ಪರಿಸರ ಮತ್ತು ಅರಣ್ಯ ಸಚಿವಾಲಯ
ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ 2026 ಆಚರಣೆಯ ನೇತೃತ್ವ ವಹಿಸಿದ ಕೇಂದ್ರ ಪರಿಸರ ಸಚಿವರು ಮತ್ತು ಪಂಚಕುಲದಲ್ಲಿ 'ಬಿಕ್ಕಟ್ಟಿನಿಂದ ಚೇತರಿಕೆಯವರೆಗೆ - ಭಾರತದ ರಣಹದ್ದುಗಳ ಸಂರಕ್ಷಣೆ' ಎಂಬ ವಿಷಯದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ
ರಣಹದ್ದುಗಳ ಸುರಕ್ಷಿತ ವಲಯಗಳ ರಚನೆ ಮತ್ತು ಕಾಡಿನಲ್ಲಿ ಪ್ರಭೇದಗಳ ಚೇತರಿಕೆಗೆ ಸಹಾಯ ಮಾಡಲು ತಾಂತ್ರಿಕ ಸಾಮರ್ಥ್ಯದ ಅಭಿವೃದ್ಧಿಗೆ ಶ್ರೀ ಭೂಪೇಂದರ್ ಯಾದವ್ ಕರೆ
ಪ್ರಕಟಣಾ ದಿನಾಂಕ:
06 SEP 2026 10:49AM by PIB Bengaluru
ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ 2026 ನ್ನು ಇಂದು ಹರಿಯಾಣದ ಪಂಚಕುಲದಲ್ಲಿ ಆಚರಿಸಲಾಯಿತು. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಈ ಸಂದರ್ಭದಲ್ಲಿ 'ಬಿಕ್ಕಟ್ಟಿನಿಂದ ಚೇತರಿಕೆಯವರೆಗೆ - ಭಾರತದ ರಣಹದ್ದುಗಳನ್ನು ಸಂರಕ್ಷಿಸುವುದು' ಎಂಬ ವಿಷಯದ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಹರಿಯಾಣ ರಾಜ್ಯ ಪರಿಸರ, ಅರಣ್ಯ ಮತ್ತು ವನ್ಯಜೀವಿ ಸಚಿವರಾದ ಶ್ರೀ ರಾವ್ ನರ್ಬೀರ್ ಸಿಂಗ್, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್ಸಿಸಿ) ಮತ್ತು ಹರಿಯಾಣ ರಾಜ್ಯ ಸರ್ಕಾರದ ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಝೆಡ್ಎ), ಹರಿಯಾಣ ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿ ಎನ್ ಎಚ್ ಎಸ್) ಮತ್ತು ಪಿಂಜೋರ್ ನ ಜಟಾಯು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರ (ಜೆಸಿಬಿಸಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ಸಹಯೋಗದ ಪ್ರಯತ್ನಗಳನ್ನು ಬಲಪಡಿಸಲು ಇದು ಹಿರಿಯ ಅರಣ್ಯ ಅಧಿಕಾರಿಗಳು, ವಿಜ್ಞಾನಿಗಳು, ಪಶುವೈದ್ಯರು, ಮೃಗಾಲಯದ ವೃತ್ತಿಪರರು, ಸಂರಕ್ಷಣಾ ಅಭ್ಯಾಸಿಗಳು ಮತ್ತು ಇತರ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಿತು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಯಾದವ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರದ ಪರಿಸರ ಸಂರಕ್ಷಣಾ ವಿಧಾನವು ಸಮಗ್ರ ಪರಿಸರ ವ್ಯವಸ್ಥೆ ಆಧಾರಿತ ಸಂರಕ್ಷಣಾ ಮಾದರಿಯನ್ನು ಆಧರಿಸಿದೆ ಮತ್ತು ಅದು ನಿರ್ದಿಷ್ಟ ಪ್ರಭೇದಗಳಿಗೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದರು. ದೊಡ್ಡ ಬೆಕ್ಕುಗಳು, ಜೇನು ಕರಡಿ, ಗ್ರೇಟ್ ಇಂಡಿಯನ್ ಬಸ್ಟರ್ಡ್, ಡಾಲ್ಫಿನ್ ಗಳು, ಘರಿಯಾಲ್, ಕಾಡು ನೀರಿನ ಎಮ್ಮೆ (ನೀರಾನೆ) ಅಥವಾ ರಣಹದ್ದುಗಳು ಸೇರಿದಂತೆ ವಿವಿಧ ಪ್ರಭೇದಗಳ ಸಂರಕ್ಷಣಾ ಉಪಕ್ರಮಗಳಲ್ಲಿ ಈ ವಿಧಾನವು ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು. ರಣಹದ್ದುಗಳ ಬಗ್ಗೆ ಮಾತನಾಡಿದ ಅವರು, ವೈವಿಧ್ಯಮಯ ಸಮುದಾಯದ ನಿವಾಸಿ ಮತ್ತು ವಲಸೆ ರಣಹದ್ದುಗಳಿಗೆ ನೆಲೆಯಾಗಿರುವ ಭಾರತವು ವೈವಿಧ್ಯಮಯ ರಣಹದ್ದುಗಳಿಗೆ ಹೇಗೆ ನೆಲೆಯಾಗಿದೆ ಎಂಬುದನ್ನು ವಿವರಿಸುತ್ತ – ಬಿಳಿ ಬೆನ್ನಿನ ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು, ತೆಳ್ಳಗಿನ ಕೊಕ್ಕಿನ, ಕೆಂಪು-ತಲೆಯ, ಈಜಿಪ್ಟಿಯನ್, ಹಿಮಾಲಯನ್ ಗ್ರಿಫಾನ್, ಯುರೇಷಿಯನ್ ಗ್ರಿಫಾನ್, ಸಿನಿರಿಯಸ್ ಮತ್ತು ಗಡ್ಡದ ರಣಹದ್ದುಗಳು (ಕಾಡಿನ ರಣಹದ್ದು)- ಅವುಗಳ ಯಶಸ್ವಿ ಸಂರಕ್ಷಣೆಗಾಗಿ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಶ್ರೀ ಯಾದವ್ ಅವರು ರಣಹದ್ದುಗಳು ಹೆಚ್ಚು ಪರಿಣಾಮಕಾರಿ ತ್ಯಾಜ್ಯ ಸ್ವಚ್ಛತಾ ಕಾರ್ಯ ಮಾಡುತ್ತವೆ ಎಂದು ಹೇಳಿದರಲ್ಲದೆ ಅವುಗಳ ಪ್ರಮುಖ ಪರಿಸರ ಪಾತ್ರವನ್ನು ಉಲ್ಲೇಖಿಸಿದರು ಮತ್ತು ಅವುಗಳನ್ನು ಪ್ರಕೃತಿಯೇ ರೂಪಿಸಿದ ಸ್ವಂತ ಶುಚಿಗೊಳಿಸುವ ವ್ಯವಸ್ಥೆ ಎಂದು ಬಣ್ಣಿಸಿದರು. ಪ್ರಾಣಿಗಳ ಶವಗಳನ್ನು ವೇಗವಾಗಿ ಸೇವಿಸುವ ಮೂಲಕ, ರಣಹದ್ದುಗಳು ಪೋಷಕಾಂಶಗಳ ಮರುಬಳಕೆಯನ್ನು ಸುಗಮಗೊಳಿಸುತ್ತವೆ ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜಗತ್ತು ಹವಾಮಾನ ಬದಲಾವಣೆ, ಮಾನವ-ಪ್ರಾಣಿ ಸಂಘರ್ಷದಂತಹ ಸವಾಲುಗಳನ್ನು ಎದುರಿಸುತ್ತಿದೆ ಮತ್ತು 1990 ರ ದಶಕದಿಂದ ಭಾರತೀಯ ರಣಹದ್ದುಗಳ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಗಮನಿಸಲಾಗಿದೆ ಎಂದು ಅವರು ಹೇಳಿದರು.
ರಣಹದ್ದುಗಳ ಸಂರಕ್ಷಣೆಗಾಗಿ ನೀತಿ ನಿರೂಪಣೆಯಲ್ಲಿ 'ಇಡೀ ಸರ್ಕಾರ' ಮತ್ತು 'ಇಡೀ ಸಮಾಜ' ವಿಧಾನವಾಗಿ ಸಂಘಟಿತ ಪ್ರಯತ್ನಗಳಿಗೆ ಸಚಿವರು ಒತ್ತು ನೀಡಿದರು. ರಣಹದ್ದು-ಸುರಕ್ಷಿತ ಪಶುವೈದ್ಯಕೀಯ ಅಭ್ಯಾಸಗಳ ಮೂಲಕ ರಣಹದ್ದುಗಳ ಸುರಕ್ಷಿತ ವಲಯಗಳನ್ನು ರಚಿಸಲು, ಸುರಕ್ಷಿತ ಆಹಾರ ಲಭ್ಯತೆಯನ್ನು ಖಾತ್ರಿಪಡಿಸಲು ಮತ್ತು ಕಾಡಿನಲ್ಲಿ ಪ್ರಭೇದಗಳ ಚೇತರಿಕೆಗೆ ಸಹಾಯ ಮಾಡಲು ತಾಂತ್ರಿಕ ಸಾಮರ್ಥ್ಯ ವರ್ಧನೆಗೆ ನಿರಂತರ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ರಣಹದ್ದುಗಳ ಸಂರಕ್ಷಣೆಗೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಮತ್ತು ಸುರಕ್ಷಿತ ಶವ-ನಿರ್ವಹಣಾ ಅಭ್ಯಾಸಗಳನ್ನು ಉತ್ತೇಜಿಸಲು ಪಶುವೈದ್ಯಕೀಯ ವೃತ್ತಿಪರರು, ಜಾನುವಾರು ಮಾಲೀಕರು, ಸ್ಥಳೀಯ ಆಡಳಿತಗಳು ಮತ್ತು ಸಮುದಾಯಗಳಿಗೆ ಸಚಿವರು ಮನವಿ ಮಾಡಿದರು.

ಇದಕ್ಕೂ ಮೊದಲು, ಕೇಂದ್ರ ಸಚಿವರು ಜೆಸಿಬಿಸಿ ಪಿಂಜೋರ್ ಗೆ ಭೇಟಿ ನೀಡುವ ಮೂಲಕ ದಿನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಸೌಲಭ್ಯ ಕೇಂದ್ರಕ್ಕೆ ಭೇಟಿ ನೀಡಿದರು, ಕೇಂದ್ರದ ಪ್ರಸ್ತುತಿಯನ್ನು ಪರಿಶೀಲಿಸಿದರು ಮತ್ತು ರಣಹದ್ದುಗಳ ಸಂರಕ್ಷಣೆಯಲ್ಲಿ ತೊಡಗಿರುವ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಹರಿಯಾಣ ಅರಣ್ಯ ಇಲಾಖೆ ಮತ್ತು ಬಿಎನ್ಎಚ್ಎಸ್ ಸಹಯೋಗದ ಉಪಕ್ರಮವಾದ ಈ ಕೇಂದ್ರವು ವೈಟ್-ರಂಪ್ಡ್, ಲಾಂಗ್-ಬಿಲ್ಡ್ ಮತ್ತು ಸ್ಲೆಂಡರ್-ಬಿಲ್ಡ್ ರಣಹದ್ದುಗಳ ಸಂರಕ್ಷಣಾ ಕೇಂದ್ರವಾಗಿ ಹೊರಹೊಮ್ಮಿದೆ.
ಕೇಂದ್ರವು ವೈಜ್ಞಾನಿಕ ಸಂಗೋಪನೆ, ಕೃತಕ ಇನ್ಕ್ಯುಬೇಷನ್, ಪಶುವೈದ್ಯಕೀಯ ಆರೈಕೆ, ಸಂತಾನೋತ್ಪತ್ತಿ ಮತ್ತು ಆನುವಂಶಿಕ ನಿರ್ವಹಣೆಯನ್ನು ಕೈಗೊಳ್ಳುತ್ತದೆ ಎಂದು ತಿಳಿಸಲಾಯಿತು. 2025-26ರ ಅವಧಿಯಲ್ಲಿ, ಜೆಸಿಬಿಸಿ 356 ರಣಹದ್ದುಗಳಿಗೆ ಆಶ್ರಯ ನೀಡಿತು ಮತ್ತು 35 ಮರಿಗಳನ್ನು ಯಶಸ್ವಿಯಾಗಿ ಸಾಕಿತು. ಇದು ಮರು ಸೇರ್ಪಡೆಗಾಗಿ 87 ರಣಹದ್ದುಗಳನ್ನು ಬಿಡುಗಡೆ ಮಾಡಿತು ಅಥವಾ ಕೊಡುಗೆ ನೀಡಿತು, 90 ಪಕ್ಷಿಗಳನ್ನು ಇತರ ಸಂರಕ್ಷಣೆ-ಸಂತಾನೋತ್ಪತ್ತಿ ಸಂಸ್ಥೆಗಳಿಗೆ ವರ್ಗಾಯಿಸಿತು ಮತ್ತು 22 ಸಂಸ್ಥೆಗಳಿಂದ 1,222 ಪ್ರತಿನಿಧಿಗಳಿಗೆ/ಭಾಗವಹಿಸುವವರಿಗೆ ತರಬೇತಿ ನೀಡಿತು, ಇದರಿಂದಾಗಿ ರಣಹದ್ದುಗಳ ಸಂರಕ್ಷಣೆಯ ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಿತು.
ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ರಾವ್ ನರ್ಬೀರ್ ಸಿಂಗ್, ಪಿಂಜೋರಿನ ಜಟಾಯು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರದಲ್ಲಿ (ಜೆಸಿಬಿಸಿ) ನಡೆಸಲಾಗುತ್ತಿರುವ ಪ್ರಮುಖ ಕೊಡುಗೆ ಮತ್ತು ಯಶಸ್ವಿ ರಣಹದ್ದುಗಳ ಸಂರಕ್ಷಣಾ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಸಂರಕ್ಷಣಾ ಸಂತಾನೋತ್ಪತ್ತಿಯ ಯಶಸ್ಸನ್ನು ಕೇವಲ ಜನಿಸಿದ ಪ್ರಾಣಿಗಳ ಸಂಖ್ಯೆಯಿಂದ ಅಳೆಯಬಾರದು, ಬದಲು ಆರೋಗ್ಯಕರ ಮತ್ತು ಆನುವಂಶಿಕವಾಗಿ ನಿರ್ವಹಿಸಲ್ಪಟ್ಟ ಸಂಖ್ಯೆ, ವೈಜ್ಞಾನಿಕ ಜ್ಞಾನದ ಉತ್ಪಾದನೆ, ತಾಂತ್ರಿಕ ಸಾಮರ್ಥ್ಯದ ಅಭಿವೃದ್ಧಿ ಮತ್ತು ಕಾಡಿನಲ್ಲಿ ಪ್ರಭೇದಗಳ ಚೇತರಿಕೆಗೆ ನೀಡುವ ಕೊಡುಗೆ ಮೂಲಕ ಅಳೆಯಬೇಕು ಎಂದು ಅವರು ಒತ್ತಿ ಹೇಳಿದರು.

ಉದ್ಘಾಟನಾ ಅಧಿವೇಶನದಲ್ಲಿ, 'ಸ್ಟೋರಿ ಆಫ್ ಜಟಾಯು: ಸೇವಿಂಗ್ ಇಂಡಿಯಾಸ್ ವಲ್ಚರ್' ಎಂಬ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದು ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಜೆಸಿಬಿಸಿ ಪಿಂಜೋರ್ ಸ್ಥಾಪನೆಯ ಮೂಲಕ ಯಶಸ್ವಿ ಸಂತಾನೋತ್ಪತ್ತಿ ಸಂರಕ್ಷಣಾ ಕಾರ್ಯಕ್ರಮದವರೆಗೆ ಭಾರತದ ಗಮನಾರ್ಹ ರಣಹದ್ದುಗಳ ಸಂರಕ್ಷಣಾ ಕಥೆಯನ್ನು ನಿರೂಪಿಸುತ್ತದೆ. ಇದಲ್ಲದೆ, ರಣಹದ್ದುಗಳ ಸಂರಕ್ಷಣೆ ಕುರಿತು ನಡೆದ ಆನ್ಲೈನ್ ಚಿತ್ರಕಲೆ ಸ್ಪರ್ಧೆ ಮತ್ತು ಡಿಜಿಟಲ್ ಛಾಯಾಗ್ರಹಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು ನಡೆಸಲಾಯಿತು.
ರಣಹದ್ದುಗಳು ಭಾರತದ ಭೂದೃಶ್ಯಗಳಲ್ಲಿ ಅಭಿವೃದ್ಧಿ ಹೊಂದುವುದನ್ನು ಮುಂದುವರಿಸುತ್ತವೆ ಮತ್ತು ತಮ್ಮ ಪ್ರಮುಖ ಪರಿಸರ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳುವ ಹೊಸ ಬದ್ಧತೆಯೊಂದಿಗೆ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ 2026 ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 'ಬಿಕ್ಕಟ್ಟಿನಿಂದ ಚೇತರಿಕೆಯವರೆಗೆ' ಪ್ರಯಾಣವು ವಿಜ್ಞಾನ, ನೀತಿ, ಸಂರಕ್ಷಣಾ ಸಂತಾನೋತ್ಪತ್ತಿ, ಸುರಕ್ಷಿತ ಭೂದೃಶ್ಯಗಳು ಮತ್ತು ಸಮುದಾಯದ ಭಾಗವಹಿಸುವಿಕೆಯ ಮೂಲಕ ರಣಹದ್ದುಗಳ ಸಂರಕ್ಷಣೆಗೆ ಭಾರತದ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


*****
(ಪ್ರಕಟಣೆ ಐ.ಡಿ.: 2307159)
ವಿಸಿಟರ್ ಕೌಂಟರ್ : 11