ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ಯುಜಿಸಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

Posted On: 07 JUL 2020 2:40PM by PIB Bengaluru

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ಯುಜಿಸಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಪರೀಕ್ಷೆ ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ಯುಜಿಸಿಯ ಪರಿಷ್ಕೃತ ಮಾರ್ಗಸೂಚಿಯನ್ನು 2020ರ ಜುಲೈ 6 ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಸಿದ್ಧಾಂತ ಹಾಗೂ ಹಿತರಕ್ಷಣೆ ಗಮನದಲ್ಲಿರಿಸಿಕೊಂಡು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು. ಇದೇ ವೇಳೆ ಜಾಗತಿಕವಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರಗತಿ, ವೃತ್ತಿಪರ ಅವಕಾಶಗಳು, ಶೈಕ್ಷಣಿಕ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಕೇಂದ್ರ ಸಚಿವರು, ಕೋವಿಡ್-19 ಸಾಂಕ್ರಾಮಿಕದ ಕಷ್ಟಕರ ಸಂದರ್ಭದಲ್ಲಿ ಕಲಿಕೆ, ಬೋಧನೆ, ಪರೀಕ್ಷೆ ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ನಾನಾ ಸಮಸ್ಯೆಗಳನ್ನು ನಿವಾರಿಸಲು ಯುಜಿಸಿ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2020ರ ಏಪ್ರಿಲ್ ನಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ಅಗತ್ಯ ಶಿಫಾರಸ್ಸುಗಳನ್ನು ಮಾಡಲು ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯ ವರದಿ ಆಧರಿಸಿ ಯುಜಿಸಿ 2020ರ ಏಪ್ರಿಲ್ 29ರಂದು ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.ನಂತರ ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭ ಮತ್ತು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಹಾಗೂ ಪರೀಕ್ಷೆಗಳ ಕುರಿತಂತೆ ಮಾರ್ಗಸೂಚಿಗಳ ಬಗ್ಗೆ ಪರಿಶೀಲಿಸಿ ಸಲಹೆ ನೀಡುವಂತೆ ಯುಜಿಸಿ ಮತ್ತೆ ತಜ್ಞರ ಸಮಿತಿಯನ್ನು ಕೋರಿತ್ತು.

ಸಮಿತಿ ನೀಡಿದ್ದ ವರದಿಯನ್ನು ಆಯೋಗ 06.07.2020ರಂದು ನಡೆದ ತುರ್ತು ಸಭೆಯಲ್ಲಿ ಅಂಗೀಕರಿಸಿತು ಮತ್ತು ‘ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳ ಪರೀಕ್ಷೆ ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತಂತೆ ಯುಜಿಸಿ ಪರಿಷ್ಕೃತ ಮಾರ್ಗಸೂಚಿ’ಗೆ ಅನುಮೋದನೆ ನೀಡಿತು.

ಮಾರ್ಗಸೂಚಿಯ ಪ್ರಮುಖಾಂಶಗಳು ಕೆಳಗಿನಂತಿವೆ:

  • ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಮತ್ತು ನ್ಯಾಯಯುತ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುವುದು ಹಾಗೂ ಹಿತರಕ್ಷಣೆ ಮಾಡುವುದು ಮುಖ್ಯವಾಗಿದೆ. ಇದೇ ವೇಳೆ ಜಾಗತಿಕವಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರಗತಿ, ವೃತ್ತಿಪರ ಅವಕಾಶಗಳು ಹಾಗೂ ಶೈಕ್ಷಣಿಕ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಯಾವುದೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಪರೀಕ್ಷೆಗಳ ಫಲಿತಾಂಶ ವಿದ್ಯಾರ್ಥಿಗಳಿಗೆ ವಿಶ್ವಾಸ ಮತ್ತು ತೃಪ್ತಿಯನ್ನು ತಂದುಕೊಡಲಿದೆ ಮತ್ತು ಅದು ಅವರ ದಕ್ಷತೆ, ಸಾಧನೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಜಾಗತಿಕವಾಗಿ ಅಗತ್ಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
  • ವಿಶ್ವ ವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು 2020ರ ಸೆಪ್ಟೆಂಬರ್ ಅಂತ್ಯದೊಳಗೆ ಆಫ್ ಲೈನ್(ಪೆನ್ನು ಮತ್ತು ಪೇಪರ್ ನಿಂದ ಬರೆಯುವುದು), ಆನ್ ಲೈನ್/ಮಿಶ್ರಣ(ಆನ್ ಲೈನ್ ಮತ್ತು ಆಫ್ ಲೈನ್) ಮಾದರಿಯಲ್ಲಿ ಟರ್ಮಿನಲ್ ಸೆಮಿಸ್ಟರ್/ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವುದು.
  • ಸೆಮಿಸ್ಟರ್/ಅಂತಮ ವರ್ಷದ ವಿದ್ಯಾರ್ಥಿಗಳು ಬ್ಯಾಕ್ ಲಾಗ್ ಉಳಿಸಿಕೊಂಡಿದ್ದರೆ ಅಂತಹ ವೇಳೆ ವಿದ್ಯಾರ್ಥಿಗಳಿಗೆ ಆಫ್ ಲೈನ್ ಮೂಲಕವೇ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು(ಪೆನ್ನು ಮತ್ತು ಪೇಪರ್) ಆನ್ ಲೈನ್/ಮಿಶ್ರಣ(ಆನ್ ಲೈನ್ ಮತ್ತು ಆಫ್ ಲೈನ್) ಯಾವುದು ಸಾಧ್ಯ ಮತ್ತು ಸೂಕ್ತವೋ ರೀತಿ ಮಾಡುವುದು.
  • ಒಂದು ವೇಳೆ ಯಾವುದಾದರೂ ಕಾರಣದಿಂದ ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಗಳಿಗೆ ಸೆಮಿಸ್ಟರ್/ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗದಿದ್ದರೆ ಆತ/ಆಕೆಗೆ ಮತ್ತೊಂದು ಅವಕಾಶ ನೀಡಿ ವಿಶೇಷ ಪರೀಕ್ಷೆಯನ್ನು ನಡೆಸಬೇಕು. ವಿಶ್ವವಿದ್ಯಾಲಯ ಯಾವಾಗ ಸಾಧ್ಯವೋ ಅವಾಗ ಕೋರ್ಸ್ ಗವಿಷಯ (ಗಳ)/ಪರೀಕ್ಷೆ(ಗಳನ್ನು) ಯನ್ನು ನಡೆಸಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಮೇಲಿನ ಅವಕಾಶ ಪ್ರಸಕ್ತ ಶೈಕ್ಷಣಿ ವರ್ಷ 2019-20ಯಲ್ಲಿ ಒಮ್ಮೆ ಮಾತ್ರ ನೀಡುವ ಅವಕಾಶವಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ.
  • ಇಂಟರ್ ಮೀಡಿಯೇಟ್ ಸೆಮಿಸ್ಟರ್/ ವರ್ಷದ ಪರೀಕ್ಷೆಗಳ ಮಾರ್ಗಸೂಚಿಗಳು 29.04.2020ರಲ್ಲಿ ಪ್ರಕಟಿಸಿದ್ದಂತೆ ಇರುತ್ತವೆ ಅವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
  • ವಿಶ್ವ ವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು 2020ರ ಏಪ್ರಿಲ್ 29ರಂದು ಮೊದಲು ಬಿಡುಗಡೆ ಮಾಡಲಾಗಿದ್ದ ಮಾರ್ಗಸೂಚಿಯಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ.

2020ರ ಏಪ್ರಿಲ್ 29ರಂದು ಬಿಡುಗಡೆ ಮಾಡಲಾಗಿದ್ದ ಯುಜಿಸಿಯ ಮಾರ್ಗಸೂಚಿಗಳಿಗೆ ಇಲ್ಲಿ ಕ್ಲಿಕ್ ಮಾಡಿ:

***



(Release ID: 1637104) Visitor Counter : 232