iffi banner

ಕಾಡಿನ ಅಸ್ಮಿತೆ ಮತ್ತು ಮಾತಿಗೂ ನಿಲುಕದ ಪ್ರೀತಿಯ ಕಥನವೇ ‘ವನ್ಯಾ’


‘ಚೌಕ್ ಯೂನಿವರ್ಸಿಟಿ ಕಾ ವೈಸ್ ಚಾನ್ಸಲರ್’: ಸಾಹಿತ್ಯ ಲೋಕದ ದಂತಕಥೆ ಅಮೃತ್‌ಲಾಲ್ ನಾಗರ್ ಬದುಕಿನ ಸಂಭ್ರಮಾಚರಣೆ

"ಜಿಂದಗಿ ಲೈಲಾ ಹೈ, ಉಸೇ ಮಜ್ನು ಕಿ ತರಹ ಪ್ಯಾರ್ ಕರೋ..."

ಸಭಾಂಗಣದಲ್ಲಿ ಕೇಳಿಬಂದ ಈ ಸಾಲು, ಯಾವುದೋ ಒಂದು ಶ್ರೇಷ್ಠ ಹಿಂದಿ ನಾಟಕದ ಆರಂಭದ ಸಂಭಾಷಣೆಯಂತೆ—ಅಷ್ಟೇ ದಿಟ್ಟ, ಕಾವ್ಯಾತ್ಮಕ ಮತ್ತು ಅದ್ದೂರಿಯಾಗಿ—ಪ್ರತಿಧ್ವನಿಸಿತು. ಇದು 20ನೇ ಶತಮಾನದ ಮೇರು ಹಿಂದಿ ಸಾಹಿತಿ, ಪದ್ಮಭೂಷಣ ಅಮೃತ್‌ ಲಾಲ್ ನಾಗರ್ ಅವರ ಪ್ರಸಿದ್ಧ ನುಡಿ. ಅವರು ಬದುಕನ್ನು ಕೇವಲ ಜೀವಿಸಿದವರಲ್ಲ; ಬದಲಿಗೆ ಅದನ್ನೊಂದು ಕಲೆಯಂತೆ ಪ್ರದರ್ಶಿಸಿದವರು, ಪ್ರೀತಿಸಿದವರು ಮತ್ತು ತಮ್ಮ ಜೀವನವನ್ನೇ ನಿರಂತರ ಸಂಭ್ರಮವನ್ನಾಗಿ ಪರಿವರ್ತಿಸಿದವರು.

ಇಂದು ಐಎಫ್‌ಎಫ್‌ಐ-2025ರ ಅಂಗಳದಲ್ಲಿ, ಆ ಸಂಭ್ರಮವು ಎರಡು ವಿಭಿನ್ನ ಕಥೆಗಳ ಮೂಲಕ ಮರುಕಳಿಸಿತು. 'ವನ್ಯಾ' (Vanya) ಮತ್ತು 'ಚೌಕ್ ಯೂನಿವರ್ಸಿಟಿ ಕಾ ವೈಸ್ ಚಾನ್ಸಲರ್ – ಪದ್ಮಭೂಷಣ ಅಮೃತ್‌ ಲಾಲ್ ನಾಗರ್' ಚಿತ್ರತಂಡಗಳು ಒಟ್ಟಾಗಿ ನಡೆಸಿದ ಪತ್ರಿಕಾಗೋಷ್ಠಿಯು ಅತ್ಯಂತ ರೋಮಾಂಚಕ ಹಾಗೂ ಮನಮುಟ್ಟುವಂತಿತ್ತು. ಈ ದೃಶ್ಯವು ಒಂದೇ ಸಿನಿಮೀಯ ವೇದಿಕೆಯಲ್ಲಿ ಎರಡು ವಿಭಿನ್ನ ಪ್ರಪಂಚಗಳು ಮುಖಾಮುಖಿಯಾದಂತೆ ಭಾಸವಾಯಿತು.

ವೇದಿಕೆಯ ಒಂದೆಡೆ, ಭಾವತೀವ್ರತೆ ಮತ್ತು ಪ್ರಕೃತಿಯ ಸೊಗಡಿನಿಂದ ಕೂಡಿದ ‘ವನ್ಯಾ’ ಚಿತ್ರತಂಡವಿತ್ತು. ನಿರ್ದೇಶಕ ಬಡಿಗೇರ್ ದೇವೇಂದ್ರ ಮತ್ತು ನಟಿ ಮೇಘನಾ ಬೆಳವಾಡಿ ಅವರು, ಕಾಡಿನೊಂದಿಗೆ ಮನುಷ್ಯನಿಗಿರುವ ಮುರಿಯಲಾಗದ ನಂಟನ್ನು ದೃಶ್ಯರೂಪಕ್ಕೆ ಇಳಿಸಿದ ತಮ್ಮ ರೋಚಕ ಪಯಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮತ್ತೊಂದೆಡೆ, ನಿರ್ದೇಶಕರಾದ ಸವಿತಾ ಶರ್ಮಾ ನಾಗರ್ ಮತ್ತು ರಾಜೇಶ್ ಅಮ್ರೋಹಿ ಅವರು, ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ನಾಗರ್ ಜೀ ಅವರ ಪರಂಪರೆಗೆ ಜೀವ ತುಂಬುವ ಪ್ರಯತ್ನವನ್ನು ತೆರೆದಿಟ್ಟರು. ನಾಗರ್ ಜೀ ಅವರ ವಿಶಿಷ್ಟ ಹಾಸ್ಯಪ್ರಜ್ಞೆ, ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಆಳವು ಇಂದಿಗೂ ಅನೇಕ ತಲೆಮಾರುಗಳನ್ನು ರೂಪಿಸುತ್ತಲೇ ಇವೆ ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.

ತೆರೆಯ ಮೇಲೆ ಮರುಜೀವ ಪಡೆದ ಸಾಹಿತ್ಯ ಲೋಕದ ದಂತಕಥೆ
ನಿರ್ದೇಶಕರಾದ ಸವಿತಾ ಶರ್ಮಾ ನಾಗರ್ ಮತ್ತು ರಾಜೇಶ್ ಅಮ್ರೋಹಿ ಅವರು, ತಾವು "ಸ್ವತಃ ಒಂದು ಸಂಭ್ರಮ" ಎಂದು ಬಣ್ಣಿಸಿದ ಪೂಜ್ಯ ಸಾಹಿತಿ ಅಮೃತ್‌ ಲಾಲ್ ನಾಗರ್ ಅವರ ಕುರಿತಾದ ಸಾಕ್ಷ್ಯಚಿತ್ರ ಶೈಲಿಯ ಚಿತ್ರದ ಬಗ್ಗೆ ಅತ್ಯಂತ ಭಾವಪೂರ್ಣವಾಗಿ ಮಾತನಾಡಿದರು.

ತಮ್ಮ ಅನಿಸಿಕೆ ಹಂಚಿಕೊಂಡ ಸವಿತಾ ಶರ್ಮಾ ನಾಗರ್, "ನಾಗರ್ ಜೀ ಅವರು ಅತ್ಯಂತ ಸೂಕ್ಷ್ಮ ಹಾಗೂ ಮೋಹಕವಾಗಿ ಬದುಕಿದ ರೀತಿಯನ್ನು ಮತ್ತು ಜೀವನದ ಅಸೀಮ ಸಂತೋಷಗಳನ್ನು ಈ ಚಿತ್ರವು ಸಂಭ್ರಮಿಸುತ್ತದೆ. ಅವರ ಹಾಸ್ಯಪ್ರಜ್ಞೆ, ಸರಳತೆ ಮತ್ತು ವ್ಯಕ್ತಿತ್ವದ ಆಳ... ಇವೆಲ್ಲವೂ ತೆರೆಯ ಮೇಲೆ ಶಾಶ್ವತವಾಗಿ ಉಳಿಯಲು ಅರ್ಹವಾಗಿದ್ದವು" ಎಂದು ಹೇಳಿದರು.

ನಾಗರ್ ಜೀ ಅವರ ಜೀವನದ ಕ್ಷಣಗಳನ್ನು ಸಂಶೋಧಿಸಲು ಮತ್ತು ಮರುಸೃಷ್ಟಿಸಲು ತಮ್ಮ ತಂಡವು ಐದು ವರ್ಷಗಳನ್ನು ಮೀಸಲಿಟ್ಟಿತ್ತು ಎಂದು ಅವರು ತಿಳಿಸಿದರು. ಅವರ ಕೆಲವೇ ಕೆಲವು ಛಾಯಾಚಿತ್ರಗಳು ಲಭ್ಯವಿದ್ದ ಕಾರಣ, ಕೇವಲ ನೆನಪುಗಳು, ಸಂದರ್ಶನಗಳು ಮತ್ತು ಸಾಹಿತ್ಯಿಕ ದಾಖಲೆಗಳನ್ನು ಆಧಾರವಾಗಿರಿಸಿಕೊಂಡು ಕಥೆಯ ಏಳು ಕರಡುಗಳನ್ನು ಸಿದ್ಧಪಡಿಸಲಾಯಿತು. "ನಾವು ನಮ್ಮ ಸಾಹಿತಿಗಳನ್ನು ಸಾಕಷ್ಟು ಸಂಭ್ರಮಿಸುವುದಿಲ್ಲ. ಈ ಚಿತ್ರವು ಆ ದಂತಕಥೆಗೆ ನಾವು ಸಲ್ಲಿಸುತ್ತಿರುವ ಗೌರವ" ಎಂದು ಅವರು ಪ್ರತಿಪಾದಿಸಿದರು.

ಸಹ-ನಿರ್ದೇಶಕ ರಾಜೇಶ್ ಅಮ್ರೋಹಿ ಮಾತನಾಡಿ, "ಅಮೃತ್‌ಲಾಲ್ ನಾಗರ್ ಅವರು ಕೇವಲ ಮನರಂಜನೆಗಾಗಿ ಬರೆಯಲಿಲ್ಲ. ಅವರು ನಮ್ಮ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸವನ್ನು ದಾಖಲಿಸಿದ್ದಾರೆ. ಆಧುನಿಕ ಭಾರತೀಯ ಸಾಹಿತ್ಯದ ಅತ್ಯಂತ ಬಹುಮುಖಿ ಧ್ವನಿಗಳಲ್ಲಿ ಅವರೂ ಒಬ್ಬರು" ಎಂದು ತಿಳಿಸಿದರು.

ಮರುಸೃಷ್ಟಿಸಲಾದ ಘಟನೆಗಳು ಹಾಗೂ ವಿಮರ್ಶಕರು, ಲೇಖಕರು ಮತ್ತು ಸ್ವತಃ ನಾಗರ್ ಅವರ ಕುಟುಂಬದವರೊಂದಿಗಿನ ಸುದೀರ್ಘ ಸಂದರ್ಶನಗಳನ್ನು ಈ ಚಿತ್ರ ಬಳಸಿಕೊಂಡಿದೆ. ಆ ಮೂಲಕ, ಇಂದಿಗೂ ಸಮಾಜಕ್ಕೆ ಅಚ್ಚರಿಯೆನಿಸುವಷ್ಟು ಪ್ರಸ್ತುತವಾಗಿರುವ ಸಾಹಿತ್ಯವನ್ನು ರಚಿಸಿದ ಆ ವ್ಯಕ್ತಿಯ ಜೀವನದ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ.

ವನ್ಯಾ: ಕಾಡು ಮತ್ತು ಜಗತ್ತಿನ ನಡುವಿನ ಹೋರಾಟ—ಹಾಗೂ ಅದರ ನಡುವಿನ ಪ್ರೀತಿ

ವೇದಿಕೆಯನ್ನು ಹಂಚಿಕೊಂಡ ನಿರ್ದೇಶಕ ಬಡಿಗೇರ್ ದೇವೇಂದ್ರ ಅವರು, ತಮ್ಮ ಕನ್ನಡ ಚಲನಚಿತ್ರ ‘ವನ್ಯಾ’ವನ್ನು ಪರಿಚಯಿಸಿದರು. ವ್ಯವಸ್ಥೆಯು ಎಷ್ಟೇ ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೂ, ತನ್ನ ಕಾಡಿನ ಗುಡಿಸಲನ್ನು ತೊರೆಯಲು ನಿರಾಕರಿಸುವ ಒಬ್ಬ ವೃದ್ಧನ ಕಥೆ ಇದಾಗಿದೆ. "ಇದು ನಗರ ಜೀವನದ ಗದ್ದಲದ ಆತಂಕಗಳು ಮತ್ತು ಕಾಡಿನ ಮೌನ ಹಾಗೂ ಆತ್ಮಪೂರ್ಣ ಸತ್ಯಗಳ ನಡುವಿನ ವೈರುಧ್ಯ," ಎಂದು ದೇವೇಂದ್ರ ಅವರು ಚಿತ್ರವನ್ನು ಬಣ್ಣಿಸಿದರು.

ವೃದ್ಧನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಮೇಘನಾ ಬೆಳವಾಡಿ, ತಮ್ಮ ಪಾತ್ರದ ಭಾವನಾತ್ಮಕ ಸಂಕೀರ್ಣತೆಯ ಬಗ್ಗೆ ವಿವರಿಸಿದರು. "ಆಕೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುವವಳಲ್ಲ. ಅವಳು ಸದಾ ಕಿರಿಕಿರಿ ಮತ್ತು ದ್ವಂದ್ವದಲ್ಲಿರುತ್ತಾಳೆ; ತನ್ನ ತಂದೆಯನ್ನು ಒಪ್ಪಿಸುವ ಭರದಲ್ಲಿ ಒಂದು ಭಾವನಾತ್ಮಕ ಸುಳಿಗೆ ಸಿಲುಕುತ್ತಾಳೆ. ಆದರೆ, ಆ ತಂದೆ ತಾನು ಮಗಳನ್ನು ಪ್ರೀತಿಸುತ್ತೇನೆ ಎಂದು ಬಾಯ್ಮಾತಿನಲ್ಲಿ ಹೇಳದಿದ್ದರೂ, ಅದನ್ನು ಕೃತಿಯಲ್ಲಿ ತೋರಿಸುತ್ತಾನೆ. ಆತನ ಆ ಮೌನ ವಾತ್ಸಲ್ಯ ನನ್ನನ್ನು ಆಳವಾಗಿ ತಟ್ಟಿತು" ಎಂದು ಅವರು ತಿಳಿಸಿದರು.

ತಮ್ಮ ಬಾಲ ಸಹ-ನಟಿಯೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡುತ್ತಾ ಅವರು ಹೀಗೆಂದರು: 
"ತೆರೆಯ ಹಿಂದೆ ಆ ಮಗುವಿಗೆ ಸುರಕ್ಷಿತ ಭಾವನೆ ಮೂಡುವಂತೆ ನಾನು ನೋಡಿಕೊಳ್ಳುತ್ತಿದ್ದೆ. ಅವಳಿಗೆ ಕಚಗುಳಿಯಿಡುವುದು, ಕೂದಲಿನೊಂದಿಗೆ ಆಟವಾಡುವುದು ಮಾಡುತ್ತಿದ್ದೆ; ಹೀಗಾಗಿ ತೆರೆಯ ಮೇಲಿನ ನಮ್ಮ ಬಾಂಧವ್ಯವು ಅತ್ಯಂತ ಸಹಜವಾಗಿ ಮತ್ತು ಸರಾಗವಾಗಿ ಮೂಡಿಬರಲು ಸಾಧ್ಯವಾಯಿತು." ಕಾಡಿನ ನಡುವೆ, ವನ್ಯಜೀವಿಗಳ ಸಮ್ಮುಖದಲ್ಲಿ ಮತ್ತು ಕೇವಲ ಹಗಲು ಬೆಳಕಿಗೆ ಸೀಮಿತವಾಗಿದ್ದ ಆ ಚಿತ್ರೀಕರಣವು ಸವಾಲಿನದಾಗಿದ್ದರೂ, ರೋಮಾಂಚಕವಾಗಿತ್ತು ಎಂದು ಚಿತ್ರತಂಡ ವಿವರಿಸಿತು. "ಆದರೆ ಸ್ಥಳೀಯ ಸಮುದಾಯ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡಿತು. ಪ್ರೀ-ಪ್ರೊಡಕ್ಷನ್ (ನಿರ್ಮಾಣ ಪೂರ್ವ) ಸಮಯದಲ್ಲಿ ತಿಂಗಳುಗಟ್ಟಲೆ ಭೇಟಿ ನೀಡಿ ನಾವು ಗಳಿಸಿದ ಅವರ ನಂಬಿಕೆಯೇ ಈ ಚಿತ್ರದ ಬೆನ್ನೆಲುಬಾಯಿತು," ಎಂದು ಮೇಘನಾ ಹಂಚಿಕೊಂಡರು. ತಮ್ಮ ಮಾತು ಮುಗಿಸುತ್ತಾ ಮೇಘನಾ "ನನ್ನನ್ನು ನಾನು ದೊಡ್ಡ ನಟಿ ಎಂದು ಪರಿಗಣಿಸುವುದಿಲ್ಲ. ನಾನು ಕೇವಲ ನಿರ್ದೇಶಕರ ದೃಷ್ಟಿಕೋನವನ್ನು—ಅವರ ಸ್ಪಷ್ಟತೆ ಮತ್ತು ಭಾವನಾತ್ಮಕ ನಿರೂಪಣೆಯನ್ನು ನಂಬಿದೆ ಮತ್ತು ಅವರು ಸೃಷ್ಟಿಸಿದ ಜಗತ್ತಿಗೆ ಪ್ರವೇಶಿಸಿದೆನಷ್ಟೇ" ಎಂದು ಹೇಳಿದರು.

 

ಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:


ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel:  https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****

 


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2195207   |   Visitor Counter: 22