ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಉತ್ತರ ಪ್ರದೇಶದಲ್ಲಿ ಒಟ್ಟು ₹7,145.14 ಕೋಟಿ ಬಂಡವಾಳ ವೆಚ್ಚದಲ್ಲಿ, ಬಿಒಟಿ (ಟೋಲ್) ಮಾದರಿಯಲ್ಲಿ ಎನ್ ಎಚ್ -34 ರ 4 / 6 ಪಥಗಳ ನಿಯಂತ್ರಿತ ಪ್ರವೇಶದ ಕಾನ್ಪುರ-ಕಬ್ರಾಯ್ ವಿಭಾಗದ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
01 JUL 2026 3:09PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಾಷ್ಟ್ರೀಯ ಹೆದ್ದಾರಿಗಳ (ಒ) ಕಾರ್ಯಕ್ರಮದ ಅಡಿಯಲ್ಲಿ ಭೂಪಾಲ್-ಕಾನ್ಪುರ ಆರ್ಥಿಕ ಕಾರಿಡಾರ್ನ ಪ್ರಮುಖ ಭಾಗವಾಗಿರುವ, 117.7 ಕಿ.ಮೀ ಉದ್ದದ ಕಾನ್ಪುರ-ಕಬ್ರಾಯ್ ನಿಯಂತ್ರಿತ ಪ್ರವೇಶದ ಗ್ರೀನ್ ಫೀಲ್ಡ್ ಹೆದ್ದಾರಿಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು ನಾಲ್ಕು ಪಥಗಳ ನಿಯಂತ್ರಿತ ಪ್ರವೇಶದ ಕಾರಿಡಾರ್ ಆಗಿದ್ದು, ಭವಿಷ್ಯದಲ್ಲಿ ಆರು ಪಥಗಳಾಗಿ ವಿಸ್ತರಿಸಲು ಪೂರಕವಾದ ರಚನೆಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟು ಬಂಡವಾಳ ಅಂದಾಜು ₹7,145.14 ಕೋಟಿ ವೆಚ್ಚದ ಈ ಯೋಜನೆಯನ್ನು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ ಎಚ್ ಎ ಐ) ಬಿಒಟಿ (ಟೋಲ್) ಮಾದರಿಯಲ್ಲಿ ಅನುಷ್ಠಾನಗೊಳಿಸಲಿದೆ. ಜೊತೆಗೆ ಎನ್ ಎಚ್-34 ರ ಅಸ್ತಿತ್ವದಲ್ಲಿರುವ ಕಾನ್ಪುರ-ಕಬ್ರಾಯ್ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನೂ ಸಹ ಇದು ಒಳಗೊಂಡಿರುತ್ತದೆ.
ಈ ಯೋಜನೆಯು ಕಾನ್ಪುರ ಮತ್ತು ಕಬ್ರಾಯ್ ನಡುವೆ ತಡೆರಹಿತ, ಅತಿ ವೇಗದ ಸಂಪರ್ಕವನ್ನು ಕಲ್ಪಿಸಲಿದೆ. ಅಲ್ಲದೆ ಸಾಗರ್, ಭೂಪಾಲ್ ಮತ್ತು ಮಧ್ಯಪ್ರದೇಶದ ಇತರ ಭಾಗಗಳಿಗೆ ಮುಂದಿನ ಸಂಪರ್ಕವನ್ನು ಬಲಪಡಿಸುತ್ತದೆ. ಇದರಿಂದಾಗಿ ಉತ್ತರ ಪ್ರದೇಶದ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರಗಳನ್ನು ಮಧ್ಯಪ್ರದೇಶದ ಖನಿಜ ಭರಿತ, ಉತ್ಪಾದನೆ ಮತ್ತು ಕೃಷಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ಅತ್ಯಾಧುನಿಕ, ನಿಯಂತ್ರಿತ ಪ್ರವೇಶದ ಆರ್ಥಿಕ ಕಾರಿಡಾರ್ ಅನ್ನು ಸೃಷ್ಟಿಸಿ, ಸುಧಾರಣೆಯನ್ನು ತರಲಿದೆ.
ಗಂಟೆಗೆ 80ರಿಂದ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಲು ವಿನ್ಯಾಸಗೊಳಿಸಲಾದ ಈ ಕಾರಿಡಾರ್, ಕಾನ್ಪುರ ಮತ್ತು ಕಬ್ರಾಯ್ ನಡುವಿನ ಪ್ರಯಾಣದ ಸಮಯವನ್ನು 3.5 ಗಂಟೆಗಳಿಂದ 1.5 ಗಂಟೆಗಳಿಗೆ (58% ರಷ್ಟು) ಕಡಿಮೆ ಮಾಡುತ್ತದೆ. ಜೊತೆಗೆ ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ, ವಾಹನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರ ಹಾಗೂ ಸರಕು ಸಾಗಣೆಯ ದಕ್ಷ ಚಲನೆಗೆ ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಎನ್ ಎಚ್-34, ಎನ್ ಎಚ್ -35, ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ, ಕಾನ್ಪುರ ರಿಂಗ್ ರೋಡ್ ಮತ್ತು ರಾಜ್ಯ ಹೆದ್ದಾರಿಗಳಾದ ಎಸ್ ಎಚ್-46, ಎಸ್ ಎಚ್ -91, ಎಸ್ ಎಚ್ -10ಬಿ ಮತ್ತು ಎಸ್ ಎಚ್ -42 ಗಳೊಂದಿಗೆ ಆಯಕಟ್ಟಿನ ಸಂಪರ್ಕವನ್ನು ಒದಗಿಸುತ್ತದೆ, ಆ ಮೂಲಕ ಪ್ರಾದೇಶಿಕ ಹೆದ್ದಾರಿ ಜಾಲದೊಂದಿಗಿನ ಜೋಡಣೆಯನ್ನು ಬಲಪಡಿಸುತ್ತದೆ. ಈ ಕಾರಿಡಾರ್ ಕಬ್ರಾಯ್ ಗಣಿಗಾರಿಕೆ ವಲಯಕ್ಕೆ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ, ಖನಿಜಗಳು, ಕೈಗಾರಿಕಾ ಸರಕುಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಕೃಷಿ ಉತ್ಪನ್ನಗಳ ಸಾಗಣೆಯನ್ನು ಸುಧಾರಿಸುತ್ತದೆ. ತನ್ಮೂಲಕ ಸಾಗಾಣಿಕೆಯ ದಕ್ಷತೆ, ಪೂರೈಕೆ ಸರಪಳಿಯ ಚೇತರಿಸಿಕೊಳ್ಳುವಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನಿಗೆ ಅನುಗುಣವಾಗಿ, ಈ ಯೋಜನೆಯು ಉನ್ನಾವೋ, ಬಂಥರ್, ಪಂಖಿ, ರಾನಿಯಾ, ಜೈನ್ಪುರ, ರೂಮಾ, ಚಕೇರಿ, ಸುಮೇರ್ ಪುರ ಮತ್ತು ಭೂರಗಢ ಕೈಗಾರಿಕಾ ಪ್ರದೇಶಗಳು, ಟ್ರಾನ್ಸ್ ಗಂಗಾ ಇಂಟಿಗ್ರೇಟೆಡ್ ಟೌನ್ ಶಿಪ್, ಗ್ರೋತ್ ಸೆಂಟರ್ ಜೈಪುರ, ಕಾನ್ಪುರ ನಗರ ನೋಡ್ ಮತ್ತು ಬೆಂಗಾಲ್ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ 16 ಆರ್ಥಿಕ ಪ್ರದೇಶ ಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಇದು ಫತೇಪುರ, ಮಹೋಬಾ, ಕಾನ್ಪುರ ಝೂಲಾಜಿಕಲ್ ಪಾರ್ಕ್, ಬುದ್ಧ ಪಾರ್ಕ್, ಜೆ.ಕೆ. ಟೆಂಪಲ್ ಅಂಡ್ ಗಾರ್ಡನ್, ರಾಧಾ ಕೃಷ್ಣ ದೇವಸ್ಥಾನ, ಸಿದ್ದೇಶ್ವರ ಮಹಾದೇವ ದೇವಸ್ಥಾನ, ಗೋಪೇಶ್ವರ ಮಂದಿರ ಮತ್ತು ಮಹೋಬಾ ಪ್ರವಾಸಿ ತಾಣ ಎಂಬ 9 ಸಾಮಾಜಿಕ ಪ್ರದೇಶಗಳಿಗೆ ಹಾಗೂ ಕಾನ್ಪುರ, ಘಟಂಪುರ, ಹಮೀರ್ಪುರ, ಮಹೋಬಾ, ಕಬ್ರಾಯ್, ಭರ್ವಾ ಸುಮೇರ್ಪುರ ಮತ್ತು ಬಂದಾ ರೈಲ್ವೆ ನಿಲ್ದಾಣಗಳು ಸೇರಿದಂತೆ ಕಾನ್ಪುರ, ಚಕೇರಿ ಮತ್ತು ಖಜುರಾಹೊ ವಿಮಾನ ನಿಲ್ದಾಣಗಳ ಒಟ್ಟು 10 ಸಾಗಾಣಿಕೆ ಪ್ರದೇಶ (ಲಾಜಿಸ್ಟಿಕ್ಸ್ ನೋಡ್)ಗಳಿಗೆ ಸಂಪರ್ಕವನ್ನು ಬಲಪಡಿಸುತ್ತದೆ.
ಒಟ್ಟಾರೆಯಾಗಿ, ಇದು ಬುಂದೇಲ್ಖಂಡ್ ಮತ್ತು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಸಾಗಾಣಿಕೆಯಲ್ಲಿ ಸ್ಪರ್ಧಾತ್ಮಕತೆ, ಕೈಗಾರಿಕಾ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಪಿಎಂ ಗತಿಶಕ್ತಿಯ ಉದ್ದೇಶಗಳನ್ನು ಮುನ್ನಡೆಸುತ್ತದೆ.
ಈ ಯೋಜನೆಯು ನಿರ್ಮಾಣದ ಸಮಯದಲ್ಲಿ ಪ್ರತಿ ಕಿ.ಮೀ ನ ಪ್ರತಿ ಲೇನ್ ಗೆ ಅಂದಾಜು 11,188 ನೇರ ಮತ್ತು 13,985 ಪರೋಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಮತ್ತು ಹಣಕಾಸು ವರ್ಷ 2028 ರ ವೇಳೆಗೆ ಸುಮಾರು 18,069 ಪ್ಯಾಸೆಂಜರ್ ಕಾರ್ ಯೂನಿಟ್ ಗಳ ವಾರ್ಷಿಕ ಸರಾಸರಿ ದೈನಂದಿನ ಸಂಚಾರವನ್ನು (ಎಎಡಿಟಿ) ಹೊಂದುವ ನಿರೀಕ್ಷೆ ಇದೆ, ಇದು ಇದರ ದೀರ್ಘಕಾಲೀನ ಆರ್ಥಿಕ, ಸಾಗಾಣಿಕೆ ಮತ್ತು ಸಾರಿಗೆ ಮಹತ್ವವನ್ನು ಉಲ್ಲೇಖಿಸುತ್ತದೆ. ಹೀಗಾಗಿ, ಪ್ರಸ್ತಾವಿತ ಯೋಜನೆಯು ಒಟ್ಟಾರೆಯಾಗಿ ಸುಮಾರು 1.2 ಕೋಟಿ ಮಾನವ ದಿನಗಳ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ.
ಕಾರಿಡಾರ್ ನ ನಕ್ಷೆ:

*****
(रिलीज़ आईडी: 2279888)
आगंतुक पटल : 12
इस विज्ञप्ति को इन भाषाओं में पढ़ें:
Urdu
,
Odia
,
English
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam