ಪ್ರಧಾನ ಮಂತ್ರಿಯವರ ಕಛೇರಿ

“ಪರೀಕ್ಷಾ ಪೆ ಚರ್ಚಾ 3.0”: ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿಯವರ ಸಂವಾದ

Posted On: 20 JAN 2020 3:22PM by PIB Bengaluru

ಪರೀಕ್ಷಾ ಪೆ ಚರ್ಚಾ 3.0”: ವಿದ್ಯಾರ್ಥಿಗಳುಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿಯವರ ಸಂವಾದ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೆ ಚರ್ಚಾ 3.0 ಅಂಗವಾಗಿ ನವದೆಹಲಿಯ ತಾಲ್ಕಟೋರಾ  ಕ್ರೀಡಾಂಗಣದಲ್ಲಿಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 50 ಮಂದಿ ದಿವ್ಯಾಂಗ ವಿದ್ಯಾರ್ಥಿಗಳು ಸಹ ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರುತೊಂಬತ್ತು ನಿಮಿಷಗಳ ಕಾಲ ನಡೆದ  ಸಂವಾದದಲ್ಲಿವಿದ್ಯಾರ್ಥಿಗಳು ಪ್ರಧಾನಮಂತ್ರಿಯವರಿಂದ  ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಪಡೆದರು. ಈ ವರ್ಷವೂ ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿ ಪ್ರಧಾನಿಯವರು ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ವರ್ಷ ಮತ್ತು ಹೊಸ ದಶಕಕ್ಕೆ ಶುಭ ಹಾರೈಸಿದರು. ಈ ದಶಕದ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, ಪ್ರಸ್ತುತ ದಶಕದ ಆಶಯಗಳು ಮತ್ತು ಆಕಾಂಕ್ಷೆಗಳು ದೇಶದಲ್ಲಿ ಅಂತಿಮ ವರ್ಷದ ಶಾಲಾ ಶಿಕ್ಷಣದಲ್ಲಿರುವ ಮಕ್ಕಳ ಮೇಲೆ ಅವಲಂಬಿತವಾಗಿವೆ ಎಂದರು.

 ದಶಕದಲ್ಲಿ ದೇಶವು ಏನೇ ಮಾಡಿದರೂ, 10, 11 ಮತ್ತು 12 ನೇ ತರಗತಿಗಳಲ್ಲಿರುವ ಮಕ್ಕಳು ಬಹಳ ದೊಡ್ಡ ಪಾತ್ರವನ್ನು ವಹಿಸಲಿದ್ದಾರೆದೇಶವು ಹೊಸ ಎತ್ತರವನ್ನು ತಲುಪುವುದುಹೊಸ ಭರವಸೆಗಳನ್ನು ಸಾಧಿಸುವುದು  ನವ ಪೀಳಿಗೆಯ ಮೇಲೆ ಅವಲಂಬಿತವಾಗಿದೆ ” ಎಂದು ಅವರು ಹೇಳಿದರು.

ಹಲವಾರು ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದರೂನನ್ನ ಹೃದಯಕ್ಕೆ ಹತ್ತಿರವಾದ ಒಂದು ಕಾರ್ಯಕ್ರಮವೆಂದರೆ ಪರೀಕ್ಷಾ ಪೆ ಚರ್ಚಾ ಎಂದು ಸಂವಾದವನ್ನು ಪ್ರಾರಂಭಿಸುವ ಮೊದಲು ಅವರು ಹೇಳಿದರು.

"ಪ್ರಧಾನ ಮಂತ್ರಿಯಾಗಿ ಹಲವು ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆಅಂತಹ ಸಂವಾದಗಳಲ್ಲಿ ಬಹಳಷ್ಟು ಕಲಿಯುತ್ತೇವೆಅವುಗಳಲ್ಲಿ ಪ್ರತಿಯೊಂದೂ ಹೊಸ ಅನುಭವಗಳ ಗುಚ್ಛವಾಗಿರುತ್ತದೆಆದರೆನನ್ನ ಹೃದಯಕ್ಕೆ ಹೆಚ್ಚು ಹತ್ತಿರವಾದ ಕಾರ್ಯಕ್ರಮದ ಯಾವುದು ಎಂದು ಯಾರಾದರೂ ಕೇಳಿದರೆಅದು  ಪರೀಕ್ಷಾ ಪೆ ಚರ್ಚಾ ಎಂದು ನಾನು ಹೇಳುತ್ತೇನೆನಾನು ಹ್ಯಾಕಥಾನ್ಗಳಿಗೆ ಹಾಜರಾಗಲು ಇಷ್ಟಪಡುತ್ತೇನೆಅಲ್ಲಿ ಭಾರತದ ಯುವಕರ ಶಕ್ತಿ ಮತ್ತು ಪ್ರತಿಭೆಯ ಪ್ರದರ್ಶನವಾಗುತ್ತದೆ ”ಎಂದು ಅವರು ಹೇಳಿದರು.

ನಿರಾಸಕ್ತಿ ಹಾಗೂ ಚಂಚಲತೆಗಳೊಂದಿಗೆ ವ್ಯವಹರಿಸುವುದು:

ಅಧ್ಯಯನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಕುರಿತ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಪ್ರಧಾನ ಮಂತ್ರಿಯವರು ಉತ್ತರಿಸುತ್ತಾ, ಹೆಚ್ಚಾಗಿ ವಿದ್ಯಾರ್ಥಿಗಳು ತಮ್ಮ ಬಾಹ್ಯ ಕಾರಣಗಳಿಂದಾಗಿ ನಿರಾಸಕ್ತಿ ತಾಳುತ್ತಾರೆ ಮತ್ತು ಅವರು ತಮ್ಮದೇ ಆದ ನಿರೀಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಯತ್ನಿಸುತ್ತಾರೆ ಎಂದರು.

ನಿರಾಸಕ್ತಿಗೆ ಕಾರಣವನ್ನು ಕಂಡುಹಿಡಿಯಿರಿ ಮತ್ತು ಅದನ್ನು ಹೇಗೆ ಎದುರಿಸಬೇಕೆಂದು ಆಲೋಚಿಸಿ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಇತ್ತೀಚಿನ ಚಂದ್ರಯಾನ ಸಮಸ್ಯೆ ಮತ್ತು ಇಸ್ರೋಗೆ ತಮ್ಮ ಭೇಟಿಯನ್ನು ಉದಾಹರಣೆಯಾಗಿ ನೀಡಿದರು.

“ಆಸಕ್ತಿ, ನಿರಾಸಕ್ತಿ ಬಹಳ ಸಾಮಾನ್ಯವಾದ್ದು ಪ್ರತಿಯೊಬ್ಬರೂ ಈ ಭಾವನೆಗಳನ್ನು ಹಾದು ಹೋಗುತ್ತಾರೆ. ಈ ನಿಟ್ಟಿನಲ್ಲಿ, ಚಂದ್ರಯಾನ ಸಮಯದಲ್ಲಿ ನಾನು ಇಸ್ರೋಗೆ ಭೇಟಿ ನೀಡಿದ್ದನ್ನು ಮತ್ತು ನಮ್ಮ ಕಠಿಣ ಪರಿಶ್ರಮದ ವಿಜ್ಞಾನಿಗಳೊಂದಿಗೆ ಕಳೆದ ಸಮಯವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ವೈಫಲ್ಯಗಳನ್ನು ಹಿನ್ನಡೆ ಅಥವಾ ಹಿಂಜರಿಕೆಯಾಗಿ ನೋಡಬಾರದು. ನಾವು ಜೀವನದ ಪ್ರತಿಯೊಂದುಕ್ಕೂ ಉತ್ಸಾಹವನ್ನು ಸೇರಿಸಬಹುದು. ತಾತ್ಕಾಲಿಕ ಹಿನ್ನಡೆಯು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರ್ಥವಲ್ಲ. ವಾಸ್ತವವಾಗಿ ಒಂದು ಹಿನ್ನಡೆ ಎಂದರೆ ಇನ್ನೂ ಉತ್ತಮವಾದದ್ದು ಬರಬೇಕಿದೆ ಎಂದರ್ಥ. ನಮ್ಮ ಸಮಸ್ಯೆಯ ಸಂದರ್ಭಗಳನ್ನು ಉಜ್ವಲ ಭವಿಷ್ಯದ ಮೆಟ್ಟಿಲುಗಳಾಗಿ ಪರಿವರ್ತಿಸಲು ನಾವು ಪ್ರಯತ್ನಿಸಬೇಕು ” ಎಂದು ಪ್ರಧಾನಿ ತಿಳಿಸಿದರು.

ಸೋಲಿನ ದವಡೆಯಿಂದ ಪಾರಾಗಿ ಭಾರತಕ್ಕೆ ಗೆಲುವು ದಕ್ಕಿಸಲು 2001 ರಲ್ಲಿ ಭಾರತ - ಆಸ್ಟ್ರೇಲಿಯಾ ಪಂದ್ಯದ ಸಂದರ್ಭದಲ್ಲಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ವಿ ವಿ ಎಸ್ ಲಕ್ಷ್ಮಣ್ ಅವರು ಹೇಗೆ ಬ್ಯಾಟಿಂಗ್ ಮಾಡಿದರು ಎಂಬುದನ್ನು ಪ್ರಧಾನಿ ಉದಾಹರಣೆಯಾಗಿ ನೀಡಿದರು.

ಬೌಲರ್ ಅನಿಲ್ ಕುಂಬ್ಳೆ ತಾವು ಗಾಯಗೊಂಡಿದ್ದರೂ ಭಾರತದ ಗೆಲುವಿಗಾಗಿ ಹೇಗೆ ಬೌಲ್ ಮಾಡಿದರು ಎಂಬುದರ ಕುರಿತು ಅವರು ಮಾತನಾಡಿದರು.

"ಇದು ಸಕಾರಾತ್ಮಕ ಪ್ರೇರಣೆಯ ಶಕ್ತಿ" ಎಂದು ಅವರು ಹೇಳಿದರು.

ಪಠ್ಯೇತರ ಚಟುವಟಿಕೆಗಳು ಮತ್ತು ಅಧ್ಯಯನವನ್ನು ಸಮತೋಲನಗೊಳಿಸುವುದು:

ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಹೇಗೆ ಸಮತೋಲನಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ, ವಿದ್ಯಾರ್ಥಿಯ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

“ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿದ್ದರೆ ವಿದ್ಯಾರ್ಥಿಯು ರೋಬೋಟ್‌ನಂತಾಗಬಹುದು” ಎಂದರು.

ಅಧ್ಯಯನ ಮತ್ತು ಪಠ್ಯೇತರ ಚಟುವಟಿಕೆಗಳ ಸಮತೋಲನಕ್ಕೆ ವಿದ್ಯಾರ್ಥಿಗಳಿಂದ ಸಮಯದ ಸೂಕ್ತ ನಿರ್ವಹಣೆಯ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.

"ಇಂದು ಸಾಕಷ್ಟು ಅವಕಾಶಗಳಿವೆ. ಯುವಜನತೆ ಅವುಗಳನ್ನು ಬಳಸಿಕೊಳ್ಳುತ್ತಾರೆ ಮತ್ತು ಸರಿಯಾದ ಉತ್ಸಾಹದಿಂದ ಅವರ ಹವ್ಯಾಸ ಅಥವಾ ಆಸಕ್ತಿಯ ಚಟುವಟಿಕೆಯನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.

ಆದಾಗ್ಯೂ ಪಠ್ಯೇತರ ಚಟುವಟಿಕೆಗಳೇ ತಮ್ಮ ಮಕ್ಕಳ ಫ್ಯಾಷನ್ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಪೋಷಕರಿಗೆ ಎಚ್ಚರಿಕೆ ನೀಡಿದರು.

ಮಕ್ಕಳ ಉತ್ಸಾಹವು ಪೋಷಕರಿಗೆ ಫ್ಯಾಷನ್ ಆಗುವುದು ಒಳ್ಳೆಯದಲ್ಲ. ಪಠ್ಯೇತರ ಚಟುವಟಿಕೆಗಳು ಗ್ಲಾಮರ್ ಚಾಲಿತವಾಗಬೇಕಿಲ್ಲ. ಪ್ರತಿ ಮಗುವೂ ತಾನು ಇಷ್ಟಪಡುವುದನ್ನು ಮುಂದುವರಿಸಲಿ ” ಎಂದು ಅವರು ಹೇಳಿದರು.

ಅಂಕಗಳೇ ಎಲ್ಲವನ್ನೂ ನಿರ್ಧರಿಸುತ್ತವೆಯೇ:

ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ ಮತ್ತು ಅವುಗಳೇ ನಿರ್ಧರಿತ ಅಂಶವೇ ಎಂಬ ಪ್ರಶ್ನೆಗೆ ಪ್ರಧಾನಿಯವರು ಉತ್ತರಿಸುತ್ತಾ, “ನಮ್ಮ ಶಿಕ್ಷಣ ವ್ಯವಸ್ಥೆಯು ವಿವಿಧ ಪರೀಕ್ಷೆಗಳಲ್ಲಿ ನಮ್ಮ ಸಾಧನೆಯ ಆಧಾರದ ಮೇಲೆ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ನಾವೂ ಸಹ ಉತ್ತಮ ಅಂಕಗಳನ್ನು ಗಳಿಸುವ ಕಡೆಯೇ ನಮ್ಮ ಗಮನವನ್ನು ಕೇಂದ್ರೀಕರಿಸುತ್ತೇವೆ ಮತ್ತು ನಮ್ಮ ಪೋಷಕರೂ ಸಹ ಅದರ ಕಡೆಗೇ ನಮಗೆ ಒತ್ತಡ ಹಾಕುತ್ತಾರೆ.“ ಎಂದರು.

ಇಂದು ಹಲವಾರು ಅವಕಾಶಗಳಿವೆ ಎಂದು ಹೇಳಿದ ಅವರು, ಪರೀಕ್ಷೆಗಳಲ್ಲಿನ ಯಶಸ್ಸು ಅಥವಾ ವೈಫಲ್ಯವು ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಭಾವನೆಯಿಂದ ಹೊರಬರಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು..

“ಅಂಕಗಳೇ ಜೀವನವಲ್ಲ. ಅದೇ ರೀತಿ ಪರೀಕ್ಷೆ ಸಹ ನಮ್ಮ ಇಡೀ ಜೀವನವನ್ನು ನಿರ್ಧರಿಸುವ ಅಂಶವಲ್ಲ. ಅದೊಂದು ಮೆಟ್ಟಿಲು, ಜೀವನದ ಪ್ರಮುಖ ಮೆಟ್ಟಿಲು. ಸರ್ವಸ್ವವೂ ಅದೇ ಎಂದು ಹೇಳಬೇಡಿ ಎಂದು ಪೋಷಕರಿಗೆ ಎಂದು ನಾನು ಮನವಿ ಮಾಡುತ್ತೇನೆ. ಅಂಕಗಳು ಬರದಿದ್ದರೆ, ನೀವು ಎಲ್ಲವನ್ನೂ ಕಳೆದುಕೊಂಡಂತೆ ವರ್ತಿಸಬೇಡಿ. ನೀವು ಯಾವುದೇ ಕ್ಷೇತ್ರದಲ್ಲಾದರೂ ಸಾಧಿಸಬಹುದು. ನಿಮಗೆ ವಿಫುಲ ಅವಕಾಶಗಳಿವೆ ”ಎಂದು ಅವರು ಹೇಳಿದರು.

ಪರೀಕ್ಷೆಗಳು ಮುಖ್ಯ, ಆದರೆ ಪರೀಕ್ಷೆಗಳೇ ಜೀವನವಲ್ಲ. ಈ ಮನಸ್ಥಿತಿಯಿಂದ ನೀವು ಹೊರಬರಬೇಕು ಎಂದು ಅವರು ಹೇಳಿದರು.

ಶಿಕ್ಷಣದಲ್ಲಿ ತಂತ್ರಜ್ಞಾನದ ಮಹತ್ವ

ತಂತ್ರಜ್ಞಾನದ ಮಹತ್ವ ಮತ್ತು ಶಿಕ್ಷಣದಲ್ಲಿ ಅದರ ಬಳಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು, ನೂತನ ತಂತ್ರಜ್ಞಾನದೊಂದಿಗೆ ತಮ್ಮನ್ನು ತಾವು ಪರಿಷ್ಕರಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಕೋರಿದರು. ಆದರೆ ಅದರ ದುರುಪಯೋಗದ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದರು.

“ತಂತ್ರಜ್ಞಾನದ ಬಗೆಗಿನ ಭಯ ಒಳ್ಳೆಯದಲ್ಲ. ತಂತ್ರಜ್ಞಾನವು ನಮ್ಮ ಮಿತ್ರ. ಕೇವಲ ತಂತ್ರಜ್ಞಾನದ ಜ್ಞಾನವು ಸಾಕಾಗುವುದಿಲ್ಲ. ಅದರ ಉಪಯೋಗ ಬಹಳ ಮುಖ್ಯವಾಗಿದೆ. ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ, ಆದರೆ ನಾವು ಅದನ್ನು ದುರುಪಯೋಗಪಡಿಸಿಕೊಂಡರೆ ಅದು ನಮ್ಮ ಅಮೂಲ್ಯವಾದ ಸಮಯ ಮತ್ತು ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತದೆ ”ಎಂದು ಅವರು ಹೇಳಿದರು.

ಹಕ್ಕುಗಳು Vs ಕರ್ತವ್ಯಗಳು

ವಿದ್ಯಾರ್ಥಿಗಳ ಹಕ್ಕುಗಳು ಯಾವುವು ಮತ್ತು ಜನರಿಗೆ ತಮ್ಮ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು, ವ್ಯಕ್ತಿಯ ಹಕ್ಕುಗಳು ಅವನ ಕರ್ತವ್ಯಗಳಲ್ಲಿಯೇ ಅಡಗಿರುತ್ತವೆ ಎಂದು ಹೇಳಿದರು.

ಶಿಕ್ಷಕರ ಉದಾಹರಣೆ ನೀಡಿದ ಅವರು, ಒಬ್ಬ ಶಿಕ್ಷಕ ತನ್ನ ಕರ್ತವ್ಯಗಳನ್ನು ನಿರ್ವಹಿಸಿದರೆ ಅವನು ವಿದ್ಯಾರ್ಥಿಗಳ ಹಕ್ಕುಗಳನ್ನು ಪೂರೈಸುತ್ತಿದ್ದಾನೆ ಎಂದರ್ಥ ಎಂದರು.

ರಾಷ್ಟ್ರಪಿತ ಗಾಂಧೀಜಿಯವರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿಯವರು, “ಮಹಾತ್ಮ ಗಾಂಧಿಯವರು ಮೂಲಭೂತ ಕರ್ತವ್ಯಗಳಿಲ್ಲದೆ ಮೂಲಭೂತ ಹಕ್ಕುಗಳಿಲ್ಲ ಎಂದು ಹೇಳಿದ್ದರು” ಎಂದರು.

“ಇಂದು, ನಾನು 2047 ರಲ್ಲಿ ಸ್ವಾತಂತ್ರ್ಯ ನೂರು ವರ್ಷಗಳನ್ನು ಆಚರಿಸುವ, ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಕೆಲವು ಮೂಲಭೂತ ಕರ್ತವ್ಯಗಳ ಮೇಲೆ ಕಾರ್ಯನಿರ್ವಹಿಸಲು ಈ ಪೀಳಿಗೆಯವರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ”ಎಂದು ಅವರು ಹೇಳಿದರು.

ಪೋಷಕರು ಮತ್ತು ಶಿಕ್ಷಕರ ಒತ್ತಡ ಮತ್ತು ನಿರೀಕ್ಷೆಗಳನ್ನು ಎದುರಿಸುವುದು ಹೇಗೆ?

ಪೋಷಕರು ಮತ್ತು ಶಿಕ್ಷಕರಿಂದ ಬರುವ ಒತ್ತಡ ಮತ್ತು ನಿರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದ ಪ್ರಧಾನಿಯವರು, ಪೋಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರದೆ ಅವರಿಗೆ ಬೆಂಬಲವಾಗಿರಬೇಕು ಎಂದು ಆಗ್ರಹಿಸಿದರು.

“ಮುಂದಿನ ದಾರಿ ಮಕ್ಕಳ ಮೇಲೆ ಒತ್ತಡ ಹೇರುವುದರಲ್ಲಿಲ್ಲ, ಅವರಿಗೆ ಬೆಂಬಲ ನೀಡುವುದರಲ್ಲಿದೆ. ಅವರ ಆಂತರಿಕ ಸಾಮರ್ಥ್ಯವನ್ನು ಹೊರತೆಗೆಯುವ ಕೆಲಸಗಳನ್ನು ಮಾಡಲು ಮಕ್ಕಳನ್ನು ಹುರಿದುಂಬಿಸಿ ” ಎಂದರು.

ಪರೀಕ್ಷೆ ಸಮಯದಲ್ಲಿ ಅಧ್ಯಯನ ಮತ್ತು ವಿಶ್ರಾಂತಿಗೆ ಉತ್ತಮ ಸಮಯ ಮತ್ತು ಬೋರ್ಡ್ ಪರೀಕ್ಷೆಗಳ ಭಯ

ಅಧ್ಯಯನ ಮಾಡಲು ಉತ್ತಮ ಸಮಯ ಯಾವುದು ಎಂಬ ಪ್ರಶ್ನೆಗೆ, ವಿಶ್ರಾಂತಿಯೂ ಅಧ್ಯಯನದಷ್ಟೇ ಮುಖ್ಯ ಎಂದು ಪ್ರಧಾನಿ ಸಲಹೆ ನೀಡಿದರು.

ಪರೀಕ್ಷೆಯ ಸಮಯದಲ್ಲಿ ಹಠಾತ್ತಾಗಿ ಎಲ್ಲವೂ ಖಾಲಿಯಾದ ಸ್ಥಿತಿಯ ಬಗ್ಗೆ ಉತ್ತರಿಸಿದ  ಪ್ರಧಾನಮಂತ್ರಿಯವರು,  ವಿದ್ಯಾರ್ಥಿಗಳು ಸಮಗ್ರವಾಗಿ ತಯಾರಿ ಮಾಡಿಕೊಳ್ಳಬೇಕು ಎಂದರು.

"ವಿದ್ಯಾರ್ಥಿಗಳು ತಮ್ಮದೇ ಆದ ತಯಾರಿಯ ಬಗ್ಗೆ ವಿಶ್ವಾಸ ಹೊಂದಿರಬೇಕು. ಯಾವುದೇ ರೀತಿಯ ಒತ್ತಡದಿಂದ ಪರೀಕ್ಷಾ ಹಾಲ್‌ಗೆ ಪ್ರವೇಶಿಸಬೇಡಿ. ಇತರರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಚಿಂತಿಸಬೇಡಿ. ನಿಮ್ಮ ಬಗ್ಗೆ ನಂಬಿಕೆ ಇರಿಸಿಕೊಳ್ಳಿ ಮತ್ತು ನೀವು ಸಿದ್ಧಪಡಿಸಿಕೊಂಡ ವಿಷಯಗಳತ್ತ ಮಾತ್ರ ಗಮನ ಹರಿಸಿ ” ಎಂದು ಅವರು ಹೇಳಿದರು.

ಭವಿಷ್ಯದ ವೃತ್ತಿಯ ಆಯ್ಕೆಗಳು

ಭವಿಷ್ಯದ ವೃತ್ತಿಯ ಆಯ್ಕೆಗಳ ಬಗ್ಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ತಮ್ಮ ಮನಸ್ಸು ಹೇಳಿದಂತೆ ಕೇಳಬೇಕು ಮತ್ತು ದೇಶ ಮತ್ತು ಅದರ ಅಭಿವೃದ್ಧಿಗಾಗಿ ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.

“ವೃತ್ತಿಜೀವನವು ಬಹಳ ಮುಖ್ಯ, ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಾಗ ನಾವು ಯಾವಾಗಲೂ ರಾಷ್ಟ್ರಕ್ಕೆ ಕೊಡುಗೆ ನೀಡಬಹುದು ”ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯ ಸಂವಾದ ಕಾರ್ಯಕ್ರಮ "ಪರೀಕ್ಷಾ ಪೆ ಚರ್ಚಾ 2020" ರ ಮೂರನೇ ಆವೃತ್ತಿಗೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ 'ಕಿರು ಪ್ರಬಂಧ' ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಅರ್ಜಿಗಳನ್ನುಆನ್‌ಲೈನ್ ಮೂಲಕ 2019 ರ ಡಿಸೆಂಬರ್ 2 ರಿಂದ 2019 ರ ಡಿಸೆಂಬರ್ 23 ರವರೆಗೆ www.mygov.in ಮೂಲಕ ಆಹ್ವಾನಿಸಲಾಗಿತ್ತು. ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಅದರಲ್ಲಿ 2.6 ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 2019 ರಲ್ಲಿ ಸ್ಪರ್ಧೆಯಲ್ಲಿ 1.03 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯ್ಕೆಯಾದ ವಿಜೇತರು ಪರೀಕ್ಷಾ ಪೆ ಚರ್ಚಾ 2020 ಕ್ಕೆ ಹಾಜರಾಗಿದ್ದರು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಿದರು.

ಸಿಬಿಎಸ್‌ಇ ಮತ್ತು ಕೆವಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಕುರಿತು ಚಿತ್ರಕಲೆ ಮತ್ತು ಪೋಸ್ಟರ್ ತಯಾರಿಸುವ ಸ್ಪರ್ಧೆಯನ್ನು ನಡೆಸಲಾಯಿತು. ಸುಮಾರು 725 ಪೋಸ್ಟರ್‌ಗಳು ಮತ್ತು ವರ್ಣಚಿತ್ರಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ ಸುಮಾರು 50ನ್ನು ಆಯ್ಕೆ ಮಾಡಿ ಪರೀಕ್ಷಾ ಪೆ ಚರ್ಚಾ 2020 ರ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಮುಂದೆ ಪ್ರದರ್ಶಿಸಲಾಯಿತು.

 

***



(Release ID: 1599869) Visitor Counter : 136