ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೊರಿಯಾ ಗಣರಾಜ್ಯಕ್ಕೆ (ಆರ್.ಒ.ಕೆ.) ಸರ್ವಪಕ್ಷ ಸಂಸದೀಯ ನಿಯೋಗದ ಭೇಟಿ
Posted On:
26 MAY 2025 5:07PM by PIB Bengaluru
ಕೊರಿಯಾ ಗಣರಾಜ್ಯದಲ್ಲಿಗೌರವಾನ್ವಿತ ಸಂಸದರಾದ ಶ್ರೀ ಸಂಜಯ್ ಕುಮಾರ್ ಝಾ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗವು ಭಾರತದ ರಾಯಭಾರಿ ಶ್ರೀ ಅಮಿತ್ ಕುಮಾರ್ ಅವರ ಸಂಕ್ಷಿಪ್ತ ವಿವರಣೆಯೊಂದಿಗೆ ಆಪರೇಷನ್ ಸಿಂದೂರ್ ಕುರಿತು ತಮ್ಮ ಕಾರ್ಯಗಳನ್ನು ಪ್ರಾರಂಭಿಸಿತು. ನಿಗದಿತ ಮಾತುಕತೆಗಳಲ್ಲಿ ಕೊರಿಯಾಗೆಂದೇ ರೂಪಿಸಿದ ವಿವರಣೆಯನ್ನು ವಿವರಿಸುವ ಮೂಲಕ ಅವರು ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನಿಲುವಿಗೆ ಬಲವಾದ ಅಡಿಪಾಯ ಹಾಕಿದರು.
2. ನಿಯೋಗವು ಕೊರಿಯಾ ಗಣರಾಜ್ಯದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದವನ್ನು ನಡೆಸಿತು ಮತ್ತು ಆಪರೇಷನ್ ಸಿಂದೂರ್ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡಿತು. ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯನ್ನು ಆಯೋಜಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ನಿಯೋಗವು ಸ್ಪಷ್ಟವಾಗಿ ವಿವರಿಸಿತು ಮತ್ತು ಭಾರತದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವ ಪಾಕಿಸ್ತಾನದ ಪ್ರಯತ್ನಗಳನ್ನು ಎತ್ತಿ ತೋರಿಸಿತು. ಭಾರತದ ಆರಂಭಿಕ ಪ್ರತಿಕ್ರಿಯೆ ಮತ್ತು ನಂತರದ ಕ್ರಮವು ಸಮತೋಲಿತವಾಗಿದ್ದವು, ಅವು ಉಲ್ಬಣಗೊಳ್ಳದ ಮತ್ತು ಜವಾಬ್ದಾರಿಯುತವಾಗಿದ್ದವು ಎಂದು ಅವರು ಎತ್ತಿ ತೋರಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ತತ್ವಬದ್ಧ ಮತ್ತು ದೃಢನಿಶ್ಚಯದ ನಿಲುವನ್ನು ಪುನರುಚ್ಚರಿಸುತ್ತಾ, ಮಾತುಕತೆ ಭಯೋತ್ಪಾದನೆಯೊಂದಿಗೆ ಜೊತೆಯಾಗಿರುಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.
3. ಕೊರಿಯಾ ಗಣರಾಜ್ಯದ ಮಾಜಿ ವಿದೇಶಾಂಗ ಸಚಿವ ಡಾ. ಯೂನ್ ಯಂಗ್-ಕ್ವಾನ್, ಮಾಜಿ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಶ್ರೀ ಚೋ ಹ್ಯುನ್, ಭಾರತಕ್ಕೆ ಕೊರಿಯಾ ಗಣರಾಜ್ಯದ ಮಾಜಿ ರಾಯಭಾರಿಗಳಾದ ಅಂಬ್. ಶಿನ್ ಬಾಂಗ್-ಕಿಲ್ ಮತ್ತು ಅಂಬ್. ಲೀ ಜೂನ್-ಗ್ಯು, ಸಂಸದೀಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಉನ್ನತ ಸದಸ್ಯ ಪ್ರತಿನಿಧಿ ಕಿಮ್ ಗನ್ ಮತ್ತು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಮೇಜರ್ ಜನರಲ್ ಶಿನ್ ಸಾಂಗ್-ಗ್ಯುನ್ ಸೇರಿದಂತೆ ಕೊರಿಯಾದ ಪ್ರಮುಖ ಗಣ್ಯರೊಂದಿಗೆ ನಿಯೋಗವು ಪ್ರಮುಖ ಸಂವಾದಗಳನ್ನು ನಡೆಸಿತು. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನೆಯ ಘೋರ ಕೃತ್ಯ ಮತ್ತು ತದ ನಂತರ ಭಾರತ ತೆಗೆದುಕೊಂಡ ಸೂಕ್ತವಾದ ಮತ್ತು ಉಲ್ಬಣಗೊಳ್ಳದ ಕ್ರಮಗಳ ಬಗ್ಗೆ ನಿಯೋಗವು ಅವರಿಗೆ ತಿಳಿಸಿತು. ಎಫ್.ಎ.ಟಿ.ಎಫ್. ಸೇರಿದಂತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಭಾರತವು ತನ್ನದೇ ಆದ ರೀತಿಯಲ್ಲಿ ಭಯೋತ್ಪಾದನೆಗೆ ತ್ವರಿತ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡುವುದು “ಈಗ ಸಾಮಾನ್ಯ" ವಿಧಾನವಾಗಿದೆ ಎಂದು ನಿಯೋಗ ಪುನರುಚ್ಚರಿಸಿತು. ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಕೊರಿಯಾದ ಪ್ರತಿನಿಧಿಗಳು ಭಯೋತ್ಪಾದನೆಗೆ ತಮ್ಮ ದೃಢ ವಿರೋಧವನ್ನು ಮತ್ತು ಭಾರತದ ನಿಲುವನ್ನು ಅರಿತುಕೊಂಡಿರುವುದನ್ನು ದೃಢಪಡಿಸಿದರು.
4. ನಾಳೆ, ಭಾರತದ ನಿಯೋಗವು ಕೊರಿಯಾ ಗಣರಾಜ್ಯದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಅಸೆಂಬ್ಲಿಯ ಗಣ್ಯರು, ಪ್ರಮುಖ ಚಿಂತಕರ ಚಾವಡಿಗಳ ಹಿರಿಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದೆ ಮತ್ತು ನಂತರ ಮಾಧ್ಯಮಗಳೊಂದಿಗೆ ಸಂವಾದ ನಡೆಸಲಿದೆ.
*****
(Release ID: 2131542)