ಪ್ರಧಾನ ಮಂತ್ರಿಯವರ ಕಛೇರಿ

ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು


ಮಹಾನ್ ಆಧ್ಯಾತ್ಮಿಕ ಗುರುವನ್ನು ಗೌರವಿಸಲು ಅವರ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಲಾಯಿತು

“ಚೈತನ್ಯ ಮಹಾಪ್ರಭುಗಳು ಕೃಷ್ಣನ ಪ್ರೀತಿಗೆ ಸ್ಪರ್ಶಮಣಿ. ಅವರು ಆಧ್ಯಾತ್ಮಿಕತೆ ಮತ್ತು ಧ್ಯಾನವು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದರು”

“ಭಕ್ತಿಯು ನಮ್ಮ ಋಷಿಮುನಿಗಳು ನೀಡಿದ ಉದಾತ್ತ ದರ್ಶನವಾಗಿದೆ. ಇದು ಹತಾಶೆಯಲ್ಲ, ಭರವಸೆ ಮತ್ತು ಆತ್ಮ ವಿಶ್ವಾಸ. ಭಕ್ತಿ ಎಂದರೆ ಭಯವಲ್ಲ, ಉತ್ಸಾಹ”

"ನಮ್ಮ ಭಕ್ತಿ ಮಾರ್ಗಿ ಸಂತರು ಸ್ವಾತಂತ್ರ್ಯ ಚಳವಳಿಯಲ್ಲಿ ಮಾತ್ರವಲ್ಲದೆ ಪ್ರತಿ ಸವಾಲಿನ ಹಂತದಲ್ಲೂ ರಾಷ್ಟ್ರವನ್ನು ಮುನ್ನಡೆಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸಿದ್ದಾರೆ"

ನಾವು ರಾಷ್ಟ್ರವನ್ನು ‘ದೇವರುʼಎಂದು ಪರಿಗಣಿಸುತ್ತೇವೆ ಮತ್ತು ‘ದೇವ್ ಸೇ ದೇಶ್’ ದೃಷ್ಟಿಕೋನದಲ್ಲಿ ಸಾಗುತ್ತೇವೆ”

ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಮಂತ್ರದಲ್ಲಿ ವಿಭಜನೆಗೆ ಅವಕಾಶವಿಲ್ಲ

"ಏಕ್ ಭಾರತ್ ಶ್ರೇಷ್ಠ ಭಾರತ್" ಭಾರತದ ಆಧ್ಯಾತ್ಮಿಕ ನಂಬಿಕೆಯಾಗಿದೆ

"ಬಂಗಾಳವು ಆಧ್ಯಾತ್ಮಿಕತೆ ಮತ್ತು ಬೌದ್ಧಿಕತೆಯಿಂದ ನಿರಂತರ ಶಕ್ತಿಯ ಮೂಲವಾಗಿದೆ"

Posted On: 08 FEB 2024 3:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಶ್ರೀಲ ಪ್ರಭುಪಾದ ಜೀ ಅವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಆಚಾರ್ಯ ಶ್ರೀಲ ಪ್ರಭುಪಾದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು ಮತ್ತು ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಗೌಡಿಯ ಮಿಷನ್‌ ಸಂಸ್ಥಾಪಕರಾದ ಆಚಾರ್ಯ ಶ್ರೀಲ ಪ್ರಭುಪಾದರು ವೈಷ್ಣವ ಪಂಥದ ಮೂಲಭೂತ ತತ್ವಗಳನ್ನು ಸಂರಕ್ಷಿಸುವಲ್ಲಿ ಮತ್ತು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮಂಟಪದ ವೈಭವವು ಹಲವಾರು ಮಹಾನ್ ಸಂತರ ಉಪಸ್ಥಿತಿಯಿಂದ ಹಲವು ಪಟ್ಟು ಬೆಳೆದಿದೆ ಎಂದು ಹೇಳಿದರು ಮತ್ತು ಕಟ್ಟಡದ ಪರಿಕಲ್ಪನೆಯು ಭಗವಾನ್ ಬಸವೇಶ್ವರರ ‘ಅನುಭವ ಮಂಟಪ’ವನ್ನು ಆಧರಿಸಿದೆ ಎಂದು ತಿಳಿಸಿದರು. ಪ್ರಾಚೀನ ಭಾರತದಲ್ಲಿ ಇದು ಆಧ್ಯಾತ್ಮಿಕ ಚರ್ಚೆಗಳ ಕೇಂದ್ರವಾಗಿತ್ತು ಎಂದು ಹೇಳಿದರು. "ಅನುಭವ ಮಂಟಪ" ನಂಬಿಕೆ ಮತ್ತು ಸಮಾಜ ಕಲ್ಯಾಣದ ಸಂಕಲ್ಪ ಶಕ್ತಿಯ ಕೇಂದ್ರವಾಗಿತ್ತು" ಎಂದು ಅವರು ಹೇಳಿದರು. "ಶ್ರೀಲ ಪ್ರಭುಪಾದ ಜೀ ಅವರ 150 ನೇ ಜನ್ಮ ವಾರ್ಷಿಕೋತ್ಸವದಂದು, ಇಂದು ಭಾರತ ಮಂಟಪದ ಒಳಗೆ ಅಂತಹುದೇ ಶಕ್ತಿಯನ್ನು ವೀಕ್ಷಿಸಬಹುದು" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ್ ಮಂಟಪವನ್ನು ಭಾರತದ ಆಧುನಿಕ ಸಾಮರ್ಥ್ಯಗಳು ಮತ್ತು ಪ್ರಾಚೀನ ಬೇರುಗಳ ಕೇಂದ್ರವನ್ನಾಗಿ ಮಾಡಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಇಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ20 ಶೃಂಗಸಭೆಯನ್ನು ನೆನಪಿಸಿಕೊಂಡರು. ಇದು ನವ ಭಾರತದ ಸಾಧ್ಯತೆಗಳ ಒಂದು ನೋಟವನ್ನು ತೋರಿಸಿದೆ ಎಂದರು. "ಇಂದು, ಈ ಸ್ಥಳವು ವಿಶ್ವ ವೈಷ್ಣವ ಸಮಾವೇಶವನ್ನು ಆಯೋಜಿಸುತ್ತಿದೆ" ಎಂದು ಅವರು ಹೇಳಿದರು, ಇದು ನವ ಭಾರತದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ, ಆಧುನಿಕತೆಯನ್ನು ಸ್ವಾಗತಿಸುವ ಮತ್ತು ಅಸ್ಮಿತೆಯು ಹೆಮ್ಮೆಯ ವಿಷಯವಾಗಿರುವ ಅಭಿವೃದ್ಧಿ ಮತ್ತು ಪರಂಪರೆಯ ಸಮ್ಮಿಲನವಾಗಿದೆ ಎಂದು ಅವರು ಹೇಳಿದರು. ಈ ಭವ್ಯ ಸಮಾರಂಭದ ಭಾಗವಾಗಿದ್ದಕ್ಕಾಗಿ ಪ್ರಧಾನಮಂತ್ರಿಯವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಶ್ರೀಕೃಷ್ಣನ ಮುಂದೆ ನಮಸ್ಕರಿಸಿದರು. ಪ್ರಧಾನಿಯವರು ಶ್ರೀಲ ಪ್ರಭುಪಾದ ಜೀ ಅವರಿಗೆ ಗೌರವ ಸಲ್ಲಿಸಿದರು ಮತ್ತು ಅವರ ಗೌರವಾರ್ಥವಾಗಿ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಅಯೋಧ್ಯಾ ಧಾಮದ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಯಾಗಿರುವ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರ 150 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಜನರ ಮುಖದಲ್ಲಿನ ಸಂತಸವನ್ನು ಗಮನಿಸಿದ ಪ್ರಧಾನಿಯವರು, ಈ ಬೃಹತ್ ಯಜ್ಞವನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂತರ ಆಶೀರ್ವಾದಕ್ಕೆ ಸಲ್ಲಬೇಕು ಎಂದರು.

ಭಕ್ತಿಯ ಆನಂದವನ್ನು ಅನುಭವಿಸುವ ಸನ್ನಿವೇಶವನ್ನು ಸೃಷ್ಟಿಸಿದ ಚೈತನ್ಯ ಮಹಾಪ್ರಭುಗಳ ಕೊಡುಗೆಗೆ ಪ್ರಧಾನಮಂತ್ರಿಯವರು ಗೌರವ ಸಲ್ಲಿಸಿದರು. “ಚೈತನ್ಯ ಮಹಾಪ್ರಭುಗಳು ಕೃಷ್ಣನ ಪ್ರೀತಿಗೆ ಸ್ಪರ್ಶಮಣಿ. ಅವರು ಆಧ್ಯಾತ್ಮಿಕತೆ ಮತ್ತು ಧ್ಯಾನವು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದರು” ಎಂದು ಪ್ರಧಾನಮಂತ್ರಿ ಹೇಳಿದರು. ಚೈತನ್ಯ ಮಹಾಪ್ರಭುಗಳು ಸಂತೋಷದ ಮೂಲಕ ದೇವರನ್ನು ತಲುಪುವ ಮಾರ್ಗವನ್ನು ತೋರಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. ತಮ್ಮ ಜೀವನದ ಒಂದು ಹಂತದಲ್ಲಿ ಭಕ್ತಿಯನ್ನು ಪೂರ್ಣವಾಗಿ ಜೀವಿಸಿದರೂ ಶೂನ್ಯ, ಅಂತರ ಇತ್ತು ಎಂದು ಪ್ರಧಾನಿ ತಮ್ಮ ವೈಯಕ್ತಿಕ ಅನುಭವವನ್ನು ನೆನಪಿಸಿಕೊಂಡರು. ಭಜನೆ ಕೀರ್ತನೆಯ ಆನಂದವೇ ಕ್ಷಣದಲ್ಲಿ ಸಂಪೂರ್ಣ ತಲ್ಲೀನವಾಗುವಂತೆ ಮಾಡಿದೆ ಎಂದರು. "ನಾನು ವೈಯಕ್ತಿಕವಾಗಿ ಚೈತ್ಯಪ್ರಭುವಿನ ಪರಂಪರೆಯ ಶಕ್ತಿಯನ್ನು ಅನುಭವಿಸಿದ್ದೇನೆ" ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ಕೂಡ, ಕೀರ್ತನೆ ನಡೆಯುವಾಗ ‘ನಾನು ಭಕ್ತನಾಗಿ ಚಪ್ಪಾಳೆ ತಟ್ಟುತ್ತಿದ್ದೆ, ಪ್ರಧಾನಿಯಾಗಿ ಅಲ್ಲ’ಎಂದರು. "ಚೈತನ್ಯ ಮಹಾಪ್ರಭುಗಳು ಕೃಷ್ಣ ಲೀಲೆಯ ಸಾಹಿತ್ಯವನ್ನು ಮತ್ತು ಜೀವನವನ್ನು ಅರ್ಥಮಾಡಿಕೊಳ್ಳಲು ಅವುಗಳ ಪ್ರಾಮುಖ್ಯತೆಯನ್ನು ತೋರಿಸಿದ್ದಾರೆ", ಎಂದು ಪ್ರಧಾನಮಂತ್ರಿ ಹೇಳಿದರು.

"ಚೈತನ್ಯ ಮಹಾಪ್ರಭುಗಳಂತಹ ವ್ಯಕ್ತಿಗಳು ತಮ್ಮ ಕೆಲಸವನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರ ಮಾಡುತ್ತಾರೆ" ಎಂದು ಅವರು ಹೇಳಿದರು. ಶ್ರೀಲ ಪ್ರಭುಪಾದ ಜೀ ಅವರು ಈ ನಂಬಿಕೆಯ ಸಾಕಾರ ಎಂದು ಅವರು ಒತ್ತಿ ಹೇಳಿದರು. ಶ್ರೀಲ ಪ್ರಭುಪಾದ ಜೀ ಅವರ ಜೀವನವು ನಮಗೆ ಧ್ಯಾನದಿಂದ ಏನು ಬೇಕಾದರೂ ಸಾಧಿಸುವುದು ಹೇಗೆ ಮತ್ತು ಪ್ರತಿಯೊಬ್ಬರ ಯೋಗಕ್ಷೇಮದ ಹಾದಿಯನ್ನು ಉದ್ದೇಶದಿಂದ ಬೆಳಗಿಸುವುದು ಹೇಗೆ ಎಂಬುದನ್ನು ಕಲಿಸಿತು ಎಂದು ಅವರು ಹೇಳಿದರು. ಶ್ರೀಲ ಪ್ರಭುಪಾದ ಜೀ ಅವರು 10 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದಾಗ ಸಂಸ್ಕೃತ, ವ್ಯಾಕರಣ ಮತ್ತು ವೇದಗಳಲ್ಲಿ ಜ್ಞಾನವನ್ನು ಪಡೆದು ಗೀತಾವನ್ನು ಹೃದಯದಿಂದ ಕಂಠಪಾಠ ಮಾಡಿದ್ದರು ಎಂದು ಪ್ರಧಾನಿ ತಿಳಿಸಿದರು. ಶ್ರೀಲ ಪ್ರಭುಪಾದ ಜಿ ಅವರು ಖಗೋಳ ಗಣಿತದಲ್ಲಿ ಸೂರ್ಯ ಸಿದ್ಧಾಂತ ಗ್ರಂಥವನ್ನು ವಿವರಿಸಿದ್ದಾರೆ ಮತ್ತು ಸಿದ್ಧಾಂತ ಸರಸ್ವತಿ ಪದವಿಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಅವರು 24 ನೇ ವಯಸ್ಸಿನಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸಹ ತೆರೆದರು. ಶ್ರೀಲ ಪ್ರಭುಪಾದ ಜೀ ಅವರು 100 ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಲೇಖನಗಳನ್ನು ರಚಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಒಂದು ರೀತಿಯಲ್ಲಿ, ಶ್ರೀಲ ಪ್ರಭುಪಾದ ಜಿ ಅವರು ಜೀವನದೊಂದಿಗೆ ಜ್ಞಾನ ಮಾರ್ಗ ಮತ್ತು ಭಕ್ತಿ ಮಾರ್ಗ (ಜ್ಞಾನ ಮತ್ತು ಸಮರ್ಪಣೆಯ ಮಾರ್ಗ) ನಡುವೆ ಸಮತೋಲನವನ್ನು ಸೃಷ್ಟಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು. ಶ್ರೀಲ ಪ್ರಭುಪಾದರು ಗಾಂಧೀಜಿ ಪ್ರತಿಪಾದಿಸುತ್ತಿದ್ದ ಅಹಿಂಸೆ ಮತ್ತು ಪ್ರೀತಿಯ ಮಾನವ ಸಂಕಲ್ಪದ ವೈಷ್ಣವ ಭಾವವನ್ನು ಪ್ರಚುರಪಡಿಸುವ ಕೆಲಸ ಮಾಡಿದರು ಎಂದು ಅವರು ಹೇಳಿದರು.

ವೈಷ್ಣವ ಭಾವದೊಂದಿಗೆ ಗುಜರಾತ್ ನ ಸಂಪರ್ಕವನ್ನು ಪ್ರಧಾನಿ ಒತ್ತಿ ಹೇಳಿದರು. ಗುಜರಾತ್‌ ನಲ್ಲಿ ಶ್ರೀಕೃಷ್ಣನ ಲೀಲೆಗಳನ್ನು ಮತ್ತು ಗುಜರಾತ್‌ ನಲ್ಲಿ ಮೀರಾ ಬಾಯಿ ದೇವರಲ್ಲಿ ಲೀನವಾದ ಬಗ್ಗೆ ಅವರು ಪ್ರಸ್ತಾಪಿಸಿದರು. ಇದು ಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ಸಂಪ್ರದಾಯವನ್ನು ನನ್ನ ಜೀವನದ ಸಹಜ ಭಾಗವನ್ನಾಗಿ ಮಾಡಿತು ಎಂದು ಪ್ರಧಾನಿ ಹೇಳಿದರು.

2016 ರಲ್ಲಿ ಗೌಡಿಯಾ ಮಿಷನ್‌ ಶತಮಾನೋತ್ಸವದ ಸಂದರ್ಭದಲ್ಲಿ ಭಾರತದ ಆಧ್ಯಾತ್ಮಿಕ ಪ್ರಜ್ಞೆಯ ಕುರಿತು ವ್ಯಕ್ತಪಡಿಸಿದ ತಮ್ಮ ಅಭಿಪ್ರಾಯಗಳನ್ನು ಪ್ರಧಾನಿ ನೆನಪಿಸಿಕೊಂಡರು. ಬೇರುಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿಯವರು, ಬೇರುಗಳಿಂದ ದೂರವಿರುವುದರ ದೊಡ್ಡ ದ್ಯೋತಕವೆಂದರೆ ಅವರ ಸಾಮರ್ಥ್ಯ ಮತ್ತು ಶಕ್ತಿಯನ್ನು ಮರೆತುಬಿಡುವುದಾಗಿದೆ ಎಂದು ಹೇಳಿದರು. ಅನೇಕ ಜನರು ಭಕ್ತಿ, ವೈಚಾರಿಕತೆ ಮತ್ತು ಆಧುನಿಕತೆಯನ್ನು ವಿರೋಧಾತ್ಮಕವೆಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದರು. “ಭಕ್ತಿಯು ನಮ್ಮ ಋಷಿಮುನಿಗಳು ನೀಡಿದ ಒಂದು ದೊಡ್ಡ ದರ್ಶನವಾಗಿದೆ. ಇದು ಹತಾಶೆಯಲ್ಲ, ಭರವಸೆ ಮತ್ತು ಆತ್ಮ ವಿಶ್ವಾಸ. ಭಕ್ತಿಯು ಭಯವಲ್ಲ, ಅದು ಉತ್ಸಾಹ” ಭಕ್ತಿಯು ಹತಾಶೆಯಲ್ಲ, ಅದು ಭರವಸೆ ಮತ್ತು ಆತ್ಮವಿಶ್ವಾಸ. ಭಕ್ತಿಯು ಸೋಲಲ್ಲ, ಪ್ರಭಾವ ಬೀರುವ ಸಂಕಲ್ಪವಾಗಿದೆ ಎಂದರು. ಭಕ್ತಿಯು ತನ್ನನ್ನು ತಾನು ಗೆದ್ದು, ಮಾನವೀಯತೆಗಾಗಿ ದುಡಿಯುವುದನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು. ಈ ಮನೋಭಾವದಿಂದಾಗಿ ಭಾರತ ಎಂದಿಗೂ ತನ್ನ ಗಡಿ ವಿಸ್ತರಣೆಗಾಗಿ ಇತರರ ಮೇಲೆ ದಾಳಿ ನಡೆಸಿಲ್ಲ ಎಂದರು. ಪ್ರಧಾನಿಯವರು ಭಕ್ತಿಯ ವೈಭವವನ್ನು ಜನತೆಗೆ ಮರು ಪರಿಚಯಿಸಿದ ಸಂತರಿಗೆ ನಮನ ಸಲ್ಲಿಸಿದರು. "ಇಂದು, ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ದೇಶವು 'ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ'ಯ ಪ್ರತಿಜ್ಞೆಯನ್ನು ಮಾಡುವ ಮೂಲಕ ಸಂತರ ಸಂಕಲ್ಪವನ್ನು ಮುನ್ನಡೆಸುತ್ತಿದೆ" ಎಂದು ಪ್ರಧಾನಿ ಹೇಳಿದರು.

ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಗೆ ಆಧ್ಯಾತ್ಮಿಕ ನಾಯಕರ ಮಹತ್ವದ ಕೊಡುಗೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಅದರ ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ”ನಮ್ಮ ಭಕ್ತಿ ಮಾರ್ಗಿ ಸಂತರು ಸ್ವಾತಂತ್ರ್ಯ ಚಳವಳಿಯಲ್ಲಿ ಮಾತ್ರವಲ್ಲದೆ ಪ್ರತಿ ಸವಾಲಿನ ಹಂತದಲ್ಲೂ ರಾಷ್ಟ್ರಕ್ಕೆ ಮಾರ್ಗದರ್ಶನ ಮಾಡುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸಿದ್ದಾರೆ. ಭಾರತದ ಪ್ರಕ್ಷುಬ್ಧ ಇತಿಹಾಸದುದ್ದಕ್ಕೂ, ಸಂತರು ಮತ್ತು ಆಧ್ಯಾತ್ಮಿಕ ನಾಯಕರು ರಾಷ್ಟ್ರಕ್ಕೆ ವಿವಿಧ ರೀತಿಯಲ್ಲಿ ಮಾರ್ಗದರ್ಶನ ನೀಡಲು ಹೊರಹೊಮ್ಮಿದ್ದಾರೆ" ಎಂದು ಅವರು ಹೇಳಿದರು. ಕಷ್ಟದ ಮಧ್ಯಯುಗೀನ ಕಾಲದಲ್ಲಿ ಸಂತರ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ನಿಜವಾದ ಸಮರ್ಪಣೆಯು ತನ್ನನ್ನು ತಾನು ಅಂತಿಮ ಶಕ್ತಿಗೆ ಒಪ್ಪಿಸುವುದರಲ್ಲಿದೆ, ಶತಮಾನಗಳ ಪ್ರತಿಕೂಲತೆಯ ನಡುವೆ, ಅವರು ತ್ಯಾಗ ಮತ್ತು ಪರಿಶ್ರಮದ ಸದ್ಗುಣಗಳನ್ನು ಎತ್ತಿಹಿಡಿದರು, ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಿದರು. "ಸತ್ಯದ ಅನ್ವೇಷಣೆಯಲ್ಲಿ ಎಲ್ಲವನ್ನೂ ತ್ಯಾಗ ಮಾಡಿದಾಗ, ಅಸತ್ಯ ಅನಿವಾರ್ಯವಾಗಿ ನಾಶವಾಗುತ್ತದೆ ಮತ್ತು ಸತ್ಯವು ಮೇಲುಗೈ ಸಾಧಿಸುತ್ತದೆ ಎಂಬ ನಂಬಿಕೆಯನ್ನು ಅವರ ಬೋಧನೆಗಳು ನಮ್ಮಲ್ಲಿ ಮರುಸ್ಥಾಪಿಸಿವೆ. ಆದ್ದರಿಂದ, ಸತ್ಯದ ಗೆಲುವು ಅನಿವಾರ್ಯ - ನಾವು ಹೇಳುವಂತೆ, 'ಸತ್ಯಮೇವ ಜಯತೆ'," ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಶ್ರೀಲ ಪ್ರಭುಪಾದರಂತಹ ಆಧ್ಯಾತ್ಮಿಕ ಶ್ರೇಷ್ಠರು ಜನಸಾಮಾನ್ಯರಿಗೆ ಅನಂತ ಶಕ್ತಿಯನ್ನು ತುಂಬಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದರು ಎಂದು ಪ್ರಧಾನಿ ಮೋದಿ ಸ್ಮರಿಸಿದರು. ನೇತಾಜಿ ಸುಭಾಷ್ ಮತ್ತು ಮಹಾಮಾನ ಮಾಳವೀಯರಂತಹ ವ್ಯಕ್ತಿಗಳು ಶ್ರೀಲ ಪ್ರಭುಪಾದರ ಮಾರ್ಗದರ್ಶನವನ್ನು ಕೋರಿದರು ಎಂದು ಪ್ರಧಾನಿ ಹೇಳಿದರು.

"ತ್ಯಾಗದ ಮೂಲಕ ಸಹಿಸಿಕೊಳ್ಳುವ ಮತ್ತು ಅಮರವಾಗಿ ಉಳಿಯುವ ವಿಶ್ವಾಸವು ಭಕ್ತಿ ಯೋಗದ ಅಭ್ಯಾಸದಿಂದ ಲಭಿಸಿದೆ" ಎಂದು ಪ್ರಧಾನಮಂತ್ರಿ ಹೇಳಿದರು. “ಇಂದು, ಅದೇ ವಿಶ್ವಾಸ ಮತ್ತು ಭಕ್ತಿಯೊಂದಿಗೆ, ಕೋಟ್ಯಂತರ ಭಾರತೀಯರು ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡಿದ್ದಾರೆ, ನಮ್ಮ ರಾಷ್ಟ್ರದ ಸಮೃದ್ಧಿಯ ಯುಗವನ್ನು ಪ್ರಾರಂಭಿಸಿದ್ದಾರೆ. ನಾವು ರಾಷ್ಟ್ರವನ್ನು ‘ದೇವರು’ ಎಂದು ಪರಿಗಣಿಸುತ್ತೇವೆ ಮತ್ತು ‘ದೇವ್ ಸೇ ದೇಶ್’ದೃಷ್ಟಿಕೋನದೊಂದಿಗೆ ಸಾಗುತ್ತೇವೆ” ಎಂದು ಅವರು ಹೇಳಿದರು.

"ನಾವು ನಮ್ಮ ಶಕ್ತಿ ಮತ್ತು ವೈವಿಧ್ಯತೆಯನ್ನು ಬಳಸಿಕೊಂಡಿದ್ದೇವೆ, ದೇಶದ ಪ್ರತಿಯೊಂದು ಮೂಲೆಯನ್ನು ಪ್ರಗತಿಯ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು. "ಶ್ರೀ ಕೃಷ್ಣ - 'ನಾನು ಎಲ್ಲಾ ಜೀವಿಗಳ ಹೃದಯದಲ್ಲಿರುವ ಆತ್ಮ" – ಎಂದು ನಮಗೆ ಕಲಿಸಿರುವುದು, ನಮ್ಮ ರಾಷ್ಟ್ರದ ವೈವಿಧ್ಯತೆಯೊಳಗೆ ಇರುವ ಏಕತೆಯನ್ನು ಒತ್ತಿಹೇಳುತ್ತದೆ. ವಿವಿಧತೆಯಲ್ಲಿನ ಈ ಏಕತೆಯು ಭಾರತೀಯ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ವಿಭಜನೆಗೆ ಅದರೊಳಗೆ ಯಾವುದೇ ಸ್ಥಾನ ಇಲ್ಲ" ಎಂದು ಪ್ರಧಾನಿ ಹೇಳಿದರು. "ಯಾವುದೇ ರಾಷ್ಟ್ರವು ಜಗತ್ತಿಗೆ ಒಂದು ರಾಜಕೀಯ ಸಿದ್ಧಾಂತವನ್ನು ಪ್ರತಿನಿಧಿಸಬಹುದು, ಆದರೆ ಭಾರತಕ್ಕೆ, 'ಏಕ್ ಭಾರತ್ ಶ್ರೇಷ್ಠ ಭಾರತ' ಒಂದು ಆಧ್ಯಾತ್ಮಿಕ ನಂಬಿಕೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಶ್ರೀಲ ಪ್ರಭುಪಾದರ ಜೀವನವು 'ಏಕ ಭಾರತ ಶ್ರೇಷ್ಠ ಭಾರತ'ದ ಉದಾಹರಣೆಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ, ಅವರು ಪುರಿಯಲ್ಲಿ ಜನಿಸಿದರು, ದಕ್ಷಿಣದ ರಾಮಾನುಜಾಚಾರ್ಯರ ಸಂಪ್ರದಾಯದಲ್ಲಿ ದೀಕ್ಷೆಯನ್ನು ಪಡೆದರು ಮತ್ತು ಚೈತನ್ಯ ಮಹಾಪ್ರಭುಗಳ ಪರಂಪರೆಯನ್ನು ಸ್ಥಾಪಿಸಿದರು ಎಂದು ತಿಳಿಸಿದರು. ಅವರ ಆಧ್ಯಾತ್ಮಿಕ ಪ್ರಯಾಣದ ಕೇಂದ್ರವು ಬಂಗಾಳವಾಗಿತ್ತು. ಬಂಗಾಳವು ಆಧ್ಯಾತ್ಮಿಕತೆ ಮತ್ತು ಬೌದ್ಧಿಕತೆಯಿಂದ ನಿರಂತರ ಶಕ್ತಿಯ ಮೂಲವಾಗಿದೆ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರಬಿಂದೋ, ಗುರು ರವೀಂದ್ರನಾಥ ಟ್ಯಾಗೋರ್ ಮತ್ತು ರಾಜಾ ರಾಮಮೋಹನ್ ರಾಯ್ ಅವರಂತಹ ಸಂತರನ್ನು ಬಂಗಾಳವು ದೇಶಕ್ಕೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ವೇಗ ಮತ್ತು ಪ್ರಗತಿಯನ್ನು ಇಂದು ಎಲ್ಲೆಡೆ ಚರ್ಚಿಸಲಾಗುತ್ತಿದೆ ಮತ್ತು ಆಧುನಿಕ ಮೂಲಸೌಕರ್ಯ ಮತ್ತು ಹೈಟೆಕ್ ಸೇವೆಗಳಲ್ಲಿ ನಾವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿದ್ದೇವೆ ಎಂದು ಪ್ರಧಾನಿ ಒತ್ತಿ ಹೇಳಿದರು. "ನಾವು ಅನೇಕ ಕ್ಷೇತ್ರಗಳಲ್ಲಿ ದೊಡ್ಡ ದೇಶಗಳನ್ನು ಮೀರಿಸುತ್ತಿದ್ದೇವೆ", ಆ ದೇಶಗಳು ನಾಯಕತ್ವದ ಪಾತ್ರಗಳಲ್ಲಿ ಭಾರತೀಯರನ್ನು ನೋಡುತ್ತಿದ್ದಾರೆ ಎಂದು ಅವರು ಹೇಳಿದರು. ಯೋಗವು ಪ್ರಪಂಚದ ಪ್ರತಿಯೊಂದು ಮನೆಯನ್ನು ತಲುಪುತ್ತಿದೆ ಮತ್ತು ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆಯ ಮೇಲಿನ ನಂಬಿಕೆಯೂ ಬೆಳೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ದೃಷ್ಟಿಕೋನದಲ್ಲಿ ಆಗಿರುವ ಬದಲಾವಣೆಯ ಶ್ರೇಯ ಭಾರತದ ಯುವ ಶಕ್ತಿಗೆ ಸಲ್ಲಬೇಕು ಎಂದು ಶ್ರೀ ಮೋದಿ ಹೇಳಿದರು. ಯುವಜನರು ಜ್ಞಾನ ಮತ್ತು ಸಂಶೋಧನೆ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುತ್ತಾರೆ ಎಂದು ಒತ್ತಿ ಹೇಳಿದರು. "ನಮ್ಮ ಹೊಸ ಪೀಳಿಗೆಯು ಈಗ ತನ್ನ ಸಂಸ್ಕೃತಿಯನ್ನು ತನ್ನ ಹಣೆಯ ಮೇಲೆ ಹೆಮ್ಮೆಯಿಂದ ಧರಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಯುವಕರು ಆಧ್ಯಾತ್ಮ ಮತ್ತು ಸ್ಟಾರ್ಟ್ ಅಪ್ ಗಳೆರಡರ ಮಹತ್ವವನ್ನು ಅರಿತು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು. ಇದರ ಪರಿಣಾಮವಾಗಿ ಕಾಶಿ ಮತ್ತು ಅಯೋಧ್ಯೆಯಂತಹ ಯಾತ್ರಾಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಕಾಣುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಭಾರತದ ಯುವ ಪೀಳಿಗೆಯ ಜಾಗೃತಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ದೇಶಕ್ಕೆ ಚಂದ್ರಯಾನವನ್ನು ನಿರ್ಮಿಸುವುದು ಮತ್ತು ಚಂದ್ರಶೇಖರ ಮಹಾದೇವ ಧಾಮವನ್ನು ಬೆಳಗಿಸುವುದು ಸಹಜವಾಗಿದೆ ಎಂದು ಹೇಳಿದರು. “ಯುವಕರು ದೇಶವನ್ನು ಮುನ್ನಡೆಸಿದಾಗ, ಅದು ಚಂದ್ರನ ಮೇಲೆ ರೋವರ್ ಅನ್ನು ಇಳಿಸಬಹುದು ಮತ್ತು ಇಳಿದಾಣಕ್ಕೆ ‘ಶಿವಶಕ್ತಿ’ ಎಂದು ಹೆಸರಿಸುವ ಮೂಲಕ ಸಂಪ್ರದಾಯಗಳನ್ನು ಪೋಷಿಸಬಹುದು. ಈಗ ದೇಶದಲ್ಲಿ ವಂದೇ ಭಾರತ್ ರೈಲುಗಳು ಸಹ ಓಡುತ್ತಿವೆ ಮತ್ತು ವೃಂದಾವನ, ಮಥುರಾ ಮತ್ತು ಅಯೋಧ್ಯೆಗಳನ್ನು ಸಹ ಪುನರುಜ್ಜೀವನಗೊಳಿಸಲಾಗುತ್ತಿದೆ”ಎಂದು ಅವರು ಹೇಳಿದರು. ನಮಾಮಿ ಗಂಗೆ ಯೋಜನೆಯಡಿ ಬಂಗಾಳದ ಮಾಯಾಪುರದಲ್ಲಿ ಗಂಗಾ ಘಾಟ್‌ ನಿರ್ಮಾಣ ಪ್ರಾರಂಭವಾಗಿರುವ ಬಗ್ಗೆ ಪ್ರಧಾನಿಯವರು ಸಂತೋಷ ವ್ಯಕ್ತಪಡಿಸಿದರು.

ಅಭಿವೃದ್ಧಿ ಮತ್ತು ಪರಂಪರೆಯ ನಡುವಿನ ಸಾಮರಸ್ಯವು ಮುಂದಿನ 25 ವರ್ಷಗಳ ಅಮೃತ ಕಾಲದವರೆಗೆ ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದರು. "ಸಂತರ ಆಶೀರ್ವಾದದೊಂದಿಗೆ, ನಾವು ವಿಕಸಿತ ಭಾರತವನ್ನು ನಿರ್ಮಿಸುತ್ತೇವೆ ಮತ್ತು ನಮ್ಮ ಆಧ್ಯಾತ್ಮಿಕತೆಯು ಇಡೀ ಮನುಕುಲದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ" ಎಂದು ಶ್ರೀ ಮೋದಿ ತಮ್ಮ ಮಾತು ಮುಕ್ತಾಯಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು ಶ್ರೀಮತಿ ಮೀನಾಕ್ಷಿ ಲೇಖಿ ಉಪಸ್ಥಿತರಿದ್ದರು.

ಹಿನ್ನೆಲೆ

ಗೌಡಿಯ ಮಿಷನ್‌ ಸಂಸ್ಥಾಪಕರಾದ ಆಚಾರ್ಯ ಶ್ರೀಲ ಪ್ರಭುಪಾದರು ವೈಷ್ಣವ ಪಂಥದ ಮೂಲಭೂತ ತತ್ವಗಳನ್ನು ಸಂರಕ್ಷಿಸುವಲ್ಲಿ ಮತ್ತು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳನ್ನು ಮತ್ತು ವೈಷ್ಣವರ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವಲ್ಲಿ ಗೌಡಿಯ ಮಿಷನ್ ಮಹತ್ವದ ಪಾತ್ರವನ್ನು ವಹಿಸಿದೆ, ಇದನ್ನು ಹರೇ ಕೃಷ್ಣ ಚಳುವಳಿಯ ಕೇಂದ್ರವನ್ನಾಗಿ ಮಾಡಿದೆ.

 

***

 

 



(Release ID: 2004319) Visitor Counter : 37