ಸಹಕಾರ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸಹಕಾರ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ ಸಹಕಾರ ಕ್ಷೇತ್ರದೊಂದಿಗೆ ಒಡನಾಟ ಹೊಂದಿರುವ 30 ಕೋಟಿ ಜನರ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಿದೆ

ತನ್ನ ಐದು ವರ್ಷಗಳ ಪಯಣದಲ್ಲಿ, ಸಚಿವಾಲಯವು ಸಹಕಾರ ಕ್ಷೇತ್ರವು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಗುರುತಿಸಿದೆ, ಅದರ ಅಭಿವೃದ್ಧಿ ಮತ್ತು ಪರಿಹಾರಕ್ಕಾಗಿ ಸಮಗ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಮತ್ತು ಸಹಕಾರ ಪರಿಸರ ವ್ಯವಸ್ಥೆಯನ್ನು ಆಧುನಿಕ, ಪಾರದರ್ಶಕ, ತಂತ್ರಜ್ಞಾನ ಆಧಾರಿತ ಮತ್ತು ಸ್ಪರ್ಧಾತ್ಮಕವಾಗಿ ಪರಿವರ್ತಿಸಿದೆ

ದೇಶವು 2047ರಲ್ಲಿ ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ಸಹಕಾರ ಚಳವಳಿಯು ಸಮೃದ್ಧ ಭಾರತದ ಬಲವಾದ ಬುನಾದಿಯಾಗಿ ಕಾರ್ಯನಿರ್ವಹಿಸಲಿದೆ

ಕೃಷಿ, ಡೈರಿ, ಬ್ಯಾಂಕಿಂಗ್, ಲಾಜಿಸ್ಟಿಕ್ಸ್ ಮತ್ತು ಮೊಬಿಲಿಟಿಯಂತಹ ಕ್ಷೇತ್ರಗಳನ್ನು ಸಂಯೋಜಿಸಲು ದೇಶಾದ್ಯಂತ ಹೊಸ ಸಹಕಾರ ಸಂಸ್ಥೆಗಳ ಜಾಲವನ್ನು ಸ್ಥಾಪಿಸಲಾಗಿದೆ, ಜೊತೆಗೆ 32 ಕೋಟಿಗೂ ಹೆಚ್ಚು ಸಹಕಾರಿ ಸದಸ್ಯರ ಡಿಜಿಟಲ್ ಡೇಟಾಬೇಸ್ ಅನ್ನು ಸಹ ರಚಿಸಲಾಗಿದೆ

ಒಂಬತ್ತು ರಾಷ್ಟ್ರ ಮಟ್ಟದ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ, ಸರ್ಕಾರವು ಸಹಕಾರ ಚಳವಳಿಯನ್ನು ಒಂಬತ್ತು ಕ್ಷೇತ್ರಗಳಲ್ಲಿ ಒಂದು ಏಕೀಕೃತ ಚೌಕಟ್ಟಿನೊಳಗೆ ಹೆಣೆದಿದೆ ಮತ್ತು ಅದರ ವ್ಯಾಪ್ತಿಯನ್ನು ಗ್ರಾಮ ಮಟ್ಟದವರೆಗೆ ವಿಸ್ತರಿಸಿದೆ. ಮುಂದಿನ ದಶಕದಲ್ಲಿ, ಈ ಸಂಸ್ಥೆಗಳು ವಿಶ್ವದ ಅತಿ ದೊಡ್ಡ ಸಹಕಾರ ಸಂಸ್ಥೆಗಳಾಗಿ ಹೊರಹೊಮ್ಮಲು ಸಜ್ಜಾಗಿವೆ

ಸಹಕಾರ ಮಾದರಿಯ ಮೂಲಕ ರೈತರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಮತ್ತು ಬೀಜ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ

ಭಾರತ್ ಬೀಜ್ ಸಹಕಾರಿ ಸಮಿತಿ ಲಿಮಿಟೆಡ್ (ಬಿ ಬಿ ಎಸ್ ಎಸ್ ಎಲ್) ಮುಂದಿನ ಮೂರು ವರ್ಷಗಳಲ್ಲಿ ದೇಶದ ಅತಿ ದೊಡ್ಡ ಬೀಜ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಲಿದೆ. ಪ್ರತಿ ರಾಜ್ಯದಲ್ಲಿನ ಹೊಸ ಘಟಕಗಳು ರೈತರಿಗೆ ಉತ್ತಮ ಗುಣಮಟ್ಟದ ಮತ್ತು ಸುಧಾರಿತ ಬೀಜಗಳು ಸಿಗುವಂತೆ ಖಚಿತಪಡಿಸಲಿವೆ

ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸಲು ಸಾವಯವ ಕೃಷಿ, ಮರುಬಳಕೆ ಆರ್ಥಿಕತೆ, ಜಾನುವಾರು ತ್ಯಾಜ್ಯ ನಿರ್ವಹಣೆ, ಸಾವಯವ ಗೊಬ್ಬರಗಳು ಮತ್ತು ಇಂಧನ ಉತ್ಪಾದನೆಯನ್ನು ಸಹಕಾರ ಮಾದರಿಯೊಂದಿಗೆ ಸಂಯೋಜಿಸಲಾಗುತ್ತಿದೆ

ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯವು ಸಹಕಾರ ಕ್ಷೇತ್ರದ ಪ್ರತಿಯೊಂದು ವಿಭಾಗಕ್ಕೂ ನುರಿತ ವೃತ್ತಿಪರರನ್ನು ಸಿದ್ಧಪಡಿಸಲಿದೆ. ಇದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮಟ್ಟದಿಂದ ವೃತ್ತಿಪರತೆಯನ್ನು ತರಲಿದೆ

प्रविष्टि तिथि: 06 JUL 2026 6:48PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಸಹಕಾರ ಸಚಿವಾಲಯದ 5ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳಿಧರ್ ಮೋಹೋಲ್, ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭುತಾನಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ, ಪಶುಸಂಗೋಪನೆ ಮತ್ತು ಡೈರಿ ಇಲಾಖೆಯ ಕಾರ್ಯದರ್ಶಿ ಶ್ರೀ ನರೇಶ್ ಪಾಲ್ ಗಂಗ್ವಾರ್ ಮತ್ತು ಹಲವಾರು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸಹಕಾರ ಸಂಸ್ಥೆಗಳು, ಸಹಕಾರ ಒಕ್ಕೂಟಗಳು, ಸಹಕಾರ ಬ್ಯಾಂಕುಗಳು, ಡೈರಿ ಸಹಕಾರ ಸಂಘಗಳು, ಭಾರತ್ ಟ್ಯಾಕ್ಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸಹಕಾರ ಕ್ಷೇತ್ರದ ಇತರ ಪಾಲುದಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಇಂದು ನಮ್ಮೆಲ್ಲರಿಗೂ ಅತ್ಯಂತ ಶುಭ ದಿನವಾಗಿದೆ ಎಂದು ಹೇಳಿದರು. ಸರಿಯಾಗಿ ಐದು ವರ್ಷಗಳ ಹಿಂದೆ, ದೇಶಾದ್ಯಂತ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ 32 ಕೋಟಿ ಜನರ ಮತ್ತು 8.50 ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳ 75 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. ಇದೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಸರ್ಕಾರದಲ್ಲಿ ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡರು. ಪ್ರಧಾನಮಂತ್ರಿಯವರ ಈ ನಿರ್ಧಾರವು ದೇಶದ ಸಹಕಾರ ಚಳವಳಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿತು, ಅದಕ್ಕೂ ಮೊದಲು 75 ವರ್ಷಗಳ ಕಾಲ ಈ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿತ್ತು ಮತ್ತು ದ್ವಿತೀಯ ದರ್ಜೆಯಾಗಿ ನಡೆಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು. ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಮೋದಿ ಅವರು ಸಹಕಾರ ಕ್ಷೇತ್ರಕ್ಕೆ ಹೊಸ ಜೀವ ತುಂಬಿದರು ಎಂದು ಅವರು ಹೇಳಿದರು.

ನಮ್ಮ ಪಕ್ಷ ಅಥವಾ ಮೈತ್ರಿಕೂಟಕ್ಕೆ ಆಡಳಿತ ನಡೆಸುವ ಅವಕಾಶ ಸಿಕ್ಕಿದಾಗಲೆಲ್ಲಾ, ನಾವು ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಅಟಲ್ ಜಿ ಅವರು ಪ್ರಧಾನಿಯಾದಾಗ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಿದರು. 2019 ರಲ್ಲಿ ಮೋದಿ ಅವರು ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿ, ನೀರು ನಿರ್ವಹಣೆಯನ್ನು ಒಂದು ಸಂಯೋಜಿತ ಸಚಿವಾಲಯದ ಅಡಿಗೆ ತಂದರು. ಅದೇ ವರ್ಷದಲ್ಲಿ ಮೀನುಗಾರಿಕೆ ಸಚಿವಾಲಯವನ್ನು ರಚಿಸಲಾಯಿತು. ಅದೇ ವರ್ಷದಲ್ಲಿ ಪಶುಸಂಗೋಪನೆ ಮತ್ತು ಡೈರಿ ಸಚಿವಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಯಿತು, ಮತ್ತು 2021ರಲ್ಲಿ ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಮೋದಿ ಅವರು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟರು ಎಂದು ಅವರು ಹೇಳಿದರು.

ಐದು ವರ್ಷಗಳ ಹಿಂದೆ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದಾಗ, ಭಾರತ ಸಂವಿಧಾನದ ಅಡಿಯಲ್ಲಿ 'ಸಹಕಾರ' ಎಂಬುದು ರಾಜ್ಯದ ವಿಷಯವಾಗಿದೆ ಮತ್ತು ಕೇಂದ್ರದಲ್ಲಿ ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ದೊಡ್ಡ ವಿವಾದವನ್ನು ಸೃಷ್ಟಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಐದು ವರ್ಷಗಳು ಕಳೆದಿವೆ, ಆದರೆ ವಿರೋಧ ಪಕ್ಷಗಳು ಆಳುವ ರಾಜ್ಯಗಳು ಸಹ ಕೇಂದ್ರ ಸಹಕಾರ ಸಚಿವಾಲಯವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಎಂದಿಗೂ ದೂರಿಲ್ಲ, ಮತ್ತು ಇದು ನಮ್ಮ ಅತಿ ದೊಡ್ಡ ಸಾಧನೆ ಆಗಿದೆ ಎಂದು ಅವರು ಹೇಳಿದರು. ಸಹಕಾರವನ್ನು ಅರ್ಥಮಾಡಿಕೊಂಡವರಿಗೆ ಸಹಕಾರದಲ್ಲಿ ಹಸ್ತಕ್ಷೇಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ತಿಳಿದಿದೆ. ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದು, ಎಲ್ಲರ ಸಹಕಾರದೊಂದಿಗೆ ಮುನ್ನಡೆಯುವುದು ಮತ್ತು ಎಲ್ಲರ ಸಾಮರ್ಥ್ಯವನ್ನು ನಿರಂತರವಾಗಿ ಒಟ್ಟುಗೂಡಿಸುವುದೇ ಸಹಕಾರದ ನಿಜವಾದ ಸಾರವಾಗಿದೆ ಎಂದು ಅವರು ಹೇಳಿದರು. ಕಳೆದ ಐದು ವರ್ಷಗಳಲ್ಲಿ, ಸಹಕಾರ ಸಚಿವಾಲಯವು ರಾಜ್ಯಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ರಚಿಸಿದ್ದಲ್ಲ, ಬದಲಿಗೆ ಅವರಿಗೆ ಸಹಾಯ ಮಾಡಲು, ನೀತಿ ನಿರೂಪಣೆಗೆ ಬೆಂಬಲ ನೀಡಲು ಮತ್ತು ಅವರ ಪ್ರಗತಿಗೆ ಸಹಾಯ ಮಾಡಲು ರಚಿಸಲಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಶ್ರೀ ಶಾ ಹೇಳಿದರು. ನಕಾರಾತ್ಮಕ ಮನಸ್ಥಿತಿ ಉಳ್ಳವರ ಊಹೆಗಳು ಸಂಪೂರ್ಣ ತಪ್ಪು ಎಂಬುದನ್ನು ಸಹಕಾರ ಸಚಿವಾಲಯವು ತೆಗೆದುಕೊಂಡ ಹಲವಾರು ಕ್ರಮಗಳು ಸಾಬೀತುಪಡಿಸಿವೆ ಎಂದು ಅವರು ಹೇಳಿದರು.

ಈ ಐದು ವರ್ಷಗಳಲ್ಲಿ ನಾವು ಸಮಸ್ಯೆಗಳನ್ನು ಗುರುತಿಸಿದ್ದೇವೆ, ಸಾಧ್ಯತೆಗಳನ್ನು ಪೋಷಿಸಿದ್ದೇವೆ ಮತ್ತು ರಾಜ್ಯಗಳಿಗೆ ಭವಿಷ್ಯ ಆಧಾರಿತ ನೀತಿಗಳನ್ನು ಒದಗಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ ಐದು ವರ್ಷಗಳು ಸಹಕಾರ ಸಚಿವಾಲಯಕ್ಕೆ ಸುವರ್ಣ ಕಾಲ ಎಂದು ಸಾಬೀತಾಗಿದೆ. ಭಾರತದ ಸಹಕಾರ ಚಳವಳಿಯ ಇತಿಹಾಸವನ್ನು ಬರೆಯುವಾಗಲೆಲ್ಲಾ, ಈ ಅವಧಿಯನ್ನು ಖಂಡಿತವಾಗಿಯೂ ಸುವರ್ಣಾಕ್ಷರಗಳಲ್ಲಿ ದಾಖಲಿಸಲಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಹಿಡಿದು ಸರ್ವೋಚ್ಚ ಸಂಸ್ಥೆಗಳವರೆಗೆ, ರಾಜ್ಯ ಸರ್ಕಾರಗಳಿಂದ ಹಿಡಿದು ಜಿಲ್ಲಾ ಮಟ್ಟದ ಸಹಕಾರ ಒಕ್ಕೂಟಗಳವರೆಗೆ, ನಾವು ಪ್ರತಿ ಹಂತದಲ್ಲೂ ವ್ಯಾಪಕ ಸಮಾಲೋಚನೆಯ ನಂತರ ನಮ್ಮ ಉಪಕ್ರಮಗಳನ್ನು ಫಲಿತಾಂಶಗಳಾಗಿ ಪರಿವರ್ತಿಸಿದ್ದೇವೆ ಎಂದು ಅವರು ಹೇಳಿದರು.

ಕಳೆದ 62 ವರ್ಷಗಳಿಂದ ಸಹಕಾರ ಕಾರ್ಯವನ್ನು ಕೃಷಿ ಸಚಿವಾಲಯದ ಅಡಿಯಲ್ಲಿ ಕೇವಲ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ನಿರ್ವಹಿಸಲಾಗುತ್ತಿತ್ತು ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಇಂದು, ಸಂಪೂರ್ಣ ಸ್ವತಂತ್ರ ಸಹಕಾರ ಸಚಿವಾಲಯವು ಎಲ್ಲಾ ರಾಜ್ಯಗಳನ್ನು ಮತ್ತು ದೇಶಾದ್ಯಂತ ಇರುವ 8.30 ಲಕ್ಷ ಸಹಕಾರ ಸಂಘಗಳನ್ನು ಜೊತೆಯಲ್ಲಿ ಕರೆದೊಯ್ಯುವ ಮೂಲಕ ಮುನ್ನಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ನಾವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸುವುದರ ಜೊತೆಗೆ, ನಮ್ಮ ಸಹಕಾರ ವ್ಯವಸ್ಥೆಯನ್ನು ಆಧುನಿಕ, ಪಾರದರ್ಶಕ, ತಂತ್ರಜ್ಞಾನ ಸಕ್ರಿಯ ಮತ್ತು ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು. ಹಿಂದೆ, ಸಹಕಾರವು ಹೆಚ್ಚಾಗಿ ಪ್ರಾಥಮಿಕ ವಲಯಕ್ಕೆ ಮಾತ್ರ ಸೀಮಿತವಾಗಿತ್ತು. ನಾವು ಕೃಷಿ ಸಾಲ, ಡೈರಿ, ರಸಗೊಬ್ಬರ ವಿತರಣೆ ಮತ್ತು ಗ್ರಾಮೀಣ ಸೇವೆಗಳನ್ನು ಪ್ರಾಥಮಿಕ ಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಲಿಂಕ್ ಮಾಡಿದ್ದೇವೆ. ಇದರೊಂದಿಗೆ ದ್ವಿತೀಯ ಮತ್ತು ತೃತೀಯ ವಲಯಗಳನ್ನು ಸಹಕಾರದೊಂದಿಗೆ ಜೋಡಿಸುವ ಕೆಲಸವೂ ನಡೆದಿದೆ. ದಾಸ್ತಾನು, ಉತ್ಪಾದನೆ, ರಫ್ತು, ಸಾವಯವ ಉತ್ಪಾದನೆ, ಸಾಂಪ್ರದಾಯಿಕ ಬೀಜಗಳ ಉತ್ಪಾದನೆ, ಹೆಚ್ಚಿನ ಉತ್ಪಾದಕತೆಯ ಬೀಜಗಳ ಅಭಿವೃದ್ಧಿ, ಡಿಜಿಟಲ್ ಸೇವೆಗಳು, ಬ್ಯಾಂಕಿಂಗ್, ಮೊಬಿಲಿಟಿ, ಲಾಜಿಸ್ಟಿಕ್ಸ್ ಮತ್ತು ಹಸಿರು ಇಂಧನ — ಈ ಎಲ್ಲಾ ಕ್ಷೇತ್ರಗಳನ್ನು ಕಳೆದ ಐದು ವರ್ಷಗಳಲ್ಲಿ ಒಟ್ಟಿಗೆ ಹೆಣೆಯಲಾಗಿದೆ. ಸಹಕಾರ ಸಚಿವಾಲಯದ ಉಪಕ್ರಮಗಳಿಂದಾಗಿ, ಹೊಸದಾಗಿ ರಚಿಸಲಾದ ಮೂರು ರಾಷ್ಟ್ರ ಮಟ್ಟದ ಸಹಕಾರ ಸಂಘಗಳು ಸೇರಿದಂತೆ ಒಟ್ಟು ಒಂಬತ್ತು ರಾಷ್ಟ್ರ ಮಟ್ಟದ ಸಹಕಾರ ಸಂಘಗಳನ್ನು ರಚಿಸಲಾಗಿದೆ ಎಂದು ಸಹಕಾರ ಸಚಿವರು ತಿಳಿಸಿದರು. ಈ ಒಂಬತ್ತು ಸಂಘಗಳ ಮೂಲಕ ಒಂಬತ್ತು ವಿಭಿನ್ನ ಕ್ಷೇತ್ರಗಳಲ್ಲಿ ಗ್ರಾಮದವರೆಗೆ ಸಹಕಾರವನ್ನು ಸಂಪರ್ಕಿಸಲಾಗಿದೆ. ಇಫ್ಕೋ, ಕ್ರಿಬ್ಕೋ, ಅಮುಲ್ ಮತ್ತು ಎನ್‌ ಡಿ ಡಿ ಬಿ ಹೇಗೆ ಸಹಕಾರ ಚಳವಳಿಯ ಗುರುತನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ಅದಕ್ಕೆ ಪ್ರತಿಷ್ಠೆಯನ್ನು ತಂದುಕೊಟ್ಟಿವೆಯೋ, ಹಾಗೆಯೇ ನಮ್ಮ ಒಂಬತ್ತು ರಾಷ್ಟ್ರ ಮಟ್ಟದ ಸಹಕಾರ ಸಂಘಗಳು ಸಹ ದೊಡ್ಡ ಅಂತರರಾಷ್ಟ್ರೀಯ ಮಟ್ಟದ ಸಹಕಾರ ಸಂಸ್ಥೆಗಳಾಗಿ ಬೆಳೆಯಲಿವೆ ಎಂದು ಅವರು ಹೇಳಿದರು.

ಸಹಕಾರ ಸಚಿವಾಲಯದ ಐದು ವರ್ಷಗಳ ಅವಧಿಯಲ್ಲಿ ಐದು ಸ್ತಂಭಗಳ ಅಡಿಯಲ್ಲಿ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೊದಲ ಸ್ತಂಭದ ಅಡಿಯಲ್ಲಿ, ನಾವು ಸಾಂಸ್ಥಿಕ ಸುಧಾರಣೆಗಳು, ಉತ್ತಮ ಆಡಳಿತ ಮತ್ತು ಪಾರದರ್ಶಕತೆಯನ್ನು ಬಲಪಡಿಸಿದ್ದೇವೆ. ಇದಕ್ಕಾಗಿ ಸಹಕಾರದ ಸಮಗ್ರ ಡೇಟಾಬೇಸ್ ಸಿದ್ಧಪಡಿಸಲಾಗಿದೆ. ಇಂದು, ಯಾವ ಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲ, ಎಲ್ಲಿ ಡೈರಿ ಸಹಕಾರ ಸಂಘವಿಲ್ಲ ಮತ್ತು ಎಲ್ಲಿ ನಗರ ವಸತಿ ಸಂಘವಿಲ್ಲ ಎಂಬ ಮಾಹಿತಿ ಪ್ರತಿ ರಾಜ್ಯದ ಸಹಕಾರ ರಿಜಿಸ್ಟ್ರಾರ್ ಬಳಿ ಲಭ್ಯವಿದೆ. ಈ ಎಲ್ಲಾ ಕೊರತೆಗಳನ್ನು ಈಗ ಗುರುತಿಸಲಾಗಿದೆ ಮತ್ತು ಇದರ ಆಧಾರದ ಮೇಲೆ ಸಹಕಾರವು ಮುಂದೆ ಸಾಗಲಿದೆ. 30 ಕ್ಷೇತ್ರಗಳಲ್ಲಿನ 8,58,000 ಸಹಕಾರ ಸಂಘಗಳು ಮತ್ತು 32 ಕೋಟಿ ಸದಸ್ಯರ ವಿವರಗಳು ಈಗ ಒಂದೇ ಡೇಟಾಬೇಸ್‌ ನಲ್ಲಿ ಒಟ್ಟಿಗೆ ಲಭ್ಯವಿವೆ ಎಂದು ಅವರು ಹೇಳಿದರು. ಎಲ್ಲಾ ಸಹಕಾರ ಸಂಘಗಳ ಆಡಿಟ್ ಸ್ಥಿತಿ, ವಹಿವಾಟು ಮತ್ತು ಎಬಿಸಿ ಶ್ರೇಣೀಕರಣವೂ ಇದರಲ್ಲಿ ಲಭ್ಯವಿದೆ. ರಾಜ್ಯ ಸಹಕಾರ ರಿಜಿಸ್ಟ್ರಾರ್‌ ಗಳು ಈ ಡೇಟಾಬೇಸ್ ಅನ್ನು ಬಳಸಿಕೊಂಡು ಸಂಘಗಳು, ಜಿಲ್ಲಾ ಸಹಕಾರ ಬ್ಯಾಂಕುಗಳು ಮತ್ತು ರಾಜ್ಯ ಡೈರಿಗಳನ್ನು, ಹಾಗೆಯೇ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೈರಿಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮೇಲ್ದರ್ಜೆಗೆ ಏರಿಸಬಹುದು ಮತ್ತು ಅಸ್ತಿತ್ವದಲ್ಲಿರುವ ಕೊರತೆಗಳನ್ನು ತುಂಬಬಹುದು. ಈ ವರ್ಷ ನಾವು ಸಹಕಾರ ಸಂಸ್ಥೆಗಳಿಗಾಗಿ ರ‍್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಇದರ ಮೂಲಕ ಪ್ರತಿ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಅಗ್ರ ಐದು ಸಹಕಾರ ಸಂಘಗಳನ್ನು ಗುರುತಿಸಿ, ರ‍್ಯಾಂಕ್ ನೀಡಿ, ಅವುಗಳ ಮಾದರಿ ಕೆಲಸವನ್ನು ಇತರ ಸಂಸ್ಥೆಗಳಿಗೆ ಸ್ಫೂರ್ತಿಯಾಗಿ ಎತ್ತಿ ತೋರಿಸಲಾಗುತ್ತದೆ, ಅವುಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ಹೇಳಿದರು.

ನಾವು ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002ಕ್ಕೆ 50 ಪ್ರಮುಖ ತಿದ್ದುಪಡಿಗಳನ್ನು ಮಾಡಿದ್ದೇವೆ, ಇದು ಇಡೀ ಸಹಕಾರ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕವಾಗಿಸಿದೆ ಎಂದು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಈ ಸಂಸ್ಥೆಗಳ ಅಧ್ಯಯನವು ಅವುಗಳ ನಾಯಕತ್ವವು ಸಹಕಾರಕ್ಕೆ ಸಂಬಂಧಿಸಿದ ಜನರ ಕೈಯಲ್ಲಿದ್ದರೂ, ಅವುಗಳ ಆಡಳಿತ ಮತ್ತು ನಿರ್ವಹಣೆಯನ್ನು ವೃತ್ತಿಪರ ರೀತಿಯಲ್ಲಿ ನಡೆಸಲಾಗುತ್ತಿದೆ ಎಂಬುದನ್ನು ತೋರಿಸಿದೆ. ಈ ಯಶಸ್ವಿ ಮಾದರಿಯನ್ನು ಅಳವಡಿಸಿಕೊಳ್ಳಲು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಯಾವಾಗಲೂ ನಾಯಕತ್ವ ಮತ್ತು ಸಾಂಸ್ಥಿಕ ಸ್ಥಿರತೆ ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು. ಆದ್ದರಿಂದ, ನಾವು ಯಶಸ್ವಿ ಸಹಕಾರ ಮಾದರಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದೇವೆ — ಇಫ್ಕೋ, ಕ್ರಿಬ್ಕೋ ಮತ್ತು ಅಮುಲ್ ಏಕೆ ಯಶಸ್ವಿಯಾದವು, ವಿವಿಧ ರಾಜ್ಯಗಳಲ್ಲಿನ ಹಾಲು ಸಹಕಾರ ಸಂಘಗಳು ಹೇಗೆ ಯಶಸ್ವಿಯಾದವು ಮತ್ತು ರಾಷ್ಟ್ರ ಮಟ್ಟದ ಡೈರಿ ಅಭಿವೃದ್ಧಿ ಮಂಡಳಿಯು ಹೇಗೆ ಇಷ್ಟು ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸಿದ್ದೇವೆ. ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವು ಬ್ಯಾಂಕಿಂಗ್, ಡೈರಿ, ಮಾರ್ಕೆಟಿಂಗ್, ಕೃಷಿ, ರಸಗೊಬ್ಬರಗಳು ಮತ್ತು ಸಹಕಾರದ ಇತರ ಕ್ಷೇತ್ರಗಳಲ್ಲಿ ತರಬೇತಿ ಪಡೆದ ವೃತ್ತಿಪರರನ್ನು ಸಿದ್ಧಪಡಿಸಲಿದೆ ಎಂದು ಅವರು ಹೇಳಿದರು. ಈ ವೃತ್ತಿಪರರನ್ನು ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಪ್ರಾಥಮಿಕ ಸಹಕಾರ ಸಂಘಗಳಿಂದ ಹಿಡಿದು ಉನ್ನತ ಸಂಸ್ಥೆಗಳವರೆಗೆ ಹಂತ-ಹಂತವಾಗಿ ವೃತ್ತಿಪರ ನಿರ್ವಹಣೆಯನ್ನು ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ. ಇದು ನೇಮಕಾತಿಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ, ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದರಿಂದ ಸಹಕಾರ ಕ್ಷೇತ್ರದ ಮೇಲೆ ಸಾರ್ವಜನಿಕ ನಂಬಿಕೆ ಹೆಚ್ಚುತ್ತದೆ ಎಂದು ಅವರು ಹೇಳಿದರು.

ಎರಡನೇ ಹೆಜ್ಜೆಯೆಂದರೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಬಲವರ್ಧನೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಒಂದು ಕಾಲದಲ್ಲಿ ಪಿಎಸಿಎಸ್ ಹಲವು ರೀತಿಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವು, ಆದರೆ ಕ್ರಮೇಣ ಅವು ನಿಗದಿತ ಬಡ್ಡಿದರದಲ್ಲಿ ಹಣವನ್ನು ಸಾಲ ಕೊಡುವ ಮತ್ತು ಪಡೆಯುವ ಕೆಲಸಕ್ಕೆ ಮಾತ್ರ ಸೀಮಿತವಾದವು. ಇದು ಅವುಗಳ ಲಾಭವನ್ನು ಕಡಿಮೆ ಮಾಡಿತು. ನಾವು ಪಿಎಸಿಎಸ್ ಗಾಗಿ ಮಾದರಿ ಉಪ-ನಿಯಮಗಳನ್ನು ಸಿದ್ಧಪಡಿಸಿದ್ದೇವೆ. ಇಂದು ಬಂಗಾಳ ಸೇರಿದಂತೆ ಇಡೀ ದೇಶವು ಈ ಮಾದರಿ ಉಪ-ನಿಯಮಗಳನ್ನು ಒಪ್ಪಿಕೊಂಡಿದೆ. ದೇಶಾದ್ಯಂತದ ಪಿಎಸಿಎಸ್ ಈಗ ಒಂದೇ ಮಾದರಿ ಉಪ-ನಿಯಮಗಳ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದು 55,000 ಪಿಎಸಿಎಸ್ ಸಾಮಾನ್ಯ ಸೇವಾ ಕೇಂದ್ರಗಳ (CSCs) ಮೂಲಕ ಗ್ರಾಮಸ್ಥರಿಗೆ 300 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿವೆ. ಅಲ್ಲಿಂದ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಲಾಗುತ್ತದೆ, ಜನನ ಮತ್ತು ಮರಣ ನೋಂದಣಿಗಳನ್ನು ಮಾಡಲಾಗುತ್ತದೆ, ಪ್ರಧಾನ ಮಂತ್ರಿಯವರ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಮತ್ತು ಪಾವತಿಗಳನ್ನು ಸಹ ಅಲ್ಲಿ ಸ್ವೀಕರಿಸಲಾಗುತ್ತದೆ. ಈ ರೀತಿಯಾಗಿ, ನಾವು 300 ವಿಭಿನ್ನ ಚಟುವಟಿಕೆಗಳಾದ್ಯಂತ 55,000 ಪಿಎಸಿಎಸ್ ಮೂಲಕ ಸಿ ಎಸ್‌ ಸಿ ಸೇವೆಗಳನ್ನು ಒದಗಿಸುತ್ತಿದ್ದೇವೆ. 39,000 ಪಿಎಸಿಎಸ್ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿವೆ ಎಂದು ಸಹಕಾರ ಸಚಿವರು ತಿಳಿಸಿದರು. 600 ಕ್ಕೂ ಹೆಚ್ಚು ಪಿಎಸಿಎಸ್ ಜನೌಷಧಿ ಕೇಂದ್ರಗಳಾಗಿವೆ. 75 ಪಿಎಸಿಎಸ್ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಡೆಸುತ್ತಿವೆ. 118 ಪಿಎಸಿಎಸ್ ನೀರು ಸರಬರಾಜು ಯೋಜನೆಗಳನ್ನು ನಿರ್ವಹಿಸುತ್ತಿವೆ. ಪಿಎಸಿಎಸ್ ಗಳನ್ನು ಗಣಕೀಕರಣಗೊಳಿಸಲು ಭಾರತ ಸರ್ಕಾರ 3,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಶ್ರೀ ಶಾ ಹೇಳಿದರು. ಇಂದು 50,000 ಪಿಎಸಿಎಸ್ ಗಳನ್ನು ಇ-ಪಿಎಸಿಎಸ್ ಎಂದು ಘೋಷಿಸಲಾಗಿದೆ, ಇವುಗಳ ಸಂಪೂರ್ಣ ವ್ಯವಹಾರವನ್ನು ಎಲೆಕ್ಟ್ರಾನಿಕ್ ಆಗಿ ನಡೆಸಲಾಗುತ್ತಿದೆ, ಇದು ಒಂದು ಪ್ರಮುಖ ಸಾಧನೆಯಾಗಿದೆ. ಇ-ಪಿಎಸಿಎಸ್ ನಿಂದಾಗಿ ಇ-ಆಡಿಟ್ ಪರಿಕಲ್ಪನೆಯನ್ನು ಸಹ ಜಾರಿಗೊಳಿಸಲಾಗಿದೆ. ಸೃಷ್ಟಿಯಾಗುವ ಅಲರ್ಟ್‌ ಗಳನ್ನು ಪಿಎಸಿಎಸ್ ಸಭೆಗಳಲ್ಲಿ ಇರಿಸಲಾಗುತ್ತದೆ, ಇದರಿಂದಾಗಿ ಪಿಎಸಿಎಸ್ ನಇಡೀ ಕಾರ್ಯವೈಖರಿ ಪಾರದರ್ಶಕವಾಗುತ್ತದೆ ಎಂದು ಅವರು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಸಾಲದ ಹರಿವನ್ನು ಹೆಚ್ಚಿಸುವುದು ಮೂರನೇ ಪ್ರಮುಖ ಕಾರ್ಯವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಹಕಾರ ಬ್ಯಾಂಕುಗಳನ್ನು ಆಧುನಿಕ ಬ್ಯಾಂಕಿಂಗ್ ಸೇವೆಗಳೊಂದಿಗೆ ಜೋಡಿಸಲಾಗಿದೆ. ಡಿಜಿಟಲ್ ಪಾವತಿಗಳನ್ನು ಪರಿಚಯಿಸಲಾಗಿದೆ, ಸೈಬರ್ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ, ಇ-ಕೆವೈಸಿ ಪ್ರಾರಂಭಿಸಲಾಗಿದೆ ಮತ್ತು ಡಿಜಿಟಲ್ ಸಾಲಗಳಂತಹ ವ್ಯವಸ್ಥೆಗಳೊಂದಿಗೆ ನಮ್ಮ ನಗರ ಸಹಕಾರ ಬ್ಯಾಂಕುಗಳು ಮತ್ತು ಜಿಲ್ಲಾ ಸಹಕಾರ ಬ್ಯಾಂಕುಗಳು ಕ್ರಮೇಣ ಮುನ್ನಡೆಯುತ್ತಿವೆ. ಜಿಲ್ಲಾ ಸಹಕಾರ ಬ್ಯಾಂಕುಗಳ ಒಟ್ಟು ವ್ಯವಹಾರವು ಹಿಂದೆ 19.6 ಲಕ್ಷ ಕೋಟಿ ರೂ. ಆಗಿತ್ತು, ಅದು ಈಗ 25 ಲಕ್ಷ ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಇದು ದೊಡ್ಡ ಸಾಧನೆಯಾಗಿದೆ. ಗುಜರಾತಿನಲ್ಲಿ ನಡೆದ 'ಸಹಕಾರಿಗಳ ನಡುವೆ ಸಹಕಾರ' ಪ್ರಯೋಗದ ಅಡಿಯಲ್ಲಿ, ಪ್ರತಿ ಸಹಕಾರ ಸಂಘದ ಖಾತೆಯನ್ನು ಸಹಕಾರ ಬ್ಯಾಂಕಿನಲ್ಲಿಯೇ ತೆರೆಯಲಾಗಿದೆ ಎಂದು ಅವರು ಹೇಳಿದರು.

ಗುಜರಾತ್ ಒಂದರಲ್ಲೇ ಡೈರಿಗಳು, ಎಪಿಎಂಸಿಗಳು, ಪಿಎಸಿಎಸ್ ಮತ್ತು ಎಲ್ಲಾ ರೀತಿಯ ಸಹಕಾರ ಸಂಘಗಳ ಖಾತೆಗಳನ್ನು ಸಹಕಾರ ಬ್ಯಾಂಕುಗಳಲ್ಲಿ ತೆರೆದಿರುವುದರಿಂದ ಜಿಲ್ಲಾ ಸಹಕಾರ ಬ್ಯಾಂಕುಗಳ ಠೇವಣಿಗಳೂ ಹೆಚ್ಚಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಪ್ರಯತ್ನಗಳು ಹಲವು ಜಿಲ್ಲಾ ಸಹಕಾರ ಬ್ಯಾಂಕುಗಳನ್ನು ಲಾಭದಾಯಕವಾಗಿಸಿವೆ. ನಗರ ಸಹಕಾರ ಬ್ಯಾಂಕುಗಳ ನಿವ್ವಳ ಲಾಭ ಸುಮಾರು ದ್ವಿಗುಣಗೊಂಡಿದೆ. ಕಳೆದ ಐದು ವರ್ಷಗಳಲ್ಲಿ, ನಾವು ಈ ಬ್ಯಾಂಕುಗಳ ಒಟ್ಟು ಎನ್‌ ಪಿ ಎ ಅನ್ನು ಶೇಕಡಾ 12.8 ರಿಂದ ಶೇಕಡಾ 6.2 ಕ್ಕೆ ಇಳಿಸಿದ್ದೇವೆ ಮತ್ತು ನಿವ್ವಳ ಎನ್‌ ಪಿ ಎ ಅನ್ನು ಶೇಕಡಾ 5.1 ರಿಂದ ಶೇಕಡಾ 0.7 ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಈ ಎಲ್ಲಾ ಚಟುವಟಿಕೆಗಳನ್ನು ಮುನ್ನಡೆಸುವುದು ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಎನ್‌ ಸಿ ಡಿ ಸಿ ಯ ನಿವ್ವಳ ಎನ್‌ ಪಿ ಎ ಸಹ ಅತ್ಯಲ್ಪವಾಗಿದೆ. ಇದು ದೇಶದ ಜನರಿಗೆ ಮತ್ತು ಸಹಕಾರವನ್ನು ಟೀಕಿಸುವವರಿಗೆ ಸ್ಪಷ್ಟ ಉತ್ತರವಾಗಿದೆ — ಅಂದರೆ ಜನರು ಒಟ್ಟಿಗೆ ಸೇರಿದಾಗ ಭಾರಿ ಲಾಭಗಳನ್ನು ಸಾಧಿಸಬಹುದು. ಆಗಸ್ಟ್ 15, 2047 ರಂದು ದೇಶವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ನಮ್ಮ ಸಹಕಾರ ಚಳವಳಿಯು ಸಮೃದ್ಧ ಭಾರತದ ಬಲವಾದ ಬುನಾದಿಯಾಗಿರುತ್ತದೆ ಎಂದು ಶ್ರೀ ಶಾ ಹೇಳಿದರು.

ನಾವು ಸಹಕಾರ ಕ್ಷೇತ್ರಕ್ಕೆ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸಿದ್ದೇವೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ರಫ್ತು ಮತ್ತು ಸಾವಯವ ಉತ್ಪಾದನೆಗಾಗಿ ಮೂರು ಹೊಸ ಸಹಕಾರ ಸಂಘಗಳನ್ನು ರಚಿಸಲಾಗಿದೆ. ಡೈರಿ ಕ್ಷೇತ್ರದಲ್ಲಿ, ಶೇಕಡಾ 100 ರಷ್ಟು ಮರುಬಳಕೆ ಆರ್ಥಿಕತೆಯನ್ನು ಜಾರಿಗೆ ತರಲು ಇನ್ನೂ ಮೂರು ಸಹಕಾರ ಸಂಘಗಳನ್ನು ರಚಿಸಲಾಗಿದೆ. ನಾವು ಉಪ್ಪಿನ ಕ್ಷೇತ್ರಕ್ಕೂ ಪ್ರವೇಶಿಸಿದ್ದೇವೆ. ಹಿಂದೆ ರೈತನ ಉತ್ಪನ್ನ ಹಳ್ಳಿಯಿಂದ ಮಂಡಿಗೆ ಪ್ರಯಾಣಿಸುತ್ತಿತ್ತು; ಈಗ ಸಹಕಾರದ ಮೂಲಕ ರೈತನ ಉತ್ಪನ್ನ ಇಡೀ ಜಗತ್ತನ್ನು ತಲುಪುತ್ತಿದೆ. ಬೀಜ ಉತ್ಪಾದನೆಗಾಗಿ ರಚಿಸಲಾದ ಸಹಕಾರ ಸಂಘವು ಮೂರು ವರ್ಷಗಳ ನಂತರ ಭಾರತದ ಅತಿ ದೊಡ್ಡ ಸರ್ಕಾರೇತರ ಬೀಜ ಉತ್ಪಾದನಾ ಕಂಪನಿಯಾಗಲಿದೆ ಎಂದು ಅವರು ಹೇಳಿದರು. ಇದರ ಮೂಲಕ ರೈತರಿಗೆ ಶುದ್ಧ ಮತ್ತು ಕಲಬೆರಕೆಯಿಲ್ಲದ ಬೀಜಗಳು ಸಿಗುತ್ತವೆ, ಇದು ಹೆಚ್ಚಿನ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ. ಈ ಚೌಕಟ್ಟಿನೊಳಗೆ ಭಾರತೀಯ ಬೀಜಗಳ ಸಂರಕ್ಷಣೆಗೂ ನಾವು ವ್ಯವಸ್ಥೆ ಮಾಡಿದ್ದೇವೆ. ಬಾಳೆಹಣ್ಣು ಮತ್ತು ಆಲೂಗಡ್ಡೆ ಬೆಳೆಗಾರರಿಗೆ ತಾಂತ್ರಿಕವಾಗಿ ಸುಧಾರಿತ ಬೀಜಗಳನ್ನು ಒದಗಿಸಲು, ನಮ್ಮ ಸಹಕಾರ ಸಂಘಗಳು ಪ್ರತಿ ರಾಜ್ಯದಲ್ಲಿ ಹೊಸ ಘಟಕಗಳನ್ನು ಪ್ರಾರಂಭಿಸಲಿವೆ. ಈ ಘಟಕಗಳ ಮೂಲಕ ಟಿಶ್ಯೂ ಕಲ್ಚರ್ ಸಸ್ಯಗಳು ಮತ್ತು ಹೆಚ್ಚಿನ ಇಳುವರಿ ನೀಡುವ, ಏಕರೂಪದ ಗಾತ್ರದ ಆಲೂಗಡ್ಡೆ ಬೀಜ ತಳಿಗಳು ರೈತರನ್ನು ತಲುಪುತ್ತವೆ. ಇದು ಜಾಗತಿಕ ಚಿಪ್ಸ್ ವ್ಯವಹಾರವನ್ನು ಭಾರತಕ್ಕೆ ತರಲು ಸಹಾಯ ಮಾಡುತ್ತದೆ. ಗುಜರಾತ್‌ ನ ಬನಾಸ್ ಡೈರಿ ಈ ನಿಟ್ಟಿನಲ್ಲಿ ಅತ್ಯಂತ ಒಳ್ಳೆಯ ಆರಂಭವನ್ನು ಮಾಡಿದೆ. ನಾವು ಅದೇ ಮಾದರಿಯನ್ನು ಪ್ರತಿ ರಾಜ್ಯಕ್ಕೂ ಕೊಂಡೊಯ್ದು ಟಿಶ್ಯೂ ಕಲ್ಚರ್ ಮತ್ತು ಹೊಸ ತಂತ್ರಜ್ಞಾನದ ಮೂಲಕ ಬಾಳೆಹಣ್ಣು, ಪಪ್ಪಾಯಿ ಮತ್ತು ಆಲೂಗಡ್ಡೆ ಬೀಜಗಳನ್ನು ರೈತರಿಗೆ ತಲುಪಿಸಲು ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಇಂದು ಸಾವಯವ ಉತ್ಪಾದನೆಯನ್ನು ಉತ್ತೇಜಿಸುವುದು ಬಹಳ ಮುಖ್ಯ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ನಮ್ಮ 140 ಕೋಟಿ ನಾಗರಿಕರ ಮತ್ತು ಪ್ರಪಂಚದಾದ್ಯಂತದ ಜನರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಆದ್ದರಿಂದ, ಭಾರತದ ರೈತರು ಸಾವಯವ ಉತ್ಪಾದನೆಯನ್ನು ಹೆಚ್ಚಿಸಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲಿಸುವುದರಿಂದ ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಒಂದು ತಪ್ಪು ಕಲ್ಪನೆಯಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಉತ್ಪಾದನೆ ಕಡಿಮೆಯಾಗುವುದಿಲ್ಲ; ಬದಲಿಗೆ ಉತ್ಪಾದನೆ ಹೆಚ್ಚುತ್ತದೆ ಮತ್ತು ಮಣ್ಣು ಸಹ ರಕ್ಷಿಸಲ್ಪಡುತ್ತದೆ ಎಂಬುದನ್ನು ಕಳೆದ ಐದು ವರ್ಷಗಳು ಸಾಬೀತುಪಡಿಸಿವೆ. ನಾವು ಸಕ್ಕರೆ ಮತ್ತು ಡೈರಿ ಕ್ಷೇತ್ರಗಳಲ್ಲಿ ಶೇಕಡಾ 100 ರಷ್ಟು ಮರುಬಳಕೆ ಆರ್ಥಿಕತೆಯನ್ನು ತರುತ್ತಿದ್ದೇವೆ. ಇದರ ಮೂಲಕ ಡಿಎಪಿಗೆ ಪರ್ಯಾಯವಾಗಿ ಬಳಸಬಹುದಾದ ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ಈ ದೇಶಿ ಗೊಬ್ಬರವು ಡಿಎಪಿಗಿಂತ ಅಗ್ಗವಾಗಿರುತ್ತದೆ ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿರುತ್ತದೆ ಹಾಗೂ ಜಮೀನುಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇಂತಹ ಸಹಕಾರ ಸಂಘಗಳನ್ನು ದೇಶಾದ್ಯಂತ ಹಲವು ಕಡೆ ಸ್ಥಾಪಿಸಲಾಗುತ್ತಿದೆ. ಬರುವ ದಿನಗಳಲ್ಲಿ ದೇಶದ ರೈತರು ಡಿಎಪಿಯನ್ನು ಕೈಬಿಟ್ಟು ಈ ಹೊಸ ಗೊಬ್ಬರವನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳಬೇಕೆಂದು ಶ್ರೀ ಅಮಿತ್ ಶಾ ಮನವಿ ಮಾಡಿದರು. ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಅನ್ವೇಷಿಸಲು ನಾವು ರಾಷ್ಟ್ರ ಮಟ್ಟದ ಸಹಕಾರ ಸಂಘವನ್ನು ರಚಿಸಿದ್ದೇವೆ. ಸಹಕಾರಿ ಮಾರುಕಟ್ಟೆ ಸಂಪರ್ಕವನ್ನು ಪ್ರತಿ ಹಳ್ಳಿಗೆ ಕೊಂಡೊಯ್ಯಲು, ನಾವು ಎಲ್ಲಾ ರಾಜ್ಯಗಳಲ್ಲಿ ಮಾರುಕಟ್ಟೆ ಒಕ್ಕೂಟಗಳನ್ನು ಬಲಪಡಿಸಲು ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಐದನೇ ಉಪಕ್ರಮವು ಸುಸ್ಥಿರ, ಸಂಪನ್ಮೂಲ-ದಕ್ಷ ಮತ್ತು ಮರುಬಳಕೆ ಹೊಸ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದೆ. ನಾವು ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ಮರುಬಳಕೆ ಆರ್ಥಿಕತೆಯನ್ನು ಜಾರಿಗೆ ತರಲು ಬಯಸುತ್ತೇವೆ. ನಾವು ಡೈರಿಯಿಂದ ಇದನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು

'ಅನ್ನದಾತ'ನನ್ನು 'ಊರ್ಜಾದಾತ'ನನ್ನಾಗಿ ಪರಿವರ್ತಿಸುವ ಮೋದಿ ಅವರ ಮಿಷನ್ ಅನ್ನು ನಾವು ಮುನ್ನಡೆಸಲು ಬಯಸುತ್ತೇವೆ ಎಂದು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಇಂದು ಬಿಡುಗಡೆಯಾದ ಗೋಮಯ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಜಾನುವಾರು ಆಹಾರ, ಪ್ರಾಣಿ ಆರೋಗ್ಯ, ಕೃತಕ ಗರ್ಭಧಾರಣೆ, ಸಗಣಿ ನಿರ್ವಹಣೆ, ಸಾವಯವ ಗೊಬ್ಬರಗಳು ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮೂಲಕ ಡೈರಿ ಕ್ಷೇತ್ರದಲ್ಲಿ ಸಂಪೂರ್ಣ ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲಿದೆ. ಶ್ವೇತಕ್ರಾಂತಿ 2.0 ಮೂಲಕ ನಾವು ಸಹಕಾರಿ ಡೈರಿಗಳ ಬಲವಾದ ಜಾಲವನ್ನು ರಚಿಸಲು ಬಯಸುತ್ತೇವೆ. ಮುಂದಿನ ಎರಡು ವರ್ಷಗಳಲ್ಲಿ ಹಾಲು ಉತ್ಪಾದಿಸುವ ರೈತರ ಸಂಖ್ಯೆಯನ್ನು ಕನಿಷ್ಠ ಶೇಕಡಾ 35 ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದುವಂತೆ ನಾನು ಎಲ್ಲಾ ರಾಜ್ಯಗಳ ಡೈರಿ ಒಕ್ಕೂಟಗಳನ್ನು ಒತ್ತಾಯಿಸುತ್ತೇನೆ. ಇದರರ್ಥ ಶೇಕಡಾ 35 ರಷ್ಟು ಹೆಚ್ಚು ಹಳ್ಳಿಗಳಲ್ಲಿ ಹೊಸ ಪಿಎಸಿಎಸ್ ರಚಿಸಬೇಕಾಗುತ್ತದೆ, ಪ್ರಾಥಮಿಕ ಡೈರಿ ಸಂಘಗಳನ್ನು ಸ್ಥಾಪಿಸಬೇಕಾಗುತ್ತದೆ ಮತ್ತು ಹಳ್ಳಿಯಲ್ಲಿ ಯಾವುದೇ ರೈತರು ಹಾಲು ಪೂರೈಕೆಗಾಗಿ ಡೈರಿ ಜಾಲದಿಂದ ಹೊರಗೆ ಉಳಿಯಬಾರದು. ಸಹಕಾರಿ ಸಕ್ಕರೆ ಕ್ಷೇತ್ರದಲ್ಲಿ, ನಾವು ಸಕ್ಕರೆ ಮತ್ತು ಕಾಕಂಬಿಯಿಂದ ಎಥನಾಲ್‌ ನಿಂದ ಹಿಡಿದು ಬಗಾಸ್, ಇಂಧನ, ಪ್ರೆಸ್‌ಮಡ್, ಸಾವಯವ ಗೊಬ್ಬರ ಮತ್ತು ಸಲ್ಫರ್ ಉತ್ಪಾದನೆಯವರೆಗೆ ಇಡೀ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಈ ಪ್ರಯೋಗ ಯಶಸ್ವಿಯಾಗಿದೆ. ಇದಕ್ಕಾಗಿ ಸಹಕಾರ ಸಂಘಗಳನ್ನೂ ರಚಿಸಲಾಗಿದೆ. ಕ್ಲಸ್ಟರ್ ಆಧಾರಿತ ಸಹಕಾರ ಸಂಘಗಳ ಮೂಲಕ, ಪ್ರತಿ ಡೈರಿಯು ತನ್ನದೇ ಆದ ಹೂಡಿಕೆಯನ್ನು ಮಾಡಬೇಕಾಗಿಲ್ಲ, ಆದರೆ ಈ ವ್ಯವಸ್ಥೆಯು ಕಬ್ಬಿನ ಅಂತಿಮ ಬಳಕೆಯವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಲಾಭವನ್ನು ಮರಳಿ ನೀಡುತ್ತದೆ ಎಂದು ಸಚಿವರು ಹೇಳಿದರು.

ಹೆಚ್ಚಿನ ಕಬ್ಬಿನ ಬೆಲೆ ಪಾವತಿಗಳ ಮೇಲೆ ನಾವು ತೆರಿಗೆ ವಿನಾಯಿತಿಯನ್ನು ಖಚಿತಪಡಿಸಿದ್ದೇವೆ ಮತ್ತು ಹಳೆಯ ತೆರಿಗೆ ವಿವಾದಗಳನ್ನು ಬಗೆಹರಿಸಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಕ್ಕರೆ ಕ್ಷೇತ್ರವೊಂದರಲ್ಲೇ ರೈತರ 46,000 ಕೋಟಿ ರೂ.ಗಳ ಆದಾಯ ತೆರಿಗೆಯನ್ನು ಮನ್ನಾ ಮಾಡಿದ್ದಾರೆ. ಯಂತ್ರೋಪಕರಣಗಳ ಉತ್ಪಾದನೆಗಾಗಿ, ನಾವು ನ್ಯಾಷನಲ್ ಹೆವಿ ಇಂಜಿನಿಯರಿಂಗ್ ಕೋಆಪರೇಟಿವ್‌ ನ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ಶ್ರೀ ಶಾ ಹೇಳಿದರು. ಈ ಸಹಕಾರ ಸಂಘವು ಡೈರಿ ಯಂತ್ರೋಪಕರಣಗಳು, ಪ್ರಾಥಮಿಕ ಡೈರಿಗಳ ಯಂತ್ರೋಪಕರಣಗಳು, ಅನಿಲ ಉತ್ಪಾದನಾ ಯಂತ್ರೋಪಕರಣಗಳು ಮತ್ತು ಗೊಬ್ಬರ ಉತ್ಪಾದನಾ ಯಂತ್ರೋಪಕರಣಗಳನ್ನು ತಯಾರಿಸುತ್ತದೆ ಮತ್ತು ಮುಂದೆ ಸಾಗುತ್ತಿರುತ್ತದೆ. ಭಾರತ್ ಟ್ಯಾಕ್ಸಿ ಸಹ ಅತ್ಯಂತ ಬಲವಾಗಿ ಮುನ್ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ಭಾರತದ 500 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ರಾಜ್ಯದಲ್ಲಿ ಲಭ್ಯವಿರಲಿದ್ದು, ನಮ್ಮ ಸಹೋದ್ಯೋಗಿಗಳನ್ನು ಶೋಷಣೆಯಿಂದ ಮುಕ್ತಗೊಳಿಸಲಿದೆ ಎಂದು ಅವರು ಹೇಳಿದರು.

ಇಂದು ಸುಮಾರು ಶೇಕಡಾ 20 ರಷ್ಟು ಕೃಷಿ ಸಾಲ, ಶೇಕಡಾ 35 ರಷ್ಟು ರಸಗೊಬ್ಬರ ವಿತರಣೆ, ಶೇಕಡಾ 31 ರಷ್ಟು ಸಕ್ಕರೆ ಉತ್ಪಾದನೆಯನ್ನು ಸಹಕಾರ ಸಂಘಗಳ ಮೂಲಕ ಮಾಡಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಬರುವ ದಿನಗಳಲ್ಲಿ ಯುಟಿಲಿಟಿ ಅಗ್ರಿಗೇಟರ್ ಕೋಆಪರೇಟಿವ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲಿದ್ದೇವೆ. ಇದರೊಂದಿಗೆ ಇಫ್ಕೋ-ಟೋಕಿಯೋ ಜೊತೆ ಎರಡೂ ರೀತಿಯ ವಿಮಾ ಉಪಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ, ನಾವು ಸಹಕಾರಿ ಜೀವ ವಿಮಾ ಕಂಪನಿಯನ್ನು ರಚಿಸಲಿದ್ದೇವೆ, ಇದು ವಿಮಾ ಕ್ಷೇತ್ರದಲ್ಲೂ ಸಹಕಾರವನ್ನು ಬಲವಾಗಿ ಮುನ್ನಡೆಸಲಿದೆ. ಈ ಐದು ವರ್ಷಗಳು ಪ್ರತಿ ಕ್ಷಣ, ಪ್ರತಿ ದಿನ, ಪ್ರತಿ ತಿಂಗಳು ಮತ್ತು ಪ್ರತಿ ವರ್ಷ ಸಹಕಾರದ ಮೂಲಸೌಕರ್ಯವನ್ನು ಬಲಪಡಿಸುವ ಬಗ್ಗೆ ಆಗಿದ್ದವು. ನಮ್ಮ ಸಚಿವಾಲಯವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಮೂಲಕ ಈ ನಿಟ್ಟಿನಲ್ಲಿ ನಿರಂತರವಾಗಿ ಮತ್ತು ದಣಿವಿಲ್ಲದೆ ಕೆಲಸ ಮಾಡಿದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ಕ್ಷೇತ್ರದ ಬಗೆಗಿನ ದ್ವಿತೀಯ ದರ್ಜೆಯ ವರ್ತನೆ ಇನ್ನು ಮುಂದೆ ಸ್ವೀಕಾರಾರ್ಹಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು ಸಮಾನ ಹೆಜ್ಜೆಯಲ್ಲಿ ಎಲ್ಲರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಮತ್ತು ಭಾರತವನ್ನು ಸಮೃದ್ಧಗೊಳಿಸುವ ಈ ಮಹಾನ್ ಯೋಜನೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುತ್ತೇವೆ. ಈ ಕ್ಷೇತ್ರದ ಸಂಪೂರ್ಣ ಲಾಭವು ಅದರ ಮೇಲೆ ಹಕ್ಕನ್ನು ಹೊಂದಿರುವ ವ್ಯಕ್ತಿಗೆ — ರೈತ ಮತ್ತು ಪಶುಸಂಗೋಪನಾ ಕಾರ್ಮಿಕರಿಗೆ ಘನತೆಯಿಂದ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿರುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ, ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಭಾರತೀಯ ಜನಸಂಘದ ಸಂಸ್ಥಾಪಕರು ಮತ್ತು ಮಾಜಿ ಕೇಂದ್ರ ಸಚಿವರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು. ಡಾ. ಮುಖರ್ಜಿ ಅವರು ಭಾರತೀಯತೆಯ ಮೌಲ್ಯಗಳನ್ನು, ಭಾರತ ಮಾತೆಯ ಮೇಲಿನ ಗೌರವವನ್ನು ಮತ್ತು ಭಾರತೀಯ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ತಮ್ಮಂತಹ ಕೋಟ್ಯಂತರ ಕಾರ್ಯಕರ್ತರ ಜೀವನದಲ್ಲಿ ಸ್ಥಾಪಿಸಿದರು ಎಂದು ಅವರು ಹೇಳಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇಲ್ಲದಿದ್ದರೆ ಇಂದು ಕಾಶ್ಮೀರ ಭಾರತದ ಭಾಗವಾಗಿರುತ್ತಿರಲಿಲ್ಲ. ಒಂದು ದೇಶದಲ್ಲಿ ಎರಡು ಸಂವಿಧಾನಗಳು, ಇಬ್ಬರು ಮುಖ್ಯಸ್ಥರು ಮತ್ತು ಎರಡು ಧ್ವಜಗಳು ಇರಲು ಸಾಧ್ಯವಿಲ್ಲ ಎಂದು ಹೇಳಿದವರು ಡಾ. ಮುಖರ್ಜಿ. ಅವರು ಈ ಉದ್ದೇಶಕ್ಕಾಗಿ ಚಳವಳಿಯನ್ನು ಪ್ರಾರಂಭಿಸಿದ್ದು ಮಾತ್ರವಲ್ಲದೆ, ಅದಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ. ಮುಖರ್ಜಿ ಅವರ ಕನಸನ್ನು ನನಸು ಮಾಡಿದರು ಎಂದು ಶ್ರೀ ಶಾ ಹೇಳಿದರು. ಶ್ಯಾಮ ಪ್ರಸಾದ್ ಮುಖರ್ಜಿ ಜಿ ಇಲ್ಲದಿದ್ದರೆ ಅಸ್ಸಾಂ ಪಾಕಿಸ್ತಾನದ ಭಾಗವಾಗುತ್ತಿತ್ತು ಮತ್ತು ಪಶ್ಚಿಮ ಬಂಗಾಳದ ಉಳಿದ ಭಾಗವೂ ಪಾಕಿಸ್ತಾನಕ್ಕೆ ಹೋಗುತ್ತಿತ್ತು ಎಂದು ಅವರು ಹೇಳಿದರು. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಚಳವಳಿಯ ಕಾರಣದಿಂದಾಗಿ ಅಸ್ಸಾಂ ಮತ್ತು ಬಂಗಾಳ ಇಂದು ಭಾರತದ ಹೆಮ್ಮೆಯ ಭಾಗಗಳಾಗಿವೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜಯಂತಿಯ ವರ್ಷವನ್ನು ಹಳ್ಳಿಗಳಿಂದ ಹಿಡಿದು ಪ್ರತಿ ಪಟ್ಟಣ ಮತ್ತು ನಗರಗಳವರೆಗೆ ಅತ್ಯಂತ ಉತ್ಸಾಹದಿಂದ ಆಚರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಹಲವಾರು ಉಪಕ್ರಮಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ 135 ಆಹಾರ ಧಾನ್ಯ ದಾಸ್ತಾನು ಗೋದಾಮುಗಳ ಹಸ್ತಾಂತರ, 85 ಗೋದಾಮುಗಳ ಸಮರ್ಪಣೆ ಮತ್ತು 47 ಗೋದಾಮುಗಳ ಶಂಕುಸ್ಥಾಪನೆ, ಅಮುಲ್ ಮತ್ತು ಎನ್‌ ಸಿ ಸಿ ಎಫ್ ನಿಂದ ಸಹಕಾರ್ ವನ್ ಭೂಮಿ ಪೂಜೆ; ಉತ್ತರ ಪ್ರದೇಶದ ಬಾರಾಬಂಕಿ ಮತ್ತು ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ ಬಿ ಬಿ ಎಸ್‌ ಎಸ್ ಎಲ್ ಟಿಶ್ಯೂ ಕಲ್ಚರ್ ಸೌಲಭ್ಯಗಳಿಗೆ ಭೂಮಿ ಪೂಜೆ, ಎನ್‌ ಸಿ ಡಿ 3.0 ಮತ್ತು ಜಿಯೋ-ಟ್ಯಾಗ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ; ಎನ್‌ ಡಿ ಡಿ ಬಿ ಯ ಹಾಲು ಸರಬರಾಜು ಪರಿಶೀಲನಾ ಡ್ಯಾಶ್‌ಬೋರ್ಡ್ ಪೋರ್ಟಲ್ ಬಿಡುಗಡೆ, ಕೋಆಪರೇಟಿವ್ ಇನ್‌ಪುಟ್ಸ್ ಅಂಡ್ ಸರ್ವಿಸಸ್ ಡೆಲಿವರಿ ಮಲ್ಟಿ-ಸ್ಟೇಟ್ ಲಿಮಿಟೆಡ್ ಅಡಿಯಲ್ಲಿ ಹೈನುಗಾರಿಕೆ ಪ್ರಾಣಿಗಳ ಉತ್ಪಾದಕತೆಗೆ ಸಂಬಂಧಿಸಿದ ಉಪಕ್ರಮಗಳ ಪ್ರಾರಂಭ; ಕೋಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಆರ್ಗನೈಸೇಶನ್ ಮಲ್ಟಿ-ಸ್ಟೇಟ್ ಲಿಮಿಟೆಡ್‌ ನ ಉದ್ಘಾಟನೆ, ಗೋಮಯ್ ಕೋಆಪರೇಟಿವ್ ಸೊಸೈಟಿ ಮಲ್ಟಿ-ಸ್ಟೇಟ್ ಲಿಮಿಟೆಡ್‌ ನ ಉದ್ಘಾಟನೆ ಮತ್ತು ಎನ್‌ ಯು ಸಿ ಎಫ್‌ ಡಿ ಸಿ ಯ ಎರಡು ಪ್ರಮುಖ ಉಪಕ್ರಮಗಳಾದ — ಸಹಕಾರ್ ಸಿಬಿಎಸ್ (ಕೇಂದ್ರೀಕೃತ ಕೋರ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್) ಮತ್ತು ನಗರ ಸಹಕಾರ ಬ್ಯಾಂಕುಗಳಿಗಾಗಿ ಸಂವಾದಾತ್ಮಕ ಎಐ ಚಾಲಿತ ಪ್ಲಾಟ್‌ಫಾರ್ಮ್ ಆದ ʼಸಹಕಾರ್ ಸಹಯೋಗಿʼಯ ಅನಾವರಣ ಸೇರಿವೆ. ಈ ಕಾರ್ಯಕ್ರಮವು ತಳಮಟ್ಟದ ಸಹಕಾರ ಸಂಸ್ಥೆಗಳ ಡಿಜಿಟಲ್ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾದ 50,000 ಪಿಎಸಿಎಸ್‌ ಗಳನ್ನು ಇ-ಪಿಎಸಿಎಸ್ ಗಳಾಗಿ ಪರಿವರ್ತಿಸುವ ಮೈಲಿಗಲ್ಲನ್ನು ಸಹ ಗುರುತಿಸಿತು. ಬೀಜ ವ್ಯವಸ್ಥೆಯನ್ನು ಬಲಪಡಿಸಲು ಬಿ ಬಿ ಎಸ್‌ ಎಸ್ ಎಲ್ ಮತ್ತು ಐಸಿಎಆರ್ ನಡುವೆ ತಿಳುವಳಿಕಾ ಒಪ್ಪಂಕ್ಕೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಅವರು ಡೈರಿ ಸಹಕಾರ ಸಂಘಗಳ ಮಾದರಿ ಉಪ-ನಿಯಮಗಳನ್ನು ಮತ್ತು ಕಳೆದ ಐದು ವರ್ಷಗಳಲ್ಲಿ ಸಹಕಾರ ಸಚಿವಾಲಯದ ಸಾಧನೆಗಳ ಆಧಾರಿತ ಪುಸ್ತಕವನ್ನು ಬಿಡುಗಡೆ ಮಾಡಿದರು.

 

*****


(रिलीज़ आईडी: 2281863) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil , Telugu