ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಶಿಕ್ಷಣ ನೀತಿ 2020: “21ನೇ ಶತಮಾನದಲ್ಲಿ ಶಾಲಾ ಶಿಕ್ಷಣ” ಸಮಾವೇಶದಲ್ಲಿ ಪ್ರಧಾನಿ ಭಾಷಣ

Posted On: 11 SEP 2020 1:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ 21ನೇ ಶತಮಾನದ ಶಾಲಾ ಶಿಕ್ಷಣ ಸಮಾವೇಶ ಉದ್ದಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಶಿಕ್ಷಣ ನೀತಿ 21ನೇ ಶತಮಾನದ ಭಾರತಕ್ಕೆ ಹೊಸ ಆಯಾಮ ನೀಡಲಿದ್ದು, ದೇಶದ ಭವಿಷ್ಯವನ್ನು ನಿರ್ಮಾಣ ಮಾಡಲು ಬುನಾದಿ ಹಾಕುವ ಕ್ಷಣಕ್ಕೆ ನಾವು ಭಾಗವಾಗಿದ್ದೇವೆ ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆಯು ಇನ್ನೂ ಹಳೆಯ ವ್ಯವಸ್ಥೆಯಡಿಯಲ್ಲಿ ಸಾಗುತ್ತಿದ್ದರಿಂದ ಮೂರು ದಶಕಗಳಲ್ಲಿ ನಮ್ಮ ಜೀವನದ ಯಾವುದೇ ಅಂಶ ಒಂದೇ ಆಗಿತ್ತು ಎಂದು ಅವರು ಹೇಳಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತದ ಹೊಸ ಆಕಾಂಕ್ಷೆಗಳು ಮತ್ತು ಹೊಸ ಅವಕಾಶಗಳನ್ನು ಈಡೇರಿಸುವ ಸಾಧನವಾಗಿದೆ ಎಂದು ಅವರು ಹೇಳಿದರು.

ಪ್ರತಿಯೊಂದು ವಲಯದ, ಪ್ರತಿಯೊಂದು ಕ್ಷೇತ್ರದ ಮತ್ತು ಪ್ರತಿ ಭಾಷೆಯ ಜನರ ಕಳೆದ 3-4 ವರ್ಷಗಳ ಕಠಿಣ ಪರಿಶ್ರಮದ ಫಲಶ್ರುತಿ ಎನ್..ಪಿ. 2020 ಆಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನೀತಿಯ ಅನುಷ್ಠಾನದಲ್ಲಿ ವಾಸ್ತವ ಕಾರ್ಯ ಈಗ ಆರಂಭವಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಶಿಕ್ಷಕರು ಒಗ್ಗೂಡಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ನೀತಿಯ ಘೋಷಣೆಯ ನಂತರ ಅನೇಕ ಪ್ರಶ್ನೆಗಳು ಉದ್ಭವಿಸುವುದು ನ್ಯಾಯಸಮ್ಮತವಾಗಿದೆ ಮತ್ತು ಮುಂದುವರಿಯಲು ಸಮಾವೇಶದಲ್ಲಿ ಇಂತಹ ವಿಷಯಗಳ ಬಗ್ಗೆ ಚರ್ಚಿಸುವುದು ಅವಶ್ಯಕ ಎಂದು ಪ್ರಧಾನಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಚರ್ಚೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಕುರಿತು ದೇಶಾದ್ಯಂತದ ಶಿಕ್ಷಕರಿಂದ ಒಂದು ವಾರದೊಳಗೆ 1.5 ದಶಲಕ್ಷಕ್ಕೂ ಹೆಚ್ಚಿನ ಸಲಹೆಗಳು ಬಂದಿವೆ ಎಂದು ಅವರು ಹೇಳಿದರು.

ಉತ್ಸಾಹಿ ಯುವಜನರು ದೇಶದ ಅಭಿವೃದ್ಧಿಯ ಚಾಲಕಶಕ್ತಿಯಾಗಿದ್ದು, ಅವರ ಬೆಳವಣಿಗೆ ಅವರ ಬಾಲ್ಯದಿಂದಲೇ ಪ್ರಾರಂಭವಾಗಬೇಕು ಎಂದು ಪ್ರಧಾನಿ ಹೇಳಿದರು. ಮಕ್ಕಳ ಶಿಕ್ಷಣ, ಅವರು ಪಡೆಯುವ ಸರಿಯಾದ ವಾತಾವರಣ, ವ್ಯಕ್ತಿಯು ತನ್ನ ಭವಿಷ್ಯದಲ್ಲಿ ಏನಾಗುತ್ತಾನೆ ಮತ್ತು ಅವನ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ದೊಡ್ಡ ಪ್ರಮಾಣದಲ್ಲಿ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಎನ್‌..ಪಿ -2020 ಇದಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದೂ ತಿಳಿಸಿದರು.

ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತಮ್ಮ ಇಂದ್ರಿಯಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ, ಅವರ ಕೌಶಲ್ಯಗಳು ಉತ್ತಮವಾಗುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ ಶಾಲೆಗಳು ಮತ್ತು ಶಿಕ್ಷಕರು ಮಕ್ಕಳಿಗೆ ಮೋಜಿನೊಂದಿಗೆ ಕಲಿಕೆ, ನಲಿ ಕಲಿ, ಚಟುವಟಿಕೆ ಆಧಾರಿತ ಕಲಿಕೆ ಮತ್ತು ಆವಿಷ್ಕಾರ ಆಧಾರಿತ ಕಲಿಕೆಯ ವಾತಾವರಣವನ್ನು ಒದಗಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು. ಮಗು ಬೆಳೆದಂತೆಲ್ಲಾ, ಹೆಚ್ಚಿನ ಕಲಿಕೆಯ ಮನೋಭಾವ, ವೈಜ್ಞಾನಿಕ ಮತ್ತು ತಾರ್ಕಿಕ ಚಿಂತನೆ, ಗಣಿತದ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಬಹಳ ಅವಶ್ಯಕವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಹಿಂದಿನ 10+2 ವ್ಯವಸ್ಥೆಯನ್ನು ಬದಲಾವಣೆ ಮಾಡಿ 5+3+3+4ತರುವ ಮಹತ್ವವನ್ನು ಪ್ರತಿಪಾದಿಸಿದರು. ನೀತಿಯನ್ನು ಜಾರಿಗೆ ತಂದ ನಂತರ ನಗರಗಳಲ್ಲಿನ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಪೂರ್ವ ಪ್ರಾಥಮಿಕ ಶಾಲೆಯ ನಲಿಯುತ್ತಾ ಕಲಿಯುವ ಶಿಕ್ಷಣವು ಗ್ರಾಮಗಳನ್ನೂ ತಲುಪಲಿದೆ ಎಂದು ಅವರು ಹೇಳಿದರು.

ನೀತಿಯಲ್ಲಿ ಮೂಲಭೂತ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ ಎಂಬುದು ಮಹತ್ವದ ಅಂಶವಿಗಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆಯನ್ನು ರಾಷ್ಟ್ರೀಯ ಅಭಿಯಾನವಾಗಿ ತೆಗೆದುಕೊಳ್ಳಲಾಗಿದೆ ಎಂದರು. ಮಗು ಮುಂದೆ ಸಾಗಿ ಕಲಿಯಲೆಂದೇ ಓದಬೇಕು, ಅದಕ್ಕಾಗಿ ಆರಂಭದಲ್ಲಿ ಅದು ಓದುವುದನ್ನು ಕಲಿಯಬೇಕು ಎಂದರು. ಕಲಿಯಲು ಓದುವುದರಿಂದ ಓದಲು ಕಲಿಯುವ ಅಭಿವೃದ್ಧಿ ಪ್ರಯಾಣವು ಮೂಲಭೂತ ಸಾಕ್ಷರತೆ ಮತ್ತು ಗಣಿತಜ್ಞತೆಯ ಮೂಲಕ ಪೂರ್ಣಗೊಳ್ಳುತ್ತದೆ ಎಂದರು.

ಮೂರನೇ ತರಗತಿ ದಾಟಿದ ಪ್ರತಿ ಮಗು ಒಂದು ನಿಮಿಷದಲ್ಲಿ 30 ರಿಂದ 35 ಪದಗಳನ್ನು ಸುಲಭವಾಗಿ ಓದಬಲ್ಲದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ಇದು ಮಗುವಿಗೆ ಇತರ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಅಧ್ಯಯನ ವಾಸ್ತವ ಜಗತ್ತಿಗೆ, ನಮ್ಮ ಜೀವನಕ್ಕೆ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಸಂಪರ್ಕ ಹೊಂದಿದಾಗ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಶಿಕ್ಷಣವು ಸುತ್ತಮುತ್ತಲಿನ ಪರಿಸರದೊಂದಿಗೆ ಸಂಪರ್ಕ ಹೊಂದಿದಾಗ, ಅದು ವಿದ್ಯಾರ್ಥಿಯ ಇಡೀ ಜೀವನದ ಮೇಲೆ ಮತ್ತು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಉಪಕ್ರಮದ ಬಗ್ಗೆಯೂ ಪ್ರಸ್ತಾಪಿಸಿದರು. ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಹಳ್ಳಿಯ ಅತ್ಯಂತ ಹಳೆಯ ಮರವನ್ನು ಗುರುತಿಸುವ ಮತ್ತು ನಂತರ, ಮರ ಮತ್ತು ತಮ್ಮ ಗ್ರಾಮವನ್ನು ಆಧರಿಸಿ ಪ್ರಬಂಧ ಬರೆಯುವ ಸವಾಲು ನೀಡಲಾಯಿತು,. ಪ್ರಯೋಗವು ಬಹಳ ಯಶಸ್ವಿಯಾಯಿತು, ಒಂದು ಕಡೆ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ಸಿಕ್ಕಿತು, ಜೊತೆಗೆ ಅವರ ಹಳ್ಳಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಲು ಅವಕಾಶ ದೊರಕಿತು ಎಂದರು.

ಇಂಥ ಸುಲಭ ಮತ್ತು ನಾವಿನ್ಯಪೂರ್ಣ ವಿಧಾನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಪ್ರಯೋಗಗಳು - ತೊಡಗಿಸಿಕೊಳ್ಳಿ, ಅನ್ವೇಷಿಸಿ, ಅನುಭವ ಪಡೆಯಿರಿ, ಅಭಿವ್ಯಕ್ತಿ ಮಾಡಿ ಮತ್ತು ಔನ್ನತ್ಯ ಗಳಿಸಿ ಎಂಬ ನಮ್ಮ ನವ ಯುಗದ ಕಲಿಕೆಯಲ್ಲಿ ಪ್ರಮುಖವಾಗಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಚಟುವಟಿಕೆ, ಕಾರ್ಯಕ್ರಮ, ಯೋಜನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಕ್ಕಳು ರಚನಾತ್ಮಕವಾಗಿ ಅಭಿವ್ಯಕ್ತಿಪಡಿಸುವುದನ್ನು ಕಲಿಯಬೇಕು. ಮಕ್ಕಳನ್ನು ಐತಿಹಾಸಿಕ ತಾಣಗಳಿಗೆ, ಆಸಕ್ತಿದಾಯಕ ತಾಣಗಳಿಗೆ, ಕೃಷಿ ಜಮೀನಿಗೆ, ಕೈಗಾರಿಕೆ ಇತ್ಯಾದಿಗಳಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಕರೆದುಕೊಂಡು ಹೋಗಬೇಕು, ಇದು ಅವರಿಗೆ ಪ್ರಾಯೋಗಿಕ ಜ್ಞಾನ ನೀಡುತ್ತದೆ ಎಂದರು. ಇದು ಈಗ ಎಲ್ಲ ಶಾಲೆಗಳಲ್ಲೂ ಆಗುತ್ತಿಲ್ಲ ಎಂದರು. ಇದರಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಸಿಗುತ್ತಿಲ್ಲ ಎಂದೂ ಹೇಳಿದರು. ಪ್ರಾಯೋಗಿಕ ಅರಿವಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳುವುದರಿಂದ ಅವರ ಕುತೂಹಲ ಹೆಚ್ಚಾಗುತ್ತದೆ ಮತ್ತು ಅವರ ಜ್ಞಾನವೂ ಹೆಚ್ಚುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ನುರಿತ ವೃತ್ತಿಪರರನ್ನು ನೋಡಿದರೆ ಒಂದು ರೀತಿಯ ಭಾವನಾತ್ಮಕ ಸಂಪರ್ಕವಿರುತ್ತದೆ, ಅವರು ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರನ್ನು ಗೌರವಿಸುತ್ತಾರೆ. ಮಕ್ಕಳಲ್ಲಿ ಅನೇಕರು ಅಂತಹ ಕೈಗಾರಿಕೆಗಳಿಗೆ ಸೇರಲು ಬೆಳೆಯುವ ಸಾಧ್ಯತೆಯಿರುತ್ತದೆ ಅಥವಾ ಅವರು ಇನ್ನೊಂದು ವೃತ್ತಿಯನ್ನು ಆರಿಸಿಕೊಂಡರೂ ಸಹ ಅಂತಹ ವೃತ್ತಿಯನ್ನು ಸುಧಾರಿಸಲು ಏನು ಹೊಸತನವನ್ನು ಮಾಡಬಹುದು ಎಂಬುದರ ಬಗ್ಗೆ ಅದು ಅವರ ಮನಸ್ಸಿನಲ್ಲಿ ಉಳಿಯುತ್ತದೆ ಎಂದೂ ಪ್ರಧಾನಮಂತ್ರಿ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಠ್ಯಕ್ರಮವನ್ನು ಕಡಿಮೆ ಮಾಡಿ, ಮೂಲಭೂತ ವಿಷಯಗಳ ಮೇಲೆ ಕೇಂದ್ರೀಕರಿಸುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಲಿಕೆಯನ್ನು ಸಮಗ್ರ ಮತ್ತು ಅಂತರಶಿಸ್ತೀಯ, ವಿನೋದ ಆಧಾರಿತ ಮತ್ತು ಸಂಪೂರ್ಣ ಅನುಭವವನ್ನಾಗಿ ಮಾಡಲು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸಲಹೆಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಎಲ್ಲರ ಶಿಫಾರಸುಗಳು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಅದರಲ್ಲಿ ಸೇರಿಸಲಾಗುವುದು. ಭವಿಷ್ಯದ ಪ್ರಪಂಚವು ಇಂದಿನ ನಮ್ಮ ಪ್ರಪಂಚಕ್ಕಿಂತ ಸಾಕಷ್ಟು ಭಿನ್ನವಾಗಿರುತ್ತದೆ ಎಂದು ಹೇಳಿದರು.

21ನೇ ಶತಮಾನದ ಕೌಶಲಗಳೊಂದಿಗೆ ನಮ್ಮ ವಿದ್ಯಾರ್ಥಿಗಳನ್ನು ಮುಂದೆ ಸಾಗುವಂತೆ ಮಾಡುವ ಮಹತ್ವನ್ನು ಅವರು ಪ್ರತಿಪಾಸಿದರು. 21ನೇ ಶತಮಾನದ ಕೌಶಲಗಳಾದ - ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಹಯೋಗ, ಕುತೂಹಲ ಮತ್ತು ಸಂವಹನದ ಪಟ್ಟಿ ಮಾಡಿದರು. ವಿದ್ಯಾರ್ಥಿಗಳು ಮೊದಲಿನಿಂದಲೂ ಕೋಡಿಂಗ್ ಕಲಿಯಬೇಕು, ಕೃತಕ ಬುದ್ಧಿಮತ್ತೆಯನ್ನು ಅರ್ಥಮಾಡಿಕೊಳ್ಳಬೇಕು, ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಡಾಟಾ ಸೈನ್ಸ್ ಮತ್ತು ರೊಬೊಟಿಕ್ಸ್ ಗೆ ಸೇರಬೇಕು ಎಂದು ಹೇಳಿದರು. ನಮ್ಮ ಹಿಂದಿನ ಶಿಕ್ಷಣ ನೀತಿ ನಿರ್ಬಂಧಿತವಾಗಿದ್ದು ಎಂದು ಅವರು ಹೇಳಿದರು. ಆದರೆ ವಾಸ್ತವ ಜಗತ್ತಿನಲ್ಲಿ, ಎಲ್ಲಾ ವಿಷಯಗಳು ಪರಸ್ಪರ ಸಂಬಂಧಿಸಿದ್ದಾಗಿವೆ. ಆದರೆ ಪ್ರಸ್ತುತ ವ್ಯವಸ್ಥೆಯು ಕ್ಷೇತ್ರವನ್ನು ಬದಲಾಯಿಸಲು, ಹೊಸ ಸಾಧ್ಯತೆಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುವುದಿಲ್ಲ. ಅನೇಕ ಮಕ್ಕಳು ಮಧ್ಯದಲ್ಲೇ ಶಿಕ್ಷಣ ಬಿಡಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ, ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ ಎಂದರು.

ನಮ್ಮ ದೇಶದಲ್ಲಿ ಕಲಿಕೆ ಚಾಲಿತ ಶಿಕ್ಷಣದ ಬದಲಾಗಿ ಅಂಕಪಟ್ಟಿ ಚಾಲಿತ ಶಿಕ್ಷಣ ಪ್ರಾಬಲ್ಯ ಹೊಂದಿದ್ದೃ ರಾಷ್ಟ್ರೀಯ ಶಿಕ್ಷಣ ನೀತಿಯು ಮತ್ತೊಂದು ದೊಡ್ಡ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂಕಪಟ್ಟಿ ಈಗ ಮಾನಸಿಕ ಒತ್ತಡದ ಹಾಳೆಯಂತೆ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಒತ್ತಡವನ್ನು ಶಿಕ್ಷಣದಿಂದ ತೆಗೆದುಹಾಕುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವನ್ನು ಬೀರದಂತೆ ಇರಬೇಕು ಮತ್ತು ವಿದ್ಯಾರ್ಥಿಗಳನ್ನು ಕೇವಲ ಒಂದು ಪರೀಕ್ಷೆಯಿಂದ ಮೌಲ್ಯಮಾಪನ ಮಾಡಬಾರದು ಎಂಬುದು, ಆದರೆ ವಿದ್ಯಾರ್ಥಿಗಳ ಅಭಿವೃದ್ಧಿಯ ವಿವಿಧ ಅಂಶಗಳನ್ನು ಆಧರಿಸಿ ಸ್ವಯಂ ಮೌಲ್ಯಮಾಪನ, ಪೀರ್-ಟು-ಪೀರ್ ಮೌಲ್ಯಮಾಪನ ಮಾಡುವುದು ಇದರ ಪ್ರಯತ್ನವಾಗಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ಅಂಕಪಟ್ಟಿಯ ಬದಲಾಗಿ, ಸಮಗ್ರ ಶೈಕ್ಷಣಿಕ ಕಾರ್ಡ್ ನೀಡಲುದ್ದೇಶಿಸಿದ್ದು, ಇದು ಅನನ್ಯ ಸಾಮರ್ಥ್ಯ, ನಡೆವಳಿಕೆ, ಪ್ರತಿಭೆ, ಕೌಶಲ, ದಕ್ಷತೆ, ವಿದ್ಯಾರ್ಥಿಯ ಸಾಧ್ಯತೆ ಮೊದಲಾದ ವಿವರಗಳನ್ನೊಳಗೊಂಡಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ ಪ್ರಕಾಶ.ವನ್ನು ಸಹ ಮೌಲ್ಯಮಾಪನ ವ್ಯವಸ್ಥೆಯನ್ನು ಸಮಗ್ರ ಸುಧಾರಣೆ ಮಾಡಲು ಸ್ಥಾಪಿಸಲಾಗುತ್ತಿದೆ ಎಂದರು.

ಭಾಷೆ ಶಿಕ್ಷಣದ ಮಾಧ್ಯಮವಾಗಿದೆ, ಭಾಷೆ ಎಲ್ಲ ಶಿಕ್ಷಣವಲ್ಲ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವರು ವ್ಯತ್ಯಾಸವನ್ನು ಮರೆತುಬಿಡುತ್ತಾರೆ. ಯಾವುದೇ ಭಾಷೆ ಇರಲಿ, ಮಗು ಸುಲಭವಾಗಿ ಕಲಿಯಬಹುದಾಗಿದೆ. ಅದೇ ಭಾಷೆ ಕಲಿಕೆಯ ಭಾಷೆಯಾಗಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಆರಂಭಿಕ ಶಿಕ್ಷಣವು ಇತರ ಬಹುತೇಕ ದೇಶಗಳಂತೆ ಮಾತೃಭಾಷೆಯಲ್ಲಿರಬೇಕು ಎಂದು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲದಿದ್ದರೆ ಮಕ್ಕಳು ಬೇರೆ ಭಾಷೆಯಲ್ಲಿ ಏನನ್ನಾದರೂ ಕೇಳಿದಾಗ, ಅವರು ಅದನ್ನು ಮೊದಲು ತಮ್ಮ ಭಾಷೆಯಲ್ಲಿ ಭಾಷಾಂತರಿಸಿಕೊಳ್ಳುತ್ತಾರೆ, ನಂತರ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದರು. ಇದು ಮಕ್ಕಳ ಮನದಲ್ಲಿ ದೊಡ್ಡ ಗೊಂದಲ ಉಂಟು ಮಾಡುತ್ತದೆ, ಇದು ಅತ್ಯಂತ ಒತ್ತಡದಾಯಕ. ಹೀಗಾಗಿ ಸಾಧ್ಯವಾದಷ್ಟೂ ಸ್ಥಳೀಯ ಭಾಷೆಯನ್ನು, ಮಾತೃಭಾಷೆಯನ್ನು 5ನೇ ತರಗತಿಯವರೆಗೆ, ಕನಿಷ್ಠ 5ರವರೆಗೆ ಶಿಕ್ಷಣ ಮಾಧ್ಯಮವಾಗಿ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯ ಹೊರತಾಗಿ ಮತ್ತೊಂದು ಭಾಷೆಯ ಕಲಿಕೆ ಮತ್ತು ಬೋಧನೆಯ ಮೇಲೆ ಕಲವು ನಿರ್ಬಂಧಗಳಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇಂಗ್ಲಿಷ್ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿದೇಶೀ ಭಾಷೆ ಸಹಾಯಕವಾದರೂ, ಎಲ್ಲ ಭಾರತೀಯ ಭಾಷೆಗಳನ್ನೂ ಉತ್ತೇಜಿಸಬೇಕಾಗುತ್ತದೆ. ಹೀಗಾಗಿ ನಮ್ಮ ಯುವಜನರು ವಿವಿಧ ರಾಜ್ಯಗಳ ಭಾಷೆ ಮತ್ತು ವಿಭಿನ್ನ ಸಂಸ್ಕೃತಿಯ ಪರಿಚಯ ಬೆಳೆಸಿಕೊಳ್ಳುತ್ತಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯಾಣದಲ್ಲಿ ಶಿಕ್ಷಕರು ಪ್ರವರ್ತಕರಾಗಿರುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ, ಎಲ್ಲಾ ಶಿಕ್ಷಕರು ಸಹ ಬಹಳಷ್ಟು ಹೊಸ ವಿಷಯಗಳನ್ನು ಕಲಿಯಬೇಕಾಗಿದೆ ಮತ್ತು ಹಳೆಯ ವಿಷಯಗಳನ್ನು ಮರೆಯಬೇಕು. 2022 ರಲ್ಲಿ ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡಾಗ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಓದವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಎಲ್ಲಾ ಶಿಕ್ಷಕರು, ಆಡಳಿತಗಾರರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪೋಷಕರ ಸಹಕಾರವನ್ನು ಅವರು ಕೋರಿದರು.

***



(Release ID: 1653348) Visitor Counter : 390