ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ರಾಜ್ ಗಿರ್ ನಲ್ಲಿ ನಳಂದಾ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಮಂತ್ರಿ


“ನಳಂದ ಭಾರತದ ಶೈಕ್ಷಣಿಕ ಪರಂಪರೆ ಮತ್ತು ಉಜ್ವಲ ಸಾಂಸ್ಕೃತಿಕ ವಿನಿಯಮದ ಸಂಕೇತ”

“ನಳಂದಾ ಕೇವಲ ಹೆಸರಲ್ಲ, ನಳಂದಾ ಒಂದು ಅಸ್ಮಿತೆ, ಒಂದು ಗೌರವ, ಒಂದು ಮೌಲ್ಯ, ಒಂದು ಮಂತ್ರ, ಒಂದು ಹೆಮ್ಮೆ ಮತ್ತು ಒಂದು ಸಾಹಸ”

“ಈ ಪುನಶ್ಚೇತನ ಭಾರತದ ಸುವರ್ಣ ಯುಗವನ್ನು ಆರಂಭಿಸಲಿದೆ”

“ನಳಂದಾ ಭಾರತದ ಪುರಾತನ ಪುನರುಜ್ಜೀವನವನ್ನಷ್ಟೇ ಮಾಡುತ್ತಿಲ್ಲ. ಪ್ರಪಂಚದ ಅನೇಕ ದೇಶಗಳು ಮತ್ತು ಏಷ್ಯಾದ ಪರಂಪರೆಯೊಂದಿಗೆ ಇದು ಸಂಬಂಧ ಹೊಂದಿದೆ”

“ಭಾರತವು ಶತಮಾನಗಳಿಂದ ಮಾದರಿಯಾಗಿ ಸುಸ್ಥಿರತೆಯನ್ನು ಪ್ರದರ್ಶಿಸಿದೆ ಮತ್ತು ಬದುಕಿದೆ. ನಾವು ಪ್ರಗತಿ ಮತ್ತು ಪರಿಸರದೊಂದಿಗೆ ಒಟ್ಟಾಗಿ ಮುನ್ನಡೆಯುತ್ತೇವೆ"

“ಭಾರತ ಜಗತ್ತಿಗೆ ಶಿಕ್ಷಣ ಮತ್ತು ಜ್ಞಾನದ ಕೇಂದ್ರವಾಗಬೇಕು ಎಂಬುದು ತಮ್ಮ ಧ್ಯೇಯ. ಭಾರತ ಮತ್ತೊಮ್ಮೆ ವಿಶ್ವದ ಪ್ರಮುಖ ಜ್ಞಾನ ಕೇಂದ್ರವಾಗಿ ಗುರುತಿಸಲ್ಪಡಬೇಕು ಎಂಬುದು ತಮ್ಮ ಗುರಿಯಾಗಿದೆ”

“ನಳಂದಾ ಜಗತಿಕ ಕಾರಣಗಳಿಗಾಗಿ ಪ್ರಮುಖ ಕೇಂದ್ರವಾಗಬೇಕು ಎಂಬುದು ತಮ್ಮ ನಂಬಿಕೆಯಾಗಿದೆ”

Posted On: 19 JUN 2024 12:51PM by PIB Bengaluru

ಬಿಹಾರದ ರಾಜ್ ಗಿರ್ ನ ನಳಂದಾ ವಿಶ್ವವಿದ್ಯಾಲಯದಲ್ಲಿ ಹೊಸ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ [ಇಎಎಸ್] ದೇಶಗಳೊಂದಿಗೆ ಈ ವಿಶ್ವವಿದ್ಯಾಲಯ ಸಹಯೋಗ ಹೊಂದಿದೆ. ಈ ಉದ್ಘಾಟನಾ ಸಮಾರಂಭದಲ್ಲಿ 17 ಪ್ರಮುಖ ದೇಶಗಳ ಮುಖ್ಯಸ್ಥರು ಒಳಗೊಂಡಂತೆ ಹಲವು ಪ್ರಮುಖ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಿಡ ನೆಟ್ಟು ನೀರೆರದರು.

ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳಲ್ಲಿ ನಳಂದಾಗೆ ಭೇಟಿ ನೀಡಿದ ಅದೃಷ್ಟಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಇದು ಭಾರತದ ಅಭಿವೃದ್ಧಿಯ ಪಯಣದತ್ತ ಸಕಾರಾತ್ಮಕ ಸೂಚನೆಯಾಗಿದೆ ಎಂದರು. “ನಳಂದಾ ಕೇವಲ ಹೆಸರಲ್ಲ. ಇದೊಂದು ಅಸ್ಮಿತೆ. ನಳಂದಾ ನಮ್ಮ ಬೇರು, ಇದು ನಮ್ಮ ಮಂತ್ರ. ಪುಸ್ತಕಗಳು ಬೆಂಕಿಯಲ್ಲಿ ಸುಟ್ಟು ಹೋದರೂ ಜ್ಞಾನ ನಾಶವಾಗದು ಎಂಬ ಸತ್ಯದ ಘೋಷಣೆಯೇ ನಳಂದಾ” ಎಂದು ಪ್ರಧಾನಮಂತ್ರಿಯವರು ಉದ್ಗರಿಸಿದರು. ಈ ಪುನಶ್ಚೇತನ ಭಾರತದ ಸುವರ್ಣ ಯುಗವನ್ನು ಆರಂಭಿಸಲಿದೆ ಎಂದರು.

ಪುರಾತನ ಅವಶೇಷಗಳ ಬಳಿ ಇರುವ ನಳಂದಾದ ಪುನರುಜ್ಜೀವನ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಬಲವಾದ ಮಾನವೀಯ ಮೌಲ್ಯಗಳನ್ನು ಹೊಂದಿರುವ ರಾಷ್ಟ್ರಗಳು ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಮೂಲಕ ಉತ್ತಮ ಜಗತ್ತನ್ನು ರಚಿಸಲು ಸಮರ್ಥವಾಗಿವೆ ಎಂದು ಅದು ಜಗತ್ತಿಗೆ ಸಾರುತ್ತದೆ ಎಂದರು.

ನಳಂದಾ ಜಗತ್ತಿನ ಪರಂಪರೆಯನ್ನು ಹೊತ್ತೊಯ್ಯುತ್ತದೆ, ಇದು ಬಾರತದ ಪುನಶ್ಚೇತನವಷ್ಟೇ ಅಲ್ಲದೇ ಏಷ್ಯಾ ಮತ್ತು ಇತರೆ ಹಲವಾರು ದೇಶಗಳ ಪುನಶ್ಚೇತನದ ಆಯಾಮವನ್ನು ಸಹ ಹೊಂದಿದೆ. ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಹಲವು ದೇಶಗಳ ಉಪಸ್ಥಿತಿಯಿಂದ ಇದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ನಳಂದಾ ಯೋಜನೆಯಲ್ಲಿ ಸ್ನೇಹಪರ ರಾಷ್ಟ್ರಗಳ ಕೊಡುಗೆಯನ್ನು ಶ್ಲಾಘಿಸಿದರು. ನಳಂದಾದಲ್ಲಿ ಪ್ರತಿಬಿಂಬಿತವಾಗಿರುವ ತನ್ನ ವೈಭವವನ್ನು ಮರಳಿ ತರಲು ಬಿಹಾರದ ಜನರ ಸಂಕಲ್ಪವನ್ನು ಅವರು ಶ್ಲಾಘಿಸಿದರು.

ನಳಂದಾ ಒಂದು ಕಾಲದಲ್ಲಿ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೀವಂತ ಕೇಂದ್ರವಾಗಿತ್ತು. ನಳಂದದ ಅರ್ಥ ಜ್ಞಾನ ಮತ್ತು ಶಿಕ್ಷಣದ ನಿರಂತರ ಹರಿವು ಎಂಬುದಾಗಿದೆ. ಇದು ಶಿಕ್ಷಣದ ಕಡೆಗೆ ಭಾರತದ ವಿಧಾನ ಮತ್ತು ಚಿಂತನೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಶಿಕ್ಷಣವು ಎಲ್ಲೆಗಳನ್ನು ಮೀರಿದೆ. ಅದು ಮೌಲ್ಯಗಳನ್ನು ಮತ್ತು ಚಿಂತನೆಯನ್ನು ರೂಪಿಸುತ್ತದೆ.'' ಎಂದು ಹೇಳಿದ ಪ್ರಧಾನಮಂತ್ರಿಯವರು, ಪ್ರಾಚೀನ ನಳಂದಾ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ತಮ್ಮ ಗುರುತು ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೇ ಪ್ರವೇಶ ಪಡೆದಿರುವುದನ್ನು ಒತ್ತಿ ಹೇಳಿದರು. ಅತ್ಯಾಧುನಿಕ ಮಾದರಿಯಲ್ಲಿ ನಳಂದಾ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆಯಾಗಿದ್ದು, ಇದು ಅದೇ ರೀತಿಯ ಪುರಾತನ ಸಂಪ್ರದಾಯವನ್ನು ಬಲಗೊಳಿಸಬೇಕು. ಪ್ರಸ್ತುತ 20 ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಇಲ್ಲಿ ಈಗಾಗಲೇ ಅಧ್ಯಯನ ಮಾಡುತ್ತಿದ್ದಾರೆ ಮತ್ತು “ವಸುದೈವ ಕುಟುಂಬಕಂ”ಗೆ ಇದು ಸ್ಪಷ್ಟವಾದ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಶಿಕ್ಷಣ ಮಾನವ ಕಲ್ಯಾಣಕ್ಕೆ ಸಾಧನ ಎಂಬ ಭಾರತೀಯ ಸಂಪ್ರದಾಯದ ಬಗ್ಗೆ ಬೆಳಕು ಚೆಲ್ಲಿದರು ಪ್ರಧಾನಮಂತ್ರಿಯವರು. ಮುಂಬರುವ ಅಂತರರಾಷ್ಟ್ರೀಯ ಯೋಗ ದಿನದಂದು ಯೋಗದ ಮಹತ್ವ ಕುರಿತು ಪ್ರಸ್ತಾಪಿಸಿದರು. ಹಲವಾದು ದೇಶಗಳು ಯೋಗವನ್ನು ಅಳವಡಿಸಿಕೊಳ್ಳುತ್ತಿವೆ. ಭಾರತ ಯೋಗದ ಮೇಲೆ ಏಕಸ್ವಾಮ್ಯ ಸಾಧಿಸಿಲ್ಲ. ಅದೇ ರೀತಿ ಭಾರತವು ಆಯುರ್ವೇದವನ್ನು ಇಡೀ ವಿಶ್ವದೊಂದಿಗೆ ಹಂಚಿಕೊಂಡಿದೆ ಎಂದು ಅವರು ಹೇಳಿದರು. ಸುಸ್ಥಿರತೆಗೆ ಭಾರತದ ಶ್ರದ್ಧೆಯನ್ನು ಒತ್ತಿಹೇಳಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದಲ್ಲಿ ನಾವು ಪ್ರಗತಿ ಮತ್ತು ಪರಿಸರವನ್ನು ಒಟ್ಟಿಗೆ ಸಾಗಿಸಿದ್ದೇವೆ ಎಂದು ಹೇಳಿದರು. ಇದು ಜೀವನ ಅಭಿಯಾನ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಉಪಕ್ರಮಗಳನ್ನು ಒದಗಿಸಲು ಭಾರತಕ್ಕೆ ಅವಕಾಶ ಮಾಡಿಕೊಟ್ಟಿತು. ನಳಂದಾ ಕ್ಯಾಂಪಸ್ ತನ್ನ ಪ್ರವರ್ತಕ ನವೀಕೃತ ಇಂಧನ, ಶೂನ್ಯ  ಇಂಗಾಲ ಹೊರಸೂಸುವಿಕೆ, ನೀರು ಮತ್ತು ಶೂನ್ಯ ತ್ಯಾಜ್ಯ ನಿರ್ವಹಣೆಯಂತಹ ಮಾದರಿಯೊಂದಿಗೆ ಸುಸ್ಥಿರತೆಯ ಚೈತನ್ಯವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಶಿಕ್ಷಣದ ಅಭಿವೃದ್ಧಿಯು ಆರ್ಥಿಕತೆ ಮತ್ತು ಸಂಸ್ಕೃತಿಯ ಬೇರುಗಳ ಆಳಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇದು ಅಭಿವೃದ್ಧಿ ಹೊಂದಿದ ದೇಶಗಳ ಜಾಗತಿಕ ಅನುಭವದಿಂದ ದೃಢಪಟ್ಟಿದೆ. "2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯ ಮೇಲೆ ಕೆಲಸ ಮಾಡುತ್ತಿರುವ ಭಾರತವು ತನ್ನ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುತ್ತಿದೆ" ಎಂದು ಹೇಳಿದರು. ಭಾರತವು ವಿಶ್ವಕ್ಕೆ ಶಿಕ್ಷಣ ಮತ್ತು ಜ್ಞಾನದ ಕೇಂದ್ರವಾಗುವುದು ತಮ್ಮ ಧ್ಯೇಯವಾಗಿದೆ ಎಂದು ಹೇಳಿದರು. ಭಾರತವು ಮತ್ತೊಮ್ಮೆ ವಿಶ್ವದ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವಾಗಿ ಗುರುತಿಸಲ್ಪಡಬೇಕು ಎಂಬುದು ತಮ್ಮ ಧ್ಯೇಯವಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ಸೇವೆ ಒದಗಿಸುವ ಉಪಕ್ರಮಗಳು, ಚಂದ್ರಯಾನ ಮತ್ತು ಗಗನ ಯಾನ ದಿಂದ ನಿರ್ಮಾಣವಾದ ವಿಜ್ಞಾನದ ಆಸಕ್ತಿ ಮತ್ತು ಕೆಲವು ನೂರು ವರ್ಷಗಳ ಹಿಂದೆ ಭಾರತದಲ್ಲಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸಿವೆ. ದೇಶದಲ್ಲಿ 1.30 ಲಕ್ಷ ನವೋದ್ಯಮಗಳ ಹುಟ್ಟಿಗೆ ಕಾರಣವಾದ ನವೋದ್ಯಮ ಇಂಡಿಯಾದಂತಹ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ದಾಖಲೆ ಸಂಖ್ಯೆಯ ಪೇಟೆಂಟ್‌ಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸುವುದು ಮತ್ತು 1 ಲಕ್ಷ ಕೋಟಿ ಸಂಶೋಧನಾ ನಿಧಿಯನ್ನು ಇದು ಒಳಗೊಂಡಿದೆ ಎಂದರು.

ವಿಶ್ವದ ಅತ್ಯಂತ ಮುಂದುವರಿದ ಸಂಶೋಧನಾ-ಆಧಾರಿತ ಉನ್ನತ ಶಿಕ್ಷಣ ವ್ಯವಸ್ಥೆಯೊಂದಿಗೆ ಅತ್ಯಂತ ಸಮಗ್ರ ಮತ್ತು ಸಂಪೂರ್ಣ ಕೌಶಲ್ಯ ವ್ಯವಸ್ಥೆಯನ್ನು ರಚಿಸಲು ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಜಾಗತಿಕ ಶ್ರೇಯಾಂಕದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳ ಸುಧಾರಿತ ಪ್ರದರ್ಶನಗಳನ್ನು ಅವರು ಉಲ್ಲೇಖಿಸಿದರು. ಕಳೆದ 10 ವರ್ಷಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿನ ಇತ್ತೀಚಿನ ಸಾಧನೆಗಳ ಮೇಲೆ ಬೆಳಕು ಚೆಲ್ಲುತ್ತಾ, ಕ್ಯೂಎಸ್ ಶ್ರೇಯಾಂಕದಲ್ಲಿ ಭಾರತೀಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ 9 ರಿಂದ 46 ಕ್ಕೆ ಮತ್ತು ಟೈಮ್ಸ್ ಉನ್ನತ ಶಿಕ್ಷಣದ ಪ್ರಭಾವದ ಶ್ರೇಯಾಂಕದಲ್ಲಿ 13 ರಿಂದ 100 ಕ್ಕೆ ಏರಿಕೆಯಾಗಿರುವುದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ, ಪ್ರತಿ ವಾರ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ, ಪ್ರತಿದಿನ ಹೊಸ ಐಟಿಐ ಸ್ಥಾಪಿಸಲಾಗಿದೆ, ಪ್ರತಿ ಮೂರನೇ ದಿನಕ್ಕೆ ಅಟಲ್ ಟಿಂಕರಿಂಗ್ ಲ್ಯಾಬ್ ತೆರೆಯಲಾಗಿದೆ. ಪ್ರತಿದಿನ ಎರಡು ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿಯರು ತಿಳಿಸಿದರು. ಭಾರತವು ಇಂದು 23 ಐಐಟಿಗಳಿಗೆ ನೆಲೆಯಾಗಿದೆ, ಐಐಎಂಗಳ ಸಂಖ್ಯೆ 13 ರಿಂದ 21 ಕ್ಕೆ ಏರಿದೆ ಮತ್ತು ಏಮ್ಸ್ ಗಳ ಸಂಖ್ಯೆಯು ಸುಮಾರು ಮೂರು ಪಟ್ಟು ಅಂದರೆ 22 ಕ್ಕೆ ಏರಿದೆ. “10 ವರ್ಷಗಳಲ್ಲಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆಯು ದ್ವಿಗುಣಗೊಂಡಿದೆ. ”, ಅವರು ಹೇಳಿದರು. ಶೈಕ್ಷಣಿಕ ವಲಯದಲ್ಲಿನ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ಹೊಸ ಶೈಕ್ಷಣಿಕ ನೀತಿಯನ್ನು ಅನಾವರಣಗೊಳಿಸಿದರು ಮತ್ತು ಇದು ಭಾರತದ ಯುವಜನರ ಕನಸುಗಳಿಗೆ ಹೊಸ ಆಯಾಮವನ್ನು ನೀಡಿದೆ ಎಂದು ಹೇಳಿದರು. ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳ ಸಹಯೋಗವನ್ನು ಮತ್ತು ಡೀಕಿನ್ ಮತ್ತು ವೊಲೊಂಗೊಂಗ್‌ನಂತಹ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಹೊಸ ಕ್ಯಾಂಪಸ್‌ಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪಿಸಿದರು. “ಈ ಎಲ್ಲಾ ಪ್ರಯತ್ನಗಳಿಂದ, ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇದರಿಂದ ನಮ್ಮ ಮಧ್ಯಮ ವರ್ಗದವರಿಗೂ ಹಣ ಉಳಿತಾಯವಾಗುತ್ತಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಮುಖ ಭಾರತೀಯ ಸಂಸ್ಥೆಗಳು ಜಾಗತಿಕ ಕ್ಯಾಂಪಸ್‌ಗಳನ್ನು ಇತ್ತೀಚೆಗೆ ತೆರೆಯುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ನಳಂದಾ ಬಗ್ಗೆ ಅದೇ ಭರವಸೆಯನ್ನು ವ್ಯಕ್ತಪಡಿಸಿದರು.

“ಭಾರತದ ಯುವಜನಾಂಗದ ಮೇಲೆ ವಿಶ್ವದ ಕಣ್ಣು ನೆಟ್ಟಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತವು ಭಗವಾನ್ ಬುದ್ಧನ ದೇಶವಾಗಿದೆ. ಮತ್ತು ಜಗತ್ತು ಪ್ರಜಾಪ್ರಭುತ್ವದ ತಾಯಿಯೊಂದಿಗೆ ಹೆಗಲಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬಯಸುತ್ತದೆ” ಎಂದರು. ಮುಂದುವರೆದು ಮಾತನಾಡಿದ ಪ್ರಧಾನಮಂತ್ರಿಯವರು “ಭಾರತವು ‘ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ’ ಎಂದು ಹೇಳಿದಾಗ ನಮ್ಮ ಜೊತೆ ಜಗತ್ತು ನಿಂತಿದೆ. ಇದು. ಭಾರತವು ‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ ಎಂದು ಹೇಳಿದಾಗ, ಅದು ಪ್ರಪಂಚದ ಭವಿಷ್ಯದ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಭಾರತವು ಒಂದು ಭೂಮಿ ಒಂದು ಆರೋಗ್ಯ ಎಂದು ಹೇಳಿದಾಗ, ಜಗತ್ತು ಅದರ ಅಭಿಪ್ರಾಯಗಳನ್ನು ಗೌರವಿಸುತ್ತದೆ ಮತ್ತು ಸ್ವೀಕರಿಸುತ್ತದೆ ಎಂದರು. “ನಳಂದಾ ಭೂಮಿ ಈ ಸಾರ್ವತ್ರಿಕ ಭ್ರಾತೃತ್ವದ ಭಾವನೆಗೆ ಹೊಸ ಆಯಾಮವನ್ನು ನೀಡಬಲ್ಲದು. ಆದ್ದರಿಂದ, ನಳಂದದ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನೂ ಹೆಚ್ಚಿದೆ” ಎಂದು ಪ್ರಧಾನಮಂತ್ರಿಯರು ಹೇಳಿದರು.

ನಳಂದಾ ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಭಾರತದ ಭವಿಷ್ಯ ಎಂದು ಕರೆದ ಪ್ರಧಾನಮಂತ್ರಿಯವರು, ಮುಂದಿನ 25 ವರ್ಷಗಳ ಅಮೃತ ಕಾಲದ ಮಹತ್ವವನ್ನು ಒತ್ತಿ ಹೇಳಿದರು. ನಳಂದಾ ಹಾಕಿಕೊಟ್ಟ ಮಾರ್ಗ ಮತ್ತು ನಳಂದದ ಮೌಲ್ಯಗಳನ್ನು ತಮ್ಮೊಂದಿಗೆ ಒಯ್ಯುವಂತೆ ಕರೆ ನೀಡಿದರು. ಕುತೂಹಲದಿಂದ ಬದುಕಿ, ಧೈರ್ಯದಿಂದ ಮುನ್ನಡೆಯಿರಿ, ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಲಾಂಛನಕ್ಕೆ ಅನುಗುಣವಾಗಿ ದಯೆಯಿಂದಿರಿ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.

ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್, ಬಿಹಾರದ ಮುಖ್ಯಮಂತ್ರಿ, ಶ್ರೀ ನಿತೀಶ್ ಕುಮಾರ್, ವಿದೇಶಾಂಗ ವ್ಯವಹಾರಗಳ ಸಚಿವ, ಡಾ ಸುಬ್ರಹ್ಮಣ್ಯಂ ಜೈಶಂಕರ್, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಪಬಿತ್ರಾ ಮಾರ್ಗರಿಟಾ, ಬಿಹಾರದ ಉಪಮುಖ್ಯಮಂತ್ರಿಗಳಾದ ಶ್ರೀ ವಿಜಯ್ ಕುಮಾರ್ ಸಿನ್ಹಾ ಮತ್ತು ಕಾರ್ಯಕ್ರಮದಲ್ಲಿ ನಳಂದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ಸಾಮ್ರಾಟ್ ಚೌಧರಿ, ಪ್ರೊ.ಅರವಿಂದ್ ಪನಗಾರಿಯಾ, ನಳಂದ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅಭಯ್ ಕುಮಾರ್ ಸಿಂಗ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ನಳಂದಾ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಎರಡು ಶೈಕ್ಷಣಿಕ ಬ್ಲಾಕ್‌ಗಳು, 40 ತರಗತಿ ಕೊಠಡಿಗಳು, ಸುಮಾರು 1900 ಒಟ್ಟು ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ತಲಾ 300 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಎರಡು ಸಭಾಂಗಣಗಳನ್ನು ಒಳಗೊಂಡಿದೆ. ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿ ವಸತಿ ನಿಲಯ  ಮತ್ತು ಅಂತರರಾಷ್ಟ್ರೀಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ.  2000 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬಹುದಾದ ಬಯಲುರಂಗಮಂದಿರ, ಬೋಧಕ ಸಿಬ್ಬಂದಿಯ ಕ್ಲಬ್ ಮತ್ತು ಇತರ ಕ್ರೀಡಾ ಸಂಕೀರ್ಣಗಳು ಇಲ್ಲಿವೆ.

ಕ್ಯಾಂಪಸ್ ಒಂದು 'ಹಸಿರು ಕ್ಯಾಂಪಸ್ ಆಗಿದೆ. ಇದು ಸೌರ ಸ್ಥಾವರ, ದೇಶೀಯ ಮತ್ತು ಕುಡಿಯುವ ನೀರಿನ ಸಂಸ್ಕರಣಾ ಘಟಕ, ತ್ಯಾಜ್ಯನೀರಿನ ಮರುಬಳಕೆಗಾಗಿ ನೀರಿನ ಮರುಬಳಕೆ ಘಟಕ, 100 ಎಕರೆ ಜಲಮೂಲಗಳು ಮತ್ತು ಇತರ ಅನೇಕ ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ಸ್ವಯಂ-ಸಮರ್ಥನೀಯವಾದ ಕ್ಯಾಂಪಸ್ ಹೊಂದಿದೆ.

ವಿಶ್ವವಿದ್ಯಾನಿಲಯವು ಇತಿಹಾಸದೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದಾ ವಿಶ್ವವಿದ್ಯಾನಿಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ನಳಂದದ ಅವಶೇಷಗಳನ್ನು 2016 ರಲ್ಲಿ ವಿಶ್ವಸಂಸ್ಥೆ ಪಾರಂಪರಿಕ ತಾಣ ಎಂದು ಘೋಷಿಸಿತು.

 

 

*****



(Release ID: 2026929) Visitor Counter : 31