ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್ 1 ರಂದು ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಆಂಧ್ರಪ್ರದೇಶದ ವಿಜಯನಗರದ ಭೋಗಾಪುರಂನಲ್ಲಿ 17,900 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿರುವ ಪ್ರಧಾನಮಂತ್ರಿ

ಭೋಗಾಪುರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ವಾಯು ಸಂಪರ್ಕವನ್ನು ಬಲಪಡಿಸಲು ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸಲು 5,640 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ

ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸವು ಆಂಧ್ರಪ್ರದೇಶದ ಚುಟ್ಟಿಲು ಕಾಟೇಜ್‌ಗಳು, ಅರಕು ಕಣಿವೆ ಹಾಗೂ ಹಾರುವ ಮೀನುಗಳಿಂದ ಸ್ಫೂರ್ತಿ ಪಡೆದಿದೆ

ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ʻಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ - ವಿವೇಕ ಸ್ಮಾರಕʼವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

1892ರ ನವೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಐತಿಹಾಸಿಕ ಭೇಟಿ ನೀಡಿದ ಸ್ಮರಣಾರ್ಥ ವಿವೇಕ ಸ್ಮಾರಕ ನಿರ್ಮಿಸಲಾಗಿದೆ

ʻವಿವೇಕ ಸ್ಮಾರಕʼವು ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನದ ಮೂಲಕ ಯುವಕರಿಗೆ ಸ್ಫೂರ್ತಿ ನೀಡಲಿದೆ

प्रविष्टि तिथि: 31 JUL 2026 9:56AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಆಗಸ್ಟ್ 1ರಂದು ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿಯವರು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಪುರಂನಲ್ಲಿರುವ ʻಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼದ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ವೀಕ್ಷಿಸಲಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಅವರು ಭೋಗಾಪುರಂನಲ್ಲಿ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು 17,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ, ಮಧ್ಯಾಹ್ನ 3:30ರ ಸುಮಾರಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ʻಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ - ವಿವೇಕ ಸ್ಮಾರಕʼವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಆಂಧ್ರಪ್ರದೇಶದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಭೋಗಾಪುರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು 5,640 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಾರ್ಷಿಕವಾಗಿ 6 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇಲ್ಲಿನ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಆಧುನಿಕ, ಸುಗಮ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಒದಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣವು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಭವಿಷ್ಯದ ವಾಯುಯಾನ ಅಗತ್ಯಗಳನ್ನು ಪೂರೈಸಲು ಸುಧಾರಿತ ಮೂಲಸೌಕರ್ಯ, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸುಸ್ಥಿರ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ನೂತನ ವಿಮಾನ ನಿಲ್ದಾಣವು ಕೃತಕ ಬುದ್ಧಿಮತ್ತೆ(ಎಐ), ʻಬಿಲ್ಡಿಂಗ್ ಇನ್ಫಾರ್‌ಮೇಷನ್‌ ಮಾಡೆಲಿಂಗ್ʼ (ಬಿಐಎಂ), ʻಏರ್ ಸೈಡ್ 4.0ʼ ತಂತ್ರಜ್ಞಾನಗಳು, ʻಏರ್ ಪೋರ್ಟ್ ಪ್ರಿಡಿಕ್ಟಿವ್ ಆಪರೇಷನ್ಸ್ ಸೆಂಟರ್ʼ(ಎಪಿಒಸಿ), ಬಯೋಮೆಟ್ರಿಕ್ ಪ್ರಯಾಣಿಕರ ತಪಾಸಣೆ ಪ್ರಕ್ರಿಯೆ, ಸ್ವಯಂಚಾಲಿತ ಬ್ಯಾಗೇಜ್ ನಿರ್ವಹಣೆ ವ್ಯವಸ್ಥೆ ಮತ್ತು ಇಂಟೆಲಿಜೆಂಟ್ ʻಆಪರೇಷನಲ್ ಮಾನಿಟರಿಂಗ್ ಸೊಲ್ಯೂಷನ್ಸ್ʼನಂತಹ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ. ಈ ವ್ಯವಸ್ಥೆಗಳು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತವೆ, ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಸುಧಾರಿಸುತ್ತವೆ ಜೊತೆಗೆ, ಸಂಪನ್ಮೂಲ ಬಳಕೆಯನ್ನು ಉತ್ತಮಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಈ ಯೋಜನೆಯು ಇಂಧನ-ದಕ್ಷ ತಾಪಮಾನ ಸಮತೋಲನ, ಗಾಳಿ-ಬೆಳಕು ಮತ್ತು ಹವಾನಿಯಂತ್ರಣ (ಎಚ್‌ವಿಎಸಿ) ವ್ಯವಸ್ಥೆಗಳನ್ನು ಒಳಗೊಂಡಿದೆ. 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ, ಮಳೆನೀರು ಕೊಯ್ಲು, ಸ್ಮಾರ್ಟ್ ಕಟ್ಟಡ ನಿರ್ವಹಣಾ ವ್ಯವಸ್ಥೆಗಳು, ತ್ಯಾಜ್ಯ ನಿರ್ವಹಣಾ ಉಪಕ್ರಮಗಳು, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಪರಿಸರ ಮೇಲ್ವಿಚಾರಣಾ ಕ್ರಮಗಳು ಸೇರಿದಂತೆ ಹಲವಾರು ಸುಸ್ಥಿರತೆಯ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ʻಟರ್ಮಿನಲ್ʼ ಅನ್ನು ಗ್ರೀನ್ ಬಿಲ್ಡಿಂಗ್ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ʻಯುಎಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ʼನಲ್ಲಿ (ಯುಎಸ್ ಜಿಬಿಸಿ) ನೋಂದಾಯಿಸಲಾಗಿದೆ.

ವಿಮಾನ ನಿಲ್ದಾಣದ ವಾಸ್ತುಶಿಲ್ಪದ ವಿನ್ಯಾಸವು ಆಂಧ್ರಪ್ರದೇಶದ ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ. ಟರ್ಮಿನಲ್‌ನ ಮೇಲ್ಛಾವಣಿಯು ಸಾಂಪ್ರದಾಯಿಕ ʻಚುಟ್ಟಿಲುʼ ಕುಟೀರಗಳು ಮತ್ತು ಅರಕು ಕಣಿವೆಯ ಭೂದೃಶ್ಯಗಳನ್ನು ಪ್ರತಿಬಿಂಬಿಸುತ್ತದೆ. ಅದರ ಹರಿಯುವ ರೂಪವು ಹಾರುವ ಮೀನಿನ ಆಕರ್ಷಕ ಚಲನೆಯನ್ನು ಸಂಕೇತಿಸುತ್ತದೆ. ಪ್ರಾದೇಶಿಕ ವಾಸ್ತುಶಿಲ್ಪದ ಅಂಶಗಳನ್ನು ಸಮಕಾಲೀನ ವಿಮಾನ ನಿಲ್ದಾಣದ ವಿನ್ಯಾಸದೊಂದಿಗೆ ಇದು ಸಂಯೋಜಿಸಿದೆ. ವಿಮಾನ ನಿಲ್ದಾಣವು ಆಂಧ್ರಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ. ಜೊತೆಗೆ, ಈ ಪ್ರದೇಶದಲ್ಲಿ ವಾಯು ಸಂಪರ್ಕವನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಮಂತ್ರಿಯವರು ವಿಶಾಖಪಟ್ಟಣಂನಲ್ಲಿ 460 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ʻಎಎಸ್ಐಪಿʼ ಸೆಮಿಕಂಡಕ್ಟರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೊರಿಯಾ ಗಣರಾಜ್ಯದ ʻಅಪ್ಯಾಕ್ಟ್ʼ ಸಂಸ್ಥೆಯ ಸಹಭಾಗಿತ್ವದಲ್ಲಿ ʻಎಎಸ್ಐಪಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ʼ ಈ ಘಟಕವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ʼ ಅಡಿಯಲ್ಲಿ ಅನುಮೋದಿಸಲಾದ ಆಂಧ್ರಪ್ರದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕವಾಗಿದೆ. ಈ ಘಟಕವು ವಾರ್ಷಿಕವಾಗಿ ಸುಮಾರು 96 ದಶಲಕ್ಷ ಸೆಮಿಕಂಡಕ್ಟರ್ ಚಿಪ್‌ಗಳನ್ನು ತಯಾರಿಸುತ್ತದೆ ಮತ್ತು ಉನ್ನತ ಕೌಶಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಬೆಂಬಲಿಸಲು ದೃಢವಾದ ಪೂರಕ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ʻಕರ್ನೂಲ್-4ʼ ನವೀಕರಿಸಬಹುದಾದ ಇಂಧನ ವಲಯ (ಆರ್‌ಇಝೆಡ್) ಹಂತ-1 (4.5 ಗಿಗಾವ್ಯಾಟ್) ಸ್ಥಾವರವನ್ನು ವಿದ್ಯುತ್‌ ಪ್ರಸರಣ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಸರಣ ಮಾರ್ಗಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 5,550 ಕೋಟಿ ರೂ.ಗಳ ಹೂಡಿಕೆಯೊಂದಿಗೆ ʻವಿಶೇಷ ಉದ್ದೇಶದ ವಾಹಕʼ(ಎಸ್‌ಪಿವಿ) ಮೂಲಕ ʻಪವರ್‌ಗ್ರಿಡ್‌ʼ ಇದನ್ನು ಅನುಷ್ಠಾನಗೊಳಿಸುತ್ತಿದೆ.

ʻಕರ್ನೂಲ್ ಪವನ ಶಕ್ತಿ ವಲಯ / ಸೌರಶಕ್ತಿ ವಲಯ (ಆಂಧ್ರಪ್ರದೇಶ) - ಭಾಗ ʻಎʼ ಮತ್ತು ಭಾಗ ʻಬಿʼ ಅನ್ನು ಪ್ರಸರಣ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮಾರ್ಗವನ್ನೂ ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಸುಮಾರು 3,550 ಕೋಟಿ ರೂ.ಗಳ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.  ಜೊತೆಗೆ, ಅನಂತಪುರಂ (2,500 ಮೆಗಾವ್ಯಾಟ್) ಮತ್ತು ಕರ್ನೂಲ್ (1,000 ಮೆಗಾವ್ಯಾಟ್) ಸೌರಶಕ್ತಿ ವಲಯದ ಪ್ರಸರಣ ಯೋಜನೆಯನ್ನೂ ಅವರು ಉದ್ಘಾಟಿಸಲಿದ್ದಾರೆ.  ʻಪವರ್‌ಗ್ರಿಡ್‌ʼ ಸಂಸ್ಥೆಯು 820 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಇದನ್ನು ಜಾರಿಗೊಳಿಸಿದೆ.

ಈ ಪ್ರಸರಣ ಯೋಜನೆಗಳು ಕರ್ನೂಲ್ ಮತ್ತು ಅನಂತಪುರಂನ ನವೀಕರಿಸಬಹುದಾದ ಇಂಧನ ವಲಯಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸ್ಥಳಾಂತರಿಸಲು ಮತ್ತು ರಾಷ್ಟ್ರೀಯ ಗ್ರಿಡ್ ಮೂಲಕ ದೇಶಾದ್ಯಂತ ಫಲಾನುಭವಿಗಳಿಗೆ ರವಾನಿಸಲು ಅನುವು ಮಾಡಿಕೊಡುತ್ತವೆ. ಇವು ಹೆಚ್ಚಿನ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನು ಗ್ರಿಡ್‌ಗೆ ತಲುಪಿಸಲು ಅನುಕೂಲ ಮಾಡಿಕೊಡುತ್ತವೆ. ಬೇಡಿಕೆ ಕೇಂದ್ರಗಳಿಗೆ ಶುದ್ಧ ವಿದ್ಯುತ್ ಲಭ್ಯತೆಯನ್ನು ಸುಧಾರಿಸುತ್ತವೆ ಮತ್ತು ಪಳೆಯುಳಿಕೆ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಭಾರತದ ಇಂಧನ ಪರಿವರ್ತನೆ ಮತ್ತು ಇಂಗಾಲ ಹೊರಸೂಸುವಿಕೆ ಇಳಿಕೆ (ಡಿಕಾರ್ಬನೈಸೇಷನ್‌) ಪ್ರಯತ್ನಗಳಿಗೆ ಕೊಡುಗೆ ನೀಡುತ್ತವೆ.

ಪ್ರಧಾನಮಂತ್ರಿಯವರು 1,880 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ʻರಾಷ್ಟ್ರೀಯ ಹೆದ್ದಾರಿ-365ಬಿಜಿʼ ಮಾರ್ಗದ ರೇಚೆರ್ಲಾ-ಗುರುವಾಯಗುಡೆಮ್ ವಿಭಾಗದವರೆಗಿನ ಚತುಷ್ಪಥ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್‌ ಹೆದ್ದಾರಿ; ʻರಾಷ್ಟ್ರೀಯ ಹೆದ್ದಾರಿ 365ಬಿಜಿʼ ಯ ಗುರುವಾಯಗುಡೆಮ್‌-ದೇವರಪಲ್ಲೆ ವಿಭಾಗದವರೆಗಿನ ನಾಲ್ಕು ಪಥದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್‌ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಚತುಷ್ಪಥ ತಾಡಿಪತ್ರಿ ಬೈಪಾಸ್ – ಇವು ಪ್ರಧಾನಿಯವರು ಲೋಕಾರ್ಪಣೆ ಮಾಡಲಿರುವ ಯೋಜನೆಗಳಲ್ಲಿ ಸೇರಿವೆ. ರಾಷ್ಟ್ರೀಯ ಹೆದ್ದಾರಿ 565ರಲ್ಲಿ ಪೆಂಚಲಕೋನ-ಯೆರ್ಪೆಡು ವಿಭಾಗದ ಲಿಂಗಸಮುದ್ರದಲ್ಲಿ ಎತ್ತರದ ಸೇತುವೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ವಿಜಯವಾಡ ಮತ್ತು ಇತರ ಹಲವಾರು ನಗರಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತವೆ, ವಿಶಾಖಪಟ್ಟಣಂ-ಹೈದರಾಬಾದ್ ನಡುವಿನ ಪ್ರಯಾಣದ ದೂರ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುತ್ತವೆ.

ಕರ್ನಾಟಕದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರಿನಲ್ಲಿ ʻಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ - ವಿವೇಕ ಸ್ಮಾರಕʼವನ್ನು ಉದ್ಘಾಟಿಸಲಿದ್ದಾರೆ.

ಸ್ವಾಮಿ ವಿವೇಕಾನಂದರು 1892ರ ನವೆಂಬರ್‌ನಲ್ಲಿ ಭಾರತದಾದ್ಯಂತ ತಮ್ಮ ಪ್ರಯಾಣದ ಸಮಯದಲ್ಲಿ ಮೈಸೂರಿಗೆ ಐತಿಹಾಸಿಕ ಭೇಟಿ ನೀಡಿದ್ದರ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ. ತಮ್ಮ ವಾಸ್ತವ್ಯದ ಸಮಯದಲ್ಲಿ, ಇಲ್ಲಿ ಅವರು ಪ್ರವಚನಗಳನ್ನು ನೀಡಿದ್ದರು, ವಿದ್ವಾಂಸರು ಮತ್ತು ಭಕ್ತರೊಂದಿಗೆ ಸಂವಹನ ನಡೆಸಿದ್ದರು ಮತ್ತು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಪ್ರೋತ್ಸಾಹವನ್ನು ಪಡೆದಿದ್ದರು. ಮಹಾರಾಜರ ಬೆಂಬಲವು 1893ರಲ್ಲಿ ಚಿಕಾಗೋದಲ್ಲಿ ನಡೆದ ಧಾರ್ಮಿಕ ಸಂಸತ್ತಿಗೆ ವಿವೇಕಾನಂದರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿತು.

ಐತಿಹಾಸಿಕ ʻನಿರಂಜನ ಮಠʼದಲ್ಲಿ ಸ್ಥಾಪಿಸಲಾದ ʻವಿವೇಕ ಸ್ಮಾರಕʼವು 81,000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಇದು ಮುಖ್ಯ ಕಟ್ಟಡ ಮತ್ತು ಅನೆಕ್ಸ್ ಬ್ಲಾಕ್ ಅನ್ನು ಒಳಗೊಂಡಿದೆ. ಇದು ʻ4-ಡಿʼ ಅನುಭವ ಕೇಂದ್ರ, ಪ್ರದರ್ಶನ ಸಭಾಂಗಣ, ಸುಮಾರು 700 ಆಸನ ಸಾಮರ್ಥ್ಯದ ಆಂಫಿಥಿಯೇಟರ್, ತರಗತಿ ಕೊಠಡಿಗಳು, ಸಮ್ಮೇಳನ ಕೊಠಡಿಗಳು, ಗ್ರಂಥಾಲಯ, ವಾಚನಾಲಯ, ಧ್ಯಾನ ಮತ್ತು ಯೋಗ ಸಭಾಂಗಣ ಮತ್ತು ಪುಸ್ತಕ ಮಳಿಗೆಯನ್ನು ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಸಹ ಈ ಕೇಂದ್ರವು ಒಳಗೊಂಡಿದೆ.

ಸ್ವಾಮಿ ವಿವೇಕಾನಂದರ ಜೀವನ, ಸಂದೇಶ ಮತ್ತು ಆದರ್ಶಗಳಿಗೆ ಸಮರ್ಪಿತವಾದ ಈ ಸಾಂಸ್ಕೃತಿಕ ಯುವ ಕೇಂದ್ರವು ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಅಭಿವೃದ್ಧಿ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಇದು ಸ್ವಾಮಿ ವಿವೇಕಾನಂದರ ರಾಷ್ಟ್ರ ನಿರ್ಮಾಣ ಮತ್ತು ಚಾರಿತ್ರ್ಯ ಅಭಿವೃದ್ಧಿಯ ತತ್ವದಿಂದ ಪ್ರೇರಿತವಾದ ಉಪನ್ಯಾಸಗಳು, ಕಾರ್ಯಾಗಾರಗಳು, ಅಲ್ಪಾವಧಿಯ ಕೋರ್ಸ್‌ಗಳು ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಆ ಮೂಲಕ ಹತ್ತಿರದ ಶಿಕ್ಷಣ ಸಂಸ್ಥೆಗಳ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ನಗರ ಮತ್ತು ಗ್ರಾಮೀಣ ಯುವಕರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.

 

*****


(रिलीज़ आईडी: 2292257) आगंतुक पटल : 48
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Tamil , Telugu , Malayalam