ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ವೀರ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ ಪ್ರಧಾನಮಂತ್ರಿ


"ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುವುದು ಗಾಢ ಭಾವನೆ ಮತ್ತು ಹೆಮ್ಮೆಯಿಂದ ತುಂಬಿದ ಅನುಭವವಾಗಿದೆ"
 
"ದೇಶವು ನಿಮಗೆ ಕೃತಜ್ಞವಾಗಿದೆ ಮತ್ತು ಋಣಿಯಾಗಿದೆ"
 
“ಯೋಧರು ನಿಯೋಜಿತವಾಗಿರುವ ಸ್ಥಳವು ನನಗೆ ಯಾವುದೇ ದೇವಾಲಯಕ್ಕಿಂತ ಕಡಿಮೆಯಿಲ್ಲ. ನೀವು ಎಲ್ಲಿದ್ದೀರೋ, ಅಲ್ಲಿ ನನ್ನ ಹಬ್ಬ”
 
"ಸಶಸ್ತ್ರ ಪಡೆಗಳು ಭಾರತದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ"
 
"ಕಳೆದ ವರ್ಷವು ರಾಷ್ಟ್ರ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು ವರ್ಷ"
 
"ಯುದ್ಧಭೂಮಿಯಿಂದ ರಕ್ಷಣಾ ಕಾರ್ಯಾಚರಣೆಗಳವರೆಗೆ, ಭಾರತೀಯ ಸಶಸ್ತ್ರ ಪಡೆಗಳು ಜೀವಗಳನ್ನು ಉಳಿಸಲು ಬದ್ಧವಾಗಿವೆ"
 
ರಾಷ್ಟ್ರ ರಕ್ಷಣೆಯಲ್ಲಿ ನಾರಿಶಕ್ತಿ ದೊಡ್ಡ ಪಾತ್ರ ವಹಿಸುತ್ತಿದೆ

Posted On: 12 NOV 2023 2:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೀಪಾವಳಿಯ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ವೀರ ಯೋಧರನ್ನು ಉದ್ದೇಶಿಸಿ ಮಾತನಾಡಿದರು.

ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿ ಹಬ್ಬ ಮತ್ತು ಯೋಧರ ಧೈರ್ಯದ ಪ್ರತಿಧ್ವನಿಯ ಸಮ್ಮಿಲನ ದೇಶದ ಪ್ರತಿಯೊಬ್ಬ ಪ್ರಜೆಗೂ ಜ್ಞಾನೋದಯದ ಕ್ಷಣವಾಗಿದೆ ಎಂದು ಅವರು ಹೇಳಿದರು. ಈಗ ಮೊದಲ ಗ್ರಾಮವೆಂದು ಪರಿಗಣಿಸಲ್ಪಟ್ಟಿರುವ ದೇಶದ ಕೊನೆಯ ಗ್ರಾಮದಿಂದ ಭಾರತದ ಗಡಿ ಪ್ರದೇಶಗಳ ಯೋಧರೊಂದಿಗೆ ಅವರು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.

ತಮ್ಮ ಅನುಭವವನ್ನು ಮೆಲುಕು ಹಾಕಿದ ಪ್ರಧಾನಮಂತ್ರಿಯವರು, ಕುಟುಂಬ ಇರುವಲ್ಲೆಲ್ಲಾ ಹಬ್ಬಗಳು ಇರುತ್ತವೆ ಮತ್ತು ಗಡಿಯನ್ನು ಕಾಪಾಡಲು ಹಬ್ಬದ ದಿನದಂದು ಕುಟುಂಬದಿಂದ ದೂರವಿರುವ ಪರಿಸ್ಥಿತಿಯು ಕರ್ತವ್ಯ ನಿಷ್ಠೆಯ ಪರಾಕಾಷ್ಠೆಯಾಗಿದೆ ಎಂದು ಹೇಳಿದರು. 140 ಕೋಟಿ ಭಾರತೀಯರನ್ನು ತಮ್ಮ ಕುಟುಂಬವೆಂದು ಪರಿಗಣಿಸುವ ಭಾವನೆಯು ಭದ್ರತಾ ಸಿಬ್ಬಂದಿಗೆ ಒಂದು ಉದ್ದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು. “ಇದಕ್ಕಾಗಿ ದೇಶವು ನಿಮಗೆ ಕೃತಜ್ಞವಾಗಿದೆ ಮತ್ತು ಋಣಿಯಾಗಿದೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ನಿಮ್ಮ ಸುರಕ್ಷತೆಗಾಗಿ ಒಂದು ದೀಪವನ್ನು ಬೆಳಗಿಸಲಾಗುತ್ತದೆ”ಎಂದು ಅವರು ಹೇಳಿದರು. “ಯೋಧರನ್ನು ನಿಯೋಜಿಸಿರುವ ಸ್ಥಳವು ನನಗೆ ಯಾವುದೇ ದೇವಾಲಯಕ್ಕಿಂತ ಕಡಿಮೆಯಿಲ್ಲ. ನೀವು ಎಲ್ಲೇ ಇರಿ, ಅಲ್ಲಯೇ ನನ್ನ ಹಬ್ಬ. ಇದು ಬಹುಶಃ 30-35 ವರ್ಷಗಳಿಂದ ನಡೆಯುತ್ತಿದೆ" ಎಂದು ಅವರು ಹೇಳಿದರು.

ಪ್ರಧಾನಿಯವರು ಯೋಧರಿಗೆ ಮತ್ತು ಸಶಸ್ತ್ರ ಪಡೆಗಳ ತ್ಯಾಗದ ಸಂಪ್ರದಾಯಕ್ಕೆ ಗೌರವ ಸಲ್ಲಿಸಿದರು. "ನಮ್ಮ ವೀರ ಯೋಧರು ಗಡಿಯಲ್ಲಿ ಅತ್ಯಂತ ಬಲಿಷ್ಠ ಗೋಡೆ ಎಂಬುದನ್ನು ಸಾಬೀತುಪಡಿಸಿದ್ದಾರೆ" ಎಂದು ಅವರು ಹೇಳಿದರು. "ನಮ್ಮ ವೀರ ಯೋಧರು ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಳ್ಳುವ ಮೂಲಕ ಯಾವಾಗಲೂ ನಾಗರಿಕರ ಹೃದಯವನ್ನು ಗೆದ್ದಿದ್ದಾರೆ." ಎಂದು ಅವರು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಸಶಸ್ತ್ರ ಪಡೆಗಳ ಕೊಡುಗೆಯನ್ನು ಒತ್ತಿ ಹೇಳಿದರು. ಭೂಕಂಪಗಳು ಮತ್ತು ಸುನಾಮಿಯಂತಹ ನೈಸರ್ಗಿಕ ವಿಪತ್ತುಗಳು ಮತ್ತು ಅಂತರರಾಷ್ಟ್ರೀಯ ಶಾಂತಿ ಕಾರ್ಯಾಚರಣೆಗಳಲ್ಲಿ ಸಶಸ್ತ್ರ ಪಡೆಗಳು ಹಲವಾರು ಜೀವಗಳನ್ನು ಉಳಿಸಿವೆ ಎಂದು ಅವರು ಹೇಳಿದರು. "ಸಶಸ್ತ್ರ ಪಡೆಗಳು ಭಾರತದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ" ಎಂದರು. ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಶಾಂತಿಪಾಲಕರ ಸ್ಮಾರಕ ಭವನವನ್ನು ಸರ್ವಾನುಮತದಿಂದ ಅಂಗೀಕರಿಸಿದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇದು ವಿಶ್ವಶಾಂತಿ ಸ್ಥಾಪನೆಗೆ ಅವರ ಕೊಡುಗೆಗಳನ್ನು ಅಮರಗೊಳಿಸುತ್ತದೆ ಎಂದು ಹೇಳಿದರು.

ಭಾರತೀಯರಿಗೆ ಮಾತ್ರವಲ್ಲದೆ ವಿದೇಶಿ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಯಲ್ಲಿಯೂ ಭಾರತೀಯ ಸಶಸ್ತ್ರ ಪಡೆಗಳ ಪಾತ್ರವನ್ನು ಒತ್ತಿಹೇಳಿದ ಪ್ರಧಾನಿ, ಪ್ರಕ್ಷುಬ್ಧ ಸುಡಾನ್‌ ನಿಂದ ಯಶಸ್ವಿ ಸ್ಥಳಾಂತರ ಮತ್ತು ತುರ್ಕಿಯೆಯಲ್ಲಿನ ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸಿಕೊಂಡರು. "ಯುದ್ಧಭೂಮಿಯಿಂದ ರಕ್ಷಣಾ ಕಾರ್ಯಾಚರಣೆಗಳವರೆಗೆ, ಭಾರತೀಯ ಸಶಸ್ತ್ರ ಪಡೆಗಳು ಜೀವಗಳನ್ನು ಉಳಿಸಲು ಬದ್ಧವಾಗಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಬ್ಬ ನಾಗರಿಕನೂ ದೇಶದ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾನೆ ಎಂದು ಅವರು ಹೇಳಿದರು.

ಪ್ರಸ್ತುತ ವಿಶ್ವ ಸನ್ನಿವೇಶದಲ್ಲಿ ಭಾರತದ ಬಗ್ಗೆ ಇರುವ ಜಾಗತಿಕ ನಿರೀಕ್ಷೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸುಭದ್ರ ಗಡಿ, ಶಾಂತಿ ಮತ್ತು ದೇಶದಲ್ಲಿ ಸ್ಥಿರತೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು. "ಭಾರತದ ಗಡಿಗಳು ಹಿಮಾಲಯದಂತಹ ದೃಢಸಂಕಲ್ಪದೊಂದಿಗೆ ಕೆಚ್ಚೆದೆಯ ಯೋಧರಿಂದ ರಕ್ಷಿಸಲ್ಪಟ್ಟಿರುವುದರಿಂದ ಭಾರತವು ಸುರಕ್ಷಿತವಾಗಿದೆ" ಎಂದು ಅವರು ಹೇಳಿದರು.

ಕಳೆದ ದೀಪಾವಳಿಯಿಂದ ಇದುವರೆಗೆ ಕಳೆದ ಒಂದು ವರ್ಷದ ಸಾಧನೆಗಳನ್ನು ವಿವರಿಸಿದ ಪ್ರಧಾನಿ, ಚಂದ್ರಯಾನ ಲ್ಯಾಂಡಿಂಗ್, ಆದಿತ್ಯ ಎಲ್1, ಗಗನಯಾನ್ ಪರೀಕ್ಷೆ, ಸ್ವದೇಶಿ ವಿಮಾನವಾಹಕ ನೌಕೆ ಐ ಎನ್‌ ಎಸ್ ವಿಕ್ರಾಂತ್, ತುಮಕೂರು ಹೆಲಿಕಾಪ್ಟರ್ ಕಾರ್ಖಾನೆ, ವೈಬ್ರೆಂಟ್ ವಿಲೇಜ್ ಅಭಿಯಾನ ಮತ್ತು ಕ್ರೀಡಾ ಸಾಧನೆಗಳನ್ನು ಪ್ರಸ್ತಾಪಿಸಿದರು. ಕಳೆದ ಒಂದು ವರ್ಷದಲ್ಲಿ ಮತ್ತಷ್ಟು ಜಾಗತಿಕ ಮತ್ತು ಪ್ರಜಾಸತ್ತಾತ್ಮಕ ಲಾಭಗಳನ್ನು ವಿವರಿಸಿದ ಪ್ರಧಾನಿ, ಹೊಸ ಸಂಸತ್ತಿನ ಕಟ್ಟಡ, ನಾರಿಶಕ್ತಿ ವಂದನಾ ಅಧಿನಿಯಮ, ಜಿ 20, ಜೈವಿಕ ಇಂಧನ ಒಕ್ಕೂಟ, ವಿಶ್ವದಲ್ಲಿ ನೈಜ-ಸಮಯದ ಪಾವತಿಯ ಪ್ರಾಮುಖ್ಯತೆ, ರಫ್ತುಗಳಲ್ಲಿ 400 ಬಿಲಿಯನ್ ಡಾಲರ್‌ಗಳನ್ನು ದಾಟಿರುವುದು, ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆ, 5ಜಿ ಪ್ರಾರಂಭದಲ್ಲಿ ದಾಪುಗಾಲು ಮತ್ತಿತರ ವಿಷಯಗಳನ್ನು ಕುರಿತು ಮಾತನಾಡಿದರು. "ಕಳೆದ ವರ್ಷವು ರಾಷ್ಟ್ರ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು ವರ್ಷವಾಗಿದೆ" ಎಂದು ಅವರು ಹೇಳಿದರು. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತವು ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲ, ಅತಿ ಉದ್ದದ ನದಿ ಕ್ರೂಸ್ ಸೇವೆ, 34 ಹೊಸ ಮಾರ್ಗಗಳಲ್ಲಿ ನಮೋ ಭಾರತ್, ವಂದೇ ಭಾರತ್, ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್, ದೆಹಲಿಯಲ್ಲಿ ಎರಡು ವಿಶ್ವದರ್ಜೆ ಸಮಾವೇಶ ಕೇಂದ್ರಗಳು - ಭಾರತ ಮಂಟಪ ಮತ್ತು ಯಶೋಭೂಮಿ, ಭಾರತವು ಅತಿ ಹೆಚ್ಚು ವಿಶ್ವವಿದ್ಯಾನಿಲಯಗಳನ್ನು ಹೊಂದಿರುವ ದೇಶವಾಗಿದೆ, ಧೋರ್ಡೊ ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿ ಮತ್ತು ಶಾಂತಿ ನಿಕೇತನ ಮತ್ತು ಹೊಯ್ಸಳ ದೇವಾಲಯ ಸಂಕೀರ್ಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದು ಈ ವರ್ಷದಲ್ಲಿ ನಡೆದಿವೆ ಎಂದು ಅವರು ಹೇಳಿದರು.

ದೇಶವು ತನ್ನ ಗಡಿಗಳನ್ನು ಕಾಪಾಡಿಕೊಳ್ಳುವವರೆಗೆ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬಹುದು ಎಂದು ಪ್ರಧಾನಿ ಒತ್ತಿ ಹೇಳಿದರು. ಅವರು ಭಾರತದ ಅಭಿವೃದ್ಧಿಯ ಶ್ರೇಯವನ್ನು ಸಶಸ್ತ್ರ ಪಡೆಗಳ ಶಕ್ತಿ, ಸಂಕಲ್ಪ ಮತ್ತು ತ್ಯಾಗಕ್ಕೆ ನೀಡಿದರು. 

ಭಾರತವು ತನ್ನ ಹೋರಾಟಗಳಿಂದ ಸಾಧ್ಯತೆಗಳನ್ನು ಸೃಷ್ಟಿಸಿದೆ ಎಂದು ಹೇಳಿದ ಪ್ರಧಾನಿ, ರಾಷ್ಟ್ರವು ಈಗ ಆತ್ಮನಿರ್ಭರ ಭಾರತದ ಹಾದಿಯಲ್ಲಿ ಹೆಜ್ಜೆ ಹಾಕಿದೆ ಎಂದು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಬೆಳವಣಿಗೆ ಮತ್ತು ಜಾಗತಿಕ ಆಟಗಾರನಾಗಿ ಹೊರಹೊಮ್ಮಿರುವುದನ್ನು ಅವರು ಎತ್ತಿ ತೋರಿಸಿದರು ಮತ್ತು ಭಾರತದ ಸೇನೆಗಳು ಮತ್ತು ಭದ್ರತಾ ಪಡೆಗಳ ಬಲವು ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದರು. ಇಂದು ಮಿತ್ರ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುತ್ತಿರುವ ರಾಷ್ಟ್ರವು, ಹಿಂದೆ ಸಣ್ಣ ಅಗತ್ಯಗಳಿಗಾಗಿ ಇತರರ ಮೇಲೆ ಹೇಗೆ ಅವಲಂಬಿತವಾಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು. 2016ರಲ್ಲಿ ಪ್ರಧಾನಿಯವರು ಈ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಭಾರತದ ರಕ್ಷಣಾ ರಫ್ತು 8 ಪಟ್ಟು ಹೆಚ್ಚು ಹೆಚ್ಚಾಗಿದೆ ಎಂದು ಅವರು ಹೇಳಿದರು. “ಇಂದು ದೇಶದಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಕ್ಷಣಾ ಉತ್ಪಾದನೆ ನಡೆಯುತ್ತಿದೆ. ಇದೊಂದು ದಾಖಲೆಯಾಗಿದೆ, ”ಎಂದು ಅವರು ಹೇಳಿದರು.

ಹೈಟೆಕ್ ತಂತ್ರಜ್ಞಾನ ಮತ್ತು ಸಿ ಡಿ ಎಸ್‌ ನಂತಹ ಪ್ರಮುಖ ವ್ಯವಸ್ಥೆಗಳ ಏಕೀಕರಣದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು ಮತ್ತು ಭಾರತೀಯ ಸೇನೆಯು ನಿರಂತರವಾಗಿ ಹೆಚ್ಚು ಆಧುನಿಕವಾಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಭಾರತವು ಅಗತ್ಯ ಸಮಯದಲ್ಲಿ ಇತರ ದೇಶಗಳ ಕಡೆಗೆ ನೋಡಬೇಕಾಗಿಲ್ಲ ಎಂದು ಅವರು ಹೇಳಿದರು. ಹೆಚ್ಚುತ್ತಿರುವ ತಂತ್ರಜ್ಞಾನದ ಅಳವಡಿಕೆಯ ಮಧ್ಯೆ, ತಂತ್ರಜ್ಞಾನದ ಬಳಕೆಯಲ್ಲಿ ಮಾನವನ ತಿಳುವಳಿಕೆಯನ್ನು ಯಾವಾಗಲೂ ಪ್ರಮುಖವಾಗಿರಿಸಬೇಕೆಂದು ಅವರು ಸಶಸ್ತ್ರ ಪಡೆಗಳಿಗೆ ಕರೆ ಕೊಟ್ಟರು. ತಂತ್ರಜ್ಞಾನವು ಎಂದಿಗೂ ಮಾನವ ಸಂವೇದನೆಗಳನ್ನು ಮೀರಬಾರದು ಎಂದು ಅವರು ಒತ್ತಿ ಹೇಳಿದರು.

“ಇಂದು, ಸ್ಥಳೀಯ ಸಂಪನ್ಮೂಲಗಳು ಮತ್ತು ಉನ್ನತ ದರ್ಜೆಯ ಗಡಿ ಮೂಲಸೌಕರ್ಯಗಳು ನಮ್ಮ ಶಕ್ತಿಯಾಗುತ್ತಿವೆ ಮತ್ತು ನಾರಿಶಕ್ತಿ ಕೂಡ ಇದರಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿರುವುದು ನನಗೆ ಖುಷಿ ತಂದಿದೆ”ಎಂದು ಪ್ರಧಾನಿ ಹೇಳಿದರು. ಕಳೆದ ವರ್ಷದಲ್ಲಿ 500 ಮಹಿಳಾ ಅಧಿಕಾರಿಗಳ ನೇಮಕ, ಮಹಿಳಾ ಪೈಲಟ್‌ ಗಳು ರಫೇಲ್ ಫೈಟರ್ ಜೆಟ್‌ ಗಳನ್ನು ಹಾರಿಸುವುದು ಮತ್ತು ಯುದ್ಧನೌಕೆಗಳಲ್ಲಿ ಮಹಿಳಾ ಅಧಿಕಾರಿಗಳ ನಿಯೋಜಿನೆಯನ್ನು ಅವರು ಪ್ರಸ್ತಾಪಿಸಿದರು. ಸಶಸ್ತ್ರ ಪಡೆಗಳ ಅಗತ್ಯತೆಗಳ ಬಗೆಗಿನ ಕಾಳಜಿಯ ಪ್ರಾಮುಖ್ಯತೆಯನ್ನು ಕುರಿತು ಮಾತನಾಡಿದ ಪ್ರಧಾನಿ, ತೀವ್ರವಾದ ತಾಪಮಾನಕ್ಕೆ ಸೂಕ್ತವಾದ ಉಡುಪುಗಳು, ಜವಾನರನ್ನು ಹೆಚ್ಚಿಸಲು ಮತ್ತು ರಕ್ಷಿಸಲು ಡ್ರೋನ್‌ ಗಳು ಮತ್ತು ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಯೋಜನೆಯಡಿ 90 ಸಾವಿರ ಕೋಟಿ ರೂ.ಪಾವತಿಯನ್ನು ಪ್ರಸ್ತಾಪಿಸಿದರು.

ಸಶಸ್ತ್ರ ಪಡೆಗಳ ಪ್ರತಿ ಹೆಜ್ಜೆಯು ಇತಿಹಾಸದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ಅವರು ಹೇಳಿದರು. ಸಶಸ್ತ್ರ ಪಡೆಗಳು ಅದೇ ಸಂಕಲ್ಪದೊಂದಿಗೆ ಭಾರತ ಮಾತೆಯ ಸೇವೆಯನ್ನು ಮುಂದುವರೆಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, “ನಿಮ್ಮ ಬೆಂಬಲದೊಂದಿಗೆ ರಾಷ್ಟ್ರವು ಅಭಿವೃದ್ಧಿಯ ಹೊಸ ಎತ್ತರಗಳನ್ನು ಮುಟ್ಟುತ್ತದೆ. ನಾವು ಒಟ್ಟಾಗಿ ದೇಶದ ಪ್ರತಿಯೊಂದು ಸಂಕಲ್ಪವನ್ನು ಈಡೇರಿಸುತ್ತೇವೆ.” ಎಂದು ಹೇಳಿದ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.

Marking Diwali with our brave Jawans at Lepcha, Himachal Pradesh. https://t.co/Ptp3rBuhGx

— Narendra Modi (@narendramodi) November 12, 2023

Spending Diwali with our brave security forces in Lepcha, Himachal Pradesh has been an experience filled with deep emotion and pride. Away from their families, these guardians of our nation illuminate our lives with their dedication. pic.twitter.com/KE5eaxoglw

— Narendra Modi (@narendramodi) November 12, 2023

The courage of our security forces is unwavering. Stationed in the toughest terrains, away from their loved ones, their sacrifice and dedication keep us safe and secure. India will always be grateful to these heroes who are the perfect embodiment of bravery and resilience. pic.twitter.com/Ve1OuQuZXY

— Narendra Modi (@narendramodi) November 12, 2023

 

 

***

 



(Release ID: 1976502) Visitor Counter : 86