ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿ ಮತ್ತು ಸ್ಪಂದನೆಯನ್ನು ಪರಿಶೀಲಿಸಲು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ


ರಾಜ್ಯಗಳ ಪರಿಸ್ಥಿತಿಯ ಸಂಪೂರ್ಣ ಪರಿಶೀಲನೆ ಮತ್ತು ಫೀಡ್ ಬ್ಯಾಕ್ ಪಡೆದ ಪ್ರಧಾನಮಂತ್ರಿಯವರಿಂದ ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶಗಳು ಮತ್ತು ಅಲ್ಲಿನ ಸವಾಲನ್ನು ಎದುರಿಸಲು ಕಾರ್ಯತಂತ್ರದ ಬಗ್ಗೆ ಚರ್ಚೆ

ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ 60 ಜಿಲ್ಲೆಗಳತ್ತ ಗಮನ ಹರಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ಕರೆ

ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲು ಮತ್ತು ರೋಗಲಕ್ಷಣವಿರುವ ತ್ವರಿತ ಆ್ಯಂಟಿಜೆನ್ ಪರೀಕ್ಷೆಯ ನಕಾರಾತ್ಮಕ ಪ್ರಕರಣಗಳನ್ನು ಶೇ.100 ರಷ್ಟು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸುವಂತೆ ರಾಜ್ಯಗಳಿಗೆ ಪ್ರಧಾನಿ ಕರೆ

ಕೋವಿಡ್ ಮೂಲಸೌಕರ್ಯಕ್ಕಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಬಳಕೆ ಮಿತಿಯನ್ನು ಶೇ.35 ರಿಂದ ಶೇ.50 ಹೆಚ್ಚಿಸಲಾಗಿದೆ: ಪ್ರಧಾನಿ

ಸ್ಥಳೀಯ ಲಾಕ್‌ಡೌನ್‌ಗಳ ಪರಿಣಾಮವನ್ನು ನಿರ್ಣಯಿಸಲು ರಾಜ್ಯಗಳಿಗೆ ಪ್ರಧಾನಿ ಸೂಚನೆ

ದೇಶವು ವೈರಸ್ ವಿರುದ್ಧ ಹೋರಾಡುವುದು ಮಾತ್ರವಲ್ಲ, ಆರ್ಥಿಕತೆಯಲ್ಲೂ ಮುಂದುವರಿಯಬೇಕು: ಪ್ರಧಾನಿ

ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಕಣ್ಗಾವಲು ಮತ್ತು ಸ್ಪಷ್ಟ ಸಂದೇಶ ಕಳುಹಿಸುವಿಕೆಯ ಮೇಲೆ ಪ್ರಧಾನಿ ಗಮನ

ರಾಜ್ಯಗಳ ನಡುವೆ ವೈದ್ಯಕೀಯ ಆಮ್ಲಜನಕ ಸೇರಿದಂತೆ ಸರಕು ಮತ್ತು ಸೇವೆಗಳ ಸುಗಮ ಸಂಚಾರವನ್ನು ಖಾತ್ರಿಪಡಿಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ

Posted On: 23 SEP 2020 9:47PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ಪರಿಸ್ಥಿತಿಯ ಪರಿಶೀಲನೆಗಾಗಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಪಂಜಾಬ್, ತಮಿಳುನಾಡು ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಇಂದು ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಎರಡನೇ ವರ್ಷಾಚರಣೆಯಾಗಿದೆ ಎಂದ  ಪ್ರಧಾನಿ, ಎರಡು ವರ್ಷಗಳಲ್ಲಿ ಯೋಜನೆಯಡಿ 1.25 ಕೋಟಿಗೂ ಹೆಚ್ಚು ಬಡ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು. ಬಡವರಿಗೆ ಸೇವೆ ಸಲ್ಲಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅವರು ಶ್ಲಾಘಿಸಿದರು.

ರಾಜ್ಯಗಳ ಪರಿಸ್ಥಿತಿ ಪರಾಮರ್ಶೆ

ಕರ್ನಾಟಕ ರಾಜ್ಯವು ಪತ್ತೆಹಚ್ಚುವಿಕೆ ಮತ್ತು ಮೇಲ್ವಿಚಾರಣೆಗೆ ವೈಜ್ಞಾನಿಕ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ, ಇದರಿಂದ ರಾಜ್ಯಕ್ಕೆ ಅಪಾರ ಪ್ರಯೋಜನವಾಗಿರುವುದು ಸಾಬೀತಾಗಿದೆ ಎಂದು ಪ್ರಧಾನಿ ಹೇಳಿದರು. ರಾಜ್ಯದ 9 ಜಿಲ್ಲೆಗಳಲ್ಲಿ ಹೆಚ್ಚಿನ ಸಾವಿನ ಪ್ರಮಾಣ ಇದ್ದು, ಇದರ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಅವರು ಸೂಚಿಸಿದರು. ಮುಖಗವಸು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ನಡವಳಿಕೆಯ ಬದಲಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ಜೊತೆಗೆ, ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಪ್ರಸ್ತುತ ಹಂತದ ಮೂರು ಪಟ್ಟು ಹೆಚ್ಚಿಸಬೇಕು, ಪರಿಣಾಮಕಾರಿ ಕಣ್ಗಾವಲು ಮತ್ತು ಪತ್ತೆಹಚ್ಚುವಿಕೆಯನ್ನೂ ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು.

ಆಂಧ್ರಪ್ರದೇಶದಲ್ಲಿ ಸರ್ಕಾರ ಮತ್ತು ಜನರ ನಡುವಿನ ಸಮನ್ವಯವು ರಾಜ್ಯದಲ್ಲಿ ಉತ್ತಮ ಸ್ಥಿತಿಗೆ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು. ಪರಿಣಾಮಕಾರಿ ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆಯನ್ನು ರಾಜ್ಯವು ಮುಂದುವರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಮನೆಯಲ್ಲಿ ಪ್ರತ್ಯೇಕ ವಾಸವಿರುವ ರೋಗಿಗಳ ನಿಯಮಿತ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು. ಪ್ರತಿಯೊಂದು ಜೀವವನ್ನೂ ಉಳಿಸಬೇಕಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಹೆಚ್ಚಿನ ಸಂಖ್ಯೆಯ ಪ್ರಕರಣಗಳಿರುವ ಮಹಾರಾಷ್ಟ್ರದ 20 ಜಿಲ್ಲೆಗಳಲ್ಲಿ ವಿಶೇಷ ಗಮನ ಹರಿಸಬೇಕಾಗಿದೆ. ರಾಜ್ಯದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಪ್ರಸ್ತುತ  ಇರುವ ಮಟ್ಟಕ್ಕಿಂತ ಐದು ಪಟ್ಟು ಹೆಚ್ಚಿಸುವಂತೆ ಸಲಹೆ ನೀಡಿದರು.

ದೆಹಲಿಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಪ್ರಧಾನಿ, ಜನರು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಒಟ್ಟಾರೆ ಪ್ರಯತ್ನದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು. ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸುವುದರ ಬಗ್ಗೆ ಮತ್ತು ಆಂಟಿಜೆನ್ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದರೂ ರೋಗಲಕ್ಷಣವಿರುವ  ಎಲ್ಲರಿಗೂ  ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅವರು ಒತ್ತಿ ಹೇಳಿದರು.

ಪಂಜಾಬ್ ಆರಂಭದಲ್ಲಿ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು, ಆದರೆ ಈಗ ಅಲ್ಲಿ ಕೋವಿಡ್ ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ, ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ರೋಗಿಗಳು ಆಸ್ಪತ್ರೆಗಳಿಗೆ ತಲುಪಲು ವಿಳಂಬವಾಗುತ್ತಿರುವುದು. ಸವಾಲನ್ನು ಎದುರಿಸಲು ರಾಜ್ಯವು ಜಾಗೃತಿ ಅಭಿಯಾನವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಪರೀಕ್ಷೆಗಳ ಸಕಾರಾತ್ಮಕ ಪ್ರಮಾಣ ಮತ್ತು ಪ್ರಕರಣಗಳ ಸಾವಿನ ಪ್ರಮಾಣವನ್ನು ತಗ್ಗಿಸಲು ರಾಜ್ಯಕ್ಕೆ ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆಯ ಕಾರ್ಯತಂತ್ರದೊಂದಿಗೆ ದೈನಂದಿನ ಪ್ರಕರಣಗಳ ಸ್ಥಿರೀಕರಣ ಮತ್ತು ಕಡಿತಕ್ಕೆ ಕಾರಣವಾಗಿರುವ ತಮಿಳುನಾಡು ರಾಜ್ಯವು ಅನುಕರಣೀಯ ಕೆಲಸಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. ರಾಜ್ಯದ 7 ಜಿಲ್ಲೆಗಳಲ್ಲಿ ಪ್ರಕರಣಗಳ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು. ಟೆಲಿಮೆಡಿಸಿನ್ಗಾಗಿ ರಾಜ್ಯವು -ಸಂಜೀವಿನಿ ಆ್ಯಪ್ ಅನ್ನು ಉತ್ತಮವಾಗಿ ಬಳಸಿಕೊಂಡಿದೆ ಮತ್ತು ತಮಿಳುನಾಡಿನ ಅನುಭವವು ಇತರ ರಾಜ್ಯಗಳಿಗೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶವು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಮತ್ತು ಅಪಾರ ಸಂಖ್ಯೆಯ ವಲಸೆ ಕಾರ್ಮಿಕರು ಹಿಂತಿರುಗಿರುವ ರಾಜ್ಯವಾಗಿದೆ ಎಂದ ಪ್ರಧಾನಿ, ಪರೀಕ್ಷಾ ಜಾಲವನ್ನು ವಿಸ್ತರಿಸುವ ಮೂಲಕ ರಾಜ್ಯವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ರಾಜ್ಯವು ಸಂಪರ್ಕವನ್ನು ಪತ್ತೆಹಚ್ಚುವಿಕೆಯನ್ನು ಯುದ್ಧೋಪಾದಿಯಲ್ಲಿ ನಡೆಸಲು ಮತ್ತಷ್ಟು ಕ್ರಮಗಳನ್ನು ಬಲಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ, ಸೋಂಕಿತ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿದೆ, ಜೊತೆಗೆ ಮುಖಗವಸುಗಳನ್ನು ಬಳಸುವುದು ಮತ್ತು ಎರಡು ಗಜಗಳ ಅಂತರವನ್ನು ಪಾಲಿಸುವ ಬಗ್ಗೆ ನಿರಂತರವಾಗಿ ಜನರಿಗೆ ಅರಿವು ಮೂಡಿಸುವುದು  ಅಗತ್ಯವಾಗಿದೆ ಎಂದು ಪ್ರಧಾನಿ ತಿಳಿಸಿದರು.

ವೈರಾಣು ವಿರುದ್ಧ ಹೋರಾಡಲು ಹೆಚ್ಚಿನ ಹಣ

ದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ, ಹಾಗೆಯೇ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್ ಅನ್ನು ನಿಭಾಯಿಸಲು ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆಯಿದೆ, ಪತ್ತೆಹಚ್ಚುವಿಕೆಯ ಜಾಲವನ್ನು ಸುಧಾರಿಸಲು ಮತ್ತು ಉತ್ತಮ ತರಬೇತಿಯನ್ನು ಖಚಿತಪಡಿಸಿಕೊಳ್ಳಲು ಅವರು ಸೂಚಿಸಿದರು. ಕೋವಿಡ್ ನಿರ್ದಿಷ್ಟ ಮೂಲಸೌಕರ್ಯಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸುವ ಮಿತಿಯನ್ನು ಶೇ. 35 ರಿಂದ ಶೇ.50 ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಪ್ರಕಟಿಸಿದರು, ನಿರ್ಧಾರವು ವೈರಾಣು ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಹೊಂದಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ವೈರಾಣು ಹರಡುವುದನ್ನು ನಿಯಂತ್ರಿಸುವಲ್ಲಿ 1-2 ದಿನಗಳ ಸ್ಥಳೀಯ ಲಾಕ್ಡೌನ್ಗಳ ಪರಿಣಾಮವನ್ನು ನಿರ್ಣಯಿಸುವಂತೆ ಪ್ರಧಾನ ಮಂತ್ರಿ ರಾಜ್ಯಗಳಿಗೆ ಸೂಚಿಸಿದರು, ದೇಶವು ವೈರಾಣು ವಿರುದ್ಧ ಹೋರಾಡುವುದು ಮಾತ್ರವಲ್ಲ, ಆರ್ಥಿಕತೆಯಲ್ಲೂ ಧೈರ್ಯದಿಂದ ಮುಂದುವರಿಯಬೇಕು ಎಂದು ಅವರು ಹೇಳಿದರು.

ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಕಣ್ಗಾವಲು ಮತ್ತು ಸಂದೇಶ ಕಳುಹಿಸುವಿಕೆ

ಪರಿಣಾಮಕಾರಿ ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಕಣ್ಗಾವಲು ಮತ್ತು ಸ್ಪಷ್ಟ ಸಂದೇಶ ಕಳುಹಿಸುವಿಕೆಗೆ ಹೆಚ್ಚಿನ ಗಮನ ನೀಡುವಂತೆ ಪ್ರಧಾನಿ ಒತ್ತಿ ಹೇಳಿದರು. ಪರೀಕ್ಷೆಗಳ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳಿಗೆ ಕಾರಣವಾಗಬಹುದಾದ ಸೋಂಕಿನ ಲಕ್ಷಣ ರಹಿತ ಸ್ವಭಾವದಿಂದಾಗಿ ಪರಿಣಾಮಕಾರಿ ಸಂದೇಶ ರವಾನೆ ಅಗತ್ಯ ಎಂದು ಅವರು ಹೇಳಿದರು. ಪ್ರತಿದಿನವೂ ಮುಖಗವಸುಗಳನ್ನು ಬಳಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದಕ್ಕೂ ಒತ್ತು ನೀಡುವಂತೆ ತಿಳಿಸಿದರು.

ರಾಜ್ಯಗಳ ನಡುವೆ ಸರಕು ಮತ್ತು ಸೇವೆಗಳ ಸುಗಮ ಸಂಚಾರವನ್ನು ಖಾತರಿಪಡಿಸುವ ಮಹತ್ವವನ್ನು ಪ್ರಧಾನಿ ಒತ್ತಿಹೇಳಿದರು. ಆಮ್ಲಜನಕದ ಪೂರೈಕೆಯಲ್ಲಿ ಕೆಲವು ರಾಜ್ಯಗಳು ಇತ್ತೀಚೆಗೆ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದ ಅವರು, ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಖಾತರಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ. ರಾಜ್ಯಗಳಾದ್ಯಂತ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಂಚಾರವನ್ನು ಸುಗಮಗೊಳಿಸುವಂತೆ  ತಿಳಿಸಿದರು.

ವೈರಾಣು ವಿರುದ್ಧ ಹೋರಾಡಲು ಲಾಕ್ ಡೌನ್ ಸಮಯದಲ್ಲಿ ದೇಶವು ತನ್ನ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿದೆ ಎಂದು ಗೃಹ ಸಚಿವರು ಸಭೆಯಲ್ಲಿ ತಿಳಿಸಿದರು. ವೈರಾಣು ವಿರುದ್ಧ ಹೋರಾಡಲು ರಾಜ್ಯಗಳು ಮತ್ತು ಜಿಲ್ಲೆಗಳು ಸಿದ್ಧವಾಗಬೇಕಿದೆ ಮತ್ತು ಸಭೆಯಲ್ಲಿ ಪಡೆದ ಸಲಹೆಗಳ ಆಧಾರದಲ್ಲಿ ಇದಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ವಿವರವಾದ ಪ್ರಸ್ತುತಿಯನ್ನು ನೀಡಿದರು. 7 ರಾಜ್ಯಗಳು ದೇಶದಲ್ಲಿ ಶೇ.62 ರಷ್ಟು ಸಕ್ರಿಯ ಪ್ರಕರಣಗಳಿಗೆ ಮತ್ತು ಸುಮಾರು ಶೇ.77 ರಷ್ಟು ಕೋವಿಡ್ ಸಾವುಗಳಿಗೆ ಕಾರಣವಾಗಿವೆ ಎಂದು ಉಲ್ಲೇಖಿಸಿದರು. ರಾಜ್ಯಗಳಲ್ಲಿ ಪ್ರಕರಣಗಳ ಹಾದಿ, ನಡೆಸಿದ ಪರೀಕ್ಷೆಗಳು, ಮಾರಣಾಂತಿಕತೆ ಮತ್ತು ಮಾದರಿಗಳ ಸಕಾರಾತ್ಮಕ ದರಗಳ ಬಗ್ಗೆ ಅವರು ವಿವರಿಸಿದರು.

ಮುಖ್ಯಮಂತ್ರಿಗಳ ವಿವರಣೆ

ಬಿಕ್ಕಟ್ಟಿನ ಅವಧಿಯಲ್ಲಿ ಪ್ರಧಾನ ಮಂತ್ರಿಯವರ ನಾಯಕತ್ವವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಅವರು ಸದ್ಯದ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಫೀಡ್ ಬ್ಯಾಕ್ ನೀಡಿದರು, ವೈರಾಣು ಹರಡುವುದನ್ನು ನಿಯಂತ್ರಿಸುವಲ್ಲಿ ತಮ್ಮ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಸವಾಲುಗಳನ್ನು ಎದುರಿಸಲು ಇಲ್ಲಿಯವರೆಗೆ ಮಾಡಿರುವ ಸಿದ್ಧತೆಗಳ ಬಗ್ಗೆ ಮಾತನಾಡಿದರು.

ತಮ್ಮ ಸರ್ಕಾರಗಳು ಸಾರ್ವಜನಿಕ ಜಾಗೃತಿ ಮೂಡಿಸಲು ಮಾಡಿರುವ ಪ್ರಯತ್ನಗಳು, ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೈಗೊಂಡಿರುವ ಪ್ರಯತ್ನಗಳು, ಕೋವಿಡ್ ನಂತರದ ಚಿಕಿತ್ಸಾಲಯಗಳ ಪ್ರಾರಂಭ, ಪರೀಕ್ಷೆಯಲ್ಲಿ ಹೆಚ್ಚಳ ಇನ್ನಿತರ ಇತರ ಕ್ರಮಗಳ ಬಗ್ಗೆ  ಮುಖ್ಯಮಂತ್ರಿಗಳು ವಿವರಿಸಿದರು.

***



(Release ID: 1658571) Visitor Counter : 164