ಪ್ರಧಾನ ಮಂತ್ರಿಯವರ ಕಛೇರಿ

ಹೊಸದಿಲ್ಲಿ ಜಿ 20 ಶೃಂಗಸಭೆ ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ: ಪ್ರಧಾನ ಮಂತ್ರಿ 


ಭಾರತದ ಜಿ 20 ಅಧ್ಯಕ್ಷತೆಯು ಎಲ್ಲರನ್ನೂ ಒಳಗೊಳ್ಳುವ , ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕ್ರಿಯಾ-ಆಧಾರಿತವಾಗಿದೆ

ಸರತಿ ಸಾಲಿನಲ್ಲಿ ನಿಂತಿರುವ ಕಟ್ಟಕಡೆಯ ವ್ಯಕ್ತಿಗೆ,  ದೀನದಲಿತರಿಗೆ ಸೇವೆ ಸಲ್ಲಿಸುವಂತಹ  ಗಾಂಧೀಜಿಯವರ ಧ್ಯೇಯವನ್ನು ಅನುಕರಿಸುವುದು ಮುಖ್ಯ

Posted On: 08 SEP 2023 4:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೊಸದಿಲ್ಲಿ  ಜಿ-20 ಶೃಂಗಸಭೆ ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಜಿ 20 ಅಧ್ಯಕ್ಷತೆಯು ಅಂತರ್ಗತ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕ್ರಿಯಾ-ಆಧಾರಿತವಾಗಿದೆ, ಅಲ್ಲಿ ಜಾಗತಿಕ ದಕ್ಷಿಣದ ಅಭಿವೃದ್ಧಿ ಕಾಳಜಿಗಳಿಗೆ  ಸಕ್ರಿಯವಾದ  ಧ್ವನಿಯನ್ನು  ಎತ್ತಲಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ದೀನದಲಿತರಿಗೆ ಸೇವೆ ಸಲ್ಲಿಸುವ ಗಾಂಧೀಜಿಯವರ ಧ್ಯೇಯವನ್ನು ಅನುಕರಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಗತಿಯನ್ನು ಹೆಚ್ಚಿಸಲು ಮಾನವ ಕೇಂದ್ರಿತ ಮಾರ್ಗಕ್ಕೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ ಎಂದೂ  ಹೇಳಿದರು.

ಬಲವಾದ, ಸುಸ್ಥಿರ, ಅಂತರ್ಗತ ಮತ್ತು ಸಮತೋಲಿತ ಬೆಳವಣಿಗೆಯನ್ನು ಮುಂದುವರಿಸುವುದು ಸೇರಿದಂತೆ ವಿಶ್ವ ಸಮುದಾಯಕ್ಕೆ ಪ್ರಮುಖ ಕಾಳಜಿಯ ಹಲವಾರು ವಿಷಯಗಳನ್ನು ಒಳಗೊಂಡ 'ಒಂದು ಭೂಮಿ', 'ಒಂದು ಕುಟುಂಬ' ಮತ್ತು 'ಒಂದು ಭವಿಷ್ಯ' ಕುರಿತ ಅಧಿವೇಶನಗಳ ಅಧ್ಯಕ್ಷತೆ ವಹಿಸುವುದಾಗಿ ಪ್ರಧಾನಿ ಮಾಹಿತಿ ನೀಡಿದರು. ಸ್ನೇಹ ಮತ್ತು ಸಹಕಾರದ ಬಂಧಗಳನ್ನು ಮತ್ತಷ್ಟು ಆಳಗೊಳಿಸಲು ಹಲವಾರು ನಾಯಕರು ಮತ್ತು ನಿಯೋಗದ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವುದನ್ನೂ ಅವರು ಉಲ್ಲೇಖಿಸಿದರು.

ಗೌರವಾನ್ವಿತ ರಾಷ್ಟ್ರಪತಿಗಳು 2023 ರ ಸೆಪ್ಟೆಂಬರ್ 9 ರಂದು ನಾಯಕರಿಗೆ ಔತಣಕೂಟವನ್ನು ಆಯೋಜಿಸಲಿದ್ದಾರೆ ಎಂದೂ  ಪ್ರಧಾನಿ ಹೇಳಿದರು. ನಾಯಕರು 2023 ರ ಸೆಪ್ಟೆಂಬರ್ 10 ರಂದು ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಅದೇ ದಿನ, ಸಮಾರೋಪ ಸಮಾರಂಭದಲ್ಲಿ, ಜಿ 20 ನಾಯಕರು ಆರೋಗ್ಯಕರ 'ಒಂದು ಭೂಮಿ' ಗಾಗಿ 'ಒಂದು ಕುಟುಂಬ'ದಂತೆ ಸುಸ್ಥಿರ ಮತ್ತು ಸಮಾನ 'ಒಂದು ಭವಿಷ್ಯ'ಕ್ಕಾಗಿ ತಮ್ಮ ಸಾಮೂಹಿಕ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ.

X ನಲ್ಲಿ ಈ ಕುರಿತಂತೆ ಒಂದು ಎಳೆಯನ್ನು  ಹಂಚಿಕೊಂಡಿರುವ  ಪ್ರಧಾನಮಂತ್ರಿಯವರು ಈ ಬಗ್ಗೆ ಹೀಗೆ ಹೇಳಿದ್ದಾರೆ:

"2023 ರ ಸೆಪ್ಟೆಂಬರ್ 09-10 ರಂದು ಹೊಸದಿಲ್ಲಿಯ ಪ್ರತಿಷ್ಠಿತ  ಭಾರತ್ ಮಂಟಪ (ಭಾರತ್ ಮಂಟಪಂ)ದಲ್ಲಿ  18 ನೇ ಜಿ 20 ಶೃಂಗಸಭೆಯನ್ನು ಆಯೋಜಿಸುವುದಕ್ಕೆ  ಭಾರತ ಭಾರೀ  ಸಂತಸಪಡುತ್ತದೆ. ಇದು ಭಾರತ ಆತಿಥ್ಯ ವಹಿಸುತ್ತಿರುವ ಮೊದಲ ಜಿ 20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗೆ ಫಲಪ್ರದ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ”.

ಹೊಸದಿಲ್ಲಿಯ  ಜಿ 20 ಶೃಂಗಸಭೆ ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಮಾರ್ಗವನ್ನು ರೂಪಿಸುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ" ಎಂದವರು ಹೇಳಿದ್ದಾರೆ.

 

***



(Release ID: 1955613) Visitor Counter : 163