ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮಧ್ಯಪ್ರದೇಶದ ಝಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ


ʻವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗʼದ ಸುಮಾರು 2 ಲಕ್ಷ ಮಹಿಳಾ ಫಲಾನುಭವಿಗಳಿಗೆ ʻಆಧಾರ್ ಅನುದಾನ್ʼನ ಮಾಸಿಕ ಕಂತು ವಿತರಣೆ

ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ಹಕ್ಕುಪತ್ರಗಳ ವಿತರಣೆ

ʻಪ್ರಧಾನ ಮಂತ್ರಿ ಆದರ್ಶ ಗ್ರಾಮʼ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂ. ವರ್ಗಾವಣೆ

ರತ್ಲಾಮ್ ಮತ್ತು ಮೇಘನಗರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

ರಸ್ತೆ, ರೈಲು, ವಿದ್ಯುತ್ ಮತ್ತು ಜಲ ವಲಯಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ನೆರವೇರಿಸಿದರು

Posted On: 11 FEB 2024 7:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಜಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಇಂದಿನ ಈ ಅಭಿವೃದ್ಧಿ ಯೋಜನೆಗಳು ಈ ಪ್ರದೇಶದಲ್ಲಿರುವ ಗಮನಾರ್ಹ ಸಂಖ್ಯೆಯ ಬುಡಕಟ್ಟು ಜನತೆಗೆ ಪ್ರಯೋಜನ ಒದಗಿಸುತ್ತವೆ, ನೀರು ಸರಬರಾಜು ಮತ್ತು ಕುಡಿಯುವ ನೀರು ಪೂರೈಕೆಯನ್ನು ಬಲಪಡಿಸುತ್ತವೆ. ಜೊತೆಗೆ, ಮಧ್ಯಪ್ರದೇಶದಲ್ಲಿ ರಸ್ತೆ, ರೈಲು, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತವೆ. ಪ್ರಧಾನಮಂತ್ರಿಯವರು ʻವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗʼದ ಸುಮಾರು 2 ಲಕ್ಷ ಮಹಿಳಾ ಫಲಾನುಭವಿಗಳಿಗೆ ʻಆಧಾರ್ ಅನುದಾನʼದ ಮಾಸಿಕ ಕಂತನ್ನು ವಿತರಿಸಿದರು, ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ಹಕ್ಕುಪತ್ರಗಳನ್ನು ವಿತರಿಸಿದರು ಹಾಗೂ ʻಪ್ರಧಾನ ಮಂತ್ರಿ ಆದರ್ಶ ಗ್ರಾಮʼ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದರು.

ʻಅಂತ್ಯೋದಯʼದ ದೃಷ್ಟಿಕೋನವು ಪ್ರಧಾನಮಂತ್ರಿಯವರು ಕೈಗೊಂಡ ಉಪಕ್ರಮಗಳಿಗೆ ದಾರಿದೀಪವಾಗಿದೆ. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರವೂ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಪ್ರಮುಖ ವರ್ಗಗಗಳಿದ್ದು, ಇದರಲ್ಲಿ ಬುಡಕಟ್ಟು ಸಮುದಾಯವೂ ಸೇರಿದೆ. ಅಭಿವೃದ್ಧಿಯ ಪ್ರಯೋಜನಗಳು ಇಂತಹ ಬುಡಕಟ್ಟು ಸಮುದಾಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರ ಪ್ರಮುಖವಾಗಿ ಗಮನ ಹರಿಸಿದ ವಿಚಾರಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಈ ಪ್ರದೇಶದ ಗಮನಾರ್ಹ ಸಂಖ್ಯೆಯ ಬುಡಕಟ್ಟು ಜನರಿಗೆ ಪ್ರಯೋಜನವಾಗುವ ಅನೇಕ ಉಪಕ್ರಮಗಳನ್ನು ಲೋಕಾರ್ಪಣೆ ಮಾಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿಯವರು ಸುಮಾರು 22 ಲಕ್ಷ ಮಹಿಳಾ ಫಲಾನುಭವಿಗಳಿಗೆ ʻಆಧಾರ್ ಅನುದಾನʼ ಯೋಜನೆಯಡಿ ಮಾಸಿಕ ಕಂತನ್ನು ವಿತರಿಸಿದರು. ಈ ಯೋಜನೆಯಡಿ, ಮಧ್ಯಪ್ರದೇಶದ ವಿವಿಧ ʻವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗʼದ ಮಹಿಳೆಯರಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 1500 ರೂ. ದೊರೆಯಲಿದೆ.

ಪ್ರಧಾನಮಂತ್ರಿಯವರು ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ʻಅಧಿಕಾರ್ ಅಭಿಲೇಖ್ʼ(ಹಕ್ಕುಗಳ ದಾಖಲೆ) ವಿತರಿಸಿದರು. ಇದು ಜನರಿಗೆ ತಮ್ಮ ಭೂಮಿಯ ಹಕ್ಕಿಗಾಗಿ ದಾಖಲೆ ಪುರಾವೆಗಳನ್ನು ಒದಗಿಸುತ್ತದೆ.

ʻಪ್ರಧಾನ ಮಂತ್ರಿ ಆದರ್ಶ ಗ್ರಾಮʼ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂ. ವರ್ಗಾವಣೆ ಮಾಡಲಾಯಿತು. ಈ ಮೊತ್ತವನ್ನು ಅಂಗನವಾಡಿ ಭವನಗಳು, ನ್ಯಾಯಬೆಲೆ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳು ಮತ್ತು ಆಂತರಿಕ ರಸ್ತೆಗಳು ಸೇರಿದಂತೆ ವಿವಿಧ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಬಳಸಲಾಗುವುದು.

ಪ್ರಧಾನಮಂತ್ರಿಯವರು ಝಾಬುವಾದಲ್ಲಿ 'ಸಿಎಂ ರೈಸ್ ಶಾಲೆ'ಗೆ ಶಂಕುಸ್ಥಾಪನೆ ನೆರವೇರಿಸಿದರು. ವಿದ್ಯಾರ್ಥಿಗಳಿಗೆ ʻಸ್ಮಾರ್ಟ್ ತರಗತಿʼಗಳು, ʻಇ-ಗ್ರಂಥಾಲಯʼ ಮುಂತಾದ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಶಾಲೆಯು ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ರಾಜ್ಯದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳ ಯುವಕರ ಶಿಕ್ಷಣದ ಅಗತ್ಯವನ್ನು ಪೂರೈಸುವ ʻತಾಂತ್ಯ ಮಾಮಾ ಭಿಲ್ ವಿಶ್ವವಿದ್ಯಾಲಯʼಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಮಧ್ಯಪ್ರದೇಶದಲ್ಲಿ ನೀರು ಸರಬರಾಜು ಮತ್ತು ಕುಡಿಯುವ ನೀರು ಪೂರೈಕೆಯನ್ನು ಬಲಪಡಿಸುವ ಅನೇಕ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಿಯವರಿಂದ ಶಂಕುಸ್ಥಾಪನೆ ನೆರವೇರಲಿರುವ ಯೋಜನೆಗಳಲ್ಲಿ ಧಾರ್ ಮತ್ತು ರತ್ಲಾಮ್‌ನ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯಾದ 'ತಲವಾಡ ಯೋಜನೆ'; ಮತ್ತು ʻಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್(ಅಮೃತ್)-2.0ʼ ಅಡಿಯಲ್ಲಿ 14 ನಗರ ನೀರು ಸರಬರಾಜು ಯೋಜನೆಗಳು ಸೇರಿವೆ. ಈ ಯೋಜನೆಯಿಂದ ಮಧ್ಯಪ್ರದೇಶದ ಅನೇಕ ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ನಗರ ಕುಟುಂಬಗಳಿಗೆ ಪ್ರಯೋಜನ ದೊರೆಯಲಿದೆ.

ಝಬುವಾದ 50 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಮನೆಗಳಿಗೆ ನಲ್ಲಿ ನೀರನ್ನು ಒದಗಿಸುವ 'ನಲ್ ಜಲ್ʼ ಯೋಜನೆಯನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಪ್ರಧಾನಮಂತ್ರಿಯವರು ಅನೇಕ ರೈಲು ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ರತ್ಲಾಮ್ ರೈಲ್ವೆ ನಿಲ್ದಾಣ ಮತ್ತು ಮೇಘನಗರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಇದರಲ್ಲಿ ಸೇರಿದೆ. ಈ ನಿಲ್ದಾಣಗಳನ್ನು ʻಅಮೃತ್ ಭಾರತ್ ನಿಲ್ದಾಣʼ ಯೋಜನೆಯಡಿ ಪುನರಾಭಿವೃದ್ಧಿ ಮಾಡಲಾಗುವುದು. ರಾಷ್ಟ್ರಕ್ಕೆ ಸಮರ್ಪಿತವಾದ ಇತರ ರೈಲು ಯೋಜನೆಗಳಲ್ಲಿ ʻಇಂದೋರ್-ದೇವಾಸ್-ಉಜ್ಜಯಿನಿ ಸಿ ಕ್ಯಾಬಿನ್ ರೈಲ್ವೆ ಮಾರ್ಗʼದ ಡಬ್ಲಿಂಗ್‌; ಇಟಾರ್ಸಿಯಲ್ಲಿ ಯಾರ್ಡ್ ಉನ್ನತೀಕರಣದೊಂದಿಗೆ ʻಉತ್ತರ -ದಕ್ಷಿಣ ಗ್ರೇಡ್‌ ಸೆಪರೇಟರ್‌; ಮತ್ತು ಬರ್ಖೇರಾ-ಬುದ್ನಿ-ಇಟಾರ್ಸಿʼ ಸಂಪರ್ಕಿಸುವ ಮೂರನೇ ಮಾರ್ಗ ಯೋಜನೆಗಳು ಸೇರಿವೆ. ಈ ಯೋಜನೆಗಳು ರೈಲು ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಪ್ರಯಾಣಿಕರ ಹಾಗೂ ಸರಕು-ಸಾಗಣೆ ರೈಲುಗಳಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯವಾಗಲಿವೆ.

ಮಧ್ಯಪ್ರದೇಶದಲ್ಲಿ 3275 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ 47ರ ಕಿ.ಮೀ 0.00 ರಿಂದ ಕಿ.ಮೀ 30.00 (ಹರ್ದಾ-ತೆಮಗಾಂವ್) ವರೆಗೆ ʻಹರ್ದಾ-ಬೆತುಲ್ʼ(ಪ್ಯಾಕೇಜ್-1) ಚತುಷ್ಪಥ;  ರಾಷ್ಟ್ರೀಯ ಹೆದ್ದಾರಿ ʻ752 ಡಿʼಯ ಉಜ್ಜಯಿನಿ ದೇವಾಸ್ ವಿಭಾಗ; ರಾಷ್ಟ್ರೀಯ ಹೆದ್ದಾರಿ-47ರ ಇಂದೋರ್-ಗುಜರಾತ್ ಮಧ್ಯಪ್ರದೇಶ ಗಡಿ ವಿಭಾಗದ ಚತುಷ್ಪಥ(16 ಕಿ.ಮೀ); ರಾಷ್ಟ್ರೀಯ ಹೆದ್ದಾರಿ-47ರ ಚಿಚೋಲಿ-ಬೈತಲ್‌ (ಪ್ಯಾಕೇಜ್ -3); ಹರ್ದಾ-ಬೈತಲ್ ಚತುಷ್ಪಥ; ಹಾಗೂ ರಾಷ್ಟ್ರೀಯ ಹೆದ್ದಾರಿ ʻ552ಜಿʼಯ ʻಉಜ್ಜಯಿನಿ-ಝಾಲಾವರ್ʼವಿಭಾಗ ಸೇರಿವೆ. ಈ ಯೋಜನೆಗಳು ರಸ್ತೆ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತವೆ.

ಇದಲ್ಲದೆ, ತ್ಯಾಜ್ಯ ತ್ಯಾಜ್ಯ ವಿಲೇವಾರಿ ಘಟಕ ಮತ್ತು ವಿದ್ಯುತ್ ಉಪಕೇಂದ್ರದಂತಹ ಇತರ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಿದರು.

ಪ್ರಧಾನಮಂತ್ರಿಯವರೊಂದಿಗೆ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಸಿ. ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಇತರರು ಉಪಸ್ಥಿತರಿದ್ದರು.

***

 

 



(Release ID: 2005195) Visitor Counter : 45