ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ದಿನಾಂಕ 31.08.2025 ರಂದು ಮಾಡಿದ ‘ಮನ್ ಕಿ ಬಾತ್’ – 125ನೇ ಸಂಚಿಕೆಯ ಕನ್ನಡ ಅವತರಣಿಕೆ
Posted On:
31 AUG 2025 11:44AM by PIB Bengaluru
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮಳೆಗಾಲದ ಈ ಸಮಯದಲ್ಲಿ, ನೈಸರ್ಗಿಕ ವಿಕೋಪಗಳು ದೇಶಕ್ಕೆ ವಿವಿಧ ಬಗೆಯ ಸವಾಲನ್ನು ಒಡ್ಡುತ್ತಿವೆ. ಕಳೆದ ಕೆಲವು ವಾರಗಳಲ್ಲಿ, ನಾವು ಪ್ರವಾಹ ಮತ್ತು ಭೂಕುಸಿತಗಳ ವಿನಾಶವನ್ನು ಕಂಡಿದ್ದೇವೆ. ಕೆಲವೆಡೆ ಮನೆಗಳು ನಾಶವಾದವು, ಕೆಲವೆಡೆ ಹೊಲಗದ್ದೆಗಳು ಮುಳುಗಿಹೋದವು, ಕುಟುಂಬಗಳೇ ಛಿದ್ರಗೊಂಡವು, ನೀರಿನ ರಭಸಕ್ಕೆ ಸೇತುವೆಗಳು ಕೊಚ್ಚಿಹೋದವು, ರಸ್ತೆಗಳು ಕೊಚ್ಚಿಹೋದವು, ಜನರ ಜೀವನ ಸಂಕಷ್ಟಕ್ಕೊಳಗಾಯಿತು. ಈ ಘಟನೆಗಳು ಪ್ರತಿಯೊಬ್ಬ ಭಾರತೀಯನನ್ನು ದುಃಖಿತರನ್ನಾಗಿಸಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವು ನಮ್ಮೆಲ್ಲರ ನೋವಾಗಿದೆ. ಎಲ್ಲೆಲ್ಲಿ ಬಿಕ್ಕಟ್ಟು ತಲೆದೋರಿದೆಯೋ, ಅಲ್ಲಲ್ಲಿ ಜನರನ್ನು ರಕ್ಷಿಸಲು ನಮ್ಮ NDRF-SDRF ಸಿಬ್ಬಂದಿ, ಇತರ ಭದ್ರತಾ ಪಡೆಗಳು, ಹಗಲಿರುಳು ಶ್ರಮಿಸಿದರು. ಸೈನಿಕರು ತಂತ್ರಜ್ಞಾನದ ಸಹಾಯವನ್ನು ಸಹ ಪಡೆದುಕೊಂಡರು. ಥರ್ಮಲ್ ಕ್ಯಾಮೆರಾಗಳು, ಲೈವ್ ಡಿಟೆಕ್ಟರ್ಗಳು, ಸ್ನಿಫರ್ ನಾಯಿಗಳು, ಮತ್ತು ಡ್ರೋನ್ ನಿಗಾವಣೆಯಂತಹ ಅನೇಕ ಆಧುನಿಕ ಸಂಪನ್ಮೂಲಗಳ ಸಹಾಯದಿಂದ, ಪರಿಹಾರ ಕಾರ್ಯದ ವೇಗವರ್ಧನೆಗೆ ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ಈ ಸಮಯದಲ್ಲಿ, ಹೆಲಿಕಾಪ್ಟರ್ಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಯಿತು, ಗಾಯಾಳುಗಳನ್ನು ವಿಮಾನದಲ್ಲಿ ಸಾಗಿಸಲಾಯಿತು. ವಿಪತ್ತಿನ ಸಮಯದಲ್ಲಿ ಸಹಾಯಕ್ಕೆ ಸೇನೆಯು ಮುಂಚೂಣಿಯಲ್ಲಿತ್ತು. ಸ್ಥಳೀಯ ಜನರು, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ಆಡಳಿತವರ್ಗ, ಎಲ್ಲರೂ ಬಿಕ್ಕಟ್ಟಿನ ಈ ಸಮಯದಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಈ ಸಂಕಷ್ಟದಲ್ಲಿ ಮಾನವೀಯತೆಯನ್ನು ಮೆರೆದ ಪ್ರತಿಯೊಬ್ಬ ನಾಗರಿಕರಿಗೂ ನಾನು ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ಪ್ರವಾಹ ಮತ್ತು ಮಳೆಯ ಈ ವಿನಾಶದ ಮಧ್ಯೆಯೂ, ಜಮ್ಮು ಮತ್ತು ಕಾಶ್ಮೀರವು ಎರಡು ವಿಶೇಷ ಸಾಧನೆಗಳನ್ನು ಮಾಡಿದೆ. ಹೆಚ್ಚಿನ ಜನರು ಇದನ್ನು ಗಮನಿಸಿಲ್ಲ, ಆದರೆ ನೀವು ಆ ಸಾಧನೆಗಳ ಬಗ್ಗೆ ಅರಿತಾಗ, ಬಹಳ ಸಂತೋಷಪಡುತ್ತೀರಿ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿರುವ ಒಂದು ಕ್ರೀಡಾಂಗಣದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪುಲ್ವಾಮಾದಲ್ಲಿ ಮೊಟ್ಟ ಮೊದಲ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವನ್ನು ಆಡಲಾಯಿತು. ಈ ಹಿಂದೆ ಇದು ಸಾಧ್ಯವಾಗಿರಲಿಲ್ಲ. ಆದರೆ ಈಗ ನನ್ನ ದೇಶ ಬದಲಾಗುತ್ತಿದೆ. ಈ ಪಂದ್ಯ 'ರಾಯಲ್ ಪ್ರೀಮಿಯರ್ ಲೀಗ್' ನ ಒಂದು ಭಾಗವಾಗಿದೆ, ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿವಿಧ ತಂಡಗಳು ಆಡುತ್ತಿವೆ. ಪುಲ್ವಾಮಾದಲ್ಲಿ ಇಷ್ಟೊಂದು ಜನರು ವಿಶೇಷವಾಗಿ ಯುವಕರು, ರಾತ್ರಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಆನಂದಿಸುತ್ತಿರುವ ದೃಶ್ಯವು ನಿಜವಾಗಿಯೂ ವಿಸ್ಮಯಕಾರಿಯಾಗಿತ್ತು.
ಸ್ನೇಹಿತರೇ, ಗಮನ ಸೆಳೆದ ಎರಡನೇ ಕಾರ್ಯಕ್ರಮವೆಂದರೆ ದೇಶದ ಮೊದಲ 'ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವ'. ಇದನ್ನು ಶ್ರೀನಗರದ ದಾಲ್ ಸರೋವರದಲ್ಲಿ ಆಯೋಜಿಸಲಾಗಿತ್ತು., ಇಂತಹ ಉತ್ಸವವನ್ನು ಆಯೋಜಿಸಲು ಇದು ಖಂಡಿತ ಒಂದು ವಿಶೇಷ ಸ್ಥಳವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಲ ಕ್ರೀಡೆಗಳನ್ನು ಹೆಚ್ಚು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿತ್ತು. ಭಾರತದಾದ್ಯಂತ 800 ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿದ್ದರು. ಮಹಿಳಾ ಕ್ರೀಡಾಪಟುಗಳು ಸಹ ಹಿಂದುಳಿದಿಲ್ಲ, ಅವರ ಭಾಗವಹಿಸುವಿಕೆಯೂ ಪುರುಷರಿಗೆ ಸರಿಸಮಾನವಾಗಿತ್ತು. ಇದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪದಕಗಳನ್ನು ಗೆದ್ದ ಮಧ್ಯಪ್ರದೇಶಕ್ಕೆ ವಿಶೇಷ ಅಭಿನಂದನೆಗಳು, ನಂತರದ ಸರದಿಯಲ್ಲಿ ಹರಿಯಾಣ ಮತ್ತು ಒಡಿಶಾಗಳಿವೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತು ಅಲ್ಲಿನ ಜನರ ಆತ್ಮೀಯತೆ ಹಾಗೂ ಆತಿಥ್ಯಕ್ಕಾಗಿ ಅವರನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತೇನೆ. ಸ್ನೇಹಿತರೇ, ಈ ಕಾರ್ಯಕ್ರಮದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು, ಅದರಲ್ಲಿ ಭಾಗವಹಿಸಿದ ಇಬ್ಬರು ಆಟಗಾರರೊಂದಿಗೆ ಮಾತನಾಡಲು ನಾನು ಯೋಚಿಸಿದೆ. ಅವರಲ್ಲಿ ಒಬ್ಬರು ಒಡಿಶಾದ ರಶ್ಮಿತಾ ಸಾಹು ಮತ್ತು ಇನ್ನೊಬ್ಬರು ಶ್ರೀನಗರದ ಮೊಹ್ಸಿನ್ ಅಲಿ. ಅವರು ಏನು ಹೇಳುತ್ತಾರೆಂದು ಕೇಳೋಣ.
ಪ್ರಧಾನಮಂತ್ರಿ : ರಶ್ಮಿತಾ ಅವರೇ, ನಮಸ್ಕಾರ
ರಶ್ಮಿತಾ: ನಮಸ್ತೆ ಸರ್.
ಪ್ರಧಾನಮಂತ್ರಿ : ಜೈ ಜಗನ್ನಾಥ್.
ರಶ್ಮಿತಾ: ಜೈ ಜಗನ್ನಾಥ್ ಸರ್.
ಪ್ರಧಾನಮಂತ್ರಿ : ರಶ್ಮಿತಾ ಅವರೇ, ಎಲ್ಲಕ್ಕಿಂತ ಮೊದಲು, ಕ್ರೀಡಾ ಜಗತ್ತಿನಲ್ಲಿ ನಿಮ್ಮ ಯಶಸ್ಸಿಗೆ ಅನಂತ ಅಭಿನಂದನೆಗಳು.
ರಶ್ಮಿತಾ: ಧನ್ಯವಾದಗಳು ಸರ್.
ಪ್ರಧಾನಮಂತ್ರಿ : ರಶ್ಮಿತಾ, ನಮ್ಮ ಶ್ರೋತೃಗಳು ನಿಮ್ಮ ಬಗ್ಗೆ ಮತ್ತು ನಿಮ್ಮ ಕ್ರೀಡಾ ಯಾತ್ರೆಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ನಾನು ಕೂಡ ಬಹಳ ಉತ್ಸುಕನಾಗಿದ್ದೇನೆ. ಹೇಳಿ.
ರಶ್ಮಿತಾ: ಸರ್, ನಾನು ಒಡಿಶಾದ ರಶ್ಮಿತಾ ಸಾಹು ಮತ್ತು ನಾನು ಕ್ಯಾನೋಯಿಂಗ್ ಆಟಗಾರ್ತಿ. ನಾನು 2017 ರಲ್ಲಿ ಕ್ರೀಡೆ ಆರಂಭಿಸಿದೆ. ನಾನು ಕ್ಯಾನೋಯಿಂಗ್ ಆಯ್ದುಕೊಂಡೆ. ನಾನು ರಾಷ್ಟ್ರೀಯ ಮಟ್ಟ, ರಾಷ್ಟ್ರೀಯ ಚಾಂಪಿಯನ್ಶಿಪ್ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಬಳಿ ಒಟ್ಟು 41 ಪದಕಗಳಿವೆ. 13 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನ ಪದಕಗಳಿವೆ, ಸರ್.
ಪ್ರಧಾನಮಂತ್ರಿ : ನೀವು ಈ ಕ್ರೀಡೆಯಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ? ಎಲ್ಲರಿಗಿಂತ ಮೊದಲು ನಿಮ್ಮನ್ನು ಈ ಕ್ರೀಡೆಯೆಡೆ ಪ್ರೇರೇಪಿಸಿದವರು ಯಾರು? ನಿಮ್ಮ ಕುಟುಂಬದಲ್ಲಿ ಕ್ರೀಡಾ ವಾತಾವರಣವಿದೆಯೇ?
ರಶ್ಮಿತಾ: ಇಲ್ಲ ಸರ್. ನಾನಿರುವ ಗ್ರಾಮದಲ್ಲಿ ಯಾವುದೇ ಕ್ರೀಡಾ ಪರಿಸರ ಇರಲಿಲ್ಲ. ಇಲ್ಲಿ ನದಿಯಲ್ಲಿ ದೋಣಿ ವಿಹಾರ ನಡೆಯುತ್ತಿತ್ತು, ನಾನು ಈಜಲು ಹೋಗಿದ್ದೆ. ನಾನು ಮತ್ತು ನನ್ನ ಸ್ನೇಹಿತರು ಸಹಜವಾಗಿ ಈಜುತ್ತಿದ್ದೆವು. ಆಗ ಅಲ್ಲಿ ಕ್ಯಾನೋಯಿಂಗ್-ಕಯಾಕಿಂಗ್ ದೋಣಿ ಹಾದು ಹೋಯಿತು, ನನಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ. ಹಾಗಾಗಿ ನಾನು ನನ್ನ ಸ್ನೇಹಿತೆಯನ್ನು ಅದೇನೆಂದು ಕೇಳಿದೆ. ಜಗತ್ಪುರದಲ್ಲಿ SAI Sports Centre ಎಂಬ ಕ್ರೀಡಾ ಕೇಂದ್ರವಿದೆ, ಅಲ್ಲಿ ಕ್ರೀಡೆಗಳು ನಡೆಯುತ್ತವೆ ಎಂದು ಹೇಳಿದಳು. ತಾನು ಕೂಡ ಅಲ್ಲಿಗೆ ಹೋಗಲಿದ್ದೇನೆ ಎಂದಳು. ನನಗೆ ಅದು ತುಂಬಾ ಆಸಕ್ತಿದಾಯಕವೆನಿಸಿತು. ಹಾಗಾದರೆ ಅದೇನು? ಮಕ್ಕಳು ನೀರಿನಲ್ಲಿ ಹೇಗೆ ಇದನ್ನು ಮಾಡುತ್ತಾರೆ? ದೋಣಿ ವಿಹಾರ ಮಾಡುತ್ತಾರೆಯೇ? ನಾನು ಕೂಡ ಅಲ್ಲಿಗೆ ಹೋಗಬೇಕೆಂದು ಅವಳಿಗೆ ಹೇಳಿದೆ. ಹೇಗೆ ಹೋಗಬೇಕು? ನನಗೂ ತಿಳಿಸು ಎಂದು ಕೇಳಿದೆ. ಅಲ್ಲಿಗೆ ಹೋಗಿ ಮಾತನಾಡಲು ಅವಳು ಹೇಳಿದಳು. ತಕ್ಷಣ ನಾನು ಮನೆಗೆ ಹೋಗಿ “ಅಪ್ಪಾ ನಾನು ಹೋಗಬೇಕು”, ಎಂದು ದುಂಬಾಲು ಬಿದ್ದೆ. ನಂತರ ಅಪ್ಪ ಆಗಲಿ ಎಂದು ಅಲ್ಲಿಗೆ ಕರೆದೊಯ್ದರು. ಆ ಸಮಯದಲ್ಲಿ ಯಾವುದೇ ಟ್ರಯಲ್ ಇರಲಿಲ್ಲ, ನಂತರ ತರಬೇತುದಾರರು ಫೆಬ್ರವರಿಯಲ್ಲಿ ಟ್ರಯಲ್ ನಡೆಯುತ್ತದೆ, ನೀವು ಫೆಬ್ರವರಿ - ಮಾರ್ಚ್ನಲ್ಲಿ ಟ್ರಯಲ್ ಸಮಯದಲ್ಲಿ ಬನ್ನಿ ಎಂದು ಹೇಳಿದರು. ನಂತರ ನಾನು ಟ್ರಯಲ್ ಸಮಯದಲ್ಲಿ ಅಲ್ಲಿಗೆ ಹೋದೆ.
ಪ್ರಧಾನಮಂತ್ರಿ : ಸರಿ ರಶ್ಮಿತಾ, ಕಾಶ್ಮೀರದಲ್ಲಿ ನಡೆದ 'ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವ'ದಲ್ಲಿ ನಿಮ್ಮ ಸ್ವಂತ ಅನುಭವ ಹೇಗಿತ್ತು? ತಾವು ಕಾಶ್ಮೀರಕ್ಕೆ ಹೋಗಿದ್ದು ಇದೇ ಮೊದಲ ಬಾರಿಯೇ?
ರಶ್ಮಿತಾ: ಹೌದು ಸರ್, ನಾನು ಪ್ರಥಮ ಬಾರಿ ಕಾಶ್ಮೀರಕ್ಕೆ ಹೋಗಿದ್ದೆ. ಖೇಲೋ ಇಂಡಿಯಾ, ಮೊದಲ 'ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವ' ವನ್ನು ಅಲ್ಲಿ ಆಯೋಜಿಸಲಾಗಿತ್ತು. ನಾನು ಅದರಲ್ಲಿ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಸಿಂಗಲ್ಸ್ 200 ಮೀಟರ್ ಮತ್ತು 500 ಮೀಟರ್ ಡಬಲ್ಸ್, ಮತ್ತು ನಾನು ಎರಡರಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದೇನೆ ಸರ್.
ಪ್ರಧಾನಮಂತ್ರಿ : ಓಹ್ ವಾರೆವ್ಹಾ! ಎರಡರಲ್ಲೂ ಪದಕ ಗಿಟ್ಟಿಸಿಕೊಂಡಿದ್ದೀರಾ?
ರಶ್ಮಿತಾ: ಹೌದು ಸರ್.
ಪ್ರಧಾನಮಂತ್ರಿ : ಅನಂತ ಅಭಿನಂದನೆಗಳು.
ರಶ್ಮಿತಾ: ಧನ್ಯವಾದಗಳು ಸರ್.
ಪ್ರಧಾನಮಂತ್ರಿ : ಸರಿ ರಶ್ಮಿತಾ, ಜಲ ಕ್ರೀಡೆಗಳನ್ನು ಹೊರತುಪಡಿಸಿ ನಿಮ್ಮ ಹವ್ಯಾಸಗಳೇನು?
ರಶ್ಮಿತಾ: ಸರ್, ಜಲ ಕ್ರೀಡೆಗಳನ್ನು ಹೊರತುಪಡಿಸಿ, ನನಗೆ ಓಟ ಬಹಳ ಇಷ್ಟ. ನಾನು ರಜೆಗೆಂದು ಹೋದಾಗಲೆಲ್ಲಾ ರನ್ನಿಂಗ್ ಮಾಡುತ್ತೇನೆ. ನನ್ನ ಹಳೆಯ ಮೈದಾನದಲ್ಲಿ ನಾನು ಸ್ವಲ್ಪ ಫುಟ್ಬಾಲ್ ಆಡಲು ಕಲಿತಿದ್ದೆ, ಆದ್ದರಿಂದ ನಾನು ಅಲ್ಲಿಗೆ ಹೋದಾಗಲೆಲ್ಲಾ ಬಹಳಷ್ಟು ರನ್ನಿಂಗ್ ಮಾಡುತ್ತೇನೆ ಮತ್ತು ನಾನು ಸ್ವಲ್ಪ ಫುಟ್ಬಾಲ್ ಕೂಡಾ ಆಡುತ್ತೇನೆ, ಸರ್.
ಪ್ರಧಾನಮಂತ್ರಿ : ಅಂದರೆ ಕ್ರೀಡೆ ಎಂಬುದು ನಿಮ್ಮ ರಕ್ತದಲ್ಲಿಯೇ ಇದೆ.
ರಶ್ಮಿತಾ: ಹೌದು ಸರ್, ನಾನು 1ನೇ ತರಗತಿಯಿಂದ 10ನೇ ತರಗತಿಯವರೆಗೆ ಶಾಲೆಯಲ್ಲಿ ಓದುತ್ತಿದ್ದಾಗ, ನಾನು ಯಾವುದರಲ್ಲಿ ಭಾಗವಹಿಸುತ್ತಿದ್ದೆನೋ ಅಲ್ಲೆಲ್ಲಾ ಪ್ರಥಮ ಸ್ಥಾನ ಪಡೆಯುತ್ತಿದೆ ಮತ್ತು ಚಾಂಪಿಯನ್ ಆಗಿದ್ದೆ ಸರ್.
ಪ್ರಧಾನಮಂತ್ರಿ : ರಶ್ಮಿತಾ, ನಿಮ್ಮಂತೆ ಕ್ರೀಡೆಯಲ್ಲಿ ಪ್ರಗತಿ ಸಾಧಿಸಲು ಬಯಸುವವರಿಗೆ ನೀವು ಸಂದೇಶವನ್ನು ನೀಡ ಬಯಸಿದರೆ, ಏನೆಂದು ಸಂದೇಶ ನೀಡುತ್ತೀರಿ?
ರಶ್ಮಿತಾ: ಸರ್, ಅನೇಕ ಮಕ್ಕಳಿಗೆ ಮನೆಯಿಂದ ಹೊರಬರಲು ಅವಕಾಶವಿರುವುದಿಲ್ಲ ಅದರಲ್ಲೂ ಬಾಲಕಿಯಿದ್ದರೆ, ಹೊರಗೆ ಹೋಗಲು ಸಾಧ್ಯವೇ ಇಲ್ಲ. ಕೆಲವರು ಆರ್ಥಿಕ ಸಮಸ್ಯೆಗಳಿಂದಾಗಿ ಕ್ರೀಡೆಗಳಿಂದ ಹಿಂದೆ ಸರಿಯುತ್ತಿದ್ದಾರೆ. ಈ ಖೇಲೋ ಇಂಡಿಯಾ ಯೋಜನೆಯಲ್ಲಿ, ಅನೇಕ ಮಕ್ಕಳು ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ ಮತ್ತು ಅನೇಕ ಮಕ್ಕಳಿಗೆ ಸಾಕಷ್ಟು ಸಹಾಯ ಲಭಿಸುತ್ತಿರುವುದರಿಂದ ಅನೇಕ ಮಕ್ಕಳು ಮುಂದುವರಿಯಲು ಸಾಧ್ಯವಾಗುತ್ತಿದೆ. ಕ್ರೀಡೆಗಳನ್ನು ತೊರೆಯಬೇಡಿ ಎಂದು ನಾನು ಎಲ್ಲರಿಗೂ ಹೇಳಬಯಸುತ್ತೇನೆ, ನೀವು ಕ್ರೀಡೆಯೊಂದಿಗೆ ಸಾಕಷ್ಟು ಮುಂದುವರಿಯಬಹುದು. ಆದ್ದರಿಂದ ಕ್ರೀಡೆ ಒಂದು ಆಟ ಹೌದು, ಆದರೆ ಅದರಲ್ಲಿ ದೇಹದ ಪ್ರತಿಯೊಂದು ಭಾಗವೂ ಆರೋಗ್ಯಕರವಾಗಿರುತ್ತದೆ ಮತ್ತು ಕ್ರೀಡೆಗಳಲ್ಲಿ ಸಾಧನೆ ಮಾಡಿ ಭಾರತಕ್ಕೆ ಪದಕಗಳನ್ನು ಗಳಿಸುವುದು ನಮ್ಮ ಕರ್ತವ್ಯವಾಗಿದೆ, ಸರ್.
ಪ್ರಧಾನಮಂತ್ರಿ : ರಶ್ಮಿತಾ ಅವರೇ, ನನಗೆ ತುಂಬಾ ಸಂತೋಷವಾಯಿತು, ಮತ್ತೊಮ್ಮೆ ನಿಮಗೆ ಅನಂತ ಅಭಿನಂದನೆಗಳು ಮತ್ತು ದಯವಿಟ್ಟು ನಿಮ್ಮ ತಂದೆಯವರಿಗೆ ನನ್ನ ನಮನಗಳನ್ನು ತಿಳಿಸಿ, ಏಕೆಂದರೆ ಅವರು ಹಲವಾರು ತೊಂದರೆಗಳ ನಡುವೆಯೂ ಮಗಳು ಮುಂದುವರಿಯಲು ತುಂಬಾ ಪ್ರೋತ್ಸಾಹ ನೀಡಿದ್ದಾರೆ, ನಿಮಗೆ ನನ್ನ ಶುಭಾಶಯಗಳು. ಧನ್ಯವಾದಗಳು.
ರಶ್ಮಿತಾ: ಧನ್ಯವಾದಗಳು ಸರ್.
ಪ್ರಧಾನಮಂತ್ರಿ : ಜೈ ಜಗನ್ನಾಥ್.
ರಶ್ಮಿತಾ: ಜೈ ಜಗನ್ನಾಥ್ ಸರ್.
ಪ್ರಧಾನಮಂತ್ರಿ : ಮೊಹ್ಸಿನ್ ಅಲಿ ನಮಸ್ತೆ
ಮೊಹ್ಸಿನ್ ಅಲಿ: ನಮಸ್ತೆ ಸರ್
ಪ್ರಧಾನಮಂತ್ರಿ : ಮೊಹ್ಸಿನ್ ಅವರೇ, ನಿಮಗೆ ಮನಃಪೂರ್ವಕ ಅಭಿನಂದನೆಗಳು ಮತ್ತು ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭಾಶಯಗಳು.
ಮೊಹ್ಸಿನ್ ಅಲಿ: ಧನ್ಯವಾದಗಳು ಸರ್.
ಪ್ರಧಾನಮಂತ್ರಿ : ಮೊಹ್ಸಿನ್, ನೀವು ಪ್ರಥಮ ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವದಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದ ಮೊದಲಿಗರು. ನಿಮ್ಮ ಅನುಭವ ಹೇಗಿತ್ತು?
ಮೊಹ್ಸಿನ್ ಅಲಿ: ಸರ್, ನನಗೆ ತುಂಬಾ ಸಂತೋಷವಾಗಿದೆ, ಪ್ರಥಮ ಬಾರಿಗೆ ಕಾಶ್ಮೀರದಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ನಾನು ಚಿನ್ನದ ಪದಕ ಗೆದ್ದಿದ್ದೇನೆ.
ಪ್ರಧಾನಮಂತ್ರಿ : ಜನರು ಏನು ಚರ್ಚೆ ಮಾಡುತ್ತಿದ್ದಾರೆ?
ಮೊಹ್ಸಿನ್ ಅಲಿ: ಸಾಕಷ್ಟು ಚರ್ಚೆ ನಡೆಯುತ್ತಿದೆ ಸರ್, ಇಡೀ ಕುಟುಂಬ ಸಂತೋಷವಾಗಿದೆ.
ಪ್ರಧಾನಮಂತ್ರಿ : ನಿಮ್ಮ ಸಹಪಾಠಿಗಳು?
ಮೊಹ್ಸಿನ್ ಅಲಿ: ಸಹಪಾಠಿಗಳು ಸಹ ತುಂಬಾ ಸಂತೋಷವಾಗಿದ್ದಾರೆ, ಕಾಶ್ಮೀರದಲ್ಲಿರುವ ಎಲ್ಲರೂ ನೀವು ಚಿನ್ನದ ಪದಕ ವಿಜೇತರು ಎಂದು ಹೇಳುತ್ತಾರೆ.
ಪ್ರಧಾನಮಂತ್ರಿ : ಹಾಗಾದರೆ ನೀವು ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದೀರಿ.
ಮೊಹ್ಸಿನ್ ಅಲಿ: ಹೌದು ಸರ್!
ಪ್ರಧಾನಮಂತ್ರಿ : ಜಲ ಕ್ರೀಡೆಗಳಲ್ಲಿ ನೀವು ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ ಮತ್ತು ಅದರ ಪ್ರಯೋಜನಗಳೇನು?
ಮೊಹ್ಸಿನ್ ಅಲಿ: ಬಾಲ್ಯದಲ್ಲಿ, ಮೊದಲು ದಾಲ್ ಸರೋವರದಲ್ಲಿ ದೋಣಿ ಓಡುವುದನ್ನು ನಾನು ನೋಡಿದೆ, ನನ್ನ ತಂದೆ ನನಗೆ “ಅದನ್ನು ನೀನು ಮಾಡುತ್ತೀಯಾ” ಎಂದು ಕೇಳಿದರು, ಹೌದು ನನಗೂ ಅದರಲ್ಲಿ ಆಸಕ್ತಿ ಇದೆ ಎಂದೆ. ನಂತರ ನಾನು ಸೆಂಟರ್ ಗೆ ಮೇಡಂ ಬಳಿ ಹೋದೆ, ಬಿಲ್ಕಿಸ್ ಮೇಡಂ ನನಗೆ ಕಲಿಸಿದರು.
ಪ್ರಧಾನಮಂತ್ರಿ : ಮೊಹ್ಸಿನ್, ದೇಶಾದ್ಯಂತದಿಂದ ಜನರು ಬಂದಿದ್ದರು. ಮೊದಲ ಬಾರಿಗೆ ಅದು ಕೂಡ ಶ್ರೀನಗರದಲ್ಲಿ ಜಲ ಕ್ರೀಡಾಕೂಟವನ್ನು ಆಯೋಜಿಸಲಾಯಿತು, ಅದು ಕೂಡ ದಾಲ್ ಸರೋವರದಲ್ಲಿ ನಡೆಯಿತು. ದೇಶಾದ್ಯಂತದ ಅನೇಕ ಜನರು ಬಂದಿದ್ದರು. ಅಲ್ಲಿನ ಜನರ ಭಾವನೆ ಏನಿತ್ತು?
ಮೊಹ್ಸಿನ್ ಅಲಿ: ಸರ್, ನಮಗೆ ತುಂಬಾ ಸಂತೋಷವಾಗಿದೆ. ಎಲ್ಲರೂ ಇದು ಒಳ್ಳೆಯ ಸ್ಥಳ, ಇಲ್ಲಿ ಎಲ್ಲವೂ ಚೆನ್ನಾಗಿದೆ, ಸೌಲಭ್ಯಗಳು ಚೆನ್ನಾಗಿವೆ ಎಂದು ಹೇಳುತ್ತಿದ್ದಾರೆ. ಇಲ್ಲಿ 'ಖೇಲೋ ಇಂಡಿಯಾ'ದಲ್ಲಿ ಎಲ್ಲವೂ ಚೆನ್ನಾಗಿತ್ತು.
ಪ್ರಧಾನಮಂತ್ರಿ : ಹಾಗಾದರೆ ನೀವು ಎಂದಾದರೂ ಕಾಶ್ಮೀರದ ಹೊರಗೆ ಎಲ್ಲಿಯಾದರೂ ಆಡಲು ಹೋಗಿದ್ದೀರಾ?
ಮೊಹ್ಸಿನ್ ಅಲಿ: ಹೌದು ಸರ್, ನಾನು ಭೋಪಾಲ್ ಗೆ, ಗೋವಾಗೆ, ಕೇರಳಕ್ಕೆ, ಹಿಮಾಚಲ ಪ್ರದೇಶಗಳಿಗೆ ಹೋಗಿದ್ದೇನೆ.
ಪ್ರಧಾನಮಂತ್ರಿ : ಸರಿ, ಹಾಗಾದರೆ ನೀವು ಇಡೀ ಭಾರತವನ್ನು ನೋಡಿದ್ದೀರಿ.
ಮೊಹ್ಸಿನ್ ಅಲಿ: ಹೌದು ಸರ್
ಪ್ರಧಾನಮಂತ್ರಿ : ಸರಿ, ಅಲ್ಲಿಗೆ ಬಹಳಷ್ಟು ಆಟಗಾರರು ಬಂದಿದ್ದರಲ್ಲವೇ?
ಮೊಹ್ಸಿನ್ ಅಲಿ: ಹೌದು ಸರ್
ಪ್ರಧಾನಮಂತ್ರಿ : ಹಾಗಾದರೆ ನಿಮಗೆ ಹೊಸ ಸ್ನೇಹಿತರು ದೊರೆತರೋ, ಇಲ್ಲವೋ?
ಮೊಹ್ಸಿನ್ ಅಲಿ: ಸರ್, ನನಗೆ ತುಂಬಾ ಸ್ನೇಹಿತರು ಸಿಕ್ಕಿದ್ದಾರೆ, ದಾಲ್ ಸರೋವರ, ಲಾಲ್ ಚೌಕ್ ನಲ್ಲಿ ನಾವು ಒಟ್ಟಿಗೆ ಸುತ್ತಾಡಿದ್ದೇವೆ, ಎಲ್ಲೆಡೆ ಸುತ್ತಾಡಿದ್ದೇವೆ ಸರ್, ಪಹಲ್ಗಾಮ್ ಗೆ ಕೂಡ ಹೋಗಿದ್ದೇವೆ, ಹೌದು ಸರ್ ಎಲ್ಲೆಡೆ ತಿರುಗಾಡಿದ್ದೇವೆ.
ಪ್ರಧಾನಮಂತ್ರಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಪ್ರತಿಭೆ ಅದ್ಭುತವಾಗಿದೆ ಎಂದು ನಾನು ಕಂಡಿದ್ದೇನೆ.
ಮೊಹ್ಸಿನ್ ಅಲಿ: ಹೌದು ಸರ್
ಪ್ರಧಾನಮಂತ್ರಿ : ಜಮ್ಮು ಮತ್ತು ಕಾಶ್ಮೀರದ ನಮ್ಮ ಯುವಕರು ದೇಶದ ಹೆಸರನ್ನು ಉಜ್ವಲಗೊಳಿಸುವ ಶಕ್ತಿಯನ್ನು ಹೊಂದಿದ್ದಾರೆ ಮತ್ತು ನೀವು ಅದನ್ನು ಸಾಬೀತುಪಡಿಸಿದ್ದೀರಿ.
ಮೊಹ್ಸಿನ್ ಅಲಿ: ಸರ್, ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಕನಸು, ಅದೊಂದೇ ನನ್ನ ಕನಸು.
ಪ್ರಧಾನಮಂತ್ರಿ : ವಾಹ್, ಶಬ್ಬಾಶ್.
ಮೊಹ್ಸಿನ್ ಅಲಿ: ಅದೊಂದೇ ನನ್ನ ಕನಸು ಸರ್.
ಪ್ರಧಾನಮಂತ್ರಿ : ನಿಮ್ಮಿಂದ ಈ ಮಾತು ಕೇಳಿದಾಗ ನನಗೆ ರೋಮಾಂಚನವಾಯಿತು.
ಮೊಹ್ಸಿನ್ ಅಲಿ: ಸರ್, ಅದು ನನ್ನ ಕನಸು, ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು. ದೇಶಕ್ಕಾಗಿ ರಾಷ್ಟ್ರಗೀತೆ ನುಡಿಸುವಂತೆ ಮಾಡುವುದೇ ನನ್ನ ಏಕೈಕ ಕನಸಾಗಿದೆ.
ಪ್ರಧಾನಮಂತ್ರಿ : ನನ್ನ ದೇಶದ ಒಬ್ಬ ಕಾರ್ಮಿಕ ಕುಟುಂಬದ ಪುತ್ರ ಇಷ್ಟು ದೊಡ್ಡ ಕನಸು ಕಾಣುತ್ತಾನೆ, ಅಂದರೆ ಈ ದೇಶವು ಬಹಳಷ್ಟು ಪ್ರಗತಿ ಹೊಂದಲಿದೆ.
ಮೊಹ್ಸಿನ್ ಅಲಿ: ಸರ್, ಇದು ಬಹಳಷ್ಟು ಪ್ರಗತಿ ಸಾಧಿಸಲಿದೆ. ಇಲ್ಲಿ ಖೇಲೋ ಇಂಡಿಯಾವನ್ನು ಆಯೋಜಿಸಿದ ಭಾರತ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ, ಇಲ್ಲಿ ಇದು ಮೊದಲ ಬಾರಿಗೆ ಆಯೋಜಿಸಲಾಗಿದೆ ಸರ್.
ಪ್ರಧಾನಮಂತ್ರಿ : ಆದ್ದರಿಂದಲೇ ನಿಮ್ಮ ಶಾಲೆಯಲ್ಲಿಯೂ ನಿಮಗಾಗಿ ಜೈಕಾರಗಳು ಕೇಳಿ ಬರುತ್ತಿರಬಹುದು
ಮೊಹ್ಸಿನ್ ಅಲಿ: ಹೌದು ಸರ್.
ಪ್ರಧಾನಮಂತ್ರಿ : ಆಯ್ತು ಮೊಹ್ಸಿನ್, ನಿಮ್ಮೊಂದಿಗೆ ಮಾತನಾಡಿ ನನಗೆ ನಿಜವಾಗಿಯೂ ಆನಂದವಾಯಿತು. ನನ್ನ ಪರವಾಗಿ ನಿಮ್ಮ ತಂದೆಯವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಬಯಸುತ್ತೇನೆ. ಏಕೆಂದರೆ ಅವರು ಸ್ವತಃ ಕಾರ್ಮಿಕನಾಗಿದ್ದರೂ ನಿಮ್ಮ ಜೀವನವನ್ನು ರೂಪಿಸಿದ್ದಾರೆ ಮತ್ತು ನೀವು ನಿಮ್ಮ ತಂದೆಯ ಇಚ್ಛೆಯಂತೆ ವಿರಮಿಸದೆ 10 ವರ್ಷಗಳ ಕಾಲ ಸತತ ಪರಿಶ್ರಮದಿಂದ ದುಡಿದಿದ್ದೀರಿ, ಇದು ಒಬ್ಬ ಆಟಗಾರನಿಗೆ ಉತ್ತಮ ಸ್ಫೂರ್ತಿಯಾಗಿದೆ ಮತ್ತು ನಿಮ್ಮ ಹಿಂದೆ ಅಪಾರ ಶ್ರಮವಹಿಸಿದ ನಿಮ್ಮ ತರಬೇತುದಾರರನ್ನು ಸಹ ನಾನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳು, ಅನಂತ ಅಭಿನಂದನೆಗಳು ಭಯ್ಯಾ.
ಮೊಹ್ಸಿನ್ ಅಲಿ: ಧನ್ಯವಾದಗಳು ಸರ್, ನಮಸ್ಕಾರ್ ಸರ್, ಜೈ ಹಿಂದ್!
ಸ್ನೇಹಿತರೇ, 'ಏಕ್ ಭಾರತ್-ಶ್ರೇಷ್ಠ ಭಾರತ್' ಎಂಬ ಭಾವನೆ, ದೇಶದ ಏಕತೆ, ದೇಶದ ಅಭಿವೃದ್ಧಿಗೆ ಅತ್ಯಂತ ಮುಖ್ಯ ಮತ್ತು ಖಂಡಿತವಾಗಿಯೂ ಕ್ರೀಡೆಗಳು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ನಾನು ಹೇಳುತ್ತೇನೆ ಯಾರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೋ ಅವರು ಅಭಿವೃದ್ಧಿ ಹೊಂದುತ್ತಾರೆ. ನಮ್ಮ ದೇಶ ಕೂಡಾ ಎಷ್ಟು ಹೆಚ್ಚು ಪಂದ್ಯಾವಳಿಗಳನ್ನು ಆಡುತ್ತದೆಯೋ, ಅಷ್ಟು ಹೆಚ್ಚು ಅಭಿವೃದ್ಧಿ ಹೊಂದುತ್ತದೆ. ನೀವಿಬ್ಬರೂ ಆಟಗಾರರಿಗೆ ಮತ್ತು ನಿಮ್ಮ ತಂಡದ ಸದಸ್ಯರಿಗೆ ನನ್ನ ಅನಂತ ಶುಭಾಶಯಗಳು.
ನನ್ನ ಪ್ರೀತಿಯ ದೇಶಬಾಂಧವರೇ, ನೀವು UPSC ಹೆಸರು ಖಂಡಿತವಾಗಿಯೂ ಕೇಳಿಯೇ ಇರುತ್ತೀರಿ. ಈ ಸಂಸ್ಥೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆನಿಸಿರುವ ಸಿವಿಲ್ ಸರ್ವೀಸಸ್ – ನಾಗರಿಕ ಸೇವೆಗಳ ಪರೀಕ್ಷೆಗಳನ್ನೂ ನಡೆಸುತ್ತದೆ. ನಾವೆಲ್ಲರೂ ನಾಗರಿಕ ಸೇವೆಗಳಲ್ಲಿ ಅಗ್ರಸ್ಥಾನ ಪಡೆದವರ ಪ್ರೇರಣಾದಾಯಕ ಮಾತುಗಳನ್ನು ಹಲವು ಬಾರಿ ಆಲಿಸಿದ್ದೇವೆ. ಈ ಯುವಜನರು ಕಠಿಣ ಪರಿಸ್ಥಿತಿಗಳಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ತಮ್ಮ ಪರಿಶ್ರಮದಿಂದ ಈ ಸೇವೆಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. – ಆದರೆ ಸ್ನೇಹಿತರೇ, UPSC ನ ಪರೀಕ್ಷೆಗಳ ಬಗ್ಗೆ ಮತ್ತೊಂದು ಸತ್ಯವೂ ಇದೆ. ಇಂತಹ ಸಾವಿರಾರು ಅಭ್ಯರ್ಥಿಗಳಿರುತ್ತಾರೆ, ಅವರಲ್ಲಿ ಸಾಕಷ್ಟು ಸಾಮರ್ಥ್ಯವೂ ಇರುತ್ತದೆ, ಅವರ ಪರಿಶ್ರಮ ಬೇರೆಯವರದ್ದಕ್ಕಿಂತ ಕಡಿಮೆಯೇನೂ ಇರುವುದಿಲ್ಲ, ಆದರೆ ಅವರು ಸ್ವಲ್ಪ ಮಾತ್ರ ಅಂತರದಿಂದಾಗಿ ಅಂತಿಮ ಪಟ್ಟಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಈ ಅಭ್ಯರ್ಥಿಗಳು ಮತ್ತೊಂದು ಪರೀಕ್ಷೆಗಾಗಿ ಹೊಸದಾಗಿ ಸಿದ್ಧತೆ ನಡೆಸಬೇಕಾಗುತ್ತದೆ. ಇದರಲ್ಲಿ ಅವರ ಸಮಯ ಮತ್ತು ಹಣ ಎರಡೂ ವೆಚ್ಚವಾಗುತ್ತದೆ. ಆದ್ದರಿಂದ ಈಗಿನಿಂದ ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಒಂದು ಡಿಜಿಟಲ್ ವೇದಿಕೆ ರಚಿಸಲಾಗಿದ್ದು, ಇದರ ಹೆಸರು ‘ಪ್ರತಿಭಾ ಸೇತು’ ಎಂಬುದಾಗಿದೆ.
‘ಪ್ರತಿಭಾ ಸೇತು’ ವೇದಿಕೆಯಲ್ಲಿ UPSC ಯ ಬೇರೆ ಬೇರೆ ಪರೀಕ್ಷೆಗಳ ಎಲ್ಲಾ ಹಂತಗಳಲ್ಲೂ ಉತ್ತೀರ್ಣರಾಗಿದ್ದು, ಅಂತಿಮ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿದ್ದ ಇಂತಹ ಅಭ್ಯರ್ಥಿಗಳ ದತ್ತಾಂಶವನ್ನು ಉಳಿಸಿಕೊಳ್ಳಲಾಗುತ್ತದೆ. ಈ ಪೋರ್ಟಲ್ ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರತಿಭಾವಂತ ಯುವಜನತೆಯ ದತ್ತಾಂಶ ಬ್ಯಾಂಕ್ ಒಳಗೊಂಡಿದೆ. ಕೆಲವು ನಾಗರಿಕ ಸೇವೆಗಳಿಗಾಗಿ ಸಿದ್ಧತೆ ನಡೆಸುತ್ತಿರಬಹುದು, ಕೆಲವರು ಇಂಜಿನಿಯರಿಂಗ್ ಸೇವೆಗಳಿಗೆ ಹೋಗಲು ಇಷ್ಟಪಟ್ಟಿರಬಹುದು, ಇನ್ನು ಕೆಲವು ವೈದ್ಯಕೀಯ ಸೇವೆಗಳ ಪ್ರತಿಯೊಂದು ಮೆಟ್ಟಿಲನ್ನೂ ಯಶಸ್ವಿಯಾಗಿ ಏರಿದ್ದರೂ ಅಂತಿಮವಾಗಿ ಅವರ ಆಯ್ಕೆ ಆಗಿರದೇ ಇರಬಹುದು – ಇಂತಹ ಎಲ್ಲಾ ಅಭ್ಯರ್ಥಿಗಳ ಮಾಹಿತಿ ಈಗ ‘ಪ್ರತಿಭಾ ಸೇತು’ ಪೋರ್ಟಲ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಪೋರ್ಟಲ್ ನಿಂದ ಖಾಸಗಿ ಕಂಪೆನಿಗಳು ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಮಾಹಿತ ಪಡೆದುಕೊಂಡು, ಅವರನ್ನು ತಮ್ಮ ಸಂಸ್ಥೆಗಳಲ್ಲಿ ನೇಮಕ ಮಾಡಿಕೊಳ್ಳಬಹುದಾಗಿದೆ. ಸ್ನೇಹಿತರೆ, ಈ ಪ್ರಯತ್ನದ ಫಲಿತಾಂಶ ಕೂಡಾ ಬರಲಾರಂಭಿಸಿದೆ. ನೂರಾರು ಅಭ್ಯರ್ಥಿಗಳಿಗೆ ಈ ಪೋರ್ಟಲ್ ನ ನೆರವಿನಿಂದ ತ್ವರಿತವಾಗಿ ಉದ್ಯೋಗ ದೊರೆತಿದೆ ಮತ್ತು ಅಲ್ಪ ಅಂತರದಿಂದ ಅಂತಿಮ ಪಟ್ಟಿಯಲ್ಲಿ ಹೆಸರು ಪಡೆಯಲು ಸಾಧ್ಯವಾಗದಿದ್ದವರು ಈಗ ಹೊಸ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ಜಗತ್ತಿನ ಗಮನ ಭಾರತದತ್ತ ಕೇಂದ್ರೀಕೃತವಾಗಿದೆ. ಭಾರತದಲ್ಲಿ ಅಡಗಿರುವ ಸಾಮರ್ಥ್ಯವನ್ನು ಜಗತ್ತು ಕಾಣುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸಂತಸದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ podcast ಬಹಳ ಫ್ಯಾಷನ್ ಆಗಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ವಿಭಿನ್ನ ವಿಷಯಗಳಿಗೆ ಸಂಬಂಧಿಸಿದ podcast ಅನ್ನು ಅನೇಕರು ವೀಕ್ಷಿಸುತ್ತಾರೆ ಮತ್ತು ಆಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾನು ಕೂಡಾ ಕೆಲವು podcast ನಲ್ಲಿ ಪಾಲ್ಗೊಂಡಿದ್ದೆ. ಅಂತಹದ್ದೇ ಒಂದು podcast ವಿಶ್ವದಲ್ಲಿ ಅತ್ಯಂತ ಪ್ರಸಿದ್ಧವಾದ Podcaster Lex Fridman ಅವರೊಂದಿಗಿತ್ತು. ಆ podcast ನಲ್ಲಿ ಅನೇಕ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು ಮತ್ತು ವಿಶ್ವಾದ್ಯಂತ ಜನರು ಅದನ್ನು ಆಲಿಸಿದರು ಮತ್ತು podcast ನಲ್ಲಿ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ನಾನು ಒಂದು ವಿಷಯ ಕುರಿತು ಮಾತನಾಡಿದೆ. ಜರ್ಮನ್ ದೇಶದ ಆಟಗಾರನೋರ್ವ ಆ podcast ಆಲಿಸಿದರು ಮತ್ತು ಆತನ ಗಮನ ನಾನು ಆಗ ಆಡಿದ ಮಾತುಗಳ ಮೇಲೆ ಕೇಂದ್ರೀಕೃತವಾಯಿತು. ಆತ ಆ ವಿಷಯದೊಂದಿಗೆ ಎಷ್ಟೊಂದು ಮಗ್ನನಾದನೆಂದರೆ, ಮೊದಲು ಆತ ಆ ವಿಷಯದ ಬಗ್ಗೆ ಸಂಶೋಧನೆ ನಡೆಸಿದರು, ನಂತರ ಜರ್ಮನಿಯಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು ಮತ್ತು ಈ ವಿಷಯಕ್ಕೆ ಸಂಬಂಧಿಸಿಂದಂತೆ ಅವರು ಭಾರತದೊಂದಿಗೆ ಸಂಪರ್ಕ ಹೊಂದಲು ಇಚ್ಛಿಸುತ್ತಿರುವುದಾಗಿ ಪತ್ರ ಬರೆದು ತಿಳಿಸಿದರು. ಪಾಡ್ ಕಾಸ್ಟ್ ನಲ್ಲಿ ಜರ್ಮನ್ ದೇಶದ ಓರ್ವ ಆಟಗಾರನಿಗೆ ಸ್ಫೂರ್ತಿ ನೀಡಿದಂತಹ ಯಾವ ಮಾತನ್ನು ಮೋದಿ ಅವರು ಉಲ್ಲೇಖಿಸಿದರು ಎಂದು ನೀವು ಯೋಚಿಸುತ್ತಿರಬಹುದು – ನಾನು ನಿಮಗೆ ನೆನಪಿಸುತ್ತೇನೆ , ನಾನು ಪಾಡ್ ಕಾಸ್ಟ್ ನಲ್ಲಿ ಮಾತನಾಡುತ್ತಾ, ಮಧ್ಯಪ್ರದೇಶದ ಶಹಡೋಲ್ ನಲ್ಲಿ ಫುಟ್ಬಾಲ್ ಆಟದ ಬಗ್ಗೆ ಅತ್ಯಂತ ಆಸಕ್ತಿ ಇರುವ ಒಂದು ಗ್ರಾಮವನ್ನು ವರ್ಣಿಸಿದ್ದೆ. ವಾಸ್ತವದಲ್ಲಿ ಎರಡು ವರ್ಷಗಳ ಹಿಂದೆ ನಾನು ಶಹಡೋಲ್ ಗೆ ಹೋಗಿದ್ದೆ, ಅಲ್ಲಿನ ಕಾಲ್ಚೆಂಡು ಆಟಗಾರರನ್ನು ಭೇಟಿಯಾಗಿದ್ದೆ. podcast ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಾನು ಶಹಡೋಲ್ ನ ಫುಟ್ಬಾಲ್ ಆಟಗಾರರ ಬಗ್ಗೆಯೂ ಪ್ರಸ್ತಾಪಿಸಿದ್ದೆ. ಈ ಮಾತನ್ನು ಜರ್ಮನಿಯ ಫುಟ್ಬಾಲ್ ಆಟಗಾರ ಮತ್ತು ಕೋಚ್ Dietmar Beiersdorfer ಅವರು ಕೂಡಾ ಕೇಳಿಸಿಕೊಂಡಿದ್ದರು. ಶಹಡೋಲ್ ನ ಯುವ ಫುಟ್ಬಾಲ್ ಕ್ರೀಡಾಪಟುಗಳ ಜೀವನ ಪಯಣ ಆತನ ಮೇಲೆ ಬಹಳ ಪ್ರಭಾವ ಬೀರಿತು ಮತ್ತು ಪ್ರೇರಣೆಯನ್ನೂ ನೀಡಿತು. ನಿಜಕ್ಕೂ ಇಲ್ಲಿನ ಪ್ರತಿಭಾವಂತ ಫುಟ್ಬಾಲ್ ಆಟಗಾರರು ಬೇರೊಂದು ದೇಶದ ಗಮನವನ್ನು ತಮ್ಮೆಡೆಗೆ ಸೆಳೆಯುತ್ತಾರೆ ಎಂಬ ಕಲ್ಪನೆ ಕೂಡಾ ಇರಲಿಲ್ಲ. ಈಗ ಜರ್ಮನಿಯ ಈ ಕೋಚ್ ಶಹಡೋಲ್ ನ ಕೆಲವು ಆಟಗಾರರಿಗೆ ಜರ್ಮನಿಯ ಒಂದು ಅಕಾಡೆಮಿಯಲ್ಲಿ ತರಬೇತಿ ನೀಡಲು ಮುಂದಾಗಿದ್ದಾರೆ. ಇದಾದ ನಂತರ ಮಧ್ಯ ಪ್ರದೇಶ ಸರ್ಕಾರ ಕೂಡಾ ಆತನನ್ನು ಸಂಪರ್ಕಿಸಿತು. ಶೀಘ್ರದಲ್ಲೇ ಶಹಡೋಲ್ ನ ನಮ್ಮ ಕೆಲವು ಯುವ-ಸ್ನೇಹಿತರು ತರಬೇತಿ ಕೋರ್ಸ್ ಗಾಗಿ ಜರ್ಮನಿಗೆ ತೆರಳಲಿದ್ದಾರೆ. ಭಾರತದಲ್ಲಿ ಫುಟ್ಬಾಲ್ ಆಟದ ಜನಪ್ರಿಯತೆ ಸತತವಾಗಿ ಹೆಚ್ಚಾಗುತ್ತಿದೆ ಎನ್ನುವುದು ನನಗೆ ಬಹಳ ಸಂತೋಷ ತಂದುಕೊಡುವ ವಿಷಯವಾಗಿದೆ. ಸಮಯ ದೊರೆತಾಗ ಖಂಡಿತವಾಗಿಯೂ ಶಹಡೋಲ್ ಗೆ ಹೋಗಬೇಕೆಂದೂ, ಮತ್ತು ಅಲ್ಲಿ ನಡೆಯುತ್ತಿರುವ ಕ್ರೀಡಾ ಕ್ರಾಂತಿಯನ್ನು ಸಮೀಪದಿಂದ ನೋಡಿಬರಬೇಕೆಂದೂ ನಾನು ಫುಟ್ಬಾಲ್ ಪ್ರೇಮಿಗಳಲ್ಲಿ ಮನವಿ ಮಾಡುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೇ, ಸೂರತ್ ನಿವಾಸಿ ಜಿತೇಂದ್ರ ಸಿಂಗ್ ರಾಠೋಡ್ ಅವರ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಬಹಳ ಸಂತಸವೆನಿಸುತ್ತದೆ. ಮನಸ್ಸು ಹೆಮ್ಮೆಯಿಂದ ತುಂಬುತ್ತದೆ. ಜಿತೇಂದ್ರ ಸಿಂಗ್ ರಾಠೋಡ್ ಅವರ್ ಓರ್ವ security guard ಆಗಿದ್ದಾರೆ ಮತ್ತು ಪ್ರತಿಯೊಬ್ಬ ದೇಶಭಕ್ತನಿಗೂ ಅತ್ಯಂತ ಪ್ರೇರಣೆ ನೀಡುವಂತಹ ಒಂದು ಅದ್ಭುತ ಉಪಕ್ರಮವೊಂದನ್ನು ಕೈಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು, ಭಾರತ ಮಾತೆಯ ಸೇವೆಯಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದ ಎಲ್ಲಾ ಸೈನಿಕರ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಇಂದು ಅವರ ಬಳಿ ಮೊದಲ ಮಹಾಯುದ್ಧದಿಂದ ಹಿಡಿದು ಈಗಿನವರೆಗೆ ಹುತಾತ್ಮರಾದ ಸಾವಿರಾರು ವೀರ ಯೋಧರ ಕುರಿತ ಮಾಹಿತಿ ಲಭ್ಯವಿದೆ. ಆತನ ಬಳಿ ಹುತಾತ್ಮ ಯೋಧರ ಸಾವಿರಾರು ಚಿತ್ರಪಟಗಳೂ ಇವೆ. ಒಂದು ಬಾರಿ ಓರ್ವ ಹುತಾತ್ಮ ಯೋಧನ ತಂದೆ ನುಡಿದ ಮಾತುಗಳು ಆತನ ಹೃದಯಕ್ಕೆ ತಟ್ಟಿದವು. ಹುತಾತ್ಮ ಯೋಧನ ತಂದೆ ಹೀಗೆಂದಿದ್ದರು “ಪುತ್ರ ವೀರಮರಣ ಹೋದ ಮಾತ್ರಕ್ಕೆ ಏನಾಯಿತು, ದೇಶ ಸುರಕ್ಷಿತವಾಗಿದೆಯಲ್ಲವೇ” ಈ ಒಂದು ಮಾತು ಜಿತೇಂದ್ರ ಸಿಂಗ್ ಅವರ ಮನಸ್ಸಿನಲ್ಲಿ ದೇಶ ಭಕ್ತಿಯ ಅದ್ಭುತ ಉತ್ಸಾಹ ತುಂಬಲು ಕಾರಣವಾಯಿತು. ಇಂದು ಆತ ಅನೇಕ ಹುತಾತ್ಮ ಯೋಧರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಆತ ಸುಮಾರು ಎರಡೂವರೆ ಸಾವಿರ ಹುತಾತ್ಮ ಯೋಧರ ತಾಯಿ-ತಂದೆಯರ ಪಾದಧೂಳಿಯನ್ನು ತಂದು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಸಶಸ್ತ್ರ ಪಡೆಗಳ ಬಗ್ಗೆ ಅವರಿಗಿರುವ ಆಳವಾದ ಪ್ರೀತಿ ಮತ್ತು ಬಾಂಧವ್ಯಕ್ಕೆ ಜೀವಂತ ಉದಾಹರಣೆಯಾಗಿದೆ. ಜಿತೇಂದ್ರ ಅವರ ಜೀವನವು ನಮಗೆ ರಾಷ್ಟ್ರ ಪ್ರೇಮದ ನಿಜವಾದ ಶಿಕ್ಷಣ ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮನೆಗಳ ಮಾಳಿಗೆಗಳಲ್ಲಿ, ದೊಡ್ಡ ದೊಡ್ಡ ಕಟ್ಟಡಗಳ ಮೇಲೆ, ಸರ್ಕಾರದ ಕಛೇರಿಗಳ ಮೇಲೆ ಸೌರ ಫಲಕಗಳು ಹೊಳೆಯುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು. ಜನರು ಇದರ ಪ್ರಾಮುಖ್ಯತೆಯನ್ನು ಈಗ ಅರ್ಥಮಾಡಿಕೊಳ್ಳುತ್ತಿದ್ದಾರೆ ಮತ್ತು ಮುಕ್ತ ಮನದಿಂದ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಸೂರ್ಯದೇವನ ಅನುಗ್ರಹ ಸಾಕಷ್ಟಿದೆ, ಆತ ಕರುಣಿಸುತ್ತಿರುವ ಈ ಶಕ್ತಿಯನ್ನು ನಾವು ಪೂರ್ಣರೂಪದಲ್ಲಿ ಉಪಯೋಗಿಸಿಕೊಳ್ಳಬಾರದೇಕೆ.
ಸ್ನೇಹಿತರೇ, ಸೌರ ಶಕ್ತಿಯಿಂದ ರೈತರ ಜೀವನ ಕೂಡಾ ಬದಲಾಗುತ್ತಿದೆ. ಅದೇ ಹೊಲ, ಅದೇ ಪರಿಶ್ರಮ, ಅದೈ ರೈತ ಆದರೆ ಈಗ ಶ್ರಮದ ಫಲ ಅಧಿಕ. ಈ ಬದಲಾವಣೆ ಸೌರ ಪಂಪ್ ನಿಂದ ಮತ್ತು ಸೌರ ಶಕ್ತಿಯಿಂದ ನಡೆಯುವ ಅಕ್ಕಿ ಗಿರಣಿಯಿಂದ ಬಂದಿದೆ. ಇಂದು ದೇಶದ ಅನೇಕ ರಾಜ್ಯಗಳಲ್ಲಿ ಸೌರ ಶಕ್ತಿಯಿಂದ ನಡೆಯುವ ಸಾವಿರಾರು ಅಕ್ಕಿ ಗಿರಣಿಗಳನ್ನು ಸ್ಥಾಪಿಸಲಾಗಿದೆ. ಈ ಸೋಲಾರ್ ಅಕ್ಕಿ ಗಿರಣಿಗಳು ರೈತರ ಆದಾಯದೊಂದಿಗೆ ಅವರ ಮುಖದಲ್ಲಿ ಸಂತಸದ ಹೊಳಪನ್ನು ಕೂಡಾ ಹೆಚ್ಚಿಸಿವೆ.
ಸ್ನೇಹಿತರೆ, ಬಿಹಾರದ ದೇವಕೀ ಅವರು ಸೋಲಾರ್ ಪಂಪ್ ನಿಂದ ಗ್ರಾಮದ ಅದೃಷ್ಟವನ್ನೇ ಬದಲಾಯಿಸಿದ್ದಾರೆ. ಮುಜಾಫ್ಫರ್ ಪುರದ ರತನ್ ಪುರ ಗ್ರಾಮದ ನಿವಾಸಿ ದೇವಕಿ ಅವರನ್ನು ಜನರು ಈಗ ಪ್ರೀತಿಯಿಂದ “Solar ಸೋದರಿ” ಎಂದು ಕರೆಯುತ್ತಾರೆ. ದೇವಕಿ ಅವರ ಜೀವನ ಸುಲಭವೇನೂ ಆಗಿರಲಿಲ್ಲ. ಸಣ್ಣ ವಯಸ್ಸಿನಲ್ಲೇ ವಿವಾಹವಾಗಿತ್ತು, ಸಣ್ಣದೊಂದು ಹೊಲ, ನಾಲ್ಕು ಮಕ್ಕಳ ಜವಾಬ್ದಾರಿ ಮತ್ತು ಭವಿಷ್ಯದ ಯಾವುದೇ ಸ್ಪಷ್ಟ ಚಿತ್ರಣವಿರಲಿಲ್ಲ. ಆದರೆ ಅವರು ಎಂದಿಗೂ ಎದೆಗುಂದಲಿಲ್ಲ. ಅವರು ಒಂದು ಸ್ವ-ಸಹಾಯ ಗುಂಪಿನ ಸಂಪರ್ಕ ಸಾಧಿಸಿದರು ಮತ್ತು ಅಲ್ಲಿಯೇ ಅವರಿಗೆ ಸೋಲಾರ್ ಪಂಪ್ ನ ಬಗ್ಗೆ ಮಾಹಿತಿ ದೊರೆಯಿತು. ಅವರು ಸೋಲಾರ್ ಪಂಪ್ ಗಾಗಿ ಪ್ರಯತ್ನ ಆರಂಭಿಸಿದರು ಮತ್ತು ಅದರಲ್ಲಿ ಯಶಸ್ವಿಯಾದರು. ಸೋಲಾರ್ ದೀದಿಯ ಸೋಲಾರ್ ಪಂಪ್ ಆ ನಂತರ ಗ್ರಾಮದ ಚಿತ್ರಣವನ್ನೇ ಬದಲಿಸಿಬಿಟ್ಟಿತು. ಮೊದಲು ಕೆಲವೇ ಎಕರೆ ಪ್ರದೇಶದಲ್ಲಿ ನೀರಾವರಿಯಾಗುತ್ತಿತ್ತೋ ಈಗ ಸೋಲಾರ್ ಸೋದರಿಯ ಸೋಲಾರ್ ಪಂಪ್ ನಿಂದ 40 ಕ್ಕಿಂತಲೂ ಅದಿಕ ಎಕರೆ ಪ್ರದೇಶಕ್ಕೆ ನೀರು ತಲುಪುತ್ತಿದೆ. ಸೋಲಾರ್ ಸೋದರಿಯ ಈ ಅಭಿಯಾನದಲ್ಲಿ ಗ್ರಾಮದ ಇತರ ರೈತರು ಕೂಡಾ ಕೈಜೋಡಿಸಿದ್ದಾರೆ. ಅವರ ಬೆಳೆ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ ಮತ್ತು ಅವರ ವರಮಾನವೂ ಹೆಚ್ಚಾಗತೊಡಗಿದೆ.
ಸ್ನೇಹಿತರೇ, ಮೊದಲು ದೇವಕಿಯವರ ಜೀವನ ನಾಲ್ಕು ಗೋಡೆಗಳ ಮಧ್ಯೆ ಮುರುಟಿಕೊಂಡಿತ್ತು. ಆದರೆ ಈಗ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಆಕೆ ತಮ್ಮ ಕೆಲಸ ಮಾಡುತ್ತಿದ್ದಾರೆ, ಸೋಲಾರ್ ಸೋದರಿಯಾಗಿ ಹಣ ಗಳಿಸುತ್ತಿದ್ದಾರೆ ಮತ್ತು ಎಲ್ಲಕ್ಕಿಂತ ಆಸಕ್ತಿದಾಯಕ ವಿಷಯವೆಂದರೆ, ಅವರು ಪ್ರದೇಶದ ರೈತರಿಂದ ಯುಪಿಐ ಮೂಲಕ ಪಾವತಿ ಪಡೆದುಕೊಳ್ಳುತ್ತಿದ್ದಾರೆ. ಈಗ ಇಡೀ ಗ್ರಾಮವೇ ಅವರನ್ನು ಬಹಳ ಗೌರವದಿಂದ ಕಾಣುತ್ತಿದೆ. ಸೌರ ಶಕ್ತಿ ಕೇವಲ ವಿದ್ಯುಚ್ಛಕ್ತಿಯ ಸಾಧನ ಮಾತ್ರವಲ್ಲ, ಇದು ಹಳ್ಳಿ ಹಳ್ಳಿಗಳಲ್ಲಿ ಹೊಸ ಬೆಳಕು ಮೂಡಿಸುವ ಹೊಸ ಚೈತನ್ಯವೂ ಹೌದು ಎನ್ನುವುದನ್ನು ಆಕೆಯ ಪರಿಶ್ರಮ ಮತ್ತು ದೂರದೃಷ್ಟಿ ತೋರಿಸಿಕೊಟ್ಟಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸೆಪ್ಟೆಂಬರ್ 15 ರಂದು ಭಾರತದ ಮಹಾನ್ ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವಾಗಿದೆ. ನಾವು ಈ ದಿನವನ್ನು ಅಭಿಯಂತರರ ದಿನವನ್ನಾಗಿ ಆಚರಿಸುತ್ತೇವೆ. ಇಂಜಿನಿಯರ್ ಕೇವಲ ಯಂತ್ರವನ್ನು ತಯಾರಿಸುವುದಿಲ್ಲ, ಅವರು ಕನಸುಗಳನ್ನು ನನಸಾಗಿ ಬದಲಾಯಿಸುವ ಶ್ರಮಯೋಗಿಗಳಾಗಿರುತ್ತಾರೆ. ನಾನು ಭಾರತದ ಪ್ರತಿಯೊಬ್ಬ ಇಂಜಿನಿಯರ್ ಗೂ ಕೃತಜ್ಞತೆ ಅರ್ಪಿಸುತ್ತೇನೆ ಮತ್ತು ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ, ಸೆಪ್ಟೆಂಬರ್ ತಿಂಗಳಿನಲ್ಲಿಯೇ ಭಗವಾನ್ ವಿಶ್ವಕರ್ಮನನ್ನು ಪೂಜಿಸುವ ಪವಿತ್ರ ಸಂದರ್ಭವೂ ಬರಲಿದೆ. ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿ. ಈ ದಿನವನ್ನು ನಮ್ಮ ವಿಶ್ವಕರ್ಮ ಬಾಂಧವರಿಗೆ ಸಮರ್ಪಿಸಲಾಗಿದೆ, ಅವರು ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕೌಶಲ್ಯ ಮತ್ತು ಜ್ಞಾನವನ್ನು ನಿರಂತರವಾಗಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನಿಸುತ್ತಿದ್ದಾರೆ. ನಮ್ಮ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಬಡಗಿಗಳು ಯಾವಾಗಲೂ ಭಾರತದ ಸಮೃದ್ಧಿಯ ಅಡಿಪಾಯವಾಗಿದ್ದಾರೆ. ನಮ್ಮ ಈ ವಿಶ್ವಕರ್ಮ ಸೋದರರಿಗೆ ನೆರವು ನೀಡಲು ಸರ್ಕಾರವು ವಿಶ್ವಕರ್ಮ ಯೋಜನೆಯನ್ನು ಕೂಡಾ ಪ್ರಾರಂಭಿಸಿದೆ.
ಸ್ನೇಹಿತರೇ, ಈಗ ನಾನು ನಿಮಗಾಗಿ ಆಡಿಯೋ ರೆಕಾರ್ಡಿಂಗ್ ಅನ್ನು ಕೇಳಿಸಲು ಬಯಸುತ್ತೇನೆ.
ಆಡಿಯೋ ಬೈಟ್
(“ರಾಜ್ಯಗಳ ವಿಷಯದಲ್ಲಿ ನಾನು ಏನು ಮಾಡಿದ್ದೇನೋ, ಅಥವಾ ಹೈದರಾಬಾದ್ ವಿಷಯದಲ್ಲಿ ನಮ್ಮ ಸರ್ಕಾರ ಏನು ಮಾಡಿದೆಯೋ ಎಂದು ನೀವು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದೀರಿ, ನಿಜ ಮಾಡಿಯೇ ಇದ್ದೀರಿ, ಆದರೆ ಹೈದರಾಬಾದ್ ನ ವಿಷಯದಲ್ಲಿ ನಾವು ಏನು ಮಾಡಿದ್ದೇವೋ ಅದು ಮಾಡಲು ಎಷ್ಟು ಕಷ್ಟವಾಗಿತ್ತೆಂದು ನಿಮಗೆ ತಿಳಿದಿದೆ.ಎಲ್ಲಾ ರಾಜ್ಯಗಳೊಂದಿಗೆ, ಎಲ್ಲಾ ರಾಜಕುಮಾರರೊಂದಿಗೆ, ನಾವು ಯಾವುದೇ ರಾಜಕುಮಾರ ಅಥವಾ ರಾಜನಿಗೆ ನಾವು ತಪ್ಪು ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದೆವು. ಎಲ್ಲರೊಂದಿಗೆ ಒಂದೇ ರೀತಿ ವ್ಯವಹರಿಸಲಾಗುತ್ತದೆ, ಎಲ್ಲರಿಗೂ ಆಗುವುದೇ ಅವರಿಗೂ ಆಗುತ್ತದೆ ಎಂದಿದ್ದೆವು, ಆದರೆ, ನಾವು ಅವರಿಗಾಗಿ ಒಂದು ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದೇವೆ.”)
ಸ್ನೇಹಿತರೇ, ಈ ಧ್ವನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದ್ದಾಗಿದೆ. ಹೈದರಾಬಾದ್ ನ ಘಟನೆಗಳ ಬಗ್ಗೆ ಅವರ ಧ್ವನಿಯಲ್ಲಿನ ನೋವಿನ ಅನುಭವ ನಿಮಗಾಗಬಹುದು. ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ನಾವು ಹೈದರಾಬಾದ್ ವಿಮೋಚನಾ ದಿನವನ್ನು ಕೂಡಾ ಆಚರಿಸಲಿದ್ದೇವೆ. 'ಆಪರೇಷನ್ ಪೋಲೋ'ದಲ್ಲಿ ಭಾಗವಹಿಸಿದ ಎಲ್ಲಾ ವೀರರ ಧೈರ್ಯವನ್ನು ನಾವು ನೆನಪಿಸಿಕೊಳ್ಳುವ ತಿಂಗಳು ಇದು. 1947ರ ಆಗಸ್ಟ್ ತಿಂಗಳಿನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಹೈದರಾಬಾದ್ ವಿಭಿನ್ನ ಪರಿಸ್ಥಿತಿಯಲ್ಲಿತ್ತು ಎಂಬ ವಿಷಯ ನಿಮ್ಮೆಲ್ಲರಿಗೂ ತಿಳಿದೇ ಇದೆ. ನಿಜಾಮರ ಮತ್ತು ರಝಾಕಾರರ ಅರಾಜಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇತ್ತು. ‘ತ್ರಿವರ್ಣ ಧ್ವಜ’ ಹಾರಿಸುವುದಿರಲಿ, ಅಥವಾ ‘ವಂದೇ ಮಾತರಂ’ ಘೋಷಣೆ ಕೂಗಿದರೂ ಜನರನ್ನು ಕೊಲ್ಲಲಾಗುತ್ತಿತ್ತು. ಮಹಿಳೆಯರ ಮೇಲೆ ಬಡವರ ಮೇಲೆ ಅತ್ಯಾಚಾರ ಎಸಗಲಾಗುತ್ತಿತ್ತು. ಆ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಈ ಸಮಸ್ಯೆ ತುಂಬಾ ದೊಡ್ಡದಾಗುತ್ತಿದೆ ಎಂದು ಎಚ್ಚರಿಸಿದ್ದರು. ಅಂತಿಮವಾಗಿ, ಸರ್ದಾರ್ ಪಟೇಲ್ ಈ ವಿಷಯವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ಅವರು ಸರ್ಕಾರವನ್ನು 'ಆಪರೇಷನ್ ಪೋಲೋ' ಪ್ರಾರಂಭಿಸಲು ಮನವೊಲಿಸಿದರು. ದಾಖಲೆಯ ಸಮಯದಲ್ಲಿ ನಮ್ಮ ಪಡೆಗಳು ಹೈದರಾಬಾದ್ ಅನ್ನು ನಿಜಾಮರ ಸರ್ವಾಧಿಕಾರದಿಂದ ಮುಕ್ತಗೊಳಿಸಿ ಅದನ್ನು ಭಾರತದ ಭಾಗವನ್ನಾಗಿ ಮಾಡಿದವು. ಇಡೀ ದೇಶವು ಈ ಯಶಸ್ಸನ್ನು ಆಚರಿಸಿತು.
ನನ್ನ ಪ್ರೀತಿಯ ದೇಶವಾಸಿಗಳೇ, ನೀವು ವಿಶ್ವದ ಯಾವುದೇ ಮೂಲೆಗೆ ಹೋಗಿ, ಅಲ್ಲಿ ನಿಮಗೆ ಭಾರತೀಯ ಸಂಸ್ಕೃತಿಯ ಪ್ರಭಾವ ಖಂಡಿತವಾಗಿಯೂ ಕಾಣಸಿಗುತ್ತದೆ ಮತ್ತು ಈ ಪ್ರಭಾವ ಕೇವಲ ವಿಶ್ವದ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸಣ್ಣ ಸಣ್ಣ ಪಟ್ಟಣಗಳಲ್ಲಿ ಕೂಡಾ ನೋಡಬಹುದಾಗಿದೆ. ಇಟಲಿಯ ಒಂದು ಸಣ್ಣ ಪಟ್ಟಣ ಕ್ಯಾಂಪ್-ರೊಟೊಂಡೋದಲ್ಲಿ ಇಂತಹದ್ದೇ ಘಟನೆ ನಡೆಯಿತು. ಇಲ್ಲಿ ಮಹರ್ಷಿ ವಾಲ್ಮೀಕಿಯ ಪ್ರತಿಮೆ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಲ್ಲಿನ ಸ್ಥಳೀಯ ಮೇಯರ್ ಸೇರಿದಂತೆ ಕ್ಷೇತ್ರದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಕ್ಯಾಂಪ್-ರೊಟೊಂಡೋದಲ್ಲಿ ವಾಸಿಸುವ ಭಾರತೀಯ ಮೂಲದ ಜನರು ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣದಿಂದ ಬಹಳ ಸಂತೋಷಗೊಂಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಸಂದೇಶ ಸದಾಕಾಲ ನಮಗೆಲ್ಲಾ ಪ್ರೇರಣೆ ನೀಡುತ್ತಿರುತ್ತದೆ.
ಸ್ನೇಹಿತರೇ, ಈ ತಿಂಗಳಾರಂಭದಲ್ಲಿ ಕೆನಡಾದಲ್ಲಿ ಮಿಸೀಸಾಗಾದಲ್ಲಿ ಭಗವಾನ್ ಶ್ರೀರಾಮನ 51 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮದ ಬಗ್ಗೆ ಜನರು ಬಹಳ ಉತ್ಸುಕರಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಭಗವಾನ್ ಶ್ರೀ ರಾಮನ ಭವ್ಯ ಪ್ರತಿಮೆಯ ವಿಡಿಯೋಗಳನ್ನು ಸಾಕಷ್ಟು ಹಂಚಿಕೊಳ್ಳಲಾಗಿದೆ.
ಸ್ನೇಹಿತರೇ, ರಾಮಾಯಣ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಈ ಪ್ರೇಮವು ಈಗ ವಿಶ್ವದ ಪ್ರತಿಯೊಂದು ಮೂಲೆಗೂ ತಲುಪುತ್ತಿದೆ. ರಷ್ಯಾದ ಒಂದು ಪ್ರಮುಖ ಸ್ಥಳ – Vladivostok. ಚಳಿಗಾಲದಲ್ಲಿ ತಾಪಮಾನ - 20 (ಮೈನಸ್ ಇಪ್ಪತ್ತು) ರಿಂದ -30 (ಮೈನಸ್ ಮೂವತ್ತು) ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ಸ್ಥಳ ಇದಾಗಿದೆಯೆಂದು ಬಹಳಷ್ಟು ಜನರು ತಿಳಿದಿದ್ದಾರೆ. ಈ ತಿಂಗಳು ವ್ಲಾಡಿವೋಸ್ಟಾಕ್ ನಲ್ಲಿ ಒಂದು ವಿಶಿಷ್ಟ ಪ್ರದರ್ಶನವನ್ನು ನಡೆಸಲಾಯಿತು. ರಾಮಾಯಣದ ವಿವಿಧ ವಿಷಯಗಳ ಕುರಿತು ರಷ್ಯಾ ದೇಶದ ಮಕ್ಕಳು ಮಾಡಿದ ವರ್ಣಚಿತ್ರಗಳನ್ನು ಸಹ ಇದರಲ್ಲಿ ಪ್ರದರ್ಶಿಸಲಾಯಿತು. ಇಲ್ಲಿ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು. ಪ್ರಪಂಚದ ವಿವಿಧ ಭಾಗಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಪ್ರೀತಿಯನ್ನು ನೋಡಿ ನಿಜಕ್ಕೂ ಬಹಳ ಸಂತೋಷವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ‘ಮನ್ ಕೀ ಬಾತ್’ ಅನ್ನು ಇಲ್ಲಿಗೆ ಮುಗಿಸೋಣ. ಈಗ ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮವಿದೆ. ಮುಂಬರುವ ದಿನಗಳಲ್ಲಿ ಅನೇಕ ಹಬ್ಬಗಳು ಬರಲಿವೆ. ಈ ಹಬ್ಬಗಳನ್ನು ಆಚರಿಸುವಾಗ ನೀವು ಸ್ವದೇಶೀ ಮಾತನ್ನು ಮರೆಯಲೇ ಬಾರದು. ನೀಡುವ ಉಡುಗೊರೆಗಳು ಭಾರತದಲ್ಲೇ ತಯಾರಾಗಿರಬೇಕು, ತೊಡುವ ಉಡುಗೆಗಳನ್ನು ಭಾರತದಲ್ಲೇ ನೇಯ್ದಿರಬೇಕು, ಭಾರತದಲ್ಲೇ ತಯಾರಿಸಲಾದ ಸಾಮಗ್ರಿಗಳಿಂದಲೇ ಅಲಂಕರಿಸಬೇಕು, ಭಾರತದಲ್ಲೇ ತಯಾರಿಸಿದ ದೀಪಗಳಿಂದಲೇ ಜ್ಯೋತಿ ಬೆಳಗಬೇಕು – ಮತ್ತು ಹೀಗೆಯೇ ಜೀವನಕ್ಕೆ ಬೇಕಾದ ಪ್ರತಿಯೊಂದು ಅಗತ್ಯತೆಯೂ ಸ್ವದೇಶದ್ದೇ ಆಗಿರಬೇಕು. ಹೆಮ್ಮೆಯಿಂದ ಹೇಳಿ ‘ಇದು ಸ್ವದೇಶದ್ದು’, ಹೆಮ್ಮೆಯಿಂದ ಹೇಳಿ ‘‘ಇದು ಸ್ವದೇಶದ್ದು’’, ಹೆಮ್ಮೆಯಿಂದ ಹೇಳಿ ‘ಇದು ಸ್ವದೇಶದ್ದು’ಎಂದು. ಈ ಮನೋಭಾವನೆಯೊಂದಿಗೆ ನಾವು ಮುಂದೆ ಸಾಗಬೇಕು. ಒಂದೇ ಮಂತ್ರ ಅದುವೇ ‘ವೋಕಲ್ ಫಾರ್ ಲೋಕಲ್’, ಒಂದೇ ಹಾದಿ ‘ಆತ್ಮನಿರ್ಭರ ಭಾರತ’, ಒಂದೇ ಗುರಿ ಅದುವೇ ‘ಅಭಿವೃದ್ಧಿ ಹೊಂದಿದ ಭಾರತ’.
ಸ್ನೇಹಿತರೇ, ಈ ಸಂತಸಗಳ ನಡುವೆ ನೀವೆಲ್ಲರೂ ಸ್ವಚ್ಛತೆಯ ಬಗ್ಗೆ ಒತ್ತು ನೀಡುತ್ತಿರಿ, ಸ್ವಚ್ಛತೆಯಿದ್ದಲ್ಲಿ ಹಬ್ಬಗಳ ಆನಂದ ದುಪ್ಪಟ್ಟಾಗುತ್ತದೆ. ಸ್ನೇಹಿತರೇ, ‘ಮನದ ಮಾತಿಗಾಗಿ’ ನನಗೆ ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಸಂದೇಶಗಳನ್ನು ಕಳುಹಿಸುತ್ತಿರಿ. ನಿಮ್ಮ ಪ್ರತಿಯೊಂದು ಸಲಹೆ ಸೂಚನೆ ಈ ಕಾರ್ಯಕ್ರಮಕ್ಕಾಗಿ ಬಹಳ ಮುಖ್ಯವಾದುದು. ನಿಮ್ಮ ಅಭಿಪ್ರಾಯಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ. ಮುಂದಿನ ಬಾರಿ ನಾವು ಭೇಟಿಯಾದಾಗ, ಮತ್ತಷ್ಟು ಹೊಸ ವಿಷಯಗಳ ಕುರಿತು ಮಾತನಾಡುತ್ತೇನೆ.
ಅನೇಕಾನೇಕ ಧನ್ಯವಾದ. ನಮಸ್ಕಾರ.
*****
(Release ID: 2162411)
Visitor Counter : 8
Read this release in:
Odia
,
Gujarati
,
Telugu
,
Punjabi
,
Manipuri
,
Assamese
,
English
,
Urdu
,
Marathi
,
हिन्दी
,
Bengali
,
Tamil
,
Malayalam