ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ದಿನಾಂಕ 26.04.2026 ರಂದು ಮಾಡಿದ ‘ಮನ್ ಕಿ ಬಾತ್’ – 133ನೇ ಸಂಚಿಕೆಯ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 26 APR 2026 12:12PM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.

'ಮನದ ಮಾತು' ನ ಮತ್ತೊಂದು ಸಂಚಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡಲು ನನಗೆ ಸಂತೋಷವಾಗಿದೆ. ನಾವು ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವಾಗ, ನಿಮ್ಮ ಪತ್ರಗಳು ಮತ್ತು ಸಂದೇಶಗಳ ಮೂಲಕ, ದೇಶ ಮತ್ತು ನಾಗರಿಕರ ಸಾಧನೆಗಳ ಬಗ್ಗೆ ನಾವು ಪರಸ್ಪರ ಸಂತೋಷವನ್ನು ಹಂಚಿಕೊಂಡಿದ್ದೇವೆ. ಈ ಬಾರಿ, ದೇಶದ ಅಂತಹ ಒಂದು ಮಹತ್ವದ ಸಾಧನೆಯೊಂದಿಗೆ 'ಮನದ ಮಾತು' ಪ್ರಾರಂಭಿಸೋಣ.

ಸ್ನೇಹಿತರೇ,

ಭಾರತ ಯಾವಾಗಲೂ ದೇಶದ ಪ್ರಗತಿ ವಿಜ್ಞಾನದಿಂದ ಎಂಬುದನ್ನು ನಂಬಿದೆ. ಇದೇ ದೃಷ್ಟಿಕೋನದಿಂದ, ನಮ್ಮ ವಿಜ್ಞಾನಿಗಳು ನಾಗರಿಕ ಪರಮಾಣು ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಅವರ ಪ್ರಯತ್ನಗಳು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಇದು ನಮ್ಮ ಕೈಗಾರಿಕಾ ಬೆಳವಣಿಗೆ, ಇಂಧನ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಲಾಭ ದೊರೆತಿದೆ. ಕೃಷಿಯಿಂದ ಆಧುನಿಕ ನಾವೀನ್ಯಕಾರರು ಸೇರಿದಂತೆ ಎಲ್ಲರಿಗೂ ಭಾರತದ ನಾಗರಿಕ ಪರಮಾಣು ಕಾರ್ಯಕ್ರಮವು ಸಾಕಷ್ಟು ಸಹಾಯ ಮಾಡಿದೆ. ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ನಮ್ಮ ಪರಮಾಣು ವಿಜ್ಞಾನಿಗಳು ಮತ್ತೊಂದು ಪ್ರಮುಖ ಸಾಧನೆಯೊಂದಿಗೆ ಭಾರತದ ಹೆಮ್ಮೆಗೆ ಮತ್ತೊಂದು ಗರಿಯನ್ನು ಜೋಡಿಸಿದ್ದಾರೆ. ತಮಿಳುನಾಡಿನ ಕಲ್ಪಾಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕ್ರೀಟಿಕಯಾಲಿಟಿಯನ್ನು ಸಾಧಿಸಿದೆ. ಅಂದರೆ ರಿಯಾಕ್ಟರ್ ಮೊದಲ ಬಾರಿಗೆ ಸ್ವಯಂ-ಸಮರ್ಥನೀಯ ಪರಮಾಣು ಸರಪಳಿ ಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಹಂತವನ್ನು ತಲುಪಿದೆ. ಈ ಹಂತವು ರಿಯಾಕ್ಟರ್ ಕಾರ್ಯಾಚರಣೆಯ ಹಂತವನ್ನು ಪ್ರವೇಶಿಸುವುದನ್ನು ಸೂಚಿಸುತ್ತದೆ. ಇದು ಪರಮಾಣು ಶಕ್ತಿ ಪಯಣದಲ್ಲಿ ಭಾರತಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಇಷ್ಟೇ ಅಲ್ಲದೆ, ಪರಮಾಣು ರಿಯಾಕ್ಟರ್ ಅನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ.

ಸ್ನೇಹಿತರೇ,

ಇದನ್ನು ಬ್ರೀಡರ್ ರಿಯಾಕ್ಟರ್ ಎಂದು ಏಕೆ ಕರೆಯುತ್ತಾರೆ? ಇದರ ಹಿಂದೆ ಒಂದು ಕಾರಣವಿದೆ. ಇದು ಶಕ್ತಿಯ ಉತ್ಪಾದನೆ ಜೊತೆಗೆ, ಭವಿಷ್ಯಕ್ಕಾಗಿ ಹೊಸ ಇಂಧನವನ್ನು ಉತ್ಪಾದಿಸುವ ವ್ಯವಸ್ಥೆಯಾಗಿದೆ. ಸ್ನೇಹಿತರೇ, ಮಾರ್ಚ್ 2024 ರಲ್ಲಿ ಕಲ್ಪಾಕಂನಲ್ಲಿ ರಿಯಾಕ್ಟರ್‌ನ ಕೋರ್ ಲೋಡಿಂಗ್ ಅನ್ನು ವೀಕ್ಷಿಸಿದ ಸಮಯವನ್ನು ನನಗೆ ಸ್ಪಷ್ಟವಾಗಿ ನೆನಪಿದೆ. ಭಾರತದ ಪರಮಾಣು ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ದೇಶವಾಸಿಗಳ ಜೀವನವನ್ನು ಉತ್ತಮ ಮತ್ತು ಸುಲಭಗೊಳಿಸಲು ಅವರ ಪ್ರಯತ್ನಗಳು ಅತ್ಯಂತ ಶ್ಲಾಘನೀಯವಾಗಿದೆ. ಇದರಿಂದ  ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಚೈತನ್ಯ ದೊರೆಯುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ,

ಇಂದು ಮನದ ಮಾತಿನಲ್ಲಿ, ನಾನು ಅದೃಶ್ಯವಾದ ಒಂದು ಶಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ, ಆದರೆ ಅದಿಲ್ಲದೆ ನಮ್ಮ ಜೀವನ ಒಂದು ಕ್ಷಣವೂ ಉಳಿಯಲಾರದು. ಈ ಶಕ್ತಿ ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಅದೇ ನಮ್ಮ ಪವನ ಶಕ್ತಿ. ನಮ್ಮ ಪ್ರಾಚೀನ ಗ್ರಂಥಗಳು ಹೇಳುತ್ತವೆ -

    "ವಾಯುರ್ವಾ ಇತಿ ವ್ಯಷ್ಟಿಹಿ, ವಾಯುರವೈ ಸಮಷ್ಟಿಹಿ"

ಅಂದರೆ ಗಾಳಿಯು ಕೇವಲ ಒಂದು ಅಂಶವಲ್ಲ; ಅದು ಜೀವನದ ಶಕ್ತಿ, ಅದು ಬ್ರಹ್ಮಾಂಡದ ಶಕ್ತಿ.

ಸ್ನೇಹಿತರೇ,

ಇಂದು ಈ ಪವನ ಶಕ್ತಿಯೇ ಭಾರತದ ಅಭಿವೃದ್ಧಿಯ ಹೊಸ ಗಾಥೆಯನ್ನು ಬರೆಯುತ್ತಿದೆ. ಭಾರತ ಇತ್ತೀಚೆಗೆ ಪವನ ಶಕ್ತಿಯಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಭಾರತದ ಪವನ ಶಕ್ತಿ ಉತ್ಪಾದನಾ ಸಾಮರ್ಥ್ಯವು ಈಗ 56 ಗಿಗಾವ್ಯಾಟ್‌ಗಳನ್ನು ಮೀರಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 6 ಗಿಗಾವ್ಯಾಟ್‌ಗಳಷ್ಟು  ಸಾಮರ್ಥ್ಯವನ್ನು ಹೊಸದಾಗಿ ಸೇರಿಸಲಾಗಿದೆ. ಪವನ ಶಕ್ತಿಯಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಮತ್ತು ಜಗತ್ತು ನಮ್ಮ ಕಡೆಗೆ ದಷ್ಟಿ ನೆಟ್ಟಿದೆ. ಸ್ನೇಹಿತರೇ, ಇಂದು ಭಾರತ ಪವನ ಶಕ್ತಿ ಸಾಮರ್ಥ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು ನಮ್ಮ ಎಂಜಿನಿಯರ್‌ಗಳ ಕಠಿಣ ಪರಿಶ್ರಮ, ನಮ್ಮ ಯುವಕರ ಶ್ರದ್ಧೆ ಮತ್ತು ನಮ್ಮ ರಾಷ್ಟ್ರದ ಸಾಮೂಹಿಕ ಇಚ್ಛಾಶಕ್ತಿಯ ಸಂಕೇತವಾಗಿದೆ.

ಸ್ನೇಹಿತರೇ,

ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ದೇಶದ ಹಲವು ರಾಜ್ಯಗಳು ಈ ವಲಯದಲ್ಲಿ ಸಾಧನೆಯನ್ನು ಮೇರೆದಿವೆ. ಹಿಂದೆ ಮರುಭೂಮಿಗಳು ಮಾತ್ರ ಗೋಚರಿಸುತ್ತಿದ್ದಂತಹ ಗುಜರಾತ್‌ನ ಕಚ್, ಪಾಠಣ್ ಮತ್ತು ಬನಾಸ್ ಕಾಂಠಾದಂತಹ ಪ್ರದೇಶಗಳು ಈಗ ದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನವನಗಳಿಗೆ ನೆಲೆಯಾಗಿವೆ. ಯುವಕರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ, ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ಉದ್ಯೋಗಕ್ಕಾಗಿ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯವಾಗಿವೆ.  ಇದು ಕೇವಲ ಪರಿಸರ ರಕ್ಷಣೆಯ ಮಾತಲ್ಲ, ಇದು ನಮ್ಮ ಭವಿಷ್ಯವನ್ನು ರಕ್ಷಿಸುವ ಕುರಿತಾಗಿದೆ. ಇದರಲ್ಲಿ ನಮ್ಮೆಲ್ಲರ ಪಾತ್ರವಿದೆ. ನಾವು ವಿದ್ಯುತ್ ಉಳಿತಾಯ ಮಾಡಬೇಕಿದೆ, ಶುದ್ಧ ಇಂಧನವನ್ನು ಅಳವಡಿಸಿಕೊಳ್ಳಬೇಕಿದೆ. ದೇಶದ ಪ್ರತಿಯೊಂದು ಹಂತದಲ್ಲೂ ಇಂತಹ ಪ್ರಯತ್ನಗಳು ಅವಶ್ಯಕವಾಗಿದೆ. ಏಕೆಂದರೆ ಈ ಕ್ರಮಗಳಿಂದಲೇ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದಾಗಿದೆ.

ಸ್ನೇಹಿತರೇ,

ಮೇ ತಿಂಗಳು ಒಂದು ಪವಿತ್ರ ಸಂದರ್ಭದೊಂದಿಗೆ ಪ್ರಾರಂಭವಾಗಲಿದೆ. ಕೆಲವೇ ದಿನಗಳಲ್ಲಿ, ನಾವು ಬುದ್ಧ ಪೂರ್ಣಿಮೆಯನ್ನು ಆಚರಿಸುತ್ತೇವೆ. ಎಲ್ಲ ದೇಶವಾಸಿಗಳಿಗೆ ನಾನು ಅನಂತ ಶುಭಾಶಯಗಳನ್ನು ಕೋರುತ್ತೇನೆ. ಭಗವಾನ್ ಗೌತಮ ಬುದ್ಧನ ಜೀವನ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ. ಶಾಂತಿ ನಮ್ಮೊಳಗೆ ಪ್ರಾರಂಭವಾಗುತ್ತದೆ ಎಂದು ಅವರು ನಮಗೆ ಬೋಧಿಸಿದ್ದಾರೆ ಮತ್ತು ಸ್ವತಃ ತನ್ನ ಮೇಲೆ ವಿಜಯವು ಅತ್ಯಂತ ದೊಡ್ಡ ವಿಜಯ ಎಂದು ವಿವರಿಸಿದ್ದಾರೆ. ಇಂದು ಜಗತ್ತು ಎದುರಿಸುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷಗಳನ್ನು ಗಮನಿಸಿದಾಗ, ಬುದ್ಧನ ಬೋಧನೆಗಳು ಮತ್ತಷ್ಟು ಮಹತ್ವದ್ದಾಗಿವೆ.

ಸ್ನೇಹಿತರೇ,

ದಕ್ಷಿಣ ಅಮೆರಿಕಾದ ಚಿಲಿಯಲ್ಲಿರುವ ಒಂದು ಸಂಸ್ಥೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಲಡಾಖ್‌ನಲ್ಲಿ ಜನಿಸಿದ ಡ್ರುಬ್ಬನ್ ಓಟ್ಜರ್ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಮುನ್ನಡೆಯುತ್ತಿದೆ. ಈ ಸಂಸ್ಥೆಯು ಜನರ ಜೀವನದಲ್ಲಿ ಧ್ಯಾನ ಮತ್ತು ಕರುಣೆ ಬೇರೆಯುವಂತೆ ಮಾಡುತ್ತಿದೆ.  ಕೊಚಿಗುವಾಜ್ ಕಣಿವೆಯಲ್ಲಿರುವ ಸ್ತೂಪವು ಜನರ ಮನದಲ್ಲಿ ಶಾಂತಿಯ ಭಾವನೆಯನ್ನು ಮೂಡಿಸುತ್ತದೆ. ಇದನ್ನು ನೋಡುವುದು ನಿಜಕ್ಕೂ ಹೆಮ್ಮೆಯ ವಿಷಯ. ಭಾರತದ ಪ್ರಾಚೀನ ಪರಂಪರೆ ಜಗತ್ತನ್ನು ತಲುಪುತ್ತಿದೆ. ದೂರದ ಪ್ರದೇಶಗಳ ಜನರು ಸಹ ಇದರಲ್ಲಿ ಒಗ್ಗೂಡುತ್ತಿದ್ದಾರೆ.

ಸ್ನೇಹಿತರೇ,

ಬೌದ್ಧ ಸಂಪ್ರದಾಯವು ನಮಗೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದನ್ನು ಕಲಿಸುತ್ತದೆ. ಭಗವಾನ್ ಬುದ್ಧನಿಗೆ ಒಂದು ಮರದ ಕೆಳಗೆ ಜ್ಞಾನೋದಯವಾಯಿತು. ಪ್ರಕೃತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶಾದ್ಯಂತ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿರುವ ಕರ್ಮ ವಿಹಾರವು ಒಂದು ಉತ್ತಮ ಉದಾಹರಣೆಯಾಗಿದೆ. ಈ ವಿಹಾರವು 100 ಎಕರೆಗಳಷ್ಟು ವಿಸ್ತಾರವಾದ ರೋಮಾಂಚಕ ಅರಣ್ಯವಾಗಿದೆ. ಈ ಕಾಡಿನಲ್ಲಿ 700 ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಲಾಗಿದೆ. ಸ್ನೇಹಿತರೇ, ಬುದ್ಧನ ಸಂದೇಶವು ಕೇವಲ ಭೂತಕಾಲಕ್ಕೆ ಸೀಮಿತವಾಗಿಲ್ಲ. ಅದು ಇಂದಿಗೂ ಪ್ರಸ್ತುತವಾಗಿದೆ ಮತ್ತು ಭವಿಷ್ಯಕ್ಕೆ ಕೂಡಾ ಅವಶ್ಯಕವಾಗಿದೆ. ಬುದ್ಧ ಪೂರ್ಣಿಮೆಯ ಈ ಸಂದರ್ಭವು ಸ್ಪೂರ್ತಿದಾಯಕವಾಗಿದೆ. ನಮ್ಮ ಜೀವನದಲ್ಲಿ ಶಾಂತಿಯನ್ನು ಹೆಚ್ಚಿಸೋಣ, ಕರುಣೆಯನ್ನು ಅಳವಡಿಸಿಕೊಳ್ಳೋಣ ಮತ್ತು ಸಮತೋಲನದಿಂದ ಮುಂದುವರಿಯೋಣ.

ನನ್ನ ಪ್ರಿಯ ದೇಶವಾಸಿಗಳೇ,

ನಮ್ಮ ದೇಶದಲ್ಲಿ ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿಯಿಂದ ಜನವರಿ 30 ರಂದು ಗಾಂಧೀಜಿಯವರ ಪುಣ್ಯತಿಥಿಯವರೆಗೆ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಬೀಟಿಂಗ್ ರಿಟ್ರೀಟ್ ಈ ಆಚರಣೆಯ ಒಂದು ಪ್ರಮುಖ ಭಾಗವಾಗಿದೆ. ಇಂದು ನಿಮ್ಮೊಂದಿಗೆ ಬೀಟಿಂಗ್ ರಿಟ್ರೀಟ್ ಬಗ್ಗೆ ನಾನು ಚರ್ಚಿಸುತ್ತಿದ್ದೇನೆ ಏಕೆಂದರೆ ಅದರ ಹಿಂದೆ ಒಂದು ವಿಶೇಷ ಕಾರಣವಿದೆ.

ಸ್ನೇಹಿತರೇ,

ಈ ಸಮಾರಂಭವು ವಿವಿಧ ಬ್ಯಾಂಡ್‌ಗಳ ವೈವಿಧ್ಯಮಯ ಸಂಗೀತ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಕಳೆದ ಕೆಲವು ವರ್ಷಗಳಿಂದ, ಭಾರತೀಯ ಸಂಗೀತದ ಸೇರ್ಪಡೆ ಇದರಲ್ಲಿ ವೃದ್ಧಿಸಿದೆ ಮತ್ತು ಇದು ದೇಶಾದ್ಯಂತ ಜನಪ್ರಿಯ ಕಾರ್ಯಕ್ರಮವಾಗಿ  ಪರಿಣಮಿಸುತ್ತಿದೆ. ಈ ವರ್ಷದ ಬೀಟಿಂಗ್ ರಿಟ್ರೀಟ್ ಸಮಾರಂಭವು ಸಹ ಬಹಳ ಸ್ಮರಣೀಯವಾಗಿತ್ತು. ವಾಯುಪಡೆ, ಸೇನಾ ಪಡೆ, ನೌಕಾಪಡೆ ಮತ್ತು CAPF ಬ್ಯಾಂಡ್‌ಗಳು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದವು .

ಸ್ನೇಹಿತರೇ,

ಅತ್ಯುತ್ತಮ ಸಂಗೀತದ ಜೊತೆಗೆ ರೋಮಾಂಚಕ ರಚನೆಗಳ ಈ ಕಾರ್ಯಕ್ರಮವು ಎಲ್ಲರ ಆಕರ್ಷಣೆಗೆ ಒಳಗಾಗಿತ್ತು. ವಾಯುಪಡೆಯ ಬ್ಯಾಂಡ್ ಸಿಂಧೂರ್ ರಚನೆಯನ್ನು ರಚಿಸಿತು. ನೌಕಾ ಬ್ಯಾಂಡ್ ಮತ್ಸ್ಯ ಯಂತ್ರ ರಚನೆಯನ್ನು ರಚಿಸಿತು. ಆರ್ಮಿ ಬ್ಯಾಂಡ್‌ನ ಪ್ರದರ್ಶನವು ವಂದೇ ಮಾತರಂನ 150 ವರ್ಷಗಳ ಮತ್ತು ಕ್ರಿಕೆಟ್‌ನಲ್ಲಿ ಭಾರತದ ಯಶಸ್ಸನ್ನು ಪ್ರದರ್ಶಿಸಿತು.

ಸ್ನೇಹಿತರೇ,

ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಮುಕ್ತಾಯದ ನಂತರ, ಈ ಎಲ್ಲ ಕಠಿಣ ಪರಿಶ್ರಮ ಮತ್ತು ಸಾಧನೆ ಕ್ರಮೇಣ ಮಸುಕಾಗುತ್ತಾ ಸಾಗುತ್ತದೆ, ಆದರೆ ಈಗ ಅದರ  ಪುನರುಜ್ಜೀವನಕ್ಕಾಗಿ ಉತ್ತಮ ಪ್ರಯತ್ನ ಕೈಗೊಳ್ಳಲಾಗಿದೆ. ಬೀಟಿಂಗ್ ರಿಟ್ರೀಟ್‌ನ ಸಂಗೀತವು ಪ್ರಥಮ ಬಾರಿಗೆ WAVES OTT ನಲ್ಲಿಯೂ ಲಭ್ಯವಿದೆ. ಭವಿಷ್ಯದಲ್ಲಿ ಇತರ ವೇದಿಕೆಗಳಲ್ಲಿಯೂ ಇದು ಲಭ್ಯವಿರುತ್ತದೆ - ನೀವು ಖಂಡಿತ ಅದನ್ನು ಕೇಳಲೇಬೇಕು. ಇದರಿಂದ ನಮ್ಮ ಸಶಸ್ತ್ರ ಪಡೆಗಳು ಮತ್ತು ಅವರ ಸಂಪ್ರದಾಯಗಳ ಬಗ್ಗೆ ನೀವು ತುಂಬಾ ಹೆಮ್ಮೆಪಡುತ್ತೀರಿ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ, ದೇಶದ ವಿವಿಧ ಭಾಗಗಳಿಂದ ಪ್ರಕೃತಿ ಸಂರಕ್ಷಣೆಯ ಸ್ಪೂರ್ತಿದಾಯಕ ಕಥೆಗಳು ಕೇಳಿಬರುತ್ತಿವೆ. ಈ ಕಥೆಗಳು ನಮಗೆ ಭರವಸೆ ನೀಡುತ್ತವೆ ಮತ್ತು ನಮ್ಮಲ್ಲಿ ಹೆಮ್ಮೆಯನ್ನು ಮೂಡಿಸುತ್ತವೆ. 'ಮನದ ಮಾತು' ಕೇಳುಗರೊಂದಿಗೆ ನಾನು ಕೆಲವು ಉದಾಹರಣೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅವನ್ನು ಕೇಳಿ ನಿಮಗೆ ಸಂತೋಷವಾಗಬಹುದು. ಮೊದಲು, ರನ್ ಆಫ್ ಕಚ್ ಬಗ್ಗೆ ಮಾತನಾಡೋಣ. ಮಳೆಗಾಲ ಮುಗಿದ ತಕ್ಷಣ, ಇಲ್ಲಿನ ಭೂಮಿ ಜೀವತಳೆಯುತ್ತದೆ. ಪ್ರತಿ ವರ್ಷ, ಲಕ್ಷಾಂತರ ಫ್ಲೆಮಿಂಗೊ ಪಕ್ಷಿಗಳು ಇಲ್ಲಿಗೆ ಭೇಟಿ ನೀಡುತ್ತವೆ. ಇಡೀ ಪ್ರದೇಶವು ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ, ಆದ್ದರಿಂದ ಇದನ್ನು 'ಫ್ಲೆಮಿಂಗೊ ​​ನಗರ' ಎಂದು ಕರೆಯಲಾಗುತ್ತದೆ. ಈ ಪಕ್ಷಿಗಳು ಇಲ್ಲಿಯೇ ತಮ್ಮ ಗೂಡುಗಳನ್ನು ಕಟ್ಟುತ್ತವೆ ಮತ್ತು ತಮ್ಮ ಮರಿಗಳನ್ನು ಬೆಳೆಸುತ್ತವೆ. ಕಚ್‌ನ ಜನರು ಅವುಗಳನ್ನು 'ಲಾಖಾ ಅವರ ಅತಿಥಿಗಳು' ಎಂದು ಕರೆಯುತ್ತಾರೆ. ಈಗ, ಲಾಖಾ ಅವರ ಈ ಅತಿಥಿಗಳು ಕಚ್‌ನಲ್ಲಿ ಪರಿಸರ ಸಂರಕ್ಷಣೆಯ ಸುಂದರ ಸಂಕೇತವಾಗಿವೆ.

ಸ್ನೇಹಿತರೇ,

ಎರಡನೇ ಕಥೆ ಮಾನವರು ಮತ್ತು ವನ್ಯಜೀವಿಗಳ ನಡುವಿನ ಸಹಕಾರದ ಕುರಿತಾಗಿದೆ ಮತ್ತು ಇದು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದು. ಇಲ್ಲಿಯ ತರಾಯಿ ಪ್ರದೇಶದಲ್ಲಿ, ಸುಗ್ಗಿಯ ಸಮಯದಲ್ಲಿ ಆನೆಗಳ ಹಿಂಡುಗಳು ಗ್ರಾಮಗಳತ್ತ ಸಾಗಿ ಬರುತ್ತವೆ. ಇದು ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಈಗ ಉತ್ತರ ಪ್ರದೇಶದಲ್ಲಿ "ಗಜ ಮಿತ್ರ" ದಂತಹ ಪ್ರಯತ್ನಗಳು ಪ್ರಾರಂಭವಾಗಿವೆ. ಆನೆಗಳನ್ನು ಕಾಯಲು ಗ್ರಾಮಸ್ಥರು ತಂಡಗಳನ್ನು ರಚಿಸಿದ್ದಾರೆ. ಅವರು ಸಮಯಕ್ಕೆ ಸರಿಯಾಗಿ ಗ್ರಾಮಸ್ಥರನ್ನು ಎಚ್ಚರಿಸುತ್ತಾರೆ. ಇದು ಸಂಘರ್ಷವನ್ನು ಕಡಿಮೆ ಮಾಡುತ್ತಿದೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತಿದೆ.

ಸ್ನೇಹಿತರೇ,

ಮಧ್ಯ ಭಾರತದಿಂದ ಕೂಡ ಒಂದು ಒಳ್ಳೆಯ ಸುದ್ದಿ ಬಂದಿದೆ. ಛತ್ತೀಸ್‌ಗಢದಲ್ಲಿ ಕೃಷ್ಣಮೃಗಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ಅವುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿತ್ತು, ಆದರೆ ನಿರಂತರ ಪ್ರಯತ್ನಗಳು ಸಂರಕ್ಷಣಾ ಕ್ರಮಗಳನ್ನು ಹೆಚ್ಚಿಸಲಾಯಿತು. ಇಂದು, ಅವು ಮತ್ತೊಮ್ಮೆ ತೆರೆದ ಮೈದಾನಗಳಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿವೆ. ಇದು ನಮ್ಮ ಕಳೆಗುಂದುತ್ತಿದ್ದ ಪರಂಪರೆಯ ಪುನಃಸ್ಥಾಪಣೆಯನ್ನು ಸೂಚಿಸುತ್ತದೆ. ಗೋದಾವನ್ ಎಂದು ಕರೆಯಲಾಗುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆಯಲ್ಲಿ ಇದೇ ರೀತಿಯ ಭರವಸೆ ಗೋಚರಿಸುತ್ತಿದೆ. ಈ ಪಕ್ಷಿ ನಮ್ಮ ಮರುಭೂಮಿ ಪ್ರದೇಶಗಳ ವಿಶಿಷ್ಟ ಆಕರ್ಷಣೆಯಾಗಿತ್ತು. ಆದಾಗ್ಯೂ, ಅದರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ಎಂದರೆ ಅದು ಅಳಿವಿನ ಅಂಚಿಗೆ ಸಾಗಿತ್ತು. ಆದರೆ ಈಗ ಅದರ ಸಂರಕ್ಷಣೆಗಾಗಿ ಒಂದು ಪ್ರಮುಖ ಅಭಿಯಾನ ನಡೆಯುತ್ತಿದೆ. ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಈಗ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆ.

ಸ್ನೇಹಿತರೇ,

ಪ್ರಕೃತಿ ಮತ್ತು ಮಾನವರು ಪ್ರತ್ಯೇಕವಾಗಿಲ್ಲ. ನಾವು ಪರಸ್ಪರ ಪಾಲುದಾರರು. ನಾವು ಪ್ರಕೃತಿಯನ್ನು ಅರ್ಥಮಾಡಿಕೊಂಡಾಗ, ಅದನ್ನು ಗೌರವಿಸಿದಾಗ ಮತ್ತು ಅದರೊಂದಿಗೆ ಸಾಮರಸ್ಯದಿಂದ ಬದುಕಿದಾಗ, ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು, ಈ ಬದಲಾವಣೆಯು ದೇಶದ ಪ್ರತಿಯೊಂದು ಮೂಲೆಯಿಂದಲೂ ಹೊಸ ಭರವಸೆಯಾಗಿ ಹೊರಹೊಮ್ಮುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಈಶಾನ್ಯ ನಮಗೆಲ್ಲರಿಗೂ ಅಷ್ಟಲಕ್ಷ್ಮಿ ಎನಿಸಿದೆ. ಇಲ್ಲಿ ಸಾಕಷ್ಟು ಪ್ರತಿಭೆ ಇದೆ ಮತ್ತು ಈಶಾನ್ಯದ ಪ್ರಾಕೃತಿಕ ಸೌಂದರ್ಯ ಕೂಡಾ ಎಲ್ಲರ ಗಮನ ಸೆಳೆಯುತ್ತದೆ. ‘ಮನದ ಮಾತಿನಲ್ಲಿ’ ಕೂಡಾ ನಾವು ಈಶಾನ್ಯದ ಜನರ ಸಾಧನೆಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಾ ಬಂದಿದ್ದೇವೆ. ಇಂದು ಅಂತಹದ್ದೇ ಒಂದು ಸಾಧನೆಯ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ – ಅದೆಂದರೆ, ಬಿದಿರಿನ ವಲಯದಲ್ಲಿ ಈಶಾನ್ಯದ ಯಶಸ್ಸು. ಸ್ನೇಹಿತರೇ, ಯಾವ ವಸ್ತುವನ್ನು ಮೊದಲು ಹೊರೆಯ ರೂಪದಲ್ಲಿ ನೋಡಲಾಗುತ್ತಿತ್ತೋ, ಅದೇ ಇಂದು ಉದ್ಯೋಗ, ವ್ಯವಹಾರ ಮತ್ತು ಆವಿಷ್ಕಾರಕ್ಕೆ ಹೊಸದೊಂದು ಪ್ರಚೋದನೆ ನೀಡುತ್ತಿದೆ. ನಮ್ಮ ತಾಯಂದಿರು- ಸೋದರಿಯರು ಇದರ ಅತಿ ದೊಡ್ಡ ಫಲಾನುಭವಿಗಳಾಗಿದ್ದಾರೆ. ಬಿದಿರಿನ ವ್ಯಾಖ್ಯಾನವನ್ನು ಬದಲಿಸುವ ಮೂಲಕ ಅದೆಷ್ಟು ದೊಡ್ಡ ಬದಲಾವಣೆ ಆಗಿದೆಯೆಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸ್ನೇಹಿತರೇ, ಇಂಗ್ಲೀಷರು ಮಾಡಿದ್ದ ಕಾನೂನಿನ ಪ್ರಕಾರ ಬಿದಿರನ್ನು ಮರದ ರೂಪದಲ್ಲಿ ವ್ಯಾಖ್ಯಾನಿಸಲಾಗಿತ್ತು ಮತ್ತು ಇದಕ್ಕೆ ಸಂಬಂಧಿಸಿದ ಕಾನೂನುಗಳು ಬಹಳ ಕಠಿಣವಾಗಿದ್ದವು. ಬಿದಿರಿನ ಸಾಗಾಣಿಕೆಯು ಬಹಳ ಕಷ್ಟವಾಗಿತ್ತು. ಹೀಗಾಗಿ ಇಲ್ಲಿನ ಜನರು ಬಿದಿರಿಗೆ ಸಂಬಂಧಿಸಿದ ಕೆಲಸ-ವ್ಯವಹಾರಗಳಿಂದ ದೂರವಾಗಿದ್ದರು. ಸ್ನೇಹಿತರೇ, 2017 ರಲ್ಲಿ ನಾವು ಕಾನೂನಿನಲ್ಲಿ ಬದಲಾವಣೆ ತಂದು ಬಿದಿರನ್ನು ಮರದ ವರ್ಗದಿಂದ ತೆಗೆದುಹಾಕಿದೆವು. ಇದರ ಫಲಿತಾಂಶ ಈಗ ಎಲ್ಲರ ಮುಂದಿದೆ. ಇಂದು ಇಡೀ ಈಶಾನ್ಯದಲ್ಲಿ ಬಿದಿರು ವಲಯ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಸತತವಾಗಿ ಆವಿಷ್ಕಾರ ಮಾಡಿ, ಇದರ ಮೌಲ್ಯವರ್ಧನೆ ಮಾಡುತ್ತಿದ್ದಾರೆ.  

ಸ್ನೇಹಿತರೇ,

ತ್ರಿಪುರಾದ ಗೋಮತಿ ಜಿಲ್ಲೆಯ ಬಿಜಾಯ್ ಸೂತ್ರಧಾರ್ ಮತ್ತು ದಕ್ಷಿಣ ತ್ರಿಪುರಾದ ಪ್ರದೀಪ್ ಚಕ್ರವರ್ತಿ ಅವರ ಬಗ್ಗೆ ಮಾತನಾಡೋಣ. ಇವರು ಹೊಸ ಕಾನೂನನ್ನು ತಮಗೆ ದೊರೆತಿರುವ ಅಪೂರ್ವ ಅವಕಾಶದ ರೂಪದಲ್ಲಿ ನೋಡಿದರು. ನಂತರ ಅವರು ತಮ್ಮ ಕೆಲಸವನ್ನು ತಂತ್ರಜ್ಞಾನದೊಂದಿಗೆ ಜೋಡಿಸಿದರು. ಈಗ ಅವರು ಮೊದಲಿಗಿಂತ ಬಹಳ ಹೆಚ್ಚಿನ ಪ್ರಮಾಣದಲ್ಲಿ ಮತ್ತಷ್ಟು ಉತ್ತಮವಾಗಿ ಬಿದಿರಿನ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ನಾಗಾಲ್ಯಾಂಡ್ ನ ದೀಮಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಅನೇಕ ಸ್ವ-ಸಹಾಯ ಗುಂಪುಗಳಿವೆ, ಇವು ಬಿದಿರು ಸಂಬಂಧಿತ ಆಹಾರ ಉತ್ಪನ್ನಗಳಲ್ಲಿ ಮೌಲ್ಯ ವರ್ಧನೆ ಮಾಡಿವೆ. ಅಲ್ಲಿ ಬಿದಿರಿನ ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಖೋರೋಲೋ ಕ್ರಿಯೇಟಿವ್ ಕ್ರಾಫ್ಟ್ಸ್ ನಂತರ ತಂಡಗಳು ಕೂಡಾ ಇವೆ.

ಸ್ನೇಹಿತರೇ,

ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ ಇಂತಹದ್ದೆ ಒಂದು ತಂಡವಿದ್ದು, ಇವು ಬಿದಿರಿನ tissue culture ಮತ್ತು poly-house management ಬಗ್ಗೆ ಕೆಲಸ ಮಾಡುತ್ತಿದೆ. ನನಗೆ ಸಿಕ್ಕಿಂನಲ್ಲಿ ಗ್ಯಾಂಗ್ಟೋಕ್ ಸಮೀಪದಲ್ಲಿ Lagastal Bamboo Enterprise ತಂಡದ ಬಗ್ಗೆ ಮಾಹಿತಿ ದೊರೆಯಿತು. ಇದು ಬಿದಿರಿನಿಂದ ಕರಕುಶಲ ವಸ್ತುಗಳು, ಅಗರಬತ್ತಿ ಕಡ್ಡಿಗಳು, ಪೀಠೋಪಕರಣಗಳು ಮತ್ತು ಒಳಾಂಗಣ ಸೌಂದರ್ಯ ವಸ್ತುಗಳನ್ನು ತಯಾರಿಸುತ್ತದೆ.

ಸ್ನೇಹಿತರೇ,

ನಾನು ಇಲ್ಲಿ ಕೆಲವೇ ಉದಾಹರಣೆಗಳನ್ನು ಮಾತ್ರ ನೀಡಿದ್ದೇನೆ. ನಮ್ಮ ದೇಶದಲ್ಲಿ ಬಿದಿರು ವಲಯದ ಯಶೋಗಾಥೆಗಳ ಪಟ್ಟಿ ಬಹಳ ಉದ್ದವಾಗಿದೆ. ಈಶಾನ್ಯದಿಂದ ಕೆಲವು ಬಿದಿರಿನ ಉತ್ಪನ್ನಗಳನ್ನು ಖರೀದಿಸಬೇಕೆಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನೀವು ಅವುಗಳನ್ನು ಇತರರಿಗೆ ಉಡುಗೊರೆಯಾಗಿಯೂ ನೀಡಬಹುದು. ನಿಮ್ಮ ಪ್ರಯತ್ನಗಳು ಬಿದಿರಿನ ಉತ್ಪನ್ನಗಳನ್ನು ತಯಾರಿಸಲು ಅವಿಶ್ರಾಂತವಾಗಿ ಬೆವರು ಹರಿಸಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ವೇಗವಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ತಂತ್ರಜ್ಞಾನ ಎನ್ನುವುದು ನಮ್ಮ ಜೀವನದಲ್ಲಿ ಅತಿ ದೊಡ್ಡ ಭಾಗವಾಗಿ ಬಿಟ್ಟಿದೆ. ಇಂದು ನಾವು ನಮ್ಮ ಭೂತಕಾಲವನ್ನು ವರ್ತಮಾನ ಕಾಲದೊಂದಿಗೆ ಸಂಪರ್ಕಿಸುವಲ್ಲಿ ಕೂಡಾ ತಂತ್ರಜ್ಞಾನದ ಅದ್ಭುತಗಳನ್ನು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಒಂದು ಬೆಳವಣಿಗೆಯಾಗಿದ್ದು, ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಮತ್ತು ಇತಿಹಾಸ ಆಸಕ್ತರಿಗೆ ಬಹಳ ಸಂತೋಷವಾಗಿದೆ. ಸ್ನೇಹಿತರೇ ಕೆಲವೇ ದಿನಗಳ ಹಿಂದೆ, National Archives of India ಒಂದು ವಿಶೇಷ ಪೋರ್ಟಲ್ ನಲ್ಲಿ ಒಂದು ವಿಶಿಷ್ಠ ಡೇಟಾಬೇಸ್ ಹಂಚಿಕೊಂಡಿದೆ. ಈ ಸಂಸ್ಥೆಯು 200 ದಶಲಕ್ಷಕ್ಕಿಂತೂ ಅಧಿಕ ಅಮೂಲ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಇವುಗಳಲ್ಲಿ ಕೆಲವು ಸಾಕಷ್ಟು ಆಕರ್ಷಕವಾಗಿವೆ - ಬರ್ಚ್ ತೊಗಟೆಯ ಮೇಲೆ ಬರೆಯಲಾದ ಗಿಲ್ಗಿಟ್ ಹಸ್ತಪ್ರತಿಗಳು 7ನೇ ಶತಮಾನದಷ್ಟು ಹಿಂದಿನವು. ಇಲ್ಲಿ ನೀವು 8ನೇ ಶತಮಾನದ ಆಸಕ್ತಿದಾಯಕ ಪಠ್ಯವಾದ ಶ್ರೀ ಭೂವಲಯವನ್ನು ಸಹ ಕಾಣಬಹುದು. ಸಂಖ್ಯೆಗಳನ್ನು ಆಧರಿಸಿದ ಈ ಪಠ್ಯವು ಗ್ರಿಡ್ ರೂಪದಲ್ಲಿದೆ. ರಾಣಿ ಲಕ್ಷ್ಮಿಬಾಯಿ ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ಪತ್ರಗಳನ್ನು ಕೂಡಾ ನೀವು ವೀಕ್ಷಿಸಬಹುದು. ಇವು 1857  ರಲ್ಲಿ ಅವರು ಕೈಗೊಂಡ ಕೆಲವು ನಿರ್ಧಾರಗಳನ್ನು ಬಹಿರಂಗಪಡಿಸುತ್ತವೆ, ಮತ್ತು ಇದು ಅವರ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಹಾನ್ ಅಭಿಮಾನಿಗಳಿಗಾಗಿ, ನೇತಾಜಿಯವರ ಜೀವನ, ಆಜಾದ್ ಹಿಂದ್ ಫೌಜ್ ಮತ್ತು ಅವರ ಭಾಷಣಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಇಲ್ಲಿವೆ. ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಸಹ ನೀವು ಇಲ್ಲಿ ಕಾಣಬಹುದು. ಇವುಗಳಲ್ಲಿ BHU ಸ್ಥಾಪನೆ ಮತ್ತು ಹಿಂದಿ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಸೇರಿವೆ. ನಮ್ಮ ಸಂವಿಧಾನ ಸಭೆಗೆ ಸಂಬಂಧಿಸಿದ ಅನೇಕ ವಿಶಿಷ್ಟ ದಾಖಲೆಗಳು ಇಲ್ಲಿ ಲಭ್ಯವಿದೆ. ನೀವೆಲ್ಲರೂ www.abhilekh-patal.in ಗೆ ಭೇಟಿ ನೀಡಬೇಕೆಂದು ನಾನು ಕೋರುತ್ತೇನೆ. ಇದು ನಿಮಗೆ ನಮ್ಮ ಇತಿಹಾಸದ ಅದ್ಭುತ ಅನುಭವವನ್ನು ನೀಡುತ್ತದೆ.

ಸ್ನೇಹಿತರೇ,

ನೀವು ವಿಶ್ವಾದ್ಯಂತದ ಅತ್ಯಂತ ಪ್ರತಿಭಾನ್ವಿತರ ನಡುವೆ ಇರುವಂತೆಯೂ, ನಿಮ್ಮಲ್ಲಿ ಗಣಿತದ ಅತ್ಯಂತ ಕಠಿಣ ಪ್ರಶ್ನೆಯಿದೆ ಎಂದು ಊಹಿಸಿಕೊಳ್ಳಿ. ಇದನ್ನು ಬಗೆಹರಿಸುವುದಕ್ಕಾಗಿ ಇರುವ ಸಮಯ – ಕೇವಲ ನಾಲ್ಕೂವರೆ ಗಂಟೆಗಳು ಮಾತ್ರ. ಅಂದರೆ ಸಮಯ ಬಹಳ ಕಡಿಮೆಯಿದೆ ಮತ್ತು ಸ್ಪರ್ಧೆ ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ ಮತ್ತು ತೀವ್ರವಾಗಿದೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ ಗಾಬರಿಯಾಗುವುದು, ಆತಂಕಕ್ಕೆ ಒಳಗಾಗುವುದು ಬಹಳ ಸಹಜ. ಆದರೆ ಇಂತಹ ಪರಿಸ್ಥಿತಿಗಳಲ್ಲೂ ನಮ್ಮ ಹೆಣ್ಣು ಮಕ್ಕಳು ಅದ್ಭುತವನ್ನೇ ಮಾಡಿ ತೋರಿಸಿದ್ದಾರೆ. ಈ ತಿಂಗಳಾರಂಭದಲ್ಲಿ ಫ್ರಾನ್ಸ್ ನ ಬೋರದೋ (Bordeaux) ನಲ್ಲಿ European Girls Mathematical Olympiad ಆಯೋಜಿಸಲಾಗಿತ್ತು. ಗಣಿತದಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಇದೊಂದು ಅತ್ಯಂತ ದೊಡ್ಡ ಸ್ಪರ್ಧೆಯಾಗಿತ್ತು. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದೆನಿಸಿದೆ. ಈ Olympiad ನಲ್ಲಿ ನಮ್ಮ ಹೆಣ್ಣು ಮಕ್ಕಳು ಈವರೆಗಿನ ಅತ್ಯಂತ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಪ್ರತಿಭಾವಂತ ತಂಡದ ಬಗ್ಗೆ ನನಗೆ ಬಹಳಷ್ಟು ಹೆಮ್ಮೆ ಇದೆ. ಇದರಲ್ಲಿ ಮುಂಬಯಿನ ಶ್ರೇಯಾ ಮುಂಧ್ರಾ, ತಿರುವನಂತಪುರಂ ನ ಸಂಜನಾ ಚಾಕೋ, ಚೆನ್ನೈನ ಶಿವಾನಿ ಭರತ್ ಕುಮಾರ್ ಮತ್ತು ಕೊಲ್ಕತ್ತಾದ ಶ್ರಿಮೋಯಿ ಬೇರಾ ಸೇರಿದ್ದರು. ಇದರಲ್ಲಿ ನಮ್ಮ ತಂಡ ವಿಶ್ವದಲ್ಲಿ ಆರನೇ ಸ್ಥಾನ ಪಡೆದುಕೊಂಡಿತು. ಶ್ರೇಯಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು,  ಸಂಜನಾ ಬೆಳ್ಳಿ ಪದಕ ಹಾಗೂ ಶಿವಾನಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸ್ನೇಹಿತರೇ,

ಈ Olympiad ನಾಗಿ ಭಾರತದಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಬಹಳ ಕಠಿಣವಾಗಿತ್ತು. ಇದಕ್ಕಾಗಿ ಒಂದು ಬಹು-ಹಂತ ಆಯ್ಕೆ ಪ್ರಕ್ರಿಯೆಯಿದೆ. ಇದರಲ್ಲಿ ಪ್ರಾದೇಶಿಕ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿ ದಾಟಬೇಕಾಗುತ್ತದೆ. ಇದಾದ ನಂತರ ಅತ್ಯುತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ ನ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್‌ ನಲ್ಲಿ ನಡೆಯುವ ಒಂದು ತಿಂಗಳ ಕಾಲದ ಗಣಿತ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಈ ಶಿಬಿರದ ಮುಕ್ತಾಯದಲ್ಲಿ ತಂಡದ ಆಯ್ಕೆ ಪರೀಕ್ಷೆ ಇರುತ್ತದೆ. ಇದರಲ್ಲಿ ನೀಡುವ ಪ್ರದರ್ಶನದಲ್ಲಿ ಆಧಾರದಲ್ಲಿ ಭಾರತದ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ಸ್ನೇಹಿತರೇ,

ಪ್ರತಿ ವರ್ಷ ದೇಶಾದ್ಯಂತ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಈ Mathematical Olympiad Program ನಲ್ಲಿ ಪಾಲ್ಗೊಳ್ಳುತ್ತಾರೆ. ಕಾಲಕ್ರಮೇಣ ಪಾಲ್ಗೊಳ್ಳುವವರ ಈ ಸಂಖ್ಯೆ ಹೆಚ್ಚಾಗುತ್ತಿದೆ, ಅಂದರೆ ಹೆಣ್ಣುಮಕ್ಕಳಲ್ಲಿ Olympiad ನ ಈ ಸಂಸ್ಕೃತಿ ತೀವ್ರಗತಿಯಲ್ಲಿ ಜನಪ್ರಿಯವಾಗುತ್ತಿದೆ. ಈ ಭರವಸೆಯ ಹೆಣ್ಣುಮಕ್ಕಳನ್ನು ಬೆಂಬಲಿಸಿದ್ದಕ್ಕಾಗಿ ಅವರ ಪೋಷಕರನ್ನು ನಾನು ಶ್ಲಾಘಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ದೇಶದಲ್ಲಿ ಈಗ ಒಂದು ಮುಖ್ಯವಾದ ಅಭಿಯಾನ ನಡೆಯುತ್ತಿದ್ದು, ಈ ಕುರಿತಂತೆ ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇ ಬೇಕು. ಇದೇ ಜನಗಣತಿ ಅಭಿಯಾನ, ಇದು ವಿಶ್ವದ ಅತಿದೊಡ್ಡ ಜನಗಣತಿಯಾಗಿದೆ. ಸ್ನೇಹಿತರೇ, ಈಗಾಗಲೇ ಇತರ ಜನಗಣತಿಯಲ್ಲಿ ಪಾಲ್ಗೊಂಡಿರುವವರಿಗೂ, ಈ ಬಾರಿಯ ಜನಗಣತಿ ಅವರ ಮೊದಲಿನ ಅನುಭವಕ್ಕಿಂತ ಭಿನ್ನವಾಗಿರಲಿದೆ. ಜನಗಣತಿ 2027 ಅನ್ನು ಡಿಜಿಟಲ್ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನು ನೇರವಾಗಿ ಡಿಜಿಟಲ್ ಮಾಧ್ಯಮ ಮೂಲಕ ದಾಖಲಿಸಲಾಗುತ್ತಿದೆ. ಮನೆ ಮನೆಗೆ ತೆರಳುವ ಸಿಬ್ಬಂದಿಗಳ ಬಳಿ ಮೊಬೈಲ್ ಆಪ್ ಇರುತ್ತದೆ. ಅವರು ನಿಮ್ಮೊಂದಿಗೆ ಮಾತನಾಡಿ, ಮಾಹಿತಿಯನ್ನು ಅದರಲ್ಲೇ ದಾಖಲಿಸುತ್ತಾರೆ. ಸ್ನೇಹಿತರೇ, ಈ ಬಾರಿ ಜನಗಣಿಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಸರಳೀಕೃತಗೊಳಿಸಲಾಗಿದೆ, ನೀವು ಸ್ವತಃ ನಿಮ್ಮ ಕುರಿತ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಸಿಬ್ಬಂದಿ ಆಗಮಿಸುವುದಕ್ಕೆ 15 ದಿನಗಳಿಗೆ ಮುನ್ನವೇ ನಿಮಗಾಗಿ ಸೌಲಭ್ಯ ಆರಂಭವಾಗುತ್ತದೆ. ನೀವು ನಿಮ್ಮ ಸಮಯಕ್ಕೆ ಅನುಗುಣವಾಗಿ ಮಾಹಿತಿ ತುಂಬಬಹುದಾಗಿದೆ. ನೀವು ಪ್ರಕ್ರಿಯೆ ಪೂರ್ಣಗೊಳಿಸಿದಾಗ, ನಿಮಗೆ ಒಂದು ವಿಶೇಷ ಐಡಿ ದೊರೆಯುತ್ತದೆ. ಈ ಐಡಿ ನಿಮ್ಮ ಮೊಬೈಲ್ ಅಥವಾ ನಿಮ್ಮ ಇ-ಮೇಲ್ ನಲ್ಲಿ ಬರುತ್ತದೆ.  ನಂತರ ಸಿಬ್ಬಂದಿ ನಿಮ್ಮ ಮನೆಗೆ ಬಂದಾಗ, ನೀವು ನಿಮ್ಮ ಈ ಐಡಿ ತೋರಿಸಿ ಮಾಹಿತಿ ದೃಢೀಕರಿಸಬಹುದು. ಇದರಲ್ಲಿ ನೀವು ಪುನಃ ಮಾಹಿತಿ ನೀಡುವ ಅಗತ್ಯ ಇರುವುದಿಲ್ಲ. ಸಮಯದ ಉಳಿತಾಯವೂ ಹೌದು ಮತ್ತು ಪ್ರಕ್ರಿಯೆ ಸುಲಭತರವೂ ಹೌದು. ಸ್ನೇಹಿತರೇ, ಸ್ವಯಂ ಎಣಿಕೆ ಕಾರ್ಯ ಪೂರ್ಣಗೊಂಡ ರಾಜ್ಯಗಳಲ್ಲಿ, ಜನಗಣತಿ ಸಿಬ್ಬಂದಿ ಮನೆಗಳ ಪಟ್ಟಿ ಮಾಡುವ ಕೆಲಸವನ್ನು ಸಹ ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ, ಸುಮಾರು 1 ಕೋಟಿ 20  ಲಕ್ಷ ಕುಟುಂಬಗಳ ಮನೆಗಳ ಪಟ್ಟಿ ಮಾಡುವ ಕೆಲಸ ಪೂರ್ಣಗೊಂಡಿದೆ. ಸ್ನೇಹಿತರೇ, ದೇಶದ ಜನಗಣತಿ ಕೇವಲ ಸರ್ಕಾರಿ ಕೆಲಸವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ನಿಮ್ಮ ಭಾಗವಹಿಸುವಿಕೆ ಬಹಳ ಮುಖ್ಯ. ನೀವು ನೀಡಿದ ಮಾಹಿತಿಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ, ಅದನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಅದನ್ನು ಡಿಜಿಟಲ್ ಭದ್ರತೆಯಿಂದ ರಕ್ಷಿಸಲಾಗುತ್ತದೆ. ಬನ್ನಿ, ನಾವೆಲ್ಲರೂ ಒಟ್ಟಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸೋಣ. ಜನಗಣತಿ 2027 ಅನ್ನು ಯಶಸ್ವಿಗೊಳಿಸೋಣ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಆಹಾರ, ಪಾನೀಯ ಸೇವನೆ ಸಂಪ್ರದಾಯ ಎನ್ನುವುದು ಕೇವಲ ರುಚಿಗೆ ಸೀಮಿತವಾಗಿಲ್ಲ. ಭಾರತೀಯ ಚೀಸ್ ಈ ಸಂಪ್ರದಾಯದ ಆಸಕ್ತಿದಾಯಕ ಭಾಗವಾಗಿದೆ. ಕೆಲವು ದಿನಗಳ ಹಿಂದೆ, ನಾನು ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಬ್ರೆಜಿಲ್‌ ನಲ್ಲಿ ನಡೆದ ಅಂತಾರಾಷ್ಟ್ರೀಯ ಚೀಸ್ ಸ್ಪರ್ಧೆಯಲ್ಲಿ ಎರಡು ಭಾರತೀಯ ಚೀಸ್ ಬ್ರಾಂಡ್‌ ಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿವೆ. ಈ ಸಾಧನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚಿಸಲಾಯಿತು. ಭಾರತದಲ್ಲಿ ಚೀಸ್‌ ನ ವೈವಿಧ್ಯತೆಯನ್ನು ಸಹ ಚರ್ಚಿಸಬೇಕು ಎಂದು ಅನೇಕರು ನನಗೆ ಹೇಳಿದರು.

ಸ್ನೇಹಿತರೇ,

ಭಾರತದ ಡೈರಿ ವಲಯದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದೆ. ಈ ವಲಯದಲ್ಲಿ ಮೌಲ್ಯ ವರ್ಧನೆಯು ನಮ್ಮ ಸಾಂಪ್ರದಾಯಿಕ ರುಚಿಗೆ ಹೊಸದೊಂದು ಗುರುತು ನೀಡಿದೆ. ಇಂದು ಭಾರತೀಯ cheese ವಿಶ್ವಾದ್ಯಂತ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಬೆಳಗಿನ ಉಪಹಾರವೇ ಇರಲಿ, ಮಧ್ಯಾಹ್ನದ ಭೋಜನವೇ ಇರಲಿ ಅಥವಾ ರಾತ್ರಿಯ ಭೋಜನವೇ ಇರಲಿ ವಿಶ್ವದ ಆಹಾರ ತಟ್ಟೆಗಳಲ್ಲಿ ಭಾರತದ ರುಚಿ ತಲುಪುತ್ತಿದೆ. ಜಮ್ಮ-ಕಾಶ್ಮೀರದ ಕಲಾರಿ cheese ವಿಷಯವನ್ನೇ ತೆಗೆದುಕೊಳ್ಳಿ, - ಇದನ್ನು ‘ಕಾಶ್ಮೀರದ ಮೋಜೆರೆಲಾ’ ಎಂದು ಕರೆಯಲಾಗುತ್ತದೆ. ಗುಜ್ಜರ್ – ಬಕರವಾಲ್ ಸಮುದಾಯದ ಜನರು, ಹಲವಾರು ತಲೆಮಾರುಗಳಿಂದಲೂ ಇದನ್ನು ತಯಾರಿಸುತ್ತಿದ್ದಾರೆ ಮತ್ತು ಸೇವಿಸುತ್ತಿದ್ದಾರೆ. ಅಂತೆಯೇ ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಲಡಾಖ್ ನಲ್ಲಿ ‘ಛುರಪೀ’ ಬಹಳ ಜನಪ್ರಿಯವಾಗಿದೆ. ಬೆಟ್ಟಗುಡ್ಡಗಳ ಸರಳತೆ ಮತ್ತು ಕೋಮಲತೆ ಈ ರುಚಿಯಲ್ಲಿ ಕೂಡಾ ಅನುಭವವಾಗುತ್ತದೆ. ಈ ಚೀಸ್ ನ ವಿಶೇಷತೆ ಎಂದರೆ ಇದನ್ನು ಚಮರೀಮೃಗ/ಯಾಕ್ ಹಾಲಿನಿಂದ ತಯಾರಿಸಲಾಗುತ್ತದೆ.

ಸ್ನೇಹಿತರೇ,

ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ  'ಸೂರ್ತಿ ಚೀಸ್' ಅನ್ನು 'ಟೋಪ್ಲಿ ನು ಪನೀರ್' ಎಂಬ ಹೆಸರಿನಿಂದಲೂ ಕೂಡಾ ಕರೆಯಲಾಗುತ್ತದೆ ಮತ್ತು ಇದಕ್ಕೆ ತನ್ನದೇ ಆದ ವಿಶಿಷ್ಠತೆ ಇದೆ. ನಾನು ಇಲ್ಲಿ ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ, ಆದರೆ ನಮ್ಮ ದೇಶದಲ್ಲಿ ಈ ರುಚಿಯ ವ್ಯಾಪ್ತಿ ಬಹಳ ವಿಶಾಲವಾಗಿದೆ. ಇಂದು, ಈ ಸಂಪ್ರದಾಯವು ಹೊಸ ಬಲವನ್ನು ಪಡೆಯುತ್ತಿದೆ. ಅನೇಕ ಭಾರತೀಯ ಕಂಪನಿಗಳು ಈ ವಲಯದಲ್ಲಿ ಹೂಡಿಕೆ ಮಾಡುತ್ತಿವೆ. ಆಧುನಿಕ ತಂತ್ರಜ್ಞಾನ ಬರುತ್ತಿದೆ, ಪ್ಯಾಕೇಜಿಂಗ್ ಉತ್ತಮಗೊಳ್ಳುತ್ತಿದೆ ಮತ್ತು ನಮ್ಮ ಉತ್ಪನ್ನಗಳು ವಿಶ್ವ ಮಾನದಂಡಗಳೊಂದಿಗೆ ಮುಂದುವರಿಯುತ್ತಿವೆ. ಇದರ ಪರಿಣಾಮವಾಗಿ, ಭಾರತೀಯ ಚೀಸ್ ಈಗ ದೇಶದ ಗಡಿಗಳನ್ನು ಮೀರಿ ವಿಶ್ವದ ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್‌ ಗಳನ್ನು ತಲುಪುತ್ತಿವೆ. ನಾವು ಇಂದು ಸ್ಥಳೀಯದಿಂದ global ಕುರಿತ ಮಾತನಾಡುತ್ತೇವೆ, ಇದರಲ್ಲಿ ಭಾರತೀಯ ಚೀಸ್ ನ ಉದಾಹರಣೆಯು, ನಮಗೆ ಮುಂದಿನ ದಾರಿಯನ್ನು ತೋರಿಸುತ್ತವೆ. ಭಾರತದ ರುಚಿ, ಭಾರತದ ಸಂಪ್ರದಾಯ ಮತ್ತು ಭಾರತದ ಗುಣಮಟ್ಟ ವಿಶ್ವದ ಜನರಿಗೆ ಒಂದು ಹೊಸ ಅನುಭವ ನೀಡಲಿದೆ ಮತ್ತು ಭಾರತದೊಂದಿಗೆ ಹೊಸ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ನನಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಈ ತಿಂಗಳು ದೇಶದ ಅನೇಕ ಭಾಗಗಳಲ್ಲಿ ಹೊಸ ವರ್ಷವೂ ಸೇರಿದಂತೆ ಅನೇಕ ಹಬ್ಬಗಳನ್ನು ಆಚರಿಸಲಾಗಿದೆ. ಕೆಲವೇ ದಿನಗಳ ನಂತರ ಮೇ 9 ರಂದು 'ಪೋಚಿಷೆ ಬೋಯಿಶಾಖ್' ಸಂದರ್ಭದಲ್ಲಿ, ನಾವು ಗುರುದೇವ್ ಟ್ಯಾಗೋರ್ ಅವರ ಜಯಂತಿ ಆಚರಿಸುತ್ತೇವೆ. ಗುರುದೇವ್ ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ಅವರು ಒಬ್ಬ ಮಹಾನ್ ಬರಹಗಾರ ಮತ್ತು ಚಿಂತಕ ಮಾತ್ರವಲ್ಲದೆ, ಅನೇಕ ಪ್ರಸಿದ್ಧ ಸಂಸ್ಥೆಗಳನ್ನು ರೂಪಿಸಿದರು. ಗುರುದೇವ್ ಟ್ಯಾಗೋರ್ ಸುಸ್ಥಿರ ಉದ್ಯೋಗವನ್ನು ಒದಗಿಸುವ ಮತ್ತು ಹಳ್ಳಿಗಳಿಗೆ ಪ್ರಯೋಜನವನ್ನು ನೀಡುವ ಕೈಗಾರಿಕೆಗಳನ್ನು ಪ್ರತಿಪಾದಿಸಿದರು. ಅವರ ರವೀಂದ್ರ ಸಂಗೀತದ ಪ್ರಭಾವವು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಲೇ ಇದೆ. ಶಾಂತಿನಿಕೇತನಕ್ಕೆ ನನ್ನ ಭೇಟಿಗಳು ಅವಿಸ್ಮರಣೀಯವಾಗಿವೆ. ಅವರು ಸಂಪೂರ್ಣ ಸಮರ್ಪಣಾಭಾವದಿಂದ ಪೋಷಿಸಿ ಬೆಳೆಸಿದ ಅದೇ ಸಂಸ್ಥೆ ಇದಾಗಿದೆ. ಮತ್ತೊಮ್ಮೆ ಅವರಿಗೆ ನನ್ನ ವಿನಮ್ರಪೂರ್ವಕ ನಮನಗಳು.

ಸ್ನೇಹಿತರೇ,

ಮೇ ತಿಂಗಳು 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ನಮಗೆ ನೆನಪಿಸುತ್ತದೆ. ಜನರಲ್ಲಿ ದೇಶಭಕ್ತಿಯ ಚೈತನ್ಯವನ್ನು ಜಾಗೃತಗೊಳಿಸಿದ ಭಾರತ ಮಾತೆಯ ಎಲ್ಲಾ ಧೈರ್ಯಶಾಲಿ ಪುತ್ರರಿಗೆ ನಾನು ನಮಸ್ಕರಿಸುತ್ತೇನೆ. ಇದು ಶಾಲಾ ಮಕ್ಕಳಿಗೂ ರಜೆಯ ಸಮಯ. ಅವರು ತಮ್ಮ ರಜಾದಿನಗಳನ್ನು ಪೂರ್ಣವಾಗಿ ಆನಂದಿಸಿಬೇಕೆಂದೂ ಮತ್ತು ಹೊಸದನ್ನು ಕಲಿಯಲು ಪ್ರಯತ್ನಿಸಬೇಕೆಂದೂ ನಾನು ಮನವಿ ಮಾಡುತ್ತೇನೆ. ಈ ಬೇಸಿಗೆಯ ಋತುವಿನಲ್ಲಿ, ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಬೇಕು.ಮುಂದಿನ ತಿಂಗಳು ಮತ್ತೊಮ್ಮೆ  ಕೆಲವು ಹೊಸ ವಿಷಯಗಳೊಂದಿಗೆ, ದೇಶವಾಸಿಗಳ ಕೆಲವು ಹೊಸ ಸಾಧನೆಗಳ ಗಾಥೆಗಳೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ. ಅನೇಕಾನೇಕ ಧನ್ಯವಾದ.

 

*****

 

 


(ಪ್ರಕಟಣೆ ಐ.ಡಿ.: 2255637) ವಿಸಿಟರ್ ಕೌಂಟರ್ : 29
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , Assamese , Telugu , English , Urdu , Marathi , हिन्दी , Bengali , Punjabi , Odia , Malayalam