ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ತೆಲಂಗಾಣದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ರಾಜ್ಯಸಭೆಯು ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ), ಮಸೂದೆ, 2023 ಅಂಗೀಕಾರ

Posted On: 14 DEC 2023 8:46AM by PIB Bengaluru

ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಪ್ರಾದೇಶಿಕ ಆಶಯಗಳನ್ನು ಪೂರೈಸಲು, ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸಲು ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಸಹಕಾರಿ - ಶ್ರೀ ಧರ್ಮೇಂದ್ರ ಪ್ರಧಾನ್ ತೆಲಂಗಾಣ ರಾಜ್ಯದ ಮುಲುಗುವಿನಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ಅನ್ನು ತಿದ್ದುಪಡಿ ಮಾಡಲು ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ), ಮಸೂದೆ, 2023 ಅನ್ನು ಡಿಸೆಂಬರ್ 13, 2023 ರಂದು ರಾಜ್ಯಸಭೆಯು  ಅಂಗೀಕರಿಸಿತು. 2023 ರ ಡಿಸೆಂಬರ್ 7 ರಂದು ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿತು.


ರಾಜ್ಯಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ತೆಲಂಗಾಣ ಜನತೆಗೆ ನೀಡಿದ ಮತ್ತೊಂದು ಭರವಸೆಯನ್ನು ಈಡೇರಿಸಲಾಗಿದೆ. ಈ ಮಸೂದೆಯನ್ನು ನನಸಾಗಿಸಲು ಮತ ಹಾಕಿದ ಎಲ್ಲ ಸಂಸದರಿಗೆ ಕೃತಜ್ಞತೆಗಳು. ಮಸೂದೆಯ ಅಂಗೀಕಾರವು ದೇಶದಲ್ಲಿ ಉನ್ನತ ಶಿಕ್ಷಣದ ಪ್ರವೇಶ ಮತ್ತು ಗುಣಮಟ್ಟವನ್ನು ಸುಧಾರಿಸುವ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯವು ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸುತ್ತದೆ, ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಬುಡಕಟ್ಟು ಕಲೆ, ಸಂಸ್ಕೃತಿ, ಪದ್ಧತಿಗಳು ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳಂತಹ ವಿಷಯಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ. ವಿಶ್ವವಿದ್ಯಾನಿಲಯವು ನಮ್ಮ ಬುಡಕಟ್ಟು ಸಹೋದರ ಸಹೋದರಿಯರಿಗೆ ಪ್ರಗತಿಯ ಮುನ್ನುಡಿಯಾಗಲಿದೆ ಎಂದರು.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ವರ್ಗದಲ್ಲಿ ಮೀಸಲಾತಿ) ಕಾಯಿದೆ, 2019 ಸಂವಿಧಾನದಡಿಯಲ್ಲಿ ಕಲ್ಪಿಸಲಾದ ಮೀಸಲಾತಿಯ SC/ST/OBC/EWS ಹಕ್ಕುಗಳನ್ನು ಖಾತ್ರಿಪಡಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

3-5 ವರ್ಷದ ಮಕ್ಕಳಿಗೆ ಬೋಧನೆ-ಕಲಿಕಾ ವಿಧಾನಗಳನ್ನು ಅಳವಡಿಸಲು ಜಾದುಯಿ ಪಿತರದಂತಹ ಚಟುವಟಿಕೆಗಳನ್ನು ಒಳಗೊಂಡಿರುವ ಬಾಲವಾಟಿಕ ಉಪಕ್ರಮದ ಬಗ್ಗೆ ಸಚಿವರು ಮಾಹಿತಿ ನೀಡಿದರು. ಶಾಲೆಗಳಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ ಮತ್ತು ತರಬೇತಿಯನ್ನು ಪ್ರಾರಂಭಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

NEP ಯ ಅಂತರರಾಷ್ಟ್ರೀಯ ಸ್ವೀಕಾರದ ಬಗ್ಗೆ ಬೆಳಕು ಚೆಲ್ಲಿದರು. ಇರಾನ್‌ನಲ್ಲಿ ನೀತಿಯನ್ನು ಜಾರಿಗೆ ತರಲು ಇರಾನ್ NEP 2020 ರ ಪರ್ಷಿಯನ್ ಅನುವಾದವನ್ನು ಮಾಡಿದೆ ಮತ್ತು ಮಾರಿಷಸ್ ತಮ್ಮ ದೇಶದಲ್ಲಿ NCERT ಯಂತೆಯೇ ಸಂಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರವನ್ನು ಕೋರಿದೆ ಎಂದು ಅವರು ಮಾಹಿತಿ ನೀಡಿದರು.

889.07 ಕೋಟಿ ರೂ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. . ವಿಶ್ವವಿದ್ಯಾನಿಲಯದಲ್ಲಿ, 11 ವಿಭಾಗಗಳನ್ನು ಹೊಂದಿರುವ ಐದು ಶಾಲೆಗಳ ಅಡಿಯಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಹಂತದ ಕೋರ್ಸ್‌ಗಳು ಇರುತ್ತವೆ. ಈ ಬುಡಕಟ್ಟು ವಿಶ್ವವಿದ್ಯಾಲಯದ ಆರಂಭಿಕ ಏಳು ವರ್ಷಗಳ ಅವಧಿಗೆ ಒಟ್ಟು 2790 UG ಮತ್ತು PG ವಿದ್ಯಾರ್ಥಿಗಳ ನೋಂದಣಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯು ಅಧ್ಯಾಪಕ ಮತ್ತು ಬೋಧಕೇತರ ಹುದ್ದೆಗಳ ರೂಪದಲ್ಲಿ ನೇರ ಉದ್ಯೋಗವನ್ನು ಸೃಷ್ಟಿಸುತ್ತದೆ. ಇದಲ್ಲದೆ, ಇದು ಹೊರಗುತ್ತಿಗೆ / ಗುತ್ತಿಗೆ ಆಧಾರದ ಮೂಲಕ ಉದ್ಯೋಗದ ಮಾರ್ಗಗಳನ್ನು ಸಹ ಸೃಷ್ಟಿಸುತ್ತದೆ. ಇದು ಹಲವಾರು ಸೇವೆಗಳು ಮತ್ತು ವಾಣಿಜ್ಯ ಚಟುವಟಿಕೆಗಳ ಮೂಲಕ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಇದು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ತೆಲಂಗಾಣದ ಬುಡಕಟ್ಟು ಸಮುದಾಯಗಳನ್ನು ರಕ್ಷಿಸಲು ಕಳುಹಿಸಲಾದ ಆದಿ ಪರಾಶಕ್ತಿಯ ಪ್ರತಿರೂಪ ಎಂದೇ ನಂಬಲಾದ ತಾಯಿ ಮತ್ತು ಮಗಳಾದ ಸಮ್ಮಕ್ಕ ಮತ್ತು ಸರಳಮ್ಮ (ಸಾಮಾನ್ಯವಾಗಿ ಸಾರಕ್ಕ ಎಂದು ಕರೆಯಲಾಗುತ್ತದೆ) ಅವರ ನೆನಪಿನಲ್ಲಿ ವಿಶ್ವವಿದ್ಯಾಲಯವನ್ನು "ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ" ಎಂದು ಹೆಸರಿಸಲಾಗಿದೆ.

Image

*****



(Release ID: 1986205) Visitor Counter : 84