ಸಂಪುಟ

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕ್ಯಾಬಿನೆಟ್ ಅನುಮೋದನೆ

Posted On: 19 JUN 2024 8:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಹೊಸ ಟರ್ಮಿನಲ್ ಕಟ್ಟಡ, ಏಪ್ರನ್ ವಿಸ್ತರಣೆ, ರನ್ವೇ ವಿಸ್ತರಣೆ, ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ ಮತ್ತು ಸಂಬಂಧಪಟ್ಟ ಕೆಲಸಗಳಿಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಪ್ರಸ್ತಾವನೆಗೆ ಅನುಮೋದನೆ ನೀಡಿದೆ. 

ಅಂದಾಜು ವೆಚ್ಚವು ಪ್ರಸ್ತುತ ಇರುವ  ವಾರ್ಷಿಕ 3.9 ದಶಲಕ್ಷ ಪ್ರಯಾಣಿಕರ (ಎಂಪಿಪಿಎ) ಸಾಮರ್ಥ್ಯದಿಂದ ವಾರ್ಷಿಕ 9.9 ದಶಲಕ್ಷ ಪ್ರಯಾಣಿಕರಿಗೆ (ಎಂಪಿಪಿಎ)  ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸಲು 2869.65 ಕೋಟಿ ರೂಪಾಯಿ ತಗಲುವುದು. 75,000 ಚದರ ಮೀಟರ್ ಪ್ರದೇಶವನ್ನು ಒಳಗೊಂಡಿರುವ ಹೊಸ ಟರ್ಮಿನಲ್ ಕಟ್ಟಡವನ್ನು 6 ಎಂಪಿಪಿಎ ಸಾಮರ್ಥ್ಯಕ್ಕಾಗಿ ಮತ್ತು 5000 ಪೀಕ್ ಅವರ್ ಪ್ರಯಾಣಿಕರನ್ನು (ಪಿಎಚ್ ಪಿ) ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ನಗರದ ವಿಶಾಲವಾದ ಸಾಂಸ್ಕೃತಿಕ ಪರಂಪರೆಯ ನೋಟವನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಪ್ರಸ್ತಾವನೆಯು ವಿಮಾನದ ರನ್ವೇಯನ್ನು 4075 ಮೀ x 45 ಮೀ.ನಷ್ಟು   ವಿಸ್ತರಿಸುವುದು ಮತ್ತು 20 ವಿಮಾನಗಳನ್ನು ನಿಲ್ಲಿಸಲು ಹೊಸ ಅಪ್ರಾನ್ ಅನ್ನು ನಿರ್ಮಿಸುವುದನ್ನು ಒಳಗೊಂಡಿದೆ. ಇಂಧನ ಸದ್ಬಳಕೆ, ತ್ಯಾಜ್ಯ ಮರುಬಳಕೆ, ಇಂಗಾಲದ ಕಡಿತ, ಸೌರ ಶಕ್ತಿಯ ಬಳಕೆ ಮತ್ತು ನೈಸರ್ಗಿಕ ಹಗಲಿನ ಬೆಳಕನ್ನು ಸಂಯೋಜಿಸುವ ಮೂಲಕ ಯೋಜನೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಹಂತಗಳಲ್ಲಿ ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸುವ ಮುಖ್ಯ ಉದ್ದೇಶದೊಂದಿಗೆ ವಾರಣಾಸಿ ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. 

 

*****



(Release ID: 2026795) Visitor Counter : 42