ಸಂಪುಟ

ಕಂಪನಿಗಳ(ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ 2019 ಹೊರಡಿಸಲು ಸಂಪುಟ ಅನುಮೋದನೆ

Posted On: 19 FEB 2019 8:53PM by PIB Bengaluru

ಕಂಪನಿಗಳ(ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ 2019 ಹೊರಡಿಸಲು ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕಂಪನಿಗಳ(ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ 2019 ಹೊರಡಿಸಲು ಅನುಮೋದನೆ ನೀಡಿದೆ. ಈ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಬಾಕಿ ಇರುವ ಮಸೂದೆಯ ಬದಲಾಗಿ ಜಾರಿಗೊಳ್ಳಲಿದೆ. 2013ರ ಕಂಪನಿ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ಅಪರಾಧಗಳ ಪರಿಶೀಲನಾ ಸಮಿತಿಯ ಶಿಫಾರಸು ಆಧರಿಸಿ ಇದನ್ನು ತರಲಾಗಿದೆ. ಆ ಮೂಲಕ ಕಾನೂನು ಬದ್ಧವಾಗಿ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳಿಗೆ ಪೂರಕ ವಾತಾವರಣ ಸೃಷ್ಟಿಸುವುದು ಮತ್ತು 2013ರ ಕಂಪನಿ ಕಾಯ್ದೆಯಂತೆ ಆಡಳಿತ ಮತ್ತು ಕಾರ್ಯನೀತಿ ಜಾರಿಯಲ್ಲಿನ ಅಂತರವನ್ನು ತುಂಬುವ ಉದ್ದೇಶವಿದೆ. ಈ ಸುಗ್ರೀವಾಜ್ಞೆಯಿಂದಾಗಿ ಕಾನೂನು ಜಾರಿ ಹೆಚ್ಚಾಗುವುದಲ್ಲದೆ, ಯಾರು ನಿಯಮಗಳನ್ನು ಉಲ್ಲಂಘಿಸುತ್ತಾರೋ ಅಂತಹವರಿಗೆ ಕಠಿಣ ದಂಡನೆಯೂ ಆಗಲಿದೆ. 

ವಿವರಗಳು :- 

ಕಂಪನಿಗಳ(ತಿದ್ದುಪಡಿ) ಮಸೂದೆ 2018ಅನ್ನು ನಂತರ ಕಂಪನಿಗಳ(ತಿದ್ದುಪಡಿ) ಮಸೂದೆ 2019 ಎಂದು ಮರು ನಾಮಕರಣ ಮಾಡಿ ಅದನ್ನು 2018ರ ಡಿಸೆಂಬರ್ 20ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು ಮತ್ತು ಪರಿಶೀಲನೆ ನಂತರ 2019ರ ಜನವರಿ 4ರಂದು ಲೋಕಸಭೆ ಅದಕ್ಕೆ ಅನುಮೋದನೆ ನೀಡಿತ್ತು. ಆ ಮಸೂದೆಯನ್ನು ರಾಜ್ಯಸಭೆಗೆ ಕಳುಹಿಸಲಾಗಿದ್ದು, ಅದನ್ನು ಸದನ ಪರಿಶೀಲಿಸಿಲ್ಲ ಮತ್ತು ಅದಕ್ಕೆ ಚಳಿಗಾಲದ ಅಧಿವೇಶನ ಅಥವಾ ಬಜೆಟ್ ಅಧಿವೇಶನದಲ್ಲೂ ಮೇಲ್ಮನೆ ಅಂಗೀಕಾರ ನೀಡಿಲ್ಲ. 

ಹಿಂದೆ 2018ರ ನವೆಂಬರ್ 2(ಸುಗ್ರೀವಾಜ್ಞೆ 2018, 9) ಮತ್ತು 2019ರ ಜನವರಿ 12(ಸುಗ್ರೀವಾಜ್ಞೆ 2019, 3) ಹೀಗೆ ಎರಡು ಬಾರಿ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು. ಅವುಗಳಲ್ಲಿ ಒಟ್ಟಾರೆ ಎರಡು ಹೊಸ ಸೆಕ್ಷನ್ ಗಳ ಸೇರ್ಪಡೆ ಸೇರಿದಂತೆ ಒಟ್ಟಾರೆ 29 ಸೆಕ್ಷನ್ ಗಳಿಗೆ ತಿದ್ದುಪಡಿ ತರಲಾಗಿದೆ. 

ಸಣ್ಣ ಪ್ರಮಾಣದ ಉಲ್ಲಂಘನೆಗಳು, ನಿಯಮಾವಳಿ ಹಾಗೂ ತಾಂತ್ರಿಕ ದೋಷಗಳಿಗೆ ನಾಗರಿಕ ಉತ್ತರದಾಯಿತ್ವ ನಿಗದಿಪಡಿಸುವುದಕ್ಕೆ ಈ ತಿದ್ದುಪಡಿಗಳು ನೆರವಾಗಲಿವೆ. ಅಲ್ಲದೆ ಈ ಕೆಳಗಿನ ವಲಯಗಳಲ್ಲಿ ಜಾರಿ ಕಾರ್ಯನೀತಿ ಮತ್ತು ಕಾರ್ಪೊರೇಟ್ ಆಡಳಿತದ ನಡುವಿನ ಕೊರತೆ ನೀಗಿಸಲು ಸುಗ್ರೀವಾಜ್ಞೆ ಸಹಾಯಕವಾಗಲಿದೆ. ಅವುಗಳೆಂದರೆ 

· 16 ಸಣ್ಣ ಅಪರಾಧಗಳನ್ನು ಮರು ವರ್ಗೀಕರಣ ಮಾಡಲಾಗಿದ್ದು, ಅವುಗಳನ್ನು ಪೂರ್ತಿ ಸಿವಿಲ್ ನ್ಯೂನತೆಗಳು ಎಂದು ಪರಿಗಣಿಸಲಾಗುವುದು. ಇದರಿಂದ ವಿಶೇಷ ನ್ಯಾಯಾಲಯಗಳಲ್ಲಿನ ವ್ಯಾಜ್ಯಗಳ ಸಂಖ್ಯೆ ತಗ್ಗಲಿದೆ. 

· ಎನ್ ಸಿ ಎಲ್ ಟಿಯ ಕೆಲವು ದೈನಂದಿನ ಕಾರ್ಯಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವುದು. ಅದೆಂದರೆ ಹಣಕಾಸು ವರ್ಷ ಬದಲಾವಣೆ ನಿಯಮ ಪಾಲನೆ ಮತ್ತು ಸಾರ್ವಜನಿಕರು ಹಾಗೂ ಖಾಸಗಿ ಕಂಪನಿಗಳ ಜೊತೆ ಸಮಾಲೋಚನೆ ನಡೆಸುವುದಾಗಿದೆ. 

· ನೋಂದಾಯಿತ ಕಂಪನಿಗಳು ನೋಂದಾಯಿತ ಕಚೇರಿಗಳನ್ನು ಹೊಂದಿದ್ದರೆ ಅಥವಾ ಅವುಗಳು ಕಾರ್ಯಾರಂಭ ಮಾಡಿ ವರದಿಗಳನ್ನು ಸಲ್ಲಿಸದಿದ್ದರೆ ಅಂತಹವುಗಳನ್ನು ರಿಜಿಸ್ಟ್ರಾರ್ ಆಫ್ ಕಂಪನೀಸ್ ನಿಂದ ತೆಗೆದುಹಾಕುವುದು. 

· ಸೃಷ್ಟಿ ಮತ್ತು ಮಾಡಿಫಿಕೇಶನ್ ಶುಲ್ಕ ವಿಧಿಸುವ ಕಾಲಾವಧಿ ಕಡಿತ ನಿಯಮಾವಳಿ. 

· ನಿರ್ದೇಶಕರು ನಿಯಮಾವಳಿ ಉಲ್ಲಂಘಿಸಿದರೆ ಅದನ್ನು ಅನರ್ಹತೆಗೆ ಆಧಾರವನ್ನಾಗಿ ಪರಿಗಣಿಸುವುದು. 

ಪರಿಣಾಮ :- 

ಈ ಬದಲಾವಣೆಯಿಂದಾಗಿ ಕಾರ್ಪೊರೇಟ್ ಗಳಿಂದ ನಿಯಮ ಪಾಲನೆ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಪರಿಣಾಮಕಾರಿ ಜಾರಿಯಿಂದಾಗಿ ಎನ್ ಸಿ ಎಲ್ ಟಿ ಮತ್ತು ವಿಶೇಷ ನ್ಯಾಯಾಲಯಗಳಲ್ಲಿನ ವ್ಯಾಜ್ಯಗಳ ಸಂಖ್ಯೆ ತಗ್ಗಲಿದೆ. ಪ್ರಸ್ತುತ ಬಾಕಿ ಇರುವ 40 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಶೇಕಡ 60ರಷ್ಟು ಪ್ರಕರಣಗಳು ನಿಯಮಾವಳಿಗಳಲ್ಲಿನ ದೋಷ ಮತ್ತಿತರ ಸಣ್ಣಪುಟ್ಟ ವಿಷಯಗಳಿಂದಾಗಿ ಉದ್ಭವಿಸಿರುವಂತಹವುಗಳು. ಅವುಗಳನ್ನು ರಾಜಿ ಅಥವಾ ಸಂಧಾನ ಕಾರ್ಯತಂತ್ರದ ಮೂಲಕ ಕಾರ್ಪೊರೇಟ್ ಕಂಪನಿಗಳ ಒಳಗೆ ಬಗೆಹರಿಸಿಕೊಳ್ಳುವ ಪ್ರಸ್ತಾವವಿದೆ. ತಿದ್ದುಪಡಿಗಳ ಪರಿಣಾಮದಿಂದಾಗಿ ಮುಂದಿನ ದಿನಗಳಲ್ಲಿ ಎನ್ ಸಿ ಎಲ್ ಟಿ ಮೇಲಿರುವ ಅಧಿಕ ಕೇಸುಗಳ ಒತ್ತಡ ಗಮನಾರ್ಹವಾಗಿ ತಗ್ಗಲಿದೆ. ಅಲ್ಲದೆ ವಿಶೇಷ ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ವಾಪಸ್ ಪಡೆದು, ನಿಯಮಾವಳಿಗಳ ದೋಷದಿಂದಾಗಿ ಉದ್ಭವಿಸಿರುವ ಪ್ರಕರಣಗಳಲ್ಲಿ ಕ್ರಿಮಿನಲ್ ವಿಚಾರಣೆ ಬದಲು ಕ್ಷಮಾದಾನ ಯೋಜನೆಯ ಮೂಲಕ ಕಂಪನಿಗಳಿಗೆ ನಾಗರಿಕ ಹೊಣೆಗಾರಿಕೆ ನಿಗದಿಪಡಿಸಲಾಗುವುದು. 

ಹಣಕಾಸು ಚಟುವಟಿಕೆಗಳ ವರದಿ ಮಂಡಿಸದಿರುವುದು ಮತ್ತು ವಾರ್ಷಿಕ ರಿಟರ್ನ್ಸ್ ಸಲ್ಲಿಸದಿರುವುದು ಮತ್ತಿತರ ನಿಯಮಾವಳಿ ಪಾಲನೆ ಮಾಡದಿರುವುದರಿಂದ ಉದ್ಭವಿಸುವ ಬಾಕಿ ಪ್ರಕರಣಗಳ ಲಭ್ಯ ದತ್ತಾಂಶ ವಿಶ್ಲೇಷಿಸಲಾಗುವುದು. ಅಂತಹ ಉಲ್ಲಂಘನೆಗಳನ್ನು ಮರು ವರ್ಗೀಕರಿಸುವುದಾದರೆ ಅವುಗಳನ್ನು ಸಣ್ಣ ಪ್ರಮಾಣದ ದಂಡ ಕಟ್ಟಿ ತಮ್ಮಲ್ಲೇ ಇತ್ಯರ್ಥಪಡಿಸಿಕೊಳ್ಳುವ ಕಾರ್ಯತಂತ್ರ ಪಾಲಿಸಬಹುದಾಗಿದೆ. ಇದರಿಂದ ವಿಶೇಷ ನ್ಯಾಯಾಲಯಗಳ ಮೇಲಿರುವ ಪ್ರಕರಣಗಳ ಬಾರ ಗಣನೀಯವಾಗಿ ತಗ್ಗುವುದಲ್ಲದೆ, ಅವು ಗಂಭೀರ ಪ್ರಕರಣಗಳಲ್ಲಿ ಹೆಚ್ಚಿನ ಪರಿಣಾಮಕಾರಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಗಂಭೀರ ಅಪರಾಧಗಳ ವಿಚಾರದಲ್ಲಿ ಆರ್ ಒ ಸಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಲು ಇದು ಅವಕಾಶ ನೀಡುತ್ತದೆ. ಅಲ್ಲದೆ ವ್ಯಾಜ್ಯಗಳ ಇತ್ಯರ್ಥ ಅಧಿಕಾರ ಹೊಂದಿರುವ (ರಿಜಿಸ್ಟ್ರಾರ್ ಆಫ್ ಕಂಪನೀಸ್) ನಿಗದಿತ ಅವಧಿಯಲ್ಲಿ ತಮ್ಮ ಮುಂದಿರುವ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಉದ್ದೇಶಿತ ತಿದ್ದುಪಡಿ ನೆರವಾಗಲಿದೆ. 
 

(



(Release ID: 1565700) Visitor Counter : 103