ಪ್ರಧಾನ ಮಂತ್ರಿಯವರ ಕಛೇರಿ

ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿಗಳ ಭಾಷಣ

 
ʻಸೈನ್ಸ್ ಸಿಟಿʼಯಲ್ಲಿ ʻಸಕ್ಸಸ್ ಪೆವಿಲಿಯನ್ ಶೃಂಗಸಭೆʼ ಉದ್ಘಾಟನೆ

ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಉದ್ಯಮದ ನಾಯಕರು

"ವೈಬ್ರೆಂಟ್‌ ಗುಜರಾತ್ ಕೇವಲ ಬ್ರ್ಯಾಂಡಿಂಗ್  ಕಾರ್ಯಕ್ರಮವಲ್ಲ, ಆದರೆ ಅದಕ್ಕಿಂತ ಹೆಚ್ಚಾಗಿ ಇದು ಪರಸ್ಪರ ಬಂಧದ ಕಾರ್ಯಕ್ರಮ"

"ನಾವು ಕೇವಲ ಪುನರ್ನಿರ್ಮಾಣದ ಬಗ್ಗೆ ಯೋಚಿಸುತ್ತಿರಲಿಲ್ಲ, ಬದಲಿಗೆ ರಾಜ್ಯದ ಭವಿಷ್ಯಕ್ಕಾಗಿ ಯೋಜಿಸುತ್ತಿದ್ದೆವು; ನಾವು ʻರೋಮಾಂಚಕ ಗುಜರಾತ್ ಶೃಂಗಸಭೆʼಯನ್ನು ಇದಕ್ಕಾಗಿ ಮುಖ್ಯ ಮಾಧ್ಯಮವನ್ನಾಗಿ ಮಾಡಿದ್ದೇವೆ"

ಉತ್ತಮ ಆಡಳಿತ, ನ್ಯಾಯಸಮ್ಮತ ಮತ್ತು ನೀತಿ ಚಾಲಿತ ಆಡಳಿತ, ಸಮಾನ ಬೆಳವಣಿಗೆ ಮತ್ತು ಪಾರದರ್ಶಕತೆ ಗುಜರಾತ್‌ನ ಪ್ರಮುಖ ಆಕರ್ಷಣೆಯಾಗಿತ್ತು

" ಆಲೋಚನೆ, ಕಲ್ಪನೆ ಮತ್ತು ಅನುಷ್ಠಾನ – ಇವು ವೈಬ್ರೆಂಟ್‌  ಗುಜರಾತ್‌ ಶೃಂಗಸಭೆಯ ಯಶಸ್ಸಿನ ಪ್ರಮುಖ ಅಂಶಗಳಾಗಿದ್ದವು"

"ವೈಬ್ರೆಂಟ್‌ ಗುಜರಾತ್ ಒಂದು ಬಾರಿಯ ಕಾರ್ಯಕ್ರಮವಾಗಿ ಉಳಿಯದೆ, ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ"

"ಭಾರತವನ್ನು ವಿಶ್ವದ ಬೆಳವಣಿಗೆಯ ಎಂಜಿನ್ ಮಾಡುವ 2014ರ ಗುರಿಯು ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ತಜ್ಞರಲ್ಲಿ ಪ್ರತಿಧ್ವನಿಸುತ್ತಿದೆ"

"ಕಳೆದ 20 ವರ್ಷಗಳಿಗಿಂತ ಮುಂದಿನ 20 ವರ್ಷಗಳು ಹೆಚ್ಚು ಮುಖ್ಯ"

Posted On: 27 SEP 2023 12:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ʻಸೈನ್ಸ್ ಸಿಟಿʼಯಲ್ಲಿ ನಡೆದ ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯನ್ನು 20 ವರ್ಷಗಳ ಹಿಂದೆ 2003ರ ಸೆಪ್ಟೆಂಬರ್ 28ರಂದು ಅಂದಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು. ಕಾಲಾನಂತರದಲ್ಲಿ, ಇದು ನಿಜವಾದ ಜಾಗತಿಕ ಕಾರ್ಯಕ್ರಮವಾಗಿ ರೂಪಾಂತರಗೊಂಡಿದ್ದು, ಭಾರತದ ಪ್ರಮುಖ ವ್ಯಾಪಾರ ಶೃಂಗಸಭೆಗಳಲ್ಲಿ ಒಂದಾಗಿದೆ.

ಕಾರ್ಯಕ್ರಮದಲ್ಲಿ ಉದ್ಯಮದ ನಾಯಕರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ʻವೈಬ್ರೆಂಟ್‌ ಗುಜರಾತ್‌ʼನ ಪ್ರಯಾಣವನ್ನು ಸ್ಮರಿಸಿದ ʻವೆಲ್‌ಸ್ಪನ್‌ʼ ಸಂಸ್ಥೆಯ ಅಧ್ಯಕ್ಷ ಬಿ.ಕೆ.ಗೋಯೆಂಕಾ ಅವರು, ಇದೊಂದು ನೈಜ ಜಾಗತಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಹೂಡಿಕೆ ಉತ್ತೇಜನವನ್ನು ಧ್ಯೇಯವಾಗಿರಿಸಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಮತ್ತು ಈಗಿನ ಪ್ರಧಾನಿಯವರ ದೂರದೃಷ್ಟಿಯನ್ನು ಅವರು ಸ್ಮರಿಸಿದರು. ಈ ಕಾರ್ಯಕ್ರಮವು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ವೈಬ್ರೆಂಟ್‌ ಗುಜರಾತ್‌ ಶೃಂಗಸಭೆಯ ವೇಳೆ, ಆಗಷ್ಟೇ ಭೂಕಂಪದಿಂದ ಹಾನಿಗೊಳಗಾದ ಕಛ್ ಪ್ರದೇಶದಲ್ಲಿ ತಮ್ಮ ಘಟಕವನ್ನು ವಿಸ್ತರಿಸುವಂತೆ ಶ್ರೀ ಮೋದಿ ಅವರು ಸಲಹೆ ನೀಡಿದಾಗ ತಮಗಾದ ಅನುಭವವನ್ನು ಗೋಯೆಂಕಾ ಅವರು ಸ್ಮರಿಸಿದರು. ಪ್ರಧಾನಮಂತ್ರಿಯವರ ಸಲಹೆ ಐತಿಹಾಸಿಕವೆಂದು ಸಾಬೀತಾಯಿತು. ಅವರ ಸಕಲ ಬೆಂಬಲದೊಂದಿಗೆ ಬಹಳ ಕಡಿಮೆ ಅವಧಿಯಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲಾಯಿತು ಎಂದು ಶ್ರೀ ಗೋಯೆಂಕಾ ಹೇಳಿದರು. ಇಂದಿನ ಕಛ್‌ನ ಚೈತನ್ಯದ ಒತ್ತಿಹೇಳಿದ ಅವರು, ಒಂದು ನಿರ್ಜನ ಪ್ರದೇಶವಾಗಿದ್ದ ಇದು, ಶೀಘ್ರದಲ್ಲೇ ಜಗತ್ತಿನ ಹಸಿರು ಜಲಜನಕದ ಕೇಂದ್ರವಾಗಲಿದೆ ಎಂದು ಹೇಳಿದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ 2009ರಲ್ಲಿ ಪ್ರಧಾನಮಂತ್ರಿಯವರ ಆಶಾವಾದವನ್ನು ಅವರು ಸ್ಮರಿಸಿದರು. ಮತ್ತು ʻವೈಬ್ರೆಂಟ್ ಗುಜರಾತ್ʼ ಆ ವರ್ಷವೂ ಉತ್ತಮ ಯಶಸ್ಸನ್ನು ಕಂಡಿತು. ಶೇ.70ಕ್ಕೂ ಹೆಚ್ಚು ಒಪ್ಪಂದಗಳು ರಾಜ್ಯದಲ್ಲಿ ಹೂಡಿಕೆಯನ್ನು ಕಂಡಿವೆ ಎಂದು ಅವರು ಮಾಹಿತಿ ನೀಡಿದರು.

ʻಜೆಟ್ರೊʼ ಸಂಸ್ಥೆಯ ಮುಖ್ಯ ಮಹಾನಿರ್ದೇಶಕರಾದ(ದಕ್ಷಿಣ ಏಷ್ಯಾ) ತಕಾಶಿ ಸುಜುಕಿ ಅವರು ʻವೈಬ್ರೆಂಟ್ ಗುಜರಾತ್ʼನ 20ನೇ ವಾರ್ಷಿಕೋತ್ಸವಕ್ಕಾಗಿ ಗುಜರಾತ್ ಸರ್ಕಾರವನ್ನು ಅಭಿನಂದಿಸಿದರು ಮತ್ತು ʻಮೇಕ್ ಇನ್ ಇಂಡಿಯಾʼ ಉಪಕ್ರಮಕ್ಕೆ ಜಪಾನ್ ಅತಿದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು. 2009ರಿಂದ ಗುಜರಾತ್‌ನೊಂದಿಗಿನ ʻಜೆಟ್ರೊʼ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಸುಜುಕಿ, “ಗುಜರಾತ್ ಜೊತೆಗಿನ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಪರ್ಕಗಳು ಕಾಲಕ್ರಮೇಣ ಗಾಢವಾಗಿವೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದ ಮೇರೆಗೆ ಜಪಾನಿನ ಕಂಪನಿಗಳಿಂದ ಹೂಡಿಕೆಗೆ ಅನುಕೂಲವಾಗುವಂತೆ ʻಜೆಟ್ರೊʼ 2013ರಲ್ಲಿ ಅಹಮದಾಬಾದ್‌ನಲ್ಲಿ ತನ್ನ ಯೋಜನಾ ಕಚೇರಿಯನ್ನು ತೆರೆಯಿತು,ʼʼ ಎಂದು ಹೇಳಿದರು. ಹೂಡಿಕೆಗಳ ಉತ್ತೇಜನಕ್ಕೆ ಕಾರಣವಾದ ಭಾರತದಲ್ಲಿನ ದೇಶ-ಕೇಂದ್ರಿತ ಟೌನ್‌ಶಿಪ್‌ಗಳ ಬಗ್ಗೆ ಅವರು ಒತ್ತಿ ಹೇಳಿದರು ಮತ್ತು ಗುಜರಾತ್‌ನ ಯೋಜನಾ ಕಚೇರಿಯನ್ನು 2018ರಲ್ಲಿ ಪ್ರಾದೇಶಿಕ ಕಚೇರಿಯಾಗಿ ನವೀಕರಿಸಲಾಗಿದೆ ಎಂದು ತಿಳಿಸಿದರು. ಗುಜರಾತ್ ಸುಮಾರು 360 ಜಪಾನ್‌ ಕಂಪನಿಗಳು ಮತ್ತು ಕಾರ್ಖಾನೆಗಳಿಗೆ ನೆಲೆಯಾಗಿದೆ ಎಂದು ಸುಜುಕಿ ಮಾಹಿತಿ ನೀಡಿದರು. ಸೆಮಿಕಂಡಕ್ಟರ್‌ಗಳು, ಹಸಿರು ಜಲಜನಕ, ನವೀಕರಿಸಬಹುದಾದ ಇಂಧನ ಮತ್ತು ಔಷಧೀಯ ಕ್ಷೇತ್ರಗಳಂತಹ ಭಾರತದ ಭವಿಷ್ಯದ ವ್ಯಾಪಾರ ಕ್ಷೇತ್ರಗಳಿಗೆ ಕಾಲಿಡುವುದಾಗಿ ಅವರು ತಿಳಿಸಿದರು. ಮುಂದಿನ ವೈಬ್ರೆಂಟ್‌ ಗುಜರಾತ್ ಶೃಂಗಕ್ಕೆ ಸೆಮಿಕಂಡಕ್ಟರ್‌ ಎಲೆಕ್ಟ್ರಾನಿಕ್ಸ್ ಮೇಲೆ ಕೇಂದ್ರೀಕರಿಸುವ ಜಪಾನಿನ ವ್ಯಾಪಾರ ನಿಯೋಗವನ್ನು ಆಹ್ವಾನಿಸುವ ಬಗ್ಗೆ ಮಾಹಿತಿ ನೀಡಿದರು. ಭಾರತವನ್ನು ಹೂಡಿಕೆಗೆ ಅಪೇಕ್ಷಣೀಯ ಸ್ಥಳವನ್ನಾಗಿ ಮಾಡುವಲ್ಲಿ ಮಾರ್ಗದರ್ಶನ ನೀಡಿದ ಪ್ರಧಾನಿ ಮೋದಿ ಅವರಿಗೆ ಸುಜುಕಿ ಧನ್ಯವಾದ ಅರ್ಪಿಸಿದರು.

ʻಆರ್ಸೆಲರ್ ಮಿತ್ತಲ್ʼನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಲಕ್ಷ್ಮಿ ಮಿತ್ತಲ್ ರವರು ಮಾತನಾಡಿ, ʻವೈಬ್ರೆಂಟ್ ಗುಜರಾತ್ʼ ಪ್ರಾರಂಭಿಸಿದ ಪ್ರವೃತ್ತಿಯು ಇತರ ರಾಜ್ಯಗಳಲ್ಲಿಯೂ ಇಂತಹ ಕಾರ್ಯಕ್ರಮಗಳಿಗೆ ಕಾರಣವಾಯಿತು. ಇದು ಭಾರತವನ್ನು ಜಾಗತಿಕ ಹೂಡಿಕೆದಾರರಿಗೆ ನೆಚ್ಚಿನ ತಾಣವನ್ನಾಗಿ ಮಾಡಿದೆ. ಇದಕ್ಕಾಗಿ ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ದಕ್ಷತೆ ಶ್ಲಾಘನೀಯ ಎಂದರು. ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಜಾಗತಿಕ ಒಮ್ಮತದ ನಿರ್ಮಾತೃವಾಗಿ ಹೊರಹೊಮ್ಮಿರುವ ʻಜಿ-20ʼಗಾಗಿ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು. ಪ್ರಮುಖ ಕೈಗಾರಿಕಾ ರಾಜ್ಯವಾಗಿ ಗುಜರಾತ್‌ನ ಸ್ಥಾನಮಾನ ಮತ್ತು ಅದು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೇಗೆ ಪರಿಣಾಮಕಾರಿ ರೀತಿಯಲ್ಲಿ ಪ್ರದರ್ಶಿಸುತ್ತದೆ ಎಂಬುದನ್ನು ಶ್ರೀ ಮಿತ್ತಲ್ ಒತ್ತಿ ಹೇಳಿದರು. ರಾಜ್ಯದ ಆರ್ಸೆಲರ್ ಮಿತ್ತಲ್ ಯೋಜನೆಗಳ ಬಗ್ಗೆ ಅವರು ವಿವರಿಸಿದರು

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಪ್ಪತ್ತು ವರ್ಷಗಳ ಹಿಂದೆ ಬಿತ್ತಿದ ಬೀಜಗಳು ಭವ್ಯ ಮತ್ತು ವೈವಿಧ್ಯಮಯ ರೋಮಾಂಚಕ ಗುಜರಾತ್‌ನ ರೂಪವನ್ನು ಪಡೆದುಕೊಂಡಿವೆ ಎಂದರು. ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯ 20ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ರೋಮಾಂಚಕ ಗುಜರಾತ್ ಕೇವಲ ರಾಜ್ಯಕ್ಕೆ ಬ್ರ್ಯಾಂಡಿಂಗ್ ಅಲ್ಲ. ಬದಲಿಗೆ, ಬಾಂಧವ್ಯವನ್ನು ಬಲಪಡಿಸುವ ಸಂದರ್ಭವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಶೃಂಗಸಭೆಯು ದೃಢವಾದ ಬಂಧ ಮತ್ತು ರಾಜ್ಯದ 7 ಕೋಟಿ ಜನರ ಸಾಮರ್ಥ್ಯದ ಸಂಕೇತವಾಗಿದೆ ಎಂದು ಒತ್ತಿ ಹೇಳಿದರು. "ಈ ಬಂಧಕ್ಕೆ ನನ್ನ ಬಗ್ಗೆ ಜನರ ಅಪಾರ ಪ್ರೀತಿಯೇ ಆಧಾರವಾಗಿದೆ,ʼʼ ಎಂದು ಅವರು ಹೇಳಿದರು.

2001ರ ಭೂಕಂಪದ ನಂತರ ಗುಜರಾತ್‌ನ ಪರಿಸ್ಥಿತಿಯನ್ನು ಊಹಿಸುವುದು ಕಷ್ಟವಾಗಿತ್ತು ಎಂದು ಅವರು ಹೇಳಿದರು. ಭೂಕಂಪ ಸಂಭವಿಸುವ ಮೊದಲೇ ಗುಜರಾತ್ ದೀರ್ಘಕಾಲದ ಬರಗಾಲಕ್ಕೆ ತುತ್ತಾಗಿತ್ತು. ʻಮಾಧವಪುರ ಮರ್ಕಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌ʼನ ದಿವಾಳಿಯು ಇತರ ಸಹಕಾರಿ ಬ್ಯಾಂಕುಗಳಲ್ಲಿಯೂ ಸರಪಳಿ ಪ್ರತಿಕ್ರಿಯೆಗೆ ಕಾರಣವಾಯಿತು. ಆ ಸಮಯದಲ್ಲಿ ಸರ್ಕಾರದಲ್ಲಿ ತಾವು ಹೊಸಬರಾಗಿದ್ದರಿಂದ ಇದು ತಮಗೆ ಹೊಸ ಅನುಭವವಾಗಿತ್ತು ಎಂದು ಶ್ರೀ ಮೋದಿ ಸ್ಮರಿಸಿದರು. ಈ ಸನ್ನಿವೇಶದಲ್ಲಿ, ಹೃದಯ ವಿದ್ರಾವಕ ಗೋಧ್ರಾ ಘಟನೆಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮುಖ್ಯಮಂತ್ರಿಯಾಗಿ ಅನುಭವದ ಕೊರತೆಯ ಹೊರತಾಗಿಯೂ, ಗುಜರಾತ್ ಮತ್ತು ರಾಜ್ಯದ ಜನರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿತ್ತು ಎಂದು ಶ್ರೀ ಮೋದಿ ಹೇಳಿದರು. ಗುಜರಾತ್ ಅನ್ನು ದೂಷಿಸುವ ಪಿತೂರಿ ಮಾಡಿದ್ದ ಆಗಿನ ಷಡ್ಯಂತ್ರ-ಚಾಲಿತ ವಿನಾಶಕಾರಿ ಶಕ್ತಿಗಳನ್ನು ಅವರು ನೆನಪಿಸಿಕೊಂಡರು.

"ಪರಿಸ್ಥಿತಿ ಏನೇ ಇರಲಿ, ನಾನು ಗುಜರಾತ್ ಅನ್ನು ಈ ಪರಿಸ್ಥಿತಿಯಿಂದ ಹೊರತರುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ನಾವು ಕೇವಲ ಪುನರ್ನಿರ್ಮಾಣದ ಬಗ್ಗೆ ಯೋಚಿಸುತ್ತಿರಲಿಲ್ಲ, ಬದಲಿಗೆ ರಾಜ್ಯದ ಭವಿಷ್ಯದ ಬಗ್ಗೆಯೂ ಯೋಚಿಸುತ್ತಿದ್ದೆವು.  ನಾವು ʻವೈಬ್ರೆಂಟ್‌ ಗುಜರಾತ್ ಶೃಂಗಸಭೆʼಯನ್ನು ಇದಕ್ಕೆ ಮುಖ್ಯ ಮಾಧ್ಯಮವನ್ನಾಗಿ ಮಾಡಿದೆವು", ಎಂದು ಪ್ರಧಾನಿ ಹೇಳಿದರು.            ʻವೈಬ್ರೆಂಟ್‌ ಗುಜರಾತ್ʼ ಶೃಂಗಸಭೆಯು ರಾಜ್ಯದ ಉತ್ಸಾಹವನ್ನು ಹೆಚ್ಚಿಸಲು ಮತ್ತು ವಿಶ್ವದೊಂದಿಗೆ ತೊಡಗಿಸಿಕೊಳ್ಳಲು ಒಂದು ಮಾಧ್ಯಮವಾಗಿ ಮಾರ್ಪಟ್ಟಿದೆ ಎಂದು ಅವರು ಒತ್ತಿ ಹೇಳಿದರು. ಈ ಶೃಂಗಸಭೆಯು ರಾಜ್ಯ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಮತ್ತು ಕೇಂದ್ರೀಕೃತ ವಿಧಾನವನ್ನು ಜಗತ್ತಿಗೆ ಪ್ರದರ್ಶಿಸುವ ಮಾಧ್ಯಮವಾಗಿದೆ. ಜೊತೆಗೆ ದೇಶದ ಉದ್ಯಮ ಸಾಮರ್ಥ್ಯವನ್ನು ಮುನ್ನೆಲೆಗೆ ತಂದಿದೆ ಎಂದು ಅವರು ಒತ್ತಿ ಹೇಳಿದರು. ಹಲವಾರು ಕ್ಷೇತ್ರಗಳಲ್ಲಿ ಅಸಂಖ್ಯಾತ ಅವಕಾಶಗಳನ್ನು ಪ್ರಸ್ತುತಪಡಿಸಲು, ದೇಶದ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ರಾಷ್ಟ್ರದ ದೈವತ್ವ, ಭವ್ಯತೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಎತ್ತಿ ತೋರಿಸಲು ʻವೈಬ್ರೆಂಟ್‌ ಗುಜರಾತ್ʼ ಅನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯ ಆಯೋಜನೆಯ ಸಮಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನವರಾತ್ರಿ ಮತ್ತು ಗರ್ಬಾದ ಸಂಭ್ರಮದ ಸಮಯದಲ್ಲಿ ಆಯೋಜನೆಯಿಂದಾಗಿ ʻವೈಬ್ರೆಂಟ್‌ ಗುಜರಾತ್ʼ ಶೃಂಗಸಭೆಯ ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಒಂದು ಉತ್ಸವವಾಗಿದೆ ಎಂದು ಬಣ್ಣಿಸಿದರು.

ಗುಜರಾತ್ ಬಗ್ಗೆ ಆಗಿನ ಕೇಂದ್ರ ಸರ್ಕಾರದ ಉದಾಸೀನತೆಯನ್ನು ಪ್ರಧಾನಿ ಸ್ಮರಿಸಿದರು. 'ಗುಜರಾತ್ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿ' ಎಂಬ ಅವರ ಹೇಳಿಕೆಯ ಹೊರತಾಗಿಯೂ, ಗುಜರಾತ್ ಅಭಿವೃದ್ಧಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಲಾಯಿತು. ಬೆದರಿಕೆಯ ಹೊರತಾಗಿಯೂ ವಿದೇಶಿ ಹೂಡಿಕೆದಾರರು ಗುಜರಾತ್ ಅನ್ನು ಆಯ್ಕೆ ಮಾಡಿದರು. ಯಾವುದೇ ವಿಶೇಷ ಪ್ರೋತ್ಸಾಹ ಇಲ್ಲದೆಯೇ ಇದು ನಡೆಯಿತು. ಉತ್ತಮ ಆಡಳಿತ; ನ್ಯಾಯೋಚಿತ ಮತ್ತು ನೀತಿ ಚಾಲಿತ ಆಡಳಿತ, ಬೆಳವಣಿಗೆ ಮತ್ತು ಪಾರದರ್ಶಕತೆಯ ಸಮಾನ ವ್ಯವಸ್ಥೆಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು ಎಂದು ಅವರು ಹೇಳಿದರು.

2009ರಲ್ಲಿ ಇಡೀ ಜಗತ್ತು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದಾಗ ನಡೆದ ʻವೈಬ್ರೆಂಟ್ ಗುಜರಾತ್ʼ ಆವೃತ್ತಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಆಗಿನ ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಮುಂದೆ ಸಾಗಲು ಮತ್ತು ಕಾರ್ಯಕ್ರಮವನ್ನು ಆಯೋಜಿಸಲು ಒತ್ತು ನೀಡಿದ್ದಾಗಿ ಉಲ್ಲೇಖಿಸಿದರು. ಇದರ ಪರಿಣಾಮವಾಗಿ, 2009ರ ʻವೈಬ್ರೆಂಟ್‌ ಗುಜರಾತ್ ಶೃಂಗಸಭೆʼಯಲ್ಲಿ ಗುಜರಾತ್‌ನ ಯಶಸ್ಸಿನ ಹೊಸ ಅಧ್ಯಾಯವನ್ನು ಬರೆಯಲು ಸಾಧ್ಯವಾಯಿತು ಎಂದು ಪ್ರಧಾನಿ ಒತ್ತಿ ಹೇಳಿದರು.

ಶೃಂಗಸಭೆಯ ಯಶಸ್ಸನ್ನು ಅದರ ಪ್ರಯಾಣದ ಮೂಲಕ ಪ್ರಧಾನಿ ವಿವರಿಸಿದರು. 2003ರ ಆವೃತ್ತಿಯು ಕೇವಲ ನೂರಾರು ಭಾಗಿದಾರರನ್ನು ಆಕರ್ಷಿಸಿತು; ಇಂದು 40,000ಕ್ಕೂ ಹೆಚ್ಚು ಭಾಗಿದಾರರು ಮತ್ತು ಪ್ರತಿನಿಧಿಗಳು ಹಾಗೂ 135 ದೇಶಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಪ್ರದರ್ಶಕರ ಸಂಖ್ಯೆಯೂ 2003ರಲ್ಲಿ 30 ಇದ್ದದ್ದು ಇಂದು 2000 ಕ್ಕಿಂತ ಹೆಚ್ಚಾಗಿದೆ ಎಂದರು.

ಆಲೋಚನೆ, ಕಲ್ಪನೆ ಮತ್ತು ಅನುಷ್ಠಾನ- ಇವು ʻವೈಬ್ರೆಂಟ್‌ ಗುಜರಾತ್ʼನ ಯಶಸ್ಸಿನ ಪ್ರಮುಖ ಅಂಶಗಳಾಗಿದ್ದವು ಎಂದು ಪ್ರಧಾನಿ ಹೇಳಿದರು. ʻವೈಬ್ರೆಂಟ್‌ ಗುಜರಾತ್ʼನ ಹಿಂದಿನ ಆಲೋಚನೆ ಮತ್ತು ಕಲ್ಪನೆಯ ಧೈರ್ಯವನ್ನು ಅವರು ಒತ್ತಿ ಹೇಳಿದರು,  ಇದನ್ನು ಇತರ ರಾಜ್ಯಗಳಲ್ಲಿ ಅನುಸರಿಸಲಾಗಿದೆ ಎಂದು ತಿಳಿಸಿದರು.

"ಈ ಪರಿಕಲ್ಪನೆಯು ಎಷ್ಟೇ ಅಗಾಧವಾದುದಾದರೂ, ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಮತ್ತು ಫಲಿತಾಂಶಗಳನ್ನು ನೀಡುವುದು ಅನಿವಾರ್ಯವಾಗಿತ್ತು" ಎಂದು ಪ್ರಧಾನಿ ಹೇಳಿದರು. ಅಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆಗೆ ತೀವ್ರವಾದ ಯೋಜನೆ, ಸಾಮರ್ಥ್ಯ ವರ್ಧನೆಯಲ್ಲಿ ಹೂಡಿಕೆಗಳು, ನಿಖರವಾದ ಮೇಲ್ವಿಚಾರಣೆ ಹಾಗೂ ಸಮರ್ಪಣೆ ಅತ್ಯಗತ್ಯ ಎಂದು ಹೇಳಿದರು. ʻವೈಬ್ರೆಂಟ್ ಗುಜರಾತ್ʼ ಮೂಲಕ ರಾಜ್ಯ ಸರ್ಕಾರವು ಅದೇ ಅಧಿಕಾರಿಗಳು, ಸಂಪನ್ಮೂಲಗಳು ಮತ್ತು ನಿಬಂಧನೆಗಳನ್ನು ಇಟ್ಟುಕೊಂಡು ಬೇರೆ ಯಾವುದೇ ಸರ್ಕಾರಕ್ಕೆ ಊಹಿಸಲೂ ಸಾಧ್ಯವಾಗದ್ದನ್ನು ಸಾಧಿಸಿದೆ ಎಂದು ಅವರು ಪುನರುಚ್ಚರಿಸಿದರು.

ಇಂದು, ʻವೈಬ್ರೆಂಟ್‌ ಗುಜರಾತ್ʼ ಒಂದು ಬಾರಿಯ ಕಾರ್ಯಕ್ರಮವಾಗಿ ಉಳಿದಿಲ್ಲ. ಸರ್ಕಾರದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ವ್ಯವಸ್ಥೆ ಮತ್ತು ಪ್ರಕ್ರಿಯೆಯೊಂದಿಗೆ ಅದೊಂದು ಸಂಸ್ಥೆಯಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಹೇಳಿದರು.

ದೇಶದ ಪ್ರತಿಯೊಂದು ರಾಜ್ಯಕ್ಕೂ ಪ್ರಯೋಜನವಾಗುವ ಗುರಿಯನ್ನು ಹೊಂದಿರುವ ʻವೈಬ್ರೆಂಟ್‌ ಗುಜರಾತ್ʼನ ಆಶಯವನ್ನು ಪ್ರಧಾನಿ ಒತ್ತಿ ಹೇಳಿದರು. ಶೃಂಗಸಭೆ ನೀಡಿದ ಅವಕಾಶವನ್ನು ಬಳಸಿಕೊಳ್ಳುವಂತೆ ಇತರ ರಾಜ್ಯಗಳನ್ನು ವಿನಂತಿಸಿದ್ದನ್ನು ಅವರು ನೆನಪಿಸಿಕೊಂಡರು.

20ನೇ ಶತಮಾನದಲ್ಲಿ ಗುಜರಾತ್‌ ರಾಜ್ಯವನ್ನು ವ್ಯಾಪಾರಿಗಳ ಮೂಲಕ ಗುರುತಿಸಲಾಗುತ್ತಿತ್ತು. 20ನೇ ಶತಮಾನದಿಂದ 21ನೇ ಶತಮಾನಕ್ಕೆ ಪರಿವರ್ತನೆಯು ಗುಜರಾತ್ ಅನ್ನು ಕೃಷಿ ಮತ್ತು ಹಣಕಾಸಿನಲ್ಲಿ ಶಕ್ತಿ ಕೇಂದ್ರವಾಗಿ ಬದಲಾಯಿಸಿತು. ಅಲ್ಲದೆ,  ರಾಜ್ಯವು ಕೈಗಾರಿಕಾ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯಾಗಿ ತನ್ನ ಹೊಸ ಗುರುತನ್ನು ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಗುಜರಾತ್‌ನ ವ್ಯಾಪಾರ ಆಧಾರಿತ ಖ್ಯಾತಿಯನ್ನು ಬಲಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇಂತಹ ಬೆಳವಣಿಗೆಗಳ ಯಶಸ್ಸಿಗೆ ʻವೈಬ್ರೆಂಟ್‌ ಗುಜರಾತ್ʼ ಕಾರಣವಾಗಿದೆ. ಕಲ್ಪನೆಗಳು, ನಾವೀನ್ಯತೆ ಮತ್ತು ಕೈಗಾರಿಕೆಗಳಿಗೆ ಇದು ಪೋಷಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ 20 ವರ್ಷಗಳಲ್ಲಿ ಪರಿಣಾಮಕಾರಿ ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಯೋಜನಾ ಅನುಷ್ಠಾನದಿಂದ ಸಾಧ್ಯವಾಗಿರುವ ಯಶೋಗಾಥೆಗಳು ಮತ್ತು ನಿದರ್ಶನಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಜವಳಿ ಮತ್ತು ಉಡುಪು ಉದ್ಯಮದಲ್ಲಿ ಹೂಡಿಕೆ ಮತ್ತು ಉದ್ಯೋಗದಲ್ಲಿನ ಬೆಳವಣಿಗೆಯ ಉದಾಹರಣೆಯನ್ನು ನೀಡಿದ ಅವರು ರಫ್ತುಗಳಲ್ಲಿ ದಾಖಲೆಯ ಬೆಳವಣಿಗೆಯನ್ನು ಉಲ್ಲೇಖಿಸಿದರು. 2001ಕ್ಕೆ ಹೋಲಿಸಿದರೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೂಡಿಕೆ 9 ಪಟ್ಟು ಹೆಚ್ಚಳವಾಗಿದೆ.  ಉತ್ಪಾದನಾ ವಲಯದ ಕೊಡುಗೆಯು 12 ಪಟ್ಟು ಹೆಚ್ಚಳವಾಗಿದೆ, ಭಾರತದ ಬಣ್ಣ ಮತ್ತು ಮಧ್ಯಂತರ ವಸ್ತುಗಳ ಉತ್ಪಾದನೆಯಲ್ಲಿ ಶೇ.75ರಷ್ಟು ಏರಿಕೆಯಾಗಿದೆ. ದೇಶದ ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮದಲ್ಲಿ ಹೂಡಿಕೆಯಲ್ಲಿ ಅತಿ ಹೆಚ್ಚು ಪಾಲನ್ನು ರಾಜ್ಯವು ಹೊಂದಿದೆ. 30,000ಕ್ಕೂ ಹೆಚ್ಚು ಆಹಾರ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ, ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಶೇ.50ಕ್ಕೂ ಹೆಚ್ಚು ಏರಿಕೆಯಾಗಿದೆ ಮತ್ತು ಕಾರ್ಡಿಯಾಕ್ ಸ್ಟೆಂಟ್ ತಯಾರಿಕೆಯಲ್ಲಿ ಶೇ.80ರಷ್ಟು ಪಾಲನ್ನು ರಾಜ್ಯವು ಹೊಂದಿದೆ.  ವಿಶ್ವದ 70 ಪ್ರತಿಶತಕ್ಕೂ ಹೆಚ್ಚು ವಜ್ರಗಳ ಸಂಸ್ಕರಣೆಗೆ ರಾಜ್ಯವು ಸಾಕ್ಷಿಯಾಗುತ್ತಿದ್ದು, ಭಾರತದ ವಜ್ರ ರಫ್ತಿಗೆ 80 ಪ್ರತಿಶತದಷ್ಟು ಕೊಡುಗೆ ನೀಡುತ್ತಿದೆ. ಸೆರಾಮಿಕ್ ಟೈಲ್ಸ್, ಸ್ಯಾನಿಟರಿ ವೇರ್ ಮತ್ತು ವಿವಿಧ ಸೆರಾಮಿಕ್ ಉತ್ಪನ್ನಗಳ ತಯಾರಿಕೆಯ ಸುಮಾರು 10 ಸಾವಿರ ಘಟಕಗಳೊಂದಿಗೆ ದೇಶದ ಸೆರಾಮಿಕ್ ಮಾರುಕಟ್ಟೆಯಲ್ಲಿ 90 ಪ್ರತಿಶತದಷ್ಟು ಪಾಲನ್ನು ರಾಜ್ಯವು ಹೊಂದಿದೆ. ಪ್ರಸ್ತುತ 2 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟು ಮೌಲ್ಯದೊಂದಿಗೆ ಗುಜರಾತ್ ಭಾರತದ ಅತಿದೊಡ್ಡ ರಫ್ತುದಾರ ರಾಜ್ಯವಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. "ಮುಂಬರುವ ದಿನಗಳಲ್ಲಿ ರಕ್ಷಣಾ ಸಾಮಗ್ರಿಯ ಉತ್ಪಾದನೆಯು ಬಹಳ ದೊಡ್ಡ ವಲಯವಾಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

"ನಾವು ʻವೈಬ್ರೆಂಟ್‌ ಗುಜರಾತ್ʼ ಅನ್ನು ಪ್ರಾರಂಭಿಸಿದಾಗ, ಈ ರಾಜ್ಯವು ದೇಶದ ಪ್ರಗತಿಯ ಬೆಳವಣಿಗೆಯ ಎಂಜಿನ್ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಈ ಕನಸು ನನಸಾಗಿರುವುದನ್ನು ದೇಶ ನೋಡಿದೆ. ಭಾರತವನ್ನು ವಿಶ್ವದ ಬೆಳವಣಿಗೆಯ ಎಂಜಿನ್ ಮಾಡುವ 2014ರ ಗುರಿಯು ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ತಜ್ಞರಲ್ಲಿ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. "ಇಂದು ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗಲಿರುವ ತಿರುವಿನಲ್ಲಿ ಈಗ ನಾವು ನಿಂತಿದ್ದೇವೆ. ಈಗ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕಾಗಿದೆ," ಎಂದು ಅವರು ಹೇಳಿದರು. ಭಾರತಕ್ಕೆ ಹೊಸ ಸಾಧ್ಯತೆಗಳನ್ನು ನೀಡಲು ಸಹಾಯ ಮಾಡುವ ಕ್ಷೇತ್ರಗಳತ್ತ ಗಮನ ಹರಿಸುವಂತೆ ಅವರು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು. ನವೋದ್ಯಮ ಪರಿಸರ ವ್ಯವಸ್ಥೆ, ಕೃಷಿ-ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಶ್ರೀಅನ್ನ(ಸಿರಿಧಾನ್ಯ) ಉತ್ಪಾದನೆಗೆ ವೇಗ ನೀಡುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸುವಂತೆ ಅವರು ಮನವಿ ಮಾಡಿದರು.

ಹೆಚ್ಚುತ್ತಿರುವ ಆರ್ಥಿಕ ಸಹಕಾರ ಸಂಸ್ಥೆಗಳ ಅಗತ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಗಿಫ್ಟ್‌ ಸಿಟಿʼಯ ಹೆಚ್ಚುತ್ತಿರುವ ಪ್ರಸ್ತುತತೆಯ ಬಗ್ಗೆಯೂ ವಿವರಿಸಿದರು. "ಗಿಫ್ಟ್ ಸಿಟಿಯು ನಮ್ಮ ಇಡೀ ಸರ್ಕಾರದ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಕೇಂದ್ರ, ರಾಜ್ಯ ಮತ್ತು ಐಎಫ್ಎಸ್‌ಸಿ ಅಧಿಕಾರಿಗಳು ವಿಶ್ವದ ಅತ್ಯುತ್ತಮ ನಿಯಂತ್ರಕ ವಾತಾವರಣವನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುತ್ತಾರೆ. ಇದನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಹಣಕಾಸು ಮಾರುಕಟ್ಟೆಯನ್ನಾಗಿ ಮಾಡುವ ಪ್ರಯತ್ನಗಳನ್ನು ನಾವು ತೀವ್ರಗೊಳಿಸಬೇಕು," ಎಂದು ಅವರು ಕರೆ ನೀಡಿದರು.

ಇದು ವಿರಾಮದ ಸಮಯವಲ್ಲ ಎಂದು ಪ್ರಧಾನಿ ಹೇಳಿದರು. "ಕಳೆದ 20 ವರ್ಷಗಳಿಗಿಂತ ಮುಂದಿನ 20 ವರ್ಷಗಳು ಹೆಚ್ಚು ಮುಖ್ಯ. ʻವೈಬ್ರೆಂಟ್‌ ಗುಜರಾತ್ʼ 40 ವರ್ಷಗಳನ್ನು ಪೂರೈಸುವಾಗ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ಸನಿಹದಲ್ಲಿರುತ್ತದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಮಾರ್ಗಸೂಚಿಯನ್ನು ರಚಿಸಬೇಕಾದ ಸಮಯ ಇದಾಗಿದೆ,", ಎಂದು ಪ್ರಧಾನಿ ಹೇಳಿದರು. ಶೃಂಗಸಭೆಯು ಈ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.

ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿಗಳಾದ ಶ್ರೀ ಭೂಪೇಂದ್ರ ಪಟೇಲ್, ಸಂಸತ್ ಸದಸ್ಯರಾದ ಶ್ರೀ ಸಿ.ಆರ್.ಪಾಟೀಲ್, ಗುಜರಾತ್ ಸರ್ಕಾರದ ಸಚಿವರು ಮತ್ತು ಕೈಗಾರಿಕಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಅಹಮದಾಬಾದ್‌ನ ʻಸೈನ್ಸ್ ಸಿಟಿʼಯಲ್ಲಿ ನಡೆದ ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವರ್ಷಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಂಘಗಳು, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು, ಯುವ ಉದ್ಯಮಿಗಳು ಮತ್ತು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯನ್ನು 20 ವರ್ಷಗಳ ಹಿಂದೆ ಆಗಿನ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು. 2003ರ ಸೆಪ್ಟೆಂಬರ್ 28ರಂದು ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯ ಪ್ರಯಾಣ ಆರಂಭವಾಯಿತು. ಕಾಲಾನಂತರದಲ್ಲಿ, ಇದು ನೈಜ ಜಾಗತಿಕ ಕಾರ್ಯಕ್ರಮವಾಗಿ ರೂಪಾಂತರಗೊಂಡಿದ್ದು, ಭಾರತದ ಪ್ರಮುಖ ವ್ಯಾಪಾರ ಶೃಂಗಸಭೆಗಳಲ್ಲಿ ಒಂದಾಗಿದೆ. 2003ರಲ್ಲಿ ಸುಮಾರು 300 ಅಂತರರಾಷ್ಟ್ರೀಯ ಭಾಗಿದಾರರೊಂದಿಗೆ ಆರಂಭವಾದ ಶೃಂಗಸಭೆಯು 2019ರಲ್ಲಿ 135 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಕಳೆದ 20 ವರ್ಷಗಳಲ್ಲಿ, ʻವೈಬ್ರೆಂಟ್‌ ಗುಜರಾತ್ ಜಾಗತಿಕ ಶೃಂಗಸಭೆʼಯ ಧ್ಯೇಯವು "ಗುಜರಾತ್ ಅನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುವುದುʼʼ ಹಂತದಿಂದ "ನವ ಭಾರತವನ್ನು ರೂಪಿಸುವುದು" ಹಂತಕ್ಕೆ ವಿಕಸನಗೊಂಡಿದೆ. ʻವೈಬ್ರೆಂಟ್ ಗುಜರಾತ್ʼನ ಸಾಟಿಯಿಲ್ಲದ ಯಶಸ್ಸು ಇಡೀ ದೇಶಕ್ಕೆ ಮಾದರಿಯಾಗಿದೆ ಮತ್ತು ಅಂತಹ ಹೂಡಿಕೆ ಶೃಂಗಸಭೆಗಳ ಸಂಘಟನೆಯನ್ನು ಪುನರಾವರ್ತಿಸಲು ಇತರ ರಾಜ್ಯಗಳಿಗೆ ಸ್ಫೂರ್ತಿ ನೀಡಿದೆ.

***



(Release ID: 1961502) Visitor Counter : 80