ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ – ಕೇಂದ್ರ ಸಚಿವ ಡಾ. ಹರ್ಷವರ್ಧನ್ ಪ್ರತಿಪಾದನೆ

Posted On: 28 OCT 2020 5:05PM by PIB Bengaluru

ಆರೋಗ್ಯ ಮತ್ತು ಪರಿಸರದ ಮೇಲಿನ ಒತ್ತಡವನ್ನು ತಗ್ಗಿಸಲು, ವಿಶೇಷವಾಗಿ ಸಾಂಕ್ರಾಮಿಕದ ಸಂದರ್ಭಗಳಲ್ಲಿ ಬಯೋ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಸಚಿವ ಡಾ. ಹರ್ಷವರ್ಧನ್ ಪ್ರತಿಪಾದಿಸಿದ್ದಾರೆ. ಅವರ ಸಂದೇಶವನ್ನು ಇತ್ತೀಚಿನ ವೆಬಿನಾರ್ ನಲ್ಲಿ ಓದಲಾಯಿತು. 

“ಇಂದು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಅತ್ಯಂತ ಪ್ರಮುಖವಾದುದಾಗಿದೆ. ಈಗಾಗಲೇ ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಇರುವ ನಿಯಮ ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ” ಎಂದು ಅವರು ಹೇಳಿದರು. ಭಾರತೀಯ ವಾಟರ್ ಫೌಂಡೇಷನ್ (ಐಡಬ್ಲ್ಯೂಎಫ್) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್ಇಪಿ) ಭಾರತ ಸೇರಿದಂತೆ ಸದಸ್ಯ ರಾಷ್ಟ್ರಗಳ ಬೆಂಬಲಕ್ಕೆ ಜನರನ್ನು ರಕ್ಷಿಸಲು ಪರಿಸರ ಕಾರ್ಯತಂತ್ರದ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು. 

ಭಾರತೀಯ ವಾಟರ್ ಫೌಂಡೇಷನ್ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಬೆಂಬಲದೊಂದಿಗೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯ ಇತ್ತೀಚೆಗೆ ಜಂಟಿಯಾಗಿ ‘ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ದ್ರವರೂಪದ ತ್ಯಾಜ್ಯ ನಿರ್ವಹಣೆ ಭವಿಷ್ಯ; ಮುಂದಿನ ಹಾದಿ’? ಕುರಿತಂತೆ ಉನ್ನತ ಮಟ್ಟದ ವೆಬಿನಾರ್ ಆಯೋಜಿಸಿತ್ತು. ಈ ವೆಬಿನಾರ್ ನಲ್ಲಿ ದ್ರವರೂಪದ ತ್ಯಾಜ್ಯ ನಿರ್ವಹಣೆ ಭವಿಷ್ಯ ಮತ್ತು ವೈದ್ಯಕೀಯ ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆ ಬಗ್ಗೆ ಚರ್ಚೆಗೆ ವಿಶೇಷ ಒತ್ತು ನೀಡಲಾಗಿತ್ತು. 

ಇದರ ಮುಖ್ಯ ಉದ್ದೇಶ ಕೋವಿಡ್-19 ಸನ್ನಿವೇಶದಲ್ಲಿ ತ್ಯಾಜ್ಯದ ನಾನಾ ಆಯಾಮವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಸಾಮಾಜಿಕ ಪರಿಸರಾತ್ಮಕ ಪರಿಣಾಮಗಳನ್ನು ತಿಳಿದುಕೊಳ್ಳುವುದಾಗಿತ್ತು. 2020ರ ಆರಂಭದಲ್ಲಿ ಕೋವಿಡ್-19 ಸಾಂಕ್ರಾಮಿಕ ದಿಢೀರ್ ಕಾಣಿಸಿಕೊಂಡ ಪರಿಣಾಮ ಜಗತ್ತಿನಾದ್ಯಂತ ಸಮುದಾಯಗಳ ಮೇಲೆ ಭಾರೀ ಆರೋಗ್ಯ ಮತ್ತು ಆರ್ಥಿಕ ಹೊರೆ ಬಿದ್ದಿದೆ ಮತ್ತು ತ್ಯಾಜ್ಯ – ಜಲ ವಲಯ ಸೇರಿದಂತೆ ಪ್ರತಿಯೊಂದು ವಲಯದ ಮೇಲೂ ಪರಿಣಾಮಗಳಾಗಿವೆ. ಎಲ್ಲ ವರ್ಗದಂತೆ ವೈದ್ಯಕೀಯ ತ್ಯಾಜ್ಯ, ದ್ರವರೂಪದ ತ್ಯಾಜ್ಯದ ಮೇಲೂ ಗಂಭೀರ ಪರಿಣಾಮವಾಗಿದ್ದು, ಅದು ಮಾನವ ಆರೋಗ್ಯ ಮತ್ತು ಪರಿಸರಕ್ಕೆ ಭಾರೀ ಅಪಾಯವನ್ನು ತಂದೊಡ್ಡಿದೆ. ಕಾರಣ ಜಲ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಮಲಿನ ಅಂತರ್ಜಲ ಹಾಗೂ ಕುಡಿಯುವ ನೀರನ್ನು ಸರಿಯಾಗಿ ನಿರ್ವಹಿಸದಿರುವುದಾಗಿದೆ. 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ, ಇತ್ತೀಚೆಗೆ ಕಳೆದ ನಾಲ್ಕೈದು ತಿಂಗಳಿನಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ನಿರ್ವಹಣೆಗೆ ವಿನೂತನ ಆವಿಷ್ಕಾರಗಳನ್ನು ಕೈಗೊಳ್ಳಬೇಕಾಗಿದ್ದು, ಆ ನಿಟ್ಟಿನಲ್ಲಿ ತ್ರಿವೇಂಡ್ರಮ್ ನ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಕಸದ ಬುಟ್ಟಿಗಳ ಒಳಭಾಗವನ್ನು ವೈರಸ್ ನ್ಯೂಟ್ರಲೈಸಿಂಗ್ (ವೈರಾಣು ಹರಡದಂತೆ) ಕ್ರಮ ಕೈಗೊಂಡಿತ್ತು. ಆ ತಂತ್ರಜ್ಞಾನವನ್ನು ಇದೀಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ನೀರಿಗೆ ಸಂಬಂಧಿಸಿದ ನಾನಾ ವಲಯಗಳ ಕುರಿತು ಪ್ರೊ|| ಶರ್ಮಾ ವಿವರಿಸಿದರು. “ಶೇ.75ರಷ್ಟು ನೀರು ಕೃಷಿಗೆ ಬಳಕೆಯಾಗುತ್ತದೆ ಮತ್ತು ಅಲ್ಲೂ ಕೂಡ ನೀರು ಮತ್ತು ಆರೋಗ್ಯದೊಂದಿಗೆ ಸಂಬಂಧವಿದೆ. ವಿಶೇಷವಾಗಿ ಕೋವಿಡ್-19 ಸಂದರ್ಭದಲ್ಲಿ ಅದು ಮುಖ್ಯವಾದುದು. ಕೋವಿಡ್-19 ಜಗತ್ತಿನಿಂದ ಮಾಯವಾದರೂ ಕೂಡ ನೀರಿನ ಸಮಸ್ಯೆಗಳು ಇನ್ನೂ ಇದ್ದೇ ಇರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ನೀರಿನ ಬಳಕೆ ಮತ್ತು ದುರ್ಬಳಕೆ ನಿಯಂತ್ರಿಸಲು ಸೀಮಿತ ಅಂಶಗಳಾಗಬಾರದು. ಅದರ ಹಿಂದೆ ಸಾಕಷ್ಟು ಅಂಶಗಳು ಅಂದರೆ ಆರ್ಥಿಕ ಸ್ಥಿತಿಗತಿ, ಸಾರ್ವಜನಿಕ ನಡವಳಿಕೆ ಮತ್ತು ಸಮಾಜದಲ್ಲಿ ನೀರಿನ ದುರ್ಬಳಕೆ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿಗೆ ಒತ್ತು ನೀಡಬೇಕಾಗಿದೆ” ಎಂದು ಹೇಳಿದರು. 

“ಉದ್ದೇಶಿತ ವಿಜ್ಞಾನ ತಂತ್ರಜ್ಞಾನ ಮತ್ತು ಆವಿಷ್ಕಾರ ನೀತಿ 2020 ಅಡಿಯಲ್ಲಿ ನೀರಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ಸಂಬಂಧಿಸಿದವರೊಡನೆ ವಿಸ್ತೃತ ಸಮಾಲೋಚನೆಗಳನ್ನು ನಡೆಸಲಾಗುತ್ತಿದೆ” ಎಂದು ಪ್ರೊ|| ಶರ್ಮಾ ಹೇಳಿದರು. 

ಒಳಚರಂಡಿ ನೀರು, ತ್ಯಾಜ್ಯ ಸಂಸ್ಕರಣೆ, ಹಾಲಿ ಇರುವ ತ್ಯಾಜ್ಯ ಸಂಸ್ಕರಣಾ ಮೂಲಸೌಕರ್ಯ ಗರಿಷ್ಠ ಪ್ರಮಾಣದಲ್ಲಿ ಬಳಕೆ ಕುರಿತಂತೆ ವಿಶ್ವಾಸಾರ್ಹ ಅಂಕಿ-ಅಂಶಗಳ ಕೊರತೆಯನ್ನು ಭಾಷಣಕಾರರು ಪ್ರಮುಖವಾಗಿ ಪ್ರಸ್ತಾಪಿಸಿದರು.  

ಭಾರತ ವಾಟರ್ ಫೌಂಡೇಷನ್ ಅಧ್ಯಕ್ಷ ಡಾ. ಅರವಿಂದ್ ಕುಮಾರ್, ಯುಎನ್ಇಪಿ ಭಾರತ ಕಚೇರಿಯ ಮುಖ್ಯಸ್ಥ ಶ್ರೀ ಅತುಲ್ ಬಗೈ, ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ಪ್ರತಿನಿಧಿ ಶ್ರೀಮತಿ ಪೈಡನ್, ಯುಎನ್ಇಪಿಯ ವಿಪತ್ತು ಅಪಾಯ ತಡೆ ಮುಖ್ಯಸ್ಥ ಡಾ. ಮುರಳಿ ತುಮರುಕುಡಿ, ಸಂಪನ್ಮೂಲ ಸಮನ್ವಯ ಪ್ರಾದೇಶಿಕ(ಯುಎನ್ಇಪಿ) ಡಾ. ಮುಸ್ತಕ್ ಅಹ್ಮದ್ ಮೆಮೊನ್, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶ್ರೀ ಶಿವದಾಸ್ ಮೀನಾ, ಐಸಿಎಂಆರ್-ಎನ್ಐಆರ್ ಇಎಚ್(ಪರಿಸರ ಆರೋಗ್ಯ ಕುರಿತ ರಾಷ್ಟ್ರೀಯ ಸಂಶೋಧನಾ ಸಂಸ್ಥೆ) ನಿರ್ದೇಶಕ ಡಾ. ರಾಜನಾರಾಯಣ ಆರ್. ತಿವಾರಿ, ಇನ್ವೆಸ್ಟ್ ಇಂಡಿಯಾದ(ತ್ಯಾಜ್ಯದಿಂದ ಸಂಪತ್ತು) ಉಪಾಧ್ಯಕ್ಷ ಸ್ವಪನ್ ಮೆಹ್ರಾ ಮತ್ತಿತರರು ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ನೀತಿ ನಿರೂಪಕರು, ವೃತ್ತಿಪರರು, ತಾಂತ್ರಿಕ ತಜ್ಞರು, ವೃತ್ತಿ ನಿರತರು, ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಭಿವೃದ್ಧಿ ಪಾಲುದಾರರು ಒಳಗೊಂಡಂತೆ ತ್ಯಾಜ್ಯ ನಿರ್ವಹಣೆ, ವೈದ್ಯಕೀಯ ತ್ಯಾಜ್ಯ, ಸಂಸ್ಕರಣೆ, ಹಣಕಾಸು, ಆರ್ಥಿಕತೆ, ನಾಗರಿಕ ಸಮಾಜ ಸಂಘಟನೆಗಳು, ಯುಎನ್ಇಪಿ ಇಂಡಿಯಾ ವಾಟರ್ ಫೌಂಡೇಷನ್ ಮತ್ತು ಇತರೆ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದವರೊಂದಿಗೆ ತಾಂತ್ರಿಕ ಗೋಷ್ಠಿಗಳಲ್ಲಿ ಸಂವಾದಗಳನ್ನು ನಡೆಸಿದರು. 

 



(Release ID: 1668228) Visitor Counter : 218