ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ 4 ಜಿಲ್ಲೆಗಳನ್ನು ಒಳಗೊಂಡ ಎರಡು ಬಹು ಹಳಿ ಯೋಜನೆಗಳಿಗೆ ಸಂಪುಟದ ಅನುಮೋದನೆ; ಇದರೊಂದಿಗೆ ಭಾರತೀಯ ರೈಲ್ವೆಯ ಪ್ರಸ್ತುತದ ಜಾಲ ಸುಮಾರು 224 ಕಿ.ಮೀ.ಗಳಷ್ಟು ಹೆಚ್ಚಳ
ಯೋಜನೆಗಳ ಒಟ್ಟು ಅಂದಾಜು ವೆಚ್ಚ ರೂ. 2,781 ಕೋಟಿ
Posted On:
26 NOV 2025 4:17PM by PIB Bengaluru
ರೈಲ್ವೆ ಸಚಿವಾಲಯದ ಒಟ್ಟು ರೂ.2,781 ಕೋಟಿ (ಅಂದಾಜು) ವೆಚ್ಚದ ಎರಡು ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಈ ಯೋಜನೆಗಳು ಇಂತಿವೆ:
a. ದೇವಭೂಮಿ ದ್ವಾರಕಾ (ಓಖಾ) - ಕನಲಸ್ ಜೋಡಿ ಹಳಿ - 141 ಕಿಮೀ
b. ಬದ್ಲಾಪುರ್ - ಕರ್ಜತ್ 3ನೇ ಮತ್ತು 4ನೇ ಮಾರ್ಗ - 32 ಕಿಮೀ
ಮಾರ್ಗ ಸಾಮರ್ಥ್ಯ ಹೆಚ್ಚಳದಿಂದ ಸಂಚಾರ ಗಮನಾರ್ಹವಾಗಿ ವರ್ಧಿಸಲಿದ್ದು, ಇದರಿಂದ ಭಾರತೀಯ ರೈಲ್ವೆಯ ಸೇವಾ ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ದಕ್ಷತೆ ಸುಧಾರಿಸಲಿದೆ. ಈ ಬಹು-ಹಳಿ ಪ್ರಸ್ತಾವನೆಗಳು ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮತ್ತು ದಟ್ಟಣೆಯನ್ನು ತಗ್ಗಿಸುವ ಉದ್ದೇಶ ಹೊಂದಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ಮುನ್ನೋಟಕ್ಕೆ ಅನುಗುಣವಾಗಿದ್ದು ಈ ದೃಷ್ಟಿಕೋನದಿಂದ ಈ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿ ಉದ್ಯೋಗ/ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಾ ಇಲ್ಲಿನ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲಿದೆ.
ಈ ಯೋಜನೆಗಳನ್ನು ಪ್ರಧಾನಮಂತ್ರಿ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಯೋಜಿಸಲಾಗಿದ್ದು, ಸಮಗ್ರ ಯೋಜನೆ ಮತ್ತು ಸಂಬಂಧಿತರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಸಾಗಣೆ ದಕ್ಷತೆಯನ್ನು ಹೆಚ್ಚಿಸಲು ಆದ್ಯತೆಯೊಂದಿಗೆ, ಈ ಯೋಜನೆಗಳು ಜನರ, ಸರಕುಗಳ ಮತ್ತು ಸೇವೆಗಳ ತಡೆರಹಿತ ಸಂಚಾರಕ್ಕೆ ಅನುವು ಮಾಡಿ ಕೊಡಲಿವೆ.
ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ 4 ಜಿಲ್ಲೆಗಳಲ್ಲಿ ಈ ಎರಡು ಯೋಜನೆಗಳು ಅನುಷ್ಠಾನಗೊಳ್ಳಲಿದ್ದು ಭಾರತೀಯ ರೈಲ್ವೆಯ ಪ್ರಸ್ತುತದ ಜಾಲವನ್ನು ಸುಮಾರು 224 ಕಿ.ಮೀ.ಗಳಷ್ಟು ಹೆಚ್ಚಿಸಲಿದೆ.
ಅನುಮೋದಿತ ಬಹು ಹಳಿ ಯೋಜನೆಯು ಸುಮಾರು 32 ಲಕ್ಷ ಜನಸಂಖ್ಯೆಯನ್ನು ಹೊಂದಿರುವ 585 ಹಳ್ಳಿಗಳಲ್ಲಿ ಸಂಪರ್ಕವನ್ನು ವರ್ಧಿಸಲಿದೆ.
ಕನಾಲಸ್ ನಿಂದ ಓಖಾ (ದೇವಭೂಮಿ ದ್ವಾರಕಾ) ವರೆಗೆ ಅನುಮೋದಿತ ಜೋಡಿ ಮಾರ್ಗವು ದ್ವಾರಕಾಧೀಶ ದೇವಸ್ಥಾನಕ್ಕೆ ಸಂಪರ್ಕವನ್ನು ಹೆಚ್ಚಿಸುತ್ತಾ ಪ್ರಮುಖ ಯಾತ್ರಾ ತಾಣಕ್ಕೆ ಭೇಟಿಯನ್ನು ಸುಗಮಗೊಳಿಸಲಿದೆ ಮತ್ತು ಸೌರಾಷ್ಟ್ರ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ.
ಬದ್ಲಾಪುರ್ - ಕರ್ಜತ್ ವಿಭಾಗವು ಮುಂಬೈ ಉಪನಗರ ಕಾರಿಡಾರ್ನ ಭಾಗವಾಗಿದೆ. 3ನೇ ಮತ್ತು 4ನೇ ಮಾರ್ಗದ ಯೋಜನೆಯು ಮುಂಬೈ ಉಪನಗರ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ದಕ್ಷಿಣ ಭಾರತಕ್ಕೆ ಸಂಪರ್ಕ ಒದಗಿಸುತ್ತಾ ಪ್ರಯಾಣಿಕರ ಭವಿಷ್ಯದ ಬೇಡಿಕೆಗಳನ್ನು ಪೂರೈಸಲಿದೆ.
ಕಲ್ಲಿದ್ದಲು, ಉಪ್ಪು, ಕಂಟೇನರ್, ಸಿಮೆಂಟ್, ಪಿ.ಒ.ಎಲ್ ಮುಂತಾದ ಸರಕುಗಳ ಸಾಗಣೆಗೆ ಇದು ಅತ್ಯಗತ್ಯ ಮಾರ್ಗವಾಗಿದೆ. ಸಾಮರ್ಥ್ಯ ವೃದ್ಧಿ ಕಾರ್ಯಗಳಿಂದಾಗಿ 18 MTPA (ವಾರ್ಷಿಕ ಮಿಲಿಯನ್ ಟನ್) ಹೆಚ್ಚುವರಿ ಸರಕು ಸಾಗಣೆ ಸಾಧ್ಯವಾಗಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿರುವುದರಿಂದ ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದು (3 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು ಇಂಗಾಲಾಮ್ಲ (CO2) ಹೊರಸೂಸುವಿಕೆಯನ್ನು ತಗ್ಗಿಸಲು (16 ಕೋಟಿ ಕೆಜಿ) ಪೂರಕವಾಗಲಿದೆ. ಇದು 64 (ಅರವತ್ನಾಲ್ಕು) ಲಕ್ಷ ಮರಗಳನ್ನು ನೆಡುವುದಕ್ಕೆ ಸಮನಾಗಿದೆ.
*****
(Release ID: 2194815)
Visitor Counter : 7