ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್-19 ಸ್ಥಿತಿಗತಿ ಕುರಿತು ದೆಹಲಿ ಎನ್ ಸಿಟಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅವರಿಂದ ಪರಾಮರ್ಶೆ

Posted On: 02 NOV 2020 4:20PM by PIB Bengaluru

ಕೋವಿಡ್-19 ಸ್ಥಿತಿಗತಿ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಭಲ್ಲಾ ಅವರು ನಿರಂತರ ಸಮಾಲೋಚನಾ ಪ್ರಕ್ರಿಯೆಲ್ಲಿ ಭಾಗಿಯಾಗಿ ದೆಹಲಿಯಲ್ಲಿ ಪರಿಶೀಲನಾ ಸಭೆ ನಡೆಸಿದರು.

ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕರು, ಮುಖ್ಯ ಕಾರ್ಯದರ್ಶಿ ಮತ್ತು ದೆಹಲಿ ಎನ್ ಸಿಟಿ ಆಡಳಿತದ ಹಿರಿಯ ಅಧಿಕಾರಿಗಳು(ಜಿಎನ್ ಸಿಟಿಡಿ) ಮತ್ತು ದೆಹಲಿ ಪೊಲೀಸ್ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೆಹಲಿಯಲ್ಲಿನ ಕೋವಿಡ್-19 ಸದ್ಯದ ಸ್ಥಿತಿಗತಿ ಕುರಿತು ಜಿಎನ್ ಸಿಟಿಡಿ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿದರು. ಸದ್ಯ ಅಲ್ಲಿ ಮೂರನೇ ಹಂತದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. ಹೊಸ ಕೋವಿಡ್ ಸೋಂಕು ಪ್ರಕರಣಗಳು ಮತ್ತು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಆಡಳಿತ, ಸೋಂಕು ಪತ್ತೆ ಪರೀಕ್ಷೆ, ಸಂಪರ್ಕ ಪತ್ತೆ ಮತ್ತು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇತ್ತೀಚೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಹಬ್ಬದ ಋತು ಕಾರಣ. ಹಬ್ಬದ ಸಮಯದಲ್ಲಿ ಹೆಚ್ಚಿನ ಜನರ ಸಂಚಾರ, ಸುರಕ್ಷಿತ ಕೋವಿಡ್ ನಡವಳಿಕೆಯ ನಿಯಮಗಳಲ್ಲಿ ನಿರ್ಲಕ್ಷ್ಯತೆ ಕಾರಣ ಎಂದು ಹೇಳಲಾಗುತ್ತಿದೆ. ಆದರೂ ಸಹ ಆಸ್ಪತ್ರೆ ಹಾಸಿಗೆ ಸ್ಥಿತಿಗತಿ ಸಮರ್ಪಕ ರೀತಿಯಲ್ಲಿದ್ದು, ಶೇ.57ರಷ್ಟು ಅಂದರೆ 15,789 ನಿರ್ದಿಷ್ಟ ಹಾಸಿಗೆಗಳು ಖಾಲಿ ಇವೆ. ಆದರೂ ಜಿಎನ್ ಸಿಟಿಡಿ ಅಧಿಕಾರಿಗಳು ಮತ್ತು ದೆಹಲಿ ಪೊಲೀಸ್ ಆಯುಕ್ತರು ನಿಯಮ ಜಾರಿ ಮತ್ತು ಜಾಗೃತಿ ಹೆಚ್ಚಳಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಕಾರ್ಯತಂತ್ರಕ್ಕಾಗಿ ವಿಶೇಷವಾಗಿ ಹಬ್ಬದ ಋತುಮಾನ ಹಾಗೂ ತಾಪಮಾನ ಇಳಿಕೆಯಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿನಿಧಿಗಳು ಮತ್ತು ತಜ್ಞರು ಸಭೆಯಲ್ಲಿ ಸುದೀರ್ಘವಾಗಿ ಸಮಾಲೋಚಿಸಿದರು. ಕೆಲವು ಪ್ರಮುಖ ವಲಯಗಳಲ್ಲಿ ನಿರ್ದಿಷ್ಟ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ಧರಿಸಲಾಯಿತು, ಅವುಗಳೆಂದರೆ ಸೂಕ್ಷ್ಮ ಮತ್ತು ಗಂಭೀರ ವಲಯಗಳಾದ ರೆಸ್ಟೋರೆಂಟ್, ಮಾರುಕಟ್ಟೆ ತಾಣ, ಕಟಿಂಗ್ ಶಾಪ್/ ಸಲೂನ್ ಮತ್ತಿತರ ಕಡೆ ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವುದು ಸೇರಿದೆ. ಜೊತೆಗೆ ಹಾಸಿಗೆಗಳು, ಐಸಿಯು ಸಹಿತ ವೈದ್ಯಕೀಯ ಸಂಪನ್ಮೂಲಗಳ ಲಭ್ಯತೆಯನ್ನು ವೃದ್ಧಿಸುವುದು. ಮುನ್ನೆಚ್ಚರಿಕೆ ಕ್ರಮವಾಗಿ ವೆಂಟಿಲೇಟರ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು. ಸಂಪರ್ಕ ಪತ್ತೆ ಹೆಚ್ಚಳ ಹಾಗೂ ಕ್ವಾರಂಟೈನ್ ಸಂಪರ್ಕಗಳ ನಿಗಾ ವ್ಯವಸ್ಥೆ ತೀವ್ರಗೊಳಿಸುವುದು, ಆ ಮೂಲಕ ಸೋಂಕು ಪ್ರಸರಣಕ್ಕೆ ತಡೆ ಹಾಕಲು ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಅಲ್ಲದೆ ಆಯ್ದ ಪ್ರದೇಶಗಳಲ್ಲಿ ನಿಯಮ ಜಾರಿಯನ್ನು ತೀವ್ರಗೊಳಿಸಲು ಹಾಗೂ ನಿರ್ದಿಷ್ಟ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ) ಅಭಿಯಾನಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ಗೃಹ ಐಸೋಲೇಷನ್ ನಲ್ಲಿರುವ ಎಲ್ಲ ಪ್ರಕರಣಗಳ ನಿಗಾ ಖಾತ್ರಿಪಡಿಸುವುದು ಮತ್ತು ಅಗತ್ಯಬಿದ್ದಾಗ ಅವರ ದೇಹಸ್ಥಿತಿ ಗಂಭೀರವಾಗುವ ಮುನ್ನ ಸಕಾಲಕ್ಕೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು ಸೇರಿದೆ. ಅಲ್ಲದೆ ಮೆಟ್ರೋ ಪ್ರಯಾಣವನ್ನು ನಿಯಮಿತವಾಗಿ ನಿರ್ಬಂಧಿಸಲು ಒತ್ತು ನೀಡುವುದು ಮತ್ತು ಈ ಸಂಬಂಧ ಹೊರಡಿಸಲಾಗಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಸಭೆಯನ್ನು ಮುಕ್ತಾಯಗೊಳಿಸಿದ ಗೃಹ ಕಾರ್ಯದರ್ಶಿ, ಜಿಎನ್ ಸಿಟಿಡಿ ಅಧಿಕಾರಿಗಳ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ದೆಹಲಿಯಲ್ಲಿ ಕೋವಿಡ್-19 ಸೋಂಕು ಹರಡದಂತೆ ನಿರ್ಬಂಧಿಸುವ ಕಾರ್ಯತಂತ್ರಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಅನುಷ್ಠಾನಗೊಳಿಸಬೇಕು ಎಂದರು. ಸುರಕ್ಷಿತ ಕೋವಿಡ್ ನಡವಳಿಕೆ ಕುರಿತು ದೆಹಲಿಯ ನಿವಾಸಿಗಳಿಗೆ ನಾಗರಿಕ ಕಲ್ಯಾಣ ಸಂಘಗಳು, ಮೊಹಲ್ಲಾ ಮತ್ತು ಮಾರುಕಟ್ಟೆ ಸಮಿತಿಗಳು, ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ, ಪೊಲೀಸ್ ವಾಹನಗಳ ಸಂದೇಶಗಳ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತು ನೀಡಬೇಕೆಂದು ಪ್ರತಿಪಾದಿಸಿದರು. ಮುಂದಿನ ವಾರ ದೆಹಲಿಯ ಸ್ಥಿತಿಗತಿಯನ್ನು, ರಾಷ್ಟ್ರೀಯ ರಾಜಧಾನಿ ಪ್ರದೇಶ ಎನ್ ಸಿಆರ್ ಸಹಿತ ಇತರೆ ಜಿಲ್ಲೆಗಳ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದರು.

***



(Release ID: 1669503) Visitor Counter : 228