ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ 2023ರ ನೌಕಾಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ


ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ವಿಶೇಷ ಪಡೆಗಳು ಕಾರ್ಯಾಚರಣೆ ಪ್ರದರ್ಶನಗಳಿಗೆ ಸಾಕ್ಷಿಯಾಗಿವೆ

"ನಮ್ಮ ನೌಕಾಪಡೆ ಸಿಬ್ಬಂದಿಯ ಸಮರ್ಪಣೆಗೆ ಭಾರತ ವಂದನೆ ಸಲ್ಲಿಸುತ್ತದೆ"

"ಸಿಂಧುದುರ್ಗ ಕೋಟೆಯು ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ"

"ವೀರ್ ಛತ್ರಪತಿ ಮಹಾರಾಜರಿಗೆ ಬಲವಾದ ನೌಕಾಪಡೆಯ ಮಹತ್ವ ತಿಳಿದಿತ್ತು"

"ನೌಕಾಪಡೆಯ ಅಧಿಕಾರಿಗಳು ಸಮವಸ್ತ್ರದಲ್ಲಿ ಭುಜದ ಮೇಲೆ ಧರಿಸಿರುವ ಹೊಸ ಅಲಂಕಾರ ಪಟ್ಟಿ(ಎಪಾಲೆಟ್‌ಗಳು) ಶಿವಾಜಿ ಮಹಾರಾಜರ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ"

"ಸಶಸ್ತ್ರ ಪಡೆಗಳಲ್ಲಿ ನಮ್ಮ ನಾರಿಶಕ್ತಿಯ ಬಲ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ"

"ಭಾರತವು ವಿಜಯಗಳು, ಶೌರ್ಯ, ಜ್ಞಾನ, ವಿಜ್ಞಾನ, ಕೌಶಲ್ಯ ಮತ್ತು ನಮ್ಮ ನೌಕಾ ಶಕ್ತಿಯ ಅದ್ಭುತ ಇತಿಹಾಸ ಹೊಂದಿದೆ"

"ಕರಾವಳಿ ಪ್ರದೇಶದ ಜನರ ಜೀವನ ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ"

"ಕೊಂಕಣವು ಅಭೂತಪೂರ್ವ ಸಾಧ್ಯತೆಗಳ ಪ್ರದೇಶವಾಗಿದೆ"

"ಪರಂಪರೆ ಮತ್ತು ಅಭಿವೃದ್ಧಿ, ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಾರ್ಗವಾಗಿದೆ"

Posted On: 04 DEC 2023 6:43PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ‘ನೌಕಾಪಡೆಯ ದಿನಾಚರಣೆ 2023’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಿಂಧುದುರ್ಗದ ತರ್ಕರ್ಲಿ ಬೀಚ್‌ನಿಂದ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನಗಳು ಮತ್ತು ವಿಶೇಷ ಪಡೆಗಳ 'ಕಾರ್ಯಾಚರಣೆ ಪ್ರದರ್ಶನಗಳನ್ನು' ಅವರು ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾಲ್ವಾನ್, ತಾರ್ಕರ್ಲಿ ಕರಾವಳಿಯ ಸಿಂಧುದುರ್ಗದ ಭವ್ಯವಾದ ಕೋಟೆಯ ಉದ್ದಕ್ಕೂ ಡಿಸೆಂಬರ್ 4ರ ಐತಿಹಾಸಿಕ ದಿನ, ವೀರ ಶಿವಾಜಿ ಮಹಾರಾಜರ ವೈಭವ ಮತ್ತು ರಾಜ್ಕೋಟ್ ಕೋಟೆಯಲ್ಲಿ ಅವರ ಅದ್ಭುತ ಪ್ರತಿಮೆ ಉದ್ಘಾಟಿಸಲಾಗಿದೆ. ಭಾರತೀಯ ನೌಕಾಪಡೆಯು ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಉತ್ಸಾಹದಿಂದ ತುಂಬಿದೆ. ನೌಕಾಪಡೆಯ ದಿನಾಚರಣೆ ಅಂಗವಾಗಿ ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಹೃದಯಗಳಿಗೆ ತಲೆಬಾಗಿ ನಮಸ್ಕರಿಸಿದರು.

ವಿಜಯಶಾಲಿಯಾದ ಸಿಂಧುದುರ್ಗದಲ್ಲಿ ನೌಕಾಪಡೆ ದಿನಾಚರಣೆ ಆಚರಿಸುತ್ತಿರುವುದು ನಿಜಕ್ಕೂ ಅಭೂತಪೂರ್ವ ಹೆಮ್ಮೆಯ ಕ್ಷಣವಾಗಿದೆ. "ಸಿಂಧುದುರ್ಗ ಕೋಟೆಯು ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ", ಯಾವುದೇ ರಾಷ್ಟ್ರಕ್ಕೆ ನೌಕಾ ಸಾಮರ್ಥ್ಯದ ಪ್ರಾಮುಖ್ಯತೆ ಗುರುತಿಸುವಲ್ಲಿ ಶಿವಾಜಿ ಮಹಾರಾಜರು ಹೊಂದಿದ್ದ ದೂರದೃಷ್ಟಿಯನ್ನು ಪ್ರಧಾನಿ ಸ್ಮರಿಸಿದರು. ಸಮುದ್ರಗಳ ಮೇಲೆ ಹಿಡಿತ ಹೊಂದಿರುವವರು ಪರಮ ಅಧಿಕಾರವನ್ನು ಹೊಂದಿರುತ್ತಾರೆ ಎಂಬ ಶಿವಾಜಿ ಮಹಾರಾಜರ ಶ್ಲಾಘನೆಯನ್ನು ಪುನರುಚ್ಚರಿಸಿದ ಪ್ರಧಾನಿ, ಅವರು ಪ್ರಬಲ ನೌಕಾಪಡೆಯನ್ನು ಸ್ಥಾಪಿಸಿದ್ದರು. ಕನ್ಹೋಜಿ ಆಂಗ್ರೆ, ಮಾಯಾಜಿ ನಾಯ್ಕ್ ಭಟ್ಕರ್ ಮತ್ತು ಹಿರೋಜಿ ಇಂದುಲ್ಕರ್ ಅವರಂತಹ ಯೋಧರಿಗೆ ನಮನ ಸಲ್ಲಿಸಿದ ಅವರು, ಇಂದಿಗೂ ಅವರು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

 

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಪ್ರೇರಿತರಾದ ಪ್ರಧಾನ ಮಂತ್ರಿ,  ಇಂದಿನ ಭಾರತವು ಗುಲಾಮಗಿರಿಯ ಮನಸ್ಥಿತಿ ತೊರೆದು ಮುನ್ನಡೆಯುತ್ತಿದೆ. ನೌಕಾದಳದ ಅಧಿಕಾರಿಗಳು ಸಮವಸ್ತ್ರದಲ್ಲಿ ಭುಜದ ಮೇಲೆ ಧರಿಸಿರುವ ಹೊಸ ಅಲಂಕಾರ ಪಟ್ಟಿ(ಎಪಾಲೆಟ್‌ಗಳು) ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ನೌಕಾ ದಳ ಅನಾವರಣಗೊಳಿಸಿದ್ದನ್ನೂ ಅವರು ಸ್ಮರಿಸಿದರು. ಒಬ್ಬರ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಭಾವನೆಯೊಂದಿಗೆ, ಭಾರತೀಯ ನೌಕಾಪಡೆಯು ಈಗ ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ತನ್ನ ಶ್ರೇಣಿಯನ್ನು ಹೆಸರಿಸಲು ಹೊರಟಿದೆ.  ಸಶಸ್ತ್ರ ಪಡೆಗಳಲ್ಲಿ ನಾರಿಶಕ್ತಿ ಬಲಪಡಿಸಲು ಒತ್ತು ನೀಡಲಾಗಿದೆ. ನೌಕಾಪಡೆಯ ಹಡಗಿನಲ್ಲಿ ಭಾರತದ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಿಸಿದ್ದಕ್ಕಾಗಿ ಶ್ರೀ ಮೋದಿ ಅವರು ಭಾರತೀಯ ನೌಕಾಪಡೆಯನ್ನು ಅಭಿನಂದಿಸಿದರು.

140 ಕೋಟಿ ಭಾರತೀಯರ ವಿಶ್ವಾಸವೇ ಬಹುದೊಡ್ಡ ಶಕ್ತಿಯಾಗಿದ್ದು, ಭಾರತವು ದೊಡ್ಡ ಗುರಿಗಳನ್ನು ಹೊಂದಿದೆ. ಅವುಗಳನ್ನು ಪೂರ್ಣ ಸಂಕಲ್ಪದೊಂದಿಗೆ ಸಾಧಿಸಲು ಶ್ರಮಿಸುತ್ತಿದೆ. ವಿವಿಧ ರಾಜ್ಯಗಳ ಜನರು ‘ರಾಷ್ಟ್ರವೇ ಮೊದಲು’ ಎಂಬ ಮನೋಭಾವದಿಂದ ಮುನ್ನಡೆಯುತ್ತಿರುವುದರಿಂದ ನಿರ್ಣಯಗಳು, ಭಾವನೆಗಳು ಮತ್ತು ಆಕಾಂಕ್ಷೆಗಳ ಏಕತೆಯ ಸಕಾರಾತ್ಮಕ ಫಲಿತಾಂಶಗಳ ಒಂದು ನೋಟವು ಗೋಚರಿಸುತ್ತಿದೆ. "ಇಂದು, ದೇಶವು ಇತಿಹಾಸದಿಂದ ಸ್ಫೂರ್ತಿ ಪಡೆದಿದೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಲು ನಿರತವಾಗಿದೆ. ನಕಾರಾತ್ಮಕ ರಾಜಕಾರಣವನ್ನು ಸೋಲಿಸಿ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಲು ಜನರು ಪಣ ತೊಟ್ಟಿದ್ದಾರೆ. ಈ ಸಂಕಲ್ಪವು ನಮ್ಮನ್ನು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಕೊಂಡೊಯ್ಯುತ್ತದೆ” ಎಂದು ಪ್ರಧಾನಿ ಹೇಳಿದರು.

ಭಾರತದ ವ್ಯಾಪಕ ಇತಿಹಾಸ ಪ್ರಸ್ತಾಪಿಸಿದ ಅವರು, ಇದು ಕೇವಲ ಗುಲಾಮಗಿರಿ, ಸೋಲು ಮತ್ತು ನಿರಾಶೆಗಳ ಬಗ್ಗೆ ಅಲ್ಲ, ಆದರೆ ಭಾರತದ ವಿಜಯಗಳು, ಧೈರ್ಯ, ಜ್ಞಾನ ಮತ್ತು ವಿಜ್ಞಾನ, ಕಲೆ ಮತ್ತು ಸೃಜನಶೀಲ ಕೌಶಲ್ಯಗಳು ಮತ್ತು ಭಾರತದ ಸಮುದ್ರ ಸಾಮರ್ಥ್ಯಗಳ ಅದ್ಭುತ ಅಧ್ಯಾಯಗಳನ್ನು ಒಳಗೊಂಡಿದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಯಾವುದೂ ಇಲ್ಲದಿದ್ದಾಗ ನಿರ್ಮಿಸಲಾದ ಸಿಂಧುದುರ್ಗದಂತಹ ಕೋಟೆಗಳ ಉದಾಹರಣೆ ನೀಡುವ ಮೂಲಕ ಅವರು ಭಾರತದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದರು. ಗುಜರಾತಿನ ಲೋಥಾಲ್‌ನಲ್ಲಿ ಕಂಡುಬಂದ ಸಿಂಧೂ ಕಣಿವೆ ನಾಗರಿಕತೆಯ ಬಂದರಿನ ಪರಂಪರೆ ಮತ್ತು ಸೂರತ್ ಬಂದರಿನಲ್ಲಿ 80ಕ್ಕೂ ಹೆಚ್ಚು ಹಡಗುಗಳನ್ನು ನಿಲ್ಲಿಸುತ್ತಿದ್ದ ಹಡಗು ಕಟ್ಟೆಯನ್ನು ಅವರು ಪ್ರಸ್ತಾಪಿಸಿದರು. ಚೋಳ ಸಾಮ್ರಾಜ್ಯದ ಮೂಲಕ ಆಗ್ನೇಯ ಏಷ್ಯಾದ ದೇಶಗಳಿಗೆ ವ್ಯಾಪಾರ ವಿಸ್ತರಿಸಲು ಭಾರತ ಹೊಂದಿದ್ದ ಕಡಲ ಬಲವನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ವಿದೇಶಿ ಶಕ್ತಿಗಳ ದಾಳಿಗೆ ಮೊದಲು ಸಿಲುಕಿದ್ದು ಭಾರತದ ಕಡಲ ಶಕ್ತಿ ಎಂದು ವಿಷಾದಿಸಿದ ಪ್ರಧಾನಿ, ದೋಣಿ ಮತ್ತು ಹಡಗುಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದ ಭಾರತವು ಸಮುದ್ರದ ನಿಯಂತ್ರಣವನ್ನು ಕಳೆದುಕೊಂಡಿತು, ಆ ಮೂಲಕ ಆಯಕಟ್ಟಿನ-ಆರ್ಥಿಕ ಶಕ್ತಿಯನ್ನು ಕಳೆದುಕೊಂಡಿತು. ಭಾರತವು ಅಭಿವೃದ್ಧಿಯತ್ತ ಸಾಗುತ್ತಿರುವಾಗ, ಕಳೆದುಹೋದ ವೈಭವವನ್ನು ಮರಳಿ ಪಡೆಯಬೇಕು. ನೀಲಿ ಆರ್ಥಿಕತೆಗೆ ಸರ್ಕಾರದ ಅಭೂತಪೂರ್ವ ಉತ್ತೇಜನ ನೀಡುತ್ತಿದೆ. 'ಸಾಗರಮಾಲಾ' ಅಡಿ ಬಂದರುಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಭಾರತವು 'ಸಾಗರದ ದೃಷ್ಟಿ' ಅಡಿ ತನ್ನ ಸಾಗರಗಳ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವತ್ತ ಸಾಗುತ್ತಿದೆ. ಮರ್ಚೆಂಟ್ ಶಿಪ್ಪಿಂಗ್ ಉತ್ತೇಜಿಸಲು ಸರ್ಕಾರವು ಹೊಸ ನಿಯಮಗಳನ್ನು ಮಾಡಿದೆ. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ನೌಕಾಯಾನ ಮಾಡುವವರ ಸಂಖ್ಯೆ 140%ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ತಿಳಿಸಿದರು.

ವರ್ತಮಾನದ ಮಹತ್ವಕ್ಕೆ ಒತ್ತು ನೀಡಿದ ಪ್ರಧಾನ ಮಂತ್ರಿ, "ಇದು ಭಾರತದ ಇತಿಹಾಸದ ಆ ಕಾಲಘಟ್ಟವಾಗಿದೆ, ಇದು ಕೇವಲ 5-10 ವರ್ಷಗಳಲ್ಲದ, ಮುಂಬರುವ ಶತಮಾನಗಳ ಭವಿಷ್ಯವನ್ನು ಬರೆಯಲಿದೆ". ಕಳೆದ 10 ವರ್ಷಗಳಲ್ಲಿ ಭಾರತವು 10ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ವೇಗವಾಗಿ 3ನೇ ಸ್ಥಾನದತ್ತ ಸಾಗುತ್ತಿದೆ. "ಭಾರತದಲ್ಲಿ ವಿಶ್ವಮಿತ್ರ(ಜಗತ್ತಿನ ಸ್ನೇಹಿತ)ನ ಉದಯವನ್ನು ಇಡೀ ಜಗತ್ತು ನೋಡುತ್ತಿದೆ". ಮೇಡ್ ಇನ್ ಇಂಡಿಯಾ, ತೇಜಸ್, ಕಿಸಾನ್ ಡ್ರೋನ್, ಯುಪಿಐ ಸಿಸ್ಟಮ್ ಮತ್ತು ಚಂದ್ರಯಾನ-3 ಕಾರ್ಯಕ್ರಮಗಳ ಜತೆಗೆ, ಸಾರಿಗೆ, ವಿಮಾನ, ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಉತ್ಪಾದನೆಯ ಆರಂಭದಿಂದಲೂ ರಕ್ಷಣೆಯಲ್ಲಿ ಸ್ವಾವಲಂಬನೆ ಗೋಚರಿಸುತ್ತಿದೆ ಎಂದರು.

ಕರಾವಳಿ ಮತ್ತು ಗಡಿ ಗ್ರಾಮಗಳನ್ನು ಕೊನೆಯ ಗ್ರಾಮಗಳ ಬದಲಿಗೆ ಮೊದಲ ಗ್ರಾಮ ಎಂದು ಪರಿಗಣಿಸುವ ಸರ್ಕಾರದ ಕಾರ್ಯ ವಿಧಾನವನ್ನು ಪುನರುಚ್ಚರಿಸಿದ ಶ್ರೀ ಮೋದಿ, "ಇಂದು, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬದ ಜೀವನ ಸುಧಾರಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ". 2019ರಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ ಮತ್ತು ಈ ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಪ್ರಸ್ತಾಪಿಸಿದರು. 2014ರ ನಂತರ ಮೀನುಗಾರಿಕೆ ಉತ್ಪಾದನೆ ಶೇ.8ರಷ್ಟು ಹೆಚ್ಚಿದ್ದು, ರಫ್ತು ಶೇ.110ರಷ್ಟು ಹೆಚ್ಚಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ರೈತರಿಗೆ ವಿಮಾ ರಕ್ಷಣೆಯನ್ನು 2 ರಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಅವರು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಮೀನುಗಾರಿಕೆ ವಲಯದಲ್ಲಿ ಮೌಲ್ಯ ಸರಪಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ, ಸಾಗರಮಾಲಾ ಯೋಜನೆಯು ಕರಾವಳಿ ಪ್ರದೇಶಗಳಲ್ಲಿ ಆಧುನಿಕ ಸಂಪರ್ಕವನ್ನು ಬಲಪಡಿಸುತ್ತಿದೆ. ಇದಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದ್ದು, ಕರಾವಳಿ ಭಾಗಕ್ಕೆ ಹೊಸ ವ್ಯಾಪಾರ, ಕೈಗಾರಿಕೆ ಬರಲಿದೆ. ಸಮುದ್ರಾಹಾರ ಸಂಸ್ಕರಣೆ ಸಂಬಂಧಿತ ಉದ್ಯಮ ಮತ್ತು ಮೀನುಗಾರಿಕೆ ದೋಣಿಗಳ ಆಧುನೀಕರಣವನ್ನು ಸಹ ಕೈಗೊಳ್ಳಲಾಗುತ್ತಿದೆ.

"ಕೊಂಕಣವು ಅಭೂತಪೂರ್ವ ಸಾಧ್ಯತೆಗಳ ಪ್ರದೇಶವಾಗಿದೆ". ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದ ಪ್ರಧಾನಿ, ಸಿಂಧುದುರ್ಗ, ರತ್ನಗಿರಿ, ಅಲಿಬಾಗ್, ಪರ್ಭಾನಿ ಮತ್ತು ಧರಾಶಿವ್‌ನಲ್ಲಿ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ, ಚಿಪಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಮತ್ತು ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅನ್ನು ಮಂಗಾವ್ ತನಕ ಸಂಪರ್ಕಿಸಲಾಗುತ್ತಿದೆ. ಗೋಡಂಬಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಮುದ್ರ ತೀರದಲ್ಲಿರುವ ವಸತಿ ಪ್ರದೇಶಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಪ್ರಯತ್ನದಲ್ಲಿ, ಉಷ್ಣ ವಲಯದ ಪೊದೆಗಳ(ಮ್ಯಾಂಗ್ರೋವ್‌ಗಳು) ವ್ಯಾಪ್ತಿ ವಿಸ್ತರಿಸಲು ಒತ್ತು ನೀಡುತ್ತಿರುವುದನ್ನು ಅವರು ಉಲ್ಲೇಖಿಸಿದರು. ಮಾಲ್ವಾನ್, ಆಚಾರ-ರತ್ನಗಿರಿ, ಮತ್ತು ದೇವಗಢ-ವಿಜಯದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವು ಸ್ಥಳಗಳನ್ನು ಕರಾವಳಿಯಲ್ಲಿ ಕಂಡುಬರುವ ಪೊದೆಗಳ(ಮ್ಯಾಂಗ್ರೋವ್) ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

"ಪರಂಪರೆ ಮತ್ತು ಅಭಿವೃದ್ಧಿ, ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಾರ್ಗವಾಗಿದೆ". ಛತ್ರಪತಿ ವೀರ ಶಿವಾಜಿ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಕೋಟೆ, ಕೊಂಕಣ ಸೇರಿದಂತೆ ಇಡೀ ಮಹಾರಾಷ್ಟ್ರದಲ್ಲಿ ನೂರಾರು ಕೋಟಿ ರೂ.ಗಳನ್ನು ಈ ಪರಂಪರೆಗಳ ಸಂರಕ್ಷಣೆಗೆ ವ್ಯಯಿಸಲು ಸಂಕಲ್ಪ ಮಾಡಲಾಗಿದೆ ಎಂದರು. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.

ದೆಹಲಿಯ ಹೊರಗೆ ಸೇನಾ ದಿನ, ನೌಕಾಪಡೆಯ ದಿನ ಮುಂತಾದ ಸಶಸ್ತ್ರ ಪಡೆಗಳ ದಿನವನ್ನು ನಡೆಸುವ ಹೊಸ ಸಂಪ್ರದಾಯ ಹುಟ್ಟುಹಾಕಲಾಗಿದೆ. ಇದು ಭಾರತದಾದ್ಯಂತ ಈ ಸಂದರ್ಭವನ್ನು ವಿಸ್ತರಿಸುತ್ತದೆ ಮತ್ತು ಹೊಸ ಸ್ಥಳಗಳು ಹೊಸ ಗಮನವನ್ನು ಸೆಳೆಯುತ್ತವೆ ಎಂದು ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ, ಶ್ರೀ ಏಕನಾಥ್ ಶಿಂಧೆ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಕೇಂದ್ರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವ ಶ್ರೀ ನಾರಾಯಣ ರಾಣೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರತಿ ವರ್ಷ ಡಿಸೆಂಬರ್ 4ರಂದು ನೌಕಾಪಡೆಯ ದಿನ ಆಚರಿಸಲಾಗುತ್ತದೆ. ಸಿಂಧುದುರ್ಗದಲ್ಲಿ ಆಯೋಜಿಸಿದ್ದ 'ನೌಕಾಪಡೆಯ ದಿನ 2023' ಆಚರಣೆಯು ಛತ್ರಪತಿ ಶಿವಾಜಿ ಮಹಾರಾಜರ ಶ್ರೀಮಂತ ಕಡಲ ಪರಂಪರೆಗೆ ಗೌರವ ಸಲ್ಲಿಸಿದೆ.. ಪ್ರಧಾನಿ ಅವರು ಕಳೆದ ವರ್ಷ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ನೌಕಾಪಡೆಗೆ ನಿಯುಕ್ತಿಗೊಳಿಸಿದಾಗ ಶಿವಾಜಿ ಮಹಾರಾಜರ ಮುದ್ರೆ ಇರುವ ಹೊಸ ನೌಕಾ ಧ್ವಜವನ್ನು ಭಾರತೀಯ ನೌಕಾಪಡೆಗೆ ಅಳವಡಿಸಿಕೊಳ್ಳಲಾಯಿತು.

ಪ್ರತಿ ವರ್ಷ, ನೌಕಾಪಡೆಯ ದಿನದ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ವಿಶೇಷ ಪಡೆಗಳಿಂದ ‘ಕಾರ್ಯಾಚರಣೆ ಪ್ರದರ್ಶನಗಳನ್ನು’ ಆಯೋಜಿಸುವ ಸಂಪ್ರದಾಯವಿದೆ. ಈ 'ಕಾರ್ಯಾಚರಣೆಯ ಪ್ರದರ್ಶನಗಳು' ಭಾರತೀಯ ನೌಕಾಪಡೆಯು ಕೈಗೊಂಡ ಬಹು-ವಲಯ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವೀಕ್ಷಿಸಲು ಜನರಿಗೆ ಅವಕಾಶ ನೀಡುತ್ತದೆ. ಇದು ರಾಷ್ಟ್ರೀಯ ಭದ್ರತೆಗೆ ನೌಕಾಪಡೆಯ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ನಾಗರಿಕರಲ್ಲಿ ಸಮುದ್ರ ಪ್ರಜ್ಞೆಯನ್ನು ಸಾರುತ್ತದೆ.

ಕಾಂಬ್ಯಾಟ್ ಫ್ರೀ ಫಾಲ್, ಅತಿ ವೇಗದ ಓಟಗಳು, ಜೆಮಿನಿ ಮತ್ತು ಬೀಚ್ ಅಸಾಲ್ಟ್‌ನಲ್ಲಿ ಸ್ಲಿಥರಿಂಗ್ ಕಾರ್ಯಾಚರಣೆಗಳು, ಎಸ್ಎಆರ್ ಪ್ರದರ್ಶನ, VERTREP ಮತ್ತು SSM ಲಾಂಚ್ ಡಿಲ್, ಸೀಕಿಂಗ್ ಕಾರ್ಯಾಚರಣೆ, ಡಂಕ್ ಡೆಮೊ ಮತ್ತು ಸಬ್‌ಮೆರಿನ್ ಟ್ರಾನ್ಸಿಟ್, ಕಾಮೊವ್ ಕಾರ್ಯಾಚರಣೆ, ಶತ್ರು ಠಾಣಾಗಳ ತಟಸ್ಥಗೊಳಿಸುವಿಕೆ, ಶತ್ರು ಪೋಸ್ಟ್, ಸಣ್ಣ ತಂಡದ ಅಳವಡಿಕೆ - ಹೊರತೆಗೆಯುವಿಕೆ (STIE ಕಾರ್ಯಾಚರಣೆ), ಫ್ಲೈ ಪಾಸ್ಟ್, ನೇವಲ್ ಸೆಂಟ್ರಲ್ ಬ್ಯಾಂಡ್ ಡಿಸ್ ಪ್ಲೇ, ಕಂಟಿನ್ಯೂಟಿ ಡ್ರಿಲ್, ಹೊಂಪೈಪ್ ಡ್ಯಾನ್ಸ್, ಲೈಟ್ ಟ್ಯಾಟೂ ಡ್ರಮ್ಮರ್ಸ್ ಕಾಲ್ ಮತ್ತಿತರ ಸಾಹಸಮಯ ಪ್ರದರ್ಶನಗಳನ್ನು ಪ್ರಧಾನ ಮಂತ್ರಿ ವೀಕ್ಷಿಸಿದರು. ರಾಷ್ಟ್ರಗೀತೆಯ ನಂತರ ಕಾರ್ಯಕ್ರಮ ವಿಧ್ಯುಕ್ತವಾಗಿ ಮುಕ್ತಾಯ ಕಂಡಿತು.

 

 

***



(Release ID: 1982648) Visitor Counter : 180