ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ನ ಭುಜ್ನಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
26 MAY 2025 9:52PM by PIB Bengaluru
ಭಾರತ್ ಮಾತಾ ಕಿ – ಜೈ!
ನಮ್ಮ ತ್ರಿವರ್ಣ ಧ್ವಜವನ್ನು ಎಂದಿಗೂ ಕೆಳಗಿಳಿಸಬಾರದು.
ಭಾರತ್ ಮಾತಾ ಕಿ – ಜೈ!
ಭಾರತ್ ಮಾತಾ ಕಿ – ಜೈ!
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಮನೋಹರ್ ಲಾಲ್ ಜಿ, ಸಂಪುಟದ ಎಲ್ಲಾ ಇತರೆ ಸದಸ್ಯರೆ, ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ, ಇತರೆ ಎಲ್ಲಾ ಗೌರವಾನ್ವಿತ ಗಣ್ಯರೆ ಮತ್ತು ಕಛ್ನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ನಾನು ಶರದ್ನ ಭೂಮಿ ಮತ್ತು ಧೈರ್ಯಶಾಲಿ ಕಛ್ಚಿ ಜನರಿರುವ ಕಛ್ ಭೂಮಿಗೆ ಏಕೆ ಬಂದಿದ್ದೇನೆ? ಕಛ್ನ ಮಹಾನ್ ಪುತ್ರ ಮತ್ತು ಕ್ರಾಂತಿಕಾರಿ ನಾಯಕ ಶ್ಯಾಮ್ಜಿ ಕೃಷ್ಣ ವರ್ಮಾ ಅವರಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಅರ್ಪಿಸುವ ಸಲುವಾದಿ, ನನ್ನ ಎಲ್ಲಾ ಕಛ್ಚಿ ಸಹೋದರ ಸಹೋದರಿಯರೆ, ನನ್ನ ಹೃದಯಾಂತರಾಳದಿಂದ 'ರಾಮ್ ರಾಮ್' ಎಂದು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಸ್ನೇಹಿತರೆ,
ಈ ಪವಿತ್ರ ಕಛ್ ಭೂಮಿಯಲ್ಲಿ, ಮಾತೆ ಆಶಾಪುರಳ ಆಶೀರ್ವಾದದಿಂದ ನಮ್ಮ ಎಲ್ಲಾ ಆಶಯಗಳು ಈಡೇರಿವೆ. ಮಾತೆ ಆಶಾಪುರವು ಯಾವಾಗಲೂ ಈ ಭೂಮಿಯ ಮೇಲೆ ತನ್ನ ಅನುಗ್ರಹವನ್ನು ಸುರಿಸಿದ್ದಾಳೆ. ಇಂದು, ನಾನು ಮಾತೆ ಆಶಾಪುರಗೆ ಭಕ್ತಿಯಿಂದ ನಮಸ್ಕರಿಸುತ್ತೇನೆ, ಕಛ್ ಮಣ್ಣಿನ ಎಲ್ಲಾ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಕಚ್ ಜತೆಗಿನ ನನ್ನ ಬಾಂಧವ್ಯ ತುಂಬಾ ಹಳೆಯದು, ನೀವೆಲ್ಲರೂ ನನಗೆ ತೋರಿರುವ ಪ್ರೀತಿ ಎಷ್ಟೆಂದರೆ, ನಾನು ಇಲ್ಲಿಗೆ ಬರುವುದನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇಲ್ಲದಿದ್ದಾಗಲೂ, ಅಧಿಕಾರದೊಂದಿಗೆ ಯಾವುದೇ ಸಂಬಂಧ ಇಲ್ಲದಿದ್ದಾಗಲೂ, ನಾನು ಕಚ್ ಭೂಮಿಗೆ ನಿಯಮಿತವಾಗಿ ಬರುತ್ತಿದ್ದೆ - ಅದು ನನ್ನ ಕೆಲಸ ಮತ್ತು ಜೀವನದ ಸಹಜ ಭಾಗವಾಗಿತ್ತು. ಈ ಪ್ರದೇಶದ ಪ್ರತಿಯೊಂದು ಮೂಲೆ ಮೂಲೆಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ಕಚ್ನ ಜನರು, ನಿಮ್ಮ ಆತ್ಮವಿಶ್ವಾಸ, ಎಲ್ಲಾ ಕಷ್ಟಗಳ ನಡುವೆಯೂ ನಿಮ್ಮ ದೃಢನಿಶ್ಚಯ - ಅದು ಯಾವಾಗಲೂ ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದೆ. ಪ್ರಸ್ತುತ ಪೀಳಿಗೆಗೆ ತಿಳಿದಿಲ್ಲದಿದ್ದರೂ, ಇಲ್ಲಿನ ಜೀವನವು ಈಗ ತುಂಬಾ ಸುಲಭವಾಗಿದೆ ಎಂಬುದು ಹಳೆಯ ತಲೆಮಾರಿನವರಿಗೆ ತಿಳಿದಿದೆ. ಆದರೆ ಆಗ ಪರಿಸ್ಥಿತಿ ತುಂಬಾ ಭಿನ್ನವಾಗಿತ್ತು. ಮುಖ್ಯಮಂತ್ರಿಯಾಗಿ, ನರ್ಮದಾ ನದಿಯ ನೀರು ಕಚ್ ಭೂಮಿಯನ್ನು ತಲುಪಿದ ಮೊದಲ ಬಾರಿ ನನಗೆ ನೆನಪಿದೆ - ಅದು ಕಚ್ಗೆ ದೀಪಾವಳಿ ಬಂದಂತೆ. ಆ ದಿನ ನಾವು ಕಂಡಂತೆ ಕಚ್ ಎಂದಿಗೂ ದೀಪಾವಳಿಯನ್ನು ಕಂಡಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಶತಮಾನಗಳಿಂದ ನೀರಿಗಾಗಿ ಬಾಯಾರಿದ್ದ ಕಚ್ಗೆ ಮಾತೆ ನರ್ಮದಾ ಆಶೀರ್ವಾದ ಮಾಡಿದಳು. ಈ ಒಣ ಭೂಮಿಗೆ ನೀರು ತರುವ ಪಾತ್ರ ವಹಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ - ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ಮುಖ್ಯಮಂತ್ರಿಯಾಗಿದ್ದಾಗ, ನಾನು ಕಚ್ಗೆ ಎಷ್ಟು ಬಾರಿ ಭೇಟಿ ನೀಡಿದ್ದೇನೆ ಎಂದು ಜನರು ಎಣಿಸುತ್ತಿದ್ದರು - ಅವರು ಲೆಕ್ಕ ಮಾಡುತ್ತಿದ್ದರು! ಕೆಲವರು "ಮೋದಿ ಜಿ ಶತಮಾನ ತಲುಪಿದ್ದಾರೆ" ಎಂದೂ ಹೇಳಿದರು. ಅನೇಕ ಹಳ್ಳಿಗಳಿಗೆ ಭೇಟಿ ನೀಡುವುದು, ನನ್ನ ಪಕ್ಷದ ಕಾರ್ಯಕರ್ತರ ಮನೆಗಳಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸ್ಥಳೀಯ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವುದು - ಇವೆಲ್ಲವೂ ನನ್ನ ದೈನಂದಿನ ಚಟುವಟಿಕೆಗಳ ಸಹಜ ಭಾಗವಾಗಿತ್ತು.
ಸ್ನೇಹಿತರೆ,
ಕಚ್ನಲ್ಲಿ ನೀರಿಲ್ಲದಿದ್ದರೂ, ಕಚ್ನ ರೈತರು ಉತ್ಸಾಹದಿಂದ ತುಂಬಿರುವುದನ್ನು ನಾನು ನೋಡಿದ್ದೇನೆ. ಅವರ ದೃಢಸಂಕಲ್ಪ ಯಾವಾಗಲೂ ಶ್ರೇಷ್ಠವಾಗಿರುತ್ತಿತ್ತು. ಅನೇಕ ವರ್ಷಗಳಿಂದ, ಕಚ್ನಲ್ಲಿ ನಾನು ಏನೇ ಅನುಭವಿಸಿದರೂ, ಅದರಲ್ಲಿ ಅಭಿವೃದ್ಧಿಯ ದೊಡ್ಡ ಸಾಮರ್ಥ್ಯವನ್ನು ನಾನು ಯಾವಾಗಲೂ ನೋಡಿದೆ. ಕಚ್ ಅನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಸಾವಿರಾರು ವರ್ಷಗಳ ಹಿಂದೆ ಧೋಲವಿರವನ್ನು ಹೊಂದಿದ್ದ ಭೂಮಿ ಖಂಡಿತವಾಗಿಯೂ ಅಪಾರ ಶಕ್ತಿ ಹೊಂದಿತ್ತು, ಅಂತಹ ಭೂಮಿಯನ್ನು ನಾವು ಗೌರವಿಸಬೇಕು ಮತ್ತು ಗೌರವಿಸಬೇಕು.
ಸ್ನೇಹಿತರೆ,
ಆಶಾಭಾವನೆ ಮತ್ತು ನಿರಂತರ ಕಠಿಣ ಪರಿಶ್ರಮದಿಂದ ಯಾವುದೇ ಸಂದರ್ಭಗಳನ್ನು ಬದಲಿಸಸಬಹುದು, ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಬಹುದು, ಅಪೇಕ್ಷಿತ ಗುರಿಗಳನ್ನು ಸಾಧಿಸಬಹುದು ಎಂಬುದನ್ನು ಕಚ್ ಮಾಡಿ ತೋರಿಸಿದೆ. ಇಲ್ಲಿ ಭೂಕಂಪ ಸಂಭವಿಸಿದಾಗ, ಜಗತ್ತು ಯೋಚಿಸಿತು. "ಅದು ಮುಗಿದ ಕಥೆ, ಈಗ ಏನೂ ಆಗಲು ಸಾಧ್ಯವಿಲ್ಲ." ಭೂಕಂಪದ ನಂತರ ಕಚ್ ತನ್ನನ್ನು ಸಾವಿನ ಮುಸುಕಿನಲ್ಲಿ ಸುತ್ತಿಕೊಂಡಿತ್ತು. ಆದರೆ ಸ್ನೇಹಿತರೆ, ನಾನು ಎಂದಿಗೂ ನನ್ನ ನಂಬಿಕೆ ಕಳೆದುಕೊಂಡಿಲ್ಲ. ಕಚ್ ಜನರ ಅದಮ್ಯ ಚೈತನ್ಯ - "ಕಚ್ಚಿ ಖಮೀರ್" - ನಲ್ಲಿ ನನಗೆ ನಂಬಿಕೆ ಇತ್ತು. ಅದಕ್ಕಾಗಿಯೇ ನಾನು ಹೇಳುತ್ತಿದ್ದೆ... ಮಕ್ಕಳಿಗೆ ಕಚ್ನ 'ಕೆ' ಮತ್ತು ಖಮೀರ್ನ 'ಖ' (ಕಠಿಣತೆ ಮತ್ತು ಚೈತನ್ಯ) ಕಲಿಸಬೇಕು. ಕಛ್ ಈ ಬಿಕ್ಕಟ್ಟನ್ನು ನಿವಾರಿಸಿದೆ - ಅದು ಭೂಕಂಪವನ್ನು ಸಹ ನಡುಗಿಸುತ್ತದೆ, ನನ್ನ ಕಛಿಮಾಡು(ಕಛ್ನ ಪ್ರೀತಿಯ ಜನರು) ಮತ್ತೆ ಮೇಲೇರುತ್ತಾರೆ ಎಂಬ ವಿಶ್ವಾಸ ನನಗಿತ್ತು. ನೀವು ನಿಖರವಾಗಿ ಅದನ್ನೇ ಮಾಡಿದ್ದೀರಿ. ಇಂದು ಕಛ್ ವ್ಯಾಪಾರ, ವ್ಯವಹಾರ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಮುಂಬರುವ ದಿನಗಳಲ್ಲಿ, ಕಛ್ನ ಪಾತ್ರ ಇನ್ನೂ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಾನು ಕಛ್ನ ಅಭಿವೃದ್ಧಿಯನ್ನು ವೇಗಗೊಳಿಸಲು ಬಂದಾಗಲೆಲ್ಲಾ, ನಾನು ಹೆಚ್ಚಿನದನ್ನು ಮಾಡಬೇಕು, ಹೊಸದನ್ನು ಮಾಡಬೇಕು, ಇನ್ನೂ ಉತ್ತಮವಾಗಿ ಮಾಡಬೇಕು ಎಂದು ನನಗೆ ಅನಿಸುತ್ತದೆ. ನನ್ನ ಹೃದಯ ನಿಲ್ಲಲು ನಿರಾಕರಿಸುತ್ತದೆ. ಇಂದು ಅಭಿವೃದ್ಧಿಗೆ ಸಂಬಂಧಿಸಿದ 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಗಿದೆ ಅಥವಾ ಅವುಗಳ ಶಂಕುಸ್ಥಾಪನೆ ಮಾಡಲಾಗಿದೆ. ಇಡೀ ಗುಜರಾತ್ ರಾಜ್ಯದಲ್ಲಿ 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಯೋಜನೆಗಳ ಬಗ್ಗೆ ಕೇಳಿರದ ಸಮಯವಿತ್ತು. ಇಂದು ಕೇವಲ ಒಂದು ಜಿಲ್ಲೆಯಲ್ಲಿ ಮಾತ್ರ ಅಷ್ಟು ಮೌಲ್ಯದ ಕೆಲಸಗಳು ನಡೆಯುತ್ತಿವೆ!
ಸ್ನೇಹಿತರೆ,
ಈ ಯೋಜನೆಗಳು ಭಾರತವು ನೀಲಿ ಆರ್ಥಿಕತೆಯಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಲು ಮತ್ತು ಹಸಿರು ಇಂಧನದ ಕೇಂದ್ರವಾಗಲು ಸಹಾಯ ಮಾಡುತ್ತದೆ. ಈ ಗಮನಾರ್ಹ ಅಭಿವೃದ್ಧಿ ಪ್ರಯತ್ನಗಳಿಗಾಗಿ ನಿಮ್ಮೆಲ್ಲರಿಗೂ - ಕಛ್ನ ನನ್ನ ಪ್ರೀತಿಯ ಜನರಿಗೆ - ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ, ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಎತ್ತಿ, ನಿಮ್ಮ ಸಂತೋಷ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಿ!
ಸ್ನೇಹಿತರೆ,
ನಮ್ಮ ಕಚ್ ಹಸಿರು ಇಂಧನದ ವಿಶ್ವದ ಅತಿದೊಡ್ಡ ಕೇಂದ್ರವಾಗುತ್ತಿದೆ. ನೀವು ಅದನ್ನು ಕೇಳಿದ್ದೀರಾ? ನಾನು ಏನು ಹೇಳಿದೆ? ವಿಶ್ವದಲ್ಲೇ ಅತಿ ದೊಡ್ಡದು - ಅದನ್ನು ಆಚರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ! ಹಸಿರು ಹೈಡ್ರೋಜನ್ ಒಂದು ಹೊಸ ರೀತಿಯ ಇಂಧನವಾಗಿದೆ. ಮುಂಬರುವ ದಿನಗಳಲ್ಲಿ, ಕಾರುಗಳು, ಬಸ್ಸುಗಳು, ಬೀದಿ ದೀಪಗಳು - ಇವೆಲ್ಲವೂ ಹಸಿರು ಹೈಡ್ರೋಜನ್ನಿಂದ ಚಲಿಸುತ್ತವೆ. ದೇಶದ 3 ಹಸಿರು ಹೈಡ್ರೋಜನ್ ಕೇಂದ್ರಗಳಲ್ಲಿ ಕಾಂಡ್ಲಾ ಒಂದಾಗಿದೆ. ಇಂದು ಹಸಿರು ಹೈಡ್ರೋಜನ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸ್ನೇಹಿತರೆ, ಈ ಸ್ಥಾವರದಲ್ಲಿ ಬಳಸಲಾದ ತಂತ್ರಜ್ಞಾನವು ಭಾರತದಲ್ಲೇ ತಯಾರಿಸಲ್ಪಟ್ಟಿದೆ ಎಂಬುದು ನಿಮಗೆ ತಿಳಿದರೆ ಹೆಮ್ಮೆಯಾಗುತ್ತದೆ. ನಮ್ಮ ಕಚ್ ಭಾರತದ ಸೌರ ಕ್ರಾಂತಿಯ ಹೃದಯ ಭಾಗದಲ್ಲಿದೆ. ವಿಶ್ವದ ಅತಿದೊಡ್ಡ ಸೌರಶಕ್ತಿ ಯೋಜನೆಗಳಲ್ಲಿ ಒಂದನ್ನು ಇಲ್ಲಿಯೇ ನಿರ್ಮಿಸಲಾಗುತ್ತಿದೆ, ನನ್ನ ಕಚ್ನಲ್ಲಿ. ಕಚ್ ಅನ್ನು ವಿವರಿಸುವಾಗ, ಜನರು "ನಿಮ್ಮ ಬಳಿ ಏನಿದೆ? ಅದು ಕೇವಲ ಮರುಭೂಮಿ. ಅಲ್ಲಿ ಏನಾಗಬಹುದು?" ಎಂದು ಕೇಳುತ್ತಿದ್ದ ಸಮಯವಿತ್ತು. ಆಗಲೂ ನಾನು ಹೇಳುತ್ತಿದ್ದೆ.. "ಇದು ಕೇವಲ ಮರುಭೂಮಿಯಲ್ಲ, ಇದು ಗುಜರಾತ್ನ ಹೆಬ್ಬಾಗಿಲು(ಟೋರನ್)." ಒಂದು ಕಾಲದಲ್ಲಿ ಧೂಳಿನ ಬಿರುಗಾಳಿ ಮತ್ತು ಬಂಜರು ಭೂಮಿಯಿಂದ ಆವೃತವಾಗಿದ್ದ ಆ ಮರುಭೂಮಿ ಈಗ ನಮ್ಮನ್ನು ಸಬಲೀಕರಣಗೊಳಿಸುವುದಲ್ಲದೆ, ಇಡೀ ರಾಷ್ಟ್ರವನ್ನೇ ಚೈತನ್ಯಗೊಳಿಸಲು ಪ್ರಾರಂಭಿಸಿದೆ. ಖಾವ್ಡಾ ಸಂಕೀರ್ಣಕ್ಕೆ ಧನ್ಯವಾದಗಳು, ಕಚ್ ಈಗ ಜಾಗತಿಕ ಇಂಧನ ನಕ್ಷೆಯಲ್ಲಿ ತನ್ನ ಛಾಪು ಮೂಡಿಸಿದೆ.
ಸ್ನೇಹಿತರೆ,
ನಮ್ಮ ಸರ್ಕಾರವು ನಿಮಗೆ ಸಾಕಷ್ಟು ವಿದ್ಯುತ್ ಒದಗಿಸುವ ಜತೆಗೆ, ನಿಮ್ಮ ವಿದ್ಯುತ್ ಬಿಲ್ ಶೂನ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಅದಕ್ಕಾಗಿಯೇ ನಾವು ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಪ್ರಾರಂಭಿಸಿದ್ದೇವೆ. ಗುಜರಾತ್ನಲ್ಲಿ ಲಕ್ಷಾಂತರ ಕುಟುಂಬಗಳು ಈಗಾಗಲೇ ಈ ಉಪಕ್ರಮದ ಭಾಗವಾಗಿದ್ದಾರೆ.
ಸಹೋದರ ಸಹೋದರಿಯರೆ,
ಸಮೃದ್ಧಿಯನ್ನು ಸಾಧಿಸಿದ ಪ್ರತಿಯೊಂದು ದೇಶದಲ್ಲಿ, ಸಮುದ್ರವು ಆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿಯೂ ಸಹ, ಧೋಲವಿರದ ಉದಾಹರಣೆ ನಮಗಿದೆ. ಲೋಥಾಲ್ನಂತಹ ಪ್ರಾಚೀನ ಬಂದರು ನಗರಗಳು ಇಲ್ಲಿ ಅಸ್ತಿತ್ವದಲ್ಲಿದ್ದವು, ಇವು ಭಾರತದ ಪ್ರಾಚೀನ ನಾಗರಿಕತೆಯಲ್ಲಿ ಸಂಪತ್ತು ಮತ್ತು ಪ್ರಗತಿಯ ಕೇಂದ್ರಗಳಾಗಿದ್ದವು. ಬಂದರು ಆಧಾರಿತ ಅಭಿವೃದ್ಧಿಯ ನಮ್ಮ ದೃಷ್ಟಿಕೋನವು ಈ ಶ್ರೀಮಂತ ಪರಂಪರೆಯಿಂದ ಪ್ರೇರಿತವಾಗಿದೆ. ಭಾರತವು ತನ್ನ ಬಂದರುಗಳ ಸುತ್ತಲಿನ ನಗರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸಮುದ್ರಾಹಾರದಿಂದ ಹಿಡಿದು ಪ್ರವಾಸೋದ್ಯಮದವರೆಗೆ ವ್ಯಾಪಾರದವರೆಗೆ, ಕರಾವಳಿ ಪ್ರದೇಶವನ್ನು ಸಂಪೂರ್ಣವಾಗಿ ಹೊಸ ಪರಿಸರ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಂದರುಗಳನ್ನು ವಿಸ್ತರಿಸುವ ಮತ್ತು ಆಧುನೀಕರಿಸುವಲ್ಲಿ ದೇಶವು ಪ್ರಮುಖ ಹೂಡಿಕೆಗಳನ್ನು ಮಾಡುತ್ತಿದೆ, ಫಲಿತಾಂಶಗಳು ಸಹ ಗಮನಾರ್ಹವಾಗಿವೆ. ದೇಶದ ಕೆಲವು ಪ್ರಮುಖ ಬಂದರುಗಳು ಮೊದಲ ಬಾರಿಗೆ ಒಂದೇ ವರ್ಷದಲ್ಲಿ ದಾಖಲೆಯ 150 ದಶಲಕ್ಷ ಟನ್ ಸರಕುಗಳನ್ನು ನಿರ್ವಹಿಸಿವೆ. ಇದರಲ್ಲಿ ಕಾಂಡ್ಲಾದಲ್ಲಿರುವ ನಮ್ಮದೇ ಆದ ದೀನದಯಾಳ್ ಬಂದರು ಸೇರಿದೆ. ದೇಶದ ಒಟ್ಟು ಕಡಲ ವ್ಯಾಪಾರದ ಸುಮಾರು 3ನೇ ಒಂದು ಭಾಗವು ಕಚ್ ಬಂದರುಗಳ ಮೂಲಕವೇ ನಿರ್ವಹಿಸಲ್ಪಡುತ್ತದೆ. ಅದಕ್ಕಾಗಿಯೇ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳ ಸಾಮರ್ಥ್ಯ ಮತ್ತು ಸಂಪರ್ಕವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಇಂದಿಗೂ ಸಹ, ಇಲ್ಲಿ ಹಲವಾರು ಹೊಸ ಹಡಗು ಸಾಗಣೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ. ಹೊಸ ಜೆಟ್ಟಿಯನ್ನು ನಿರ್ಮಿಸಲಾಗಿದೆ. ಹೆಚ್ಚಿನ ಸರಕುಗಳನ್ನು ಸಂಗ್ರಹಿಸಲು, ಆಧುನಿಕ ಸಂಗ್ರಹಣಾ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಈ ವರ್ಷದ ಬಜೆಟ್ನಲ್ಲಿ, ನಾವು ಕಡಲ ವಲಯಕ್ಕೆ ವಿಶೇಷ ನಿಧಿಯನ್ನು ಘೋಷಿಸಿದ್ದೇವೆ. ಹಡಗು ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ನಾವು ಈಗ ನಮ್ಮ ಸ್ವಂತ ಅಗತ್ಯಗಳಿಗಾಗಿ ಮತ್ತು ಪ್ರಪಂಚದ ಅಗತ್ಯಗಳಿಗಾಗಿ ಭಾರತದಲ್ಲಿ ದೊಡ್ಡ ಹಡಗುಗಳನ್ನು ನಿರ್ಮಿಸುತ್ತೇವೆ. ಮಾಂಡ್ವಿ ನಿಖರವಾಗಿ ಇದಕ್ಕೆ ಪ್ರಸಿದ್ಧವಾಗಿದ್ದ ಕಾಲವಿತ್ತು. ಬೃಹತ್ ಹಡಗುಗಳನ್ನು ನಿರ್ಮಿಸುವುದು. ನಮ್ಮ ಜನರು ಅವುಗಳನ್ನು ಉತ್ತಮ ಕೌಶಲ್ಯದಿಂದ ನಿರ್ಮಿಸುತ್ತಿದ್ದರು, ಆ ಶಕ್ತಿ ಇಂದಿಗೂ ಮಾಂಡ್ವಿಯಲ್ಲಿ ಅಸ್ತಿತ್ವದಲ್ಲಿದೆ. ಈಗ, ಈ ಹಡಗುಗಳನ್ನು ತಯಾರಿಸಲು ಮತ್ತು ರಫ್ತು ಮಾಡಲು ನಾವು ಭಾರತವನ್ನು ಆಧುನಿಕ ಹಡಗು ನಿರ್ಮಾಣದಲ್ಲಿ ವಿಶ್ವ ಹಂತಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ಇದು ನಮ್ಮ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮಲ್ಲಿ ಈಗಾಗಲೇ ಅಲಂಗ್ ಹಡಗು ಒಡೆಯುವ ಅಂಗಳವಿದೆ. ಈಗ, ನಾವು ನಮ್ಮ ಸಂಪೂರ್ಣ ಶಕ್ತಿಯನ್ನು ಹಡಗು ನಿರ್ಮಾಣಕ್ಕೆ ಹಾಕುತ್ತಿದ್ದೇವೆ, ಇದು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಕ್ಷೇತ್ರಗಳಲ್ಲಿ ಒಂದಾಗಿದೆ.
ಸ್ನೇಹಿತರೆ,
ನಮ್ಮ ಕಚ್ ಯಾವಾಗಲೂ ತನ್ನ ಪರಂಪರೆಯನ್ನು ಗೌರವಿಸಿದೆ. ಈಗ, ಈ ಪರಂಪರೆಯು ಕಚ್ನ ಅಭಿವೃದ್ಧಿಗೆ ಸ್ಫೂರ್ತಿಯಾಗುತ್ತಿದೆ. ಕಳೆದ ಎರಡರಿಂದ ಎರಡೂವರೆ ದಶಕಗಳಲ್ಲಿ, ಜವಳಿ, ಆಹಾರ ಸಂಸ್ಕರಣೆ, ಪಿಂಗಾಣಿ ಮತ್ತು ಉಪ್ಪಿಗೆ ಸಂಬಂಧಿಸಿದ ಕೈಗಾರಿಕೆಗಳು ಭುಜ್ನಲ್ಲಿ ಗಮನಾರ್ಹ ಬೆಳವಣಿಗೆ ಕಂಡಿವೆ. ಕಚ್ ಕಸೂತಿ, ಬ್ಲಾಕ್ ಪ್ರಿಂಟಿಂಗ್, ಬಂಧನಿ ಬಟ್ಟೆ ಮತ್ತು ಚರ್ಮದ ಕೆಲಸ - ಅವುಗಳ ಜನಪ್ರಿಯತೆಯನ್ನು ಎಲ್ಲೆಡೆ ಕಾಣಬಹುದು. ನಮ್ಮ ಭುಜೋಡಿಯ ಬಗ್ಗೆ ಹೇಳಬೇಕೆಂದರೆ - ಭುಜೋಡಿ ಕೆಲಸವನ್ನು ಒಳಗೊಂಡಿರದ ಯಾವುದೇ ಕೈಮಗ್ಗ ಅಥವಾ ಕರಕುಶಲ ಕಾರ್ಯಾಗಾರವಿಲ್ಲ. ಅಜ್ರಖ್ ಮುದ್ರಣದ ಸಂಪ್ರದಾಯವು ಕಚ್ಗೆ ವಿಶಿಷ್ಟವಾಗಿದೆ. ಈಗ ನಮ್ಮ ಕಚ್ನ ಈ ಎಲ್ಲಾ ಕಲಾ ಪ್ರಕಾರಗಳು ಜಿಐ ಟ್ಯಾಗ್ ಪಡೆದಿವೆ. ಅವು ಸ್ಥಳೀಯವಾಗಿ ಮಾತ್ರವಲ್ಲದೆ, ಜಾಗತಿಕವಾಗಿಯೂ ಮನ್ನಣೆ ಗಳಿಸಿವೆ. ಇದರರ್ಥ ಈ ಕಲಾ ಪ್ರಕಾರಗಳು ಕಚ್ನಿಂದ ಹುಟ್ಟಿಕೊಂಡಿವೆ ಎಂದು ಈಗ ಅಧಿಕೃತವಾಗಿ ಒಪ್ಪಿಕೊಳ್ಳಲಾಗಿದೆ. ಇದು ವಿಶೇಷವಾಗಿ ನಮ್ಮ ಬುಡಕಟ್ಟು ಕುಟುಂಬಗಳು ಮತ್ತು ಕುಶಲಕರ್ಮಿಗಳಿಗೆ ಒಂದು ದೊಡ್ಡ ಮನ್ನಣೆಯಾಗಿದೆ. ಈ ವರ್ಷದ ಬಜೆಟ್ನಲ್ಲಿ, ಕೇಂದ್ರ ಸರ್ಕಾರವು ಚರ್ಮ ಮತ್ತು ಜವಳಿ ಉದ್ಯಮಗಳಿಗೆ ಹಲವಾರು ಘೋಷಣೆಗಳನ್ನು ಮಾಡಿದೆ.
ಕಚ್ ರೈತರ - ಮಹಿಳೆಯರು ಮತ್ತು ಪುರುಷರು ಇಬ್ಬರ ಕಠಿಣ ಪರಿಶ್ರಮಕ್ಕೆ ನಾನು ವಂದಿಸುತ್ತೇನೆ. ಕಠಿಣ ಸವಾಲುಗಳ ನಡುವೆಯೂ ನೀವು ಬಿಟ್ಟುಕೊಡಲಿಲ್ಲ. ಗುಜರಾತ್ನಲ್ಲಿ ನೀರಿನ ಮಟ್ಟ ನೂರಾರು ಅಡಿಗಳಷ್ಟು ಕುಸಿದಿದ್ದ ಕಾಲವಿತ್ತು. ನರ್ಮದಾ ಮಾತೆಯ ಕೃಪೆ ಮತ್ತು ಸರ್ಕಾರದ ಪ್ರಯತ್ನಗಳಿಂದ ಇಂದು ಪರಿಸ್ಥಿತಿ ಬದಲಾಗಿದೆ. ಕೆವಾಡಿಯಾದಿಂದ ಕಚ್ನ ಮಾಡ್ ಕುಬಾಗೆ ನಿರ್ಮಿಸಲಾದ ಕಾಲುವೆ ಈ ಪ್ರದೇಶದ ಭವಿಷ್ಯವನ್ನೇ ಪರಿವರ್ತಿಸಿದೆ. ಇಂದು ಕಚ್ನ ಮಾವು, ಖರ್ಜೂರ, ದಾಳಿಂಬೆ, ಜೀರಿಗೆ ಮತ್ತು ಡ್ರ್ಯಾಗನ್ ಹಣ್ಣು ಅಸಾಧಾರಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಂತಹ ಅನೇಕ ಬೆಳೆಗಳು ಈಗ ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ. ಕಚ್ನಿಂದ ಜನರು ವಲಸೆ ಹೋಗುತ್ತಿದ್ದ ಸಮಯವಿತ್ತು, ನಮ್ಮಲ್ಲಿ ನಕಾರಾತ್ಮಕ ಜನಸಂಖ್ಯಾ ಬೆಳವಣಿಗೆ ಇತ್ತು. ಆದರೆ ಇಂದು, ಕಚ್ನ ಜನರು ಇಲ್ಲಿಯೇ ಕಚ್ನಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಹೊರಗಿನ ಜನರು ಸಹ ಈಗ ಕಚ್ನಲ್ಲಿ ಭರವಸೆ ನೋಡುತ್ತಿದ್ದಾರೆ.
ಸ್ನೇಹಿತರೆ,
ದೇಶದ ಯುವಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು ಬಿಜೆಪಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಪ್ರವಾಸೋದ್ಯಮವು ಅಪಾರ ಸಂಖ್ಯೆಯ ಉದ್ಯೋಗಗಳನ್ನು ನೀಡುವ ಒಂದು ವಲಯವಾಗಿದೆ. ಕಚ್ ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಹೊಂದಿದೆ. ಕಚ್ನ ರಣ್ (ಮರಳುಗಾಡು) ಉತ್ಸವವು ದಿನದಿಂದ ದಿನಕ್ಕೆ ಹೊಸ ಎತ್ತರ ತಲುಪುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಭುಜ್ನಲ್ಲಿ ನಿರ್ಮಿಸಲಾದ ಸ್ಮೃತಿ ವ್ಯಾನ್ ಅನ್ನು ಯುನೆಸ್ಕೋ ವಿಶ್ವದ ಅತ್ಯಂತ ಸುಂದರವಾದ ವಸ್ತುಸಂಗ್ರಹಾಲಯವೆಂದು ಗುರುತಿಸಿದೆ. ಈ ಪ್ರದೇಶದ ಪ್ರವಾಸೋದ್ಯಮವು ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಿದೆ. ಧೋರ್ಡೋ ಗ್ರಾಮವನ್ನು ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳಲ್ಲಿ ಪಟ್ಟಿ ಮಾಡಲಾಗಿದೆ. ಇಂದು ಧೋರ್ಡೋದ ಜನರು ಇಲ್ಲಿದ್ದಾರೆಯೇ? ದಯವಿಟ್ಟು ರಾಷ್ಟ್ರಧ್ವಜ ಹಾರಿಸಿ(ಬೀಸಿ)! ಮಾಂಡ್ವಿಯ ಸಮುದ್ರ ತೀರವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಭೂಪೇಂದ್ರ ಭಾಯಿ ಮತ್ತು ಇಲ್ಲಿ ಹಾಜರಿರುವ ಕಚ್ನ ಎಲ್ಲಾ ನಾಯಕರನ್ನು ನಾನು ವಿನಂತಿಸುತ್ತೇನೆ, ರಣ್ (ಮರುಭೂಮಿ) ಉತ್ಸವ ನಡೆಯುವಾಗ, ಅದೇ ಅವಧಿಯಲ್ಲಿ ನಾವು ಬೀಚ್ ಸ್ಪರ್ಧೆಗಳನ್ನು ಸಹ ಆಯೋಜಿಸಬಹುದೇ? ಇತ್ತೀಚಿನ ದಿನಗಳಲ್ಲಿ ಬೀಚ್ ಆಟಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಇತ್ತೀಚೆಗೆ, ದಿಯುನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಸಲಾಯಿತು, ಅಲ್ಲಿ ಸಾವಿರಾರು ಮಕ್ಕಳು ಮರಳಿನ ಕಡಲ ತೀರಗಳಲ್ಲಿ ಭಾಗವಹಿಸಲು ಮತ್ತು ಆಟವಾಡಲು ಬಂದರು. ರಣ್ ಉತ್ಸವದ ಸಮಯದಲ್ಲಿ ಮಾಂಡ್ವಿ ಬೀಚ್ನಲ್ಲಿ ನಡೆಯುವ ನಿಯಮಿತ ಬೀಚ್ ಉತ್ಸವಗಳು ಮತ್ತು ಆಟಗಳನ್ನು ನೋಡಲು ನಾನು ಇಷ್ಟಪಡುತ್ತೇನೆ, ಇದು ದೇಶಾದ್ಯಂತ ಜನರನ್ನು ಆಕರ್ಷಿಸುತ್ತದೆ. ಈ ರೀತಿಯಾಗಿ, ಕಚ್ ಪ್ರವಾಸೋದ್ಯಮವು ಹೊಸ ಎತ್ತರ ತಲುಪುವುದನ್ನು ಮುಂದುವರಿಸುತ್ತದೆ. ನಿಮಗೆ ಬೇಕಾದ ಯಾವುದೇ ಬೆಂಬಲ ನೀಡಲು ನಾನು ಯಾವಾಗಲೂ ನಿಮಗಾಗಿ ಇಲ್ಲಿದ್ದೇನೆ.
ಸ್ನೇಹಿತರೆ,
ಅಹಮದಾಬಾದ್ ಮತ್ತು ಭುಜ್ ನಡುವಿನ ನಮೋ ಭಾರತ್ ರಾಪಿಡ್ ರೈಲು ಪ್ರವಾಸೋದ್ಯಮಕ್ಕೆ ಬಲವಾದ ಉತ್ತೇಜನ ನೀಡಿದೆ.
ಸ್ನೇಹಿತರೆ,
ಇಂದು ಮೇ 26, ಇದ್ದಕ್ಕಿದ್ದಂತೆ ಏಕೆ ಇಷ್ಟೊಂದು ಶಾಂತವಾಗಿದೆ? ಗುಜರಾತ್ನ ನನ್ನ ಸಹೋದರ ಸಹೋದರಿಯರೆ, ನನ್ನನ್ನು ಗುಜರಾತ್ನಿಂದ ದೆಹಲಿಗೆ ಪೂರ್ಣ ಸಂಭ್ರಮದಿಂದ ಕಳುಹಿಸಿಕೊಟ್ಟವರು ನೀವು. ಈ ದಿನ, ಮೇ 26, 2014ರಂದು, ಇದೇ ಸಮಯದಲ್ಲಿ, ನಾನು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ, ದೇಶದ 'ಪ್ರಧಾನ ಸೇವಕ'ನಾಗಿ ಪ್ರಮಾಣವಚನ ಸ್ವೀಕರಿಸಿದೆ. ನಿಮ್ಮ ಆಶೀರ್ವಾದದಿಂದ, ಗುಜರಾತ್ಗೆ ಸೇವೆ ಸಲ್ಲಿಸುವುದರಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಪ್ರಯಾಣವು ಈಗ 11 ವರ್ಷಗಳನ್ನು ಪೂರೈಸಿದೆ. ವಿಧಿಯ ಆಟ ನೋಡಿ, ಮೇ 26ರಂದು, ಪ್ರಧಾನ ಮಂತ್ರಿಯಾಗಿ 11 ವರ್ಷಗಳು ಕಳೆದಿವೆ. ನಾನು ಪ್ರಮಾಣವಚನ ಸ್ವೀಕರಿಸಿದ ದಿನದಂದು, ದೇಶದ ಆರ್ಥಿಕತೆಯು ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು. ಅದು ಇಂದು 11 ವರ್ಷಗಳ ನಂತರ, ನಾವು 4ನೇ ಸ್ಥಾನ ತಲುಪಿದ್ದೇವೆ.
ಸ್ನೇಹಿತರೆ,
ಭಾರತ ಪ್ರವಾಸೋದ್ಯಮದಲ್ಲಿ ನಂಬಿಕೆ ಇಡುತ್ತದೆ, ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ. ಆದರೆ ಭಯೋತ್ಪಾದನೆಯನ್ನು ಪ್ರವಾಸೋದ್ಯಮವೆಂದು ಪರಿಗಣಿಸುವ ಪಾಕಿಸ್ತಾನದಂತಹ ದೇಶಗಳಿವೆ, ಇದು ಜಗತ್ತಿಗೆ ದೊಡ್ಡ ಬೆದರಿಕೆಯಾಗಿದೆ. ಗುಜರಾತ್ನ ಕಚ್ನಲ್ಲಿರುವ ಜನರಿಗೆ ತಿಳಿದಿರುತ್ತದೆ. 25-30 ವರ್ಷಗಳ ಹಿಂದೆ ಗಾಂಧಿನಗರದಿಂದ ಸಚಿವರು ಅಥವಾ ಮುಖ್ಯಮಂತ್ರಿಗಳು ಭೇಟಿ ನೀಡಿದಾಗಲೆಲ್ಲಾ, ಅವರ ಭಾಷಣಗಳು ಪಾಕಿಸ್ತಾನದಿಂದ ಪ್ರಾರಂಭವಾಗಿ ಪಾಕಿಸ್ತಾನದೊಂದಿಗೆ ಕೊನೆಗೊಳ್ಳುತ್ತಿದ್ದವು. ಅವರು ಕಚ್ನ ಜನರಿಗೆ ಪಾಕಿಸ್ತಾನದ ಬಗ್ಗೆ ನಿರಂತರವಾಗಿ ನೆನಪಿಸುತ್ತಿದ್ದರು, ಪದೇಪದೆ. 2001ರಲ್ಲಿ ನಾನು ಒಂದು ನಿರ್ಧಾರ ತೆಗೆದುಕೊಂಡೆ ಎಂಬುದನ್ನು ನೀವು ಗಮನಿಸಿರಬೇಕು, ನಾನು ಅದರ ಬಗ್ಗೆ ಸಮಯ ವ್ಯರ್ಥ ಮಾಡುವುದಿಲ್ಲ. ನಾನು ಅದನ್ನು ಸಂಪೂರ್ಣವಾಗಿ ಉಲ್ಲೇಖಿಸುವುದನ್ನು ನಿಲ್ಲಿಸಿದೆ. ನಾನು ಕಚ್ನ ಬಲದ ಬಗ್ಗೆ ಮಾತ್ರ ಮಾತನಾಡಿದೆ. ನಾನು ಸಂಪೂರ್ಣವಾಗಿ ಮುಂದುವರೆದೆ, ಕಚ್ನ ಜನರು ತಮ್ಮ ಪೂರ್ಣ ಸಾಮರ್ಥ್ಯದಿಂದ ಪಾಕಿಸ್ತಾನವನ್ನು ಸಹ ಅಸೂಯೆಪಡುವಂತೆ ಮಾಡುವ ಕಚ್ ನಿರ್ಮಿಸಿದರು, ನನ್ನ ಸ್ನೇಹಿತರೆ!
ಸ್ನೇಹಿತರೆ,
ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿ ಶೂನ್ಯ ಸಹಿಷ್ಣುತೆಯಾಗಿದೆ. ಆಪರೇಷನ್ ಸಿಂದೂರ್ ಆ ನೀತಿಯನ್ನು ಸ್ಪಷ್ಟಪಡಿಸಿದೆ. ಭಾರತೀಯರ ರಕ್ತ ಚೆಲ್ಲಲು ಪ್ರಯತ್ನಿಸುವ ಯಾರಿಗಾದರೂ ಅವರದೇ ಭಾಷೆಯಲ್ಲಿ ಉತ್ತರಿಸಲಾಗುವುದು. ಭಾರತದ ವಿರುದ್ಧ ಕಣ್ಣು ಎತ್ತುವ ಧೈರ್ಯ ಮಾಡುವ ಯಾರನ್ನೂ ಯಾವುದೇ ಬೆಲೆ ತೆತ್ತಾದರೂ ಬಿಡುವುದಿಲ್ಲ.
ಸ್ನೇಹಿತರೆ,
ಆಪರೇಷನ್ ಸಿಂದೂರ್ ಮಾನವತೆಯನ್ನು ರಕ್ಷಿಸುವ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಒಂದು ಧ್ಯೇಯವಾಗಿದೆ. ಮೇ 22ರ ನಂತರ, ನಾನು ಎಂದಿಗೂ ಏನನ್ನೂ ಮರೆಮಾಚಲಿಲ್ಲ. ನಾನು ಎತ್ತರವಾಗಿ ನಿಂತು ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೇ ಘೋಷಿಸಿದೆ: "ನಾನು ಭಯೋತ್ಪಾದಕರ ಅಡಗುತಾಣಗಳನ್ನು ಧೂಳಿಪಟ ಮಾಡುತ್ತೇನೆ." ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಏನಾದರೂ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿ ನಾವು 15 ದಿನ ಕಾದೆವು. ಆದರೆ ಬಹುಶಃ ಭಯೋತ್ಪಾದನೆ ಅವರ ಜೀವನೋಪಾಯದ ಮೂಲವಾಗಿರಬಹುದು. ಅವರು ಏನನ್ನೂ ಮಾಡದಿದ್ದಾಗ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ಗುರಿಗಳು ಭಯೋತ್ಪಾದಕರ ಪ್ರಧಾನ ಕಚೇರಿಗಳು, ನೂರಾರು ಕಿಲೋಮೀಟರ್ ಆಳದಲ್ಲಿ ನೆಲೆಗೊಂಡಿದ್ದವು. ನಮ್ಮ ಪಡೆಗಳು ಹತ್ತಿರದ ಯಾರಿಗೂ ಹಾನಿ ಮಾಡದೆ ನೇರವಾಗಿ ದಾಳಿ ಮಾಡಿ ನಿಖರವಾದ ಹೊಡೆತಗಳನ್ನು ನೀಡಿವೆ. ಇದು ನಮ್ಮ ಸೈನ್ಯ ಎಷ್ಟು ಸಮರ್ಥ ಮತ್ತು ಶಿಸ್ತುಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ. ಭಾರತದಲ್ಲಿ ಕುಳಿತು ಭಯೋತ್ಪಾದಕರ ಅಡಗುತಾಣಗಳನ್ನು ನಿರ್ಮೂಲನೆ ಮಾಡಬಹುದು ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ.
ಸ್ನೇಹಿತರೆ,
ಭಾರತದ ಕಾರ್ಯಾಚರಣೆಯ ನಂತರ ಪಾಕಿಸ್ತಾನ ಎಷ್ಟು ಕ್ಷೋಭೆಗೊಳಗಾಗಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. 9ನೇ ತಾರೀಖಿನ ರಾತ್ರಿ, ನಮ್ಮ ಕಚ್ ಗಡಿಯಲ್ಲಿಯೂ ಡ್ರೋನ್ಗಳು ಕಾಣಿಸಿಕೊಂಡವು. ಮೋದಿ ಗುಜರಾತ್ನವರಾಗಿರುವುದರಿಂದ ಅವರು ಇಲ್ಲಿ ಒಂದು ಛಾಪು ಮೂಡಿಸಲು ಪ್ರಯತ್ನಿಸುತ್ತಾರೆ ಎಂದು ಅವರು ಭಾವಿಸಿದ್ದರು, ಆದರೆ ಅವರು ಯಾರೊಂದಿಗೆ ವ್ಯವಹರಿಸುತ್ತಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ. 1971 ಅನ್ನು ನೆನಪಿಡಿ - ಇಂದು ಇಲ್ಲಿರುವ ಧೈರ್ಯಶಾಲಿ ಮಹಿಳೆಯರು, ಆಗ ಪಾಕಿಸ್ತಾನವನ್ನು ಧೂಳೀಪಟ ಮಾಡಿದರು! ಈ ತಾಯಂದಿರು ಮತ್ತು ಸಹೋದರಿಯರು ಕೇವಲ 72 ಗಂಟೆಗಳಲ್ಲಿ ರನ್ವೇ ನಿರ್ಮಿಸಿದರು, ನಾವು ನಮ್ಮ ದಾಳಿಯನ್ನು ಪುನರಾರಂಭಿಸಿದೆವು. ಇಂದು, 1971ರ ಯುದ್ಧದ ಈ ಯೋಧ ಮಹಿಳೆಯರು ನನ್ನನ್ನು ಆಶೀರ್ವದಿಸಲು ಬಂದಿರುವುದು ನನ್ನ ಅದೃಷ್ಟ. ಅಷ್ಟೇ ಅಲ್ಲ, ಅವರು ನನಗೆ ಸಿಂದೂರ್ ಗಿಡವನ್ನೂ ನೀಡಿದರು. ತಾಯಂದಿರೆ ಮತ್ತು ಸಹೋದರಿಯರೆ, ನೀವು ನನಗೆ ನೀಡಿದ ಈ ಗಿಡವನ್ನು ಈಗ ಪ್ರಧಾನಮಂತ್ರಿಗಳ ನಿವಾಸದಲ್ಲಿ ನೆಡಲಾಗುವುದು. ಈ ಸಿಂದೂರ್ ಮರವು 'ವಟ್ ವೃಕ್ಷ' (ದೊಡ್ಡ ಆಲದ ಮರ)ದಂತೆ ಬೆಳೆದು ಎತ್ತರವಾಗಿ ನಿಲ್ಲುತ್ತದೆ.
ಸ್ನೇಹಿತರೆ,
ನಾವು ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಿದಾಗ, ಪಾಕಿಸ್ತಾನ ನಮ್ಮ ಮುಗ್ಧ ನಾಗರಿಕರ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಅವರ ಡ್ರೋನ್ಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಅವುಗಳನ್ನು ಕಣ್ಣು ಮಿಟುಕಿಸುವುದರೊಳಗೆ ಒಂದರ ನಂತರ ಒಂದರಂತೆ ಹೊಡೆದುರುಳಿಸಲಾಯಿತು, ನೀವೇ ಅದನ್ನು ನೋಡಿದ್ದೀರಿ. ನಂತರ ಭಾರತವು ಅವರ ಸೇನೆಯ ಮೇಲೆ 2 ಶಕ್ತಿಶಾಲಿ ಪ್ರತಿದಾಳಿ ಪ್ರಾರಂಭಿಸಿತು. ಪಾಕಿಸ್ತಾನದ ವಾಯುನೆಲೆಗಳು ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ಭಾರತ ನಡೆಸಿದ ನಿಖರವಾದ ದಾಳಿಯು ಜಗತ್ತನ್ನು ದಿಗ್ಭ್ರಮೆಗೊಳಿಸಿತು. ನಾನು ಹೇಳಿದಂತೆ - ನೀವು 1971ರ ಯುದ್ಧವನ್ನು ನೋಡಿದ್ದೀರಿ. ಆದರೆ ಈ ಬಾರಿ ಪಾಕಿಸ್ತಾನ ನಡುಗುತ್ತಿತ್ತು. ನನ್ನ ಸ್ನೇಹಿತರೆ, ಅವರು ಭಯಭೀತರಾಗಿದ್ದರು. 1971ರಲ್ಲಿ, ಅವರು ನಮ್ಮ ಭುಜ್ ವಾಯುನೆಲೆಯ ಮೇಲೆ ದಾಳಿ ಮಾಡಿದ್ದರು, ಆಗ ನಮ್ಮ ಸಹೋದರಿಯರು ಅಪ್ರತಿಮ ಧೈರ್ಯ ತೋರಿದರು.
ಸ್ನೇಹಿತರೆ,
ನಾವು ಪಾಕಿಸ್ತಾನದ ದಾಳಿಗೆ ಎಷ್ಟು ಪ್ರಬಲವಾಗಿ ಪ್ರತಿಕ್ರಿಯಿಸಿದ್ದೇವೆಂದರೆ, ಅವರ ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ - ಇಂದಿಗೂ ಅವರು ಚೇತರಿಸಿಕೊಂಡಿಲ್ಲ! ಅಂತಿಮವಾಗಿ, ಪಾಕಿಸ್ತಾನವು ಶರಣಾಗಬೇಕಾಯಿತು. ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ ಎಂದು ಅವರು ಅರಿತುಕೊಂಡರು. ಭಾರತವು ತನ್ನ ಅಸಾಧಾರಣ ಶಕ್ತಿಯನ್ನು ತೋರಿಸಿದೆ. ಅಂತಿಮವಾಗಿ, ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಖರತೆಯೇ ಇದಕ್ಕೆ ಕಾರಣವಾಯಿತು. ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನವು ಬಿಳಿ ಧ್ವಜವನ್ನು ಬೀಸುತ್ತಾ, ಇನ್ನು ಮುಂದೆ ಗುಂಡು ಹಾರಿಸಲು ಬಯಸುವುದಿಲ್ಲ ಎಂದು ಹೇಳಿದೆ. ನಾವು, "ಸರಿ, ನಾವು ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ! ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸುವುದು, ದಾಳಿ ಮಾಡುವುದು, ಪಾಠ ಕಲಿಸುವುದು ನಮ್ಮ ಗುರಿಯಾಗಿತ್ತು". ಆದರೆ ಪಾಕಿಸ್ತಾನ ತಪ್ಪು ಮಾಡಿದ್ದರಿಂದ, ಬೆಲೆ ತೆರಬೇಕಾಯಿತು.
ಸ್ನೇಹಿತರೆ,
ಭಾರತದ ಹೋರಾಟವು ಗಡಿಯುದ್ದಕ್ಕೂ ಆಶ್ರಯ ಪಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧವಾಗಿದೆ. ಇಂದು ಭಯೋತ್ಪಾದನೆಯನ್ನು ಪೋಷಿಸುವ ಮತ್ತು ಬೆಂಬಲಿಸುವವರ ವಿರುದ್ಧ ನಮ್ಮ ದ್ವೇಷವಿದೆ. ಪಾಕಿಸ್ತಾನದ ಗಡಿಯಲ್ಲಿರುವ ಈ ಕಚ್ ಮಣ್ಣಿನಿಂದ, ನಾನು ಪಾಕಿಸ್ತಾನದ ಜನರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನೀವು ಏನು ಗಳಿಸಿದ್ದೀರಿ? ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ನಿಮ್ಮ ಸ್ಥಿತಿ ಏನು? ನಿಮ್ಮ ಮಕ್ಕಳ ಭವಿಷ್ಯವನ್ನು ಯಾರು ಹಾಳು ಮಾಡಿದ್ದಾರೆ? ಅವರನ್ನು ಹತಾಶವಾಗಿ ಅಲೆದಾಡುವಂತೆ ಮಾಡಿದ್ದು ಯಾರು? ಅದು ಭಯೋತ್ಪಾದನೆಯ ಸೂತ್ರಧಾರಿಗಳು, ಅದು ತನ್ನದೇ ಆದ ಕಾರ್ಯಸೂಚಿ ಹೊಂದಿರುವ ನಿಮ್ಮ ಸ್ವಂತ ದೇಶದ ಸೈನ್ಯ. ಪಾಕಿಸ್ತಾನದ ನಾಗರಿಕರಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳು – ಮೋದಿಯ ಮಾತನ್ನು ಎಚ್ಚರಿಕೆಯಿಂದ ಆಲಿಸಿ. ನಿಮ್ಮ ಸರ್ಕಾರ ಮತ್ತು ನಿಮ್ಮ ಸೈನ್ಯ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ಭಯೋತ್ಪಾದನೆಯು ಪಾಕಿಸ್ತಾನಿ ಸೈನ್ಯ ಮತ್ತು ಸರ್ಕಾರಕ್ಕೆ ಹಣ ಸಂಪಾದಿಸುವ ವ್ಯವಹಾರವಾಗಿದೆ. ಪಾಕಿಸ್ತಾನದ ಯುವಕರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಪಾಕಿಸ್ತಾನದ ಮಕ್ಕಳು ತಮ್ಮನ್ನು ತಾವು ಕೇಳಿಕೊಳ್ಳಬೇಕು: ಇದು ಸರಿಯಾದ ಮಾರ್ಗವೇ? ಇದು ನಿಜವಾಗಿಯೂ ಅವರಿಗೆ ಪ್ರಯೋಜನ ನೀಡುತ್ತದೆಯೇ? ಈ ಅಧಿಕಾರ ರಾಜಕೀಯದ ಆಟ - ಇದು ಪಾಕಿಸ್ತಾನದ ಮಕ್ಕಳ ಜೀವನವನ್ನು ಎಂದಾದರೂ ಸುಧಾರಿಸುತ್ತದೆಯೇ? ನಾನು ಪಾಕಿಸ್ತಾನದ ಮಕ್ಕಳಿಗೆ ಹೇಳುತ್ತೇನೆ... ನಿಮ್ಮ ಆಡಳಿತಗಾರರು, ನಿಮ್ಮ ಸೈನ್ಯ, ಭಯೋತ್ಪಾದನೆಯ ನೆರಳಿನಲ್ಲಿ ವಾಸಿಸುವ ಮೂಲಕ, ನಿಮ್ಮ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ, ನಿಮ್ಮ ಭವಿಷ್ಯವನ್ನು ನಾಶಪಡಿಸುತ್ತಿದ್ದಾರೆ, ನಿಮ್ಮನ್ನು ಕತ್ತಲೆಗೆ ತಳ್ಳುತ್ತಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದನೆಯ ಕಾಯಿಲೆಯಿಂದ ಮುಕ್ತಗೊಳಿಸಲು, ಪಾಕಿಸ್ತಾನದ ಜನರು ಮೇಲೇರಬೇಕು. ಪಾಕಿಸ್ತಾನದ ಯುವಕರು ಒಂದು ನಿಲುವು ತೆಗೆದುಕೊಳ್ಳಬೇಕು - ಶಾಂತಿ ಮತ್ತು ಘನತೆಯ ಜೀವನ ನಡೆಸಿ, ನಿಮ್ಮ ಅನ್ನವನ್ನು ನೆಮ್ಮದಿಯಿಂದ ತಿನ್ನಿರಿ, ಇಲ್ಲದಿದ್ದರೆ, ನನ್ನ ಗುಂಡು ಸಿದ್ಧವಾಗಿರುತ್ತದೆ.
ಸ್ನೇಹಿತರೆ,
ಭಾರತದ ನಿರ್ದೇಶನವು ಸ್ಫಟಿಕದಷ್ಟೇ ಸ್ಪಷ್ಟವಾಗಿದೆ. ಭಾರತವು ಅಭಿವೃದ್ಧಿಯ ಹಾದಿ, ಶಾಂತಿ ಮತ್ತು ಸಮೃದ್ಧಿಯ ಹಾದಿ ಆರಿಸಿಕೊಂಡಿದೆ. ಕಚ್ನ ಚೈತನ್ಯವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಪ್ರೇರೇಪಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.
ನನ್ನ ಕಚ್ಚಿ ಸಹೋದರ ಸಹೋದರಿಯರಿಗೆ, ಆಶಾಧಿ ಬಿಜ್ ಹಬ್ಬ - ಕಚ್ ಹೊಸ ವರ್ಷ ಕೆಲವೇ ದಿನಗಳಲ್ಲಿ ಸಮೀಪಿಸುತ್ತಿದೆ. ಮೊದಲು, ನಾನು ನಿಮ್ಮೊಂದಿಗೆ ಆಶಾಧಿ ಬಿಜ್ ಆಚರಿಸಲು ಇಲ್ಲಿಗೆ ಬರುತ್ತಿದ್ದೆ. ಆದರೆ ಈ ಬಾರಿ, ನಾನು ಬರಲು ಸಾಧ್ಯವಾಗದಿರಬಹುದು, ಇಂದು ನನ್ನ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಕಚ್ನ ನನ್ನ ಪ್ರೀತಿಯ ಸಹೋದರ ಸಹೋದರಿಯರ ಪ್ರೀತಿ, ನಿಮ್ಮ ಆಶೀರ್ವಾದ ಮತ್ತು ಇಂದಿನ ರೋಡ್ಶೋ - ವಾಹ್! ಅಂತಹ ಬಿರುಬಿಸಿಲಿನಲ್ಲಿ, ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಅಪಾರ ಜನಸಂದಣಿ ಸೇರಿತ್ತು. ಕಚ್ಗೆ 100 ವಂದನೆಗಳು, ನನ್ನ ಸ್ನೇಹಿತರೆಲ್ಲರಿಗೂ 100 ವಂದನೆಗಳು! ಮತ್ತೊಮ್ಮೆ, ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ, ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಎತ್ತಿ, ನನ್ನೊಂದಿಗೆ ಜೋರಾಗಿ ಹೇಳಿ –
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ವಂದೇ ಮಾತರಂ! ವಂದೇ ಮಾತರಂ!
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿಯವರ ಭಾಷಣದ ಕೆಲವು ಭಾಗಗಳು ಗುಜರಾತಿ ಭಾಷೆಯಲ್ಲಿದ್ದು ಕನ್ನಡ ರೂಪಾಂತರ ಇದಾಗಿದೆ.
*****
(Release ID: 2131954)