ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜಾಜಿಯವರ ಪ್ರತಿಮೆ ಅನಾವರಣವು ವಸಾಹತುಶಾಹಿ ಪ್ರಭಾವದ ಕುರುಹುಗಳನ್ನು ತೊಡೆದುಹಾಕುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ: ರಾಷ್ಟ್ರಪತಿ ಭವನದಲ್ಲಿ ನಡೆದ ‘ರಾಜಾಜಿ ಉತ್ಸವ’ದಲ್ಲಿ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್


ರಾಜಾಜಿ ಉತ್ಸವವು ಭಾರತದ ಶ್ರೇಷ್ಠ ಪುತ್ರ ಶ್ರೀ ಸಿ. ರಾಜಗೋಪಾಲಾಚಾರಿ ಅವರಿಗೆ ಸಂದ ಅರ್ಹ ಗೌರವ ಎಂದು ಉಪರಾಷ್ಟ್ರಪತಿಯವರು ಬಣ್ಣಿಸಿದರು

ವಸಾಹತುಶಾಹಿ ಪ್ರಭಾವದಿಂದ ಭಾರತದ ದೂರ ಸರಿಯುವಿಕೆಯ ಚಳವಳಿಯು ಕೇವಲ ಒಂದು ಘಟನೆಯಲ್ಲ, ಬದಲಾಗಿ ಅದು ನಡೆಯುತ್ತಿರುವ ರೂಪಾಂತರವಾಗಿದೆ: ಉಪರಾಷ್ಟ್ರಪತಿ

ʼಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿʼ ದೃಷ್ಟಿಕೋನದ ಅಡಿಯಲ್ಲಿ ಕೈಗೊಂಡ ಬದಲಾವಣೆಗಳು ಕೇವಲ ಸಾಂಕೇತಿಕವಲ್ಲ; ಅವು ಸರ್ಕಾರದ ‘ಸೇವಾ ಭಾವನೆ’ಯನ್ನು ಪ್ರತಿಬಿಂಬಿಸುತ್ತವೆ: ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 23 FEB 2026 2:08PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ‘ರಾಜಾಜಿ ಉತ್ಸವ’ದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಎಡ್ವಿನ್ ಲುಟ್ಯೆನ್ಸ್ ಅವರ ಪ್ರತಿಮೆಯ ಬದಲಾಗಿ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ರಾಜಾಜಿಯವರ ಪ್ರತಿಮೆಯ ಅನಾವರಣವು ವಸಾಹತುಶಾಹಿ ಪ್ರಭಾವದ ಕುರುಹುಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ವಸಾಹತುಶಾಹಿ ಪ್ರಭಾವದಿಂದ ಭಾರತವು ದೂರ ಸರಿಯುತ್ತಿರುವುದು ಕೇವಲ ಒಂದು ಘಟನೆಯಲ್ಲ, ಬದಲಾಗಿ ಇದು ಆಡಳಿತ, ಕಾನೂನು, ಶಿಕ್ಷಣ, ಸಂಸ್ಕೃತಿ ಮತ್ತು ರಾಷ್ಟ್ರೀಯ ಅಸ್ಮಿತೆಯಾದ್ಯಂತ ನಡೆಯುತ್ತಿರುವ ರೂಪಾಂತರವಾಗಿದೆ ಎಂದು ಅವರು ಒತ್ತಿ ಹೇಳಿದರು.

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಸಂಸ್ಥೆಗಳು ಮತ್ತು ಮನೋಭಾವಗಳನ್ನು ರೂಪಿಸಿದ್ದ ವಸಾಹತುಶಾಹಿ ಮಾನಸಿಕತೆಯಿಂದ ಮುಕ್ತಿಯನ್ನು ಪಡೆಯಬೇಕೆಂದು ನಿರಂತರವಾಗಿ ಕರೆ ನೀಡುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವು ಈ ಸುಧಾರಣೆಗಳ ಕೇಂದ್ರಬಿಂದುವಾಗಿದೆ ಎಂದು ಅವರು ಗಮನಿಸಿದರು.

ʼಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿʼ ಎಂಬ ದೃಷ್ಟಿಕೋನವು ಹಲವಾರು ಉಪಕ್ರಮಗಳ ಮೂಲಕ ಕಾರ್ಯರೂಪಕ್ಕೆ ಬಂದಿದೆ ಎಂದು ಉಪರಾಷ್ಟ್ರಪತಿ ತಿಳಿಸಿದರು. ಇವುಗಳಲ್ಲಿ ರಾಜಭವನಗಳನ್ನು ಲೋಕಭವನಗಳಾಗಿ ಪರಿವರ್ತಿಸಿರುವುದು; ಪ್ರಧಾನಮಂತ್ರಿ ಕಾರ್ಯಾಲಯವನ್ನು ‘ಸೇವಾ ತೀರ್ಥ’ವಾಗಿ ವಿಕಸನಗೊಳಿಸಿರುವುದು; ಸೆಂಟ್ರಲ್ ಸೆಕ್ರೆಟರಿಯೇಟ್ ಅನ್ನು ‘ಕರ್ತವ್ಯ ಭವನ’ ಎಂದು ಮರುನಾಮಕರಣ ಮಾಡಿರುವುದು; ವಸಾಹತುಶಾಹಿ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸಿರುವುದು; ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿರುವುದು; ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕದ ನಿರ್ಮಾಣ ಸೇರಿದಂತೆ ಇತರ ಕ್ರಮಗಳನ್ನು ಅವರು ಉಲ್ಲೇಖಿಸಿದರು.

“ಈ ಬದಲಾವಣೆಗಳು ಕೇವಲ ಸಾಂಕೇತಿಕವಲ್ಲ; ಅವು ಸರ್ಕಾರದ ಸೇವಾ ಭಾವನೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಅವರು ಹೇಳಿದರು.

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ನೇತೃತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ಕೈಗೊಂಡ ಹಲವಾರು ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು. ಅವುಗಳಲ್ಲಿ ಉದ್ಯಾನಗಳನ್ನು ‘ಅಮೃತ ಉದ್ಯಾನ’ ಎಂದು ಸಾರ್ವಜನಿಕರಿಗೆ ಮುಕ್ತಗೊಳಿಸಿರುವುದು; ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಎಂದು ಮರುನಾಮಕರಣ ಮಾಡಿರುವುದು; ಬ್ರಿಟಿಷ್ ಎಡಿಸಿಗಳ ಛಾಯಾಚಿತ್ರಗಳ ಬದಲಾಗಿ ಪರಮ ವೀರ ಚಕ್ರ ಪುರಸ್ಕೃತರ ಛಾಯಾಚಿತ್ರಗಳನ್ನು ಅಳವಡಿಸಿರುವುದು; ಮತ್ತು ಭಾರತೀಯ ಶಾಸ್ತ್ರೀಯ ಭಾಷೆಗಳ ಮೀಸಲಾದ ಗ್ರಂಥಾಲಯ ಮತ್ತು ಭಂಡಾರವಾದ ‘ಗ್ರಂಥ ಕುಟೀರ್’ ದ ಉದ್ಘಾಟನೆ ಸೇರಿವೆ. ಇಂತಹ ಕ್ರಮಗಳು ಸಾರ್ವಜನಿಕ ಪ್ರಜ್ಞೆಯಿಂದ ವಸಾಹತುಶಾಹಿ ಮುದ್ರೆಯನ್ನು ಅಳಿಸಲು ಮತ್ತು ಭಾರತದ ನಾಗರಿಕ ಆತ್ಮವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜಾಜಿ ಉತ್ಸವವನ್ನು ಭಾರತದ ಶ್ರೇಷ್ಠ ಪುತ್ರನಿಗೆ ಸಂದ ಅರ್ಹ ಗೌರವ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಸಿ. ರಾಜಗೋಪಾಲಾಚಾರಿ ಅವರು ದೇಶದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ ಎಂದು ಹೇಳಿದರು.

ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಮುತ್ಸದ್ದಿಯಾಗಿ, ರಾಜಕಾರಣಿಯಾಗಿ ಮತ್ತು ಬರಹಗಾರರಾಗಿ ರಾಜಾಜಿಯವರ ಬಹುಮುಖಿ ಪ್ರತಿಭೆಯನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ಅವರು ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದರು ಎಂದು ಹೇಳಿದರು. ರಾಜಾಜಿಯವರು ಆರ್ಥಿಕ ಸ್ವಾತಂತ್ರ್ಯವನ್ನು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು ಮತ್ತು ಭಾರತದ ಆರ್ಥಿಕ ನೀತಿಯು ಸ್ವತಂತ್ರ ಮತ್ತು ಉದಾರವಾಗಿರಬೇಕು ಎಂದು ನಂಬಿದ್ದರು ಎಂದು ಅವರು ತಿಳಿಸಿದರು.

ನಾಗರಿಕರು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಾಗ ತಮ್ಮ ಚಾರಿತ್ರ್ಯವನ್ನು ಉನ್ನತೀಕರಿಸಲು, ತಮ್ಮ ಪಾತ್ರಗಳು ವಿಸ್ತರಿಸಿದಂತೆ ತಮ್ಮ ದೃಢವಿಶ್ವಾಸವನ್ನು ಬಲಪಡಿಸಲು ಮತ್ತು ಯಾವಾಗಲೂ ಸ್ವಾರ್ಥಕ್ಕಿಂತ ಹೆಚ್ಚಾಗಿ ರಾಷ್ಟ್ರವನ್ನು ಮೊದಲು ಇರಿಸಲು ರಾಜಾಜಿಯವರ ಜೀವನವು ನಿರಂತರವಾಗಿ ಸ್ಫೂರ್ತಿ ನೀಡಲಿ ಎಂದು ಆಶಿಸಿದ ಉಪರಾಷ್ಟ್ರಪತಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

 

*****


(ಪ್ರಕಟಣೆ ಐ.ಡಿ.: 2231726) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , Urdu , हिन्दी , Bengali , Gujarati , Tamil , Malayalam