ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಸ್ಟ್ರಿಯಾದ ಚಾನ್ಸಲರ್‌ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

ಪ್ರಕಟಣಾ ದಿನಾಂಕ: 16 APR 2026 12:48PM by PIB Bengaluru

ಘನತೆವೆತ್ತ ಚಾನ್ಸಲರ್‌ ಸ್ಟಾಕರ್‌ ಅವರೇ,

ಎರಡೂ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಹಲೋ!

ಚಾನ್ಸಲರ್‌ ಸ್ಟಾಕರ್‌ ಅವರೇ, ಭಾರತಕ್ಕೆ ನಿಮ್ಮ ಮೊದಲ ಭೇಟಿಗೆ ನಾನು ನಿಮ್ಮನ್ನು ಆತ್ಮೀಯ ಸ್ವಾಗತ ಕೋರುತ್ತೇನೆ. ಯುರೋಪಿನ ಹೊರಗೆ ನಿಮ್ಮ ಮೊದಲ ಭೇಟಿಗಾಗಿ ನೀವು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದು ನಿಮ್ಮ ದೃಷ್ಟಿಕೋನ ಮತ್ತು ಭಾರತ-ಆಸ್ಟ್ರಿಯಾ ಸಂಬಂಧಗಳ ಬಗ್ಗೆ ನಿಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

40 ವರ್ಷಗಳ ನಂತರ ಆಸ್ಟ್ರಿಯಾದ ಚಾನ್ಸಲರ್‌ ಭಾರತಕ್ಕೆ ಭೇಟಿ ನೀಡಿರುವುದು ಬಹಳ ಮುಖ್ಯ. 2026ರಲ್ಲಿ ಭಾರತ-ಯುರೋಪಿಯನ್‌ ಯೂನಿಯನ್‌ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಭಾರತ-ಐರೋಪ್ಯ ಒಕ್ಕೂಟ ಸಂಬಂಧಗಳಲ್ಲಿ ಹೊಸ ಹಂತ ಪ್ರಾರಂಭವಾಗಿದೆ. ಚಾನ್ಸಲರ್‌ ಸ್ಟಾಕರ್‌ ಅವರ ಭೇಟಿಯ ಮೂಲಕ ನಾವು ಭಾರತ-ಆಸ್ಟ್ರಿಯಾ ಬಾಂಧವ್ಯವನ್ನು ಹೊಸ ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ.

ಸ್ನೇಹಿತರೇ,

ಭಾರತ ಮತ್ತು ಆಸ್ಟ್ರಿಯಾ ಮೂಲಸೌಕರ್ಯ, ನಾವೀನ್ಯತೆ ಮತ್ತು ಸುಸ್ಥಿರತೆಯಲ್ಲಿ ವಿಶ್ವಾಸಾರ್ಹ ಪಾಲುದಾರರು. ದೆಹಲಿ ಮೆಟ್ರೋದಿಂದ ಹಿಮಾಲಯದಲ್ಲಿ10,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಅಟಲ್‌ ಸುರಂಗದವರೆಗೆ, ಆಸ್ಟ್ರಿಯಾದ ಸುರಂಗ ಪರಿಣತಿಯು ಶಾಶ್ವತವಾದ ಪರಿಣಾಮ ಬೀರಿದೆ.

ಅಷ್ಟೇ ಅಲ್ಲ, ರೈಲ್ವೆ ಯೋಜನೆಗಳಿಂದ ಗುಜರಾತ್‌ನ ಗಿರ್ನಾರ್‌ ರೋಪ್‌ ವೇವರೆಗೆ ಮತ್ತು ಶುದ್ಧ ಇಂಧನದಿಂದ ನಗರಾಭಿವೃದ್ಧಿಯವರೆಗೆ, ಆಸ್ಟ್ರಿಯಾದ ಕಂಪನಿಗಳು ಭಾರತದಾದ್ಯಂತ ಹಲವಾರು ಎಂಜಿನಿಯರಿಂಗ್‌ ಯೋಜನೆಗಳಲ್ಲಿ ಸಕ್ರಿಯ ಪಾಲುದಾರರಾಗಿದ್ದಾರೆ.

ಸ್ನೇಹಿತರೇ,

ಚಾನ್ಸೆಲರ್‌ ಸ್ಟಾಕರ್‌ ಅವರ ಭೇಟಿಯು ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಶಕ್ತಿಯನ್ನು ತರಲು ಸಜ್ಜಾಗಿದೆ. ಅವರು ಬಲವಾದ ದೂರದೃಷ್ಟಿ ಮತ್ತು ದೊಡ್ಡ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಬಂದಿರುವುದು ನಮಗೆ ಸಂತೋಷ ತಂದಿದೆ.

ಆಸ್ಟ್ರಿಯಾದ ಪರಿಣತಿಯನ್ನು ಭಾರತದ ವೇಗ ಮತ್ತು ಪ್ರಮಾಣದೊಂದಿಗೆ ಸಂಯೋಜಿಸುವ ಮೂಲಕ, ನಾವು ಜಗತ್ತಿಗೆ ವಿಶ್ವಾಸಾರ್ಹ ತಂತ್ರಜ್ಞಾನಗಳು ಮತ್ತು ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ರಕ್ಷಣೆ, ಸೆಮಿಕಂಡಕ್ಟರ್‌ಗಳು, ಕ್ವಾಂಟಮ್‌ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ನಾವು ನಮ್ಮ ಪಾಲುದಾರಿಕೆಯನ್ನು ಆಳಗೊಳಿಸುತ್ತೇವೆ.

ಅದೇ ಸಮಯದಲ್ಲಿ, ನಾವು ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತೇವೆ. ಐಐಟಿ ದೆಹಲಿ ಮತ್ತು ಆಸ್ಟ್ರಿಯಾದ ಮೊಂಟನ್‌ ವಿಶ್ವವಿದ್ಯಾಲಯದ ನಡುವೆ ಇಂದು ಸಹಿ ಹಾಕಲಾಗುತ್ತಿರುವ ತಿಳಿವಳಿಕೆ ಒಪ್ಪಂದವು ಈ ಜ್ಞಾನ ವಿನಿಮಯಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಸ್ನೇಹಿತರೇ,

ಭಾರತದ ಪ್ರತಿಭೆಯು ಆಸ್ಟ್ರಿಯಾದ ನಾವೀನ್ಯತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ‌ವನ್ನು ಹೊಂದಿದೆ. 2023ರಲ್ಲಿ, ನಾವು ಆಸ್ಟ್ರಿಯಾದೊಂದಿಗೆ ಸಮಗ್ರ ವಲಸೆ ಮತ್ತು ಚಲನಶೀಲತೆ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದೇವೆ. ಈ ಒಪ್ಪಂದದ ಅಡಿಯಲ್ಲಿ, ನಾವು ಈಗ ನರ್ಸಿಂಗ್‌ ವಲಯದಲ್ಲಿಯೂ ಚಲನಶೀಲತೆಯನ್ನು ಮತ್ತಷ್ಟು ಮುನ್ನಡೆಸುತ್ತೇವೆ.

ನಾವು ಜಂಟಿ ಸಂಶೋಧನೆ ಮತ್ತು ನವೋದ್ಯಮ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತೇವೆ. ಯುವ ವಿನಿಮಯವನ್ನು ಉತ್ತೇಜಿಸಲು, ನಾವು ಇಂದು ಭಾರತ-ಆಸ್ಟ್ರಿಯಾ ವರ್ಕಿಂಗ್‌ ಹಾಲಿಡೇ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ.

ಸ್ನೇಹಿತರೇ,

ಇಂದು, ಇಡೀ ಜಗತ್ತು ಅತ್ಯಂತ ಗಂಭೀರ ಮತ್ತು ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಅದರ ಪರಿಣಾಮವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಇಂತಹ ಉದ್ವಿಗ್ನ ಜಾಗತಿಕ ವಾತಾವರಣದಲ್ಲಿ, ಮಿಲಿಟರಿ ಸಂಘರ್ಷದ ಮೂಲಕ ಪರಿಹಾರಗಳನ್ನು ಸಾಧಿಸಲು ಸಾಧ್ಯವಿಲ್ಲಎಂದು ಭಾರತ ಮತ್ತು ಆಸ್ಟ್ರಿಯಾ ಒಪ್ಪಿಕೊಂಡಿವೆ. ಉಕ್ರೇನ್‌ ಅಥವಾ ಪಶ್ಚಿಮ ಏಷ್ಯಾದಲ್ಲಿರಲಿ, ನಾವು ಸ್ಥಿರ, ಸುಸ್ಥಿರ ಮತ್ತು ಶಾಶ್ವತ ಶಾಂತಿಯನ್ನು ಬೆಂಬಲಿಸುತ್ತೇವೆ.

ಬೆಳೆಯುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳ ಸುಧಾರಣೆ ಅತ್ಯಗತ್ಯ ಎಂದು ನಾವು ಒಪ್ಪಿದ್ದೇವೆ. ಭಯೋತ್ಪಾದನೆಯನ್ನು ಅದರ ಬೇರುಗಳಿಂದ ನಿರ್ಮೂಲನೆ ಮಾಡುವುದು ನಮ್ಮ ಹಂಚಿಕೆಯ ಬದ್ಧತೆಯಾಗಿದೆ.

ಘನತೆವೆತ್ತವರೇ,

ನಾಲ್ಕು ದಶಕಗಳ ನಂತರ 2024 ರಲ್ಲಿನನ್ನ ಆಸ್ಟ್ರಿಯಾ ಭೇಟಿಯೂ ನಡೆಯಿತು. ಆ ಭೇಟಿಯ ನಂತರ, ಇಂದು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುವುದು ನಮಗೆ ಬಹಳ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಭಾರತ-ಆಸ್ಟ್ರಿಯಾ ಸಹಭಾಗಿತ್ವವನ್ನು ನಾವೀನ್ಯತೆ ಕೇಂದ್ರಿತ ಮತ್ತು ಭವಿಷ್ಯಕ್ಕೆ ಸಿದ್ಧಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ.

ತುಂಬಾ ತುಂಬಾ ಧನ್ಯವಾದಗಳು.

ಧನ್ಯವಾದಗಳು

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2252758) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Manipuri , Punjabi , Gujarati , Telugu