ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ʻಸೆಮಿಕಾನ್ ಇಂಡಿಯಾ-2024ʼ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡದ ಅನುವಾದ

Posted On: 11 SEP 2024 1:41PM by PIB Bengaluru

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಮತ್ತು ಜಿತಿನ್ ಪ್ರಸಾದ ಅವರೇ, ಜಾಗತಿಕ ಸೆಮಿ ಕಂಡಕ್ಟರ್‌ (ಸೆಮಿ ಕಂಡಕ್ಟರ್‌) ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖರೇ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಪ್ರಪಂಚದ ಎಲ್ಲಾ ಪಾಲುದಾರರೇ, ಇತರ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ! ಎಲ್ಲರಿಗೂ ನಮಸ್ಕಾರ!

ʻಸೆಮಿʼ(SEMI)ಯ ಎಲ್ಲ ಸಹವರ್ತಿಗಳಿಗೆ ನಾನು ವಿಶೇಷ ಸ್ವಾಗತ ಕೋರುತ್ತೇನೆ. ಜಾಗತಿಕ ಸೆಮಿ ಕಂಡಕ್ಟರ್‌ ಉದ್ಯಮಕ್ಕೆ ಸಂಬಂಧಿಸಿದ ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವದ ಎಂಟನೇ ದೇಶ ಭಾರತ. ಇದನ್ನು ಭಾರತದಲ್ಲಿ ಆಯೋಜಿಸಲು ಇದು ಸರಿಯಾದ ಸಮಯ ಎಂದು ನಾನು ಹೇಳಬಲ್ಲೆ. ನೀವು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲೇ ಇದ್ದೀರಿ. 21ನೇ ಶತಮಾನದ ಭಾರತದಲ್ಲಿ ಎಂದಿಗೂ ʻಚಿಪ್ಸ್ʼಗಳ ಕೊರತೆ ಕಾಡುವುದಿಲ್ಲ! ಇದಿಷ್ಟೇ ಅಷ್ಟೇ ಅಲ್ಲ, ಇಂದಿನ ಭಾರತವು ಜಗತ್ತಿಗೆ ಭರವಸೆ ನೀಡುವುದೇನೆಂದರೆ - ʻಚಿಪ್ಸ್ʼ ಕೊರತೆಯಾದಾಗ, ನೀವು ಭಾರತದ ಮೇಲೆ ವಿಶ್ವಾಸ ಇರಿಸಬಹುದು!

ಸ್ನೇಹಿತರೇ,

ʻಸೆಮಿ ಕಂಡಕ್ಟರ್‌ʼ ಪ್ರಪಂಚದೊಂದಿಗಿನ ನಿಮ್ಮ ಒಡನಾಟವು ಅತ್ಯಗತ್ಯವಾಗಿ ʻಡಯೋಡ್ʼಗಳನ್ನೂ ಒಳಗೊಂಡಿರುತ್ತದೆ. ಮತ್ತು ನಿಮಗೆ ತಿಳಿದಿರುವಂತೆ, ʻಡಯೋಡ್ʼನಲ್ಲಿ ವಿದ್ಯುತ್‌ ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುತ್ತದೆ. ಆದರೆ ಭಾರತದ ಸೆಮಿ ಕಂಡಕ್ಟರ್‌ ಉದ್ಯಮದಲ್ಲಿ ವಿಶೇಷ ʻಡಯೋಡ್ʼಗಳನ್ನು ಬಳಸಲಾಗುತ್ತದೆ. ಇಲ್ಲಿ ನಮ್ಮ ಶಕ್ತಿ ಎರಡೂ ದಿಕ್ಕುಗಳಲ್ಲಿ ಹರಿಯುತ್ತದೆ. ಅದು ಹೇಗೆ?  ಎಂದು ನಿಮಗೆ ಆಶ್ಚರ್ಯವಾಗಬಹುದು,  ಮತ್ತು ಇದು ತುಂಬಾ ಆಸಕ್ತಿದಾಯಕ ವಿಚಾರವೂ ಹೌದು. ನೀವು ಹೂಡಿಕೆ ಮಾಡುತ್ತೀರಿ ಮತ್ತು ಮೌಲ್ಯವನ್ನು ಸೃಷ್ಟಿಸುತ್ತೀರಿ. ಏತನ್ಮಧ್ಯೆ, ಸರ್ಕಾರವು ನಿಮಗೆ ಸದೃಢ ನೀತಿಗಳು ಮತ್ತು ಸುಗಮ ವ್ಯವಹಾರದ ವಾತಾವರಣವನ್ನು ಒದಗಿಸುತ್ತದೆ. ನಿಮ್ಮ ಸೆಮಿ ಕಂಡಕ್ಟರ್‌ ಉದ್ಯಮವನ್ನು 'ಇಂಟಿಗ್ರೇಟೆಡ್ ಸರ್ಕ್ಯೂಟ್'ಗಳೊಂದಿಗೆ ಸಂಪರ್ಕಿಸಲಾಗಿದೆ. ಭಾರತವು ನಿಮಗೆ 'ಸಮಗ್ರ ಪರಿಸರ ವ್ಯವಸ್ಥೆ'ಯನ್ನು ಸಹ ಒದಗಿಸುತ್ತದೆ. ಭಾರತದ ವಿನ್ಯಾಸಕರ ಅಪಾರ ಪ್ರತಿಭೆಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. ವಿನ್ಯಾಸ ಜಗತ್ತಿನಲ್ಲಿ ಭಾರತವು ಶೇಕಡಾ 20 ರಷ್ಟು ಪ್ರತಿಭೆಗಳನ್ನು ಕೊಡುಗೆ ನೀಡುತ್ತದೆ, ಮತ್ತು ಅದು ನಿರಂತರವಾಗಿ ವಿಸ್ತರಿಸುತ್ತಿದೆ. ನಾವು 85,000 ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ಆರ್ & ಡಿ ತಜ್ಞರ ಸೆಮಿ ಕಂಡಕ್ಟರ್‌ ಕಾರ್ಯಪಡೆಯನ್ನು ಸಜ್ಜುಗೊಳಿಸುತ್ತಿದ್ದೇವೆ. ಭಾರತವು ತನ್ನ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಸೆಮಿ ಕಂಡಕ್ಟರ್‌ ಉದ್ಯಮಕ್ಕೆ ಸಜ್ಜುಗೊಳಿಸುವತ್ತ ಗಮನ ಹರಿಸಿದೆ. ನಿನ್ನೆಯಷ್ಟೇ, ʻಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನʼದ ಮೊದಲ ಸಭೆ ನಡೆಯಿತು. ಈ ಪ್ರತಿಷ್ಠಾನವು ಭಾರತದ ಸಂಶೋಧನಾ ಪರಿಸರ ವ್ಯವಸ್ಥೆಗೆ ಹೊಸ ದಿಕ್ಕು ಮತ್ತು ಹೊಸ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ, ಭಾರತವು ಒಂದು ಟ್ರಿಲಿಯನ್ ರೂಪಾಯಿಗಳ ವಿಶೇಷ ಸಂಶೋಧನಾ ನಿಧಿಯನ್ನು ಸಹ ಸ್ಥಾಪಿಸಿದೆ.

ಸ್ನೇಹಿತರೇ,

ಇಂತಹ ಉಪಕ್ರಮಗಳು ಸೆಮಿ ಕಂಡಕ್ಟರ್‌ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಆವಿಷ್ಕಾರಗಳ ವ್ಯಾಪ್ತಿಯನ್ನು ಬಹಳವಾಗಿ ವಿಸ್ತರಿಸುತ್ತವೆ. ನಾವು ಸೆಮಿ ಕಂಡಕ್ಟರ್‌ಗೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಇದಲ್ಲದೆ, ನೀವು ಮೂರು ಆಯಾಮದ ಶಕ್ತಿಯನ್ನು ಹೊಂದಿದ್ದೀರಿ - ಮೊದಲನೆಯದು, ಭಾರತದ ಪ್ರಸ್ತುತ ಸುಧಾರಣಾವಾದಿ ಸರ್ಕಾರ, ಎರಡನೆಯದು, ಭಾರತದಲ್ಲಿ ಬೆಳೆಯುತ್ತಿರುವ ಉತ್ಪಾದನಾ ನೆಲೆ ಮತ್ತು ಮೂರನೇಯದ್ದು ಭಾರತದ ಮಹತ್ವಾಕಾಂಕ್ಷೆಯ ಮಾರುಕಟ್ಟೆ. ತಂತ್ರಜ್ಞಾನದ ಅಭಿರುಚಿಯನ್ನು ಅರ್ಥಮಾಡಿಕೊಳ್ಳಬಲ್ಲಂತಹ ಮಾರುಕಟ್ಟೆ. ನೀವು ಇಂತಹ ʻ‍ತ್ರೀ-ಡಿ ಪವರ್ʼ ಸೆಮಿ ಕಂಡಕ್ಟರ್‌ ಉದ್ಯಮದ ನೆಲೆಯನ್ನು ಬೇರೆಡೆ ಕಾಣುವುದು ಕಷ್ಟ.

ಸ್ನೇಹಿತರೇ,

ಭಾರತದ ಮಹತ್ವಾಕಾಂಕ್ಷೆಯ ಮತ್ತು ತಂತ್ರಜ್ಞಾನ ಆಧಾರಿತ ಸಮಾಜವು ಬಹಳ ವಿಶಿಷ್ಟವಾದುದು. ಭಾರತಕ್ಕೆ, ʻಚಿಪ್ʼ ಎನ್ನುವುದು ಕೇವಲ ತಂತ್ರಜ್ಞಾನವಲ್ಲ. ನಮಗೆ, ಅದು ಲಕ್ಷಾಂತರ ಆಕಾಂಕ್ಷೆಗಳನ್ನು ಪೂರೈಸುವ ಸಾಧನವಾಗಿದೆ. ಇಂದು, ಭಾರತವು ʻಚಿಪ್ಸ್ʼನ ಪ್ರಮುಖ ಗ್ರಾಹಕ ದೇಶವಾಗಿದೆ. ನಾವು ಈ ʻಚಿಪ್ʼನಲ್ಲಿ ವಿಶ್ವದ ಅತ್ಯುತ್ತಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿದ್ದೇವೆ. ಈ ಸಣ್ಣ ʻಚಿಪ್ʼ, ಭಾರತದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಸೌಲಭ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಪ್ರಬಲ ಬ್ಯಾಂಕಿಂಗ್ ವ್ಯವಸ್ಥೆಗಳು ಸಹ ಕಂಗೆಟ್ಟಿದ್ದಾಗ, ಭಾರತದಲ್ಲಿ ಬ್ಯಾಂಕುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇದ್ದವು. ಅದು ಭಾರತದ ʻಯುಪಿಐʼ ಆಗಿರಬಹುದು, ʻರುಪೇ ಕಾರ್ಡ್ʼ ಆಗಿರಬಹುದು, ʻಡಿಜಿ ಲಾಕರ್ʼ ಅಥವಾ ʻಡಿಜಿ ಯಾತ್ರಾʼ ಆಗಿರಬಹುದು ವಿವಿಧ ಡಿಜಿಟಲ್ ವೇದಿಕೆಗಳು ಭಾರತದ ಜನರಿಗೆ ದೈನಂದಿನ ಜೀವನದ ಭಾಗವಾಗಿವೆ. ಇಂದು, ಭಾರತವು ಸ್ವಾವಲಂಬಿಯಾಗಲು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಇಂದು, ಭಾರತವು ಗಮನಾರ್ಹ ಹಸಿರು ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ಭಾರತದಲ್ಲಿ ಡೇಟಾ ಕೇಂದ್ರಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಇದರರ್ಥ ಜಾಗತಿಕ ಸೆಮಿ ಕಂಡಕ್ಟರ್‌ ಉದ್ಯಮವನ್ನು ಮುನ್ನಡೆಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ.

ಸ್ನೇಹಿತರೇ,

'ಚಿಪ್ಸ್(ಚೂರುಗಳು) ಎಲ್ಲಿ ಬೇಕಾದರೂ ಬೀಳಲಿ ಬಿಡಿʼ ಎಂಬ ಹಳೆಯ ನಾಣ್ಣುಡಿಯೊಂದಿದೆ. ಅಂದರೆ, ಪರಿಸ್ಥಿತಿಗಳು ಬಂದಂತೆ ಬರಲಿ ಎಂದರ್ಥ. ಇಂದಿನ ಯುವ ಮತ್ತು ಮಹತ್ವಾಕಾಂಕ್ಷೆಯ ಭಾರತವು ಈ ಮನಸ್ಥಿತಿಯನ್ನು ಅನುಸರಿಸುವುದಿಲ್ಲ. 'ಭಾರತದಲ್ಲಿ ಉತ್ಪಾದಿಸುವ ಚಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು' – ಇದು ಭಾರತದ ಇಂದಿನ ಮಂತ್ರವಾಗಿದೆ. ಅದಕ್ಕಾಗಿಯೇ ಸೆಮಿ ಕಂಡಕ್ಟರ್‌ ಉತ್ಪಾದನೆಯನ್ನು ಮುನ್ನಡೆಸಲು ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತದಲ್ಲಿ ಸೆಮಿ ಕಂಡಕ್ಟರ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಭಾರತ ಸರ್ಕಾರವು ಶೇಕಡಾ 50 ರಷ್ಟು ಬೆಂಬಲವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಸಹ ಹೆಚ್ಚುವರಿ ಬೆಂಬಲವನ್ನು ನೀಡುತ್ತಿವೆ. ಈ ನೀತಿಗಳಿಂದಾಗಿ, ಅಲ್ಪಾವಧಿಯಲ್ಲಿ ಈ ವಲಯದಲ್ಲಿ ಭಾರತದಲ್ಲಿ ಈಗಾಗಲೇ 1.5 ಟ್ರಿಲಿಯನ್ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ. ಮತ್ತು ಇಂದು, ಅನೇಕ ಯೋಜನೆಗಳು ಸಿದ್ಧತೆಯ ಹಂತಲ್ಲಿವೆ. ʻಸೆಮಿಕಾನ್ ಇಂಡಿಯಾʼ ಕಾರ್ಯಕ್ರಮವೂ ಒಂದು ಅತ್ಯುತ್ತಮ ಉಪಕ್ರಮವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ʻಫ್ರಂಟ್ ಎಂಡ್ ಫ್ಯಾಬ್ʼಗಳು, ʻಡಿಸ್ ಪ್ಲೇ ಫ್ಯಾಬ್ʼಗಳು, ಸೆಮಿ ಕಂಡಕ್ಟರ್‌ ಪ್ಯಾಕೇಜಿಂಗ್, ʻಕಾಂಪೌಂಡ್‌ ಸೆಮಿ ಕಂಡಕ್ಟರ್‌ʼಗಳು, ಸಂವೇದಕಗಳು ಮತ್ತು ಡಿಸ್‌ಪ್ಲೇ ತಯಾರಿಕೆಗೆ ಆರ್ಥಿಕ ಬೆಂಬಲವನ್ನು ಒದಗಿಸಲಾಗುತ್ತಿದೆ. ಮತ್ತೊಂದು ವಿಧದಲ್ಲಿ ಹೇಳುವುದಾದರೆ, ಭಾರತದಲ್ಲಿ 360 ಡಿಗ್ರಿ ವಿಧಾನದೊಂದಿಗೆ ಕೆಲಸ ನಡೆಯುತ್ತಿದೆ. ನಮ್ಮ ಸರ್ಕಾರವು ಭಾರತದಲ್ಲಿ ಸಂಪೂರ್ಣ ಸೆಮಿ ಕಂಡಕ್ಟರ್‌ ಪೂರೈಕೆ ಸರಪಳಿ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುತ್ತಿದೆ. ನಾನು ಈ ವರ್ಷ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ, ʻವಿಶ್ವದ ಪ್ರತಿಯೊಂದು ಸಾಧನವು ಭಾರತೀಯ ನಿರ್ಮಿತ ಚಿಪ್ ಹೊಂದಬೇಕೆಂಬುದು ನಮ್ಮ ಕನಸುʼ ಎಂದು ಹೇಳಿದ್ದೆ. ಸೆಮಿಕಂಡಕ್ಟರ್ ʻಶಕ್ತಿ ಕೇಂದ್ರʼವಾಗಲು ಭಾರತ ಏನು ಬೇಕಾದರೂ ಮಾಡುತ್ತದೆ.

ಸ್ನೇಹಿತರೇ,

ನಾವು ಇತ್ತೀಚೆಗೆ ಮಹತ್ವದ ಖನಿಜಗಳ ದೇಶೀಯ ಉತ್ಪಾದನೆ ಮತ್ತು ಸಾಗರೋತ್ತರ ಸ್ವಾಧೀನಕ್ಕಾಗಿ ʻಖನಿಜ ಮಿಷನ್ʼ ಎಂಬ ನಿರ್ಣಾಯಕ ಯೋಜನೆ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ಮಹತ್ವದ ಖನಿಜಗಳಿಗೆ ಆಮದು ಸುಂಕ ವಿನಾಯಿತಿ, ಗಣಿಗಾರಿಕೆ ಬ್ಲಾಕ್ ಹರಾಜು ಮುಂತಾದ ಕ್ರಮಗಳು ಪ್ರಗತಿಯಲ್ಲಿವೆ. ಹೆಚ್ಚುವರಿಯಾಗಿ, ನಾವು ʻಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆʼಯಲ್ಲಿ ಸೆಮಿ ಕಂಡಕ್ಟರ್‌ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. ನಾವು ʻಐಐಟಿʼಗಳ ಜೊತೆ ಪಾಲುದಾರಿಕೆ ಹೊಂದಿದ್ದೇವೆ. ಇದರಿಂದ ನಮ್ಮ ಎಂಜಿನಿಯರ್‌ಗಳು ಇಂದಿನ ಹೈಟೆಕ್ ʻಚಿಪ್ʼಗಳನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ ಮುಂದಿನ ಪೀಳಿಗೆಯ ʻಚಿಪ್ʼಗಳನ್ನು ಸಂಶೋಧಿಸುತ್ತಾರೆ. ನಾವು ಅಂತರರಾಷ್ಟ್ರೀಯ ಸಹಯೋಗಗಳನ್ನು ಸಹ ಮಾಡಿಕೊಳ್ಳುತ್ತಿದ್ದೇವೆ. ʻತೈಲ ರಾಜತಾಂತ್ರಿಕತೆʼಯ ಬಗ್ಗೆ ನೀವು ಕೇಳಿರಬಹುದು; ಆದರೆ ಇಂದಿನ ಯುಗವು ʻಸಿಲಿಕಾನ್ ರಾಜತಾಂತ್ರಿಕತೆʼಯ ಯುಗವಾಗಿದೆ. ಈ ವರ್ಷ ಭಾರತವು ʻಇಂಡೋ-ಪೆಸಿಫಿಕ್ ಆರ್ಥಿಕ ನೀತಿಯ ಪೂರೈಕೆ ಸರಪಳಿ ಮಂಡಳಿʼಯ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ನಾವು ʻಕ್ವಾಡ್ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಉಪಕ್ರಮʼದಲ್ಲಿ ಮಹತ್ವದ ಪಾಲುದಾರರಾಗಿದ್ದೇವೆ ಮತ್ತು ಇತ್ತೀಚೆಗೆ ಜಪಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ಭಾರತವು ಈ ವಲಯದಲ್ಲಿ ಅಮೆರಿಕದ ಜೊತೆಗೂ ತನ್ನ ಸಹಕಾರವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ.

ಸ್ನೇಹಿತರೇ,

ಭಾರತದ ʻಸೆಮಿ ಕಂಡಕ್ಟರ್‌ ಮಿಷನ್ʼ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಭಾರತವು ಈ ಬಗ್ಗೆ ಏಕೆ ಇಷ್ಟು ಗಮನ ಹರಿಸುತ್ತಿದೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಅಂತಹ ವ್ಯಕ್ತಿಗಳು ನಮ್ಮ ʻಡಿಜಿಟಲ್ ಇಂಡಿಯಾ ಮಿಷನ್ʼ ಅನ್ನು ಅಧ್ಯಯನ ಮಾಡಬೇಕು. ದೇಶಕ್ಕೆ ಪಾರದರ್ಶಕ, ಪರಿಣಾಮಕಾರಿ ಮತ್ತು ಸೋರಿಕೆ ಮುಕ್ತ ಆಡಳಿತವನ್ನು ಒದಗಿಸುವುದು ʻಡಿಜಿಟಲ್ ಇಂಡಿಯಾ ಮಿಷನ್‌ʼನ ಗುರಿಯಾಗಿತ್ತು. ಇಂದು, ನಾವು ಅದರ ಗುಣಕ ಪರಿಣಾಮಕ್ಕೆ ಸಾಕ್ಷಿಯಾಗುತ್ತಿದ್ದೇವೆ. ʻಡಿಜಿಟಲ್ ಇಂಡಿಯಾʼದ ಯಶಸ್ಸಿಗೆ ನಮಗೆ ಅಗ್ಗದ ದರದ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಡೇಟಾದ ಅಗತ್ಯವಿತ್ತು. ಅದರಂತೆ, ನಾವು ಅಗತ್ಯ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಿದ್ದೇವೆ. ಒಂದು ದಶಕದ ಹಿಂದೆ ನಾವು ಮೊಬೈಲ್ ಫೋನ್‌ಗಳ ಪ್ರಮುಖ ಆಮದುದಾರರಲ್ಲಿ ಒಬ್ಬರಾಗಿದ್ದೆವು. ಇಂದು, ನಾವು ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರರಾಗಿದ್ದೇವೆ. ಇತ್ತೀಚಿನ ವರದಿಯ ಪ್ರಕಾರ ಭಾರತವು ಈಗ ʻ5ಜಿʼ ಹ್ಯಾಂಡ್‌ಸೆಟ್‌ಗಳಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಕೇವಲ ಎರಡು ವರ್ಷಗಳ ಹಿಂದೆ, ನಾವು ʻ5 ಜಿʼಗೆ ಚಾಲನೆ ನೀಡಿದ್ದೇವೆ. ನಾವು ಇಂದು ಎಲ್ಲಿಗೆ ತಲುಪಿದ್ದೇವೆ ಎಂಬುದನ್ನು ನೋಡಿ. ಇಂದು, ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಮೌಲ್ಯವು 150 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಾಗಿದೆ. ಮತ್ತು ನಮ್ಮ ಗುರಿ ಇನ್ನೂ ದೊಡ್ಡದಾಗಿದೆ. ಈ ದಶಕದ ಅಂತ್ಯದ ವೇಳೆಗೆ ನಮ್ಮ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಮೌಲ್ಯವನ್ನು 500 ಶತಕೋಟಿ ಡಾಲರ್‌ಗೆ ಬೆಳೆಸಲು ನಾವು ಬಯಸುತ್ತಿದ್ದೇವೆ. ಇದು ಭಾರತದ ಯುವಕರಿಗೆ ಸುಮಾರು 6 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದ ಸೆಮಿ ಕಂಡಕ್ಟರ್‌ ವಲಯಕ್ಕೂ ಇದರಿಂದ ಹೆಚ್ಚಿನ ಲಾಭವಾಗಲಿದೆ. ಶೇಕಡಾ 100 ರಷ್ಟು ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಭಾರತದಲ್ಲಿ ಮಾಡುವುದು ನಮ್ಮ ಗುರಿಯಾಗಿದೆ. ಇದರರ್ಥ ಭಾರತವು ಸೆಮಿ ಕಂಡಕ್ಟರ್‌ ಚಿಪ್ಸ್ ಮಾತ್ರವಲ್ಲದೆ ಅವುಗಳ ಸಿದ್ಧಪಡಿಸಿದ ಸರಕುಗಳನ್ನು ಸಹ ತಯಾರಿಸಲಿದೆ.

ಸ್ನೇಹಿತರೇ,

ಭಾರತದ ಸೆಮಿ ಕಂಡಕ್ಟರ್‌ ಪರಿಸರ ವ್ಯವಸ್ಥೆಯು ದೇಶೀಯ ಸವಾಲುಗಳಿಗೆ ಮಾತ್ರವಲ್ಲದೆ ಜಾಗತಿಕ ಸವಾಲುಗಳಿಗೂ ಪರಿಹಾರಗಳನ್ನು ಒದಗಿಸುತ್ತದೆ. ವಿನ್ಯಾಸಕ್ಕೆ ಸಂಬಂಧಿಸಿದ ಒಂದು ರೂಪಕವನ್ನು ನೀವು ಕೇಳಿರಬಹುದು. ಅದೆಂದರೆ - ʻಸಿಂಗಲ್‌ ಪಾಯಿಂಟ್‌ ಆಫ್‌ ಫೈಲ್ಯೂರ್‌ʼ ಈ ದೋಷವನ್ನು ತಪ್ಪಿಸಲು ವಿನ್ಯಾಸ ಕ್ಷೇತ್ರದ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ವ್ಯವಸ್ಥೆಯು ಕೇವಲ ಒಂದು ಅಂಶವನ್ನಷ್ಟೇ ಅವಲಂಬಿಸದಂತೆ ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಈ ಪಾಠವು ಕೇವಲ ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಜೀವನಕ್ಕೆ ಸಮಾನವಾಗಿ ಅನ್ವಯಿಸುತ್ತದೆ, ವಿಶೇಷವಾಗಿ ಪೂರೈಕೆ ಸರಪಳಿಗಳ ಸಂದರ್ಭದಲ್ಲಿ. ಅದು ಕೋವಿಡ್ ಆಗಿರಲಿ ಅಥವಾ ಯುದ್ಧಗಳಾಗಿರಲಿ, ಇತ್ತೀಚಿನ ದಿನಗಳಲ್ಲಿ ಪೂರೈಕೆ ಸರಪಳಿ ಅಡಚಣೆಯಿಂದ ಬಾಧಿತವಾಗದ ಉದ್ಯಮವೇ ಇಲ್ಲ. ಆದ್ದರಿಂದ, ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವವು ಅತ್ಯಂತ ನಿರ್ಣಾಯಕ. ಆದ್ದರಿಂದ, ವಿವಿಧ ಕ್ಷೇತ್ರಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಸಾಧಿಸುವ ಧ್ಯೇಯದತ್ತ ಭಾರತವು ಮುನ್ನಡೆಯುತ್ತಿದೆ ಎಂದು ನನಗೆ ಸಂತೋಷವಾಗಿದೆ. ಮತ್ತು ನಾವು ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಂತ್ರಜ್ಞಾನದೊಂದಿಗೆ ಜೋಡಿಸಿದಾಗ, ತಂತ್ರಜ್ಞಾನದ ಸಕಾರಾತ್ಮಕ ಶಕ್ತಿಯು ಇಮ್ಮಡಿಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ತಂತ್ರಜ್ಞಾನದಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೂರ ಮಾಡಿದಾಗ, ಅಂತಹ ತಂತ್ರಜ್ಞಾನವು ಅತ್ಯಂತ ಹಾನಿಕಾರಕವಾಗಿ ಬದಲಾಗುತ್ತದೆ. ಆದ್ದರಿಂದ, ಅದು ಮೊಬೈಲ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಅಥವಾ ಸೆಮಿ ಕಂಡಕ್ಟರ್‌ ಉತ್ಪಾದನೆ ಯಾವುದೇ ಆಗಿರಲಿ, ನಮ್ಮ ಗಮನ ಸ್ಪಷ್ಟವಾಗಿದೆ. ಬಿಕ್ಕಟ್ಟಿನ ಸಮಯದಲ್ಲೂ ನಿಲ್ಲಿಸದೆ ಕಾರ್ಯನಿರ್ವಹಿಸುವ ಜಗತ್ತನ್ನು ಸೃಷ್ಟಿಸಲು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ನೀವು ಭಾರತದ ಪ್ರಯತ್ನಗಳನ್ನು ಬಲಪಡಿಸುತ್ತೀರಿ ಎಂಬ ವಿಶ್ವಾಸದೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ.

ಅನಂತ ಧನ್ಯವಾದಗಳು!

 

*****



(Release ID: 2053955) Visitor Counter : 5