ಪ್ರಧಾನ ಮಂತ್ರಿಯವರ ಕಛೇರಿ

ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಮಾವೇಶ 2020 ಉದ್ದೇಶಿಸಿ ಪ್ರಧಾನಮಂತ್ರಿ ಮೋದಿ ಪ್ರಧಾನ ಭಾಷಣ


ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಹೂಡಿಕೆ ಮಾಡಿದ ಸಮಾಜಗಳು ಭವಿಷ್ಯವನ್ನು ರೂಪಿಸುತ್ತವೆ

ನಮ್ಮ ನಾಗರಿಕರ ರೋಗ ನಿರೋಧಕ ಶಕ್ತಿ ಹೆಚ್ಚಳದ ಖಾತ್ರಿಪಡಿಸಲು ಭಾರತ ಈಗಾಗಲೇ ಸುಸ್ಥಾಪಿತ ಲಸಿಕೆ ವಿತರಣೆ ವ್ಯವಸ್ಥೆ ಹೊಂದಿದೆ

Posted On: 19 OCT 2020 10:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರ್ಯಾಂಡ್ ಚಾಲೆಂಜಸ್ ವಾರ್ಷಿಕ ಸಮಾವೇಶ 2020 ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಹೂಡಿಕೆ ಮಾಡಿದ ಸಮಾಜಗಳು ಭವಿಷ್ಯವನ್ನು ರೂಪಿಸುತ್ತವೆ ಎಂದು ಹೇಳಿದರು. ಸಂಕುಚಿತ ದೃಷ್ಟಿಯ ವಿಧಾನದ ಬದಲು ವಿಜ್ಞಾನ ಮತ್ತು ನಾವೀನ್ಯತೆಯ ಪ್ರಯೋಜನಗಳನ್ನು ಪಡೆಯಲು ಸೂಕ್ತ ಸಮಯದಲ್ಲಿ ಮುಂಚಿತವಾಗಿಯೇ ಹೂಡಿಕೆ ಮಾಡುಬೇಕು ಎಂದು ಅವರು ಹೇಳಿದರು. ಈ ನಾವಿನ್ಯತೆಯ ಪಯಣವನ್ನು ಸಹಯೋಗ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ ರೂಪಿಸಬೇಕು ಎಂದು ಅವರು ಹೇಳಿದರು. ವಿಜ್ಞಾನ ಎಂದಿಗೂ ಕಂದಕದಲ್ಲಿ ಪ್ರಗತಿ ಹೊಂದುವುದಿಲ್ಲ ಮತ್ತು ಗ್ಯ್ರಾಂಡ್ ಚಾಲೆಂಜ್ ಕಾರ್ಯಕ್ರಮ ಈ ತತ್ವಗಳನ್ನು ಅರಿತುಕೊಂಡಿದೆ ಎಂದರು.    ಜಾಗತಿಕವಾಗಿ ಹಲವಾರು ರಾಷ್ಟ್ರಗಳು ತೊಡಗಿಸಿಕೊಂಡಿದ್ದ ಈ ಕಾರ್ಯಕ್ರಮದ ಪ್ರಮಾಣ ಮತ್ತು ಇದರಲ್ಲಿ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್, ತಾಯಿಯ ಮತ್ತು ಮಕ್ಕಳ ಆರೋಗ್ಯ, ಕೃಷಿ, ಪೌಷ್ಟಿಕತೆ, ವಾಶ್ - (ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ), ಮತ್ತು ಇನ್ನೂ ಅನೇಕ ಇಂಥ ಸಮಸ್ಯೆಗಳ ನಿವಾರಣೆಗೆ ಯತ್ನಿಸಿದ್ದನ್ನು ಅವರು ಶ್ಲಾಘಿಸಿದರು.

ಜಾಗತಿಕ ಮಹಾಮಾರಿ ತಂಡ ಕಾರ್ಯದ ಮಹತ್ವವನ್ನು ನಮಗೆ ಮನವರಿಕೆ ಮಾಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರೋಗಗಳಿಗೆ ಭೌಗೋಳಿಕ ಗಡಿ ಎಂಬುದಿಲ್ಲ ಮತ್ತು ನಂಬಿಕೆ, ಜನಾಂಗ, ಲಿಂಗ ಅಥವಾ ಬಣ್ಣಗಳ ಆಧಾರದ ಮೇಲೆ ಅದು ತಾರತಮ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು. ಈ ಕಾಯಿಲೆಗಳು ಜನರ ಮೇಲೆ ಪರಿಣಾಮ ಬೀರುವ ಹಲವಾರು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದರು. ಭಾರತದಲ್ಲಿನ ಬಲಿಷ್ಠ ಮತ್ತು ಚೈತನ್ಯದಾಯಕ ವೈಜ್ಞಾನಿಕ ಸಮುದಾಯ ಮತ್ತು ಉತ್ತಮ ವೈಜ್ಞಾನಿಕ ಸಂಸ್ಥೆಗಳು, ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಲ್ಲಿ, ಕೋವಿಡ್-19 ವಿರುದ್ಧ ಹೋರಾಡುವಾಗ ಅವು ದೇಶದ ಅತಿದೊಡ್ಡ ಆಸ್ತಿಗಳಾಗಿವೆ ಎಂದರು. ಕಂಟೈನ್ಮೆಂಟ್ ನಿಂದ ಸಾಮರ್ಥ್ಯವರ್ಧನೆವರೆಗೆ ಅವು ಅದ್ಭುತಗಳನ್ನು ಸಾಧಿಸಿವೆ ಎಂದು ಅವರು ಹೇಳಿದರು.

ಭಾರತದ ಅತಿ ದೊಡ್ಡ ಜನಸಂಖ್ಯೆಯ ನಡುವೆಯೂ ಜನ ಚಾಲಿತ ದೃಷ್ಟಿಕೋನಗಳಿಂದಾಗಿ ಕೋವಿಡ್ -19 ಸಂಬಂಧಿತ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದರು. ಪ್ರತಿನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಇಂದು ಇಳಿಕೆ ಆಗುತ್ತಿದೆ, ವೃದ್ಧಿದರದಲ್ಲೂ ಇಳಿಕೆ ಆಗಿದೆ ಮತ್ತು ಶೇ.88ರಷ್ಟು ಅತಿಹೆಚ್ಚು ಚೇತರಿಕೆ ದರವೂ ಇದೆ ಎಂದರು. ಹೊಂದಿಕೊಳ್ಳುವಂಥ ಲಾಕ್‌ ಡೌನ್ ಅನ್ನು ಅಳವಡಿಸಿಕೊಂಡ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಮಾಸ್ಕ್ ಬಳಕೆಯನ್ನು ಉತ್ತೇಜಿಸಿದ, ಪರಿಣಾಮಕಾರಿಯಾಗಿ ಸಂಪರ್ಕ-ಪತ್ತೆಹಚ್ಚುವಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಪ್ರಾರಂಭಿಸಿದ, ರಾಪಿಡ್ ಆಂಟಿಜನ್ ಟೆಸ್ಟ್ ನಿಯೋಜಿಸಿದ ಆರಂಭಿಕ ದೇಶಗಳಲ್ಲಿ ಒಂದಾಗಿದ್ದು ಭಾರತ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಭಾರತವು ಈಗ ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ದೇಶದಲ್ಲಿ 30 ದೇಶೀಯ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಮೂರು ಮುಂದುವರಿದ ಹಂತದಲ್ಲಿವೆ ಎಂದರು. ಭಾರತವು ಈಗಾಗಲೇ ಸುಸ್ಥಾಪಿತ ಲಸಿಕೆ ವಿತರಣೆ ವ್ಯವಸ್ಥೆಯನ್ನು ಹೊಂದಿದ್ದು, ನಮ್ಮ ನಾಗರಿಕರ ರೋಗನಿರೋಧಕ ಶಕ್ತಿ ವರ್ಧನೆ ಖಚಿತಪಡಿಸಿಕೊಳ್ಳಲು ಡಿಜಿಟಲ್ ಆರೋಗ್ಯ ಐಡಿಯೊಂದಿಗೆ ಈ ಡಿಜಿಟಲೀಕರಿಸಿದ ಜಾಲವನ್ನು ಬಳಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಔಷಧ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯದ ವಿಚಾರದಲ್ಲಿ ಭಾರತ ಹೆಸರುವಾಸಿಯಾಗಿದೆ ಎಂದು ಅವರು ಹೇಳಿದರು. ಜಾಗತಿಕ ರೋಗನಿರೋಧಕ ಶಕ್ತಿ ವರ್ಧಿಸುವ ಲಸಿಕೆಗಳ ಶೇಕಡಾ 60 ಕ್ಕಿಂತ ಹೆಚ್ಚು ಭಾರತದಲ್ಲಿ ತಯಾರಾಗುತ್ತಿದೆ. ಭಾರತದ ಅನುಭವ ಮತ್ತು ಸಂಶೋಧನಾ ಪ್ರತಿಭೆಯೊಂದಿಗೆ, ಭಾರತವು ಜಾಗತಿಕ ಆರೋಗ್ಯ ಪ್ರಯತ್ನಗಳ ಕೇಂದ್ರಬಿಂದುವಾಗಿದೆ ಮತ್ತು ಈ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇತರ ರಾಷ್ಟ್ರಗಳಿಗೆ ಸಹಾಯ ಮಾಡುವ ಆಶಯ ಹೊಂದಿದೆ ಎಂದರು.

ಕಳೆದ ಆರು ವರ್ಷಗಳಲ್ಲಿ ಉತ್ತಮ ನೈರ್ಮಲ್ಯ, ಸುಧಾರಿತ ಸ್ವಚ್ಛತೆ, ಹೆಚ್ಚು ಶೌಚಾಲಯ ವ್ಯಾಪ್ತಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಕೊಡುಗೆ ನೀಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇದು ಮಹಿಳೆಯರು, ಬಡವರು ಮತ್ತು ವಂಚಿತರಿಗೆ ನೆರವಾಗಿದ್ದು, ರೋಗಗಳನ್ನು ತಗ್ಗಿಸಲು ಕಾರಣವಾಗಿದೆ ಎಂದು ತಿಳಿಸಿದರು.  ರೋಗ ತಗ್ಗಿಸುವುದನ್ನು ಖಾತರಿಪಡಿಸುವಲ್ಲಿ ಮತ್ತು ಪ್ರತಿ ಮನೆಗಳಿಗೆ ಕೊಳವೆ ಮೂಲಕ ಕುಡಿಯುವ ನೀರನ್ನು ಪೂರೈಸಲು, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಮುನ್ನಡೆಸುವುದೇ ಮೊದಲಾದ ಕ್ರಮಗಳು ಸೇರಿದಂತೆ ಗ್ರಾಮಗಳಲ್ಲಿ ಉತ್ತಮ ಆರೋಗ್ಯ ಸೇವೆ ತರುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಅವರು ಪಟ್ಟಿ ಮಾಡಿದರು.

ವೈಯಕ್ತಿಕ ಸಬಲೀಕರಣ ಮತ್ತು ಸಂಘಟಿತ ಯೋಗಕ್ಷೇಮಕ್ಕಾಗಿ ಸಹಕಾರಿ ಸ್ಫೂರ್ತಿ ಬಳಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ಈ ಗ್ರ್ಯಾಂಡ್ ಚಾಲೆಂಜ್ ವೇದಿಕೆಯಲ್ಲಿ ಫಲಪ್ರದವಾದ ಚರ್ಚೆ ನಡೆಯಲೆಂದು ಹಾರೈಸಿದ ಅವರು, ಇದರಿಂದ ಅನೇಕ ಅದ್ಭುತ ಮತ್ತು ಪ್ರೋತ್ಸಾಹದಾಯಕ ಪರಿಹಾರಗಳು ಹೊರಹೊಮ್ಮಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1666061) Visitor Counter : 216