ಪ್ರಧಾನ ಮಂತ್ರಿಯವರ ಕಛೇರಿ

ಬಿಸಿಗಾಳಿ  ಪರಿಸ್ಥಿತಿಯನ್ನು ಎದುರಿಸಲು ಇರುವ ಸನ್ನದ್ಧತೆಯನ್ನು ಪ್ರಧಾನಮಂತ್ರಿಯವರು ಪರಿಶೀಲಿಸಿದರು


ಪ್ರಧಾನಮಂತ್ರಿಯವರು ಸರ್ಕಾರದ ಸರ್ವತೋಮುಖ ವಿಧಾನದ ಬಗ್ಗೆ ಒತ್ತಿ ಹೇಳಿದರು; ಆಸ್ಪತ್ರೆಗಳಲ್ಲಿ ಸಾಕಷ್ಟು ಸಿದ್ಧತೆಯೊಂದಿಗೆ ಜಾಗೃತಿಯನ್ನು ಮೂಡಿಸುವ  ಮಹತ್ವವನ್ನು ಸಹ ಎತ್ತಿ ತೋರಿಸಿದರು 

ಮುಂಬರುವ ಬಿಸಿ ವಾತಾವರಣದ ಮುನ್ಸೂಚನೆ ಮತ್ತು ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು

ಪ್ರಧಾನಮಂತ್ರಿಯವರು ಆರೋಗ್ಯ ಕ್ಷೇತ್ರದ ಸನ್ನದ್ಧತೆಯನ್ನು ಪರಿಶೀಲಿಸಿದರು

ಎಲ್ಲಾ ಮಾಧ್ಯಮಗಳ ಮೂಲಕ ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಅಗತ್ಯ ಐಇಸಿ/ಜಾಗೃತಿ ಸಂಬಂಧಿತ ವಸ್ತುಗಳ ಸಕಾಲಿಕ ಪ್ರಸರಣಕ್ಕೆ ಒತ್ತು ನೀಡಲಾಯಿತು

ಆರೋಗ್ಯ ಸಚಿವಾಲಯ ಮತ್ತು ಎನ್‌ ಡಿ ಎಂಎ ನೀಡಿದ ಸಲಹೆಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ಮತ್ತು ವ್ಯಾಪಕವಾಗಿ ಪ್ರಸಾರ ಮಾಡಲು ಒತ್ತು ನೀಡಲಾಯಿತು

Posted On: 11 APR 2024 9:18PM by PIB Bengaluru

ಮುಂಬರುವ  ಬಿಸಿಗಾಳಿ ಕಾಲದ ಸಿದ್ಧತೆಗಳನ್ನು ಪರಿಶೀಲಿಸಲು ನಡೆದ  ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಹಿಸಿದ್ದರು.

ಮುಂಬರುವ ತಿಂಗಳುಗಳಲ್ಲಿ ಬಿಸಿ ವಾತಾವರಣದ (ಏಪ್ರಿಲ್ ನಿಂದ ಜೂನ್) ಮುನ್ಸೂಚನೆ ಸೇರಿದಂತೆ 2024 ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ, ವಿಶೇಷವಾಗಿ ಮಧ್ಯ ಭಾರತ ಮತ್ತು ಪಶ್ಚಿಮ ಭಾಗದ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಸಾಧ್ಯತೆಯ ಕುರಿತು ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು .
ಅಗತ್ಯ ಔಷಧಗಳು, ಐವಿ ಫ್ಲ್ಯೂಡ್, ಐಸ್ ಪ್ಯಾಕ್ ಗಳು, ಒಆರ್ಎಸ್ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಆರೋಗ್ಯ ವಲಯದಲ್ಲಿನ ಸಿದ್ಧತೆಗಳನ್ನು ಸಹ ಪರಿಶೀಲಿಸಲಾಯಿತು.

ದೂರದರ್ಶನ, ರೇಡಿಯೋ ಮತ್ತು ಸಮೂಹ ಮಾಧ್ಯಮಗಳಂತಹ ಎಲ್ಲಾ ವೇದಿಕೆಗಳ ಮೂಲಕ ವಿಶೇಷವಾಗಿ ಸ್ಥಳೀಯ ಭಾಷೆಗಳಲ್ಲಿ ಅಗತ್ಯ ಐಇಸಿ  / ಜಾಗೃತಿ ಸಾಮಗ್ರಿಗಳ ಸಮಯೋಚಿತ ಪ್ರಸರಣಕ್ಕೆ ಒತ್ತು ನೀಡಲಾಯಿತು. 2024 ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಗಾಳಿಯ ಬೇಸಿಗೆ ನಿರೀಕ್ಷಿಸಲಾಗಿದೆ ಮತ್ತು ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ ಆದ್ದರಿಂದ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಎನ್‌ ಡಿ ಎಂಎ  ಹೊರಡಿಸಿದ ಶಿಫಾರಸುಗಳನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಬೇಕು ಮತ್ತು ವ್ಯಾಪಕವಾಗಿ ಪ್ರಸಾರ ಮಾಡಬೇಕಾಗುತ್ತದೆ ಎಂದು  ಪರಿಗಣಿಸಲಾಯಿತು.

ಸಂಪೂರ್ಣ ಸರ್ಕಾರಿ ವಿಧಾನಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿಯವರು, ಸರ್ಕಾರದ ಎಲ್ಲಾ ವಿಭಾಗಗಳು  ಮತ್ತು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಸಚಿವಾಲಯಗಳು ಈ ಬಗ್ಗೆ ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಆಸ್ಪತ್ರೆಗಳಲ್ಲಿ ಸಾಕಷ್ಟು ಸಿದ್ಧತೆ ಹಾಗೂ ಜಾಗೃತಿ ಮೂಡಿಸುವ ಬಗ್ಗೆಯೂ ಪ್ರಧಾನಮಂತ್ರಿಯವರು ಒತ್ತು ನೀಡಿದರು.  ಕಾಡ್ಗಿಚ್ಚುಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ಮತ್ತು ಅವುಗಳನ್ನು ನಂದಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

*****



(Release ID: 2017729) Visitor Counter : 48