ಪ್ರಧಾನ ಮಂತ್ರಿಯವರ ಕಛೇರಿ

​​​​​​​ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ-28)  'ಗ್ರೀನ್‌ ಕ್ರೆಡಿಟ್ಸ್‌ ಕಾರ್ಯಕ್ರಮʼ ಕುರಿತ ಉನ್ನತ ಮಟ್ಟದ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳ ಕನ್ನಡ ಪಠ್ಯಾಂತರ

Posted On: 01 DEC 2023 10:22PM by PIB Bengaluru

ಗೌರವಾನ್ವಿತರೇ,
 
ಈ ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.

ನನ್ನ ಸಹೋದರ ಮತ್ತು ಯುಎಇ ಅಧ್ಯಕ್ಷ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಬೆಂಬಲಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಅಂತಹ ಬಿಡುವಿಲ್ಲದ ಕಾರ್ಯಕಲಾಪಗಳ ನಡುವೆಯೂ, ಅವರು ಇಲ್ಲಿಗೆ ಬಂದಿರುವುದು, ನಮ್ಮೊಂದಿಗೆ ಕೆಲವು ಕ್ಷಣಗಳನ್ನು ಕಳೆಯುತ್ತಿರುವುದು ಮತ್ತು ನಮಗೆ ಅವರ ಬೆಂಬಲವನ್ನು ನೀಡುವುದು ನಿಜಕ್ಕೂ ದೊಡ್ಡ ವಿಷಯವಾಗಿದೆ.

ʻಯುಎಇʼ ಜೊತೆ ಈ ಕಾರ್ಯಕ್ರಮದ ಸಹ-ಆತಿಥ್ಯ ವಹಿಸುತ್ತಿರುವುದು ನನಗೆ ಅಪಾರ ಸಂತೋಷವನ್ನು ತಂದಿದೆ.


ಈ ಉಪಕ್ರಮಕ್ಕೆ ಕೈಜೋಡಿಸಿದ್ದಕ್ಕಾಗಿ ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್‌ಸನ್‌ ಅವರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ʻಕಾರ್ಬನ್‌ ಕ್ರೆಡಿಟ್‌ʼ(ಇಂಗಾಲದ ಸಾಲ) ವ್ಯಾಪ್ತಿ ತುಂಬಾ ಸೀಮಿತವಾಗಿದೆ ಎಂಬುದು ಮೊದಲಿನಿಂದಲೂ ನನ್ನ ಅನಿಸಿಕೆ. ಜೊತೆಗೆ ಈ ತತ್ವಶಾಸ್ತ್ರವು ಒಂದು ರೀತಿಯಲ್ಲಿ ವಾಣಿಜ್ಯ ಅಂಶದಿಂದ ಪ್ರಭಾವಿತವಾಗಿದೆ. ʻಕಾರ್ಬನ್ ಕ್ರೆಡಿಟ್ʼ ವ್ಯವಸ್ಥೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯ ಕೊರತೆಯನ್ನು ನಾನು ನೋಡಿದ್ದೇನೆ. ನಾವು ಹೊಸ ತತ್ವಕ್ಕೆ ಸಮಗ್ರ ರೀತಿಯಲ್ಲಿ ಒತ್ತು ನೀಡಬೇಕಾಗಿದೆ ಮತ್ತು ಇದೇ ಹಸಿರು ಸಾಲದ ಅಡಿಪಾಯವಾಗಿದೆ.

ಸಾಮಾನ್ಯವಾಗಿ ಮಾನವ ಜೀವನದಲ್ಲಿ, ಮೂರು ರೀತಿಯ ವಿಷಯಗಳು ನಮ್ಮ ಅನುಭವಕ್ಕೆ ಬರುತ್ತವೆ. ನಮ್ಮ ನೈಸರ್ಗಿಕ ಸಂವಹನಗಳಲ್ಲಿಯೂ, ನಾವು ಜನರನ್ನು ನೋಡಿದಾಗ, ನಮ್ಮ ಸ್ವಭಾವದ ಮೂರು ಅಂಶಗಳು ಮುನ್ನೆಲೆಗೆ ಬರುತ್ತವೆ.

ಒಂದು ಪ್ರಕೃತಿ, ಅಂದರೆ ಪ್ರವೃತ್ತಿ,

 ಎರಡನೆಯದು
ವಿರೂಪ,

ಮತ್ತು ಮೂರನೆಯದು ಸಂಸ್ಕೃತಿ.

ನಾನು ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು ಹೇಳುವ ಅಂತರ್ಗತ ಸ್ವಭಾವ, ನೈಸರ್ಗಿಕ ಪ್ರವೃತ್ತಿ ಮಾನವನಲ್ಲಿದೆ. ಇದು ಮನೋ ಪ್ರವೃತ್ತಿ.

ಮತ್ತೊಂದು ವಿರೂಪ, ವಿನಾಶಕಾರಿ ಮನಸ್ಥಿತಿಯೂ ಇದೆ. ಇದರಲ್ಲಿ ಒಬ್ಬ ವ್ಯಕ್ತಿಯು ಜಗತ್ತಿಗೆ ಅಥವಾ ಭವಿಷ್ಯದ ಪೀಳಿಗೆಯ ಯೋಗಕ್ಷೇಮದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ, ಉಂಟಾಗುವ ನಷ್ಟದ ಪ್ರಮಾಣವನ್ನು ಲೆಕ್ಕಿಸದೆ, ವೈಯಕ್ತಿಕ ಲಾಭವು ಮೇಲುಗೈ ಸಾಧಿಸಬೇಕು ಎಂದು ನಂಬುತ್ತಾನೆ. ಇದು ವಿಕೃತ ಮನಸ್ಥಿತಿ.

ಮತ್ತು ಮೂರನೆಯದಾಗಿ, ಪರಿಸರದ ಸಮೃದ್ಧಿಯಲ್ಲಿ ಮನುಕುಲದ ಸಮೃದ್ಧಿಯನ್ನು ಕಾಣುವ ಸಂಸ್ಕೃತಿ, ಮೌಲ್ಯಗಳಿವೆ.

ನಾನು ಭೂಮಿಗೆ ಒಳ್ಳೆಯದನ್ನು ಮಾಡಿದರೆ ಅದು ನಮಗೂ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಭಾವಿಸುತ್ತಾನೆ.

ನಾವು ವಿರೂಪವನ್ನು ಬಿಟ್ಟು, ಪರಿಸರದ ಸಮೃದ್ಧಿಯಲ್ಲಿ ನಮ್ಮ ಸಮೃದ್ಧಿಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಬೇಕಿದೆ, ಆಗ ಮಾತ್ರ ಪ್ರಕೃತಿ ಅಂದರೆ, ಪರಿಸರವನ್ನು ರಕ್ಷಿಸಲು ಸಾಧ್ಯವಾಗಲಿದೆ.

ನಮ್ಮ ಜೀವನದಲ್ಲಿ ನಾವು ʻಆರೋಗ್ಯ ಕಾರ್ಡ್ʼಗೆ ಪ್ರಾಮುಖ್ಯತೆ ನೀಡುವ ರೀತಿಯಲ್ಲಿ, ಅಂದರೆ ನಿಮ್ಮ ಆರೋಗ್ಯ ಕಾರ್ಡ್ ಏನು-ಎತ್ತ?, ನಿಮ್ಮ ಆರೋಗ್ಯ ವರದಿ ಏನು? ಮುಂತಾದ ಬಗ್ಗೆ ನಾವು ನಿಯಮಿತವಾಗಿ ಪರಿಶೀಲಿಸುತ್ತೇವೆ, ಈ ವಿಚಾರವಾಗಿ, ನಾವು ಜಾಗೃತರಾಗಿರುತ್ತೇವೆ. ನಾವು ಅದಕ್ಕೆ ಸಕಾರಾತ್ಮಕ ಅಂಶಗಳನ್ನು ಸೇರಿಸಲು ಪ್ರಯತ್ನಿಸುತ್ತೇವೆ. ಅದೇ ರೀತಿ ನಾವು ಪರಿಸರದ ಬಗ್ಗೆಯೂ ಯೋಚಿಸಲು ಪ್ರಾರಂಭಿಸಬೇಕು.

ಭೂಮಿಯ ʻಆರೋಗ್ಯ ಕಾರ್ಡ್ʼಗೆ ಸಕಾರಾತ್ಮಕ ಅಂಶಗಳನ್ನು ಸೇರಿಸಲು ಏನು ಮಾಡಬಹುದು ಎಂಬುದನ್ನು ನಾವು ಯೋಚಿಸಬೇಕಿದೆ.

ನನ್ನ ಪ್ರಕಾರ ಭೂಮಿಯ ವಿಚಾರದಲ್ಲಿ ನಾವು ಮಾಡಬೇಕಾಗಿರುವುದು ʻಗ್ರೀನ್ ಕ್ರೆಡಿಟ್ʼ(ಹಸಿರು ಸಾಲ). ಇದು ʻಗ್ರೀನ್ ಕ್ರೆಡಿಟ್ʼ ಬಗ್ಗೆ ನನ್ನ ಪರಿಕಲ್ಪನೆ.

ಭೂಮಿಯ ಆರೋಗ್ಯ ಕಾರ್ಡ್‌ಗೆ ʻಗ್ರೀನ್ ಕ್ರೆಡಿಟ್ʼಅನ್ನು ಹೇಗೆ ಸೇರಿಸಬಹುದು ಎಂಬುದರ ಬಗ್ಗೆ ನಾವು ನಮ್ಮ ನೀತಿಗಳಲ್ಲಿ ಮತ್ತು ನಮ್ಮ ನಿರ್ಧಾರಗಳಲ್ಲಿ ಯೋಚಿಸಬೇಕಾಗುತ್ತದೆ.

ಒಂದು ಉದಾಹರಣೆಯೆಂದರೆ ಅವನತಿ ಹೊಂದಿದ ಪಾಳು ಭೂಮಿ.

ನಾವು ಹಸಿರು ಸಾಲದ ಪರಿಕಲ್ಪನೆಯನ್ನು ಅನುಸರಿಸಿದರೆ, ಮೊದಲು ಅವನತಿ ಹೊಂದಿದ ಪಾಳು ಭೂಮಿಯ ವಿವರಗಳನ್ನು ಸಂಗ್ರಹಿಸಬೇಕು.

ಆಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಭೂಮಿಯನ್ನು ಸ್ವಯಂಪ್ರೇರಿತ ನೆಡುತೋಪುಗಾಗಿ ಬಳಸುತ್ತದೆ.

ತದನಂತರ, ಈ ಸಕಾರಾತ್ಮಕ ಕ್ರಮಕ್ಕಾಗಿ ವ್ಯಕ್ತಿ ಅಥವಾ ಸಂಸ್ಥೆಗೆ ʻಹಸಿರು ಕ್ರೆಡಿಟ್ʼ  ನೀಡಲಾಗುತ್ತದೆ. ಈ ʻಗ್ರೀನ್ ಕ್ರೆಡಿಟ್ʼ ಭವಿಷ್ಯದ ವಿಸ್ತರಣೆಗೆ ಸಹಾಯಕವಾಗುತ್ತದೆ ಮತ್ತು ಅವುಗಳನ್ನು ವಹಿವಾಟಿಗೆ ಬಳಸಬಹುದು. ಹಸಿರು ಸಾಲದ ಸಂಪೂರ್ಣ ಪ್ರಕ್ರಿಯೆ- ಅದು ನೋಂದಣಿ, ಗಿಡ ನೆಡುವಿಕೆಯ ಪರಿಶೀಲನೆ ಅಥವಾ ಹಸಿರು ಕ್ರೆಡಿಟ್‌ಗಳ ವಿತರಣೆ ಸೇರಿದಂತೆ ಎಲ್ಲವೂ ಡಿಜಿಟಲ್ ಆಗಿರುತ್ತದೆ.

ಇದು ನಾನು ನಿಮಗೆ ನೀಡಿದ ಒಂದು ಸಣ್ಣ ಉದಾಹರಣೆ ಮಾತ್ರ. ಅಂತಹ ಅನಂತ ವಿಚಾರಗಳ ಮೇಲೆ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

ಅದಕ್ಕಾಗಿಯೇ ಇಂದು ನಾವು ಜಾಗತಿಕ ವೇದಿಕೆಯನ್ನು ಸಹ ಪ್ರಾರಂಭಿಸುತ್ತಿದ್ದೇವೆ.

ಪೋರ್ಟಲ್, ನೆಡುತೋಪು ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಆಲೋಚನೆಗಳು, ಅನುಭವಗಳು ಮತ್ತು ಆವಿಷ್ಕಾರಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ.

ಜ್ಞಾನ ಭಂಡಾರವು ಜಾಗತಿಕ ಮಟ್ಟದಲ್ಲಿ ʻಗ್ರೀನ್‌ ಕ್ರೆಡಿಟ್‌ʼ ನೀತಿಗಳು, ಕಾರ್ಯವಿಧಾನಗಳು ಮತ್ತು ಜಾಗತಿಕ ಬೇಡಿಕೆಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.

ಸ್ನೇಹಿತರೇ,

ನಮ್ಮಲ್ಲಿ "प्रकृति: रक्षति रक्षिता”, ಎಂಬ ಒಂದು ಮಾತಿದೆ. ಅಂದರೆ, ಇದರರ್ಥ, ಪ್ರಕೃತಿಯನ್ನು ರಕ್ಷಿಸುವವನನ್ನು ಪ್ರಕೃತಿ ರಕ್ಷಿಸುತ್ತದೆ.

ವೇದಿಕೆಯಿಂದ, ಈ ಉಪಕ್ರಮಕ್ಕೆ ಸೇರುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ.

ನಾವೆಲ್ಲರೂ ಒಟ್ಟಾಗಿ, ಈ ಭೂ ಗ್ರಹಕ್ಕಾಗಿ ನಮ್ಮ ಭವಿಷ್ಯದ ಪೀಳಿಗೆಗಾಗಿ ಹಸಿರು, ಸ್ವಚ್ಛ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸೋಣ.

ಇಲ್ಲಿಗೆ ಬಂದು ನಮ್ಮೊಂದಿಗೆ ಸಮಯ ಕಳೆದದ್ದಕ್ಕಾಗಿ ನಾನು ಮೊಜಾಂಬಿಕ್ ಅಧ್ಯಕ್ಷರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಮತ್ತೊಮ್ಮೆ, ಇಂದು ವೇದಿಕೆಗೆ ಸೇರಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಗಮನಿಸಿ: ಇದು ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆಯ ಭಾವಾನುವಾದ. ಮೂಲ ಪತ್ರಿಕಾ ಹೇಳಿಕೆ ಹಿಂದಿಯಲ್ಲಿತ್ತು.

****

 



(Release ID: 1983038) Visitor Counter : 72