ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ ಭಾರತ ಸರ್ಕಾರ, ತ್ರಿಪುರಾ ಸರ್ಕಾರ, ಎನ್.‌ ಎಲ್.‌ ಎಫ್.‌ ಟಿ. ಮತ್ತು ಎ.ಟಿ.ಟಿ.ಎಫ್. ನಡುವೆ ಇತ್ಯರ್ಥ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಲಾಗಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವಾದ ಶಾಂತಿಯತೆ, ಸಮೃದ್ಧ ಮತ್ತು ದಂಗೆ-ಮುಕ್ತ ಈಶಾನ್ಯ ಪ್ರದೇಶದ ಹಾದಿಯಲ್ಲಿ ಈ ಒಪ್ಪಂದವು ಒಂದು ಮೈಲಿಗಲ್ಲಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ಎನ್.‌ ಎಲ್.‌ ಎಫ್.‌ ಟಿ. ಮತ್ತು ಎ.ಟಿ.ಟಿ.ಎಫ್.‌ ತಂಡಗಳು ರಾಜ್ಯದಲ್ಲಿ 35 ವರ್ಷಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸುವ ಮೂಲಕ ತ್ರಿಪುರಾದ ಅಭಿವೃದ್ಧಿಯ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಈಶಾನ್ಯ ಭಾರತದ ರಾಜ್ಯಗಳ  ಜನರ ಸಂಸ್ಕೃತಿ, ಭಾಷೆ, ಗುರುತನ್ನು ಉಳಿಸಿಕೊಂಡು ಇಡೀ ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲಾ ಶಾಂತಿ ಒಪ್ಪಂದಗಳನ್ನು ಹೃದಯಪೂರ್ವಕವಾಗಿ ಅಕ್ಷರಸಹ ಜಾರಿಗೆ ತಂದಿದೆ

ಈಶಾನ್ಯ ಭಾರತದ ಪ್ರದೇಶಗಳು ಮತ್ತು ದೆಹಲಿಯ ನಡುವಿನ ಅಂತರವನ್ನು ರಸ್ತೆಗಳು, ರೈಲುಗಳು ಮತ್ತು ವಿಮಾನಗಳ ಮೂಲಕ ಮಾತ್ರವಲ್ಲದೆ ಅವರ ಹೃದಯದಲ್ಲಿನ ವ್ಯತ್ಯಾಸಗಳನ್ನು ಮರೆಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೇತುಬಂಧನ ಮಾಡಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಈಶಾನ್ಯ ಪ್ರದೇಶಗಳಲ್ಲಿ ಮಾಡಿಕೊಂಡ 12 ಒಪ್ಪಂದಗಳಿಂದಾಗ

Posted On: 04 SEP 2024 7:22PM by PIB Bengaluru

ಭಾರತ ಸರ್ಕಾರ, ತ್ರಿಪುರಾ ಸರ್ಕಾರ ಮತ್ತು ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎಟಿಟಿಎಫ್) ನಡುವೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿಂದು ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವಾದ ಶಾಂತಿಯತೆ, ಸಮೃದ್ಧ ಮತ್ತು ದಂಗೆ-ಮುಕ್ತ ಈಶಾನ್ಯ ಪ್ರದೇಶಗಳನ್ನು ನಿರ್ಮಿಸುವಲ್ಲಿ  ಮಹತ್ವದ ಮೈಲಿಗಲ್ಲಾಗಿದೆ. ತ್ರಿಪುರಾದ ಮುಖ್ಯಮಂತ್ರಿ ಪ್ರೊ. (ಡಾ.) ಮಾಣಿಕ್ ಸಹಾ ಮತ್ತು ಕೇಂದ್ರ ಗೃಹ ಸಚಿವಾಲಯ ಹಾಗೂ ತ್ರಿಪುರಾ ಸರ್ಕಾರದ ಹಿರಿಯ ಅಧಿಕಾರಿಗಳು ಇತ್ಯಾರ್ಥ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

0I9A0740 (1).JPG 

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮಾತನಾಡಿ ಇಂದು ಇಡೀ ದೇಶಕ್ಕೆ ಮತ್ತು ತ್ರಿಪುರಾಕ್ಕೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು. ಮೋದಿ ಸರ್ಕಾರದ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ತ್ರಿಪುರಾದಲ್ಲಿದ್ದ 35 ವರ್ಷಗಳ ಸುದೀರ್ಘ ಸಂಘರ್ಷವನ್ನು ಎನ್ಎಲ್ಎಫ್‌ ಟಿ ಮತ್ತು ಎಟಿಟಿಎಫ್ ಸಂಘಟನೆಗಳು ಕೊನೆಗೊಳಿಸುವ ಮೂಲಕ ತ್ರಿಪುರಾ ಅಭಿವೃದ್ಧಿಯ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು. 

ಶ್ರೀ ನರೇಂದ್ರ ಮೋದಿಯವರ ದೇಶದ ಪ್ರಧಾನಮಂತ್ರಿಯಾದ ನಂತರ, ಅವರು ಶಾಂತಿ ಮತ್ತು ಸಂವಾದದ ಮೂಲಕ ಸಮರ್ಥ ಮತ್ತು ಅಭಿವೃದ್ಧಿ ಹೊಂದಿದ ಈಶಾನ್ಯದ ದೃಷ್ಟಿಕೋನವನ್ನು ಮುಂದಿಟ್ಟಿದ್ದಾರೆ” ಎಂದು ಶ್ರೀ ಅಮಿತ್ ಶಾ ಹೇಳಿದರು. “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಸ್ತೆ, ರೈಲು ಮತ್ತು ವಿಮಾನ ಸಂಪರ್ಕದ ಮೂಲಕ ನವದೆಹಲಿ ಮತ್ತು ಈಶಾನ್ಯ ರಾಜ್ಯಗಳ ನಡುವಿನ ಅಂತರವನ್ನು ಮಾತ್ರವಲ್ಲದೆ ಅವರ ಹೃದಯದಲ್ಲಿನ ವ್ಯತ್ಯಾಸಗಳನ್ನು ಹೋಗಲಾಡಿಸಿ ಸೇತುಬಂಧನ ಮಾಡಿದ್ದಾರೆ. ‘ಅಷ್ಟಲಕ್ಷ್ಮಿ’ ಮತ್ತು ‘ಪೂರ್ವೋದಯ’ ಪರಿಕಲ್ಪನೆಗಳನ್ನು ಒಟ್ಟುಗೂಡಿಸಿ ತ್ರಿಪುರಾ ಸೇರಿದಂತೆ ಇಡೀ ಈಶಾನ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಸಂಕಲ್ಪ ಮಾಡಿದೆ, ಇದರಲ್ಲಿ ಇಂದಿನ ಒಪ್ಪಂದವು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ” ಎಂದು ಶ್ರೀ ಅಮಿತ್ ಶಾ ಹೇಳಿದರು. 

0I9A0803 (1).JPG

“ಇಂದಿನ ಇತ್ಯರ್ಥ ಒಪ್ಪಂದ (ಮೆಮೊರಾಂಡಮ್ ಆಫ್ ಸೆಟಲ್ಮೆಂಟ್) ಈಶಾನ್ಯ ಪ್ರದೇಶಕ್ಕೆ ಸಂಬಂಧಿಸಿದ 12 ನೇ ಒಪ್ಪಂದ ಮತ್ತು ತ್ರಿಪುರಾಕ್ಕೆ ಸಂಬಂಧಿಸಿದ ಮೂರನೇ ಒಪ್ಪಂದವಾಗಿದೆ. ಈ ಒಪ್ಪಂದಗಳ ಮೂಲಕ ಸುಮಾರು 10 ಸಾವಿರ ಬಂಡುಕೋರರು ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ. ಈ 12 ಒಪ್ಪಂದಗಳು ಸಾವಿರಾರು ಅಮಾಯಕರ ಪ್ರಾಣಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

 

“ಎನ್ಎಲ್ಎಫ್ ಟಿ ಮತ್ತು ಎಟಿಟಿಎಫ್ ನೊಂದಿಗೆ ಇಂದು ಸಹಿ ಹಾಕಲಾದ ಒಪ್ಪಂದದ ಅಡಿಯಲ್ಲಿ, 328ಕ್ಕೂ ಹೆಚ್ಚು ಸಶಸ್ತ್ರ ಕಾರ್ಯಕರ್ತರು ಹಿಂಸಾಚಾರವನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ತ್ರಿಪುರಾವನ್ನು ನಿರ್ಮಿಸುವಲ್ಲಿ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿಯೂ ಕೊಡುಗೆ ನೀಡುತ್ತಾರೆ. ಹಿಂಸೆಯನ್ನು ತ್ಯಜಿಸುವವರು ದೇಶದ ಹೆಮ್ಮೆಯ ಪ್ರಜೆಗಳಾಗಿ ಅಭಿವೃದ್ಧಿ ಹೊಂದಿದ ತ್ರಿಪುರಾ ನಿರ್ಮಾಣಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

“ಈ ಪ್ರದೇಶದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜನರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಕಾರಣವಾದ ಪ್ರಮುಖ ಮೂಲ ಕಾರಣಗಳನ್ನು ತೊಡೆದುಹಾಕಲು ಎಲ್ಲಾ ಒಪ್ಪಂದಗಳ ಅನುಷ್ಠಾನದಲ್ಲಿ ಭಾರತ ಸರ್ಕಾರವು ಎಲ್ಲಾ ಸೂಕ್ಷ್ಮತೆಗಳನ್ನು ಪರಿಗಣಿಸಿ ಪೂರ್ಣ ಹೃದಯದಿಂದ ಪ್ರಯತ್ನಗಳನ್ನು ಮಾಡುತ್ತಿದೆ. ತ್ರಿಪುರಾದ ಬುಡಕಟ್ಟು ಜನ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರವು ರೂಪಾಯಿ 250 ಕೋಟಿಗಳ ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.


“ಮೋದಿ ಸರ್ಕಾರ ಎಲ್ಲಾ ಒಪ್ಪಂದಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದೆ. ಪ್ರತಿ ಒಪ್ಪಂದವನ್ನು ಹೃದಯಪೂರ್ವಕವಾಗಿ, ಮತ್ತು ಆತ್ಮದಿಂದ ಮತ್ತು ಅಕ್ಷರ ಮತ್ತು ಉತ್ಸಾಹದಿಂದ ಜಾರಿಗೆ ತಂದಿರುವುದು ಮೋದಿ ಸರ್ಕಾರದ ಪರಂಪರೆಯಾಗಿದೆ.  ಬ್ರೂ-ರಿಯಾಂಗ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಇಂದು ಸಾವಿರಾರು ಬ್ರೂ-ರಿಯಾಂಗ್ ಸಹೋದರರು ತಮ್ಮ ಮನೆಗಳಲ್ಲಿ ವಾಸಿಸುತ್ತಿದ್ದಾರೆ.  ಅವರ ಮಕ್ಕಳು ಉತ್ತಮ ಶಾಲೆಗಳಲ್ಲಿ ಓದುತ್ತಿದ್ದಾರೆ, ಅವರ ಉದ್ಯೋಗವನ್ನು ನೋಡಿಕೊಳ್ಳಲಾಗುತ್ತಿದೆ ಮತ್ತು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳ ಸಂಪೂರ್ಣ ಲಾಭವನ್ನು ಅವರು ಪಡೆಯುತ್ತಿದ್ದಾರೆ. ಸರ್ಕಾರವು ಈ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸುತ್ತದೆ ಮತ್ತು ಕೇಂದ್ರ ಗೃಹ ಸಚಿವಾಲಯವು ಎಲ್ಲರ ನಿರೀಕ್ಷೆಗಳನ್ನು ಪೂರೈಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಸಶಕ್ತ ತ್ರಿಪುರ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

0I9A0952 (1).JPG

“ಮೋದಿ ಸರ್ಕಾರವು 2015 ರಲ್ಲಿ ತ್ರಿಪುರ ಮತ್ತು ಈಶಾನ್ಯದ ಅನೇಕ ಭಾಗಗಳಿಂದಲೂ ಸಹ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎ.ಎಫ್.ಎಸ್.ಪಿ.ಎ) ತೆಗೆದುಹಾಕಿದೆ.  ಸಶಸ್ತ್ರ ಪಡೆಗಳನ್ನು ನಿಯೋಜಿಸುವ ಬದಲು, ಮೋದಿ ಸರ್ಕಾರವು ಈಶಾನ್ಯ ಸಂಸ್ಕೃತಿ, ಭಾಷೆ, ಗುರುತನ್ನು, ವಿಶೇಷವಾಗಿ ಬುಡಕಟ್ಟು ಗುಂಪುಗಳನ್ನು ಉಳಿಸಿ ಮತ್ತು ಅಭಿವೃದ್ಧಿಪಡಿಸುವ ಮೂಲಕ ಇಡೀ ಈಶಾನ್ಯದ ಅಭಿವೃದ್ಧಿಗೆ ಬದ್ಧವಾಗಿದೆ. ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಇಂದಿನ ಒಪ್ಪಂದದ ಅಡಿಯಲ್ಲಿ, ಎನ್ಎಲ್ಎಫ್‌ಟಿ ಮತ್ತು ಎಟಿಟಿಎಫ್ ಸಂಘಟನೆಗಳು ಹಿಂಸಾಚಾರದ ಹಾದಿಯನ್ನು ತ್ಯಜಿಸಲು, ತಮ್ಮ ಎಲ್ಲಾ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತ್ಯಜಿಸಲು ಮತ್ತು ತಮ್ಮ ಸಶಸ್ತ್ರ ಸಂಘಟನೆಗಳನ್ನು ವಿಸರ್ಜಿಸಲು ಒಪ್ಪಿಕೊಂಡಿವೆ. ಇದಲ್ಲದೆ, ಎನ್ಎಲ್ಎಫ್ ಟಿ ಮತ್ತು ಎಟಿಟಿಎಫ್ ನ ಸಶಸ್ತ್ರ ಪಡೆಗಳು ಕಾನೂನಿನ ಮೂಲಕ ಸ್ಥಾಪಿಸಲಾದ ಶಾಂತಿಯುತ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಒಪ್ಪಿಕೊಂಡಿವೆ.

DSC_2030 (1).JPG

ಈ ಸಂದರ್ಭದಲ್ಲಿ, ತ್ರಿಪುರಾದ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಅವರು ಇಡೀ ಈಶಾನ್ಯದಲ್ಲಿ ಶಾಶ್ವತ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

 

*****



(Release ID: 2052119) Visitor Counter : 17