ್ಟ್ರಕ್ಕೆ ಸಮರ್ಪಿಸಿದ ನಂತರ 50 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ ಮತ್ತು ಕೊರೋನಾದ ಕೆಲವು ತಿಂಗಳು ಅದನ್ನು ಮುಚ್ಚಿದ ನಂತರ ಇನ್ನೂ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ಸಂಪರ್ಕ ಸುಧಾರಿಸಿದ ನಂತರ ಪ್ರತಿ ದಿನ ಕೆವಾಡಿಯಾಗೆ ಸುಮಾರು ಒಂದು ಲಕ್ಷ ಜನ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕೆವಾಡಿಯಾ ಯೋಜಿತ ಆರ್ಥಿಕ ಹಾಗೂ ಪರಿಸರ ಅಭಿವೃದ್ಧಿಗೆ ಉತ್ತಮ ಉದಾಹರಣೆಯಾಗಿದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಆರಂಭದಲ್ಲಿ ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಪ್ರಸ್ತಾಪಿಸಿದ್ದಾಗ ಅದು ಅಪೀಮು ಸೇವಿಸುವವನ ಕನಸು ಎಂಬಂತೆ ಪರಿಗಣಿಸಲ್ಪಟ್ಟಿತ್ತು. ಹಿಂದಿನ ಸಂಶಯದ ಮನೋಭಾವದ ಕಾರ್ಯಶೈಲಿಯಲ್ಲಿ ಯಾವುದೇ ರಸ್ತೆ ಸಂಪರ್ಕವಿಲ್ಲದೆ, ಬೀದಿ ದೀಪಗಳಿಲ್ಲದೆ, ರೈಲು ಸಂಪರ್ಕವಿಲ್ಲದೆ, ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಜಾಗವಿರಲಿಲ್ಲ. ಆದರೆ ಇದೀಗ ಕೆವಾಡಿಯಾ ಎಲ್ಲ ಸೌಕರ್ಯಗಳಿರುವ ಸಂಪೂರ್ಣ ಫ್ಯಾಮಿಲಿ ಪ್ಯಾಕೇಜ್ ಆಗಿ ಪರಿವರ್ತನೆಗೊಂಡಿದೆ. ಇಲ್ಲಿನ ಆಕರ್ಷಣೆಗಳೆಂದರೆ ವೈಭವದ ಏಕತಾ ಮೂರ್ತಿ, ಸರ್ದಾರ್ ಸರೋವರ, ಬೃಹತ್ ಸರ್ದಾರ್ ಪಟೇಲ್ ಜೈವಿಕ ಉದ್ಯಾನವನ, ಆರೋಗ್ಯವನ ಮತ್ತು ಜಂಗಲ್ ಸಫಾರಿ ಹಾಗೂ ಪೋಷಣ್ ಪಾರ್ಕ್. ಅಲ್ಲದೆ ಇಲ್ಲಿ ಗ್ಲೋ ಗಾರ್ಡನ್, ಏಕತಾ ಕ್ರೂಸ್ ಮತ್ತು ಜಲಕ್ರೀಡೆಗಳು ಇವೆ. ಪ್ರವಾಸೋದ್ಯಮ ಹೆಚ್ಚಾಗುತ್ತಿರುವಂತೆಯೇ ಆದಿವಾಸಿ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಸ್ಥಳೀಯ ಜನರಿಗೆ ಆಧುನಿಕ ಮೂಲಸೌಕರ್ಯ ಲಭ್ಯವಾಗುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಏಕತಾ ಮಾಲ್ ನಲ್ಲಿ ಸ್ಥಳೀಯ ಕರಕುಶಲ ಉತ್ಪನ್ನಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಆದಿವಾಸಿ ಗ್ರಾಮಗಳಲ್ಲಿ ಸುಮಾರು 200 ಕೋಣೆಗಳು ಹೋಮ್ ಸ್ಟೇಗಳಾಗಿ ಪರಿವರ್ತನೆಗೊಂಡಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಪ್ರಧಾನಮಂತ್ರಿ ಅವರು, ಕೆವಾಡಿಯಾ ನಿಲ್ದಾಣದ ಕುರಿತು ಮಾತನಾಡುತ್ತಾ ಅದನ್ನು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಅದರಲ್ಲಿ ಬುಡಕಟ್ಟು ಕಲಾ ಗ್ಯಾಲರಿ ಮತ್ತು ಏಕತಾ ಮೂರ್ತಿಯನ್ನು ನೋಡಿ ಕಣ್ತುಂಬಿಕೊಳ್ಳುವ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಲಾಗಿದೆ ಎಂದರು.

ಭಾರತೀಯ ರೈಲ್ವೆ, ಗುರಿ ಕೇಂದ್ರಿತ ಪ್ರಯತ್ನಗಳ ಮೂಲಕ ಭಾರೀ ಪರಿವರ್ತನೆಯನ್ನು ತರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ರೈಲ್ವೆ ಪ್ರಯಾಣಿಕರು ಮತ್ತು ಸರಕು ಸಾಗಾಣೆಯ ಸಾಂಪ್ರದಾಯಿಕ ಪಾತ್ರನಿರ್ವಹಣೆಯಷ್ಟೇ ಅಲ್ಲದೆ, ರೈಲ್ವೆ, ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತಿದೆ ಎಂದರು. ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಸೇರಿದಂತೆ ಹಲವು ಮಾರ್ಗಗಳಲ್ಲಿ ಆಕರ್ಷಕವಿಸ್ತಾ-ಡೋಮ್ ಕೋಚ್ಗಳ ಸಂಚಾರ ಆರಂಭಿಸಿದೆ ಎಂದು ಹೇಳಿದರು.

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಮನೋಭಾವವೇ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದೆ ಹಾಲಿ ಸಂಚರಿಸುತ್ತಿದ್ದ ಮೂಲಸೌಕರ್ಯಕ್ಕಷ್ಟೇ ಗಮನ ಕೇಂದ್ರೀಕರಿಸಲಾಗುತ್ತಿತ್ತು ಮತ್ತು ಹೊಸ ತಂತ್ರಜ್ಞಾನ ಅಥವಾ ಹೊಸ ಆಲೋಚನೆಗಳಿಗೆ ಕನಿಷ್ಠ ಗಮನವನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮನೋಭಾವ ಸಂಪೂರ್ಣವಾಗಿ ಬದಲಾಗಿದೆ. ಇಡೀ ರೈಲ್ವೆ ವ್ಯವಸ್ಥೆಯಲ್ಲಿ ಸಮಗ್ರ ಪರಿವರ್ತನೆಯಾಗುತ್ತಿದೆ ಹಾಗೂ ಬದಲಾವಣೆಗಳು ಕೇವಲ ಬಜೆಟ್ ಹಾಗೂ ಹೊಸ ರೈಲುಗಳ ಘೋಷಣೆಗಷ್ಟೇ ಸೀಮಿತವಾಗಿಲ್ಲ ಎಂದು ಹೇಳಿದರು. ಪ್ರಧಾನಮಂತ್ರಿ ಅವರು, ಕೆವಾಡಿಯಾಗೆ ಸಂಪರ್ಕ ಕಲ್ಪಿಸುವ ಪ್ರಸಕ್ತ ಯೋಜನೆಯ ಉದಾಹರಣೆಯನ್ನು ನೀಡಿ, ಬಹು ಆಯಾಮದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದ ಕಾರಣ ದಾಖಲೆಯ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ ಎಂದರು.

ಹಿಂದಿದ್ದ ಮನೋಭಾವ ಬದಲಾಗಿರುವುದಕ್ಕೆ ನಿರ್ದಿಷ್ಟ ಸರಕು ಕಾರಿಡಾರ್ ಅಭಿವೃದ್ಧಿ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಅವರು ಇತ್ತೀಚೆಗೆ ಪೂರ್ವ ಮತ್ತು ಪಶ್ಚಿಮ ನಿರ್ದಿಷ್ಟ ಸರಕು ಕಾರಿಡಾರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಯೋಜನೆ ಪ್ರಗತಿಯಲ್ಲಿದ್ದು, 2006-2014 ವರೆಗೆ ಕಾರ್ಯ ಕೇವಲ ಕಾಗದಗಳ ಮೇಲಿತ್ತು ಮತ್ತು ಒಂದು ಕಿಲೋಮೀಟರ್ ಕೂಡ ಹಳಿ ನಿರ್ಮಾಣವಾಗಿರಲಿಲ್ಲ. ಆದರೆ ಇದೀಗ ಇನ್ನು ಕೆಲವೇ ದಿನಗಳಲ್ಲಿ 1100 ಕಿ.ಮೀ. ಮಾರ್ಗದ ಅಭಿವೃದ್ಧಿ ಪೂರ್ಣಗೊಳ್ಳಲಿದೆ.

ದೇಶದಲ್ಲಿ ಸಂಪರ್ಕವಿಲ್ಲದ ಭಾಗಗಳಿಗೆ ಸಂಪರ್ಕಗಳನ್ನು ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ರಾಡ್ ಗೇಜ್ ಪರಿವರ್ತನೆ ಮತ್ತು ರೈಲ್ವೆ ವಿದ್ಯುದೀಕರಣ ಕಾರ್ಯಕ್ಕೆ ವೇಗ ದೊರೆತಿದೆ ಮತ್ತು ರೈಲ್ವೆ ಹಳಿಗಳನ್ನು ಅಧಿಕ ವೇಗಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ. ಇದರಿಂದಾಗಿ ಸೆಮಿ ಹೈಸ್ಪೀಡ್ ರೈಲುಗಳ ಸಂಚಾರವನ್ನು ಆರಂಭಿಸಲು ಸಾಧ್ಯವಾಗಿದೆ ಮತ್ತು ನಾವು ಇದೀಗ ಹೈಸ್ಪೀಡ್ ಸಾಮರ್ಥ್ಯಗಳನ್ನು ಹೊಂದುವತ್ತ ಮುನ್ನಡೆದಿದ್ದೇವೆ, ಇದಕ್ಕಾಗಿ ಬಜೆಟ್ ಪ್ರಮಾಣ ಹಲವು ಪಟ್ಟು ಹೆಚ್ಚಳವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಅಲ್ಲದೆ ರೈಲ್ವೆ ಈಗಲೂ ಪರಿಸರ ಸ್ನೇಹಿಯಾಗಿ ಉಳಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆವಾಡಿಯಾ ರೈಲು ನಿಲ್ದಾಣ ಭಾರತದ ಮೊದಲ ಹಸಿರು ಕಟ್ಟಡ ಪ್ರಮಾಣೀಕರಣ ಹೊಂದಿದ ರೈಲು ನಿಲ್ದಾಣವಾಗಿದೆ ಎಂದರು.

ರೈಲ್ವೆಗೆ ಸಂಬಂಧಿಸಿದ ಉತ್ಪಾದನೆ ಮತ್ತು ತಂತ್ರಜ್ಞಾನದಲ್ಲಿ ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಮತ್ತು ಅದರಿಂದ ಇದೀಗ ಉತ್ತಮ ಫಲಿತಾಂಶ ಲಭ್ಯವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಸ್ಥಳೀಯವಾಗಿ ಅಧಿಕ ಶಕ್ತಿಯ ವಿದ್ಯುನ್ಮಾನ ಲೋಕೊಮೋಟಿವ್ ಗಳನ್ನು ಉತ್ಪಾದಿಸುತ್ತಿರುವುದರಿಂದ ಭಾರತ ವಿಶ್ವದ ಮೊದಲ ಡಬಲ್ ಡೆಕ್ಕರ್ ಸರಕು ಸಾಗಾಣೆ ರೈಲುಗಳನ್ನು ಸಂಚರಿಸಲು ಸಾಧ್ಯವಾಗಿದೆ ಎಂದರು. ಇಂದು ದೇಶದಲ್ಲೇ ಉತ್ಪಾದಿಸಿರುವ ಆಧುನಿಕ ಸರಣಿ ರೈಲುಗಳು ಭಾರತೀಯ ರೈಲ್ವೆಯ ಭಾಗವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ರೈಲ್ವೆ ಪರಿವರ್ತನೆಯ ಅಗತ್ಯತೆಗಳನ್ನು ಪೂರೈಸಲು ಕೌಶಲ್ಯಹೊಂದಿದ ಪರಿಣಿತ ಮಾನವ ಸಂಪನ್ಮೂಲ ಮತ್ತು ವೃತ್ತಿಪರರ ಅವಶ್ಯಕತೆ ಇದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅಗತ್ಯತೆಯನ್ನು ಪೂರೈಸಲು ವಡೋದರದಲ್ಲಿ ಡೀಮ್ಡ್ ರೈಲ್ವೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಇಂತಹ ಸಂಸ್ಥೆಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಸಹ ಒಂದಾಗಿದೆ. ರೈಲು ಸಾರಿಗೆಗೆ ಆಧುನಿಕ ಮೂಲಸೌಕರ್ಯ, ಬಹು ಆಯಾಮದ ಸಂಶೋಧನೆ, ತರಬೇತಿ ಸೇರಿದಂತೆ ಎಲ್ಲ ಆಧುನಿಕ ಸೌಕರ್ಯಗಳು ಇಲ್ಲಿ ಲಭ್ಯವಿವೆ. ರೈಲ್ವೆಯ ಸದ್ಯದ ಮತ್ತು ಭವಿಷ್ಯದ ಬೇಡಿಕೆಗಳನ್ನು ಪೂರೈಸಲು 20 ರಾಜ್ಯಗಳ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗುವುದು. ಇದರಿಂದಾಗಿ ಆವಿಷ್ಕಾರ ಹಾಗೂ ಸಂಶೋಧನೆಗಳ ಮೂಲಕ ರೈಲ್ವೆ ಆಧುನೀಕರಣಕ್ಕೆ ಸಹಾಯಕವಾಗಲಿದೆ ಎಂದು ಹೇಳಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1689543) Visitor Counter : 139