ಪ್ರಧಾನ ಮಂತ್ರಿಯವರ ಕಛೇರಿ

ಜಿ 7 ಶೃಂಗಸಭೆಯ ಕೃತಕ ಬುದ್ಧಿಮತ್ತೆ ಮತ್ತು ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ಭಾಗವಹಿಸಿದರು

Posted On: 14 JUN 2024 10:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತ ಔಟ್ರೀಚ್ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಸಮೂಹವು 50ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಸಾಧಿಸಿರುವುದಕ್ಕೆ ಅವರು ಅಭಿನಂದಿಸಿದರು.

ಮನುಕುಲದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪುನರಾಯ್ಕೆಯಾದ ನಂತರ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ತಮಗೆ ಅತ್ಯಂತ ತೃಪ್ತಿಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ತಂತ್ರಜ್ಞಾನ ಯಶಸ್ವಿಯಾಗಬೇಕಾದರೆ ಅದು ಮಾನವ ಕೇಂದ್ರಿತ ವಿಧಾನವನ್ನು  ಆಧರಿಸಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಸಾರ್ವಜನಿಕ ಸೇವಾ ವಿತರಣೆಗಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಭಾರತದ ಯಶಸ್ಸನ್ನು ಅವರು ಹಂಚಿಕೊಂಡರು.

"ಎಲ್ಲರಿಗೂ ಎಐ" ಎಂಬ ಭಾರತದ ಎಐ ಮಿಷನ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ತಂತ್ರಜ್ಞಾನವು ಎಲ್ಲರ ಪ್ರಗತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರಬೇಕು ಎಂದು ಒತ್ತಿ ಹೇಳಿದರು. ಈ ವಿಶಾಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಎಐಗಾಗಿ ಜಾಗತಿಕ ಪಾಲುದಾರಿಕೆಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಭಾರತವು ಅಂತರರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಇಂಧನ ಪರಿವರ್ತನೆಯ ಹಾದಿಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಅದರ ವಿಧಾನವು ಲಭ್ಯತೆ, ಪ್ರವೇಶ, ಕೈಗೆಟುಕುವಿಕೆ ಮತ್ತು ಸ್ವೀಕಾರಾರ್ಹತೆಯನ್ನು ಆಧರಿಸಿದೆ ಎಂದು ಹೇಳಿದರು. 2070ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಭಾರತದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಬಗ್ಗೆ ಪ್ರಸ್ತಾಪಿಸಿದ ಅವರು, ವಿಶ್ವ ಪರಿಸರ ದಿನದಂದು ತಾವು ಪ್ರಾರಂಭಿಸಿದ ಗಿಡ ನೆಡುವ ಅಭಿಯಾನಕ್ಕೆ ಸೇರಲು ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು - "ಪ್ಲಾಂಟ್ 4 ಮದರ್" ಹೆಸರಿನ   ಈ ಆಂದೋಲನವನ್ನು ವೈಯಕ್ತಿಕ ಸ್ಪರ್ಶ ಮತ್ತು ಜಾಗತಿಕ ಜವಾಬ್ದಾರಿಯೊಂದಿಗೆ ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಅವರು ಕರೆ ನೀಡಿದರು.

ಜಾಗತಿಕ ದಕ್ಷಿಣದ ಅದರಲ್ಲೂ ವಿಶೇಷವಾಗಿ ಆಫ್ರಿಕಾದ ಕಾಳಜಿಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಕರೆ ನೀಡಿದರು. ತನ್ನ ಅಧ್ಯಕ್ಷತೆಯಲ್ಲಿ ಎಯು, ಜಿ 20 ರ ಖಾಯಂ ಸದಸ್ಯರಾಗಿ ಸೇರ್ಪಡೆಗೊಂಡಿರುವುದು ಭಾರತಕ್ಕೆ ಗೌರವದ ವಿಷಯವಾಗಿದೆ ಎಂದೂ  ಅವರು ನೆನಪಿಸಿಕೊಂಡರು.

*****



(Release ID: 2025554) Visitor Counter : 16