ಸಂಪುಟ

ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಗುತ್ತಿಗೆಗೆ ಸಂಪುಟದ ಅಂಗೀಕಾರ

Posted On: 19 AUG 2020 4:31PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.

ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಟೆಂಡರ್ ನಲ್ಲಿ ಯಶಸ್ವಿಯಾದ ಅದಾನಿ ಎಂಟರ್ ಪ್ರೈಸಸ್ ಗೆ ಐವತ್ತು ವರ್ಷಗಳ ಕಾಲ ಗುತ್ತಿಗೆ ನೀಡಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.

ಈ ಯೋಜನೆಗಳು ಸಾರ್ವಜನಿಕ ವಲಯದಲ್ಲಿ ಅಗತ್ಯವಾದ ಹೂಡಿಕೆಗಳ ಹೊರತಾಗಿ ಸೇವಾ ವಿತರಣೆ, ಪರಿಣತಿ, ಉದ್ಯಮ ಮತ್ತು ವೃತ್ತಿಪರತೆಯಲ್ಲಿ ದಕ್ಷತೆಯನ್ನು ತರುತ್ತವೆ.

ಹಿನ್ನೆಲೆ

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳನ್ನು ಪ್ರಾಧಿಕಾರವು ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಸುಮಾರು ಒಂದು ದಶಕದ ಹಿಂದೆ ಗುತ್ತಿಗೆ ನೀಡಿತ್ತು.

ಈ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಪ್ರಯೋಗಗಳು ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳನ್ನು ರೂಪಿಸಲು ಸಹಾಯ ಮಾಡಿವೆ ಮತ್ತು ಪ್ರಯಾಣಿಕರಿಗೆ ದಕ್ಷ ಮತ್ತು ಗುಣಮಟ್ಟದ ಸೇವೆಗಳನ್ನು ತಲುಪಿಸಲು ಸಹಾಯ ಮಾಡಿವೆ. ಭಾರತ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ದೇಶದ ಉಳಿದ ಭಾಗಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ವಾಯು ಸಂಚಾರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲು ಇದು ನೆರವಾಗಿದೆ. ಪಿಪಿಪಿ ಪಾಲುದಾರರಿಂದ ಎಎಐ ಪಡೆದ ಆದಾಯದಿಂದ 2ನೇ  ಶ್ರೇಣಿ ಮತ್ತು 3ನೇ ಶ್ರೇಣಿ ನಗರಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳನ್ನು ನಿರ್ಮಿಸಲು ಮತ್ತು ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸಲು ಅನುವು ಮಾಡಿಕೊಟ್ಟಿದೆ. ವಿಮಾನ ನಿಲ್ದಾಣ ಸೇವಾ ಗುಣಮಟ್ಟ (ಎಎಸ್‌ಕ್ಯು) ವಿಷಯದಲ್ಲಿ ಭಾರತದಲ್ಲಿನ ಪಿಪಿಪಿ ವಿಮಾನ ನಿಲ್ದಾಣಗಳು ಆಯಾ ವಿಭಾಗಗಳಲ್ಲಿ ಅಗ್ರ 5 ಸ್ಥಾನಗಳಲ್ಲಿವೆ.

ಆದ್ದರಿಂದ, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿ (ಪಿಪಿಪಿಎಸಿ) ಮೂಲಕ ಪಿಪಿಪಿ ಅಡಿಯಲ್ಲಿ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಎಎಐನ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿತು. ಪಿಪಿಪಿಎಸಿಯ ವ್ಯಾಪ್ತಿಯನ್ನು ಮೀರಿದ ಯಾವುದೇ ವಿಷಯದ ಬಗ್ಗೆ ನಿರ್ಧರಿಸಲು ಸರ್ಕಾರವು ಕಾರ್ಯದರ್ಶಿಗಳ ಸಶಕ್ತ ಗುಂಪು (ಇಜಿಒಎಸ್) ರಚಿಸಿತು.

ಪಿಪಿಪಿಎಸಿ ವಹಿವಾಟು ದಾಖಲೆಗಳನ್ನು ಅನುಮೋದಿಸಿತು. ಸಂಪೂರ್ಣ ಬಿಡ್ಡಿಂಗ್ ಪ್ರಕ್ರಿಯೆಯನ್ನು ನೀತಿ ಆಯೋಗ, ವೆಚ್ಚ ಇಲಾಖೆ ಮತ್ತು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಪ್ರತಿನಿಧಿಗಳಿರುವ ಇಜಿಒಎಸ್ ಮೇಲ್ವಿಚಾರಣೆ ಮತ್ತು ನಿರ್ದೇಶನದಡಿಯಲ್ಲಿ ನಡೆಸಲಾಯಿತು.

ವಿಮಾನ ನಿಲ್ದಾಣ ಪ್ರಾಧಿಕಾರವು 14.12.2018 ರಂದು ಜಾಗತಿಕ ಸ್ಪರ್ಧಾತ್ಮಕ ಬಿಡ್ಡಿಂಗ್ ಆಹ್ವಾನಿಸಿತ್ತು. ಇದರಲ್ಲಿ ಪ್ರತಿ ಪ್ರಯಾಣಿಕರ ಶುಲ್ಕವು ಬಿಡ್ಡಿಂಗ್ ನಿಯತಾಂಕವಾಗಿತ್ತು. ತಾಂತ್ರಿಕ ಬಿಡ್‌ಗಳನ್ನು 16.02.2019 ರಂದು ಮತ್ತು ಅರ್ಹ ಬಿಡ್ ಗಳ ಹಣಕಾಸು ಬಿಡ್‌ಗಳನ್ನು 25.02.2019 / 26.02.2019 ರಂದು ತೆರೆಯಲಾಯಿತು. ಮೆಸರ್ಸ್ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಎಲ್ಲಾ ಮೂರು ವಿಮಾನ ನಿಲ್ದಾಣಗಳಿಗೆ ಅಂದರೆ ಜೈಪುರ, ಗುವಾಹಟಿ ಮತ್ತು ತಿರುವನಂತಪುರಂಗೆ ಪ್ರಯಾಣಿಕರ ಶುಲ್ಕಕ್ಕೆ ಹೆಚ್ಚಿನ ಮೊತ್ತವನ್ನು ಉಲ್ಲೇಖಿಸಿ ಎಲ್ಲಾ ಬಿಡ್‌ಗಳನ್ನು ಗೆದ್ದುಕೊಂಡಿದೆ.

***



(Release ID: 1647283) Visitor Counter : 218