ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ
ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಸಂಶೋಧನೆಯ ಮಾರ್ಗ ನಿರ್ಧಾರ - ಶ್ರೀ ಚೌಹಾಣ್
ಒಗ್ಗೂಡಿ ಹಾಗೂ ಸಮರ್ಪಣೆಯೊಂದಿಗೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಕೃಷಿ ಸಚಿವರ ಕರೆ
Posted On:
29 MAY 2025 5:29PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಒಡಿಶಾದ ಪುರಿ ಜಿಲ್ಲೆಯ ಸಖಿಗೋಪಾಲದಿಂದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಿದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಜಂಟಿಯಾಗಿ ಆರಂಭಿಸಿರುವ ಈ ಐತಿಹಾಸಿಕ ಉಪಕ್ರಮವು ವೈಜ್ಞಾನಿಕ ಆವಿಷ್ಕಾರ ಮತ್ತು ತಳಮಟ್ಟದ ಜನರ ಭಾಗವಹಿಸುವಿಕೆಯ ಮೂಲಕ ಭಾರತೀಯ ಕೃಷಿಯನ್ನು ಪರಿವರ್ತಿಸುವ ಮತ್ತು ದೇಶದ ಆಹಾರ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. 15 ದಿನಗಳ ಈ ಅಭಿಯಾನದಲ್ಲಿ ಶ್ರೀ ಚೌಹಾನ್ ಅವರು ಸುಮಾರು 20 ರಾಜ್ಯಗಳಿಗೆ ಪ್ರಯಾಣಿಸಲಿದ್ದಾರೆ. ಈ ಗುರಿಯನ್ನು ನನಸಾಗಿಸಲು ರಾಜ್ಯ ಸರ್ಕಾರಗಳು ಪ್ರಮುಖ ಪಾತ್ರ ವಹಿಸಲಿವೆ ಮತ್ತು ಎಲ್ಲಾ ರಾಜ್ಯಗಳು ಒಗ್ಗೂಡಿ ಹಾಗೂ ಬದ್ಧತೆಯಿಂದ ಈ ಅಭಿಯಾನವನ್ನು ಯಶಸ್ವಿಗೊಳಿಸಲಿವೆ ಎಂದು ನಿರೀಕ್ಷಿಸಲಾಗಿದೆ.



ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ತಮ್ಮ ಭಾಷಣದಲ್ಲಿ, ‘ಈ ಅಭಿಯಾನವು ಒಂದು ದ್ವಿಮುಖ ಸಂವಹನ ವಿಧಾನವನ್ನು ಅನುಸರಿಸುತ್ತದೆ. ಒಂದೆಡೆ ವಿಜ್ಞಾನಿಗಳು ತಮ್ಮ ಸಂಶೋಧನೆಗಳು ಮತ್ತು ತಾಂತ್ರಿಕ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಾರೆ, ಇನ್ನೊಂದೆಡೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಮಾಹಿತಿಗಳು ಭವಿಷ್ಯದ ಸಂಶೋಧನಾ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಲು ಮತ್ತು ಸ್ಥಳೀಯವಾಗಿ ಅನ್ವಯವಾಗುವಂತಹ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಲು ನೆರವಾಗುತ್ತವೆ. 'ಕ್ಷೇತ್ರಕ್ಕೆ ಪ್ರಯೋಗಾಲಯ' ಎಂಬಂತೆ ನಮ್ಮ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಶ್ರೀ ಚೌಹಾಣ್ ಅವರು ಮಾತನಾಡುತ್ತಾ, 16 ಸಾವಿರ ವಿಜ್ಞಾನಿಗಳ ತಂಡಗಳನ್ನು ರಚಿಸಲಾಗಿದೆ, ಅವರು ಹಳ್ಳಿಯಿಂದ ಹಳ್ಳಿಗೆ ತೆರಳಿ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ. 2,170 ತಂಡಗಳನ್ನು ರಚಿಸಲಾಗಿದೆ ಮತ್ತು ಅವರು ರೈತರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಒಂದು ತಂಡವು ದಿನಕ್ಕೆ 2 ಗ್ರಾಮಗಳಿಗೆ ಭೇಟಿ ನೀಡುತ್ತದೆ. ಈ ಅಭಿಯಾನವು 15 ದಿನಗಳ ಕಾಲ ನಡೆಯಲಿದ್ದು, ರೈತರೊಂದಿಗೆ ನೇರ ಸಂವಹನ ಇರುತ್ತದೆ. ಆ ಪ್ರದೇಶದ ಹವಾಮಾನ, ನೀರು, ಮಣ್ಣಿನ ಪೋಷಕಾಂಶಗಳು ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಬೆಳೆಯನ್ನು ಬೆಳೆಯಬೇಕು, ಯಾವ ತಳಿಯನ್ನು ಬಳಸಬೇಕು, ಗೊಬ್ಬರವನ್ನು ಹೇಗೆ ಬಳಸಬೇಕು ಇತ್ಯಾದಿಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಲಾಗುವುದು. ಇದರೊಂದಿಗೆ, ನೈಸರ್ಗಿಕ ಕೃಷಿ ಮತ್ತು ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಕೃಷಿಯ ಕುರಿತು ರೈತರೊಂದಿಗೆ ಚರ್ಚೆ ನಡೆಸಲಾಗುವುದು. ವಿಜ್ಞಾನಿಗಳು ನೇರ ಸಂವಹನದ ಮೂಲಕ ರೈತರ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಸಂಶೋಧನೆಯ ದಿಕ್ಕನ್ನು ಸಹ ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಶ್ರೀ ಚೌಹಾಣ್ ಅವರು ಮತ್ತೊಮ್ಮೆ ಈ ಅಭಿಯಾನಕ್ಕೆ ಎಲ್ಲ ಜನರು ಕೈಜೋಡಿಸಿ ಇದನ್ನು ಭಾರತದಾದ್ಯಂತ ಪರಿಣಾಮಕಾರಿಯಾಗಿ ಮಾಡುವಂತೆ ಮತ್ತು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು, ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವು ರೈತರಲ್ಲಿ ಆಧುನಿಕ ತಂತ್ರಜ್ಞಾನಗಳು ಮತ್ತು ಹೊಸ ತಳಿಗಳ ಕುರಿತು ಅರಿವು ಮೂಡಿಸಲು ಭಾರತ ಸರ್ಕಾರ ಕೈಗೊಂಡಿರುವ ಒಂದು ಕ್ರಾಂತಿಕಾರಿ ಉಪಕ್ರಮವಾಗಿದೆ ಎಂದರು.
ಈ ಅಭಿಯಾನವನ್ನು 2025ರ ಮೇ 29 ರಿಂದ ಜೂನ್ 12 ರವರೆಗೆ 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು. 731 ಕೃಷಿ ವಿಜ್ಞಾನ ಕೇಂದ್ರಗಳು, 113 ಐಸಿಎಆರ್ ಸಂಸ್ಥೆಗಳು, ರಾಜ್ಯ ಮಟ್ಟದ ಇಲಾಖೆಗಳು ಮತ್ತು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ಇನೋವೇಟಿವ್ ರೈತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಈ ಅಭಿಯಾನದ ಮೂಲಕ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪದ ಕಡೆಗೆ ಒಂದು ಬಲವಾದ ಅಧ್ಯಾಯವನ್ನು ಸೇರಿಸುವ ಪ್ರಯತ್ನ ಮಾಡಲಾಗಿದೆ.
*****
(Release ID: 2132610)