ಪ್ರಧಾನ ಮಂತ್ರಿಯವರ ಕಛೇರಿ

​​​​​​​ 10ನೇ ಆವೃತ್ತಿಯ ವೈಬ್ರೆಂಟ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ 


“ಹೊಸ  ಕಸನುಗಳು, ಹೊಸ ಸಂಕಲ್ಪಗಳು ಮತ್ತು ನಿರಂತರ ಸಾಧನೆ ಮಾಡುವ ಕಾಲ ಇದಾಗಿದೆ’’

‘ಒಂದು ವಿಶ್ವ, ಒಂದು ಕುಟುಂಬ, ಒಂದು ಭವಿಷ್ಯ ತತ್ವಇದೀಗ ಜಾಗತಿಕ ಕಲ್ಯಾಣಕ್ಕೆ ಪೂರ್ವಾಪೇಕ್ಷಿತವಾಗಿವೆ’’  

“ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತ ‘ವಿಶ್ವಾಮಿತ್ರ’ನ ಪಾತ್ರದಲ್ಲಿ ಮುನ್ನಡೆಯುತ್ತಿದೆ’’ 

“ಭಾರತ ಆರ್ಥಿಕ ಬೆಳವಣಿಗೆಯ ಬಗ್ಗೆ ಜಾಗತಿಕ ಸಂಸ್ಥೆಗಳು ಉತ್ಸುಕವಾಗಿವೆ’’ 

“ಕಳೆದ 10 ವರ್ಷಗಳಲ್ಲಿ ಕೈಗೊಂಡ ಸಾಂಸ್ಥಿಕ ಸುಧಾರಣೆಗಳು ಆರ್ಥಿಕ ಸಾಮರ್ಥ್ಯ, ಧಾರಣಾಶಕ್ತಿ ಮತ್ತು ಸ್ಪರ್ಧಾತ್ಮಕತೆಯನ್ನು ವೃದ್ಧಿಸಿವೆ’’ 

Posted On: 10 JAN 2024 2:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರದ ಮಹಾತ್ಮಮಂದಿರದಲ್ಲಿಂದು 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್  ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಿದರು. ಶೃಂಗಸಭೆಯ ಈ ವರ್ಷದ ಘೋಷವಾಕ್ಯ “ಭವಿಷ್ಯಕ್ಕೆ ಹೆಬ್ಬಾಗಿಲು’’ ಎಂದಾಗಿದೆ ಮತ್ತು ಇದರಲ್ಲಿ 34 ಪಾಲುದಾರ ದೇಶಗಳು ಹಾಗೂ 16 ಪಾಲುದಾರ ಸಂಸ್ಥೆಗಳು ಭಾಗವಹಿಸಿವೆ. ಈಶಾನ್ಯ ರಾಜ್ಯಗಳಲ್ಲಿರುವ ಹೂಡಿಕೆ ಅವಕಾಶಗಳನ್ನು ಬಿಂಬಿಸಲು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಈ ಶೃಂಗಸಭೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ.  

ಈ ಸಂದರ್ಭದಲ್ಲಿ ಉದ್ಯಮದ ಪ್ರಮುಖರಾದ ಆರ್ಸೆಲರ್ ಮಿತ್ತಲ್ನ ಅಧ್ಯಕ್ಷರಾದ ಶ್ರೀ ಲಕ್ಷ್ಮಿ ಮಿತ್ತಲ್, ಜಪಾನ್ ಸುಜುಕಿ ಮೋಟಾರ್ ಕಾರ್ಪೊರೇಷನ್‌ ಅಧ್ಯಕ್ಷರಾದ ಶ್ರೀ ತೋಶಿಹಿರೊ ಸುಜುಕಿ, ರಿಲಯನ್ಸ್ ಗ್ರೂಪ್‌ ಶ್ರೀ ಮುಖೇಶ್ ಅಂಬಾನಿ, ಅಮೆರಿಕಾದ ಮೈಕ್ರಾನ್ ಟೆಕ್ನಾಲಜೀಸ್ ನ  ಸಿಇಒ ಶ್ರೀ ಸಂಜಯ್ ಮೆಹ್ರೋತ್ರಾ, ಅದಾನಿ ಗ್ರೂಪ್ ಅಧ್ಯಕ್ಷ ಶ್ರೀ ಗೌತಮ್ ಅದಾನಿ, ದಕ್ಷಿಣ ಕೊರಿಯಾದ ಸಿಮ್ಟೆಕ್ ಸಿಇಒ ಶ್ರೀ ಜೆಫ್ರಿ ಚುನ್, ಟಾಟಾ ಸನ್ಸ್ ಲಿಮಿಟೆಡ್ ನ ಅಧ್ಯಕ್ಷ ಶ್ರೀ ಎನ್ ಚಂದ್ರಶೇಖರನ್,  ಡಿಪಿ ವರ್ಲ್ಡ್ ಅಧ್ಯಕ್ಷ ಶ್ರೀ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್, ಎನ್ವಿಡಿಯಾದ ಹಿರಿಯ ಉಪಾಧ್ಯಕ್ಷ ಶ್ರೀ ಶಂಕರ್ ತ್ರಿವೇದಿ ಮತ್ತು ಝೆರೋಡಾದ ಸಂಸ್ಥಾಪಕ ಮತ್ತು ಸಿಇಒ ನಿಖಿಲ್ ಕಾಮತ್ ಸಭೆಯನ್ನುದ್ದೇಶಿಸಿ ಮಾತನಾಡಿ ತಮ್ಮ ವ್ಯಾಪಾರ ಯೋಜನೆಗಳ ಬಗ್ಗೆ ತಿಳಿಸಿದರು. . ಉದ್ಯಮಿಗಳು ಪ್ರಧಾನಮಂತ್ರಿ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು.

ಜಪಾನ್ ನ ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ಸಚಿವ ಶ್ರೀ ಶಿನ್ ಹೊಸಾಕಾ,  ಸೌದಿ ಅರೇಬಿಯಾ ಹೂಡಿಕೆ ಸಹಾಯಕ ಸಚಿವ ಶ್ರೀ ಇಬ್ರಾಹಿಂ ಯೂಸೆಫ್ ಅಲ್ ಮುಬಾರಕ್, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ದಕ್ಷಿಣ ಏಷ್ಯಾ, ಕಾಮನ್ವೆಲ್ತ್ ಮತ್ತು ವಿಶ್ವಸಂಸ್ಥೆ, ಯುಕೆಯ ರಾಜ್ಯ ಸಚಿವ ಶ್ರೀ ತಾರಿಕ್ ಅಹ್ಮದ್,  ಅರ್ಮೇನಿಯಾದ ಆರ್ಥಿಕ ಸಚಿವ ಶ್ರೀ ವಾಹನ್ ಕೆರೋಬಿಯನ್,  ಆರ್ಥಿಕ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಟಿಟ್ ರಿಸಾಲೊ, ಮೊರಾಕೊದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀ ರಿಯಾಡ್ ಮೆಝೌರ್, ನೇಪಾಳದ ಹಣಕಾಸು ಸಚಿವ ಶ್ರೀ ಪ್ರಕಾಶ್ ಶರಣ್ ಮಹತ್, ವಿಯೆಟ್ನಾಂನ ಉಪ ಪ್ರಧಾನಿ ಶ್ರೀ ಟ್ರಾನ್ ಲು ಕ್ವಾಂಗ್, ಜೆಕ್ ಗಣರಾಜ್ಯದ ಪ್ರಧಾನಿ ಶ್ರೀ ಪೆಟ್ರ್ ಫಿಯಾಲಾ ಮತ್ತು ಮೊಜಾಂಬಿಕ್ ಅಧ್ಯಕ್ಷ ಶ್ರೀ ಫಿಲಿಪ್ ನ್ಯುಸಿ, ಟಿಮೋರ್ ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್-ಹೋರ್ಟಾ ಅವರು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಯುಕ್ತ ಅರಬ್ ಎಮಿರೇಟ್ಸ್ ನ ಅಧ್ಯಕ್ಷ ಮತ್ತು ಅಬುಧಾಬಿಯ ದೊರೆ ಎಚ್.ಆರ್. ಎಚ್.  ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶೃಂಗಸಭೆಯ ಆರಂಭದಲ್ಲಿ ಭಾಷಣ ಮಾಡಿದರು. 

ಸಭೆಯನ್ನುದ್ದೇಶಿಸಿ ಪ್ರಧಾನಿ ಅವರು, 2024ರ ಹೊಸ ವರ್ಷಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ಭಾಷಣ ಆರಂಭಿಸಿದರು. 2047ರ ವೇಳೆಗೆ ಭಾರತವನ್ನು 'ವಿಕಸಿತ’ ಮಾಡುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದರು, ಮುಂದಿನ 25 ವರ್ಷಗಳನ್ನು ದೇಶದ 'ಅಮೃತ ಕಾಲ'ವನ್ನಾಗಿ ಮಾಡುತ್ತಾರೆ. "ಹೊಸ ಕನಸುಗಳು, ಹೊಸ ಸಂಕಲ್ಪಗಳು ಮತ್ತು ನಿರಂತರ ಸಾಧನೆಗಳಿಗೆ ಇದು ಸಮಯ" ಎಂದು ಅವರು ಹೇಳಿದರು. ‘ಅಮೃತ ಕಾಲ’ದ ಮೊದಲ ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಮಹತ್ವವನ್ನು ಅವರು ಉಲ್ಲೇಖಿಸಿದರು.

ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ ಅಧ್ಯಕ್ಷ ಮತ್ತು ಅಬುಧಾಬಿಯ ದೊರೆ ಎಚ್.ಆರ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಭಾರತ ಮತ್ತು ಯುಎಇ ನಡುವಿನ ಗಾಢವಾದ ಬಾಂಧವ್ಯದ ಸಂಕೇತವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯು ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆ ಸಂಬಂಧಿತ ಚರ್ಚೆಗಳಿಗೆ ಜಾಗತಿಕ ವೇದಿಕೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದೆಡೆಗೆ ಅವರ ಆಲೋಚನೆಗಳು ಮತ್ತು ಬೆಂಬಲವು, ಆತ್ಮೀಯತೆ ಮತ್ತು ಹೃದಯ ತುಂಬಿ ಬಂದಂತಾಗಿದೆ ಎಂದು ಹೇಳಿದರು. ನವೀಕರಿಸಬಹುದಾದ ಇಂಧನ ವಲಯ, ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆ ಮತ್ತು ಭಾರತದ ಬಂದರು ಮೂಲಸೌಕರ್ಯದಲ್ಲಿ ಹಲವು ಶತಕೋಟಿ ಡಾಲರ್ಗಳ ಹೂಡಿಕೆಗಳಿಗೆ ಬೆಂಬಲವನ್ನು ನೀಡುವಲ್ಲಿ ಭಾರತ-ಯುಎಇ ಪಾಲುದಾರಿಕೆಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಗಿಫ್ಟ್ ಸಿಟಿಯಲ್ಲಿ ಯುಎಇಯ ಸಾರ್ವಭೌಮ ಸಂಪತ್ತು ನಿಧಿಯ ಕಾರ್ಯಾಚರಣೆಗಳು ಮತ್ತು ಟ್ರಾನ್ಸ್‌ವರ್ಲ್ಡ್ ಕಂಪನಿಗಳಿಂದ ವಿಮಾನ ಮತ್ತು ಹಡಗು ಗುತ್ತಿಗೆ ಚಟುವಟಿಕೆಗಳನ್ನು ಅವರು ಪ್ರಸ್ತಾಪಿಸಿದರು. ಭಾರತ ಮತ್ತು ಯುಎಇ ಸಂಬಂಧಗಳ ನಡುವೆ ಹೆಚ್ಚುತ್ತಿರುವ ಪಾಲುದಾರಿಕೆಗಾಗಿ ಪ್ರಧಾನಮಂತ್ರಿ ಅವರು ಎಚ್.ಆರ್.ಎಚ್. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭಾರೀ ಪ್ರಸಂಶೆಯನ್ನು ಮಾಡಿದರು. 

ಮೊಜಾಂಬಿಕ್ ಅಧ್ಯಕ್ಷ, ಐಐಎಂ ಅಹಮದಾಬಾದ್ನ ಹಳೆಯ ವಿದ್ಯಾರ್ಥಿ ಶ್ರೀ ಫಿಲಿಪ್ ನ್ಯುಸಿ ಅವರ ಘನ ಉಪಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ ಆಫ್ರಿಕಾದ ಒಕ್ಕೂಟವನ್ನು ಜಿ 20 ಖಾಯಂ ಸದಸ್ಯನನ್ನಾಗಿ ಸೇರ್ಪಡೆ ಮಾಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಅಧ್ಯಕ್ಷ ನ್ಯುಸಿ ಅವರ ಉಪಸ್ಥಿತಿಯು ಭಾರತ-ಮೊಜಾಂಬಿಕ್ ಮತ್ತು ಭಾರತ-ಆಫ್ರಿಕಾ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಿದೆ ಎಂದು ಅವರು ಹೇಳಿದರು.

ಜೆಕ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಪೆಟ್ರ್ ಫಿಯಾಲಾ ಅವರು ಆ ದೇಶದ ಪ್ರಧಾನಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡಿದ್ದು, ಜೆಕ್ ಗಣರಾಜ್ಯವು ಭಾರತದೊಂದಿಗೆ ಮತ್ತು ವೈಬ್ರೆಂಟ್ ಗುಜರಾತ್‌ನೊಂದಿಗೆ ಹಳೆಯ ಸಂಬಂಧಗಳನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಟೋಮೊಬೈಲ್, ತಂತ್ರಜ್ಞಾನ ಮತ್ತು ಉತ್ಪಾದನಾ ವಲಯಗಳಲ್ಲಿನ ಸಹಕಾರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಟಿಮೋರ್ ಅಧ್ಯಕ್ಷರಾದ ಶ್ರೀ ಜೋಸ್ ರಾಮೋಸ್-ಹೊರ್ಟಾ ಅವರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು ಮಹಾತ್ಮ ಗಾಂಧಿಯವರ ಅಹಿಂಸಾ ತತ್ವವನ್ನು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹೇಗೆ ಬಳಸಿಕೊಂಡರು ಎಂಬುದನ್ನು ವಿವರಿಸಿದರು. 

ವೈಬ್ರೆಂಟ್ ಗುಜರಾತ್ ಶೃಂಗಸಭೆಯ 20ನೇ ವಾರ್ಷಿಕೋತ್ಸವವನ್ನು ಉಲ್ಲೇಖಿಸಿದ ಪ್ರಧಾನಿ, ಶೃಂಗಸಭೆಯು ಹೊಸ ಆಲೋಚನೆಗಳನ್ನು ಪ್ರದರ್ಶಿಸಿದೆ ಮತ್ತು ಹೂಡಿಕೆಗಳು ಮತ್ತು ಆದಾಯಕ್ಕಾಗಿ ಹೊಸ ಹೆಬ್ಬಾಗಿಲುಗಳನ್ನು ಸೃಷ್ಟಿಸಿದೆ ಎಂದು ಹೇಳಿದರು. ಈ ವರ್ಷದ ‘ಭವಿಷ್ಯದ ಹೆಬ್ಬಾಗಿಲು’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ, 21ನೇ ಶತಮಾನದ ಭವಿಷ್ಯವು ಹಂಚಿಕೆಯ ಪ್ರಯತ್ನಗಳಿಂದ ಉಜ್ವಲವಾಗಲಿದೆ ಎಂದು ಹೇಳಿದರು. ಭಾರತದ ಜಿ-20 ಅಧ್ಯಕ್ಷತೆಯ ವೇಳೆ ಭವಿಷ್ಯದ ನೀಲನಕ್ಷೆಯನ್ನು ಪ್ರಸ್ತುತಪಡಿಸಲಾಗಿದೆ ಮತ್ತು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ ದೂರದೃಷ್ಟಿಯನ್ನು ಬಿಂಬಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಅವರು ಐ2ಯು2 ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಬಲಪಡಿಸುವ ಅಂಶಗಳನ್ನು ಪ್ರಸ್ತಾಪಿಸಿದರು  “ಒಂದು ವಿಶ್ವ, ಒಂದು ಕುಟುಂಬ, ಒಂದು ಭವಿಷ್ಯವು ಇದೀಗ ಜಾಗತಿಕ ಕಲ್ಯಾಣಕ್ಕೆ ಪೂರ್ವಾಪೇಕ್ಷಿತವಾಗಿದೆ’’ ಎಂದರು. 

ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತವು “ವಿಶ್ವಾಮಿತ್ರ”ನ ಪಾತ್ರದಲ್ಲಿ ಮುನ್ನಡೆಯುತ್ತಿದೆ. ಭಾರತವು ಇಂದು ಸಾಮಾನ್ಯ ಸಾಮೂಹಿಕ ಗುರಿಗಳನ್ನು ಸಾಧಿಸುವ ವಿಶ್ವಾಸವನ್ನು ಪ್ರಪಂಚಕ್ಕೆ ನೀಡಿದೆ. ಜಾಗತಿಕ ಕಲ್ಯಾಣಕ್ಕಾಗಿ ಭಾರತದ ಬದ್ಧತೆ, ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವು ಜಗತ್ತನ್ನು ಸುರಕ್ಷಿತ ಮತ್ತು ಸಮೃದ್ಧಗೊಳಿಸುತ್ತಿದೆ. ವಿಶ್ವವು ಭಾರತವನ್ನು ಸ್ಥಿರತೆಯ ಪ್ರಮುಖ ಆಧಾರ ಸ್ತಂಭವಾಗಿ ನೋಡುತ್ತದೆ. ಒರ್ವ ನಂಬಬಹುದಾದ ಮಿತ್ರ, ಜನಕೇಂದ್ರಿತ ಅಭಿವೃದ್ಧಿಯಲ್ಲಿ ನಂಬಿಕೆಯಿರುವ ಪಾಲುದಾರ, ಜಾಗತಿಕ ಒಳಿತನ್ನು ನಂಬುವ ಧ್ವನಿ, ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಎಂಜಿನ್, ಪರಿಹಾರಗಳನ್ನು ಹುಡುಕುವ ತಂತ್ರಜ್ಞಾನದ ಕೇಂದ್ರ, ಪ್ರತಿಭಾವಂತ ಯುವಕರ ಶಕ್ತಿ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸುತ್ತದೆ’’ ಎಂದು ಪ್ರಧಾನಿ ಹೇಳಿದರು.

“ಭಾರತದ 1.4 ಶತಕೋಟಿ ನಾಗರಿಕರ ಆದ್ಯತೆಗಳು ಮತ್ತು ಆಕಾಂಕ್ಷೆಗಳು ಮತ್ತು ಮಾನವ-ಕೇಂದ್ರಿತ ಅಭಿವೃದ್ಧಿಯಲ್ಲಿ ಅವರ ನಂಬಿಕೆ ಮತ್ತು ಒಳಗೊಳ್ಳುವಿಕೆ ಹಾಗೂ ಸಮಾನತೆಗೆ ಸರ್ಕಾರದ ಬದ್ಧತೆಯೊಂದಿಗೆ ವಿಶ್ವದ ಸಮೃದ್ಧಿ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. 10 ವರ್ಷಗಳ ಹಿಂದೆ 11ನೇ ಸ್ಥಾನದಲ್ಲಿದ್ದ ಭಾರತವು ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ. ವಿಶ್ವದ ವಿವಿಧ ರೇಟಿಂಗ್ ಏಜೆನ್ಸಿಗಳು ಭವಿಷ್ಯ ನುಡಿದಿರುವಂತೆ ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಅವರು ಒತ್ತಿ ಹೇಳಿದರು. 

“ತಜ್ಞರು ಇದನ್ನು ವಿಶ್ಲೇಷಿಸಬಹುದು, ಆದರೆ ನಾನು ಖಾತ್ರಿಪಡಿಸುವುದೇನೆಂದರೆ ಭಾರತವು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು. ವಿಶ್ವವು ಬಹು ಭೌಗೋಳಿಕ, ರಾಜಕೀಯ ಅಸ್ಥಿರತೆಗಳಿಗೆ ಸಾಕ್ಷಿಯಾಗುತ್ತಿರುವ ಈ ಕಾಲದಲ್ಲಿ ಭಾರತವು ವಿಶ್ವಕ್ಕೆ ಭರವಸೆಯ ಕಿರಣವಾಗಿದೆ ಎಂದು ಅವರು ಹೇಳಿದರು. ವೈಬ್ರೆಂಟ್ ಗುಜರಾತ್ ಜಾಗತಿಕ  ಶೃಂಗಸಭೆಯಲ್ಲಿ ಭಾರತದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತಾ, ಸುಸ್ಥಿರ ಕೈಗಾರಿಕೆಗಳು, ಉತ್ಪಾದನೆ ಮತ್ತು ಮೂಲಸೌಕರ್ಯ, ಹೊಸ ಯುಗದ ಕೌಶಲ್ಯಗಳು, ಭವಿಷ್ಯದ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ, ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ ಮತ್ತು ಸೆಮಿಕಂಡಕ್ಟರ್ ವಿಚಾರಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು.

ಗುಜರಾತ್‌ನಲ್ಲಿ ನಡೆಯುವ ವ್ಯಾಪಾರ ಮೇಳಕ್ಕೆ ಪ್ರತಿಯೊಬ್ಬರು, ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಿನ್ನೆ  ಗೌರವಾನ್ವಿತ ನ್ಯುಸಿ ಮತ್ತು ಗೌರವಾನ್ವಿತ ರಾಮೋಸ್ ಹೋರ್ಟಾ ಅವರೊಂದಿಗೆ ಈ ವ್ಯಾಪಾರ ಮೇಳದ ವೇಳೆ ಸಮಯ ಕಳೆಯುವುದರ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಇ-ಮೊಬಿಲಿಟಿ, ನವೋದ್ಯಮಗಳು, ನೀಲಿ ಆರ್ಥಿಕತೆ, ಗ್ರೀನ್ ಇಂಧನ,  ಮತ್ತು ಸ್ಮಾರ್ಟ್ ಮೂಲಸೌಕರ್ಯ ಮತ್ತಿತರ ವಲಯಗಳಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಉತ್ಪನ್ನಗಳನ್ನು ವ್ಯಾಪಾರ ಮೇಳದಲ್ಲಿ ಪ್ರದರ್ಶಿಶಿಸಲಾಗುತ್ತಿದೆ ಎಂದು ಹೇಳಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆಗೆ ಹೊಸ ಅವಕಾಶಗಳು ನಿರಂತರವಾಗಿ ಸೃಷ್ಟಿಯಾಗುತ್ತಿವೆ ಎಂದರು.

ಸರ್ಕಾರ ಕೈಗೊಂಡಿರುವ ಸಾಂಸ್ಥಿಕ ಸುಧಾರಣೆಗಳನ್ನು ವಿವರಿಸಿದ ಪ್ರಧಾನಮಂತ್ರಿ,  ಆರ್ಥಿಕತೆಯ ಸಾಮರ್ಥ್ಯ, ಧಾರಣಾಶಕ್ತಿ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿರುವುದರಿಂದ ಭಾರತದ ಆರ್ಥಿಕತೆಯ ಚೇತರಿಕೆ ಮತ್ತು ಆವೇಗಕ್ಕೆ ಆಧಾರವಾಗಿದೆ ಎಂದರು.  ಮರುಬಂಡವಾಳೀಕರಣ ಮತ್ತು ಐಬಿಸಿ ದೃಢವಾದ ಬ್ಯಾಂಕಿಂಗ್ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ, ಸುಮಾರು 40 ಸಾವಿರ ನಿಯಮ ಪಾಲನೆಗಳನ್ನು ರದ್ದುಗೊಳಿಸುವುದರಿಂದ ವ್ಯಾಪಾರ ಸುಗಮವಾಗಿದೆ, ಜಿಎಸ್‌ಟಿ ತೆರಿಗೆಯ ಕಪಟ ವ್ಯೂಹವನ್ನು ಹೊರಹಾಕಿದೆ, ಜಾಗತಿಕ ಪೂರೈಕೆ ಸರಪಳಿಯ ವೈವಿಧ್ಯತೆಗೆ ಉತ್ತಮ ವಾತಾವರಣವಿದೆ, ಯುಎಇ ಜೊತೆ ಒಂದು ಒಪ್ಪಂದ ಸೇರಿದಂತೆ, ಸ್ವಯಂಚಾಲಿತ ಎಫ್‌ಡಿಐಗಾಗಿ ಹಲವು ವಲಯಗಳನ್ನು ಮುಕ್ತಗೊಳಿಸುವುದು, ಮೂಲಸೌಕರ್ಯದಲ್ಲಿ ದಾಖಲೆ ಹೂಡಿಕೆ ಮತ್ತು ಕ್ಯಾಪೆಕ್ಸ್‌ನಲ್ಲಿ 5 ಪಟ್ಟು ಹೆಚ್ಚಳ. ಸೇರಿ ಇತ್ತೀಚೆಗೆ 3 ಎಫ್‌ಟಿಎಗಳಿಗೆ ಸಹಿ ಹಾಕಿದೆ ಎಂದು ಅವರು ಹೇಳಿದರು. ಹಸಿರು ಮತ್ತು ಪರ್ಯಾಯ ಇಂಧನ ಮೂಲಗಳಲ್ಲಿ ಅಭೂತಪೂರ್ವ ಪ್ರಗತಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳ, ಸೌರ ಶಕ್ತಿ ಸಾಮರ್ಥ್ಯದಲ್ಲಿ 20 ಪಟ್ಟು ಸಾಮರ್ಥ್ಯ, ಕೈಗೆಟುಕುವ ಬೆಲೆಯಲ್ಲಿ ದತ್ತಾಂಶ, ಡಿಜಿಟಲ್ ಸೇರ್ಪಡೆಗೆ ಕಾರಣವಾಗಿವೆ, ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್, 5ಜಿ, 1.15 ಲಕ್ಷ ನೋಂದಾಯಿತ ಸ್ಟಾರ್ಟ್‌ಅಪ್‌ಗಳೊಂದಿಗೆ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ, ರಫ್ತಿನಲ್ಲಿ ಒಟ್ಟಾರೆ ದಾಖಲೆಯ ಏರಿಕೆಯನ್ನು ಅವರು ಉಲ್ಲೇಖಿಸಿದರು. 

ಭಾರತದಲ್ಲಿ ಆಗುತ್ತಿರುವ ಪರಿವರ್ತನೆಗಳು ಜೀವನವನ್ನು ಸುಲಭಗೊಳಿಸಿ ಸುಧಾರಿಸುತ್ತಿವೆ ಮತ್ತು ಅವರನ್ನು ಸಬಲೀಕರಣಗೊಳಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು. ಕಳೆದ 5 ವರ್ಷಗಳಲ್ಲಿ 13.5 ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಮತ್ತು ಮಧ್ಯಮ ವರ್ಗದ ಸರಾಸರಿ ಆದಾಯವು ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಮಹಿಳಾ ಉದ್ಯೋಗಿಗಳ ಒಳಗೊಳ್ಳುವಿಕೆಯಲ್ಲಿ ದಾಖಲೆಯ ಏರಿಕೆಯನ್ನು ಅವರು ಪ್ರಸ್ತಾಪಿಸಿದರು, ಇದು ಭಾರತದ ಉತ್ತಮ ಭವಿಷ್ಯದ ಸಂಕೇತವಾಗಿದೆ ಎಂದರು.  "ಈ ಮನೋಭಾವದಿಂದ", "ನೀವೆಲ್ಲರೂ ಭಾರತದ ಹೂಡಿಕೆ ಪಯಣದ ಭಾಗವಾಗುವಂತೆ ನಾನು ಮನವಿ ಮಾಡುತ್ತೇನೆ’’ ಎಂದು ಪ್ರಧಾನಮಂತ್ರಿ ಹೇಳಿದರು.

ಸರಕು ಸಾಗಾಣೆ ಮತ್ತು ಸಾರಿಗೆ ವ್ಯವಸ್ಥೆಯ ಸುಧಾರಣೆ ನಿಟ್ಟಿನಲ್ಲಿ ಕೈಗೊಂಡಿರುವ ಆಧುನಿಕ ನೀತಿ ನಿರ್ಧಾರಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಒಂದು ದಶಕದೊಳಗೆ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 149 ಕ್ಕೆ ಏರಿಕೆಯಾಗಿದೆ, ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ದ್ವಿಗುಣಗೊಳಿಸುವುದು, ಮೆಟ್ರೋ ಜಾಲದ ಮೂರು ಪಟ್ಟು ಹೆಚ್ಚಳ, ನಿರ್ದಿಷ್ಟ ಸರಕು ಸಾಗಣೆ ಕಾರಿಡಾರ್‌ಗಳು, ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿ, ಪೋರ್ಟ್ ಟರ್ನ್‌ಅರೌಂಡ್ ಸಮಯದಲ್ಲಿ ಹೆಚ್ಚಳ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಜಿ-20 ಸಮಯದಲ್ಲಿ ಘೋಷಿಸಲಾಯಿತು ಎಂದು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. “ಇವು ನಿಮ್ಮೆಲ್ಲರಿಗೂ ದೊಡ್ಡ ಹೂಡಿಕೆ ಅವಕಾಶಗಳಾಗಿವೆ’’ ಎಂದು ಅವರು ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಿ ಅವರು,  ಭಾರತದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಹೂಡಿಕೆದಾರರಿಗೆ ಹೊಸ ಸಾಧ್ಯತೆಗಳಿವೆ ಮತ್ತು ವೈಬ್ರೆಂಟ್ ಗುಜರಾತ್ ಶೃಂಗಸಭೆಯು ಇದಕ್ಕೆ ಭವಿಷ್ಯದ ಹೆಬ್ಬಾಗಿಲು ಇದ್ದಂತೆ  ಎಂದು ಹೇಳಿದರು. “ನೀವು ಭಾರತದಲ್ಲಿ ಹೂಡಿಕೆ ಮಾಡುವುದು ಮಾತ್ರವಲ್ಲದೆ ಹೊಸ ಪೀಳಿಗೆಯ ಯುವ ಸೃಷ್ಟಿಕರ್ತರು ಮತ್ತು ಗ್ರಾಹಕರನ್ನು ರೂಪಿಸುತ್ತಿದ್ದೀರಿ. ಭಾರತದ ಮಹತ್ವಾಕಾಂಕ್ಷೆಯ ಯುವ ಪೀಳಿಗೆಯೊಂದಿಗಿನ ನಿಮ್ಮ ಪಾಲುದಾರಿಕೆಯು ನೀವು ಊಹಿಸಲೂ ಸಾಧ್ಯವಾಗದ ಫಲಿತಾಂಶಗಳನ್ನು ನೀಡಬಹುದು’’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮಾತು ಮುಗಿಸಿದರು.

ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಅಬುಧಾಬಿಯ ದೊರೆ ಹೆಚ್.ಆರ್.ಎಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮೊಜಾಂಬಿಕ್ ಅಧ್ಯಕ್ಷ  ಶ್ರೀ ಫಿಲಿಪ್ ನ್ಯುಸಿ, ಟಿಮೋರ್ ಲೆಸ್ಟೆ ಅಧ್ಯಕ್ಷ ಶ್ರೀ ಜೋಸ್ ರಾಮೋಸ್-ಹೋರ್ಟಾ, ಜೆಕ್ ಗಣರಾಜ್ಯದ ಪ್ರಧಾನಿ ಶ್ರೀ ಪೀಟರ್ ಫಿಯಾಲಾ, ವಿಯೆಟ್ನಾಂನ ಉಪ ಪ್ರಧಾನಮಂತ್ರಿ ಶ್ರೀ ಟ್ರಾನ್ ಲುಯು ಕ್ವಾಂಗ್, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಹಿನ್ನೆಲೆ: 

2003ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ ಪರಿಕಲ್ಪನೆಯು ವ್ಯಾಪಾರ ಸಹಯೋಗ, ಜ್ಞಾನ ಹಂಚಿಕೆ ಮತ್ತು ಅಂತರ್ಗತ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯತಂತ್ರದ ಪಾಲುದಾರಿಕೆಗಾಗಿ ಅತ್ಯಂತ ಹೆಸರುವಾಸಿಯಾದ ಜಾಗತಿಕ ವೇದಿಕೆಗಳಲ್ಲಿ ಒಂದಾಗಿ ಬೆಳವಣಿಗೆಯಾಗಿದೆ. 2024 ರ ಜನವರಿ 10 ರಿಂದ 12 ರವರೆಗೆ ಗುಜರಾತ್ನ ಗಾಂಧಿನಗರದಲ್ಲಿ ನಡೆಯುತ್ತಿರುವ 10 ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯ 'ಭವಿಷ್ಯದ ಹೆಬ್ಬಾಗಿಲು' ಎಂಬ ಘೋಷವಾಕ್ಯದಡಿ 20 ವರ್ಷಗಳ ವೈಬ್ರಂಟ್ ಗುಜರಾತ್ ಅನ್ನು ಯಶಸ್ವಿ ಶೃಂಗಸಭೆಯಾಗಿ ಆಚರಿಸುತ್ತದೆ 

ಈ ವರ್ಷದ ಶೃಂಗಸಭೆಯಲ್ಲಿ 34 ಪಾಲುದಾರ ರಾಷ್ಟ್ರಗಳು ಮತ್ತು 16 ಪಾಲುದಾರ ಸಂಸ್ಥೆಗಳಿವೆ. ಅಲ್ಲದೆ, ಈಶಾನ್ಯ ವಲಯದ ಅಭಿವೃದ್ಧಿ ಸಚಿವಾಲಯವು ಈಶಾನ್ಯ ಪ್ರದೇಶಗಳಲ್ಲಿನ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ವೈಬ್ರೆಂಟ್ ಗುಜರಾತ್ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ.

ಶೃಂಗಸಭೆಯು ಉದ್ಯಮ 4.0, ತಂತ್ರಜ್ಞಾನ ಮತ್ತು ನಾವೀನ್ಯತೆ, ಸುಸ್ಥಿರ ಉತ್ಪಾದನೆ, ಹಸಿರು ಹೈಡ್ರೋಜನ್, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರತೆಯತ್ತ ಪರಿವರ್ತನೆಯಂತಹ ಜಾಗತಿಕ ವಿಷಯಗಳ ಕುರಿತು ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

 

***

 



(Release ID: 1994861) Visitor Counter : 59