ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಶ್ರೀ ಕಿರಣ್ ರಿಜಿಜು ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡರು


Posted On: 11 JUN 2024 6:06PM by PIB Bengaluru

ಶ್ರೀ ಕಿರಣ್ ರಿಜಿಜು ಅವರು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡರು. 09 ಜೂನ್, 2024 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರು ಶ್ರೀ ರಿಜಿಜು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಶ್ರೀ ರಿಜಿಜು ಅವರನ್ನು ಕಾರ್ಯದರ್ಶಿ ಶ್ರೀ ಶ್ರೀನಿವಾಸ ಕಾಟಿಕಿತ್ತಲ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
 

 

ಶ್ರೀ ರಿಜಿಜು ಅರುಣಾಚಲ ಪ್ರದೇಶದ ಅರುಣಾಚಲ ಪ್ರದೇಶ (ಪಶ್ಚಿಮ) ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ. 1971 ರ ನವೆಂಬರ್ 19 ರಂದು ಜನಿಸಿದ ಶ್ರೀ ರಿಜಿಜು ಅವರು ದೆಹಲಿಯಲ್ಲಿ ಬಿಎ, ಎಲ್ ಎಲ್‌ ಬಿ ಶಿಕ್ಷಣ ಪಡೆದಿದ್ದಾರೆ. ಶ್ರೀ ರಿಜಿಜು ಅವರಿಗೆ ಸಂಸತ್ತಿನ ಸದಸ್ಯರಾಗಿ ಇದು ನಾಲ್ಕನೇ ಅವಧಿಯಾಗಿದೆ. ಅವರು ಮೊದಲು 2023 ರಿಂದ ಜೂನ್ 2024 ರವರೆಗೆ ಭಾರತ ಸರ್ಕಾರದಲ್ಲಿ ಭೂ ವಿಜ್ಞಾನ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2014 ರಿಂದ 2019 ರವರೆಗೆ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ, 2019 ರಿಂದ 2021 ರವರೆಗೆ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವರಾಗಿ ಕೆಲಸ ಮಾಡಿದರು. 2019 ರಿಂದ 2021 ರವರೆಗೆ ಕ್ರೀಡೆ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 2021 ರಿಂದ 2023 ರವರೆಗೆ ಕಾನೂನು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀ ರಿಜಿಜು ಬ್ಯಾಡ್ಮಿಂಟನ್, ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್‌ ನಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದಾರೆ. ಶ್ರೀ ರಿಜಿಜು ಅವರು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರು ಕಾರ್ಯತಂತ್ರ ಮತ್ತು ಭದ್ರತಾ ವ್ಯವಹಾರಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಶಾಲಾ ದಿನಗಳಿಂದಲೂ ಸಕ್ರಿಯ ಸಮಾಜ ಸೇವಕರಾಗಿದ್ದ ಶ್ರೀ ರಿಜಿಜು ಅವರು ಸಾಮಾಜಿಕ ಕಾರ್ಯಕರ್ತ ಮತ್ತು ವಿದ್ಯಾರ್ಥಿ ನಾಯಕರಾಗಿ ಹಲವಾರು ಸಾಮಾಜಿಕ ಆಂದೋಲನಗಳನ್ನು ಮುನ್ನಡೆಸಿದ್ದಾರೆ. ಅವರು ಅನೇಕ ದೇಶಗಳಲ್ಲಿ ನಡೆದ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 14ನೇ ಲೋಕಸಭೆಯ ಸಂದರ್ಭದಲ್ಲಿ ಮಾಧ್ಯಮಗಳು ಅವರನ್ನು ಅತ್ಯುತ್ತಮ ಯುವ ಸಂಸದೀಯ ಪಟು ಎಂದು ನಿರ್ಣಯಿಸಿದವು.

ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಸಚಿವರು, ಪ್ರಧಾನಮಂತ್ರಿಯವರ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ದೃಷಿಕೋನದಲ್ಲಿ ‘ವಿಕಸಿತ ಭಾರತ್’ ಗುರಿಯನ್ನು ಸಾಧಿಸಲು ಸಮಗ್ರ ವಿಧಾನದೊಂದಿಗೆ ಕೆಲಸ ಮಾಡುವುದಾಗಿ ಹೇಳಿದರು. ಸಮಾಜದ ಅಭಿವೃದ್ಧಿಗಾಗಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಈ ಅವಕಾಶ ನೀಡಿದ ಪ್ರಧಾನಿಯವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ದೇಶದಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸಚಿವರು ಹೇಳಿದರು.

 

 



(Release ID: 2024779) Visitor Counter : 15