ಪ್ರಧಾನ ಮಂತ್ರಿಯವರ ಕಛೇರಿ

ಗಗನಯಾನ ಅಭಿಯಾನದ ಸನ್ನದ್ಧತೆ ಕುರಿತು ಪ್ರಗತಿಪರಿಶೀಲನೆ ನಡೆಸಿದ ಪ್ರಧಾನಮಂತ್ರಿ 


ಬರುವ 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ 

ಬರುವ 2040 ರ ವೇಳೆಗೆ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಲಿರುವ ಭಾರತ 

ಶುಕ್ರ ಮತ್ತು ಮಂಗಳ ಗ್ರಹಕ್ಕೆ ಮಿಷನ್ ಕೈಗೊಳ್ಳಲಿರುವ ಭಾರತ

Posted On: 17 OCT 2023 1:53PM by PIB Bengaluru

 ಭಾರತದ ಗಗನಯಾನ ಅಭಿಯಾನ ಕುರಿತಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಯಿತು ಮತ್ತು ಭಾರತದ ಬಾಹ್ಯಾಕಾಶ ಭವಿಷ್ಯದ ಪರಿಶೋಧನಾ ಪ್ರಯತ್ನಗಳ ಕುರಿತು ವಿವರಿಸಲಾಯಿತು.  

ಮಾನವ ಆಧಾರಿತ ಉಡಾವಣಾ ವಾಹನಗಳು, ಈವರೆಗೆ ಅಭಿವೃದ್ಧಿಪಡಿಸಿರುವ ವಿವಿಧ ತಂತ್ರಜ್ಞಾನ ಒಳಗೊಂಡಂತೆ ಗಗನಯಾನ ಅಭಿಯಾನ ಕುರಿತು ಬಾಹ್ಯಾಕಾಶ ಇಲಾಖೆ ಸಮಗ್ರವಾಗಿ ಅವಲೋಕನ ಮಾಡಿತು. ಮಾವನ ಆಧಾರಿತ ಉಡಾವಣಾ ವಾಹನ [ಎಚ್.ಎಲ್.ವಿ.ಎಂ3] – 3 ರಲ್ಲಿ ಸಿಬ್ಬಂದಿರಹಿತ ಕಾರ್ಯಾಚರಣೆಗಳು ಸೇರಿದಂತೆ ಪ್ರಮುಖ 20 ಪರೀಕ್ಷೆಗಳನ್ನು ನಡೆಸಲು ಯೋಜಿಸಲಾಗಿದೆ. ಅಕ್ಟೋಬರ್ 21 ರಂದು ಕ್ರೂ ಎಸ್ಕೇಪ್ ಸಿಸ್ಟಮ್ ಟೆಸ್ಟ್ ವಾಹನದ ಪ್ರಾತ್ಯಕ್ಷಿಕೆ ಹಾರಾಟ ನಡೆಯಲಿದೆ. ಸಭೆಯಲ್ಲಿ ಈ ಅಭಿಯಾನದ ಸನ್ನದ್ಧತೆಯ ಮೌಲ್ಯಮಾಪನ ಮಾಡಿದ್ದು, ಬರುವ 2025 ರಲ್ಲಿ ಇದರ ಉಡಾವಣೆಯನ್ನು ದೃಢಪಡಿಸಲಾಗಿದೆ. 

ಇತ್ತೀಚಿನ ಚಂದ್ರಯಾನ -3 ಮತ್ತು ಆದಿತ್ಯ ಎಲ್1 ಅಭಿಯಾನಗಳು ಸೇರಿದಂತೆ ಭಾರತೀಯ ಬಾಹ್ಯಾಕಾಶ ಉಪಕ್ರಮಗಳ ಯಶಸ್ಸು ಆಧರಿಸಿ 2035 ರ ವೇಳೆಗೆ “ಭಾರತೀಯ ಅಂತರಿಕ್ಷ ನಿಲ್ದಾಣ” [ಭಾರತೀಯ ಬಾಹ್ಯಾಕಾಶ ನಿಲ್ದಾಣ] ಸ್ಥಾಪಿಸುವ ಮತ್ತು 2040ರ ವೇಳೆಗೆ ಭಾರತೀಯರನ್ನು ಚಂದ್ರನಲ್ಲಿಗೆ ಕಳುಹಿಸುವುದು ಸೇರಿದಂತೆ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಭಾರತ ಹಮ್ಮಿಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ಸಭೆಯಲ್ಲಿ ನಿರ್ದೇಶನ ನೀಡಿದರು. 

ಈ ಅಭಿಯಾನದ ಬಗ್ಗೆ ಅರಿವಿರುವ ಬಾಹ್ಯಾಕಾಶ ಇಲಾಖೆ ಚಂದ್ರನ ಪರಿಶೋಧನೆಗೆ ಮಾರ್ಗನಕ್ಷೆಯನ್ನು ಅಭಿವೃದ್ಧಿಪಡಿಸಲಿದೆ. ಇದು ಚಂದ್ರಯಾನ ಕಾರ್ಯಾಚರಣೆಗಳ ಸರಣಿ, ಮುಂದಿನ ತಲೆಮಾರಿನ ಉಡಾವಣಾ ವಾಹನ [ಎನ್.ಜಿ.ಎಲ್.ವಿ] ಅಭಿವೃದ್ಧಿ, ಹೊಸ ಉಡಾವಣಾ ನೆಲೆ ನಿರ್ಮಾಣ, ಮಾನವ ಕೇಂದ್ರಿತ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸಂಬಂಧಪಟ್ಟ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. 

ಶುಕ್ರ ಗ್ರಹ ಅನ್ಷೇಷನೆ ಮತ್ತು ಮಂಗಳ ಗ್ರಹ ತಲುಪುವುದು ಸೇರಿದಂತೆ ಅಂತರ್ ಗ್ರಹ ಕಾರ್ಯಾಚರಣೆಗಳತ್ತ ಕೆಲಸ ಮಾಡುವಂತೆ ಪ್ರಧಾನಮಂತ್ರಿಯವರು ಭಾರತೀಯ ವಿಜ್ಞಾನಿಗಳಿಗೆ ಕರೆ ನೀಡಿದರು. 

ಭಾರತದ ಸಾಮರ್ಥ್ಯದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಎತ್ತರಕ್ಕೆ ಏರುವ ದೇಶದ ಬದ್ಧತೆಯನ್ನು ಪುನರುಚ್ಚರಿಸಿದರು. 

****



(Release ID: 1968455) Visitor Counter : 165