ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕಾ-ಭಾರತ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆಯ ಅಮೆರಿಕಾ-ಭಾರತ 2020 ಶೃಂಗಸಭೆಯಲ್ಲಿ ಪ್ರಧಾನಿಯವರ ಪ್ರಧಾನ ಭಾಷಣ

Posted On: 03 SEP 2020 9:29PM by PIB Bengaluru

ಭಾರತ ಮತ್ತು ಅಮೆರಿಕಾದ  ಗೌರವಾನ್ವಿತ ಅತಿಥಿಗಳೇ,
ನಮಸ್ಕಾರ,
ಅಮೆರಿಕಾ-ಭಾರತ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್) ಯ ಅಮೆರಿಕಾ-ಭಾರತ 2020 ಶೃಂಗಸಭೆಯು ವೈವಿಧ್ಯಮಯ ಜನರನ್ನು ಒಟ್ಟುಗೂಡಿಸುತ್ತಿರುವುದು ಅದ್ಭುತವಾದ ವಿಷಯವಾಗಿದೆ. ಭಾರತ ಮತ್ತು ಅಮೆರಿಕಾವನ್ನು ಹತ್ತಿರ ತರುವಲ್ಲಿ ಯುಎಸ್‌ಐಎಸ್‌ಪಿಎಫ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು.
ನಾನು ಜಾನ್ ಚೇಂಬರ್ಸ್ ಅವರನ್ನು ಅನೇಕ ವರ್ಷಗಳಿಂದ ಬಲ್ಲೆ. ಭಾರತದ ಬಗೆಗಿನ ಅವರ ಪ್ರೀತಿ ಅಪಾರವಾಗಿದೆ. ಕೆಲವು ವರ್ಷಗಳ ಹಿಂದೆ ಅವರಿಗೆ ‘ಪದ್ಮಶ್ರೀ’ಪ್ರಶಸ್ತಿ ನೀಡಲಾಯಿತು.
ಸ್ನೇಹಿತರೇ,
ಈ ವರ್ಷದ ವಿಷಯ ಪ್ರಸತುತವಾಗಿದೆ- ಹೊಸ ಸವಾಲುಗಳಿಗೆ ಪರಿಹಾರಗಳು. 2020 ನೇ ವರ್ಷ ಪ್ರಾರಂಭವಾದಾಗ, ಇದು ಹೀಗೆ ಇರುತ್ತದೆ ಎಂದು ಯಾರಾದರೂ ಊಹಿಸಿದ್ದಿರಾ? ಜಾಗತಿಕ ಸಾಂಕ್ರಾಮಿಕವು ಎಲ್ಲರ ಮೇಲೆ ಪರಿಣಾಮ ಬೀರಿದೆ. ನಮ್ಮ ಸ್ಥಿತಿಸ್ಥಾಪಕತ್ವ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು, ಆರ್ಥಿಕ ವ್ಯವಸ್ಥೆಗಳುನ್ನು ಇದು ಪರೀಕ್ಷೆಗೊಳಪಡಿಸುತ್ತಿದೆ.
ಪ್ರಸ್ತುತ ಪರಿಸ್ಥಿತಿಗೆ ಹೊಸ ಮನೋಭಾವ ಬೇಕಾಗಿದೆ. ಅಭಿವೃದ್ಧಿಯ ವಿಧಾನವು ಮಾನವ ಕೇಂದ್ರಿತವಾಗಿರುವ, ಎಲ್ಲರ ನಡುವೆ ಸಹಕಾರದ ಮನೋಭಾವ  ಬೇಕಾಗಿದೆ. 
ಸ್ನೇಹಿತರೇ,
ಮುಂದಿನ ದಾರಿಯ ಬಗ್ಗೆ ನೋಡುವಾಗ ನಾವು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು, ಬಡವರನ್ನು ಸುರಕ್ಷಿತಗೊಳಿಸಲು ಮತ್ತು ನಮ್ಮ ನಾಗರಿಕರ ಭವಿಷ್ಯವನ್ನು ಭದ್ರಪಡಿಸಲು ಗಮನ ಹರಿಸಿದ್ದೇವೆ. ಭಾರತ ತುಳಿಯುತ್ತಿರುವ ಹಾದಿ ಇದು. ಲಾಕ್‌ಡೌನ್‌ಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ನಿರ್ಮಿಸಿದ ದೇಶಗಳ ಪೈಕಿ ಭಾರತ ಮೊದಲನೆಯದು. ಸಾರ್ವಜನಿಕ ಆರೋಗ್ಯ ಕ್ರಮವಾಗಿ ಮುಖಗವಸುಗಳು ಮತ್ತು ಮುಖ ಕವಚಗಳನ್ನು ಬಳಸಬೇಕೆಂದು ಮೊದಲು ಸಲಹೆ ನೀಡಿದ್ದು ಭಾರತ. ಸಾಮಾಜಿಕ ಅಂತರದ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ರೂಪಿಸಿದ ಮೊದಲಿಗರಲ್ಲಿ ನಾವೂ ಇದ್ದೇವೆ. ದಾಖಲೆಯ ಸಮಯದಲ್ಲಿ, ವೈದ್ಯಕೀಯ ಮೂಲಸೌಕರ್ಯವನ್ನು -ಅದು ಕೋವಿಡ್ ಆಸ್ಪತ್ರೆಗಳಿರಲಿ, ಐಸಿಯು ಸಾಮರ್ಥ್ಯಗಳಿರಲಿ ಇವೆಲ್ಲವುಗಳನ್ನೂ ಹೆಚ್ಚಿಸಲಾಯಿತು. ಜನವರಿಯಲ್ಲಿ ಒಂದು ಪರೀಕ್ಷಾ ಪ್ರಯೋಗಾಲಯದಿಂದ ಪ್ರಾರಂಭಿಸಿ, ನಾವು ಈಗ ದೇಶಾದ್ಯಂತ ಸುಮಾರು 1600 ಪ್ರಯೋಗಾಲಯಗಳನ್ನು ಹೊಂದಿದ್ದೇವೆ.
ಈ ಪ್ರಯತ್ನಗಳ ಫಲಿತಾಂಶವೆಂದರೆ 130 ಕೋಟಿ ಜನರು ಮತ್ತು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ದೇಶವು ವಿಶ್ವದಲ್ಲಿ ಪ್ರತಿ ಮಿಲಿಯನ್‌ಗೆ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ. ಚೇತರಿಕೆ ದರ ಕೂಡ ಸ್ಥಿರವಾಗಿ ಹೆಚ್ಚುತ್ತಿದೆ. ಭಾರತದ ವ್ಯಾಪಾರ ಸಮುದಾಯ, ವಿಶೇಷವಾಗಿ ಸಣ್ಣ ವ್ಯಾಪಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಉದ್ಯಮವು ಶೂನ್ಯದಿಂದ ಪ್ರಾರಂಭಿಸಿ, ನಮ್ಮನ್ನು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಕಿಟ್‌ಗಳ ತಯಾರಕರನ್ನಾಗಿ ಮಾಡಿದೆ. 
ಇದು ಬಲವಾಗಿ ಹೊರಹೊಮ್ಮಲು ಸವಾಲನ್ನು ಸವಾಲಾಗಿ ಸ್ವೀಕರಿಸುವ ಭಾರತದ ಮನೋಭಾವಕ್ಕೆ ಅನುಗುಣವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ರಾಷ್ಟ್ರವು ಕೋವಿಡ್ ವಿರುದ್ಧ ಹೋರಾಡಿದೆ ಮತ್ತು ಪ್ರವಾಹ, ಚಂಡಮಾರುತಗಳು, ಮಿಡತೆ ದಾಳಿಯಂತಹ ಇತರ ವಿಕೋಪಗಳ ವಿರುದ್ಧವೂ ಹೋರಾಡಿದೆ. ಆದರೆ, ಇದು ಜನರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ.
ಸ್ನೇಹಿತರೇ,
ಇಡೀ ಕೋವಿಡ್-19 ಮತ್ತು ಲಾಕ್‌ಡೌನ್ ಅವಧಿಯಲ್ಲಿ, ಭಾರತ ಸರ್ಕಾರವು ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿತ್ತು- ಅದು ಬಡವರ ಸುರಕ್ಷತೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ಭಾರತವು ಬಡವರಿಗಾಗಿ ಆರಂಭಿಸಿದ ಜಗತ್ತಿನಲ್ಲೇ ಅತಿದೊಡ್ಡ ಬೆಂಬಲ ವ್ಯವಸ್ಥೆಯಾಗಿದೆ. 800 ಮಿಲಿಯನ್ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯು 8 ತಿಂಗಳುಗಳವರೆಗೆ ಕಾರ್ಯನಿರ್ವಹಿಸುತ್ತದೆ. 800 ಮಿಲಿಯನ್ ಜನರು ಎಂದರೆ: ಅಮೆರಿಕಾ ಜನಸಂಖ್ಯೆಯ ಎರಡು ಪಟ್ಟಿಗೂ ಹೆಚ್ಚು. ಸುಮಾರು 80 ದಶಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲವನ್ನು ಒದಗಿಸಲಾಗುತ್ತಿದೆ. ಸುಮಾರು 345 ದಶಲಕ್ಷ ರೈತರು ಮತ್ತು ನಿರ್ಗತಿಕರಿಗೆ ನಗದು ಬೆಂಬಲ ನೀಡಲಾಗಿದೆ. ಈ ಯೋಜನೆಯು ವಲಸೆ ಕಾರ್ಮಿಕರಿಗೆ ಸುಮಾರು 200 ಮಿಲಿಯನ್ ಮಾನವ ದಿನಗಳ ಕೆಲಸವನ್ನು ಸೃಷ್ಟಿಸುವ ಮೂಲಕ ಉದ್ಯೋಗವನ್ನು ಸೃಷ್ಟಿಸಿದೆ.
ಸ್ನೇಹಿತರೇ,
ಸಾಂಕ್ರಾಮಿಕವು ಹಲವಾರು ವಿಷಯಗಳ ಮೇಲೆ ಪರಿಣಾಮ ಬೀರಿದೆ. ಆದರೆ ಇದು 130 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಪರಿಣಾಮ ಬೀರಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ, ಹಲವಾರು ದೂರಗಾಮಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಇದು ವ್ಯವಹಾರವನ್ನು ಸುಲಭಗೊಳಿಸಿದೆ ಮತ್ತು ಅಧಿಕಾರಶಾಹಿಯ ಹಸ್ತಕ್ಷೇಪವನ್ನು ಕಡಿಮೆ ಮಾಡಿದೆ. ವಿಶ್ವದ ಅತಿದೊಡ್ಡ ವಸತಿ ಕಾರ್ಯಕ್ರಮದ ಕೆಲಸಗಳು ನಡೆಯುತ್ತಿವೆ ಮತ್ತು ನವೀಕರಿಸಬಹುದಾದ ಇಂಧನ ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತಿದೆ. ರೈಲು, ರಸ್ತೆ ಮತ್ತು ವಾಯು ಸಂಪರ್ಕದ ಉತ್ತೇಜನದ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ನಿರ್ಮಿಸಲು ಭಾರತವು ವಿಶಿಷ್ಟ ಡಿಜಿಟಲ್ ಮಾದರಿಯನ್ನು ರೂಪಿಸುತ್ತಿದೆ. ಲಕ್ಷಾಂತರ ಜನರಿಗೆ ಬ್ಯಾಂಕಿಂಗ್, ಸಾಲ, ಡಿಜಿಟಲ್ ಪಾವತಿ ಮತ್ತು ವಿಮೆಯನ್ನು ಒದಗಿಸಲು ನಾವು ಅತ್ಯುತ್ತಮ ಹಣಕಾಸು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಎಲ್ಲಾ ಉಪಕ್ರಮಗಳಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಮತ್ತು ಜಾಗತಿಕವಾದ ಅತ್ಯುತ್ತಮ ಅಭ್ಯಾಸಗಳನ್ನು ಬಳಸಲಾಗುತ್ತಿದೆ.

ಸ್ನೇಹಿತರೇ,
ಜಾಗತಿಕ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವು ಕೇವಲ ವೆಚ್ಚಾಧಾರಿತವಾಗಿಬಾರದು, ಬದಲಿಗೆ ನಂಬಿಕೆಯನ್ನು ಆಧರಿಸಿರಬೇಕು ಎಂದು ಸಾಂಕ್ರಾಮಿಕವು ಜಗತ್ತಿಗೆ ತೋರಿಸಿಕೊಟ್ಟಿದೆ. ಸಂಸ್ಥೆಗಳು ಈಗ ಭೂಮಿಯ ಕೈಗೆಟುಕುವಿಕೆಯ ಜೊತೆಗೆ, ವಿಶ್ವಾಸಾರ್ಹತೆ ಮತ್ತು ನೀತಿ ಸ್ಥಿರತೆಯನ್ನು ಸಹ ನೋಡುತ್ತಿವೆ. ಈ ಎಲ್ಲ ಗುಣಗಳನ್ನು ಭಾರತ ಹೊಂದಿದೆ. 
ಇದರ ಪರಿಣಾಮವಾಗಿ, ಭಾರತವು ವಿದೇಶಿ ಹೂಡಿಕೆಗೆ ಉತ್ತಮ ತಾಣಗಳಲ್ಲಿ ಒಂದಾಗಿದೆ.ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಅಥವಾ ಕೊಲ್ಲಿ ರಾಷ್ಟ್ರಗಳ ಸಮೇತ, ಜಗತ್ತು ನಮ್ಮ ಮೇಲೆ ವಿಶ್ವಾಸವಿರಿಸಿದೆ ಎಂದು ಅವರು ಹೇಳಿದರು. ಈ ವರ್ಷ ನಾವು 20 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ಹೂಡಿಕೆಯನ್ನು ಪಡೆದಿದ್ದೇವೆ. ಗೂಗಲ್, ಅಮೆಜಾನ್ ಮತ್ತು ಮುಬಡಾಲಾ ಇನ್ವೆಸ್ಟ್‌ಮೆಂಟ್ಸ್ ಭಾರತಕ್ಕಾಗಿ ದೀರ್ಘಾವಧಿಯ ಯೋಜನೆಗಳನ್ನು ಪ್ರಕಟಿಸಿವೆ.
ಸ್ನೇಹಿತರೇ,
ಪಾರದರ್ಶಕ ಮತ್ತು ನಿರೀಕ್ಷಿತ ಭಾರತವು ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಪ್ರೋತ್ಸಾಹಿಸುತ್ತದೆ ಮತ್ತು ಬೆಂಬಲಿಸುತ್ತದೆ. ಭಾರತದ ಜಿಎಸ್ಟಿಯು ಏಕೀಕೃತ, ಸಂಪೂರ್ಣ ಶಕ್ತಗೊಂಡ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ದಿವಾಳಿ ಮತ್ತು ದಿವಾಳಿತನ ಸಂಹಿತೆಯು ಇಡೀ ಹಣಕಾಸು ವ್ಯವಸ್ಥೆಗೆ ಅಪಾಯವನ್ನು ಕಡಿಮೆ ಮಾಡುತ್ತದೆ. ನಮ್ಮ ಸಮಗ್ರ ಕಾರ್ಮಿಕ ಸುಧಾರಣೆಗಳು ಉದ್ಯೋಗದಾತರಿಗೆ ಅನುಸರಣೆ ಹೊರೆ ಕಡಿಮೆ ಮಾಡುತ್ತವೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ರಕ್ಷಣೆಯನ್ನೂ ಒದಗಿಸುತ್ತವೆ.
ಸ್ನೇಹಿತರೇ,
ಪ್ರಗತಿಯಲ್ಲಿ ಹೂಡಿಕೆಯ ಮಹತ್ವ ಮತ್ತು ಬೇಡಿಕೆ ಮತ್ತು ಪೂರೈಕೆ ಎರಡನ್ನೂ ಭಾರತ ನಿಭಾಯಿಸುತ್ತಿದೆ. ಹೊಸ ಉತ್ಪಾದನಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಭಾರತವನ್ನು ವಿಶ್ವದ ಅತ್ಯಂತ ಕಡಿಮೆ ತೆರಿಗೆ ತಾಣಗಳಲ್ಲಿ ಒಂದನ್ನಾಗಿ ಮಾಡಲಾಗುತ್ತಿದೆ. ಇ-ಪ್ಲಾಟ್‌ಫಾರ್ಮ್ ಆಧಾರಿತ ‘ಮುಖಾಮುಖಿ ರಹಿತ ಮೌಲ್ಯಮಾಪನ’ ವು ತೆರಿಗೆ ಪಾವತಿದಾರರ ಸನ್ನದಿನ ಜೊತೆಗೆ ನಾಗರಿಕರಿಗೆ ಇದು ಹೆಚ್ಚು ನೆರವಾಗುತ್ತದೆ. ಬಾಂಡ್ ಮಾರುಕಟ್ಟೆಗಳ ನಿಯಂತ್ರಕ ಸುಧಾರಣೆಗಳು ಹೂಡಿಕೆದಾರರಿಗೆ ಪ್ರವೇಶದ ಸುಲಭತೆಯನ್ನು ಖಚಿತಪಡಿಸುತ್ತವೆ. ಮೂಲಸೌಕರ್ಯ ಹೂಡಿಕೆಗಾಗಿ ‘ಸಾರ್ವಭೌಮ ಸಂಪತ್ತು ನಿಧಿಗಳು’ ಮತ್ತು ‘ಪಿಂಚಣಿ ನಿಧಿಗಳಿಗೆ’ ತೆರಿಗೆ ವಿನಾಯಿತಿಗಳಿವೆ. 2019 ರಲ್ಲಿ ಜಾಗತಿಕವಾಗಿ ವಿದೇಶಿ ನೇರ ಹೂಡಿಕೆ  ಒಳಹರಿವು ಶೇಕಡಾ 1 ರಷ್ಟು ಕುಸಿದಾಗ ಭಾರತಕ್ಕೆ ಎಫ್‌ಡಿಐ ಶೇ 20 ರಷ್ಟು ಏರಿಕೆಯಾಗಿದೆ ಮತ್ತು ಇದು ನಮ್ಮ ಎಫ್‌ಡಿಐ ವ್ಯವಸ್ಥೆಯ ಯಶಸ್ಸಸ್ಸಿಗೆ ಸಾಕ್ಷಿಯಾಗಿದೆ. ಈ ಎಲ್ಲಾ ಕ್ರಮಗಳು ಸಮೃದ್ಧ ಭವಿಷ್ಯವನ್ನು ಖಚಿತಪಡಿಸುತ್ತವೆ. ಇವುಗಳು ಬಲವಾದ ಜಾಗತಿಕ ಆರ್ಥಿಕತೆಗೂ ಸಹಕಾರಿಯಾಗುತ್ತವೆ.
1.3 ಶತಕೋಟಿ ಭಾರತೀಯರು ಒಂದು ಸಂಕಲ್ಪ ಮಾಡಿದ್ದಾರೆ ಅದು- ‘ಆತ್ಮನಿರ್ಭರ ಭಾರತ’ ಅಥವಾ ಸ್ವಾವಲಂಬಿ ಭಾರತ.  ‘ಆತ್ಮನಿರ್ಭರ ಭಾರತ್’ ಸ್ಥಳೀಯತೆಯನ್ನು ಜಾಗತಿಕದೊಂದಿಗೆ ವಿಲೀನಗೊಳಿಸುತ್ತದೆ ಮತ್ತು ಭಾರತವು ಜಾಗತಿಕ ಶಕ್ತಿಯ ಗುಣಕವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಗುರಿ ಜಗತ್ತಿನ ಒಳಿತು ಎಂದು ಭಾರತ ಮತ್ತೆ ಮತ್ತೆ ತೋರಿಸಿದೆ. ನಮ್ಮದೇ ಬೃಹತ್ ಅಗತ್ಯಗಳ ಹೊರತಾಗಿಯೂ, ಜಾಗತಿಕ ಜವಾಬ್ದಾರಿಯಿಂದ ನಾವು ದೂರ ಸರಿಯಲಿಲ್ಲ. ಜೆನೆರಿಕ್ ಔಷಧಿಗಳ ವಿಶ್ವದ ಪ್ರಮುಖ ಉತ್ಪಾದಕ ರಾಷ್ಟ್ರ ಎಂಬ ಜವಾಬ್ದಾರಿ ಅದು. ನಾವು ಜಗತ್ತಿಗೆ ನಿರಂತರ ಸರಬರಾಜುಗಳನ್ನು ಖಾತ್ರಿಪಡಿಸಿದ್ದೇವೆ. ಕೋವಿಡ್ -19ಕ್ಕೆ ಲಸಿಕೆ ಕುರಿತ ಸಂಶೋಧನೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಸ್ವಾವಲಂಬಿ ಮತ್ತು ಶಾಂತಿಯುತ ಭಾರತವು ಉತ್ತಮ ಜಗತ್ತನ್ನು ಖಾತ್ರಿಗೊಳಿಸುತ್ತದೆ.
‘ಆತ್ಮನಿರ್ಭರ ಭಾರತ’ಭಾರತವನ್ನು ಜಡ ಮಾರುಕಟ್ಟೆಯಿಂದ ಜಾಗತಿಕ ಮೌಲ್ಯ ಸರಪಳಿಯ ಸಕ್ರಿಯ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವುದಾಗಿದೆ. 
ಸ್ನೇಹಿತರೇ,
ಮುಂದಿನ ಹಾದಿಯು ವಿಶೇಷವಾಗಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಅಪಾರ ಅವಕಾಶಗಳಿಂದ ಕೂಡಿದೆ. ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ರಕ್ಷಣೆ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸಲಾಗಿದೆ.
ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳನ್ನು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಸಾಧನಗಳು, ಫಾರ್ಮಾ ಕ್ಷೇತ್ರಗಳಿಗಾಗಿ ಪ್ರಾರಂಭಿಸಲಾಗಿದೆ - ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತರ ಪ್ರಮುಖ ಕ್ಷೇತ್ರಗಳಿಗೂ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೃಷಿ ವ್ಯಾಪಾರೋದ್ಯಮದಲ್ಲಿನ ಸುಧಾರಣೆಗಳು ಮತ್ತು 14 ಬಿಲಿಯನ್ ಯುಎಸ್ ಡಾಲರ್ ಕೃಷಿ ಹಣಕಾಸು ಸೌಲಭ್ಯವು ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೇ,
ಭಾರತದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಫಲಿತಾಂಶಗಳಲ್ಲಿ ನಂಬಿಕೆ ಇರುವ ಸರ್ಕಾರವಿದೆ. ಸುಲಭ ವ್ಯಾಪಾರದಂತೆಯೇ ಸುಲಭ ಜೀವನವೂ ಮುಖ್ಯವೆಂದು ನಂಬಿರುವ ಸರ್ಕಾರ ಇಲ್ಲಿದೆ. ಭಾರತವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.65 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹತ್ವಾಕಾಂಕ್ಷಿಯಾದ ಮತ್ತು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಯುವ ದೇಶವಾಗಿದೆ. ಭಾರತವು ರಾಜಕೀಯ ಸ್ಥಿರತೆ ಮತ್ತು ರಾಜಕೀಯ ನಿರಂತರತೆಯನ್ನು ಹೊಂದಿರುವ ದೇಶವಾಗಿದೆ ಮತ್ತು ಇದು ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಬದ್ಧವಾಗಿದೆ.
 ಬನ್ನಿ, ನಮ್ಮ ಈ ಪ್ರಯಾಣದಲ್ಲಿ ಭಾಗಿಯಾಗಿ
ವಂದನೆಗಳು.
ತುಂಬು ಧನ್ಯವಾದಗಳು.

***



(Release ID: 1651233) Visitor Counter : 217