ಕೃಷಿ ಸಚಿವಾಲಯ
ಐಸಿಎಆರ್ ನ 97ನೇ ವಾರ್ಷಿಕ ಸಾಮಾನ್ಯ ಸಭೆಯು ಪರಿವರ್ತನಾತ್ಮಕ ಕೃಷಿಗೆ ಮಾರ್ಗಸೂಚಿ ರೂಪಿಸಿದೆ
‘ಬೇಡಿಕೆ ಆಧಾರಿತ ಸಂಶೋಧನೆ’ಯಲ್ಲಿ ರೈತರು, ಮಾರುಕಟ್ಟೆಗಳು ಮತ್ತು ಗ್ರಾಹಕರು ಕೇಂದ್ರಬಿಂದುವಾಗಿರಬೇಕು: ಕೇಂದ್ರ ಕೃಷಿ ಸಚಿವರು
ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ವೈವಿಧ್ಯಗೊಳಿಸಲು ಸಮಗ್ರ ಕೃಷಿ ಪದ್ಧತಿ ಪ್ರಮುಖವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಯೋಗಾಲಯದಿಂದ ಹೊಲದವರೆಗೆ: ತಂತ್ರಜ್ಞಾನ ವರ್ಗಾವಣೆಯನ್ನು ತ್ವರಿತಗೊಳಿಸಲು ಐಸಿಎಆರ್–ಉದ್ಯಮ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಐಸಿಎಆರ್ ಗೆ ಹೊಸ ದೃಷ್ಟಿಕೋನ: ಹೆಚ್ಚಿನ ಸಂವಾದ, ಸ್ಪಷ್ಟ ಆದ್ಯತೆಗಳು ಮತ್ತು ಬಲಿಷ್ಠ ಫಲಿತಾಂಶಗಳು: ಶ್ರೀ ಚೌಹಾಣ್
‘ಆಲೋಚನೆಗಳು ಬೀಜಗಳಿದ್ದಂತೆ’: ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಪರಿಣಾಮಕಾರಿಯಾದ ಫಲಿತಾಂಶಗಳನ್ನು ಪಡೆಯುವಂತೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕರೆ
प्रविष्टि तिथि:
18 AUG 2026 5:20PM by PIB Bengaluru
ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ಸೊಸೈಟಿಯ 97ನೇ ವಾರ್ಷಿಕ ಸಾಮಾನ್ಯ ಸಭೆ ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ (ಎನ್ ಎ ಎಸ್ ಸಿ) ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, “ಅಭಿವೃದ್ಧಿ ಹೊಂದಿದ ಕೃಷಿಯಿಲ್ಲದೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಕೇವಲ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಮುಂದೆ ಸಾಗಿ, “ಹೊಲದಿಂದ ಜಾಗತಿಕ ಮಾರುಕಟ್ಟೆಯವರೆಗೆ” ತನ್ನದೇ ಆದ ಬಲಿಷ್ಠ ಗುರುತನ್ನು ಭಾರತ ನಿರ್ಮಿಸಿಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು. ರೈತರ ಅಗತ್ಯಗಳು, ಮಾರುಕಟ್ಟೆಯ ಬೇಡಿಕೆ ಮತ್ತು ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿರುವ ಬೇಡಿಕೆ ಆಧಾರಿತ ಸಂಶೋಧನಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು. ಸಂಶೋಧನೆಯ ಫಲಿತಾಂಶಗಳು ರೈತರಿಗೆ ನೇರ ಮತ್ತು ಖಚಿತ ಪ್ರಯೋಜನಗಳನ್ನು ನೀಡಬೇಕು ಎಂದು ಅವರು ಹೇಳಿದರು.
ಕೃಷಿಯ ಪರಿವರ್ತನೆಯ ಮುಂದಿನ ಹಂತವು ಕೃಷಿ ಆದಾಯವನ್ನು ಹೆಚ್ಚಿಸುವುದು ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರ ಸ್ಥಿತಿಸ್ಥಾಪಕತೆಯನ್ನು ಬಲಪಡಿಸುವುದರ ಮೇಲೆ ಗಮನಹರಿಸಬೇಕು ಎಂದು ಅವರು ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ ಸಮಗ್ರ ಕೃಷಿ ಪದ್ಧತಿಗಳ ಜೊತೆಗೆ ಗುಣಮಟ್ಟದ ಬೀಜ ಮತ್ತು ಬಿತ್ತನೆ ಸಾಮಗ್ರಿಗಳನ್ನು ಸಕಾಲದಲ್ಲಿ ಒದಗಿಸುವುದು, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಿಗೆ ಅವರು ಒತ್ತು ನೀಡಿದರು.
ಗುಣಮಟ್ಟ, ಪೌಷ್ಟಿಕತೆ, ಸಂಸ್ಕರಣೆ, ಪ್ಯಾಕೇಜಿಂಗ್, ದೀರ್ಘಕಾಲದ ಸಂಗ್ರಹಣಾ ಸಾಮರ್ಥ್ಯ ಮತ್ತು ಜಾಗತಿಕ ಮಾನದಂಡಗಳ ಅನುಸರಣೆ ಮೂಲಕ ಭಾರತದ ರಫ್ತು ಸಾಮರ್ಥ್ಯವನ್ನು ಬಲಪಡಿಸುವ ಮಹತ್ವವನ್ನೂ ಶ್ರೀ ಚೌಹಾಣ್ ಒತ್ತಿಹೇಳಿದರು. ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳನ್ನು ರೈತರಿಗೆ ಹೆಚ್ಚು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಐಸಿಎಆರ್–ಉದ್ಯಮ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.

“ಸಂಶೋಧನೆ ಮಾತ್ರ ಸಾಕಾಗುವುದಿಲ್ಲ; ಸರಿಯಾದ ಸಮಯದಲ್ಲಿ ಸರಿಯಾದ ಸಂಶೋಧನೆಯು ಸರಿಯಾದ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು ತ್ವರಿತವಾಗಿ ರೈತರನ್ನು ತಲುಪಬೇಕು. ಇದೇ ಯಶಸ್ಸಿನ ನಿಜವಾದ ಮಾನದಂಡ” ಎಂದು ಅವರು ಹೇಳಿದರು.
ಫಲಿತಾಂಶ ಆಧಾರಿತ ಸಂಶೋಧನಾ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದ ಶ್ರೀ ಚೌಹಾಣ್, ವಿಜ್ಞಾನಿಗಳು, ನೀತಿ ನಿರೂಪಕರು, ರೈತರು, ಉದ್ಯಮ ಮತ್ತು ಇತರ ಪಾಲುದಾರರ ನಡುವೆ ಹೆಚ್ಚಿನ ಸಂವಾದ ನಡೆಯಬೇಕು ಮತ್ತು ಸಂಶೋಧನಾ ಉದ್ದೇಶಗಳಿಗೆ ಹೆಚ್ಚು ಸ್ಪಷ್ಟವಾದ ಆದ್ಯತೆಗಳನ್ನು ನಿಗದಿಪಡಿಸಬೇಕು ಎಂದು ಕರೆ ನೀಡಿದರು. ನವೀನ ಆಲೋಚನೆಗಳು ಪ್ರಯೋಗಾಲಯಗಳಲ್ಲೇ ಸೀಮಿತವಾಗದೆ, ಪ್ರಾಯೋಗಿಕ ಪರಿಹಾರಗಳಾಗಿ ರೂಪಾಂತರಗೊಂಡು ನೆಲಮಟ್ಟದಲ್ಲಿ ಖಚಿತ ಪರಿಣಾಮವನ್ನು ಉಂಟುಮಾಡಬೇಕು ಎಂದು ಅವರು ಒತ್ತಿ ಹೇಳಿದರು.
“ನಮ್ಮ ಕಠಿಣ ಪರಿಶ್ರಮ, ನಮ್ಮ ಸಂಶೋಧನೆ ಮತ್ತು ನಮ್ಮ ಪ್ರಯತ್ನಗಳು ಭಾರತದ ಚಿತ್ರಣವನ್ನು ಪರಿವರ್ತಿಸಬಲ್ಲವು ಹಾಗೂ ನಮ್ಮ ರೈತರ ಭವಿಷ್ಯವನ್ನೇ ಬದಲಿಸಬಲ್ಲವು” ಎಂದು ಅವರು ಹೇಳಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಭಾಗೀರಥ್ ಚೌಧರಿ ಅವರು ಮಾತನಾಡಿ, 2014ರಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಭಾರತ ಮಹತ್ವದ ಪ್ರಗತಿ ಸಾಧಿಸಿದೆ ಮತ್ತು ಈಗ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವುದು ಮುಂದಿನ ಆದ್ಯತೆಯಾಗಿದೆ ಎಂದು ಹೇಳಿದರು.
ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಬೀಜಗಳು, ಜಾನುವಾರು ಮತ್ತು ಮೌಲ್ಯವರ್ಧಿತ ಸಂಸ್ಕರಣೆಯಲ್ಲಿ ಸ್ವಾವಲಂಬನೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಇದರ ಜೊತೆಗೆ ಹವಾಮಾನ ತಾಳಿಕೆಯ ಕೃಷಿ, ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು. ರೈತರ ಆದಾಯ ಹೆಚ್ಚಿಸಲು ರೈತ ಉತ್ಪಾದಕರ ಸಂಘಟನೆಗಳನ್ನು ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ರೈತರ ಬಳಿಗೆ ಕೊಂಡೊಯ್ಯುವಲ್ಲಿ ಐಸಿಎಆರ್ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರವನ್ನು ಶ್ರೀ ಚೌಧರಿ ಒತ್ತಿಹೇಳಿದರು. ಸ್ವಾವಲಂಬಿ ಕೃಷಿಯು ಆತ್ಮನಿರ್ಭರ ಭಾರತ ಮತ್ತು 2047ರ ವಿಕಸಿತ ಭಾರತ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರಾದ ಶ್ರೀ ಎಸ್. ಪಿ. ಸಿಂಗ್ ಬಘೇಲ್ ಅವರು ಆಹಾರಧಾನ್ಯಗಳು, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಮಾಂಸ ಮತ್ತು ಮೊಟ್ಟೆ ಸೇರಿದಂತೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಮಹತ್ವದ ಪ್ರಗತಿಯನ್ನು ವಿವರಿಸಿದರು. ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಮತ್ತು ವಿಜ್ಞಾನಿಗಳು, ರೈತರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಪ್ರಯತ್ನಗಳು ಈ ಪರಿವರ್ತನೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.
ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯ ಪರಂಪರೆಯನ್ನು ಉಲ್ಲೇಖಿಸಿದ ಶ್ರೀ ಬಘೇಲ್, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ ಮತ್ತು ಮೀನು ಉತ್ಪಾದನೆ ಹಾಗೂ ರಫ್ತಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು. ರೈತರ ಆದಾಯ ಹೆಚ್ಚಿಸಲು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಕೃಷಿ, ಜಾನುವಾರು, ಹೈನುಗಾರಿಕೆ, ಮೀನುಗಾರಿಕೆ ಮತ್ತು ಕೋಳಿ ಸಾಕಣೆಯನ್ನು ಹೆಚ್ಚು ಸಮಗ್ರವಾಗಿ ಸಂಯೋಜಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಸಭೆಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ವಿವಿಧ ವಲಯಗಳಿಗೆ ಸೇರಿದ ಕೇಂದ್ರ ಹಾಗೂ ರಾಜ್ಯ ಸಚಿವರು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರಲ್ಲಿ ಅರುಣಾಚಲ ಪ್ರದೇಶದ ಕೃಷಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ, ತೋಟಗಾರಿಕೆ ಹಾಗೂ ಮೀನುಗಾರಿಕೆ ಸಚಿವರಾದ ಶ್ರೀ ಗೇಬ್ರಿಯಲ್ ಡಾನ್ವಾಂಗ್ ವಾಂಗ್ಸು; ಅಸ್ಸಾಂನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ಸಚಿವೆ ಶ್ರೀಮತಿ ನೀಲಿಮಾ ದೇವಿ; ಬಿಹಾರದ ಕೃಷಿ ಸಚಿವರಾದ ಶ್ರೀ ವಿಜಯ್ ಕುಮಾರ್ ಸಿನ್ಹಾ; ಹರಿಯಾಣದ ಕೃಷಿ ಮತ್ತು ರೈತರ ಕಲ್ಯಾಣ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮೀನುಗಾರಿಕೆ ಹಾಗೂ ತೋಟಗಾರಿಕೆ ಸಚಿವರಾದ ಶ್ರೀ ಶ್ಯಾಮ್ ಸಿಂಗ್ ರಾಣಾ; ಜಮ್ಮು ಮತ್ತು ಕಾಶ್ಮೀರದ ಕೃಷಿ ಉತ್ಪಾದನಾ ಸಚಿವರಾದ ಶ್ರೀ ಜಾವಿದ್ ಅಹ್ಮದ್ ದರ್; ಮಧ್ಯಪ್ರದೇಶದ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಸಚಿವರಾದ ಶ್ರೀ ನಾರಾಯಣ್ ಸಿಂಗ್ ಕುಶ್ವಾಹಾ; ನಾಗಾಲ್ಯಾಂಡ್ ನ ಶಾಸಕರು ಹಾಗೂ ಕೃಷಿ ಇಲಾಖೆಯ ಸಲಹೆಗಾರರಾದ ಶ್ರೀ ಮೆತುಥುಂಗ್ ಯಾಂಥನ್; ಪಂಜಾಬ್ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಹೈನುಗಾರಿಕೆ ಅಭಿವೃದ್ಧಿ ಸಚಿವರಾದ ಶ್ರೀ ಗುರ್ಮೀತ್ ಸಿಂಗ್ ಖುಡಿಯನ್; ಸಿಕ್ಕಿಂನ ಕೃಷಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು, ತೋಟಗಾರಿಕೆ ಹಾಗೂ ಮೀನುಗಾರಿಕೆ ಸಚಿವರಾದ ಶ್ರೀ ಪುರಣ್ ಕುಮಾರ್ ಗುರುಂಗ್; ಉತ್ತರಾಖಂಡದ ಕೃಷಿ ಮತ್ತು ತೋಟಗಾರಿಕೆ ಸಚಿವರಾದ ಶ್ರೀ ಗಣೇಶ್ ಜೋಶಿ; ಉತ್ತರ ಪ್ರದೇಶದ ಕೃಷಿ, ಕೃಷಿ ಶಿಕ್ಷಣ ಮತ್ತು ಕೃಷಿ ಸಂಶೋಧನಾ ಸಚಿವರಾದ ಶ್ರೀ ಸೂರ್ಯ ಪ್ರತಾಪ್ ಶಾಹಿ; ಉತ್ತರ ಪ್ರದೇಶದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವರಾದ ಶ್ರೀ ಧರ್ಮಪಾಲ್ ಸಿಂಗ್; ಉತ್ತರ ಪ್ರದೇಶದ ಮೀನುಗಾರಿಕೆ ಸಚಿವರಾದ ಶ್ರೀ ಸಂಜಯ್ ನಿಷಾದ್; ಮತ್ತು ಪಶ್ಚಿಮ ಬಂಗಾಳದ ಕೃಷಿ ಇಲಾಖೆ ಸಚಿವರಾದ ಶ್ರೀ ದುಧ್ ಕುಮಾರ್ ಮಂಡಲ್ ಅವರು ಉಪಸ್ಥಿತರಿದ್ದರು.
ಡಿ ಎ ಆರ್ ಇ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು ಐಸಿಎಆರ್ ನ ಪ್ರಮುಖ ಸಾಧನೆಗಳನ್ನು ಮಂಡಿಸುತ್ತಾ, ಕಳೆದ ಒಂದು ವರ್ಷದಲ್ಲಿ ವಿಜ್ಞಾನ ಆಧಾರಿತ ಹಾಗೂ ರೈತ ಕೇಂದ್ರಿತ ಕೃಷಿ ಪರಿವರ್ತನೆಯತ್ತ ಪರಿಷತ್ತು ತ್ವರಿತ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

ಆಹಾರಧಾನ್ಯ ಉತ್ಪಾದನೆಯು ಸುಮಾರು 1.9 ಕೋಟಿ ಟನ್ ಗಳಷ್ಟು ಹೆಚ್ಚಾಗಿದ್ದು, ತೋಟಗಾರಿಕೆ, ಹಾಲು ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿಯೂ ಗಮನಾರ್ಹ ಬೆಳವಣಿಗೆ ದಾಖಲಾಗಿದೆ. ಒಟ್ಟು 386 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳಲ್ಲಿ ಶೇ.94ರಷ್ಟು ಹವಾಮಾನ ತಾಳಿಕೆಯ ತಳಿಗಳು ಮತ್ತು 29 ಜೈವಿಕ ಬಲವರ್ಧಿತ ತಳಿಗಳು ಸೇರಿವೆ. ಇದರಿಂದ ಉತ್ಪಾದಕತೆ, ಹವಾಮಾನ ಸ್ಥಿತಿಸ್ಥಾಪಕತೆ ಮತ್ತು ಪೌಷ್ಟಿಕಾಂಶ ಭದ್ರತೆ ಮತ್ತಷ್ಟು ಬಲಗೊಂಡಿದೆ.
ಜೀನೋಮಿಕ್ಸ್, ಜಿನೋಮ್ ಎಡಿಟಿಂಗ್, ಜಾನುವಾರುಗಳ ಆರೋಗ್ಯ, ಮೀನುಗಾರಿಕೆ, ಮಣ್ಣಿನ ಆರೋಗ್ಯ ಮತ್ತು ನೈಸರ್ಗಿಕ ಕೃಷಿ ಕ್ಷೇತ್ರಗಳಲ್ಲಿ ಐಸಿಎಆರ್ ಸಾಧಿಸಿರುವ ಪ್ರಮುಖ ಪ್ರಗತಿಗಳು ಭಾರತದ ಕೃಷಿ ಸ್ಥಿತಿಸ್ಥಾಪಕತೆಯನ್ನು ಮತ್ತಷ್ಟು ಬಲಪಡಿಸಿವೆ ಎಂದು ಡಾ. ಜಾಟ್ ತಿಳಿಸಿದರು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಆಫ್ರಿಕನ್ ಹಂದಿಜ್ವರದ ಲಸಿಕೆಯು ಹಂದಿಗಳ ಆರೋಗ್ಯ ಮತ್ತು ರೈತರ ಜೀವನೋಪಾಯದ ದೃಷ್ಟಿಯಿಂದ ಮಹತ್ವದ ವೈಜ್ಞಾನಿಕ ಸಾಧನೆಯಾಗಿದೆ ಎಂದು ಅವರು ಹೇಳಿದರು.
ಸಂಶೋಧನೆಯನ್ನು ಕ್ಷೇತ್ರಮಟ್ಟದ ಅನ್ವಯಿಕೆಗಳು ಮತ್ತು ಮಾರುಕಟ್ಟೆ ಅವಕಾಶಗಳಾಗಿ ಪರಿವರ್ತಿಸುವ ಕಾರ್ಯವನ್ನೂ ಐಸಿಎಆರ್ ತ್ವರಿತಗೊಳಿಸಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 805 ಬೌದ್ಧಿಕ ಸ್ವತ್ತು (ಐಪಿ) ಅರ್ಜಿಗಳನ್ನು ಸಲ್ಲಿಸಲಾಗಿದ್ದು, 36 ಸಂಸ್ಥೆಗಳಲ್ಲಿ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ಬಲಪಡಿಸಲಾಗಿದೆ. ಕೃಷಿ-ಆಹಾರ ವ್ಯವಸ್ಥೆಗಳ ರಾಷ್ಟ್ರೀಯ ಲಿಂಗ ವೇದಿಕೆಯು ಈಗ 9,000ಕ್ಕೂ ಹೆಚ್ಚು ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದು, ಕೃಷಿಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದೆ.
ಡಾ. ಜಾಟ್ ಅವರು ಐಸಿಎಆರ್ ವಾರ್ಷಿಕ ವರದಿ 2025–26 ಅನ್ನು ಮಂಡಿಸಿದರು ಮತ್ತು ಅದನ್ನು ಅಂಗೀಕರಿಸುವ ಕುರಿತ ನಿರ್ಣಯವನ್ನು ಓದಿದರು.

ಡಿ ಎ ಆರ್ ಇ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಐಸಿಎಆರ್ ಹಣಕಾಸು ಸಲಹೆಗಾರರಾದ ಶ್ರೀ ಸಂದೀಪ್ ಸರ್ಕಾರ್ ಅವರು 2024–25ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧಕರ ವರದಿಯೊಂದಿಗೆ ಮಂಡಿಸಿದರು. ಬಳಿಕ ಅವುಗಳನ್ನು ಅಂಗೀಕರಿಸುವ ಕುರಿತ ನಿರ್ಣಯವನ್ನು ಮಂಡಿಸಲಾಯಿತು.
ಇದಕ್ಕೂ ಮೊದಲು, ಕಳೆದ ವಾರ್ಷಿಕ ಸಾಮಾನ್ಯ ಸಭೆಯ ನಂತರ ಐಸಿಎಆರ್ ಸಾಧಿಸಿರುವ ಸಂಶೋಧನಾ ಪ್ರಗತಿಯ ಕುರಿತ ಪ್ರಸ್ತುತಿಯೊಂದಿಗೆ ಸಭೆ ಆರಂಭವಾಯಿತು. ಕೃಷಿ ಸಂಶೋಧನೆ, ನಾವೀನ್ಯತೆ ಮತ್ತು ಅಭಿವೃದ್ಧಿಗೆ ಪರಿಷತ್ತು ನೀಡಿರುವ ಕೊಡುಗೆಗಳನ್ನು ಈ ಪ್ರಸ್ತುತಿಯಲ್ಲಿ ವಿವರಿಸಲಾಯಿತು.
ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸಹಭಾಗಿತ್ವ ಹಾಗೂ ಸಂಪನ್ಮೂಲ ಕ್ರೋಡೀಕರಣದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಐಸಿಎಆರ್ ನೊಂದಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್ ಆರ್) ಸಹಭಾಗಿತ್ವಕ್ಕಾಗಿ ಉದ್ಯಮ ಹಾಗೂ ಸಿ ಎಸ್ ಆರ್ ದಾನಿಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೂ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಐಸಿಎಆರ್ ನ ನಾಲ್ಕು ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು. ಐಸಿಎಆರ್ ಸೊಸೈಟಿಯ ನಿಯಮಗಳು ಮತ್ತು ಬೈ-ಲಾಗಳ ನವೀಕರಣ/ತಿದ್ದುಪಡಿಗಳ ಕುರಿತ ಪ್ರಸ್ತಾವನೆಯನ್ನು ಸಭೆ ಪರಿಗಣಿಸಿತು ಮತ್ತು ಬಳಿಕ ಅವುಗಳನ್ನು ಅಂಗೀಕರಿಸುವ ಪ್ರಸ್ತಾವನೆಯನ್ನು ಮಂಡಿಸಲಾಯಿತು.
ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ಐಸಿಎಆರ್ ನ ಸಾಧನೆಗಳು ಹಾಗೂ ನಿರೀಕ್ಷೆಗಳ ಕುರಿತು ಸದಸ್ಯರು ತಮ್ಮ ಸಲಹೆಗಳನ್ನು ಹಂಚಿಕೊಂಡರು. ಇದು ಪರಿಷತ್ತಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಮತ್ತಷ್ಟು ಬಲಪಡಿಸಲು ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು.
ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಮತ್ತು ರಾಜ್ಯ ಸಚಿವರು ಆಹಾರಧಾನ್ಯ ಉತ್ಪಾದನೆಯಲ್ಲಿನ ಬೆಳವಣಿಗೆ ಹಾಗೂ ಕೃಷಿ ಕ್ಷೇತ್ರದ ಒಟ್ಟಾರೆ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಕೇಂದ್ರ–ರಾಜ್ಯ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮತ್ತು ರೈತರ ಸಮೃದ್ಧಿ ಹಾಗೂ ಕೃಷಿಯ ಪ್ರಗತಿಗಾಗಿ ಸಾಮೂಹಿಕವಾಗಿ ಕಾರ್ಯನಿರ್ವಹಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಡಿ ಎ ಆರ್ ಇ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹಣಕಾಸು ಸಲಹೆಗಾರರಾದ (ಡಿ ಎ ಆರ್ ಇ /ಐಸಿಎಆರ್) ಶ್ರೀ ಸಂದೀಪ್ ಸರ್ಕಾರ್ ಅವರು ವಂದನಾರ್ಪಣೆಯನ್ನು ಸಲ್ಲಿಸುವುದರೊಂದಿಗೆ ಸಭೆ ಮುಕ್ತಾಯಗೊಂಡಿತು. ಬಳಿಕ ರಾಷ್ಟ್ರಗೀತೆ ಮೊಳಗಿತು.
ವಾರ್ಷಿಕ ಸಾಮಾನ್ಯ ಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಹಯೋಗದಲ್ಲಿ ಕೃಷಿ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯನ್ನು ಮುಂದುವರಿಸುವ ಐಸಿಎಆರ್ ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು. ರೈತರ ಕಲ್ಯಾಣ, ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಹಾಗೂ ಸ್ಥಿತಿಸ್ಥಾಪಕ, ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವುದನ್ನು ಸಭೆ ಪುನರುಚ್ಚರಿಸಿತು.
******
(रिलीज़ आईडी: 2301009)
आगंतुक पटल : 15