ಪ್ರಧಾನ ಮಂತ್ರಿಯವರ ಕಛೇರಿ
ಜಿ 7 ಶೃಂಗಸಭೆ-ಅಧಿವೇಶನದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ: ಎ.ಐ.ಯ (ಕೃತಕ ಬುದ್ಧಿಮತ್ತೆಯ) ಸುರಕ್ಷಿತ, ತ್ವರಿತ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸುವಿಕೆ
प्रविष्टि तिथि:
17 JUN 2026 9:20PM by PIB Bengaluru
ಘನತೆವೆತ್ತರೇ,
ನಮ್ಮ ಚರ್ಚೆಗಳಲ್ಲಿ ಈ ಪ್ರಮುಖ ವಿಷಯವನ್ನು ಸೇರಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ನಾನು ಅಭಿನಂದಿಸುತ್ತೇನೆ. ಕೃತಕ ಬುದ್ಧಿಮತ್ತೆಯು ಮಾನವಕುಲವು ಇದುವರೆಗೆ ಸೃಷ್ಟಿಸಿದ ಅತ್ಯಂತ ಪರಿವರ್ತಕ ತಂತ್ರಜ್ಞಾನಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಇಂದು, ಮಾನವ ಜೀವನದ ಯಾವುದೇ ಅಂಶವು ಕೃತಕ ಬುದ್ಧಿಮತ್ತೆಯಿಂದ ಸ್ಪರ್ಶಿಸಲ್ಪಡದೆ ಉಳಿದಿಲ್ಲ. ಎ.ಐ. ಅಭೂತಪೂರ್ವ ವೇಗದಲ್ಲಿ ವೈಜ್ಞಾನಿಕ ಸಂಶೋಧನೆಗೆ ತ್ವರಿತಗತಿಯನ್ನು ನೀಡಿದೆ. ಇದು ಆಡಳಿತವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸ್ಪಂದಿಸುವಂತೆ ಮಾಡುತ್ತಿದೆ, ಜೊತೆಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳನ್ನು ಸಬಲೀಕರಣಗೊಳಿಸುತ್ತಿದೆ.
ಆದಾಗ್ಯೂ, ಎ.ಐ. ಯ ನಿಜವಾದ ಅಳತೆಗೋಲು ನಮ್ಮ ಯಂತ್ರಗಳು ಎಷ್ಟು ಶಕ್ತಿಶಾಲಿಯಾಗುತ್ತವೆ ಎಂಬುದರಲ್ಲಿಲ್ಲ. ನಿಜವಾದ ಅಳತೆ ಎಂದರೆ ಅದು ಸಾಮಾನ್ಯ ಜನರನ್ನು ಎಷ್ಟು ಸಬಲಗೊಳಿಸುತ್ತದೆ ಎಂಬುದು. ಈ ನಂಬಿಕೆಯೊಂದಿಗೆ, ಈ ವರ್ಷ ನಡೆದ ಎ.ಐ. ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತವು ಮಾನವ ಕೇಂದ್ರಿತ ಎ.ಐ. ಅಭಿವೃದ್ಧಿಗೆ ಒತ್ತು ನೀಡಿದೆ. ಶೃಂಗಸಭೆಯಲ್ಲಿ, ಭಾರತವು ತನ್ನ ಮಾನವ್ (MANAV) ದೃಷ್ಟಿಕೋನವನ್ನು ಪ್ರಸ್ತುತಪಡಿಸಿತು, ಇದು ಎ.ಐ. ಕ್ಷೇತ್ರದಲ್ಲಿ ಭಾರತದ ಎಲ್ಲಾ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡುತ್ತದೆ.
ಇತ್ತೀಚೆಗೆ, ಪರಮ ಪೂಜ್ಯ ಪೋಪ್ ಅವರು ಎ.ಐ. ಕುರಿತು ತಮ್ಮ ಸಂದೇಶದಲ್ಲಿ, ಮಾನವ ಮೌಲ್ಯಗಳು, ಒಳಗೊಳ್ಳುವಿಕೆ ಮತ್ತು ಅರ್ಥಪೂರ್ಣ ಮಾನವ ನಿಯಂತ್ರಣವು ಎ.ಐ. ಅಭಿವೃದ್ಧಿಯ ಅಡಿಪಾಯವನ್ನು ರೂಪಿಸಬೇಕು ಎಂದು ಒತ್ತಿ ಹೇಳಿದರು. ಭಾರತದ ಮಾನವ್ (MANAV) ದೃಷ್ಟಿಕೋನ ಮತ್ತು ಪೂಜ್ಯರ ಸಂದೇಶ ಎರಡೂ ಒಂದೇ ಮೂಲ ನಂಬಿಕೆಯನ್ನು ವ್ಯಕ್ತಪಡಿಸುತ್ತವೆ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಾನವರು ಅದರ ಕೇಂದ್ರದಲ್ಲಿ ಉಳಿಯಬೇಕು.
ಸ್ನೇಹಿತರೇ,
ಎ.ಐ. ಬಳಕೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಎ.ಐ. ಮಕ್ಕಳ ಮಾತೃಭಾಷೆಗಳಲ್ಲಿ ಶಿಕ್ಷಣವನ್ನು ಒದಗಿಸಬಹುದು, ಅವರ ಸೃಜನಶೀಲತೆಯನ್ನು ಹೆಚ್ಚಿಸಬಹುದು ಮತ್ತು ಕಲಿಕೆಯನ್ನು ಹೆಚ್ಚು ವೈಯಕ್ತಿಕಗೊಳಿಸಬಹುದು. ಆದಾಗ್ಯೂ, ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ, ಅದೇ ತಂತ್ರಜ್ಞಾನವು ತಪ್ಪು ಮಾಹಿತಿ, ಡೀಪ್ಫೇಕ್ಗಳು ಮತ್ತು ಶೋಷಣೆಯಂತಹ ಅಪಾಯಗಳಿಗೆ ಅವರನ್ನು ಈಡು ಮಾಡಬಹುದು.
ಈ ಎರಡು ಸನ್ನಿವೇಶಗಳ ನಡುವಿನ ವ್ಯತ್ಯಾಸವು ತಂತ್ರಜ್ಞಾನದಲ್ಲಿರುವುದಲ್ಲ. ಅದು ಅದರ ಬಳಕೆಯನ್ನು ಮಾರ್ಗದರ್ಶಿಸುವ ಮೌಲ್ಯಗಳು, ವಿನ್ಯಾಸ ಆಯ್ಕೆಗಳು ಮತ್ತು ಆಡಳಿತ ಚೌಕಟ್ಟುಗಳಲ್ಲಿದೆ. ಡಿಜಿಟಲ್ ಸ್ಥಳವು ಮಕ್ಕಳಿಗೆ ಕಲಿಕೆ ಮತ್ತು ಬೆಳವಣಿಗೆಗೆ ವೇದಿಕೆಯಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು, ಹೊರತು ಅದು ಮೋಸದ ಸಾಧನವಾಗಬಾರದು.
ಸ್ನೇಹಿತರೇ,
ಮುಂಚೂಣಿ ಎ.ಐ. ಮಾದರಿಗಳು ಸೈಬರ್ ಭದ್ರತಾ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಆದಾಗ್ಯೂ, ಎಲ್ಲಾ ದೇಶಗಳು ಸೈಬರ್ ಅವಕಾಶದಲ್ಲಿ ಸುರಕ್ಷಿತವಾಗಿಲ್ಲದಿದ್ದರೆ ಯಾವುದೇ ದೇಶವು ತಾನೊಂದೇ ಸೈಬರ್ಸ್ಪೇಸ್ನಲ್ಲಿ ನಿಜವಾಗಿಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಭಾರತ ಸದಾ ಸೈಬರ್ಸ್ಪೇಸ್ ನ್ನು ಜಾಗತಿಕ ಸಾರ್ವಜನಿಕ ಒಳಿತಿಗಾಗಿ ಇರುವ ಸಾಧನ ಎಂಬುದಾಗಿ ಪರಿಗಣಿಸಿದೆ. ಆದ್ದರಿಂದ ಈ ಪ್ರಮುಖ ಎ.ಐ. ತಂತ್ರಜ್ಞಾನಗಳಿಗೆ ಪ್ರವೇಶ ವಿಶಾಲವ್ಯಾಪ್ತಿಯಲ್ಲಿರಬೇಕು ಮತ್ತು ಎಲ್ಲರನ್ನೂ ಒಳಗೊಂಡಿರಬೇಕು. ಪ್ರಜಾಪ್ರಭುತ್ವ ರಾಷ್ಟ್ರಗಳು ಅಂತಹ ಎ.ಐ. ಮಾದರಿಗಳಿಗೆ ಪ್ರವೇಶವನ್ನು ಹೊಂದಿರಬೇಕು ಇದರಿಂದ ಅವುಗಳು ತಮ್ಮ ನಿರ್ಣಾಯಕ ಮಾಹಿತಿ ಮೂಲಸೌಕರ್ಯವನ್ನು ರಕ್ಷಿಸಿಕೊಳ್ಳಬಹುದು ಮತ್ತು ಹೆಚ್ಚುತ್ತಿರುವ/ಬೆಳೆಯುತ್ತಿರುವ ಸೈಬರ್ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು.
ಸ್ನೇಹಿತರೇ,
ಸುರಕ್ಷತೆ, ವೇಗ ಮತ್ತು ದಕ್ಷತೆಯನ್ನು ಸಮತೋಲನಗೊಳಿಸುವ ಸಮಗ್ರ ವಿಧಾನದೊಂದಿಗೆ ಮುಂದುವರಿಯಲು, ನಾನು ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ:
ಮೊದಲನೆಯದಾಗಿ, ನಾವು ಸುರಕ್ಷಿತ-ವಿನ್ಯಾಸದ ಎ.ಐ. ವ್ಯವಸ್ಥೆಗಳನ್ನು ಉತ್ತೇಜಿಸಬೇಕು. ಸುರಕ್ಷತೆಯನ್ನು ನಂತರದ ಚಿಂತನೆ ಅಥವಾ ಹೆಚ್ಚುವರಿ ವೈಶಿಷ್ಟ್ಯವಾಗಿ ಪರಿಗಣಿಸಬಾರದು; ಇದು ಆರಂಭದಿಂದಲೇ ಎ.ಐ. ವಿನ್ಯಾಸದ ಮೂಲಭೂತ ಅಂಶವಾಗಿರಬೇಕು.
ಎರಡನೆಯದಾಗಿ, ನಾವೀನ್ಯತೆ ಮತ್ತು ಆಡಳಿತವು ಒಟ್ಟಾಗಿ ಮುನ್ನಡೆಯಲು ಎ.ಐ. ನಿಯೋಜನೆಗಾಗಿ ನಾವು ಸಾಮಾನ್ಯ ಮಾನದಂಡಗಳು, ಪರೀಕ್ಷಾ ಚೌಕಟ್ಟುಗಳು ಮತ್ತು ನಿಯಂತ್ರಕ ಸ್ಯಾಂಡ್ಬಾಕ್ಸ್ಗಳನ್ನು ಅಂದರೆ ಪ್ರತ್ಯೇಕ ಪರೀಕ್ಷಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ನಾಗರಿಕ ವಿಮಾನಯಾನ ಮತ್ತು ಸಮುದ್ರ ಸಾರಿಗೆಯು ಜಗತ್ತಿನ ಎಲ್ಲಾ ದೇಶಗಳಿಗೆ ಪ್ರಯೋಜನವನ್ನು ನೀಡುವ ಉದಾಹರಣೆ ಇದೆ. ಇಲ್ಲಿ ಸಾಮಾನ್ಯ ಜಾಗತಿಕ ನಿಯಮಗಳನ್ನು ಯಶಸ್ವಿಯಾಗಿ ರೂಪಿಸಲಾಗಿದೆ. ಎ.ಐ.ಯ ಜವಾಬ್ದಾರಿಯುತ ಅಭಿವೃದ್ಧಿ ಮತ್ತು ನಿಯೋಜನೆಗಾಗಿ ನಾವು ಇದೇ ರೀತಿಯ ಪಾಠಗಳನ್ನು ಅನುಸರಿಸಬಹುದು.
ಮೂರನೆಯದಾಗಿ, ಡೀಪ್ಫೇಕ್ಗಳು, ತಪ್ಪು ಮಾಹಿತಿ ಮತ್ತು ಸೈಬರ್ ವಂಚನೆಯನ್ನು ಎದುರಿಸಲು ನಾವು ಜಾಗತಿಕ ಸಹಕಾರವನ್ನು ಬಲಪಡಿಸಬೇಕು. ಎ.ಐ. ರಚಿತ ವಿಷಯ ಸಾಮಗ್ರಿಗಳನ್ನು ಗುರುತಿಸಲು ಮತ್ತು ಡೀಪ್ಫೇಕ್ಗಳಿಂದ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡಲು ಡಿಜಿಟಲ್ ವಾಟರ್ಮಾರ್ಕಿಂಗ್ ಮತ್ತು ವಿಷಯ ದೃಢೀಕರಣ ಪರಿಕರಗಳಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದನ್ನು ನಾವು ಪ್ರೋತ್ಸಾಹಿಸಬೇಕು.
ನಾಲ್ಕನೆಯದಾಗಿ, ಎ.ಐ.ಯ ಪ್ರಯೋಜನಗಳು ಜಾಗತಿಕ ದಕ್ಷಿಣದ ಎಲ್ಲಾ ದೇಶಗಳನ್ನು ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಎ.ಐ. ಅಸ್ತಿತ್ವದಲ್ಲಿರುವ ವಿಭಜನೆಗಳನ್ನು ವಿಸ್ತರಿಸುವ ಶಕ್ತಿಯಾಗಿರದೆ, ಸೇರ್ಪಡೆ ಮತ್ತು ಹಂಚಿಕೆಯ ಪ್ರಗತಿಗೆ ಒಂದು ಶಕ್ತಿಯಾಗಬೇಕು.
ಸ್ನೇಹಿತರೇ,
ಎ.ಐ. ಬಗ್ಗೆ ನಮ್ಮ ವಿಧಾನ/ಧೋರಣೆ ಮತ್ತು ನೀತಿ ಸ್ಪಷ್ಟವಾಗಿರಬೇಕು. ಎ.ಐ. ಮಾನವ ಸಾಮರ್ಥ್ಯವನ್ನು ವಿಸ್ತರಿಸಬೇಕು, ಜನರಿಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಅಧಿಕಾರ ನೀಡಬೇಕು ಮತ್ತು ಮಾನವ ಘನತೆಯನ್ನು ರಕ್ಷಿಸಬೇಕು. ಈ ಪ್ರಮುಖ ವಿಷಯದಲ್ಲಿ ಭಾರತವು ಎಲ್ಲಾ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದನ್ನು ಮತ್ತು ಸಹಯೋಗ ಮಾಡುವುದನ್ನು ಮುಂದುವರಿಸುತ್ತದೆ.
ತುಂಬಾ ಧನ್ಯವಾದಗಳು.
ಘೋಷಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಯ ಸರಿಸುಮಾರಾದ ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(रिलीज़ आईडी: 2276664)
आगंतुक पटल : 40
इस विज्ञप्ति को इन भाषाओं में पढ़ें:
English
,
हिन्दी
,
Manipuri
,
Urdu
,
Bengali
,
Assamese
,
Punjabi
,
Gujarati
,
Odia
,
Telugu
,
Malayalam