ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್ 25–26 ರಂದು ಗುಜರಾತ್ ಗೆ ಪ್ರಧಾನಮಂತ್ರಿ ಅವರ ಭೇಟಿ


ಪ್ರಧಾನಮಂತ್ರಿ ಅವರಿಂದ ಅಹಮದಾಬಾದ್ ನಲ್ಲಿ 5,400 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ 

ಈ ಯೋಜನೆಗಳು ನಗರಾಭಿವೃದ್ಧಿ, ಇಂಧನ, ರಸ್ತೆಗಳು ಮತ್ತು ರೈಲ್ವೆ ಸೇರಿದಂತೆ ಹಲವು ವಲಯಗಳ ಅಗತ್ಯಗಳನ್ನು ಪೂರೈಸಲಿವೆ
 
ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಪ್ರಮುಖ ಉದಾಹರಣೆಯಾಗಿ, 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲು ಸುಜುಕಿಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ "ಇ ವಿಟಾರಾ" ವನ್ನು ಪ್ರಧಾನಮಂತ್ರಿ ಅವರು ಹಂಸಲ್ಪುರದಲ್ಲಿ ಉದ್ಘಾಟಿಸಲಿದ್ದಾರೆ

ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ಗಳ ಸ್ಥಳೀಯ ಉತ್ಪಾದನೆಯನ್ನು ಟಿ.ಡಿ.ಎಸ್ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಇದು ಭಾರತವು ಹಸಿರು ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರವಾಗುವತ್ತ ಒಂದು ಐತಿಹಾಸಿಕ ಹೆಜ್ಜೆಯಾಗದೆ

Posted On: 24 AUG 2025 1:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25 - 26 ರಂದು ಗುಜರಾತ್ಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 25 ರಂದು ಸಂಜೆ 6 ಗಂಟೆಗೆ ಅಹಮದಾಬಾದ್ನ ಖೋಡಲ್ಧಾಮ್ ಮೈದಾನದಲ್ಲಿ ಅವರು 5,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆಗಸ್ಟ್ 26 ರಂದು ಬೆಳಿಗ್ಗೆ 10:30ರ ಸುಮಾರಿಗೆ, ಅಹಮದಾಬಾದ್ನ ಹಂಸಲ್ಪುರದಲ್ಲಿ ಪ್ರಧಾನಮಂತ್ರಿ ಅವರು ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ಗಳ ಸ್ಥಳೀಯ ಉತ್ಪಾದನೆಯನ್ನು ಉದ್ಘಾಟಿಸಲಿದ್ದಾರೆ ಮತ್ತು 100 ದೇಶಗಳಿಗೆ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ರಫ್ತಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಪರ್ಕದ ಬಗೆಗಿನ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು 1,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದರಲ್ಲಿ 530 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ 65 ಕಿ.ಮೀ. ಮಹೇಸಾನ-ಪಾಲನ್ಪುರ ರೈಲು ಮಾರ್ಗದ ದ್ವಿಗುಣಗೊಳಿಸುವಿಕೆ, 860 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ 37 ಕಿ.ಮೀ. ಕಲೋಲ್-ಕಾಡಿ-ಕಟೋಸನ್ ರಸ್ತೆ ರೈಲು ಮಾರ್ಗ ಮತ್ತು 40 ಕಿ.ಮೀ. ಬೆಚ್ರಾಜಿ-ರಾಣುಜ್ ರೈಲು ಮಾರ್ಗದ ಗೇಜ್ ಪರಿವರ್ತನೆ ಸೇರಿವೆ. ಈ ಬ್ರಾಡ್-ಗೇಜ್ ಸಾಮರ್ಥ್ಯದ ಸೇರ್ಪಡೆಯೊಂದಿಗೆ, ಈ ಯೋಜನೆಗಳು ಈ ಪ್ರದೇಶದಲ್ಲಿ ಸುಗಮ, ಸುರಕ್ಷಿತ ಮತ್ತು ಹೆಚ್ಚು ತಡೆರಹಿತ ಸಂಪರ್ಕವನ್ನು ಖಚಿತಪಡಿಸುತ್ತವೆ. ಇದು ದೈನಂದಿನ ಪ್ರಯಾಣಿಕರು, ಪ್ರವಾಸಿಗರು ಮತ್ತು ವ್ಯವಹಾರಗಳಿಗೆ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತದೆ ಮತ್ತು ಪ್ರಾದೇಶಿಕ ಆರ್ಥಿಕ ಏಕೀಕರಣವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಕಟೋಸನ್ ರಸ್ತೆ ಮತ್ತು ಸಬರಮತಿ ನಡುವೆ ಪ್ರಯಾಣಿಕ ರೈಲಿಗೆ ಚಾಲನೆ ನೀಡುವುದರಿಂದ  ಧಾರ್ಮಿಕ ಸ್ಥಳಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ ಮತ್ತು ತಳಮಟ್ಟದಲ್ಲಿ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಬೆಚ್ರಾಜಿಯಿಂದ ಕಾರು ತುಂಬಿದ ಸರಕು ರೈಲು ಸೇವೆಯು ರಾಜ್ಯದ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ಜಾಲವನ್ನು ಬಲಪಡಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. 

ಸಂಪರ್ಕ ಸುಧಾರಣೆ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವುದು ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುವ ತಮ್ಮ ದೂರದೃಷ್ಟಿಯನ್ನು ಮುಂದುವೆರೆಸಿಕೊಂಡು, ಪ್ರಧಾನಮಂತ್ರಿ ವಿರಮ್ಗಮ್-ಖುದಾದ್-ರಾಂಪುರ ರಸ್ತೆಯ ಅಗಲೀಕರಣವನ್ನು ಉದ್ಘಾಟಿಸಲಿದ್ದಾರೆ. ಅಹಮದಾಬಾದ್-ಮೆಹ್ಸಾನಾ-ಪಾಲನ್ಪುರ ರಸ್ತೆಯಲ್ಲಿ ಆರು ಪಥದ ವಾಹನ ಕೆಳಸೇತುವೆ ಮತ್ತು ಅಹಮದಾಬಾದ್-ವಿರಮ್ಗಮ್ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಅವರು ಅಡಿಪಾಯ ಹಾಕಲಿದ್ದಾರೆ. ಈ ಉಪಕ್ರಮಗಳು ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ, ಸಾರಿಗೆ ದಕ್ಷತೆಯನ್ನು ಸುಧಾರಿಸುತ್ತವೆ ಮತ್ತು ಆರ್ಥಿಕ ಅವಕಾಶಗಳನ್ನು ಹೆಚ್ಚಿಸುತ್ತವೆ.

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನ ನೀಡುವ ಮೂಲಕ, ಪ್ರಧಾನಮಂತ್ರಿ  ಉತ್ತರ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ (ಯು.ಜಿ.ವಿ.ಸಿ.ಎಲ್) ಅಡಿಯಲ್ಲಿ ಅಹಮದಾಬಾದ್, ಮೆಹ್ಸಾನಾ ಮತ್ತು ಗಾಂಧಿನಗರದಲ್ಲಿ ವಿದ್ಯುತ್ ವಿತರಣಾ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಪುನರ್ರಚಿಸಿದ ವಿತರಣಾ ವಲಯ ಯೋಜನೆಯಡಿ ನಷ್ಟವನ್ನು ಕಡಿಮೆ ಮಾಡುವುದು, ಜಾಲವನ್ನು ಆಧುನೀಕರಿಸುವುದು ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಈ ಯೋಜನೆಗಳು ಹೊಂದಿವೆ. 1000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಈ ಯೋಜನೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ವಿದ್ಯುತ್ ಸರಬರಾಜು ಅಡಚಣೆಗಳು ಮತ್ತು ವಿದ್ಯುತ್ ಕಡಿತಗಳನ್ನು ಕಡಿಮೆ ಮಾಡುತ್ತದೆ, ಸಾರ್ವಜನಿಕ ಸುರಕ್ಷತೆ, ಟ್ರಾನ್ಸ್ಫಾರ್ಮರ್ಗಳ ಸುರಕ್ಷತೆ ಮತ್ತು ವಿದ್ಯುತ್ ಸರಬರಾಜು ಜಾಲದ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯ ಇನ್-ಸಿಟು ಸ್ಲಂ ಪುನರ್ವಸತಿ ಘಟಕದ ಅಡಿಯಲ್ಲಿ ರಾಮಪಿರ್ನ ಟೆಕ್ರೋದ ಸೆಕ್ಟರ್-3 ರಲ್ಲಿ ಸ್ಲಂ ಅಭಿವೃದ್ಧಿ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಹಮದಾಬಾದ್ ಸುತ್ತಮುತ್ತಲಿನ ಸರ್ದಾರ್ ಪಟೇಲ್ ರಿಂಗ್ ರಸ್ತೆಯಲ್ಲಿ ಸಂಚಾರವನ್ನು ಸುಗಮಗೊಳಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿರುವ ಪ್ರಮುಖ ರಸ್ತೆ ಅಗಲೀಕರಣ ಯೋಜನೆಗಳಿಗೆ ಅವರು ಅಡಿಪಾಯ ಹಾಕಲಿದ್ದಾರೆ. ನೀರು ಮತ್ತು ಒಳಚರಂಡಿ ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸಲು ಪ್ರಮುಖ ನಗರ ಮೂಲಸೌಕರ್ಯ ಯೋಜನೆಗಳಿಗೆ ಅವರು ಅಡಿಪಾಯ ಹಾಕಲಿದ್ದಾರೆ.

ಆಡಳಿತದ ದಕ್ಷತೆ ಮತ್ತು ಸಾರ್ವಜನಿಕ ಸೇವಾ ವಿತರಣೆಯನ್ನು ಬಲಪಡಿಸಲು, ಗುಜರಾತ್ನಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾಮಂತ್ರಿ ಶಂಕುಸ್ಥಾಪನೆ ಮಾಡಲಿದ್ದಾರೆ. ಇದರಲ್ಲಿ ಅಹಮದಾಬಾದ್ ಪಶ್ಚಿಮದಲ್ಲಿ ಹೊಸ ಸ್ಟಾಂಪ್ ಮತ್ತು ನೋಂದಣಿ ಭವನದ ನಿರ್ಮಾಣವೂ ಸೇರಿದೆ. ನಾಗರಿಕ ಕೇಂದ್ರಿತ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ. ಅಲ್ಲದೆ, ಗುಜರಾತ್ನಾದ್ಯಂತ ಸುರಕ್ಷಿತ ದತ್ತಾಂಶ ನಿರ್ವಹಣೆ ಮತ್ತು ಡಿಜಿಟಲ್ ಆಡಳಿತ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಗಾಂಧಿನಗರದಲ್ಲಿ ರಾಜ್ಯಮಟ್ಟದ ದತ್ತಾಂಶ ಸಂಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಆಗಸ್ಟ್ 26 ರಂದು, ಅಹಮದಾಬಾದ್ನ ಹನ್ಸಲ್ಪುರದಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್ ನಲ್ಲಿ ಪ್ರಧಾನಮಂತ್ರಿ ಎರಡು ಪ್ರಮುಖ ಅಭಿವೃದ್ಧಿಗಳನ್ನು ಉದ್ಘಾಟಿಸಲಿದ್ದಾರೆ. ಈ ಮಹತ್ವದ ಉಪಕ್ರಮಗಳು ಭಾರತವು ಹಸಿರು ಚಲನಶೀಲತೆಗಾಗಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವುದನ್ನು ಪ್ರತಿಬಿಂಬಿಸುತ್ತವೆ ಮತ್ತು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತಕ್ಕೆ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಪ್ರಮುಖ ಉದಾಹರಣೆಯಾಗಿ, ಪ್ರಧಾನಮಂತ್ರಿ ಅವರು ಸುಜುಕಿಯ ಮೊದಲ ಜಾಗತಿಕ ಕಾರ್ಯತಂತ್ರದ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿ.ಇ.ವಿ.) "ಇ ವಿಟಾರಾ"ವನ್ನು ಉದ್ಘಾಟಿಸಲಿದ್ದಾರೆ. ಭಾರತದಲ್ಲಿ ತಯಾರಾಗುವ ಈ ಬಿ.ಇ.ವಿ. ಗಳನ್ನು ಯುರೋಪ್ ಮತ್ತು ಜಪಾನ್ ನಂತಹ ಮುಂದುವರಿದ ಮಾರುಕಟ್ಟೆಗಳು ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈ ಸಾಧನೆಯೊಂದಿಗೆ, ಭಾರತವು ಈಗ ಸುಜುಕಿಯ ಎಲೆಕ್ಟ್ರಿಕ್ ವಾಹನಗಳಿಗೆ ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ.

ಹಸಿರು ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ್ ಆಗುವತ್ತ ಪ್ರಮುಖ ಹೆಜ್ಜೆ ಇಡುತ್ತಿರುವ ಪ್ರಧಾನಮಂತ್ರಿ ಅವರು, ಗುಜರಾತ್ನ ಟಿ.ಡಿ.ಎಸ್ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ಗಳ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸುವುದರೊಂದಿಗೆ ಭಾರತದ ಬ್ಯಾಟರಿ ಪರಿಸರ ವ್ಯವಸ್ಥೆಯ ಮುಂದಿನ ಹಂತವನ್ನು ಉದ್ಘಾಟಿಸಲಿದ್ದಾರೆ. ತೋಷಿಬಾ, ಡೆನ್ಸೊ ಮತ್ತು ಸುಜುಕಿಯ ಜಂಟಿ ಉದ್ಯಮವಾದ ಈ ಸ್ಥಾವರವು ದೇಶೀಯ ಉತ್ಪಾದನೆ ಮತ್ತು ಶುದ್ಧ ಇಂಧನ ನಾವೀನ್ಯತೆಯನ್ನು ಹೆಚ್ಚಿಸುತ್ತದೆ. ಇದು ಈಗ ಶೇಕಡಾ ಎಂಬತ್ತಕ್ಕೂ ಹೆಚ್ಚು ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸಲು ಅನುವು ಮಾಡಿಕೊಡುತ್ತದೆ.

 

*****
 


(Release ID: 2160361)