ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯಲ್ಲಿ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಸುಮಾರು 6,350 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ
ದೇಶದ ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ
ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯವು ನಿರಂತರವಾಗಿ ಮುಂದುವರಿಯುತ್ತದೆ; ಮತ್ತು ನಾನು ವಿಕ್ಷಿತ ಭಾರತದ ಬಗ್ಗೆ ಮಾತನಾಡುವಾಗ ಅದರ ಬಲವಾದ ಆಧಾರಸ್ತಂಭ ಭಾರತದ ನಾರಿ ಶಕ್ತಿ: ಪ್ರಧಾನಮಂತ್ರಿ
ಕಾಶಿಯ ಸಂಸತ್ ಸದಸ್ಯನಾಗಿ ಮತ್ತು ರಾಷ್ಟ್ರದ ಪ್ರಧಾನ ಮಂತ್ರಿಯಾಗಿ, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಹತ್ವದ ಗುರಿಯನ್ನು ಸಾಧಿಸಲು ನಾನು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಮತ್ತು ಈ ಪ್ರಮುಖ ಗುರಿ ಲೋಕಸಭೆ ಹಾಗು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದು: ಪ್ರಧಾನಮಂತ್ರಿ
ನಮ್ಮ ಸರ್ಕಾರದ ನೀತಿಗಳು ನಿರಂತರವಾಗಿ ಮಹಿಳಾ ಕಲ್ಯಾಣಕ್ಕೆ ಗರಿಷ್ಠ ಆದ್ಯತೆಯನ್ನು ನೀಡಿವೆ: ಪ್ರಧಾನಮಂತ್ರಿ
ಅನುಕೂಲತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವತ್ತ ನಾವು ಒತ್ತು ನೀಡಿದ್ದೇವೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
28 APR 2026 8:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿ ನಡೆದ ಸಮಾವೇಶದಲ್ಲಿ ಬೃಹತ್ ಮಹಿಳಾ ಸಭೆಯನ್ನುದ್ದೇಶಿಸಿ ಮಾತನಾಡಿದರು, ಅಲ್ಲಿ ಅವರು ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ಮಾಡಿದರು.
ಈ ಸಂದರ್ಭದ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಕಾಶಿಯು ಮಾತೆ ಶೃಂಗಾರ ಗೌರಿ, ಮಾತೆ ಅನ್ನಪೂರ್ಣೆ, ಮಾತೆ ವಿಶಾಲಾಕ್ಷಿ, ಮಾತೆ ಸಂಕಥಾ ಮತ್ತು ಮಾತೆ ಗಂಗಾ ಸೇರಿದಂತೆ ದೈವಿಕ ಶಕ್ತಿಗಳ ಭೂಮಿಯಾಗಿದೆ ಎಂದು ಹೇಳಿದರು. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಬೃಹತ್ ಸಮಾವೇಶವು ಈ ಕಾರ್ಯಕ್ರಮವನ್ನು ನಿಜವಾಗಿಯೂ ಪವಿತ್ರವಾಗಿ ಪರಿವರ್ತಿಸಿದೆ. "ಈ ಕಾಶಿ ಭೂಮಿಯಲ್ಲಿ, ನೀವೆಲ್ಲ ತಾಯಂದಿರು, ಸಹೋದರಿಯರು ಮತ್ತು ಕಾಶಿಯ ಹೆಣ್ಣುಮಕ್ಕಳಿಗೆ ನಾನು ನಮಸ್ಕರಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು.
ಈ ಸಂದರ್ಭವು ನಾರಿ ಶಕ್ತಿ ಮತ್ತು ಅಭಿವೃದ್ಧಿ ಎರಡನ್ನೂ ಸಂಭ್ರಮದಿಂದ ಆಚರಿಸಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಕಾಶಿಯಲ್ಲಿನ ಪ್ರತಿಯೊಂದು ರೀತಿಯ ಅಭಿವೃದ್ಧಿಯನ್ನು ಒಳಗೊಂಡ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು, ಜೊತೆಗೆ ಕಾಶಿ ಮತ್ತು ಅಯೋಧ್ಯೆಯ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಕಾಮಗಾರಿಗಳನ್ನು ಸಹ ಉದ್ಘಾಟಿಸಲಾಗಿದೆ ಎಂದು ಹೇಳಿದರು. ಕಾಶಿಯಿಂದ ಪುಣೆ ಮತ್ತು ಅಯೋಧ್ಯೆಯಿಂದ ಮುಂಬೈಗೆ ಎರಡು ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಲಾಯಿತು, ಇದು ಮಹಾರಾಷ್ಟ್ರದಾದ್ಯಂತ ಜನರು ಈ ಪವಿತ್ರ ನಗರಗಳನ್ನು ತಲುಪಲು ಆಧುನಿಕ ಸಂಪರ್ಕ ಆಯ್ಕೆಗಳನ್ನು ಒದಗಿಸುತ್ತದೆ. "ಇದು ಯುಪಿ ಮತ್ತು ಮಹಾರಾಷ್ಟ್ರದ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ, ಜನರಿಗೆ ಅಯೋಧ್ಯಾ ಧಾಮ್ ಮತ್ತು ಕಾಶಿ ವಿಶ್ವನಾಥ ಧಾಮ್ ತಲುಪಲು ಮತ್ತೊಂದು ಆಧುನಿಕ ಆಯ್ಕೆಯನ್ನು ನೀಡುತ್ತದೆ" ಎಂದು ಶ್ರೀ ಮೋದಿ ಹೇಳಿದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ನಾರಿ ಶಕ್ತಿಯನ್ನು ವಿಕಸಿತ ಭಾರತದ ಪ್ರಬಲ ಸ್ತಂಭ ಎಂದು ಬಣ್ಣಿಸಿದರು. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ಪ್ರಮುಖ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಅವರು ಸಭೆಯ ಆಶೀರ್ವಾದವನ್ನು ಕೋರಿದರು. "ನಿಮ್ಮ ಮೀಸಲಾತಿ ಹಕ್ಕು ವಾಸ್ತವವಾಗುವುದನ್ನು ಖಚಿತಪಡಿಸಿಕೊಳ್ಳಲು ನಾನು ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಶ್ರೀ ಮೋದಿ ದೃಢವಾಗಿ ನುಡಿದರು. .
ಮಹಿಳಾ ಸಬಲೀಕರಣದ ಪರಿವರ್ತನಾತ್ಮಕ ಶಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಮನೆಯಲ್ಲಿ ಮಹಿಳೆ ಸಬಲಳಾದಾಗ, ಇಡೀ ಕುಟುಂಬವು ಬಲಗೊಳ್ಳುತ್ತದೆ, ಇದು ಸಮಾಜ ಮತ್ತು ದೇಶವನ್ನು ಬಲಪಡಿಸುತ್ತದೆ ಎಂದು ಹೇಳಿದರು. ಭಾರತೀಯ ಮಹಿಳೆಯರು ಎದುರಿಸುತ್ತಿರುವ ಐತಿಹಾಸಿಕ ಅಡೆತಡೆಗಳನ್ನು ಪ್ರತಿಬಿಂಬಿಸುತ್ತಾ, ಪ್ರಧಾನ ಮಂತ್ರಿಗಳು ಹುಡುಗಿಯರು ಪೀಳಿಗೆಯಿಂದ ಅನುಭವಿಸುತ್ತಿರುವ ನಿರಾಕರಣಾತ್ಮಕ ಪ್ರಶ್ನೆಗಳು ಮತ್ತು ಆಜ್ಞೆಗಳನ್ನು, ಸಾಮರ್ಥ್ಯ, ಅವಶ್ಯಕತೆ ಮತ್ತು ಔಚಿತ್ಯದ ಕುರಿತಾದ ಪ್ರಶ್ನೆಗಳನ್ನು ನೆನಪಿಸಿಕೊಂಡರು. ಅಂತಹ ತಾರತಮ್ಯವು ಕಾಶಿಗೆ ಸೀಮಿತವಾಗಿಲ್ಲ, ಆದರೆ ಇಡೀ ರಾಷ್ಟ್ರದಾದ್ಯಂತ ಇದೆ ಎಂದು ಒಪ್ಪಿಕೊಂಡ ಅವರು, ಸಮಾಜವು ಈ ಅನ್ಯಾಯವನ್ನು ಸಾಮಾನ್ಯಗೊಳಿಸಿದೆ ಎಂದು ಗಮನಿಸಿದರು. "ಈ ಅಡೆತಡೆಗಳನ್ನು ನೈಸರ್ಗಿಕ ಕ್ರಮವೆಂದು ಸರಳವಾಗಿ ಸ್ವೀಕರಿಸಲಾಯಿತು ಮತ್ತು ಇದು ಬದಲಾಗಬೇಕು" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಹಿಂಜರಿತದ ಗ್ರಹಿಕೆಗಳನ್ನು ಮುರಿಯುವ ತಮ್ಮ ಬದ್ಧತೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, 25 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾದಾಗ, ಹೆಚ್ಚಿನ ಹುಡುಗಿಯರು ಶಾಲೆಗೆ ಹೋಗುವುದನ್ನು ಮತ್ತು ಶಾಲಾ ಶಿಕ್ಷಣ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಶಾಲಾ ಪ್ರವೇಶೋತ್ಸವ ಮತ್ತು ಅವರ ಶುಲ್ಕಕ್ಕೆ ಸಹಾಯ ಮಾಡಲು ಮುಖ್ಯಮಂತ್ರಿ ಕನ್ಯಾ ಕೆಲವಾಣಿ ನಿಧಿ ಎಂಬ ಎರಡು ಪ್ರವರ್ತಕ ಯೋಜನೆಗಳನ್ನು ತಾವು ಪ್ರಾರಂಭಿಸಿದ್ದನ್ನು ಹಂಚಿಕೊಂಡರು. "ಅಂದಿನಿಂದ ಇಂದಿನವರೆಗೆ, ನಮ್ಮ ಸರ್ಕಾರದ ನೀತಿಗಳಲ್ಲಿ ಮಹಿಳಾ ಕಲ್ಯಾಣಕ್ಕೆ ನಿರಂತರವಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ" ಎಂದೂ ಅವರು ಹೇಳಿದರು.
2014 ರಿಂದ ಜಾರಿಯಾದ ಸಮಗ್ರ ಕಲ್ಯಾಣ ಉಪಕ್ರಮಗಳನ್ನು ವಿವರಿಸುತ್ತಾ, 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, 30 ಕೋಟಿಗೂ ಹೆಚ್ಚು ಸಹೋದರಿಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, 2.5 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು 12 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ನೀರು ತಲುಪಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. ಈ ಉಪಕ್ರಮಗಳು ಸುಕನ್ಯಾ ಸಮೃದ್ಧಿ ಯೋಜನೆ, ಮುದ್ರಾ ಯೋಜನೆ, ಮಾತೃ ವಂದನಾ ಯೋಜನೆ ಮತ್ತು ಆಯುಷ್ಮಾನ್ ಭಾರತ್ನಂತಹ ಯೋಜನೆಗಳು ಸೇರಿ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಾಷ್ಟ್ರೀಯ ಅಭಿವೃದ್ಧಿಯ ಕೇಂದ್ರದಲ್ಲಿ ಇರಿಸಿದವು. "ಪ್ರತಿಯೊಂದು ಪ್ರಮುಖ ಯೋಜನೆಯ ಕೇಂದ್ರದಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಇರಿಸಲಾಯಿತು, ಇದು ನಮ್ಮ ನಿಜವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.
ಕಾಶಿಯಲ್ಲಿ ಯಶಸ್ವಿ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಎರಡು ವರ್ಷಗಳ ಹಿಂದೆ, ಕೇವಲ ಒಂದು ತಿಂಗಳಲ್ಲಿ 27,000 ಹುಡುಗಿಯರಿಗೆ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲಾಯಿತು, ಪ್ರತಿ ಖಾತೆಗೆ 300 ರೂ.ಗಳನ್ನು ವರ್ಗಾಯಿಸಲಾಯಿತು ಎಂದು ನೆನಪಿಸಿಕೊಂಡರು. ಈ ಯೋಜನೆಯು ಹುಡುಗಿಯರ ಶಿಕ್ಷಣವನ್ನು ಬಲಪಡಿಸಿದೆ, ಮುದ್ರಾ ಯೋಜನೆಯು ಅವರ ಗಳಿಕೆಯನ್ನು ಖಚಿತಪಡಿಸಿದೆ ಮತ್ತು ಇದೇ ಮೊದಲ ಬಾರಿಗೆ, ಕೋಟ್ಯಂತರ ಸಹೋದರಿಯರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ತಮ್ಮ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸಿಕೊಂಡಿದ್ದಾರೆ. "ಇಂದು ನಮ್ಮ ತಾಯಂದಿರು ಮತ್ತು ಸಹೋದರಿಯರು ನಿಜವಾಗಿಯೂ ತಮ್ಮ ಮನೆಗಳ ಮಾಲೀಕರಾಗುತ್ತಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು.
ಅನುಕೂಲತೆ ಮತ್ತು ಸುರಕ್ಷತೆಯೇ ಸಬಲೀಕರಣದ ಅಡಿಪಾಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಉತ್ತರ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಹಿಂದಿನ ಕಾಲದಲ್ಲಿ ಹುಡುಗಿಯರು ತಮ್ಮ ಮನೆಗಳಿಂದ ಹೊರಬರುವುದು ಕಷ್ಟಕರವಾಗಿದ್ದ ಪರಿಸ್ಥಿತಿಯೊಂದಿಗೆ ಹೋಲಿಸಿದರು. ಭಾರತೀಯ ನ್ಯಾಯ ಸಂಹಿತಾ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿ ತ್ವರಿತ ನಿರ್ಧಾರಗಳೊಂದಿಗೆ ಹೊಸ ವಿಶ್ವಾಸವನ್ನು ನೀಡಿದೆ, ಮಹಿಳಾ ಪೊಲೀಸ್ ಠಾಣೆಗಳು ಮತ್ತು ಸಮಾಲೋಚನಾ ಕೇಂದ್ರಗಳ ಜಾಲವು ವಿಸ್ತರಿಸುತ್ತಲೇ ಇದೆ. "ಹೆಣ್ಣು ಮಕ್ಕಳ ಬಗ್ಗೆ ತಪ್ಪು ಉದ್ದೇಶ ಹೊಂದಿರುವ ಯಾರಿಗಾದರೂ ಈಗ ಅವರ ಭವಿಷ್ಯ ಏನೆಂದು ಚೆನ್ನಾಗಿ ತಿಳಿದಿದೆ" ಎಂದು ಶ್ರೀ ಮೋದಿ ಹೇಳಿದರು.
ಆರ್ಥಿಕ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಾದಾಗ, ಮನೆಯಲ್ಲಿ ಅವರ ಧ್ವನಿಯೂ ಅಷ್ಟೇ ಬಲಗೊಳ್ಳುತ್ತದೆ ಎಂದು ಗಮನಿಸಿದರು. ಕಳೆದ 11 ವರ್ಷಗಳಲ್ಲಿ, ಕಾಶಿಯಲ್ಲಿ ಸುಮಾರು 1.25 ಲಕ್ಷ ಸಹೋದರಿಯರು ಸೇರಿದಂತೆ ಸುಮಾರು 10 ಕೋಟಿ ಮಹಿಳೆಯರು ಸ್ವ-ಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಲಕ್ಷಾಂತರ ರೂಪಾಯಿಗಳ ನೆರವಿನೊಂದಿಗೆ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. "ಇಂತಹ ಪ್ರಯತ್ನಗಳ ಮೂಲಕ, ಇಲ್ಲಿಯವರೆಗೆ 3 ಕೋಟಿ ಸಹೋದರಿಯರು ಲಕ್ಪತಿ ದೀದಿಗಳಾಗಿದ್ದಾರೆ, ಇದರಲ್ಲಿ ಬನಾರಸ್ನ ಸಾವಿರಾರು ಜನರು ಸೇರಿದ್ದಾರೆ" ಎಂದು ಶ್ರೀ ಮೋದಿ ದೃಢಪಡಿಸಿದರು.
ಮಹಿಳಾ ಸಬಲೀಕರಣಕ್ಕೆ ಡೈರಿ ವಲಯದ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಇಂದು ನೇರವಾಗಿ 106 ಕೋಟಿ ರೂ.ಗಳನ್ನು ಬೋನಸ್ ಆಗಿ ಪಡೆದ ಬನಾಸ್ ಡೈರಿಯೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಸಹೋದರಿಯರನ್ನು ಅಭಿನಂದಿಸಿದರು. ಕಾಶಿಯ ಡೈರಿ ವಲಯದ ಮಹಿಳೆಯರು ತಮ್ಮ ಕೆಲಸವನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತಾ, ಅವರು ನಿರಂತರ ಬೆಳವಣಿಗೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. "ಇದು ಕೇವಲ ಆರಂಭ, ಬನಾರಸ್ ಬೆಳೆಯುತ್ತದೆ, ಬನಾಸ್ ಡೈರಿ ಬೆಳೆಯುತ್ತದೆ, ಮತ್ತು ಈ ಬೋನಸ್ ಕೂಡ ಹೆಚ್ಚುತ್ತಲೇ ಇರುತ್ತದೆ" ಎಂದು ಶ್ರೀ ಮೋದಿ ದೃಢಪಡಿಸಿದರು.
ಸರ್ಕಾರವು ಮಹಿಳೆಯರನ್ನು ಬದಲಾವಣೆ ತರುವವರಾಗಿ ಹೇಗೆ ಪರಿಗಣಿಸುತ್ತಿದೆ ಎಂಬುದನ್ನು ವಿವರಿಸುತ್ತಾ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮತ್ತು ವಿಕಸಿತ ಭಾರತ ನಿರ್ಮಿಸಲು ಅಭಿಯಾನಗಳ ನಾಯಕತ್ವವನ್ನು ಅವರಿಗೆ ವಹಿಸುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಬ್ಯಾಂಕಿಂಗ್ ಸಖಿಗಳು ಡಿಜಿಟಲ್ ಪಾವತಿಗಳನ್ನು ಮುನ್ನಡೆಸುತ್ತಿದ್ದಾರೆ, ವಿಮಾ ಸಖಿಗಳು ವಿಮಾ ಉಪಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ, ಕೃಷಿ ಸಖಿಗಳು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದಾರೆ ಮತ್ತು ನಮೋ ಡ್ರೋನ್ ದೀದಿಗಳು ಕೃಷಿ ಡ್ರೋನ್ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ ಎಂಬುದರತ್ತ ಅವರು ಗಮನ ಸೆಳೆದರು. ಇದಲ್ಲದೆ, ಸೇನೆ, ನೌಕಾಪಡೆ, ವಾಯುಪಡೆ, ಸೈನಿಕ್ ಶಾಲೆಗಳು ಮತ್ತು ರಕ್ಷಣಾ ಅಕಾಡೆಮಿಗಳಲ್ಲಿ ಹೆಣ್ಣುಮಕ್ಕಳಿಗೆ ಹೊಸ ಅವಕಾಶಗಳು/ ಮಾರ್ಗಗಳು ತೆರೆದಿವೆ. "ನಮ್ಮ ಸರ್ಕಾರ ಎಂದರೆ ಮಹಿಳಾ ಸಬಲೀಕರಣ, ಮಹಿಳಾ ಉನ್ನತಿ ಮತ್ತು ಮಹಿಳೆಯರ ಜೀವನವನ್ನು ಸುಲಭಗೊಳಿಸುವುದಾಗಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ನೀತಿ ನಿರೂಪಣೆ ಮತ್ತು ರಾಷ್ಟ್ರೀಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರು ಹೆಚ್ಚಿನ ಪಾತ್ರ ವಹಿಸಲು ಅರ್ಹರು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಹೊಸ ಸಂಸತ್ತನ್ನು ನಿರ್ಮಿಸುವ ಹಿಂದಿನ ಪ್ರಮುಖ ಕಾರಣ ಸಹೋದರಿಯರ ಭಾಗವಹಿಸುವಿಕೆಯ ಕಲ್ಪನೆ ಎಂದು ಹೇಳಿದರು. ಹೊಸ ಸಂಸತ್ತು ನಿರ್ಮಾಣವಾದ ನಂತರ ಮೊದಲ ಕೆಲಸವೆಂದರೆ 2023 ರಲ್ಲಿ ನಾರಿ ಶಕ್ತಿ ವಂದನ ಕಾಯ್ದೆಯನ್ನು ಅಂಗೀಕರಿಸುವುದು, 40 ವರ್ಷಗಳ ಕಾಲ ಬಾಕಿಯಾಗಿದ್ದ ಶೇಕಡಾ 33 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಒದಗಿಸುವುದು. "ಈಗ ಈ ಕಾನೂನನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರುವುದು ಅಗತ್ಯವಾಗಿದೆ" ಎಂದು ಶ್ರೀ ಮೋದಿ ಹೇಳಿದರು.
ಇತ್ತೀಚಿನ ಸಂಸದೀಯ ಕಲಾಪಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಹೆಚ್ಚಿನ ಮಹಿಳೆಯರು ವಿಧಾನಸಭೆ ಮತ್ತು ಸಂಸತ್ತನ್ನು ತಲುಪಲು ಅನುವು ಮಾಡಿಕೊಡಲು ಸಾಂವಿಧಾನಿಕ ತಿದ್ದುಪಡಿಯನ್ನು ತರಲಾಯಿತು, ಆದರೆ ಅದನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ ಎಂಬುದರತ್ತ ಗಮನ ಸೆಳೆದರು. ಅಸ್ಸಾಂ, ಕೇರಳ, ಪುದುಚೇರಿ, ಬಂಗಾಳ ಮತ್ತು ತಮಿಳುನಾಡಿನಲ್ಲಿ ಮಹಿಳೆಯರಿಂದ ದಾಖಲೆಯ ಮತದಾನ ನಡೆದಿರುವುದಕ್ಕೆ ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು,
"ನಾಗರಿಕ್ ದೇವೋ ಭವ" ಎಂಬ ಮಂತ್ರದೊಂದಿಗೆ ಸರ್ಕಾರದ ನಾಗರಿಕ ಕೇಂದ್ರಿತ ವಿಧಾನವನ್ನು ವಿವರಿಸಿದ ಪ್ರಧಾನಮಂತ್ರಿ, ಶಿಕ್ಷಣ, ಗಳಿಕೆ, ಆರೋಗ್ಯ ರಕ್ಷಣೆ, ನೀರಾವರಿ ಮತ್ತು ಕುಂದುಕೊರತೆ ಪರಿಹಾರವು ಪ್ರಮುಖ ಆದ್ಯತೆಗಳಾಗಿ ಉಳಿದಿವೆ ಎಂದು ಒತ್ತಿ ಹೇಳಿದರು. ಈ ಭಾವನೆಯೊಂದಿಗೆ, ಕಾಶಿಯ ಅಭಿವೃದ್ಧಿಯನ್ನು ಇಂದು ಅನೇಕ ಮಹತ್ವದ ಯೋಜನೆಗಳೊಂದಿಗೆ ವಿಸ್ತರಿಸಲಾಗಿದೆ ಎಂಬುದನ್ನು ಅವರು ಗಮನಿಸಿದರು. "ಗಂಗಾ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಸಿಗ್ನೇಚರ್ ಸೇತುವೆಯು ಪೂರ್ವಾಂಚಲ್ನ ಸಂಪರ್ಕವನ್ನು ಬಲಪಡಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.
ಕಳೆದ ದಶಕದಲ್ಲಿ ಉತ್ತರ ಮತ್ತು ಪೂರ್ವ ಭಾರತಕ್ಕೆ ಪ್ರಮುಖ ಆರೋಗ್ಯ ಕೇಂದ್ರವಾಗಿ ಕಾಶಿ ಹೊರಹೊಮ್ಮುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, 500 ಹಾಸಿಗೆಗಳ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು. ಹೆಚ್ಚುವರಿಯಾಗಿ, 100 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ಗೆ ಅಡಿಪಾಯ ಹಾಕಲಾಗಿದೆ ಎಂದು ಅವರು ಉಲ್ಲೇಖಿಸಿದರು. "ಇದು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕಾಶಿಯಲ್ಲಿ ಬೃಹತ್ ಸೌಲಭ್ಯವನ್ನು ಸೇರಿಸುತ್ತದೆ" ಎಂದು ಶ್ರೀ ಮೋದಿ ನುಡಿದರು.
ಕಾಶಿಯ ಅಭಿವೃದ್ಧಿಯ ಸಮಗ್ರ ಮತ್ತು ಸೂಕ್ಷ್ಮ ಸ್ವರೂಪವನ್ನು ವಿವರಿಸಿದ ಪ್ರಧಾನಮಂತ್ರಿ, ಗಂಗಾ ಶುದ್ಧೀಕರಣ, ಘಾಟ್ಗಳ ಅಭಿವೃದ್ಧಿ, ಆಡಳಿತ ಕಟ್ಟಡಗಳ ನಿರ್ಮಾಣ, ಹರ್ಹುವಾ ಮತ್ತು ಭವಾನಿಪುರದಲ್ಲಿ ರೈತರಿಗೆ ಸಂಗ್ರಹಣಾ ಸೌಲಭ್ಯಗಳು, ವೃದ್ಧಾಶ್ರಮಗಳು ಮತ್ತು ಮಹಿಳಾ ಹಾಸ್ಟೆಲ್ಗಳು ಸೇರಿದಂತೆ ವಿವಿಧ ಉಪಕ್ರಮಗಳನ್ನು ಪಟ್ಟಿ ಮಾಡಿದರು. "ಈ ಎಲ್ಲಾ ಯೋಜನೆಗಳು ಬನಾರಸ್ ನಿವಾಸಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತವೆ ಮತ್ತು ಸೂಕ್ಷ್ಮ, ಜನ-ಕೇಂದ್ರಿತ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ರೀ ಮೋದಿ ಹೇಳಿದರು.
ಕಾಶಿಯ ಪರಂಪರೆ ಮತ್ತು ಸಾಂಸ್ಕೃತಿಕ ಆಸ್ತಿಯನ್ನು ಬಲಪಡಿಸುವ ನಿರಂತರ ಅಭಿಯಾನವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಈ ಪ್ರಯತ್ನದ ಅವಿಭಾಜ್ಯ ಅಂಗಗಳಾಗಿ ಸಂತ ಕಬೀರ್ ಸ್ಥಲಿಯ ಅಭಿವೃದ್ಧಿ ಮತ್ತು ನಾಗ್ವಾದಲ್ಲಿನ ಸಂತ ರವಿದಾಸ್ ಉದ್ಯಾನವನದ ಪುನಃಸ್ಥಾಪನೆಯನ್ನು ಉಲ್ಲೇಖಿಸಿದರು. "ಇವು ನಮ್ಮ ಪರಂಪರೆಯನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ನಮ್ಮ ಚಾಲ್ತಿಯಲ್ಲಿರುವ ಅಭಿಯಾನದ ಭಾಗ" ಎಂದು ಶ್ರೀ ಮೋದಿ ಹೇಳಿದರು.
ಕಾಶಿಯ ಶಾಶ್ವತ ಸ್ವರೂಪ ಮತ್ತು ನಡೆಯುತ್ತಿರುವ ಅಭಿವೃದ್ಧಿ ಅಭಿಯಾನದ ನಡುವೆ ಸಮಾನಾಂತರವನ್ನು ಪ್ರಸ್ತಾಪಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ, ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸುತ್ತಾ, ಸಭೆಯ ಆಶೀರ್ವಾದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. "ನಮ್ಮ ಕಾಶಿ ಅವಿನಾಶಿ ಮತ್ತು ನಿರಂತರವಾಗಿ ಚಲಿಸುತ್ತದೆ, ಅದೇ ರೀತಿ, ಈ ಅಭಿವೃದ್ಧಿ ಅಭಿಯಾನವು ನಿರಂತರವಾಗಿ ಕ್ರಿಯಾತ್ಮಕವಾಗಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.
*****
(ಪ್ರಕಟಣೆ ಐ.ಡಿ.: 2256522)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Telugu